ಶುಕ್ರವಾರ, ಏಪ್ರಿಲ್ 26, 2019

ಕನ್ನಡ ರಂಗಭೂಮಿಗೆ ಆಧಾರ ; ರಂಗಮಂದಿರ ಪ್ರಾಧಿಕಾರ:



ಆಧುನಿಕ ಕನ್ನಡ ರಂಗಭೂಮಿಯ ಕನಸು ಹಾಗೂ ರಂಗಕರ್ಮಿಗಳ ಕನವರಿಕೆ ಈ ರಂಗಮಂದಿರ ಪ್ರಾಧಿಕಾರ. ಬಿ.ವಿ.ವೈಕುಂಟರಾಜುರವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರಂಗಮಂದಿರ ಪ್ರಾಧಿಕಾರದ ಕನಸಿನ ಬೀಜವನ್ನು ಬಿತ್ತಿದ್ದರು. ರಂಗಮಂದಿರಗಳ ನಿರ್ಮಾಣ ಹಾಗೂ ನಿರ್ವಹಣೆಗೆಂದೇ ರಂಗಮಂದಿರ ಪ್ರಾಧಿಕಾರವೊಂದನ್ನು ಸರಕಾರ ಸ್ಥಾಪಿಸಬೇಕು ಎಂಬ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಆದರೆ.. ಅವರ ಕನಸು ನನಸಾಗಲೇ ಇಲ್ಲ, ಆದರೆ.. ಅವರು ಬಿತ್ತಿದ ಬೀಜ ಹುಸಿಹೋಗಲಿಲ್ಲ. ವೈಕುಂಟರಾಜುರವರು ಅಧ್ಯಕ್ಷರಾಗಿದ್ದಾಗ ಅಕಾಡೆಮಿಯ ಸದಸ್ಯರಾಗಿದ್ದ ಜೆ.ಲೊಕೇಶರವರು ಆ ಕನಸಿನ ಬೀಜವನ್ನು ಕಾಪಿಟ್ಟುಕೊಂಡು ಬಂದಿದ್ದರು. ಯಾವಾಗ ಜೆ.ಲೋಕೇಶರವರು ಪ್ರಸ್ತುತ ನಾಟಕ ಅಕಾಡೆಮಿಯ ಅಧ್ಯಕ್ಷರಾದರೋ ಆಗ ಅವರ ಮನಸುಖರಾಯನ ಮನಸಿನಲ್ಲಿ ಸುಪ್ತವಾಗಿದ್ದ ರಂಗಮಂದಿರ ಪ್ರಾಧಿಕಾರದ ಕನಸಿಗೆ ಚಾಲನೆ ಕೊಡುವ ಪ್ರಯತ್ನವನ್ನು ಆರಂಭಿಸಿದರು.

ಏನಿದು ರಂಗಮಂದಿರ ಪ್ರಾಧಿಕಾರ? : ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕನ್ನಡ ಭಾಷಾಭಾರತಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರಗಳೆಂಬ ಅರೆಸ್ವಾಯತ್ತ ಸಂಸ್ಥೆಗಳಿವೆ. ಈ ಪ್ರಾಧಿಕಾರದ ಅಧ್ಯಕ್ಷರುಗಳಿಗೆ ಕ್ಯಾಬಿನೆಟ್ ದರ್ಜೆಯ ಮಾನ್ಯತೆ ಇದೆ. ಅವರು ಕನ್ನಡ ಭಾಷೆ ಮತ್ತು ಅಕ್ಷರ ಸಂಸ್ಕೃತಿಯನ್ನು ಉಳಿಸಲು ಹಾಗೂ ಬೆಳೆಸಲು ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಾ ಬಂದಿದ್ದಾರೆ. ಅದೇ ರೀತಿ ರಂಗಮಂದಿರಗಳ ಪ್ರಾಧಿಕಾರವೊಂದು ಅಸ್ತಿತ್ವಕ್ಕೆ ಬರಬೇಕೆಂಬುದು ರಂಗಕರ್ಮಿಗಳ ಬಯಕೆಯಾಗಿದೆ. ಯಾಕೆಂದರೆ..

ಇಡೀ ದೇಶದಲ್ಲಿಯೇ ರಂಗಪ್ರಯೋಗಶೀಲತೆಗೆ ಕನ್ನಡ ರಂಗಭೂಮಿ ಹೆಸರುವಾಸಿಯಾಗಿದೆ. ದೇಶದ ಯಾವುದೇ ರಾಜ್ಯಕ್ಕಿಂತಲೂ ಹೆಚ್ಚು ರಂಗಚಟುವಟಿಕೆಗಳು ಕರ್ನಾಟಕದಲ್ಲಿ ನಡೆಯುತ್ತಿರುವುದು ನಮ್ಮ ರಾಜ್ಯದ ಹೆಮ್ಮೆ. ಹಿರಿಯ ರಂಗಕರ್ಮಿಗಳು ಸದಾ ಒಂದಿಲ್ಲೊಂದು ನಾಟಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ, ಹೊಸ ತಲೆಮಾರಿನ ಯುವಕರೂ ಸಹ ನಾಟಕಗಳತ್ತ ಆಕರ್ಷಿತರಾಗಿ ತಮ್ಮದೇ ಆದ ರೀತಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ. ಮಕ್ಕಳ ರಂಗಶಿಬಿರಗಳು, ಯುವಕರ ರಂಗಕಾರ್ಯಾಗಾರಗಳು ನಾಡಿನಾದ್ಯಂತ ನಡೆಯುತ್ತಲೇ ಇವೆ.

