ಶುಕ್ರವಾರ, ಡಿಸೆಂಬರ್ 25, 2020

ಕಲಾಗ್ರಾಮದ ರಂಗಮಂದಿರವನ್ನೇ ಮಾಯ ಮಾಡಿದ ಅಧಿಕಾರಿ; ಹೋರಾಟವೊಂದೇ ಮುಂದಿರುವ ದಾರಿ..

 

ಕಲಾಗ್ರಾಮದ ರಂಗಮಂದಿರವನ್ನೇ ಮಾಯ ಮಾಡಿದ ಅಧಿಕಾರಿ; ಹೋರಾಟವೊಂದೇ ಮುಂದಿರುವ ದಾರಿ..


ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಸುವರ್ಣ ಸಮುಚ್ಚಯವನ್ನು ಕಟ್ಟಿಸಿದ್ದ ಸರಕಾರ ವರ್ಷಗಳ ಕಾಲ ಹಾಗೇ ಸುಮ್ಮನೇ ಬಿಟ್ಟಿತ್ತು. ಭೂತಬಂಗಲೆಯಂತಾಗಿ ಹಾಳು ಬಿದ್ದಿದ್ದ ಸಮುಚ್ಚಯವನ್ನು ಸ್ವಚ್ಚಗೊಳಿಸಿ ನಾಟಕ ಚಟುವಟಿಕೆಗಳನ್ನು ಆರಂಭಿಸಿದ್ದು ತೊ.ನಂ ಮತ್ತು ಡಾ.ಬೈರೇಗೌಡರು. ತದನಂತರ ಇದು ಸರಕಾರಿ ಕಡತದಲ್ಲಷ್ಟೇ ಸಮುಚ್ಚಯವಂತಿದ್ದು ನಾಟಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದುದರಿಂದ ಕಲಾಗ್ರಾಮ ರಂಗಮಂದಿರ ಎನ್ನುವುದೇ ರೂಢಿಯೊಳಗೆ ಬಂದಿತು. ಎಲ್ಲಾ ರೀತಿಯ ಅನಾನುಕೂಲಗಳ ನಡುವೆಯೂ ತಿಂಗಳಿಗೆ ಹತ್ತಿಪ್ಪತ್ತು ರಂಗ ತಂಡಗಳು ಇಲ್ಲಿ ನಾಟಕಗಳನ್ನು ಮಾಡತೊಡಗಿದವು. ಬರಬರುತ್ತಾ ಅಕ್ಕಪಕ್ಕದ ಪ್ರದೇಶದ ಜನರು ಖಾಯಂ ಪ್ರೇಕ್ಷಕರಾದರು. ಎನ್ ಎಸ್ ಡಿ ಬೆಂಗಳೂರಿನ ರಂಗ ಚಟುವಟಿಕೆಗಳಿಗೂ ಈ ರಂಗಮಂದಿರ ಆಶ್ರಯಧಾಮವಾಗಿತ್ತು.


ಆದರೆ ಯಾವಾಗ ಆ ಒಬ್ಬ ದುಷ್ಟ ಅಧಿಕಾರಿಯ ಮಾರಿ ಕಣ್ಣು ಈ ರಂಗಮಂದಿರದ ಮೇಲೆ ಬಿತ್ತೋ ಆಗ ಈ ರಂಗಮಂದಿರದ ದ್ವನಿ ಬೆಳಕು ನಿಯಂತ್ರಣ ಕೊಠಡಿಗೆ ಬೆಂಕಿ ಬಿತ್ತು. ಎಲ್ಲಾ ಅಧಿಕಾರಿಗಳೂ ಸೇರಿ ಇದೊಂದು ಶಾರ್ಟ ಸರ್ಕೀಟ್ ದುರಂತವೆಂದು ರಿಪೋರ್ಟ ಸೃಷ್ಟಿಸಿ ಅಸಲಿ ಸತ್ಯವನ್ನು ಮುಚ್ಚಿ ಹಾಕಿದರು. 2018, ಡಿಸೆಂಬರ್ 13 ರಂದು ರಾತ್ರಿ ನಾಟಕ ಮುಗಿದಾದ ಮೇಲೆ ಇಡೀ ಸಮುಚ್ಚಯದ ಮೇನ್ ಡಿಪಿ ಸ್ವಿಚ್ಚನ್ನು ಆಪ್ ಮಾಡಲಾಗಿತ್ತು. ಕರೆಂಟ್ ವೈರ್ ಗಳಲ್ಲಿ ಕರೆಂಟ್ ಹರಿಯದಿದ್ದರೂ ಶಾರ್ಟ್ ಸರ್ಕ್ಯೂಟ್ ಆಯಿತು ಎಂದರೆ ನಂಬಲು ರಂಗಕರ್ಮಿಗಳು ಅಷ್ಟು ದಡ್ಡರಲ್ಲ. ಆದರೂ ಸಂಸ್ಕೃತಿ ಇಲಾಖೆಯ ಇಬ್ಬರು ಅಧಿಕಾರಿಗಳ ಮೇಲಾಟದಲ್ಲಿ ಕಲಾಗ್ರಾಮದ ಕಂಟ್ರೋಲ್ ರೂಂ ಬೂದಿಯಾಗಿದ್ದಂತೂ ಸತ್ಯ. ಇದಾಗಿ ಇಂದಿಗೆ ಎರಡು ವರ್ಷಗಳೇ ಕಳೆದಿವೆ. ರಂಗಮಂದಿರ ಮತ್ತೆ  ಸ್ಮಶಾನದೊಳಗಿನ ಭೂತ ಬಂಗಲೆಯಂತೆ ಮಲಗಿದೆ. 


