ಮಂಗಳವಾರ, ಜನವರಿ 9, 2024

ಕಂಬಾರರ ‘ಋಷ್ಯಶೃಂಗ’ ನಾಟಕ ಕುರಿತು “ಹೇಳತೇನ ಕೇಳ”

ಕಂಬಾರರ ‘ಋಷ್ಯಶೃಂಗ’ ನಾಟಕ ಕುರಿತು “ಹೇಳತೇನ ಕೇಳ”

ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ನಿರ್ದೇಶಕರಾಗಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ,ಚಂದ್ರಶೇಖರ್ ಕಂಬಾರರ 87ನೇ ಜನ್ಮದಿನದ ಅಂಗವಾಗಿ ಹಂಪಿ ವಿಶ್ವವಿದ್ಯಾಲಯದ ಡಾ.ವಿರೇಶ್ ಬಡಿಗೇರ್ ರವರು ತಮ್ಮ “ಹೇಳತೇನಿ ಕೇಳ” ಎನ್ನುವ ಆನ್ಲೈನ್ ಉಪನ್ಯಾಸ ಮಾಲಿಕೆಯಲ್ಲಿ ಕಂಬಾರರ ‘ಋಷ್ಯಶೃಂಗ’ ನಾಟಕದ ಕುರಿತು ಸಂವಾದವನ್ನು ಜನವರಿ 7ನೇ ತಾರೀಕಿನಂದು ಆಯೋಜಿಸಿದ್ದು ವಿಶೇಷವಾಗಿತ್ತು. 

ಈ ಸಂವಾದದಲ್ಲಿ ಹಿರಿಯರಾದ ಹರಿಹರದ ಲಿಂಗರಾಜ್ ಕಮ್ಮಾರರವರು ಕಂಬಾರರ ಬರಹ ಹಾಗೂ ಸಾಧನೆಗಳ ಬಗ್ಗೆ ಮತ್ತು ಋಷ್ಯಶೃಂಗ ನಾಟಕದ ಬಗ್ಗೆ ವಿವರವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು. ಈ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಾನು ನನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದೆ. ಆಡಿದ ಮಾತುಗಳ ವಿಸ್ತೃತ ರೂಪದ ಲೇಖನ ಇದಾಗಿದೆ.
ಇಪ್ಪತ್ತೈದು ನಾಟಕ, 10 ಕವನ ಸಂಕಲನ, 5 ಕಾದಂಬರಿ ಹಾಗೂ ಚಕೋರಿ ಎನ್ನುವ ಮಹಾಕಾವ್ಯವನ್ನು ರಚಿಸಿದ ಡಾ.ಚಂದ್ರಶೇಖರ್ ಕಂಬಾರರು ಕನ್ನಡ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಬರೆದ ನಾಟಕಗಳಲ್ಲಿ ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯಾ, ಕಿಟ್ಟಿಯ ಕಥೆ, ಕಾಡುಕುದುರೆ, ಹರಕೆಯ ಕುರಿ ಮುಂತಾದವು ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿವೆ.

 ‘ಋಷ್ಯಶೃಂಗ’ವು ಕಂಬಾರರ ಮೂರನೇ ನಾಟಕವಾಗಿದ್ದು 1970ರಲ್ಲಿ ರಚನೆಗೊಂಡಿದೆ. ಈ ನಾಟಕ ಪೌರಾಣಿಕ ಮುನಿ ಋಷ್ಯಶೃಂಗನ ಹೆಸರು ಮತ್ತು ಬದುಕಿನ ಅಂಶಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದ್ದರೂ ಸಂಪೂರ್ಣವಾಗಿ ಜಾನಪದೀಯ ಕಥಾನಕದ ವಿನ್ಯಾಸವನ್ನು ಒಳಗೊಂಡಿದೆ. ವಸ್ತು ಯಾವುದೇ ಆಗಿರಬಹುದು ಅದನ್ನು ಜಾನಪದದ ಚೌಕಟ್ಟಿಗೆ ಒಗ್ಗಿಸುವುದರಲ್ಲಿ ಕಂಬಾರರು ಸಿದ್ದಹಸ್ತರು. ಇದಕ್ಕೆ ಕಂಬಾರರ ಶೈಲಿ ಎಂದೇ ಹೆಸರು.

ಕಂಬಾರರ ಬಹುತೇಕ ನಾಟಕಗಳಂತೆ ‘ಋಷ್ಯಶೃಂಗ’ವು ಪ್ಯೂಡಲ್ ವ್ಯವಸ್ಥೆಯ ದಮನ ದೌರ್ಜನ್ಯ ಅತಿರೇಕಗಳನ್ನು ಅನಾವರಣಗೊಳಿಸುತ್ತದೆ. ಅಲ್ಲೊಬ್ಬ ಊರ ಗೌಡ. ಅವನಿಗೊಬ್ಬ ಮಗ ರಾಮಗೊಂಡ. ಒಂದು ದಿನ ಬೇಟೆಗೆ ಹೋಗಿ ಬರುವಾಗ ದೆವ್ವವೊಂದು ಈ ಇಬ್ಬರನ್ನೂ ಕೊಂದು ಹಾಳುಬಾವಿಗೆ ಎಸೆದು ಗೌಡನ ವೇಷದಲ್ಲಿ ಊರು ಸೇರಿ ದಮನ ಶುರುಮಾಡುತ್ತದೆ. ವೇಷದಾರಿ ಗೌಡ ಹಾಗೂ ಗೌಡತಿಗೆ ಹುಟ್ಟಿದ ಬಾಳಗೊಂಡ ಎನ್ನುವ ಮಗನನ್ನು ಊರಿನಿಂದ ಓದಲು ದೂರದೂರಿಗೆ ಕಳುಹಿಸಲಾಗುತ್ತದೆ. ಆ ಪ್ರಾಂತ್ಯಕ್ಕೆ ಬರ ಒಕ್ಕರಿಸಿ ಸಾವು ನೋವುಗಳು ನಿತ್ಯದ ಗೋಳಾಗುತ್ತದೆ. ಅತ್ತ ಬರದಿಂದ, ಇತ್ತ ಈ ವೇಷದಾರಿ ಗೌಡನ ದೌರ್ಜನ್ಯದಿಂದ ತತ್ತರಿಸಿದ ಊರ ಜನರು ದೇವಿಯ ಮೊರೆಹೋಗುತ್ತಾರೆ. ಪಾರಿಯ ಮೈಯಲ್ಲಿ ಬಂದ ದೇವಿ “ದೊಡ್ಡಗೌಡನ ಮಗ ಬಂದು ಅಗಸಿ ಬಾಗಿಲಲ್ಲಿ ಐದು ಹೆಜ್ಜೆ ಇಟ್ಟಾಗ ಮಳೆ ಬರುತ್ತದೆ” ಎಂದು ಭವಿಷ್ಯ ನುಡಿಯುತ್ತಾಳೆ. ಕೊನೆಗೂ ಬಾಳಗೊಂಡ ಕುದುರೆ ಏರಿ ಊರಿಗೆ ಬರುತ್ತಾನಾದರೂ ಮಳೆ ಬರುವುದಿಲ್ಲ. ಊರ ಜನ ಬಾಳಗೊಂಡ ಗೌಡನ ಮಗನೇ ಅಲ್ಲವೆಂದು ಸಂಶಯ ಪಡುತ್ತಾರೆ. ಭಾವಿಯಲ್ಲಿದ್ದ ಸತ್ತ ಗೌಡನ ಪ್ರೇತಾತ್ಮ ತನ್ನ ಹತ್ಯೆಯ ಕಥೆಯನ್ನು ಬಾಳನಿಗೆ ಹೇಳುತ್ತದೆ. ಯಕ್ಷಿಣಿಯೊಬ್ಬಳು ಬಾಳನಿಗೆ ಸಹಾಯ ಮಾಡುತ್ತಾಳೆ. ಪಾರಿ ಮಗಳು ಕಮಲಿಯ ಮೋಹಕ್ಕೆ ಒಳಗಾದ ಬಾಳಗೊಂಡ ಊರಲ್ಲೇ ಉಳಿಯುತ್ತಾನೆ. ಅದೊಂದು ದಿನ ಮಾಯಾವಿ ಗೌಡ ಬಾಳಗೊಂಡನ ವೇಷ ಧರಿಸಿ ಕಮಲಿ ಮನೆಗೆ ಹೋಗಿ ಅವಳನ್ನು ಮೋಸದಿಂದ ಕೂಡುತ್ತಾನೆ. ಅದು ಗೊತ್ತಾಗಿ ಸಿಟ್ಟಿಗೆದ್ದ ಬಾಳಗೊಂಡ ತಂದೆಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಳುಬಾವಿಗೆ ಎಸೆಯುತ್ತಾನೆ. ಬಾಳಗೊಂಡ ಬಂದು ಕಮಲಿಯನ್ನು ಕೂಡಿದಾಗ ಮಳೆ ಸಮೃದ್ಧವಾಗಿ ಬರುತ್ತದೆ. ಬರ ನೀಗುತ್ತದೆ. ಇದು  ‘ಋಷ್ಯಶೃಂಗ’ ನಾಟಕದ ಸಂಕ್ಷಿಪ್ತ ಕಥೆ.