ಆದರೆ.. ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಎಲ್ಲಾ ರಂಗಕರ್ಮಿ ಕಲಾವಿದರುಗಳಿಗೆ ತಮ್ಮ ನಾಟಕಗಳನ್ನು ಎಲ್ಲಿ ಪ್ರದರ್ಶಿಸಬೇಕು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಯಾಕೆಂದರೆ.. ನಾಟಕದ ತಯಾರಿಗೆ ಬೇಕಾದ ತಾಲೀಮು ಕೊಠಡಿಗಳು ಹಾಗೂ ರಂಗಪ್ರದರ್ಶನಕ್ಕೆ ಅತ್ಯಂತ ಅಗತ್ಯವಾದ ರಂಗಮಂದಿರಗಳ ಕೊರತೆ ತೀವ್ರವಾಗಿದೆ. ಈಗಾಗಲೇ ರಾಜ್ಯದ ಕೆಲವೆಡೆ ಸರಕಾರಿ ಸಭಾಂಗಣ ಸಮುದಾಯ ಭವನಗಳು ಇವೆಯಾದರೂ ಅವುಗಳಲ್ಲಿ ಬಹುತೇಕವು ನಾಟಕಗಳ ಪ್ರದರ್ಶನಕ್ಕೆ ಪೂರಕವಾಗಿಲ್ಲ. ತಾಂತ್ರಿಕ ಪರಿಕರಗಳಂತೂ ಮೊದಲೇ ಇಲ್ಲ. ತಾಲ್ಲೂಕು ಕೇಂದ್ರಗಳಲ್ಲಂತೂ ನಾಟಕಗಳನ್ನು ಪ್ರದರ್ಶಿಸಲು ಕನಿಷ್ಟ ಸೌಲಭ್ಯಗಳುಳ್ಳ ರಂಗಮಂದಿರಗಳೇ ಇಲ್ಲ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಇರುವ ಬೆರಳೆಣಿಕೆಯಷ್ಟು ರಂಗಮಂದಿರಗಳು ನಿರಂತರವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಕಾಗುತ್ತಿಲ್ಲ. ನಾಟಕಗಳು ಸಿದ್ದವಾಗಿದ್ದರೂ ಅವುಗಳನ್ನು ಪ್ರದರ್ಶಿಸುವುದಕ್ಕೆ ರಂಗಮಂದಿರಗಳೇ ಇಲ್ಲದಿರುವುದು ರಂಗಚಟುವಟಿಕೆಗಳನ್ನು ಕುಂಟಿತಗೊಳಿಸುತ್ತಿವೆ ಹಾಗೂ ಹೊಸ ತಲೆಮಾರಿನ ಯುವಕರ ಆಸಕ್ತಿಯನ್ನು ಕುಂದಿಸುತ್ತಿದೆ.

ಆದ್ದರಿಂದ.. ರಾಜಧಾನಿಯಿಂದ ಜಿಲ್ಲಾ ಕೇಂದ್ರಗಳಿಗೆ, ಜಿಲ್ಲಾ ಕೇಂದ್ರಗಳಿಂದ ತಾಲೂಕು ಕೇಂದ್ರಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಸ್ತರಿಸುವ ಹಾಗೂ ವಿಕೇಂದ್ರೀಕರಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಈ ಉದ್ದೇಶಕ್ಕಾಗಿಯೇ ರಂಗಮಂದಿರದ ಪ್ರಾಧಿಕಾರವೊಂದು ಅಸ್ತಿತ್ವಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಪೂರಕವಾದ ಅಂಶಗಳು ಈ ರೀತಿ ಇವೆ.

1.        ಕರ್ನಾಟಕದಲ್ಲಿ ಈಗಾಗಲೇ ಬೆಂಗಳೂರನ್ನೂ ಒಳಗೊಂಡಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ರಂಗಮಂದಿರಗಳು ಅಸ್ತಿತ್ವದಲ್ಲಿವೆಯಾದರೂ ಅವುಗಳು ಬೇರೆ ಬೇರೆ ಸರಕಾರಿ ಇಲಾಖೆಗಳ ಆಧೀನದಲ್ಲಿವೆ ಹಾಗೂ ಅವುಗಳಲ್ಲಿ ಬಹುತೇಕ ರಂಗಮಂದಿರಗಳು ಅವ್ಯವಸ್ಥೆಯ ಆಗರವಾಗಿದ್ದು, ಅಗತ್ಯ ರಂಗಪರಿಕರಗಳ ಕೊರತೆಯಿಂದಾಗಿ ನಾಟಕ ಪ್ರದರ್ಶನಗಳಿಗೆ ಸೂಕ್ತವಾಗಿಲ್ಲ. ಕರ್ನಾಟಕ ಘನ ಸರಕಾರವು ರಂಗಮಂದಿರ ಪ್ರಾಧಿಕಾರವೊಂದನ್ನು ಅಸ್ತಿತ್ವಕ್ಕೆ ತಂದು ಈಗಿರುವ ಎಲ್ಲಾ ರಂಗಮಂದಿರಗಳನ್ನು ಆ ಪ್ರಾಧಿಕಾರದ ಸ್ವಾಧೀನಕ್ಕೆ ಕೊಡುವ ಮೂಲಕ ಇರುವ ರಂಗಮಂದಿರಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬಹುದಾಗಿದೆ.

2.       ಕರ್ನಾಟಕದಲ್ಲಿ ರೆಪರ್ಟರಿಗಳು ಹಾಗೂ ರಂಗಶಾಲೆಗಳು ಬೇಕಾದಷ್ಟಿವೆ. ವಿಶ್ವವಿದ್ಯಾಲಯಗಳಲ್ಲೂ ರಂಗಭೂಮಿ ಕುರಿತು ಪದವಿ ಹಾಗೂ ಸ್ನಾತ್ತಕೋತ್ತರ ಪದವಿಗಳಿವೆ. ಅಲ್ಲಿ ತರಬೇತಾಗಿ ಬರುವ ನೂರಾರು ರಂಗಾಸಕ್ತ ಯುವಕ ಯುವತಿಯರಿಗೆ ಕನ್ನಡ ರಂಗಭೂಮಿಯು ಮೂಲಭೂತ ಸೌಲಭ್ಯಗಳನ್ನು ಕೊಟ್ಟು ಉಳಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ರಂಗತರಬೇತಿ ಹೊಂದಿದ ಅನೇಕರು ಸಿನೆಮಾ, ಟಿವಿ ಕ್ಷೇತ್ರಗಳತ್ತ ವಲಸೆ ಹೋಗುತ್ತಾರೆ ಇಲ್ಲವೇ ನಿರುತ್ಸಾಹಿಗಳಾಗಿ ರಂಗವಿಮುಖಿಗಳಾಗುತ್ತಾರೆ. ಇನ್ನು ಕೆಲವರು ಬೆಂಗಳೂರಿಗೆ ಸೀಮಿತರಾಗುತ್ತಾರೆ. ಇಂತಹ ರಂಗವಿದ್ಯಾವಂತರುಗಳು ತಮ್ಮ ತಾಲ್ಲೂಕುಗಳಿಗೆ ಹೋಗಿ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ರಂಗಮಂದಿರದಂತಹ ಸಾಂಸ್ಕೃತಿಕ ಕೇಂದ್ರಗಳ ಅವಶ್ಯಕತೆ ತುಂಬಾನೇ ಇದೆ ಹಾಗೂ ಈ ಕೊರತೆಯನ್ನು ರಂಗಮಂದಿರ ಪ್ರಾಧಿಕಾರವೊಂದನ್ನು ಹುಟ್ಟುಹಾಕುವ ಮೂಲಕ ಪರಿಹರಿಸಬಹುದಾಗಿದೆ. ಇಡೀ ದೇಶದಲ್ಲಿಯೇ ಇಂತಹುದೊಂದು ಯೋಜನೆ ಎಲ್ಲಿಯೂ ಇಲ್ಲವಾಗಿದ್ದು ಕರ್ನಾಟಕವೇ ಮೊದಲನೆಯದಾಗಿ ಅರಂಭಿಸುವ ಮೂಲಕ ನಮ್ಮ ರಾಜ್ಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಗಮನವನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ.