ಈ ಎರಡು ವರ್ಷಗಳಲ್ಲಿ ಕಲಾಗ್ರಾಮದ ರಂಗಮಂದಿವನ್ನು ರಿಪೇರಿ ಮಾಡಿ ಮತ್ತರ ಆರಂಭಿಸಲು ಅದೆಷ್ಟು ಮನವಿಗಳನ್ನು ಸಂಸ್ಕೃತಿ ಇಲಾಖೆಗೆ ಸಲ್ಲಿಸಲಾಗಿದೆ. ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಲೊಕೇಶರವರಂತೂ ಇಲಾಖೆಯ ನಿರ್ದೇಶಕರ ಕಛೇರಿ ಬಾಗಿಲಿಗೆ ದಿನನಿತ್ಯ ಅಲೆದಾಡಿ ಚಪ್ಪಲಿ ಸವೆಸಿಯಾಗಿದೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲಿನ ಮೇಲೆ ಧರಣಿ ಕೂಡಾ ಮಾಡಲಾಗಿದೆ. ಯುವರಂಗಕರ್ಮಿಗಳು ಕಲಾಗ್ರಾಮದಿಂದ ಕಲಾಕ್ಷೇತ್ರದವರೆಗೂ ಬೈಕ್ ರ‌್ಯಾಲಿ ಮಾಡಿ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಿ.ಟಿ.ರವಿಯವರಿಗೆ ಮನವಿಯನ್ನೂ ಕೊಟ್ಟಾಗಿದೆ.  ಅಧಿಕಾರಿಗಳಿಂದ ಹಿಡಿದು ಸಚಿವರವರೆಗೂ ಬಂದಿದ್ದು ಒಂದೇ ರೀತಿಯ ಆಶ್ವಾಸನೆ ಅದೇನೆಂದರೆ  "ಇನ್ನು ಎರಡೇ ವಾರದಲ್ಲಿ ರಿಪೇರಿ ಮಾಡಲಾಗುತ್ತದೆ... ಇನ್ನೊಂದು ತಿಂಗಳಲ್ಲಿ ಆರಂಭಿಸಲಾಗುತ್ತದೆ.. ಟೆಂಡರ್ ಕೊಟ್ಟಾಗಿದೆ, ಕಾಮಗಾರಿ ಶುರುವಾಗಿದೆ..'' ಇಂತಹ ಹುಸಿ ಭರವಸೆಗಳನ್ನು ನೀಡುತ್ತಾ ಬೀಸೋ ದೊಣ್ಣೆಯಿಂದ ಈ ಅಧಿಕಾರಸ್ತರು ತಪ್ಪಿಸಿಕೊಂಡರೇ ಹೊರತು ಕಲಾಗ್ರಾಮದ ಶಾಪಗ್ರಸ್ತ ರಂಗಮಂದಿರದ ವಿಮೋಚನೆಯಂತೂ ಆಗಲೇ ಇಲ್ಲ. 


ಬಾಯಿಮಾತಿನ ಸುಳ್ಳು ಆಶ್ವಾಸನೆಗಳಿಂದ ರೋಸಿ ಹೋದ ರಂಗ ಕಲಾವಿದ ಅಜಯ್ ಕುಮಾರ್ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿ ವಿವರಗಳನ್ನು ಕೇಳಿದರು. ನಮ್ಮ ಅಧಿಕಾರಿಶಾಹಿಯ ಕೆಲಸದ ವೇಗ ಎಷ್ಟೊಂದು ಪಾಸ್ಟ್ ಎಂದು ತಿಳಿದರೆ ನಿಜಕ್ಕೂ ಅಚ್ಚರಿಪಡುವಂತಹುದೇನಿಲ್ಲ. ಯಾಕೆಂದರೆ  4-10-2019 ರಲ್ಲಿ  ಸಲ್ಲಿಸಿದ ಅರ್ಜಿಗೆ ಕೊನೆಗೂ ಉತ್ತರ ಬಂದಿದ್ದು 18-12-2020 ರಂದು. ಅಧಿಕಾರಿಗಳು ಉತ್ತರ ಕೊಡಲು ತೆಗೆದುಕೊಂಡದ್ದು ಕೇವಲ ಒಂದು ವರ್ಷದ ಮೇಲೆ ಎರಡೂವರೆ ತಿಂಗಳಷ್ಟೇ. ಸಧ್ಯ ಏನೋ ಒಂದು ಉತ್ತರ ಸಂಸ್ಕೃತಿ ಇಲಾಖೆಯಿಂದ ಬಂದಿತೆಂದು ತೆರೆದು ನೋಡಿದವರಿಗೆ ಆಘಾತವಾಗಿ ಮೂರ್ಚೆ ಬೀಳುವುದಷ್ಟೇ ಬಾಕಿ ಇತ್ತು. ಯಾಕೆಂದರೆ ಕಲಾಗ್ರಾಮದಲ್ಲಿದ್ದ ರಂಗಮಂದಿರವೇ ನಾಪತ್ತೆಯಾಗಿತ್ತು. ಕಲಾಗ್ರಾಮದಲ್ಲಿ ರಂಗಮಂದಿರವೇ ಇಲ್ಲಾ ಎಂದು ಬರೆಯಲಾಗಿತ್ತು. 

"ಯಾಕ್ರೀ ಹಿಂಗ್ ಉತ್ತರ ಕೊಟ್ಟೀದ್ದೀರಿ" ಅಂತಾ ಸಂಸ್ಕತಿ ಇಲಾಖೆಯ ಜಂಟಿ ನಿರ್ದೇಶಕ ಚೆನ್ನೂರರವರನ್ನು ಕೇಳಿದಾಗ "ಹೌದು ಕಲಾಗ್ರಾಮದಲ್ಲಿರೋದು ರಂಗಮಂದಿರ ಅಲ್ಲಾ ಅದು ಸಾಂಸ್ಕೃತಿಕ ಸಮುಚ್ಚಯ.. ಅದನ್ನು ರಂಗಮಂದಿರವೆಂದು ಪರಿಗಣಿಸಲು ಬರುವುದಿಲ್ಲ" ಎಂದು ಉಡಾಫೆ ಉತ್ತರ ದೊರೆಯಿತು. ಇದು ಸಾಂಸ್ಕೃತಿಕ ಸಮುಚ್ಚಯವಲ್ಲ ಅದು ಸುವರ್ಣ ಸಮುಚ್ಚಯ ಎಂಬ ಅರಿವೂ ಈ ಅಧಿಕಾರಿಗೆ ಗೊತ್ತಿಲ್ಲ ಹಾಗೂ ವರ್ಷವಿಡೀ ಈ ಸಮುಚ್ಚಯದಲ್ಲಿ ಬಹುತೇಕ ನಾಟಕಗಳೇ ನಡೆಯುತ್ತಿದ್ದವು ಎಂಬ ತಿಳುವಳಿಕೆ ಇಲ್ಲ. ಎಲ್ಲಿ ರಂಗಚಟುವಟಿಕೆಗಳು ನಡೆಯುತ್ತವೆಯೋ ಅದಕ್ಕೆ ರಂಗಮಂದಿರ ಎನ್ನುತ್ತಾರೆ ಎನ್ನುವ ಕನಿಷ್ಟ ಪರಿಜ್ಞಾನವೂ ಇಲ್ಲ. ಇದ್ದಿದ್ದರೆ ಈ ರೀತಿ ವಿಲಕ್ಷಣ ಉತ್ತರ ಕೊಡುತ್ತಿರಲಿಲ್ಲ. ರಂಗಮಂದಿರವೇ ಅಲ್ಲವಾದರೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಿದ್ಯಾಕೆ.. ರಂಗತಂಡಗಳಿಂದ ಹಣ ಕಟ್ಟಿಸಿಕೊಂಡಿದ್ಯಾಕೆ. 