ಕಂಬಾರರ ಕೆಲವಾರು ನಾಟಕಗಳಲ್ಲಿರುವಂತೆ ಇಲ್ಲಿಯೂ ಒಂದು ಊರು. ಅದಕ್ಕೊಬ್ಬ ಖಳನಾಯಕನಾದ ಹೆಣ್ಣುಬಾಕ ಜಮೀನ್ದಾರ ಗೌಡ. ಗೌಡನನ್ನು ವಿರೋಧಿಸಿ ಮಟ್ಟಹಾಕಲು ಇನ್ನೊಬ್ಬ ನಾಯಕ. ಈ ಇಬ್ಬರ ಸಂಘರ್ಷದಲ್ಲಿ ಕಾಮದಹನಕ್ಕೆ ಈಡಾಗುವ ಮಹಿಳೆ. ಮುಖ್ಯವಾಗಿ ಈ ಮೂರು ಪಾತ್ರಗಳನ್ನು ಇಟ್ಟುಕೊಂಡೇ  ಋಷ್ಯಶೃಂಗ ನಾಟಕವೂ ರಚನೆಗೊಂಡಿದೆ. ವಸ್ತುವಿನಲ್ಲಿ ವಿಶೇಷ ಎನ್ನುವುದು ಇಲ್ಲದಿದ್ದರೂ ಅದನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ ಕಂಬಾರರು ಗೆಲ್ಲುತ್ತಾರೆ. ಅವರು ಬಳಸುವ ಉತ್ತರ ಕರ್ನಾಟಕದ ದೇಸಿ ಭಾಷೆಯ ಸೊಗಡು, ಅದರಲ್ಲಿರುವ ಕಾವ್ಯಾತ್ಮಕತೆ ಹಾಗೂ ಮನಮೋಹಕ ಹಾಡುಗಳು ಗದ್ಯ ನಾಟಕವನ್ನು ದೃಶ್ಯಕಾವ್ಯವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಕಂಬಾರರ ಬಹುತೇಕ ನಾಟಕಗಳಲ್ಲಿ ಇರುವಂತೆ  ‘ಋಷ್ಯಶೃಂಗ’ ದಲ್ಲಿಯೂ ಪುರುಷಪ್ರಧಾನ ವ್ಯವಸ್ಥೆಯ ಭೋಗದ ಸರಕಾಗಿ ಹೆಣ್ಣು ಚಿತ್ರಿತವಾಗಿದ್ದಾಳೆ. ಯಜಮಾನ ಸಂಸ್ಕೃತಿಯ ಮೌಲ್ಯಗಳನ್ನೇ ಈ ನಾಟಕದಲ್ಲೂ ಪ್ರತಿಪಾದಿಸಲಾಗಿದೆ. ಪುರುಷರ ಕಾಮದ ದಾಹ ತಣೀಸಲೆಂದೇ ಸ್ತ್ರೀ ಪಾತ್ರ ಸೃಷ್ಟಿಮಾಡಲಾಗಿದೆಯೇನೋ ಎಂದು ಭಾಸವಾಗುತ್ತದೆ. ಹಾಗೂ ಹೆಣ್ಣಿಗಾಗಿಯೇ ಪ್ರಮುಖ ಪುರುಷ ಪಾತ್ರಗಳು ಸಂಘರ್ಷಕ್ಕೆ ಈಡಾಗಿ ಕೊನೆಗೆ ದುಷ್ಟ ಪಾತ್ರದ ಸಂಹಾರದಲ್ಲಿ ನಾಟಕ ಕೊನೆಯಾಗುವುದನ್ನು ಕಾಣಬಹುದಾಗಿದೆ.

ವೈದಿಕಶಾಹಿ ಪರಂಪರೆ ಸೃಷ್ಟಿಸಿದ ಈ ನೈತಿಕ ಅನೈತಿಕ, ಪವಿತ್ರ ಅಪವಿತ್ರ, ಶೀಲ ಅಶ್ಲೀಲ ಎನ್ನುವ ಪರಿಕಲ್ಪನೆಗಳೂ ಜನಪದ ಕಾವ್ಯ ಪರಂಪರೆಯಲ್ಲಿ ಪ್ರಮುಖವೆನ್ನಿಸುವುದಿಲ್ಲ. ಗಂಡು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧದಲ್ಲಿ ಅನೈತಿಕತೆ ಎನ್ನುವುದು ಅಪ್ರಸ್ತುತ. ಹೆಣ್ಣು ಒಮ್ಮೆ ಒಬ್ಬನ ಜೊತೆ ಕೂಡಿದರೆ ಅವಳು ಅಪವಿತ್ರವಾದಳು, ಶೀಲಗೆಟ್ಟಳು ಎನ್ನುವುದೆಲ್ಲಾ ವೈದಿಕರು ಹೆಣ್ಣನ್ನು ಶೋಷಿಸಲು ಹುಟ್ಟು ಹಾಕಿದ ಕಟ್ಟುಪಾಡುಗಳಾಗಿವೆ. ಆದರೆ ಜನಪದರಿಗೆ ಅದರ ಹಂಗಿಲ್ಲ. ‘ಋಷ್ಯಶೃಂಗ’  ನಾಟಕದಲ್ಲೂ ಸಹ ತನ್ನ ತಂದೆ ಮಾಯಾವಿ ಗೌಡ ಬಂದು ಕಮಲಿಯನ್ನು ಕೂಡಿ ಹೋಗಿದ್ದು ಗೊತ್ತಿದ್ದರೂ ಮಗ ಬಾಳಗೊಂಡ ಅವಳನ್ನು ಒಪ್ಪಿಕೊಳ್ಳುತ್ತಾನೆ, ಅಪ್ಪಿಕೊಳ್ಳುತ್ತಾನೆ. ಒಂದಾಗುತ್ತಾನೆ. ಆಗಲೇ ಬರ ಕಳೆದು ಮಳೆ ಬರುತ್ತದೆ. ಯಾಕೆಂದರೆ ಇಲ್ಲಿ ಹೆಣ್ಣು ಪ್ರಕೃತಿಯಾದರೆ ಗಂಡು ಪುರುಷನಾಗಿದ್ದು, ಯಾವಾಗ ಪ್ರಕೃತಿ ಮತ್ತು ಪುರುಷ ಪ್ರೇಮದಿಂದ ಒಂದಾಗುತ್ತಾರೋ ಆಗ ಸಮೃದ್ಧಿ ಫಲವತ್ತತೆ ಸಾಧ್ಯವಾಗುತ್ತದೆ ಎನ್ನುವುದನ್ನು ಹೇಳುವುದೇ ಈ ನಾಟಕದ ಮೂಲ ಆಶಯವಾಗಿದೆ.

ಕಂಬಾರರು ತಮ್ಮ ಬಹುತೇಕ ನಾಟಕಗಳಲ್ಲಿ ಮಹಿಳೆಯರನ್ನು ಚಿತ್ರಿಸಿದ ರೀತಿ ಚರ್ಚಾಸ್ಪದವಾಗಿದೆ. ಲೈಂಗಿಕತೆಯೇ ಅವರ ನಾಟಕಗಳ ಕೇಂದ್ರಬಿಂದುವೇನೋ ಎನ್ನಿಸುವಂತಿದೆ. ಹೆಣ್ಣೆಂಬುದು ಗಂಡಿನ ಸುಖದ ಸರಕಾಗಿದ್ದು, ಹೆಣ್ಣನ್ನು ಪಡೆಯಲು ನಡೆಯುವ ಜಗಳ ಕದನ ಹೋರಾಟಗಳೇ ನಾಟಕದ ಅಂತಸತ್ವವಾದಂತಿವೆ. ಸಿಂಗಾರೆವ್ವ ನಂತಹ ನಾಟಕ ಹೊರತು ಪಡಿಸಿ ಬಹುತೇಕ ನಾಟಕಗಳ ಹೆಣ್ಣು ಪಾತ್ರಗಳು ಗಂಡಿನ ಶೋಷಣೆಯ ವಿರುದ್ದ ಬಂಡೇಳುವುದಿಲ್ಲ ಹಾಗೂ ಎಷ್ಟೋ ಸಲ ಪ್ರತಿರೋಧವನ್ನೂ ವ್ಯಕ್ತಪಡಿಸದೇ ಬಯಕೆಯ ಬೆಂಕಿಗೆ ಬಿದ್ದು ಬಲಿಯಾಗುತ್ತವೆ. ವ್ಯಕ್ತಿಗತ ಕಾಮನೆ ಬಯಕೆಗಳೇ ಕೇಂದ್ರವಾಗಿ ಅದರ ಸುತ್ತಲೂ ಆಸೆ ಅಸೂಯೆ ಅನಾಹುತಗಳೇ ಪರಿಭ್ರಮಿಸುತ್ತಿರುತ್ತವೆ. ಭಾವ-ಬಯಕೆಗಳ ಸಂಘರ್ಷಗಳಲ್ಲೇ ಮುಳುಗೇಳುವ ಕಂಬಾರರ ನಾಟಕದ ಪಾತ್ರಗಳು ಬದುಕಿನ ವಾಸ್ತವಗಳಿಗೆ ಮುಖಾಮುಖಿ ಆಗಿದ್ದೇ ಕಡಿಮೆ. ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಹೇಗೆಲ್ಲಾ ಬಳಸಿಕೊಂಡಿತು, ಅದರಿಂದಾಗಿ ಪುರುಷರ ದುಸ್ಥಿತಿ ಏನಾಯಿತು. ಹೆಣ್ಣು ಹೇಗೆಲ್ಲಾ ಮಾಯವಾಗಿ ಕಾಡಿತು ಎನ್ನುವುದನ್ನು ಹೇಳುವುದಕ್ಕೇ ನಾಟಕ ಮಾಧ್ಯಮವನ್ನು ಕಂಬಾರರು ಬಳಸಿಕೊಂಡಿದ್ದಾರಾ ಎನ್ನುವ ಸಂದೇಹ ಕಾಡದೇ ಇರದು.   