3.       ಕಳೆದೊಂದು ಶತಮಾನ ಕಾಲದಿಂದ ನಿರಂತರವಾಗಿ ನಡೆದುಕೊಂಡು ಬಂದ ವೃತ್ತಿ ಕಂಪನಿ ರಂಗಭೂಮಿಯೂ ಸಹ ಈಗ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಸಿದ್ದಮಾದರಿಯ ರಂಗಮಂದಿರಗಳಿಲ್ಲದೇ ತಾತ್ಕಾಲಿಕ ಟೆಂಟ್ ರಂಗಮಂದಿರಗಳನ್ನು ಕಟ್ಟಿಕೊಂಡು, ಮಳೆಗಾಳಿ ಮಾಡುವ ನಷ್ಟಗಳನ್ನು ತಡೆದುಕೊಂಡು, ಭೂಮಿಯ ಮಾಲೀಕರಿಗೆ ದುಬಾರಿ ಬಾಡಿಗೆಯನ್ನು ಕೊಟ್ಟುಕೊಂಡು, ಆಗಾಗ ರಂಗಮಂದಿರಗಳನ್ನು ಬದಲಾಯಿಸಿಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಸಕ್ರೀಯವಾಗಿದ್ದ ನೂರಾರು ವೃತ್ತಿ ನಾಟಕ ಕಂಪನಿಗಳು ಮೂಲ ಸೌಲಭ್ಯದ ಕೊರತೆಯಿಂದಾಗಿ ಒಂದೊಂದಾಗಿ ತೆರೆಮರೆಗೆ ಸೇರಿಯಾಗಿವೆ. ಈಗ ಅಳಿದುಳಿದ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಏದುಸಿರು ಬಿಡುತ್ತಿವೆ. ತಾಲ್ಲೂಕು ಕೇಂದ್ರಗಳಲ್ಲಿ ಕನಿಷ್ಟ ಸೌಲಭ್ಯವುಳ್ಳ ರಂಗಮಂದಿರಗಳನ್ನು ಸರಕಾರವು ರಂಗಮಂದಿರ ಪ್ರಾಧಿಕಾರದ ಮೂಲಕ ಕಟ್ಟಿಕೊಟ್ಟಲ್ಲಿ ವೃತ್ತಿ ರಂಗಭೂಮಿ ಮತ್ತೆ ಮೊದಲಿನಂತೆ ತನ್ನ ಶ್ರೀಮಂತಿಕೆಯನ್ನು ಮೆರೆಯಬಹುದಾಗಿದೆ.

4.       ತಾಲ್ಲೂಕಿಗೊಂದು ರಂಗಮಂದಿರ ಅಸ್ತಿತ್ವಕ್ಕೆ ಬಂದರೆ ಕೇವಲ ರಂಗಚಟುವಟಿಕೆಗಳು ಮಾತ್ರವಲ್ಲ ನೃತ್ಯ, ಸಂಗೀತ, ಜಾನಪದ, ಸಾಹಿತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರುತ್ತವೆ. ತಾಲೂಕೊಂದರ ಸುತ್ತ ಮುತ್ತಲಿನ ಗ್ರಾಮಗಳ ಜನರಿಗೆ ಮನರಂಜನೆಯ ಜೊತೆಗೆ ಬೌದ್ದಿಕ ಬೆಳವಣಿಗೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾಗತೀಕರಣದ ಹೊಡೆತಕ್ಕೆ ಸಿಕ್ಕು ಮರೆಯಾಗುತ್ತಿರುವ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣಪಾರಿಜಾತ, ಬೊಂಬೆಯಾಟದಂತಹ ದೇಸಿ ಬಯಲಾಟ ಕಲೆಗಳು ಮತ್ತೆ ಮೊದಲಿನ ಖದರನ್ನು ಮರಳಿ ಪಡೆಯುತ್ತವೆ. ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶಗಳೇ ಇಲ್ಲದೇ ಪರಿತಪಿಸುತ್ತಿರುವ ಕಲಾವಿದರುಗಳಿಗೆ ರಂಗಮಂದಿರಗಳು ಮರುಹುಟ್ಟನ್ನು ಕೊಡಬಹುದಾಗಿವೆ. ಕಲಾಭಿವ್ಯಕ್ತಿಯನ್ನು ಹೆಚ್ಚಿಸಲು ಪ್ರೇರೇಪಣೆ ಸಿಗಬಹುದಾಗಿದೆ. ನಶಿಸುತ್ತಿರುವ ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ನಿರಾಶೆಗೊಂಡ ಕಲಾವಿದರನ್ನು ಕ್ರಿಯಾಶೀಲಗೊಳಿಸುವ ಕೆಲಸ ರಂಗಮಂದಿರ ಪ್ರಾಧಿಕಾರದಿಂದ ಆಗಬಹುದಾಗಿದೆ.