ಬೆಂಗಳೂರು ರಂಗಭೂಮಿಯ ಒಂದು ಪ್ರಮುಖ ಅಂಗವಾಗಿದ್ದ ಕಲಾಗ್ರಾಮ ಸಮುಚ್ಚಯದ ಈ ದುಸ್ಥಿತಿಗೆ ಅಧಿಕಾರಿ ವರ್ಗಗಳೇ ಕಾರಣವಾಗಿವೆ. ಈ ಯಾರಿಗೂ ಅಲ್ಲಿ ನಾಟಕ ಚಟುವಟಿಕೆಗಳು ನಡೆಯುವುದು ಬೇಕಿಲ್ಲ. ನಾಟಕಗಳು ನಡೆದರೆ ರಂಗತಂಡಗಳು ಕನಿಷ್ಟ ಅನುಕೂಲಕ್ಕಾಗಿ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದರು. ಅಸ್ಥವ್ಯಸ್ತವಾಗಿದ್ದ ದ್ವನಿ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸುತ್ತಿದ್ದರು. ಜನರೇಟರ್ ವ್ಯವಸ್ಥೆ ಮಾಡಿಕೊಡಲು ಪೀಡಿಸುತ್ತಿದ್ದರು. ನೀರಿನ ವ್ಯವಸ್ಥೆ ಮಾಡಿ ಸ್ವಚ್ಚತೆ ಕಾಪಾಡಿ ಎಂದು ಕೇಳುತ್ತಿದ್ದರು. ಆದರೆ ಇವುಗಳನ್ನು ಮಾಡಲು ಅಧಿಕಾರಿಗಳಿಗೆ ಆಸಕ್ತಿಯೇ ಇರಲಿಲ್ಲ. ಈ ರಂಗಮಂದಿರದಿಂದ ಬಾಡಿಗೆ ರೂಪದಲ್ಲಿ ಬರುವ ಆದಾಯವಂತೂ ಕರೆಂಟ್ ಬಿಲ್ ಕಟ್ಟಲೂ ಸಾಲುತ್ತಿರಲಿಲ್ಲ.  ಮಾನ್ಯ ಉಮಾಶ್ರೀಯವರು ಇಲಾಖೆಯ ಸಚಿವೆಯಾಗಿದ್ದಾಗ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲೋ ರಂಗಮಂದಿರಗಳ ಬಾಡಿಗೆ ದಿನಕ್ಕೆ ಎರಡು ಸಾವಿರ ಮೀರಬಾರದು ಎಂದು ಆದೇಶ ಮಾಡಿ ಹೋಗಿದ್ದರು. ಜೊತೆಗೆ ಕಲಾಗ್ರಾಮವನ್ನು ಮೇಂಟೇನ್ ಮಾಡಲು ಇಲಾಖೆಯಲ್ಲಿ ಕೆಲಸಗಾರರು ಹಾಗೂ ಸ್ಟಾಪ್ ಕೊರತೆಯಾಗಿತ್ತು. ಕಸ ಹೊಡೆಯುವವರನ್ನೂ ಸಹ ರವೀಂದ್ರ ಕಲಾಕ್ಷೇತ್ರದಿಂದ ಕಳಿಸಬೇಕಿತ್ತು. ಹಾಗೂ ಯಾವುದೇ ಅಧಿಕಾರಿಗೂ ವ್ಯಯಕ್ತಿಕವಾಗಿ ಇಲ್ಲಿಂದ ಯಾವ ರೀತಿಯ ಲಾಭವೂ ಇರಲಿಲ್ಲ. ಹೀಗಾಗಿ ಸಂಸ್ಕೃತಿ ಇಲಾಖೆಗೆ ಕಲಾಗ್ರಾಮ ಎನ್ನುವುದು ಹೊರಲಾರದ ಭಾರವಾಗಿತ್ತು. ಯಾರದೋ ಚಿತಾವಣೆಯಿಂದ ಬೆಂಕಿ ಹತ್ತಿದ್ದನ್ನೇ ನೆಪ ಮಾಡಿಕೊಂಡ ಅಧಿಕಾರಿಗಳು ಕಲಾಗ್ರಾಮವನ್ನು ಸರಿಪಡಿಸುವತ್ತ ಆಸಕ್ತಿಯನ್ನೇ ತೋರಲಿಲ್ಲ. ಅಧಿಕಾರಿಗಳ ಜಾಣ ನಿರ್ಲಕ್ಷಕ್ಕೆ ತುತ್ತಾದ ರಂಗಮಂದಿರ ಮತ್ತೆ ಸಕ್ರೀಯವಾಗಲೇ ಇಲ್ಲಾ.. ಸಕ್ರೀಯಗೊಳಿಸುವ ಇಚ್ಛಾಶಕ್ತಿ ಇರುವ ಅಧಿಕಾರಿಗಳು ಇಲಾಖೆಗೆ ಬರಲೇ ಇಲ್ಲ. ಇರುವ ಅಧಿಕಾರಿಗಳಲ್ಲಿ ಇರುವ ಜಾತಿಯಾಧಾರಿತ ಗುಂಪುಗಾರಿಕೆ, ಒಳಮತ್ಸರ, ಅಸಹನೆ ಮೇಲಾಟಕ್ಕಂತೂ ಕೊರತೆಯಿಲ್ಲ. ರಂಗಮಂದಿರವೊಂದರ ಉದ್ದೇಶಪೂರ್ವಕ ಕೊಲೆಯಿಂದಾಗಿ ರಂಗಭೂಮಿಗೆ, ರಂಗತಂಡಗಳಿಗೆ, ರಂಗಕಲಾವಿದರಿಗೆ ಆದ ಆಗುವ ನಷ್ಟವನ್ನು ಅಳತೆ ಮಾಡಲು ಮಾನದಂಡಗಳೇ ಇಲ್ಲ. ಇಂತಹ ರಂಗವಿರೋಧಿ, ಸಾಂಸ್ಕೃತಿಕ ದ್ರೋಹಿ ಅಧಿಕಾರಿಗಳನ್ನು ಹಿಡಿದೆಳೆದು ಕೇಳುವ ಪ್ರತಿಭಟನಾ ಶಕ್ತಿ ಹಾಗೂ ಸಾಂಸ್ಕೃತಿಕ ನಾಯಕತ್ವ ರಂಗಭೂಮಿಯಲ್ಲೂ ಈಗಿಲ್ಲ.