ವೈದಿಕರು ಪುರಾಣಗಳನ್ನು ಕಟ್ಟಿ ಅದರಲ್ಲಿ ಮೌಢ್ಯಗಳ ಬೀಜಗಳನ್ನು ಬಿತ್ತಿದಂತೆ ಕಂಬಾರರೂ ಸಹ ಈ ರೀತಿಯ ನಾಟಕದ ಮೂಲಕ ಮೌಢ್ಯಗಳೇ ತುಂಬಿರುವ ಜಾನಪದ ಪುರಾಣವನ್ನು ಕಟ್ಟಿದ್ದಾರಾ ಎನ್ನುವ ಸಂದೇಹ ಕಾಡದಿರದು. ಈ ‘ಋಷ್ಯಶೃಂಗ’ ನಾಟಕದಲ್ಲಿ ಬರುವ ಮಾಯಾವೇಷದಾರಿ ದೆವ್ವ, ಮೈಮೇಲೆ ಬಂದು ಭವಿಷ್ಯ ಹೇಳುವ ದೈವ, ದೈವವಾಣಿವನ್ನು ನಂಬಿ ನಡೆಯುವ ಜನರು, ಗಂಡು ಹೆಣ್ಣಿನ ಸಂಯೋಗ ಸಂಬಂಧಗಳ ವಿದ್ಯಮಾನಗಳ ಮೇಲೆ ಮಳೆ ಅವಲಂಬಿಸಿರುವುದು, ಇವೆಲ್ಲವೂ ಸಹ ಮೌಢ್ಯದ ಭಾಗಗಳೇ ಆಗಿವೆ. ಇವುಗಳೆಲ್ಲಾ ಸುಳ್ಳು, ಇಂತಹುಗಳನ್ನೆಲ್ಲಾ ನಂಬಬಾರದು ಎಂದು ಹೇಳುವ ಒಂದೇ ಒಂದು ಎಚ್ಚರದ ದ್ವನಿ ಕೂಡಾ ನಾಟಕದಲ್ಲಿಲ್ಲವಾಗಿದೆ. ಮಿಥ್ ಅಂದರೆ ನಂಬಲಾಗದ ಕಟ್ಟುಕತೆಗಳನ್ನೇ ರೂಪಕತೆಗಳ ಮೂಲಕ ನಂಬಿಸುವ ಪ್ರಕ್ರಿಯೆ ಈ ನಾಟಕದಲ್ಲಿದೆ.

ಇದೆಲ್ಲವೂ ಮೇಲ್ನೋಟಕ್ಕೆ ಅನ್ನಿಸುವ ಸಂಗತಿಗಳಾದರೆ. ಈ ನಾಟಕಕ್ಕೆ ಇನ್ನೊಂದು ಆಯಾಮವನ್ನೂ ಗುರುತಿಸಬಹುದಾಗಿದೆ. ಅದು ಅನ್ಯ ಸಂಸ್ಕೃತಿಯ ಹೇರಿಕೆ. ಮೊದಲಿದ್ದ ಗೌಡ ಹಳ್ಳಿ ಸಂಸ್ಕೃತಿಯ ವ್ಯಕ್ತಿಯಾಗಿದ್ದರೆ ಅವನನ್ನು ಕೊಂದು ಗೌಡನ ವೇಷದಾರಿಯಾಗಿ ಬರುವ ದೆವ್ವವು ವಿನಾಶಕಾರಿ ದಮನ ಸಂಸ್ಕೃತಿಯನ್ನು ಗ್ರಾಮದಲ್ಲಿ ಜಾರಿಗೆ ತರುತ್ತದೆ. ತನ್ನಲ್ಲಿರುವ ಹಣ ಬಲದ ಅಧಿಕಾರ ಹಾಗೂ ಅತೀಂದ್ರೀಯ ಶಕ್ತಿಗಳಿಂದಾಗಿ ಇಡೀ ಗ್ರಾಮದ ಜನರನ್ನು ಭಯದಲ್ಲಿ ಬದುಕುವಂತೆ ಮಾಡಲಾಗುತ್ತದೆ. ದ್ರಾವಿಡ ನೆಲವನ್ನು ಆವರಿಸಿಕೊಂಡ ಆರ್ಯರು, ಹಿಂದುಸ್ಥಾನವನ್ನು ಆಕ್ರಮಿಸಿಕೊಂಡ ವಸಾಹತುಶಾಹಿಗಳಾದ ಆಂಗ್ಲರು, ಮೊಗಲರು ಮಾಡಿದ್ದೇ ಸಾಂಸ್ಕೃತಿಕ ಹೇರಿಕೆಯನ್ನು. ದ್ವಾವಿಡ ಸಂಸ್ಕೃತಿಯ ಮೇಲೆ ವೈದಿಕಶಾಹಿ ಆರ್ಯ ಸಂಸ್ಕೃತಿ ಹೇರಿದ್ದರಿಂದಾಗಿ ಇಡೀ ದೇಶ ಮೌಢ್ಯದ ನಾಡಾಯಿತು, ಅಸಮಾನತೆಯ ಬೀಡಾಯಿತು. ಹೊರಗಿನಿಂದ ಬಂದ ಮಾಯಾ ರಕ್ಕಸನು ನೆಲದ ಸಂಸ್ಕೃತಿಯನ್ನು ಕೊಂದು ತನ್ನದೇ ದಮನ ಸಂಸ್ಕೃತಿಯನ್ನು ಹೇರಲಾದ ಚಾರಿತ್ರಿಕ ವಿದ್ಯಮಾನಗಳ ರೂಪಕವಾಗಿ ಈ ‘ಋಷ್ಯಶೃಂಗ’  ನಾಟಕ ಮೂಡಿಬಂದಂತಿದೆ.

ಕಂಬಾರರು ತಮ್ಮ ನಾಟಕಗಳಲ್ಲಿ ರೂಪಕತೆಯ ಜೊತೆಗೆ ಅರ್ಥಲಯ ಮತ್ತು ನಾದಲಯಗಳನ್ನು ಹದವಾಗಿ ಬೆರೆಸಿ ಭಾಷೆಯನ್ನು ಸಮರ್ಥವಾಗಿ ಬಳಸಿದ್ದರಿಂದಾಗಿ ನಾಟಕ ಓದಿಸಿಕೊಂಡು ಇಲ್ಲವೇ ನೋಡಿಸಿಕೊಂಡು ಹೋಗುತ್ತದೆ. ‘ಋಷ್ಯಶೃಂಗ’  ನಾಟಕದ ಪ್ರಮುಖ ಆಕರ್ಷಣೆ ಇರುವುದೇ ಬಳಸಿದ ಹಾಡುಗಳಲ್ಲಿ ಹಾಗೂ ಹಾಡುಗಳಲ್ಲಿ ಇರುವ ಒಳಾರ್ಥಗಳಲ್ಲಿ. ಅಶ್ಲೀಲ ಎನ್ನಿಸಬಹುದಾದದ್ದನ್ನೂ ಸಹ ಶೃಂಗಾರರಸದಲ್ಲಿ ಹಾಡುಗಳನ್ನು ಕಟ್ಟಿಕೊಡುವ ರೀತಿಯಲ್ಲಿ ಕಂಬಾರರಿಗೆ ಕಂಬಾರರೇ ಸಾಟಿ.