5.       ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯು ನಿರ್ಣಯವೊಂದನ್ನು ಕೈಗೊಂಡು ರಂಗಮಂದಿರ ಪ್ರಾಧಿಕಾರವೊಂದನ್ನು ಅಸ್ತಿತ್ವಕ್ಕೆ ತರಬೇಕೆಂದು ಕರ್ನಾಟಕ ಸರಕಾರಕ್ಕೆ ಮನವಿ ಮಾಡಿಕೊಂಡಿದೆ. ಕರ್ನಾಟಕದ ಎಲ್ಲಾ ತಾಲೂಕುಗಳಲ್ಲೂ ರಂಗಮಂದಿರವನ್ನು ನಿರ್ಮಿಸುವುದು ಹಾಗೂ ನಿರ್ವಹಿಸುವುದು ಸರಕಾರದ ಬೇರೆ ಬೇರೆ ಇಲಾಖೆಗಳಿಂದ ಸಾಧ್ಯವಾಗದು.  ಆದ್ದರಿಂದ ಪ್ರಾಧಿಕಾರದ ಮೂಲಕ ತಾಲ್ಲೂಕಿಗೊಂದು ರಂಗಮಂದಿರವನ್ನು ಆಧ್ಯತೆಯ ಮೇರೆಗೆ ಕಂತುಕಂತಾಗಿ ನಿರ್ಮಿಸಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಅನುಕೂಲ ಮಾಡಕೊಡಬೇಕೆಂದು ನಾಟಕ ಅಕಾಡೆಮಿಯು ಕರ್ನಾಟಕ ಸರಕಾರಕ್ಕೆ ಈ ಪ್ರಸ್ತಾವನೆಯನ್ನು ಸಲ್ಲಿಸುತ್ತಿದೆ. ಕರ್ನಾಟಕ ನಾಟಕ ಅಕಾಡೆಮಿಯು ಅತೀ ಕಡಿಮೆ ವೆಚ್ಚದಲ್ಲಿ ರಂಗಮಂದಿರವನ್ನು ನಿರ್ಮಿಸಲು ಬೇಕಾದ ನೀಲಿನಕ್ಷೆ ಹಾಗೂ ಅಂದಾಜು ವೆಚ್ಚವನ್ನು ಸಿದ್ದಪಡಿಸಿದೆ. ಈ ಉದ್ದೇಶಿತ ಕರ್ನಾಟಕ ರಂಗಭೂಮಿ ಪ್ರಾಧಿಕಾರದ ಕರಡು ರೂಪರೇಷೆಗಳು ಹಾಗೂ ಅಂಗರಚನೆಯನ್ನೂ ಸಹ ನಾಟಕ ಅಕಾಡೆಮಿಯು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತಿದೆ.


6.       ಈಗ  ಅಕಾಡೆಮಿಯು ವಿನ್ಯಾಸಗೊಳಿಸಿರುವ ರಂಗಮಂದಿರಕ್ಕೆ ತಗಲುವ ವೆಚ್ಚ ಅಂದಾಜು ಒಂದೂ ಕಾಲು ಕೋಟಿ ರೂಪಾಯಿಗಳು. ಇದಕ್ಕೆ ಬೇಕಾದ ಸುಮಾರು 150/2೦೦ ಅಡಿಗಳ ಭೂಮಿಯನ್ನು ಜಿಲ್ಲಾ / ತಾಲ್ಲೂಕು ಪಂಚಾಯಿತಿ ಆಡಳಿತ ರಂಗಮಂದಿರ ಪ್ರಾಧಿಕಾರಕ್ಕೆ ಕೊಡಮಾಡಿದಲ್ಲಿ, ಪ್ರಾಧಿಕಾರವು ಟೆಂಡರ್ ಮೂಲಕ ರಂಗಮಂದಿರವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಈ ಉದ್ದೇಶಿತ ರಂಗಭೂಮಿ ಪ್ರಾಧಿಕಾರಕ್ಕೆ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳಲು ಕರ್ನಾಟಕ ಸರಕಾರವು ಮೂಲಧನವಾಗಿ 150ಕೋಟಿ ರೂಪಾಯಿಗಳನ್ನು ಪ್ರಾಧಿಕಾರಕ್ಕೆ ಮುಂದಿನ ಆಯವ್ಯಯದಲ್ಲಿ ಮೀಸಲಿರಿಸಿದಲ್ಲಿ ಮುಂದೆ ಪ್ರಾಧಿಕಾರವು ರಂಗಮಂದಿರದ ಆದಾಯದ ಮೂಲಕ ಸ್ವಾವಲಂಬಿಯಾಗಿ ತನಗೆ ಬೇಕಾದ ಸಂಪನ್ಮೂಲಗಳನ್ನು ತಾನೇ ಕ್ರೂಢೀಕರಿಸಿಕೊಳ್ಳುತ್ತದೆ. ಇದೂ ಅಸಾಧ್ಯವಾದಲ್ಲಿ ವಾರ್ಷಿಕವಾಗಿ ಮೂವತ್ತು ಲಕ್ಷ ರೂಪಾಯಿಗಳನ್ನಾದರೂ ರಂಗಮಂದಿರ ಪ್ರಾಧಿಕಾರಕ್ಕೆ ಸರಕಾರವು ಬಜೆಟ್ ಮೂಲಕ ವದಗಿಸಿದಲ್ಲಿ ರಂಗಚಟುವಟಿಕೆಗಳಿರುವ ಕನಿಷ್ಟ 25 ತಾಲ್ಲೂಕುಗಳಲ್ಲಾದರೂ ರಂಗಮಂದಿರಗಳು ಅಸ್ತಿತ್ವಕ್ಕೆ ಬಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ.