ಮಾನ್ಯ ಸಿ.ಟಿ.ರವಿಯವರು ಸಚಿವರಾಗಿದ್ದಾರೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ರವೀಂದ್ರ ಕಲಾಕ್ಷೇತ್ರದಂತಹ ರಂಗಮಂದಿರಗಳನ್ನು ಕಟ್ಟಲಾಗುವುದು ಎಂದು ಘೋಷಿಸಿದರು. ಅದಕ್ಕಾಗಿ ಬಜೆಟ್ಟಲ್ಲಿ ಐವತ್ತು ಕೋಟಿಯಷ್ಟು ಹಣವನ್ನೂ ಮೀಸಲಾಗಿರಿಸಿದರು. ಸೀಟಿ ಹೊಡೆದು ರಾಜೀನಾಮೆ ಇತ್ತು ಸಚಿವರು ದಿಲ್ಲಿಯ ದಾರಿ ಹಿಡಿಯುತ್ತಿದ್ದಂತೆಯೇ ಅಧಿಕಾರಿಗಳು ಪ್ರಪೋಜಲ್ ಕಡತಗಳ ಮೇಲೆ ಕುಂಡಿಯೂರಿ ಕುಳಿತುಕೊಂಡರು. ಇರುವ ರಂಗಮಂದಿರಗಳನ್ನೇ ಸರಿಯಾಗಿ ಮೆಂಟೇನ್ ಮಾಡಲಾಗದ ಪರಿಸ್ಥಿತಿಯಲ್ಲಿ ಸಂಸ್ಕೃತಿ ಇಲಾಖೆ ಇರುವಾಗ, ಎರಡು ವರ್ಷಗಳಿಂದ ದುರಂತಕ್ಕೊಳಗಾಗಿ ನಿಷ್ಕ್ರೀಯವಾದ ರಂಗಮಂದಿರದ ದುರಸ್ತಿಕಾರ್ಯವನ್ನೇ ಮಾಡಿಸುವಲ್ಲಿ ಅಧಿಕಾರಶಾಹಿ ವಿಫಲವಾದಾಗ ಯಾವ ಭವ್ಯ ರಂಗಮಂದಿರ ಕಟ್ಟುವ ಭರವಸೆಯಿಂದ ಏನು ಪ್ರಯೋಜನ. ಮೊದಲು ಈ ಅಧಿಕಾರಿಶಾಹಿಗಳಿಂದ ರಂಗಮಂದಿರಗಳಿಗೆ ಮುಕ್ತಿ ಕೊಡಿಸಬೇಕಿದೆ. ಇದಕ್ಕಾಗಿಯೇ ಜೆ.ಲೊಕೇಶರವರು ರಂಗಮಂದಿರ ಪ್ರಾಧಿಕಾರ ಸ್ಥಾಪನೆಯ ನೀಲಿನಕ್ಷೆಯನ್ನು ಸರಕಾರದ ಮುಂದಿಟ್ಟಿದ್ದರು. ಈ ಪ್ರಾಧಿಕಾರವನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸಿ ಅದರ ಮೂಲಕ ಈಗಿರುವ ರಂಗಮಂದಿರಗಳ ನಿರ್ವಹಣೆ ಹಾಗೂ ಹೊಸ ರಂಗಮಂದಿರಗಳ ಸ್ಥಾಪನೆ ಮಾಡಬಹುದೆಂದು ಸಚಿವರ ಮುಂದೆ ಪ್ರಪೋಜಲ್ ಇಟ್ಟಿದ್ದರು. ಆದರೆ ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದರೂ ಅಧಿಕಾರಿಗಳು ಇಚ್ಚಾಸಕ್ತಿ ತೋರಿಸಲೇ ಇಲ್ಲ. ಪ್ರಾಧಿಕಾರದ ಅಸ್ತಿತ್ವ ಕನಸಾಗಿಯೇ ಉಳಿಯಿತು. ನನಸಾಗುವ ಸಾಧ್ಯತೆಯಂತೂ ಈಗಿಲ್ಲ.


ಮೊದಲು ರಂಗಕರ್ಮಿಗಳು ಈ ಅಧಿಕಾರಿಗಳ ರಂಗವಿರೋಧಿತನವನ್ನು ಸಂಘಟನಾತ್ಮಕವಾಗಿ ವಿರೋಧಿಸಬೇಕಿದೆ. ಕಲಾಗ್ರಾಮದ ರಂಗಮಂದಿರದ ಪುನರಾರಂಭವನ್ನು ಕಾಲಮಿತಿಯಲ್ಲಿ ಮಾಡಲೇಬೇಕೆಂದು  ಒತ್ತಾಯಿಸಬೇಕಿದೆ. ರಂಗಭೂಮಿಯ ಹಿತಾಸಕ್ತಿಗಾಗಿ ರಂಗಮಂದಿರ ಪ್ರಾಧಿಕಾರವನ್ನು ರಚಿಸಬೇಕೆಂದು ಸರಕಾರದ ಮೇಲೆ ಹೋರಾಟದ ಮೂಲಕ ಒತ್ತಡ ತರಬೇಕಿದೆ. ಇದ್ಯಾವುದನ್ನೂ ಮಾಡದೇ ಹೋದರೆ ಇವತ್ತು ಕಲಾಗ್ರಾಮದ ರಂಗಮಂದಿರಕ್ಕೆ ಬಂದ ದುಸ್ಥಿತಿಯೇ ಬೇರೆಲ್ಲಾ ರಂಗಮಂದಿರಗಳಿಗೆ ಇಂದಿಲ್ಲಾ ನಾಳೆ ಬಂದೇ ಬರುತ್ತದೆ. ಹಾಗೇನಾದರೂ ಆದರೆ ರಂಗಭೂಮಿಯ ಬೆಳವಣಿಗೆ ಖಂಡಿತಾ ಕುಂಟಿತಗೊಳ್ಳುತ್ತದೆ. ಎಲ್ಲಾ ರಂಗಕರ್ಮಿಗಳಿಗೂ ಈ ಕುರಿತು ಗೊತ್ತಿದೆ. ಆದರೆ ಸರಕಾರ ಎನ್ನುವ ಬೆಕ್ಕಿಗೆ ಗಂಟೆ ಕಟ್ಟುವವರು, ಅಧಿಕಾರಿಗಳೆಂಬ ಗೂಳಿಗಳಿಗೆ ಮೂಗುದಾರ ಹಾಕುವವರು ಕನ್ನಡ ರಂಗಭೂಮಿಗೆ ತುರ್ತಾಗಿ ಬೇಕಾಗಿದ್ದಾರೆ..

- ಶಶಿಕಾಂತ ಯಡಹಳ್ಳಿ



ಶನಿವಾರ, ಮೇ 9, 2020

ಸಂಕಷ್ಟದಲ್ಲಿದೆ ಸರಕಾರ; ಪ್ರಾಧಿಕಾರದ ನಾಗಾಭರಣರಿಗೆ ಬೇಕಂತೆ ಅನುದಾನ..


ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕರ್ನಾಟಕದಲ್ಲಿ ಇರುವಷ್ಟು ಅಕಾಡೆಮಿ ಪ್ರಾಧಿಕಾರಗಳು ಬಹುಷಃ  ಇಡೀ ಭಾರತದ ಬೇರಾವ ರಾಜ್ಯದಲ್ಲೂ ಇಲ್ಲ. ಹೀಗೆ ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯ ಹಿತಾಸಕ್ತಿಗಾಗಿ ಸ್ಥಾಪನೆಯಾದ ಅಕಾಡೆಮಿ ಪ್ರಾಧಿಕಾರಗಳು ತಮ್ಮ ಉದ್ದೇಶದಲ್ಲಿ ಸಫಲವಾಗಿದ್ದಾವೋ ಇಲ್ಲವೋ ಎನ್ನುವ ಚರ್ಚೆಗೆ ಇದು ಸಮಯವಲ್ಲ. ಹಾಗೇನಾದರೂ ಸಫಲವಾಗಿದ್ದರೆ ಕನ್ನಡ ಭಾಷೆ ತನ್ನ ರಾಜಧಾನಿಯಲ್ಲೇ ಇಷ್ಟೊಂದು ಶೋಚನೀಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಕನ್ನಡನಾಡಿನ ಸಂಸ್ಕೃತಿ  ಹೀಗೆಲ್ಲಾ ಕಲಸುಮೆಲೋಗರ  ವಾಗುತ್ತಿರಲಿಲ್ಲ. ಕೇವಲ ಅಕಾಡೆಮಿ ಪ್ರಾಧಿಕಾರಗಳಿಂದಲೇ ಭಾಷೆ ಸಂಸ್ಕೃತಿ ಉಳಿದು ಬೆಳೆಯುತ್ತದೆ ಎನ್ನುವ ಭ್ರಮೆಯೂ ಕನ್ನಡಿಗರಿಗಿಲ್ಲ. ಯಾವುದೇ ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿಯ ಉನ್ನತಿ ಹಾಗೂ ಅವನತಿಗೆ ಅನೇಕಾನೇಕ  ಕಾರಣಗಳಿವೆ. 

ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಮೂಲಕ  ವಾರ್ಷಿಕ ಅನುದಾನವನ್ನು ಕೊಟ್ಟು ಕನ್ನಡ ನಾಡಿನ ಭಾಷೆ ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಲು ಹನ್ನೆರಡು ಅಕಾಡೆಮಿಗಳು ಹಾಗೂ ಮೂರು ಪ್ರಾಧಿಕಾರಗಳನ್ನು ರಚಿಸಿ ಸಾಕುತ್ತಾ ಬಂದಿದೆ. ಆಯಾ ಕಾಲದ ಆಳುವ ಸರಕಾರಗಳು ಹಾಗೂ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ  ಧೋರಣೆಗನುಗುಣವಾಗಿ ಅಕಾಡೆಮಿ ಪ್ರಾಧಿಕಾರಗಳು ಕೆಲಸ ಮಾಡುತ್ತಾ ತಮ್ಮ ಇತಿ ಮಿತಿಯಲ್ಲಿ ಒಂದಿಷ್ಟು ಕೆಲಸ ಮಾಡುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿವೆ. ಯಾಕೆಂದರೆ ಬರೀ ಹೆಸರಿಗೆ ಸ್ವಾಯತ್ತ ಸಂಸ್ಥೆಗಳು ಎಂದು ಕರೆಯಬಹುದಾದ ಈ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ  ಸ್ವಾಯತ್ತತೆಯೂ ಇಲ್ಲಾ, ಸ್ವಾತಂತ್ರ್ಯವಂತೂ ಮೊದಲೇ ಇಲ್ಲ. ಆಳುವ ಪಕ್ಷದ ಸರಕಾರದ ಮರ್ಜಿ ಹಾಗೂ ಹಸ್ತಕ್ಷೇಪದಿಂದಾಗಿಯೇ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ  ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆ ಆಗುವುದೇ ಇತ್ತೀಚೆಗೆ ಮಾನ್ಯವಾಗಿದ್ದಿರಿಂದ ಹೀಗೆ ಆಯ್ಕೆಯಾದವರು ಆಯಾ ಪಕ್ಷದ ಸರಕಾರದ ನಿರ್ಣಯ ನಿಲುವುಗಳಿಗೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ  ಸಹಕಾರಿಯಾಗಿರುತ್ತಾರೆ. ಇನ್ನು ಸಂಸ್ಕತಿ ಇಲಾಖೆಯ ಅಧಿಕಾರಿ ವರ್ಗ ಯಾವತ್ತೂ ಯಾವುದೇ ಅಕಾಡೆಮಿಗೆ ಸ್ವಾಯತ್ತತೆಯನ್ನು ಕೊಡಲು ಬಯಸದೇ ಸದಾ ತಮ್ಮ ನಿಯಂತ್ರಣದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಾರೆ. ಹಾಗೇನಾದರೂ ಸ್ವಾಯತ್ತತೆಯನ್ನು ಯಾವುದಾದರೂ ಅಕಾಡೆಮಿ ಕೇಳಿದರೆ ಅಸಹಕಾರ ಮನೋಭವ ತೋರುತ್ತಾ ಯಾವುದೇ ಕೆಲಸಗಳೂ ಆಗದ ಹಾಗೆ ರೆಜಿಸ್ಟ್ರಾರ್ ಮೂಲಕ  ನೋಡಿಕೊಳ್ಳುತ್ತಾರೆ. 

ಪ್ರತಿ ವರ್ಷ ಸರಕಾರವು ತನ್ನ ಬಜೆಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾರ್ಷಿಕ ಅನುದಾನವನ್ನು ಕೊಡುತ್ತಾ ಬರುತ್ತದೆ. ನಲವತ್ತು ವರ್ಷಗಳ ಹಿಂದೆ ವಾರ್ಷಿಕ ಹತ್ತು ಕೋಟಿ ಇದ್ದದ್ದು ಬರುಬರುತ್ತಾ ನಾನೂರಾ ಇಪ್ಪತ್ತು ಕೋಟಿಯಷ್ಟು ಅನುದಾನ ಇಲಾಖೆಗೆ ಕೊಡಮಾಡಲಾಗುತ್ತದೆ.  ಸಂಸ್ಕೃತಿ ಇಲಾಖೆಯು ತನಗೆ ದೊರೆತ ಅನುದಾನದಲ್ಲಿ ಅಕಾಡೆಮಿಗಳಿಗೆ  ತಲಾ ಒಂದು ಕೋಟಿ ಹಾಗೂ  ಪ್ರಾಧಿಕಾರಗಳಿಗೆ ಎಂಟು ಕೋಟಿಯಷ್ಟು ಹಣವನ್ನು ಹಂಚಿಗೆ  ಮಾಡಿ ಕೊಡುತ್ತಿತ್ತು. ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಒಟ್ಟು ಅನುದಾನ ಮೂವತ್ತು ಕೋಟಿಯಷ್ಟಾಗುತ್ತದೆ.  ಈಗ ಅದಕ್ಕೂ ಸಂಚಕಾರ ಬಂದಿದೆ.