ಹೌದು ಕಂಬಾರರ ಮೇಲೆ ಹಲವಾರು ಆರೋಪಗಳಿವೆ. ಮುದೇನೂರು ಸಂಗಣ್ಣನವರ ಸಂಗ್ರಹದ ಲಕ್ಷಾಧಿಪತಿ ರಾಜನ ಕಥೆಯನ್ನು ಕದ್ದು ನಾಟಕವಾಗಿಸಿದರು, ಪತ್ತಾರ ಮಾಸ್ತರರ ಕಥೆಯನ್ನು ಬಳಸಿ ಸಂಗ್ಯಾಬಾಳ್ಯಾ ರಚಿಸಿದರು, ಲಿಯೋ ಟಾಲಸ್ಟಾಯ್ ಕಥೆಯನ್ನು ಸಾಂಬಶಿವ ಪ್ರಹಸನವನ್ನಾಗಿಸಿದರು.. ಹೀಗೆ ಕೃತಿಚೌರ್ಯದ ಆರೋಪಗಳು ಬೇಕಾದಷ್ಟಿವೆ. ಯಾರು ಎಲ್ಲಿಂದ ಏನು ಕದ್ದರು ಅನ್ನುವುದು ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅಮುಖ್ಯವೆನಿಸುತ್ತದೆ ಹಾಗೂ ನಾಟಕವೇ ಅಂತಿಮವಾಗುತ್ತದೆ. ಬಹುತೇಕ ನಾಟಕಕಾರರು ಪೌರಾಣಿಕ ಕಥೆಗಳಿಂದ ಇಲ್ಲವೇ ಐತಿಹಾಸಿಕ ಸನ್ನಿವೇಶಗಳಿಂದ ಪ್ರಭಾವಿತರಾಗಿ ನಾಟಕಗಳನ್ನು ಕಟ್ಟಿಕೊಟ್ಟಿದ್ದಿದೆ. ಗಿರೀಶ್ ಕಾರ್ನಾಡರ ಬಹುತೇಕ ನಾಟಕಗಳು ಪುರಾಣ ಪಾತ್ರ ಸನ್ನಿವೇಶಗಳನ್ನು ಆಧರಿಸಿದ್ದಾಗಿವೆ. ತುಘಲಕ್ ನಾಟಕ ಐತಿಹಾಸಿಕವಾಗಿದೆ. ಅಂದರೆ ಕಚ್ಚಾ ಪದಾರ್ಥಗಳನ್ನು ಎಲ್ಲಿಂದಲಾದರೂ ಹೆಕ್ಕಿ ತೆಗೆದು ಕ್ರಿಯಾಶೀಲತೆಯನ್ನು ಬಳಸಿ ಹೊಸ ರೂಪಕೊಡುವುದು ಇದೆಯಲ್ಲಾ ಅದೂ ಸಹ ಕಲೆ, ಅದೂ ಕೂಡಾ ಪ್ರತಿಭೆ. ಅದರಲ್ಲಿ ಕಂಬಾರರು ಎತ್ತಿದ ಕೈ. ನಾಟಕ ಕೃತಿಗಳಿಗೆ ಆಕರಗಳು ಯಾವುದಾದರೇನು? ಸಿಕ್ಕಿದ ವಸ್ತುವನ್ನು ದಕ್ಕಿಸಿಕೊಂಡು ಆಕರ್ಷನೀಯವಾಗಿ ವಿನ್ಯಾಸಗೊಳಿಸುವುದು ಅಷ್ಟು ಸುಲಭಸಾಧ್ಯವಲ್ಲ. ಆದರೆ ಕಂಬಾರರಂತಹ ಸೃಜನಶೀಲ ಬರಹಗಾರರಿಗೆ ಅದು ಅಸಾಧ್ಯವೇನಲ್ಲಾ. ಹೀಗಾಗಿ ಯಾವುದೇ ಯಶಸ್ವಿ ಕೃತಿಯ ಮೂಲವನ್ನು ಹುಡುಕುವ ಬದಲು ಕಣ್ಣ ಮುಂದಿರುವ ಆಕೃತಿಯ ಬಗ್ಗೆ ಚರ್ಚಿಸುವುದು ಇಂದಿನ ಅಗತ್ಯವಾಗಿದೆ.

ಅದ್ಯಾಕೋ ‘ಋಷ್ಯಶೃಂಗ’ ಸಿನೆಮಾ ಆಗಿ ವಿಫಲವಾಯಿತು. ನಾಟಕವೂ ಸಹ ಹೆಚ್ಚು ಪ್ರದರ್ಶನಗಳನ್ನು ಕಾಣಲಿಲ್ಲ. ಕಂಬಾರರ ಜೋಕುಮಾರಸ್ವಾಮಿ, ಸಂಗ್ಯಾಬಾಳ್ಯಾ, ಹರಕೆಯ ಕುರಿ ಯಂತಹ ನಾಟಕಗಳಿಗೆ ಸಿಕ್ಕಷ್ಟು ಯಶಸ್ಸು ಈ ನಾಟಕಕ್ಕೆ ದಕ್ಕಲಿಲ್ಲ. ಈಗಂತೂ ‘ಋಷ್ಯಶೃಂಗ’  ನಾಟಕದ ವಸ್ತು ಔಟ್ ಆಪ್ ಡೇಟೆಡ್ ಎನ್ನಿಸುವಂತಿದೆ. ಹೀಗಾಗಿ ಈ ನಾಟಕವನ್ನು ಬಹುತೇಕ ರಂಗಕರ್ಮಿಗಳೇ ಮರೆತಿದ್ದಾರೆ. ಆದರೂ ಈ ನಾಟಕದ ಹಾಡುಗಳು ಮಾತ್ರ ಜನಪ್ರೀಯವಾಗಿವೆ. ಈಗಲೂ ಜೀವಂತವಾಗಿವೆ.

ಕಂಬಾರರ ಕುರಿತು ಉಪನ್ಯಾಸವನ್ನು ಕೊಟ್ಟ ಲಿಂಗರಾಜ ಕಂಬಾರರನ್ನು ಬ್ರೊನಾಲ್ಟ್ ಬ್ರೆಕ್ಟ್ ಗೆ ಹೋಲಿಕೆ ಮಾಡಿದರು. ಈ ಹಿಂದೆ ಕಂಬಾರರಿಗೆ ಅಭಿನಂದನೆ ಹೇಳುವ ಆತುರದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪನವರೂ ಸಹ ಕಂಬಾರರನ್ನು ಕನ್ನಡದ ಬ್ರೆಕ್ಟ್ ಎಂದು ಹೊಗಳಿ ಹೊನ್ನಶೂಲಕ್ಕೇರಿಸಿದ್ದರು. ಬರಗೂರರು ಕಂಬಾರರನ್ನು ಸಮರ್ಥಿಸಿಕೊಳ್ಳಬೇಕೆಂದಿದ್ದರೆ ಅವರ ನಾಟಕ ಸಾಹಿತ್ಯಗಳ ಅಂಶಗಳನ್ನು ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಬಹುದಾಗಿತ್ತು. ಅತ್ಯದ್ಬುತ ನಾಟಕಕಾರ ಎಂದು ಹೇಳಬಹುದಾಗಿತ್ತು. ಆದರೆ ಬ್ರೆಕ್ಟ್ ಗೆ ಹೋಲಿಸಿದ್ದು ಅನಗತ್ಯವಾಗಿತ್ತು. ಬ್ರೆಕ್ಟ್ ಮತ್ತು ಕಂಬಾರ ಈ ಇಬ್ಬರೂ ನಾಟಕಕಾರರು ಎನ್ನುವುದನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಸಾಮ್ಯತೆಗಳೂ ಇಲ್ಲ. ಬ್ರೆಕ್ಟ್ ಒಬ್ಬ ಮಹಾನ್ ಮಾನವತಾವಾದಿಯಾಗಿದ್ದರೆ ಕಂಬಾರರೊಳಗೊಬ್ಬ ಮನುವಾದಿಯನ್ನು ಅವರ ನಾಟಕಗಳ ಮೂಲಕ ಗುರುತಿಸಬಹುದಾಗಿದೆ. ಬ್ರೆಕ್ಟ್ ಒಬ್ಬ ಎಡಪಂಥೀಯ ಪ್ರಗತಿಪರ ವಿಚಾರವಾದಿಯಾಗಿದ್ದರೆ ಕಂಬಾರರಿಗೆ ಅಂತಹ ಯಾವುದೇ ಪಂಥ ಸಿದ್ದಂತಗಳಿಲ್ಲ. ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕಂಬಾರರು “ ನಾನು ಎಡವೋ ಅಥವಾ ಬಲವೋ ಎಂದು ಈಗಲೂ ನನಗೆ ಗೊತ್ತಾಗಿಲ್ಲ. ನನಗೆ ಎರಡು ಕೈಗಳು ಇವೆಯಾದ್ದರಿಂದ ಎಡವೂ ಹೌದು, ಬಲನೂ ಹೌದು” ಎಂದು ಗೊಂದಲದ ಹೇಳಿಕೆ ಕೊಟ್ಟಿದ್ದರು. ಇತ್ತ ಎಡವೂ ಅಲ್ಲದ, ಅತ್ತ ಬಲವೂ ಅಲ್ಲದ, ಯಾವುದೇ ತತ್ವ ಸಿದ್ದಾಂತಗಳಿಗೆ ಅಂಟಿಕೊಳ್ಳದ ಕಂಬಾರರನ್ನು ಪ್ರಭುತ್ವ ವಿರೋಧಿ ವೈಚಾರಿಕ ನಾಟಕಕಾರ ಬ್ರೆಕ್ಟ್ ಗೆ ಹೋಲಿಸೋದೇ ಅನಗತ್ಯ.