ದೇಸಿ ಸಂಸ್ಕೃತಿ ಹಾಗೂ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ರಂಗಮಂದಿರ ಪ್ರಾಧಿಕಾರವೊಂದನ್ನು ಆದಷ್ಟು ಬೇಗ ಅಸ್ತಿತ್ವಕ್ಕೆ ತಂದು ಕರ್ನಾಟಕದಾದ್ಯಂತ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ವ್ಯವಸ್ಥಿತ ಕಾರ್ಯಯೋಜನೆಯನ್ನು ರೂಪಿಸಬೇಕೆಂಬುದು ಕರ್ನಾಟಕ ನಾಟಕ ಅಕಾಡೆಮಿಯ ಅದಮ್ಯ ಆಶಯವಾಗಿದೆ. ಇದು ಕೇವಲ ಅಕಾಡೆಮಿಯಿಂದ ಮಾತ್ರ ಆಗುವ ಕೆಲಸವಲ್ಲಾ. ಸರಕಾರ ಯಾವಾಗಲೂ ಮನ್ನಣೆ ಕೊಡುವುದು ಜನಾಗ್ರಹಕ್ಕೆ.  ಕಡಿಮೆ ಬಾಡಿಗೆ ದರದಲ್ಲಿ ಸುಸಜ್ಜಿತವಾದ ರಂಗಮಂದಿರಗಳು ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಸಿಗಬೇಕು ಹಾಗೂ ಅವುಗಳೆಲ್ಲವನ್ನೂ ನಿರ್ಮಿಸಿ ನಿರ್ವಹಿಸಲು ರಂಗಮಂದಿರ ಪ್ರಾಧಿಕಾರವೊಂದನ್ನು ಸರಕಾರ ಅಸ್ತಿತ್ವಕ್ಕೆ ತರಬೇಕು ಎಂದು ರಾಜ್ಯಾದ್ಯಂತ ಇರುವ ರಂಗಕರ್ಮಿ ಕಲಾವಿದರುಗಳು ಸರಕಾರವನ್ನು ಒತ್ತಾಯಿಸಬೇಕಿದೆ.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳನ್ನು ಆಯಾ ಪ್ರದೇಶದ ರಂಗಕರ್ಮಿಗಳ ನಿಯೋಗ ಬೇಟಿಯಾಗಿ ಸರಕಾರದ ಅಧಿವೇಶನದಲ್ಲಿ ಪ್ರಾಧಿಕಾರದ ಕುರಿತು ದ್ವನಿ ಎತ್ತಲು ಆಗ್ರಹಿಸಬೇಕಿದೆ. ಇದೂ ಸಾಧ್ಯವಾಗದೇ ಹೋದರೆ ಈ ನಾಡಿನ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದವರೆಲ್ಲಾ ಒಂದಾಗಿ ಸೇರಿ ಸಾಂಸ್ಕೃತಿಕ ಹಿತಾಸಕ್ತಿಗಾಗಿ ಸಂಘಟಿತ ಆಂದೋಲನವನ್ನೇ ಶುರುಮಾಡಬೇಕಾಗಿದೆ. ಲೇಖಕರು ಪತ್ರಕರ್ತರುಗಳು ರಂಗಮಂದಿರ ಪ್ರಾಧಿಕಾರದ ಅಗತ್ಯ ಹಾಗೂ ಅನಿವಾರ್ಯತೆಗಳ ಕುರಿತು ಲೇಖನಗಳನ್ನು ಬರೆದು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಪೂಜಾ ಮಂದಿರಗಳಿಗಿಂತ ರಂಗಮಂದಿರಗಳು ಮನುಷ್ಯರ ಮಾನಸಿಕ ಬೆಳವಣಿಗೆ ಹಾಗೂ ವೈಚಾರಿಕ ಆಲೋಚನೆಗಳಿಗೆ ಹೇಗೆ ಪ್ರೇರಕವಾಗಬಲ್ಲವು ಎಂಬುದನ್ನು ಸಾಂಸ್ಕೃತಿಕ ಕ್ಷೇತ್ರದ ಹಿರಿಯರು ಆಳುವ ವ್ಯವಸ್ಥೆಗೆ ತಿಳಿಸಿ ಹೇಳಬೇಕಿದೆ. ಒಟ್ಟಿನ ಮೇಲೆ ಈ ನೆಲದ ಭಾಷೆ, ಕಲೆ, ಸಂಸ್ಕೃತಿ ಉಳಿದು ಬೆಳೆಯಬೇಕೆಂದರೆ ನಾಡಿನಾದ್ಯಂತ ರಂಗಮಂದಿರಗಳು ಹುಟ್ಟುವುದು ಅನಿವಾರ್ಯವಾಗಿವೆ ಹಾಗೂ ಇಂತಹ ರಂಗಮಂದಿರಗಳ ನಿರ್ಮಾಣ ಹಾಗೂ ವ್ಯವಸ್ಥಿತ ನಿರ್ವಹನೆಗೆ ಕರ್ನಾಟಕ ರಂಗಮಂದಿರ ಪ್ರಾಧಿಕಾರವೊಂದು ಅಸ್ತಿತ್ವಕ್ಕೆ ಬರುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಜಿಸಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ನಾಟಕ ಅಕಾಡೆಮಿಯ ಉದ್ದೇಶಿತ ಯೋಜನೆಗೆ ಬೆಂಬಲವಾಗಿ ನಿಲ್ಲಬೇಕಾಗಿದೆ.

-ಶಶಿಕಾಂತ ಯಡಹಳ್ಳಿ     





ಸೋಮವಾರ, ಏಪ್ರಿಲ್ 22, 2019

ಕೆರತಾನಂದ ಪ್ರಹಸನ :



( ಪಂಡಿತರಿಗೆ ಯಾವಾಗಲೂ ಅನಿಸಿದ್ದನ್ನು ಹೇಳುವ ಆತುರ. ಏನಾದರೂ ಹೇಳಬೇಕೆಂಬ ಬಯಕೆಯಾದರೆ ಅವರಿಗೆ ನಾಲಿಗೆಯಲ್ಲಿ ನವೆ ಶುರುವಾಗುತ್ತಿತ್ತು. ಕವಿಮಿತ್ರರೆಲ್ಲಾ ಸೇರಿ ಬುದ್ದಿವಂತರಾದ ಪಂಡಿತರಿಗೂ ತಮ್ಮ ಕವಿಗೋಷ್ಟಿಗೆ ಆಮಂತ್ರಿಸಿದರು. ಆಗ...)

ಕಿರಿ ಕವಿ :
ಹೊರಟಿದ್ದೆ ನೋಡಲೊಂದು ಗುಂಡು ಮುಖ..
ಹೊರಟಿದ್ದೆ ನೋಡಲೊಂದು ಗುಂಡು ಮುಖ
ಬೆಕ್ಕಡ್ಡ ಬಂದಂತೆ ಬಂತೊಂದು ಗಂಡು ಮುಖ...

ಎಲ್ಲರೂ : ವಾವ್ವಾ... ವಾವ್ವಾ...ವಾರೆವ್ವಾ..

ಹಿರಿ ಕವಿ : 
ನಮ್ಮ ಕಾಲದಲ್ಲಿ ಹೀಗಿರಲಿಲ್ಲ
ನಮ್ಮ ಕಾಲದಲ್ಲಿ ಹೀಗಿರಲಿಲ್ಲ..
ನಾವು ಹೆಣ್ಣು ಮಣ್ಣು ಹೊನ್ನಿನ ಆಸೆಗಾಗಿ ಬಾಳ್ತಿದ್ದೆವೇ 
ಹೊರತು ಸಿಗಲಿಲ್ಲಾಂತ ಸಾಯ್ತಿರಲಿಲ್ಲ..
ನಮ್ಮ ಕಾಲದಲ್ಲಿ ಹೀಗಿರಲಿಲ್ಲ..