ಆಳುವ ವರ್ಗಗಳಿಗೆ ಈ ನಾಡಿನ ಭಾಷೆ ಸಂಸ್ಕೃತಿಯ ಬಗ್ಗೆ ತೋರಿಕೆಯ ಪ್ರೀತಿ ಇದೆಯೇ ಹೊರತು ಅದರ ಅಗತ್ಯತೆಯ ಬಗ್ಗೆ ಪ್ರಾಮಾಣಿಕ ಕಾಳಜಿ ಇಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ  ಶ್ರೀಯುತ ಡಿ.ಕೆ.ಶಿವಕುಮಾರರವರು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾಗ ಅಕಾಡೆಮಿಗಳ ವಾರ್ಷಿಕ ಅನುದಾನದಲ್ಲಿ ಕಡಿತಗೊಳಿಸಿದ್ದರು. ಅನುದಾನ ಪಡೆಯುವ ಕಲಾಸಂಸ್ಥೆಗಳಲ್ಲಿ ಕಳ್ಳರೇ ಹೆಚ್ಚಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ  ಕಲಾಸಂಸ್ಥೆಗಳ  ಅನುದಾನಕ್ಕೆ ಕತ್ತರಿ ಹಾಕಲು ಪ್ರಯತ್ನಿಸಿದರು. ಆ ನಂತರ ಬಂದ ಬಿಜೆಪಿ ಸರಕಾರದಲ್ಲಿ ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಸಿ.ಟಿ.ರವಿಯವರು ಅವರ ಸಿದ್ದಾಂತವನ್ನು ಒಪ್ಪದ ಕಲಾವಿದರು ಹಾಗೂ ಸಾಹಿತಿಗಳನ್ನು ಮನೆಹಾಳರು ಎಂದು ನಿಂದಿಸಿದರು ಹಾಗೂ ಅಕಾಡೆಮಿ ಹಾಗೂ ಪ್ರಾಧಿಕಾರಗಳ ವಾರ್ಷಿಕ ಅನುದಾನವನ್ನ ಕಡಿತಗೊಳಿಸಿದರು. ಇದನ್ನು ಪ್ರಶ್ನಿಸಬೇಕಾಗಿದ್ದ ಮತ್ತು ಹಕ್ಕುಗಳಿಗಾಗಿ ಹೋರಾಡಬೇಕಾಗಿದ್ದ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಂಘಪರಿವಾರದ  ಸರಕಾರದ  ಊಳಿಗದಲ್ಲಿ ಜೀತಕ್ಕಿದ್ದವರಂತೆ ಮೌನವಾದರು. 

ಈಗ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶ್ರೀಯುತ ನಾಗಾಭರಣರವರು ಎಚ್ಚೆತ್ತುಗೊಂಡು ತಮ್ಮ ಪ್ರಾಧಿಕಾರಕ್ಕೆ ಅನುದಾನ ಕಡಿತವಾಗಿದ್ದರ ಕುರಿತು ಒಂಚೂರು ತಣ್ಣನೆಯ ಅಸಮಾಧಾನ ಹೊರಹಾಗಿದ್ದಾರೆ. ‘ವಾರ್ಷಿಕವಾಗಿ ಎಂಟು ಕೋಟಿ ಕೊಡಬೇಕಾಗಿದ್ದ ಅನುದಾದ ಎರಡು ಕೋಟಿಗೆ ಇಳಿದಿದೆ’ ಎಂದು ಪ್ರಜಾವಾಣಿಯ ವರದಿಗಾರರ ಮುಂದೆ  ಅವಲತ್ತುಕೊಂಡಿದ್ದಾರೆ. ಹಾಗಂತ ಸಂಘ ಪರಿವಾರದ ಶಿಸ್ತಿನ ಅನುಯಾಯಿಯಾದ ಅವರು ಸರಕಾರದ ಧೋರಣೆಯ ವಿರುದ್ದ ಸಿಡಿದೆದ್ದಿದ್ದಾರೆ ಎಂದು ಅರ್ಥವಲ್ಲ. ‘ಎಷ್ಟು ಕೊಡುತ್ತಾರೋ ಅಷ್ಟರಲ್ಲಿ ಅಂದರೆ ಎರಡೇ ಕೋಟಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವೆ. ವಾರ್ಷಿಕ ಪ್ರಶಸ್ತಿ ಹಾಗೂ ಹೊರನಾಡ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ  ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿರುವೆ’ ಎಂದು ಘೋಷಿಸಿದ್ದಾರೆ.  ಹಾಗೂ ಬಾಕಿ ಆರು ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಸರಕಾರಕ್ಕೆ ಮನವಿ ಮಾಡಿ ಪತ್ರವನ್ನೂ ಬರೆದು ಸುಮ್ಮನಾಗಿದ್ದಾರೆ. 

ಈಗ ಪ್ರಶ್ನೆ ಇರುವುದು ಕೇವಲ ಒಂದು ಪ್ರಾಧಿಕಾರದ್ದಲ್ಲ, ಎಲ್ಲಾ ಅಕಾಡೆಮಿಗಳದ್ದೂ ಸಹ ಇದೇ ಪಾಡು. ನಾಗಾಭರಣರವರು ಕೇವಲ ತಮ್ಮ ಪ್ರಾಧಿಕಾರದ ಅಧ್ಯಕ್ಷರಾಗಿ ಮಾತಾಡಿದ್ದಾರೆಯೇ ಹೊರತು ಸಾಂಸ್ಕೃತಿಕ ನಾಯಕನಾಗಿ ಅಲ್ಲ. ಸರಕಾರ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ವಾರ್ಷಿಕ ಅನುದಾನದಲ್ಲಿ ಕಡಿತ ಮಾಡಿದ್ದರ ವಿರುದ್ದ ಭರಣರವರು ದ್ವನಿ ಎತ್ತಲಿಲ್ಲ.  ಈ ಹಿಂದೆ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರು ಅನುದಾನ ಕಡಿತದ ವಿರುದ್ದ ಸರಕಾರದ ನಿರ್ಧಾರ ವಿರೋಧಿಸಿ ದ್ವನಿ ಎತ್ತಿದಾಗ ಎಂದೂ ಭರಣರವರು ದ್ವನಿಗೂಡಿಸಲಿಲ್ಲ. ಆದರೆ ಯಾವಾಗ ತಮ್ಮ ಪ್ರಾಧಿಕಾರಕ್ಕೆ ಅನುದಾನ ಕೊರತೆಯಾಯಿತೋ  ಆಗ  ಬಾಯಿಬಿಟ್ಟಿದ್ದಾರೆ. 