ಕಂಬಾರರ ಜೊತೆಗೆ ಅನೇಕ ವಿಷಯಗಳಲ್ಲಿ ನನಗೆ ಭಿನ್ನಾಭಿಪ್ರಾಯಗಳಿವೆ. ಅವರ ನಾಟಕದ ವಸ್ತುವಿನ ಬಗ್ಗೆ ತಕರಾರಿದೆ. ಅವರ ನಾಟಕಗಳಲ್ಲಿ ಮಹಿಳೆಯನ್ನು ಚಿತ್ರಿಸಿದ ರೀತಿಯ ಬಗ್ಗೆ ಪ್ರಶ್ನೆಗಳಿವೆ, ಅವರ ಅವಕಾಶವಾದಿತನದ ಬಗ್ಗೆ ಬೇಕಾದಷ್ಟು ದೂರುಗಳಿವೆ. ಆದರೆ ಅವರ ಕತೃತ್ವ ಶಕ್ತಿಯ ಕುರಿತು, ಅವರ ಕಾವ್ಯಾತ್ಮಕತೆಯ ಕುರಿತು, ನಾಟಕದ ವಿನ್ಯಾಸಗಳ ಕುರಿತು ಮೆಚ್ಚುಗೆ ಇದೆ. ಭಾಷಾ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಈಗಲೂ ಕುತೂಹಲವಿದೆ. ಅಪ್ಪಟ ದೇಸಿ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಅಪ್ರತಿಮ ಬರಹಗಾರ ಡಾ.ಚಂದ್ರಶೇಖರ್ ಕಂಬಾರರ 87 ನೇ ಜನ್ಮದಿನಾಚರಣೆಯ (ಜನವರಿ 2) ದಿನಕ್ಕಾಗಿ ಶುಭಕೋರುವೆ ಹಾಗೂ ಅವರ ನೂರನೇ ಜನ್ಮದಿನಾಚರಣೆಯನ್ನೂ ಸಂಭ್ರಮಿಸುವ ಭಾಗ್ಯ ಕನ್ನಡಿಕರಿಗೆ ದೊರಕಲಿ ಎಂದು ಆಶಿಸುವೆ.

- ಶಶಿಕಾಂತ ಯಡಹಳ್ಳಿ
 07-01-2023 

ಬುಧವಾರ, ಆಗಸ್ಟ್ 30, 2023

ಸುವರ್ಣ ಸಂಭ್ರಮದಲಿ ರಂಗಸಂಪದ

 ಹವ್ಯಾಸಿ ರಂಗತಂಡದ ಅರ್ಧ ಶತಕದ ಪಯಣ



ರಂಗಸಂಪದದ ತ್ರಿಶಂಕು ನಾಟಕದ ಪೋಟೋ

ಸರಿ ಸುಮಾರು ನೂರು ವರ್ಷಗಳ ಇತಿಹಾಸವಿರುವ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಐವತ್ತು ವರ್ಷಗಳ ಕಾಲ ಒಂದು ರಂಗತಂಡ ಬೆಳೆದು ಉಳಿದು ಕ್ರಿಯಾಶೀಲವಾಗಿ ಸ್ಮರಣೀಯ ಕೊಡುಗೆ ಕೊಟ್ಟಿರುವುದು ರಂಗ ಚರಿತ್ರೆಯಲ್ಲಿ ದಾಖಲಾರ್ಹ ಸಂಗತಿ. ಅಂತಹ ರಂಗಬದ್ದತೆ ಇರುವ ರಂಗಸಂಪದ ತಂಡಕ್ಕೆ ಈಗ ಸುವರ್ಣ ವರ್ಷದ ಸಂಭ್ರಮ.

ಕಾಲಕಾಲಕ್ಕೆ ಹಲವಾರು ರಂಗತಂಡಗಳು ಹುಟ್ಟುತ್ತವೆ, ತಂಡದ ನಾಯಕನಿಗೆ ಆಸಕ್ತಿ ಹಾಗೂ ಸಂಘಟನೆಯ ಶಕ್ತಿ ಇರುವವರೆಗೆ ಮುನ್ನಡೆಯುತ್ತವೆ ಹಾಗೂ ಕೊನೆಗೆ ಕಣ್ಮರೆಯಾಗುತ್ತವೆ. ಪ್ರಕ್ರಿಯೆಯೇ ನಿರಂತರವಾಗಿ ನಡೆಯುತ್ತಾ ರಂಗಭೂಮಿಯನ್ನು ಜೀವಂತವಾಗಿ ಕಾಪಿಟ್ಟುಕೊಂಡು ಬರುವ ಜೀವದ್ರವ್ಯವಾಗಿದೆ. ರಂಗಾಸಕ್ತಿಯಿಂದ ಹುಟ್ಡಿಕೊಂಡ ಏಕವ್ಯಕ್ತಿ ಯಜಮಾನಿಕೆಯ ಕೆಲವಾರು ತಂಡಗಳು ನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ ಬಸವಳಿಯುತ್ತವೆ. ಆದರೆ ರಂಗಸಂಪದ ಇದಕ್ಕೆ ಅಪವಾದವಾಗಿದೆ. ಹವ್ಯಾಸಿ ರಂಗಭೂಮಿ ಬರುಬರುತ್ತಾ ರಂಗಪ್ರಯೋಗಗಳಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳುವ ಬದಲಾಗಿ ರಂಗಭೂಮಿಯನ್ನೇ ವೃತ್ತಿಯಾಗಿ ತೆಗೆದುಕೊಳ್ಳುವ ರಂಗಕರ್ಮಿಗಳು ಹೆಚ್ಚಾದಂತೆ ಹವ್ಯಾಸಿ ಪರಿಕಲ್ಪನೆಗೆ ಹಿನ್ನಡೆಯಾಗಿದ್ದಂತೂ ನಿಜ. ಆದರೆ ರಂಗಸಂಪದ ಅರ್ಧ ಶತಮಾನದಿಂದ ಪಕ್ಕಾ ಹವ್ಯಾಸಿ ತಂಡವಾಗಿಯೇ ರಂಗಬದ್ದತೆ ಹಾಗೂ ವೃತ್ತಿಪರತೆಯನ್ನು ಉಳಿಸಿಕೊಂಡು ಬಂದಿರುವುದೇ ವಿಸ್ಮಯ. ತಂಡದ ಬಹುತೇಕ ಆಧಾರ ಸ್ಥಂಭಗಳಾಗಿರುವವರು ಬದುಕಿಗಾಗಿ ಬೇರೆ ವೃತ್ತಿ ಮಾಡುತ್ತಲೇ ರಂಗಭೂಮಿಯನ್ನು ಪ್ರವೃತ್ತಿಯಾಗಿ ತೆಗೆದುಕೊಂಡು ವೃತ್ತಿಪರವಾಗಿ ನಾಟಕ ಕಟ್ಟುವ ಕ್ರಿಯೆಯಲ್ಲಿ ಕ್ರಿಯಾಶೀಲರಾಗಿರುವುದು ರಂಗಸಂಪದದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಹಾಗೂ ಹವ್ಯಾಸಿ ರಂಗಭೂಮಿಯ ನಿಜವಾದ ಆಶಯವನ್ನು ಉಳಿಸಿಕೊಳ್ಳುವಲ್ಲಿ ತಂಡ ಬೇರೆಯವರಿಗೆ ಮಾದರಿಯಾಗಿದೆ