ಎಲ್ಲರೂ : ಆಹಾ.. ಅಹಾಹಾ..

( ಕವಿತೆಗಳನ್ನೆಲ್ಲಾ ಕೇಳಿ ಪಂಡಿತರ ನಾಲಿಗೆಯಲ್ಲಿ ತುರಿಕೆ ಶುರುವಾಯ್ತು... ಅಂಗೈಯನ್ನು ಕೆರೆದುಕೊಳ್ಳುತ್ತಾ..)
ಪಂಡಿತ : what is this nansense. ಈಗ ನಮ್ಮ ದೇಶದ ಸ್ಥಿತಿ ಗತಿ ಅಪಾಯದಲ್ಲಿರುವಾಗ ಇದೆಂತಾ ಕವಿತೆ. I like to tell u one thing...

ಕವಿ 1 : ಸರ್ರss... ಇದು ಕವಿಗೋಷ್ಟಿ ಅದss. ಇಲ್ಲಿ ಏನss  ಹೇಳಬೇಕಂದ್ರೂ ಕವಿತಾ ಕಟ್ಟೇ ಹೇಳ್ಬೇಕ್ರಿ.. ಭಾಷಣ ಮಾಡೂದು ಬ್ಯಾಡ್ರೀ...

ಪಂಡಿತ : ( ಅಂಗೈಯನ್ನು ಬೆರಳುಗಳಿಂದ ಕೆರೆಯುತ್ತಾ)  poem means it include everything which all existing in this world.. you know..

ಕವಿ 2 : ನೀವೇನ್ ಹೇಳ್ತಿದ್ದೀರಿ ಅನ್ನೂದು ನಮ್ಗ ಅರ್ಥಾನೇ ಆಗ್ತಿಲ್ಲ.. ಒಂಚೂರು ಕಸ್ತೂರಿ ಕನ್ನಡದಾಗ ಬಿಡಿಸಿ ಹೇಳ್ರಲ್ಲಾ...

ಪಂಡಿತ : (ತನ್ನ ಬಾಯೊಳಗೆ ಹಲ್ಲಿನಿಂದ ನಾಲಿಗೆಯನ್ನು ಕೆರೆದುಕೊಳ್ಳುತ್ತಾ) u see.. ಎಲ್ಲಾ ಯಾಕ್.. ಎಲ್ರೂವೇ ಕವಿತಾ ಕವಿತಾ ಅಂತಿದ್ದೀರಿ. ಕವಿತೆಗೆ ಗದ್ಯ ಪದ್ಯ ಗಪದ್ಯ ರಗಳೆ ಪಗಳೆ  ಎಲ್ಲಾ ಇರಬೇಕು. ಭಾಷಣ ವಾದ ಸಂವಾದ ಇಲ್ಲದ ಮೇಲೆ  ಕವಿಗುಂಪಿನ ಗೋಷ್ಟಿ why.. 

ಹಿರಿಕವಿ : ಇದು ಕವಿಗಳ ಗುಂಪು ಐತೆ ಪಂಡಿತರೇ.. ಇಲ್ಲಿ ಕಾವ್ಯದ ಕುರಿತು ಚರ್ಚೆ ಮಾಡ್ತೀವಿ. ಕವಿತೆ ಕಟ್ಟಿ ಹೇಳ್ತೀವಿ. ಬೇರೇದೆಲ್ಲಾ ಇಲ್ಲಿ ಬೇಕಿಲ್ಲಾ ಮಹನೀಯರೆ...

ಪಂಡಿತ: ( ಎದೆಯನ್ನು ಪರಪರ ಅಂತಾ ಕೆರೆದುಕೊಂಡು) ಬರೀ ಕವಿತಾ ಅಂತ ಅಂದ್ರೆ ಹೆಂಗೆ. ಜಗತ್ತಲ್ಲಿ ಎಷ್ಟೊಂದು ಸಂಗತಿಗಳು ಇವೆ.. ಎಷ್ಟೊಂದು ರೀತಿಯಲ್ಲಿ ಅಭಿವ್ಯಕ್ತಿಸಬಹುದು. ನಾನೀಗ ರಾಜಕೀಯದ ಕುರಿತು ಭಾಷಣ ಮಾಡಬೇಕು.. 

ಕವಿ 1: ಅದು ಹಂಗಲ್ರೀ ಸರ್ರss... ಇದು ಕವಿಗಳ ಗೋಷ್ಟಿ ಐತಿ. ನಮ್ದು ಕವಿಗಳ ಗುಂಪು.. ಇಲ್ಲಿ ರಾಜಕೀಯ ಭಾಷಣ ಗೀಷಣ ಮಾಡೋಹಂಗಿಲ್ಲ. ನೀವೇನರ  ಹೇಳಾಕಬೇಕಂದ್ರ ಕವಿತಾ ಕಟ್ಟಿ ಹೇಳ್ರಿ... ಹಾಡು ಕಟ್ಟಿ ಹಾಡ್ರಿ... ಆದರss ರಾಜಕೀಯದ ಮಾತು ಇಲ್ಲಿ ಬ್ಯಾಡ್ರೀ ಸರ್ರss ಕೈ ಮುಗೀತೇನೆ. ನಿಮ್ಮ ಪಾದಪದ್ಮಕಮಲಗಳಿಗೆ ಅಡ್ಡ ಬೀಳ್ತೇನೆ... 

ಪಂಡಿತ : ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಅದು ಇವತ್ತಿನ ತುರ್ತು ಅಗತ್ಯಾ ಐತಿ.. ಬೇರೇ ಏನೂ ಬೇಡಾ...  ಬರೀ ಕವಿತೇನೇ ಬೇಕೆಂದರೆ ಕವಿಗಳ ಗುಂಪನ್ನ ವಿಸರ್ಜಿಸಿ ಬಿಡಿ.. ನೀವೇ ನನ್ನ ಇಲ್ಲಿಗೆ ಕರೆದಿದ್ದು. ನಾನಂತೂ ಇಲ್ಲಿಂದಾ ಬಿಲ್ಕುಲ್ ಹೊರಗೆ ಹೊಗೋದಿಲ್ಲ. ನೀವೇ ಬೇಕಾದ್ರೆ ಎತ್ತಿ ಹೊರಗ್ ಹಾಕ್ರಿ...