ಈಗ ನಾಡಿನ ಪರಿಸ್ಥಿತಿ ಗಂಭೀರವಾಗಿದೆ. ಕೊರೋನಾ ವೈರಾಣುವಿನ ಹಾವಳಿಯಿಂದಾಗಿ ರಾಜ್ಯದ ಹಣಕಾಸಿನ ಪರಿಸ್ಥಿತಿಯೇ ಹೈರಾಣಾಗಿ ಹೋಗಿದೆ. ಮದ್ಯಮಾರಾಟದ  ಆದಾಯದಿಂದ ಬಂದ ಹಣದಲ್ಲಿ ಸರಕಾರಿ ನೌಕರರಿಗೆ ಸಂಬಳ ಕೊಡುವಂತಹ ದುಸ್ತಿತಿಗೆ ಸರಕಾರ ಬಂದಿದೆ. ಇಂತಹ ಸಂದರ್ಭದಲ್ಲಿ  ಪ್ರಶಸ್ತಿ ಕೊಡಲು ಹಣ ಬೇಕು ಎಂದು ಕೇಳುವ ಹಾಗಿಲ್ಲ. ಇಷ್ಟಕ್ಕೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿಗಾಗಿಯೇ ಖರ್ಚು ಮಾಡುವ ವಾರ್ಷಿಕ ಹಣದ ಬಾಬತ್ತು ಕೇಳಿದರೆ ಬೆಚ್ಚಿಬೀಳಬೇಕಾಗುತ್ತದೆ. ವಾರ್ಷಿಕವಾಗಿ ಮೂರು ಕೋಟಿಯಷ್ಟು ಹಣವನ್ನು ಕಳೆದ ಸಾಲಿನಲ್ಲಿ ಬರೀ ಪ್ರಶಸ್ತಿಗಳಿಗಾಗಿ  ವೆಚ್ಚಮಾಡಲಾಗಿದೆ. ಕನ್ನಡ ಮಾಧ್ಯಮ ಪ್ರಶಸ್ತಿಗೆ ಒಂದೂ ಮುಕ್ಕಾಲು ಕೋಟಿ ಹಣ ಬೇರೆ ಪ್ರತ್ಯೇಕವಾಗಿ ಖರ್ಚಾಗಿದೆ. ಶಾಲೆಗಳಿಗೆ ಪೀಠೋಪಕರಣ ಹಾಗೂ ಪಾಠೋಪಕರಣಗಳಿಗಾಗಿ ಒಂದೂ ಕಾಲು ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿ ವೇತನಕ್ಕೆ ಕಳೆದ ವರ್ಷ ಎಂಬತ್ತು ಲಕ್ಷ ಹಣ ಕೊಡಲಾಗಿದೆ. ಪ್ರಾಧಿಕಾರದ ಸಿಬ್ಬಂದಿಯ ವೇತನಕ್ಕೆ ವಾರ್ಷಿಕ ಒಂದುಕೋಟಿ ಬೇಕಿದೆ. ಇದರಲ್ಲಿ ಬಹುತೇಕ ದುಂದುಗಾರಿಕೆಯೇ ಎದ್ದು ಕಾಣುತ್ತದೆ. ಅನಗತ್ಯ ವೆಚ್ಚಗಳೇ  ಬೇಕಾದಷ್ಟಿವೆ. ತೆರಿಗೆದಾರರ ಹಣ ಹೀಗೆಲ್ಲಾ ಕರಗುವುದನ್ನು ಪ್ರಶ್ನಿಸಲೇಬೇಕಿದೆ.

“ಹನುಮಪ್ಪ ಹಗ್ಗ ಕಡಿಯುವಾಗ ಪೂಜಾರಿ ಶ್ಯಾವಗಿ ಕೇಳಿದ್ನಂತೆ” ಹೀಗಿದೆ ನಮ್ಮ ನಾಗಾಭರಣರವರ ಕಥೆ ಮತ್ತು ಅಭಿವೃದ್ದಿ ಪ್ರಾಧಿಕಾರದ ವ್ಯಥೆ. ರಾಜ್ಯ ಶ್ರೀಮಂತವಿದ್ದಾಗ ಬೇರೆ ಮಾತು, ಸಂಕಷ್ಟದಲ್ಲಿದ್ದಾಗ ಈ ಎಲ್ಲಾ ದುಂದುಗಾರಿಕೆ ಅಭಿವೃದ್ದಿ ಪ್ರಾಧಿಕಾರಕ್ಕೆ ಬೇಕಾ? ಪ್ರಾಧಿಕಾರವೊಂದು ವಾರ್ಷಿಕವಾಗಿ ಅಂದಾಜು ಐದು ಕೋಟಿಗಳನ್ನು ಕೇವಲ ಪ್ರಶಸ್ತಿಗಾಗಿ ವೆಚ್ಚಮಾಡುವುದು ಎಷ್ಟು ಸಮರ್ಥನೀಯ?  ಪ್ರಶಸ್ತಿಗಳನ್ನು ಕೊಡುವುದರಿಂದ  ಕನ್ನಡದ ಅಭಿವೃದ್ದಿಯಾಗುತ್ತದಾ? ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತಿರುವ ಪ್ರಾಧಿಕಾರದ ಆಡಳಿಗಾತ್ಮಕ ಖರ್ಚನ್ನು ಕಡಿಮೆ ಮಾಡುವತ್ತ ನಾಗಾಭರಣರ ಚಿತ್ತ ಹರಿಯಲಿ.  ಸಾಧ್ಯವಾದರೆ ಪ್ರಾಧಿಕಾರಕ್ಕೆ ಅನಗತ್ಯವಾಗಿರುವ ಹೊರಗುತ್ತಿಗೆ ನೌಕರರನ್ನು ಕಡಿತಗೊಳಿಸಲಿ. ಆಡಳಿತಾತ್ಮಕ ಖರ್ಚುಗಳಿಗೆ ಕಡಿವಾಣ ಹಾಕಲಿ. ಸಾಧ್ಯವಾದರೆ ಅಧ್ಯಕ್ಷರಾಗಿ ತೆಗೆದುಕೊಳ್ಳುತ್ತಿರುವ ಮಾಸಿಕ ಒಂದು ಲಕ್ಷದಷ್ಟು ಸಂಬಳ ಸಾರಿಗೆಯನ್ನು ಭರಣರವರು ನಿರಾಕರಿಸಿ ತಮ್ಮ ಸಾಂಸ್ಕೃತಿಕ ಬದ್ಧತೆಯನ್ನು ಸಾಬೀತುಗೊಳಿಸಲಿ. ಕನ್ನಡದಲ್ಲಿ ಸ್ನಾತ್ತಕೋತ್ತರ ವ್ಯಾಸಂಗ ಮಾಡುತ್ತಿರುವ ಹೊರರಾಜ್ಯದ ನೂರು ಜನ ವಿದ್ಯಾರ್ಥಿಗಳಿಗೆ ತಲಾ ಇಪ್ಪತ್ತೈದು ಸಾವಿರದಂತೆ ವಾರ್ಷಿಕವಾಗಿ ಇಪ್ಪತ್ತೈದು ಲಕ್ಷ ಹಣ ಮೀಸಲಾಗಿರಿಸಲಿ. ಶಾಲೆಗಳಿಗೆ ಅಭಿವೃದ್ದಿ ಪ್ರಾಧಿಕಾರದಿಂದ ಕೊಡಮಾಡುವ ಪೀಠೋಪಕರಣಗಳನ್ನು ಶಿಕ್ಷಣ ಇಲಾಖೆಯ ಅನುದಾನದಿಂದ ಕೊಡಿಸಲು ತಮ್ಮ ಪ್ರಭಾವವನ್ನು ಭರಣರವರು ಉಪಯೋಗಿಸಲಿ. 