ಆರ್.ನಾಗೇಶ್, ರಂಗಸಂಪದದ ರೂವಾರಿ

ಐದು ದಶಕಗಳ ಹಿಂದೆ ಹರೆಯದ ಹುಮ್ಮಸ್ಸಿನಲ್ಲಿದ್ದು ರಂಗಾಸಕ್ತಿಯನ್ನು ಬೆಳೆಸಿಕೊಂಡಿದ್ದ ಮಾನ್ಯರಾದ ಆರ್.ನಾಗೇಶ್ಜೆ.ಲೊಕೇಶ್, ಸುಬ್ರಹ್ಮಣ್ಯಂ, ಎಂ.ಸಿ.ಆನಂದ, ಹರಿಕೃಷ್ಣ ಮತ್ತು ಕೇಶವರಾವ್ ರವರು ರಂಗಸಂಪದದ ಹುಟ್ಟಿಗೆ ಕಾರಣೀಕರ್ತರಾದ ಮೊಟ್ಟ ಮೊದಲಿಗ ರೂವಾರಿಗಳು. ತದನಂತರ ಚಡ್ಡಿ ನಾಗೇಶ್, ಚಂದ್ರಕಾಂತ, ಶಿವಲಿಂಗ ಪ್ರಸಾದ್, ಚನ್ನಕೇಶವಮೂರ್ತಿ ಮುಂತಾದವರು ಜೊತೆಗೂಡಿ ರಂಗಸಂಪದವನ್ನು ಕಟ್ಟಿ ಬೆಳೆಸಿದವರುಕೆಲವರು ನಿರ್ಗಮಿಸಿದರೆ ಹಲವರು ಜೊತೆಯಾದರು. ಅದೆಷ್ಟೋ ರಂಗಸಂಪದಿಗರು ತಮ್ಮ ಮನೆ ಕಚೇರಿಗಳ ಕೆಲಸವನ್ನು ಬದಿಗಿರಿಸಿ, ವೃತ್ತಿಯಲ್ಲಿ ಸಂಪಾದಿಸಿದ ಹಣವನ್ನು ವಿನಿಯೋಗಿಸಿ ರಂಗಸಂಪದಕ್ಕೆ ಯಶಸ್ವಿ ರಂಗಪ್ರಯೋಗಗಳನ್ನು ಕಟ್ಟಿಕೊಟ್ಟು ಕನ್ನಡ ಹವ್ಯಾಸಿ ರಂಗಭೂಮಿಯ ಬುನಾದಿಯನ್ನು ಗಟ್ಟಿಗೊಳಿಸಿದರು

ಕ್ರಿಯಾಶೀಲ ರಂಗನಿರ್ದೇಶಕರಾದ ಆರ್.ನಾಗೇಶ್, ಪ್ರಸನ್ನ, ಸಿಜಿಕೆ, ಎನ್.ಎಸ್.ವೆಂಕಟರಾಂ, ಗೋಪಾಲಕೃಷ್ಣ ನಾಯರಿ, ಹೆಚ್.ವಿ.ವೆಂಕಟಸುಬ್ಬಯ್ಯ, ನಾಗಾಭರಣ, ಡಿ.ಟಿ.ಚೆನ್ನಕೇಶವಮೂರ್ತಿ, ಅಶೋಕ ಬಾದರದಿನ್ನಿ, ಬಿ.ವಿ.ವೈಕುಂಟರಾಜು, ಪ್ರಮೋದ್ ಶಿಗ್ಗಾಂವ್ ಮುಂತಾದವರು ರಂಗಸಂಪದಕ್ಕೆ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಯಯಾತಿ, ಕದಡಿದ ನೀರು, ಏವಂ ಇಂದ್ರಜಿತ್, ಚೋಮ, ಕತ್ತಲೆ ಬೆಳಕು, ಸಂಗ್ಯಾ ಬಾಳ್ಯಾ, ಸಾಕ್ಷಿಕಲ್ಲು, ಸಂದರ್ಭ, ಚಿದಂಬರ ರಹಸ್ಯ, ಹರಕೆಯ ಕುರಿ, ಒಡಲಾಳ, ಮಹಾಚೈತ್ರ.. ಹೀಗೆ ನಲವತ್ತಕ್ಕೂ ಹೆಚ್ಚು ಸುಪ್ರಸಿದ್ದ ನಾಟಕಗಳನ್ನು ರಂಗಸಂಪದವು ನಿರ್ಮಿಸಿ ರಂಗಚರಿತ್ರೆಯಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ.

ಜೆ.ಲೊಕೇಶ್, ರಂಗಸಂಪದದ ರೂವಾರಿ

ಕೇವಲ ರಂಗಪ್ರದರ್ಶನಗಳ ನಿರ್ಮಿತಿಗಾಗಿ ಮಾತ್ರ ಸೀಮಿತವಾಗಿರದ ರಂಗಸಂಪದವು ಕನ್ನಡ ರಂಗಭೂಮಿಯ ಸರ್ವತೋಮುಖಿ ಬೆಳವಣಿಗೆಗೆ ಬಹುಮುಖಿ ಆಯಾಮಗಳಲ್ಲಿ ಶ್ರಮಿಸಿದೆ. ನಾಟಕ ರಚನಾ ಸ್ಪರ್ಧೆ ಹಾಗೂ ಕಾರ್ಯಾಗಾರಗಳನ್ನು  ಆಯೋಜಿಸಿದೆ. ನಾಟಕ ರಚನಾ ಸ್ಪರ್ಧೆಯ ಮೂಲಕ ಹೂಲಿಶೇಖರ್, ಗೋಪಾಲ್ ವಾಜಪೇಯಿ, ನಿಸರ್ಗಪ್ರೀಯರಂತಹ ನಾಟಕಕಾರರು ರೂಪಗೊಂಡರು. ಸಿಜಿಕೆ ಯವರು ದೇವನೂರು ಮಹಾದೇವರ ಕಾದಂಬರಿಯನ್ನು ನಾಟಕವಾಗಿ ಬರೆದರುರಂಗಸಂಪದವು ಸಾಹಿತಿಗಳಾದ ಎಚ್.ಎಸ್.ಶಿವಪ್ರಕಾಶ್, ಕೀರಂ ನಾಗರಾಜರಂತಹ ದಿಗ್ಗಜರನ್ನು ನಾಟಕಕಾರರನ್ನಾಗಿಸಿದೆ. ಸಿಜಿಕೆ ಯವರ ನಿರ್ದೇಶನದಲ್ಲಿ ಒಡಲಾಳದಂತಹ ಅದ್ಬುತ ನಾಟಕ ಸಿದ್ದಗೊಳಿಸಿ ಉಮಾಶ್ರೀಯಂತಹ ಮೇರು ನಟಿಯನ್ನು ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದ ಕೀರ್ತಿಯೂ ರಂಗಸಂಪದಕ್ಕೇ ದಕ್ಕಬೇಕು. ವೈಜಯಂತಿ ಕಾಶಿ, ವಿಜಯ್ ಕಾಶಿ, ನಾಗೇಶ್ ಕಶ್ಯಪ್, ಬಿ.ಎಸ್.ರಾಮಮೂರ್ತಿ, ವೆಂಕಟೇಶಮೂರ್ತಿ ಮುಂತಾದ ಕಲಾವಿದರಿಗೆ ಅವಕಾಶ ಕೊಟ್ಟು ಕಲಾವಿದರನ್ನಾಗಿ ಬೆಳೆಸಿದ್ದು ರಂಗಸಂಪದ. ಹೀಗೆ ಅನೇಕಾನೇಕ ರಂಗಾಸಕ್ತ ನಟ ನಟಿಯರನ್ನು, ಹಲವಾರು ರಂಗನೇಪತ್ಯ ತಜ್ಞರನ್ನು, ನಾಟಕಕಾರರನ್ನು ರಂಗಭೂಮಿಗೆ ಕೊಟ್ಟ ರಂಗಸಂಪದದ ಕಾರ್ಯ ಸ್ತುತ್ಯಾರ್ಹ. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ನಾಟಕಗಳ ಕೊರತೆ ಕಂಡುಬಂದಾಗ ಚೋಮ, ಚಿದಂಬರ ರಹಸ್ಯ, ಒಡಲಾಳದಂತಹ ಕೆಲವಾರು ಸಾಹಿತ್ಯ ಕೃತಿಗಳನ್ನು ರಂಗರೂಪಾಂತರಿಸಿ ಪ್ರದರ್ಶನಗೊಳಿಸಿದ್ದು ರಂಗಸಂಪದದ ಹಿರಿಮೆ. ಪ್ರಸನ್ನರವರಂತಹ ನಿರ್ದೇಶಕರನ್ನು ಮೊಟ್ಟ ಮೊದಲ ಬಾರಿಗೆ ಕನ್ನಡ ರಂಗಭೂಮಿಗೆ ಕದಡಿದ ನೀರು ನಾಟಕದ ಮೂಲಕ ಪರಿಚಯಿಸಿದ್ದೂ ರಂಗಸಂಪದದ ಸಾಧನೆ. "ರಂಗಸಂಪದ ಒಂದು ರಂಗ ಗರಡಿಮನೆ ಇದ್ದಂತೆ" ಎಂದು ಚಂದ್ರಶೇಖರ್ ಕಂಬಾರರು ಹೇಳಿದ್ದರಲ್ಲಿ ಅತಿಶಯವೇನಿಲ್ಲ.