ಹಿರಿಕವಿ : ಇದೊಳ್ಳೆ ಪಜೀತಿಗೆ ಬಂತಲ್ಲಾ.. ಗುಂಪಲ್ಲಿರೋರೆಲ್ಲಾ ಕವಿತೆ ಬಿಟ್ಟು ಇದೇ ರೀತಿ ತಮಗನ್ನಿಸಿದ್ದನ್ನೆಲ್ಲಾ ಚರ್ಚೆ ಮಾಡೋಕೆ ಶುರು ಮಾಡಿದ್ರ ಕವಿಗಳ ಗುಂಪು  ಕಟ್ಟಿ ಏನು ಪ್ರಯೋಜನಾ

ಕಿರಿಕವಿ : ಅಯ್ಯೋ ಇಂತಾ ಪಂಡಿತರನ್ನ ಇಟ್ಕೊಳ್ಳೋ ಹಂಗೂ ಇಲ್ಲಾ ಅನುಭವಿಸೋ ಹಾಂಗೂ ಇಲ್ಲಾ... ಏನಪ್ಪಾ ಮಾಡೋದು ಈಗ...

ಪಂಡಿತ : ನೀವೇನಾದ್ರೂ ಹೇಳಿ.. ಅದೆಲ್ಲಾ ನಂಗೊತ್ತಿಲ್ಲ...ನಾನೂ ನಿಮ್ಮ ಗುಂಪಲ್ಲೇ ಇರ್ತೇನೆ... ನಂಗೆ ರಾಜಕೀಯ ಮಾತಾಡ್ಬೇಕು ಅಂತಾ ತುರಿಕೆಯಾದಾಗೆಲ್ಲಾ ನಾ ಮಾತಾಡ್ತೇನೆ. ಈಗ ಎರಡು ಸಾಲು ಹೇಳಿ ಹೋಗ್ತೇನೆ. The job of a wood cutter is not just to cut wood but to keep the axe sharp always. ( ಎಂದು ಹೇಳಿದ ಪಂಡಿತರು  ಕವಿಗಳ ತಲೆಯಲ್ಲಿ ಹುಳ ಬಿಟ್ಟು ತಲೆಯನ್ನು ಪರಪರನೇ ತುರಿಸಿಕೊಳ್ಳುತ್ತ ತಾತ್ಕಾಲಿಕವಾಗಿ ನಿರ್ಗಮಿಸಿದರು.. )

ಕಿರಿಕವಿ : ಕವಿತೆಗೂ, ತುರಿಕೆಗೂ, ವುಡ್ ಕಟ್ಟರಿಗೂ ಎತ್ತನಿಂದೆತ್ತ ಸಂಬಂಧ ಅಂತಾ ಹಿರಿ ಕವಿಗಳು ಬಿಡಿಸಿ ಹೇಳಬೇಕೆಂದು ನನ್ನ ಸವಿನಯ ಪ್ರಾರ್ಥನೆ

ಹಿರಿ ಕವಿ : ( ಕಿವಿಯನ್ನು ಕೆರೆದುಕೊಳ್ಳುತ್ತಾ) ಅದು ಏನಪಾಂತಂದ್ರೆ... ಅಂದ್ರೆ... ವುಡ್ ಅಂದರೆ ಕಟ್ಟಿಗೆ... ಕಟ್ಟರ್ ಅಂದ್ರೆ ಕತ್ತರಿಸುವುದು... ಅಂತಂದ್ರೆ... ಅಂದ್ರೆ.. (ಪರಪರ ತಲೆ ಕೆರೆಯತೊಡಗಿದ)

ಕವಿ 1 : ಅದು ಹಂಗಲ್ರೀ ಸರ್ರss. ಕೊಡ್ಲಿರೀ ಕೊಡ್ಲಿ... ಕೊಡ್ಲಿ ಕೆಲಸಾ ಬರೀ ಕಟ್ಟಿಗೀ ಕಡಿಯೂದಷ್ಟ ಅಲ್ಲಂತ್ರಿ...

ಕವಿ 2 : ಹೌದೌದು.. ಮಂದಿ ತಲಿ ಕಡಿಯೋದಕ್ಕೂ ಬಳಸಬಹುದು ಹೌದಲ್ವೋ...

ಎಲ್ಲರೂ : ಹ್ಹ ಹ್ಹಹ್ಹ  (ಜೋರಾಗಿ ನಗುತ್ತಾರೆ)

ಕವಿ 1: ಅದು ಹಂಗಲ್ರೀ.. ಕೊಡ್ಲೀ ಕೆಲ್ಸಾ ಕಟ್ಟಿಗಿ ಕಡಿಯೂದು ಅಷ್ಟ ಅಲ್ಲಾ ತನ್ನ ಮೂತಿ ತಾನss ಚೂಪು ಮಾಡ್ಕೊಳ್ಳೋದು ಅಂತಾ ಅದರರ್ಥ ಏನ್ರೀ...

ಕಿರಿಕವಿ : ಹಾಂ. ಹೌದಾ! ಕೊಡ್ಲಿ ತನ್ನ ಮೂತಿ ತಾನಾ ಅಟೋಮ್ಯಾಟಿಕ್ ಆಗಿ ಚೂಪ್ ಮಾಡ್ಕೊಂಡ್ರ ಮತ್ತಾಕ ನಾವ್ ಮಂಡಾಗಿರೋ ಕೊಡ್ಲಿ ಕಲ್ಲಿಗೆ ಮಸೀಬೇಕು.. ಕುಲಿಮಿಯವ್ನಿಗೆ ಕೊಟ್ಟು ಬೆಂಕಿಗೆ ಹಾಕಿಸಿ ಸುತ್ತಿಗಿಯಿಂದ ಹೊಡಿಸಬೇಕು

ಕವಿ 2 : ಅಂತಾ ಅಟೋಮ್ಯಾಟಿಕ್ ಸೆಲ್ಪ ಚೂಪಾಗೋ ಕೊಡ್ಲಿ ಎಲ್ಲಿ ಸಿಗುತ್ತೇ ಅಂತಾ ಆ ಪಂಡಿತನಿಗೆ ಕೇಳ್ರಪ್ಪೋ.. ನಂಗೊಂದು ನಮ್ಮಪ್ಪನಿಗೊಂದು ಎರಡು ಬೇಕು...