ಕೇವಲ ತಮ್ಮ ತಂಡದ ಅಭ್ಯುದಯಕ್ಕೆ ಮಾತ್ರ ಸೀಮಿತವಾಗಿರದ ರಂಗಸಂಪದದ ರಂಗಕರ್ಮಿಗಳು ಆಗಿನ ಕಾಲದ ಹಲವಾರು ರಂಗತಂಡಗಳ ಜೊತೆ ಸೌಹಾರ್ಧ ಸಂಬಂಧವನ್ನೂ ಹೊಂದಿ ಬೇರೆ ತಂಡಗಳ ನಾಟಕ ನಿರ್ಮಿತಿಯಲ್ಲಿ ಸಹಾಯ ಸಹಕಾರವನ್ನು ಕೊಡುತ್ತಾ ಒಟ್ಟಾರೆಯಾಗಿ ಕನ್ನಡ ರಂಗಭೂಮಿ ಬೆಳೆಯಬೇಕು ಎನ್ನುವ ಆಶಯವನ್ನು ಹೊಂದಿದ್ದು ಸಾರ್ವಕಾಲಿಕ ಮಾದರಿ ಕಾಯಕವಾಗಿದೆ. ಬಹುತೇಕ ರಂಗತಂಡಗಳು  ನಿರ್ದಿಷ್ಟ ವ್ಯಕ್ತಿ, ನಾಟಕಕಾರ, ನಿರ್ದೇಶಕರ ಸುತ್ತ ಸುತ್ತಿದರೆ ರಂಗಸಂಪದವು ತನ್ನ ಸುತ್ತ ಹಲವಾರು ನಿರ್ದೇಶಕರು ನಾಟಕಕಾರರು ನೇಪತ್ಯ ತಜ್ಞರನ್ನು ಬೆಳೆಸುತ್ತಾ ನಾಟಕಗಳ ನಿರ್ಮಿತಿಯಲ್ಲಿ ತೊಡಗಿಕೊಂಡಿದ್ದು ವಿಶೇಷ.

ರಂಗಸಂಪದದ ತ್ರಿಶಂಕು ನಾಟಕದ ಪೋಟೋ

ರಂಗಸಂಪದದ ಯಶಸ್ಸಿಗೆ ಹಾಗೂ ದೀರ್ಘಾವಧಿ ಆಯಸ್ಸಿಗೆ ಕಾರಣಗಳು ಹಲವಾರಿವೆ ಹಾಗೂ ಅವುಗಳು ಬೇರೆ ತಂಡಗಳಿಗೆ ಮಾರ್ಗದರ್ಶಿಯಾಗಿವೆ.ರಂಗಸಂಪದವು ಏಕವ್ಯಕ್ತಿ ಮಾಲೀಕತ್ವದ ತಂಡವಾಗಿರದೇ ಸಾಮೂಹಿಕ ನಾಯಕತ್ವ ಹಾಗೂ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಹಾಗೂ ಯಾವುದೇ ಯೋಜನೆಯೊಂದನ್ನು ಎತ್ತಿಕೊಂಡರೂ ಸಹಮತ ಇಲ್ಲವೇ ಬಹುಮತದ ಮೂಲಕ ಎಲ್ಲರ ಸಹಭಾಗಿತ್ವದಲ್ಲಿ ಅನುಷ್ಟಾನಕ್ಕೆ ತಂದಿದೆ. ಅಭಿಪ್ರಾಯಬೇಧಗಳನ್ನು ಚರ್ಚೆ ಸಂವಾದಗಳ ಮೂಲಕ ಬಗೆಹರಿಸಿಕೊಂಡು ಸಾಮೂಹಿಕವಾಗಿ ರಂಗಬದ್ದತೆಯಿಂದ ತೊಡಗಿಸಿಕೊಂಡು ಇಟ್ಟ ಗುರಿ ತಲುಪಲು ಪ್ರಯತ್ನಿಸಿದೆಸರಕಾರದ ಅನುದಾನಗಳನ್ನೇ ನೆಚ್ಚಿಕೊಳ್ಳದೇ ರಂಗಸಂಪದದ ಎಲ್ಲರೂ ತಮ್ಮ ವೃತ್ತಿ ಆದಾಯದ  ಭಾಗವನ್ನು ಕಾಂಟ್ರಿಬ್ಯುಟ್ ಮಾಡುವುದು. ಹಾಗೂ ರಂಗಪೋಷಕರಿಂದ ದಾನ ಪಡೆದು ಅಂದುಕೊಂಡ ಉದ್ದೇಶಕ್ಕೇ ಬಳಸುವುದು. ಸಂಗ್ರಹಗೊಂಡ ಹಣವನ್ನು ಯಾರೂ ಯಾವುದೇ ಕಾರಣಕ್ಕೂ ಸ್ವಂತಕ್ಕೆ ಬಳಸಿಕೊಳ್ಳದೇ ಲೆಕ್ಕಪತ್ರದಲ್ಲಿ ಪಾರದರ್ಶಕತೆ ಹಾಗೂ ಪರಸ್ಪರ ನಂಬಿಕೆಯನ್ನು ಹೊಂದಿದ್ದರಿಂದ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ. ತಂಡದಲ್ಲಿರುವ ಎಲ್ಲರೂ ತಮ್ಮ ಆಸಕ್ತಿ ಪ್ರತಿಭೆ ಕೌಶಲಕ್ಕೆ ತಕ್ಕಂತೆ ರಂಗವಿಭಾಗದಲ್ಲಿ ಶ್ರದ್ದೆಯಿಂದ ತೊಡಗಿಸಿಕೊಂಡು ಕೆಲಸಗಳನ್ನು ಹಂಚಿಕೊಂಡು ಶ್ರದ್ದೆಯಿಂದ ಕೆಲಸ ಮಾಡಿದ್ದರಿಂದ ವೃತ್ತಿಪರತೆ ಸಾಧ್ಯವಾಗಿದೆಪ್ರತಿಯೊಂದು ನಾಟಕದ ನಿರ್ಮಿತಿಯಲ್ಲೂ ವೃತ್ತಿಪರತೆಯನ್ನು ಕಾಪಾಡಿಕೊಳ್ಳುವುದು ಹಾಗೂ ನಾಟಕದ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟು ಪ್ರೇಕ್ಷಕರನ್ನು ರಂಗಮಂದಿರಕ್ಕೆ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದರಿಂದ ರಂಗಸಂಪದದ ನಾಟಕಗಳು ಹೆಚ್ಚು ಪಾಪುಲಾರಿಟಿ ಪಡೆದಿವೆ.

ಎಲ್ಲಾ ಪ್ರಮುಖ ಅಂಶಗಳನ್ನು ಸ್ವಪ್ರೇರಣೆಯಿಂದ ಅಳವಡಿಸಿಕೊಂಡಿದ್ದರಿಂದ ರಂಗಸಂಪದವು ಕನ್ನಡ ರಂಗಭೂಮಿಯ ಮಹತ್ವದ ರಂಗತಂಡವಾಗಿ ಅರ್ಧ ದಶಕ ಪೂರೈಸಿದೆ. ರಂಗಭೂಮಿಯನ್ನು ಹವ್ಯಾಸವಾಗಿ ಮಾತ್ರವಲ್ಲ ರಂಗಧರ್ಮವಾಗಿ ಪರಿಗಣಿಸಿದ್ದರಿಂದ ಸಾರ್ವತ್ರಿಕ ಮನ್ನಣೆಯನ್ನೂ ಪಡೆದಿದೆ. ಹಾಗೂ ರಂಗಸಂಪದ ತಂಡದ ಬಹುತೇಕ ಹಿರಿಯ ರಂಗಕರ್ಮಿಗಳನ್ನು ಸರಕಾರ ಗುರುತಿಸಿ ಪ್ರಮುಖ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದೆ. ರಂಗಸಂಪದದ ಸಂಘಟನಾತ್ಮಕ  ಮೆದುಳಾಗಿ ಬದ್ದತೆಯಿಂದ ಕೆಲಸಮಾಡಿ ಸಮರ್ಥವಾಗಿ ತಂಡವನ್ನು ಮುನ್ನಡೆಸಿದ ಜೆ.ಲೊಕೇಶರವರನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿಯೂ ಕರ್ನಾಟಕ ಸರಕಾರ ಆಯ್ಕೆಮಾಡಿತ್ತು.