ಹಿರಿ ಕವಿ : ಇದss ಬೇಡಾ ಅನ್ನೋದು. ಕವಿತೆ ಬಗ್ಗೆ ಚರ್ಚೆ ಮಾಡೋ ನಮ್ಮ ಗುಂಪಿನಾಗ ಈಗ ಅನಗತ್ಯವಾಗಿ ಕೊಡ್ಲಿ ಬಗ್ಗೆ ಚರ್ಚೆ ಮಾಡ್ತಾ ಕೂತಿದ್ದೀವಿ. ಇದು ನಮ್ಮ ಕವಿಗುಂಪಿನ ನಿಯಮಕ್ಕೆ ವಿರುದ್ದವಾದದ್ದು... ನಿಮಗ ಯಾರಿಗಾದ್ರೂ ಏನಾದ್ರೂ ಹೇಳಲೇಬೇಕು ಅನ್ನೋ ತುರಿಕೆ ಶುರುವಾದ್ರೆ ಹೊರಗೆ ಹೋಗಿ ಕೆರಕೊಂಡು ಬನ್ರಿ.... ಇಲ್ಲಿ ಕವಿ ಗುಂಪಿನೊಳಗ ಬರೀ ಕವಿತಾ.. ಕವಿತಾ... ಕವಿತಾ ಇರಲಿ... (ಎಂದು ಹಿರಿಕವಿಗಳು ಆದೇಶ ಮಾಡಿದರು. ಅಷ್ಟರಲ್ಲಿ ಒಬ್ಬ ಕವಿ ಹೊರಕ್ಕೆ ಅವಸರದಲ್ಲಿ ಹೊರಡತೊಡಗಿದ

ಹಿರಿ ಕವಿ : ಇಷ್ಟು ಅವಸರದಲ್ಲಿ ಎಲ್ಲಿಗೆ ಓಡ್ತಿದ್ದೀ ಇರು ವಂದನಾರ್ಪನೆ ಮಾಡೋಣಂತೆ

ಕಿರಿ ಕವಿ : ತಪ್ಪು ತಿಳಿಬ್ಯಾಡ್ರಿ.. ನಂಗ್ಯಾಕೋ ತುರಿಕೆ ತಡಿಯೋಕೆ ಆಗ್ತಿಲ್ಲ. ನಾಲಿಗೆ ತುಂಬಾ ಒಂತರಾ ನವೆ... ಏನೇನೋ ಹೇಳಬೇಕಂತಾ ಒಳಗಿಂದ ಒತ್ತಡ ಬರ್ತಿದೆ. ಅದಕ್ಕೆ ಹೊರಗ ಹೋಗಿ ಸಮಾಧಾನ ಆಗುವವರೆಗೂ ತುರಿಸ್ಕೊಂಡು ಬರ್ತೀನಿ.. ಇಲ್ಲೆ ಕೆರಕೊಂಡ್ರೆ ನಿಮಗೆಲ್ಲಾ ತೊಂದರೆ ಆಗ್ಬೋದು... ಚರ್ಚೆ ದಿಕ್ಕ ತಪ್ಪಬಹುದು, ಗುಂಪಿನ ರೂಲ್ಸು ಬ್ರೇಕ್ ಆಗ್ಬೋದು.. ಎಲ್ರೂ ತುರಿಕೆ ಶುರು ಮಾಡ್ಕೊಂಡ್ರೆ ಇದು ಕವಿಗೋಷ್ಟಿ ಆಗೋ ಬದಲು ಕುಷ್ಟ ರೋಗಿಗಳ ತುರಿಕೆ ಗೋಷ್ಟಿ ಆಗಬೋದು... ( ಎಂದವನೇ ಹೊರಕ್ಕೆ ಓಡಿದಾ)

ಹಿರಿ ಕವಿ : ಇವತ್ತು ಇಲ್ಲಿಗೆ ಗೋಷ್ಟಿ ಮುಕ್ತಾಯವಾಯ್ತು. ನಾಳೆ ಬರುವಾಗ ಎಲ್ಲರೂ ಕಟ್ಟಿಗೆ ಕಡಿಯುವ ಕೊಡಲಿಯ ಬಗ್ಗೆ ಕವಿತೆ ಬರಕೊಂಡು ಬನ್ರಿ

ಕವಿ  1: ಅಟೋಮ್ಯಾಟಿಕ್ ಚೂಪಾಗೋ ಕೊಡ್ಲಿ ಬಗ್ಗೆ ಹೌದಲ್ರೀ... 

ಹಿರಿ ಕವಿ : ಏನಾದ್ರೂ ಬರೀರಿ... ಆದ್ರ ಬರೆದಿದ್ದು ಕವಿತಾ ಆಗಿರ್ಲಿ. ನಂಗೂ ಯಾಕೋ ಮೈತುಂಬಾ ತುರಿಕೆ ಶುರುವಾಗ್ತಿದೆ. ಯಾರ್ಯಾರಿಗೆ ತುರಿಕೆ ಶುರುವಾಗಿದೆಯೋ ಅವ್ರೆಲ್ಲಾ ಒಟ್ಟಿಗೆ ಸೇರಿ ಕೆರಕೊಳ್ತಾ ನಮ್ಮ ನಮ್ಮ ಮನೆಗೆ ಹೊಗೋಣ ಬನ್ರಿ. ಇಲ್ಲೆ ಇದ್ರೆ ಅದೇನೋ ಅಂತಾರಲ್ಲಾ.. ಮಾತು ಮನಿ ಕೆಡಿಸ್ತು...

ಕವಿ 2: ತೂತು...

ಹಿರಿಕವಿ : ಅದನ್ನೂ ಹೇಳ್ಬೇಕೇನೋ.. ನಡೀರಿ ನಡೀರಿ.. ತುರಿಕೆ ಬಂದಲ್ಲೆಲ್ಲಾ ಕೆರಕೊಳ್ತಾ ಕೆರತಾನಂದ ಪಡೀರಿ...

ಕವಿ 1: ಕೆರತಾನಂದ ಸ್ವಾಮಿಗಳಿಗೆ

ಎಲ್ಲರೂ :  ಜೈ....

ಕವಿ 2 : ತುರಿಕೆ ಪಂಡಿತರಿಗೆ

ಎಲ್ಲರೂ : ಜೈ

( ಇಲ್ಲಿಗೆ ಇಂದಿಗೆ ಕವಿಗಳ ಗುಂಪು ಬರಕಾಸ್ತಾಯ್ತು)

* * * * *


- ಶಶಿಕಾಂತ ಯಡಹಳ್ಳಿ