ಎಲ್ಲದಕ್ಕೂ ಎಕ್ಸಪೈರಿ ಡೇಟ್ ಅನ್ನೋದು ಇದ್ದೇ ಇರುತ್ತದೆ. ಈಗ ಎಪ್ಪತ್ತು ಎಂಬತ್ತು ವಯೋಮಿತಿಯಲ್ಲಿರುವ ರಂಗಸಂಪದದ ಆರಂಭಿಕ ರೂವಾರಿಗಳಿಂದ ಇನ್ನೂ ಎಷ್ಟೋಂತಾ ರಂಗಕಾಯಕ ಮಾಡಲು ಸಾಧ್ಯ? ಹೀಗಾಗಿ ಕಳೆದೊಂದು ದಶಕದಿಂದ ರಂಗಸಂಪದದ ಕಾರ್ಯಚಟುವಟಿಕೆ ಕುಂಟಿತವಾಗಿದೆಯಾದರೂ ಸ್ಥಗಿತಗೊಂಡಿಲ್ಲ. ಇನ್ನೂ ಮೂಲ ರಂಗಸಂಪದಿಗರ ಉತ್ಸಾಹ ತಗ್ಗಿಲ್ಲ. ಆದರೆ ವಯಸ್ಸು ಅನುಮತಿಸುತ್ತಿಲ್ಲ. ಬದಲಾದ ಕಾಲಘಟ್ಟದಲ್ಲಿ ಕಲಾವಿದರನ್ನು ಹೊಂದಿಸಿಕೊಂಡು ನಾಟಕ ನಿರ್ಮಿಸಿ ಮರುಪ್ರದರ್ಶನಗಳನ್ನು ಮಾಡುವುದು ಅಂದುಕೊಂಡಷ್ಟು ಸುಲಭಸಾಧ್ಯವಾಗಿಲ್ಲ. ಹೊಸ ಚಿಗುರು ಬರದೇ ಬೇರು ಅದೆಷ್ಟೇ ಬಲಿಷ್ಟವಾಗಿದ್ದರೂ ಅಂದುಕೊಂಡ ಬೆಳವಣಿಗೆ ಸಾಧ್ಯವಿಲ್ಲ. ಇದೆಲ್ಲವನ್ನೂ ಮನಗಂಡೇ ರಂಗಸಂಪದವು ತನ್ನ ಸುವರ್ಣ ಸಂಭ್ರಮದ ನೆಪದಲ್ಲಿ ಮತ್ತೆ ಹೊಸ  ನಾಟಕವೊಂದನ್ನು ನಿರ್ಮಿಸಿದೆ

ರಂಗಸಂಪದದ ‘ಲೋಕದ ಒಳಹೊರಗೆ’ ನಾಟಕದ ಪೋಟೋ

ರಂಗಸಂಪದದವರ ಮನವಿಯ ಮೇರೆಗೆ ದನಿವರಿಯದ ಕ್ರಿಯಾಶೀಲ ನಿರ್ದೇಶಕ ಬಿ.ಸುರೇಶರವರು ಬರೆದು ನಿರ್ದೇಶಿಸಿದ "ಲೋಕದ ಒಳಹೊರಗೆ" ನಾಟಕವನ್ನು ನಿರ್ಮಿಸಲಾಗಿದ್ದು ಆಗಸ್ಟ್ 26 ಮತ್ತು 27 ರಂದು ಕಲಾಗ್ರಾಮದಲ್ಲಿ ಪ್ರದರ್ಶನಗೊಂಡು ನೋಡುಗರ ಮೆಚ್ಚುಗೆ ಗಳಿಸಿದೆ. ನಾಟಕದ ವಿಶೇಷತೆ ಏನೆಂದರೆ ಇದು ಬಿ.ಸುರೇಶರವರು ರಚಿಸಿದ 25 ನೇ ನಾಟಕ ಹಾಗೂ ನಿರ್ದೇಶಿಸಿದ 50 ನೇ ರಂಗಪ್ರಯೋಗ. ಸುರೇಶರವರ 60 ನೇ ವರ್ಷದ ಜನುಮ ದಿನದಂದು ಪ್ರದರ್ಶನಗೊಳ್ಳುತ್ತಿದೆ ಹಾಗೂ ರಂಗ ಸಂಪದಕ್ಕೆ 50 ವರ್ಷ ತುಂಬಿದೆ. ಎಲ್ಲಾ ಕಾರಣಗಳಿಗಾಗಿ ಪ್ರದರ್ಶನ ಸ್ಮರಣೀಯವೆನ್ನಿಸುತ್ತದೆ.

ಪ್ರೊಡಕ್ಷನ್ ವಿಷಯ ಅಂತಾ ಬಂದರೆ ರಂಗಸಂಪದ ರಾಜಿರಹಿತವಾಗಿ ತನ್ನ ವೃತ್ತಿಪರತೆಗೆ ಬದ್ದವಾಗಿರುತ್ತದೆ. ಹೊಸ ನಾಟಕದ ಪ್ರೊಡಕ್ಷನ್ ಕಾಸ್ಟ್ ಎರಡೂವರೆ ಲಕ್ಷ ರೂಪಾಯಿಗಳು. ಕೆಲವೊಂದಿಷ್ಟನ್ನು ದಾನಿಗಳಿಂದ ಹಣ ಸಂಗ್ರಹಿಸಿ, ಇನ್ನೊಂದಿಷ್ಟನ್ನು ರಂಗಸಂಪದದವರೇ ಕೈಯಿಂದ ಹಣ ಹಾಕಿ, ಮತ್ತೊಂದಿಷ್ಟನ್ನು ಉದರಿ ಸಾಲ ಹೇಳಿ ಅತ್ಯುತ್ತಮ ನಾಟಕವನ್ನು ನಿರ್ಮಿಸಲಾಗಿದೆ. ಸಲ ಚಡ್ಡಿ ನಾಗೇಶರವರು ನಾಟಕದ ಸಂಘಟನೆಯ ಮುಖ್ಯ ಹೊಣೆಯನ್ನು ಹೊತ್ತು ನಿಭಾಯಿಸಿದ್ದು ಉಳಿದೆಲ್ಲಾ ರಂಗಸಂಪದಿಗರೂ ತಮ್ಮ ಕೈಲಾದಷ್ಟು ಕೈಗೂಡಿಸಿದ್ದಾರೆ. ಜೊತೆಗೆ ನಾಟಕದ ಎಲ್ಲಾ ಕಲಾವಿದರೂ ಯುವಕ ಯುವತಿಯರು. ಹಿನ್ನೆಲೆ ಸಂಗೀತದಿಂದ ಹಿಡಿದು ಬೆಳಕಿನ ವಿನ್ಯಾಸದ ವರೆಗೆ ತೊಡಗಿಸಿಕೊಂಡವರು ಯುವರಂಗಕರ್ಮಿಗಳು. ರಂಗತಂಡವೊಂದು ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯಬೇಕೆಂದರೆ ಹೀಗೆ ಹೊಸಬರನ್ನು ಸೇರಿಸಿಕೊಂಡು ಮುಂದುವರೆಯಬೇಕಾಗುತ್ತದೆ. ಹಿರಿಯರು ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಯುವರಂಗಕರ್ಮಿಗಳಿಗೆ ದಾರೆ ಎರೆದುಕೊಟ್ಟು ರಂಗಬದ್ದತೆ ಹಾಗೂ ವೃತ್ತಿಪರತೆ ಜೊತೆಗೆ ಸಂಘಟನಾತ್ಮಕ ತಂತ್ರಗಾರಿಕೆಯನ್ನು ಕಲಿಸಿಕೊಡಬೇಕಿದೆ. ರಂಗಾಸಕ್ತ ಯುವಪ್ರತಿಭೆಗಳನ್ನು ಗುರುತಿಸಿ ತರಬೇತುಗೊಳಿಸಿ ಹೊಣೆಗಾರಿಕೆ ವಹಿಸಿಕೊಟ್ಟು ರಂಗಕಾಯಕ ಮುಂದುವರೆಯುವಂತೆ ನೋಡಿಕೊಳ್ಳಬೇಕಿದೆ. ನಿಟ್ಟಿನಲ್ಲೂ ರಂಗಸಂಪದ ಹೊಸ ನಾಟಕ ನಿರ್ಮಿಸಿ ಯುವಕರಿಗೆ ಆದ್ಯತೆಕೊಟ್ಟು ತನ್ನ ಪರಂಪರೆಯನ್ನು ಮುಂದುವರೆಸಿದ್ದು ನಿಜಕ್ಕೂ ಅಭಿನಂದನೀಯ. ಇನ್ನೂ ಐವತ್ತು ವರ್ಷ ರಂಗಸಂಪದದ ರಂಗ ಕಾಯಕ ಯುವಕರ ನಾಯಕತ್ವ ಹಾಗೂ ಭಾಗಿದಾರಿಕೆಯಲ್ಲಿ ನಿರಂತರವಾಗಿ ಸಾಗಲಿ. ರಂಗಭೂಮಿ ಇತಿಹಾಸದಲ್ಲಿ ಇನ್ನೂ ದಾಖಲಾರ್ಹ ಕೆಲಸಗಳನ್ನು ಮಾಡಲಿ. ಮುಂದಿನ ತಲೆಮಾರಿನ ರಂಗತಂಡಗಳಿಗೆಲ್ಲಾ ಮಾದರಿಯಾಗಲಿ ಎಂದು ಹಾರೈಸಬಹುದಾಗಿದೆ

 -ಶಶಿಕಾಂತ ಯಡಹಳ್ಳಿ