ಇಷ್ಟು ಮಾಡಿದರೆ ಸಾಕು ಸರಕಾರ ಈಗ ಸಂಕಷ್ಟಕಾಲದಲ್ಲಿ ಕೊಟ್ಟಿರುವ ಎರಡು ಕೋಟಿಗಳನ್ನೇ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಸಿಕ್ಕಷ್ಟೇ ಹಣದಲ್ಲಿ ಕನ್ನಡ ಅಭಿವೃದ್ದಿಗೆ ಪೂರಕವಾಗಿ ಹಲವಾರು ಕ್ರಿಯಾಶೀಲ ಕೆಲಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಇದಕ್ಕೆಲ್ಲಾ ಬೇಕಾದದ್ದು ಕೇವಲ ಹಣ ಅನುದಾನಗಳಲ್ಲ. ಅದನ್ನೂ ಮೀರಿದ ಇಚ್ಚಾಶಕ್ತಿ ಹಾಗೂ ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಆಸಕ್ತಿ. ಇವೆರಡನ್ನೂ ಕನ್ನಡಾಂಬೆ ನಾಗಾಭರಣರವರಿಗೆ ಕೊಡಲಿ ಎಂದು ಕನ್ನಡಿಗರೆಲ್ಲರೂ ಪ್ರಾರ್ಥಿಸೋಣ. 

-ಶಶಿಕಾಂತ  ಯಡಹಳ್ಳಿ.
  

ಗುರುವಾರ, ಜನವರಿ 23, 2020

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೊಂದು ಆತ್ಮೀಯ ಪತ್ರ


ಇ/ಗೆ
ಸನ್ಮಾನ್ಯ ಸಚಿವರು
ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ, ವಿಧಾನಸೌಧ..    
                                                ದಿನಾಂಕ : 22-01-2020

ಗೌರವಾನ್ವಿತ ಸಚಿವರಾದ ಮಾನ್ಯ ಸಿ.ಟಿ.ರವಿಯವರಿಗೆ.

ತಾವು ಸಚಿವರಾಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿವ೵ಹಿಸುವ ಕನಾ೵ಟಕ ನಾಟಕ ಅಕಾಡೆಮಿಯಲ್ಲಾದ ಪ್ರಮಾದದ ಬಗ್ಗೆ ತಮ್ಮ ಗಮನ ಸೆಳೆಯಲು ಈ ಪತ್ರ. ಜನವರಿ 7 ನೇ ತಾರೀಖಿನಂದು ನಾಟಕ ಅಕಾಡೆಮಿಯ ನಿಕಟಪೂವ೵ ಅಧ್ಯಕ್ಷರಾದ ಜೆ.ಲೊಕೇಶರವರೊಂದಿಗೆ ನಾನೂ ಸಹ ಬಂದು ತಮ್ಮನ್ನು ಬೇಟಿಯಾಗಿ ನಾಟಕ ವಿನಾಕಾರಣ ರದ್ದು ಮಾಡಲಾದ ಅಕಾಡೆಮಿ ಪ್ರಶಸ್ತಿಗಳ ಕುರಿತು ಚರ್ಚಿಸಿದ್ದೆವು. ಆ ಕುರಿತು ಹೆಚ್ಚಿನ ಮಾಹಿತಿ ನೀಡಲು ಹಾಗೂ ಈಗ ಆಗಿರುವ ಅವಗಡವನ್ನು ಸರಿಪಡಿಸಲು ಈ ಪತ್ರದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಈಗಾಗಲೇ ಘೋಷಿತವಾದ ಪ್ರಶಸ್ತಿಗಳನ್ನು ರದ್ದುಗೊಳಿಸಿ ಕಲಾವಿದರುಗಳಿಗೆ ಅವಮಾನ ಮಾಡುವಂತಹ ಪ್ರಯತ್ನವೊಂದು ನಾಟಕ ಅಕಾಡೆಮಿಯಿಂದ ನಡೆದಿದ್ದು ಅತ್ಯಂತ ಬೇಸರದ ಸಂಗತಿಯಾಗಿದೆ. ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ಕಾಲಮಿತಿಯಲ್ಲಿ  ಬಹುಮತದಿಂದ  ಹಮ್ಮಿಕೊಂಡ ಯೋಜನೆಗಳನ್ನು ಮುಂದಿನ ಕಾಲಾವಧಿಯಲ್ಲಿ ಆಯ್ಕೆಗೊಂಡ ಅಕಾಡೆಮಿಯ ಅಧ್ಯಕ್ಷರ ಸಮಿತಿಯು ರದ್ದುಗೊಳಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಹೀಗೆ ಮಾಡಿದರೆ ಅಕಾಡೆಮಿಯ ವಿಶ್ವಾಸಾರ್ಹತೆಗೆ ದಕ್ಕೆಯಾಗುತ್ತದೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂಬುದಕ್ಕೆ ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ.

ಸರ್,,, ನಾಟಕ ಅಕಾಡೆಮಿ ಇರುವುದು ರಂಗಕಲೆಯನ್ನು ಉಳಿಸಿ ಬೆಳೆಸಲು. ಕಲಾವಿದರು ಇದ್ದಾಗ ಮಾತ್ರ ಕಲೆ ಇರುತ್ತದೆ, ಉಳಿದು ಬೆಳೆಯುತ್ತದೆ. ಕಲಾವಿದರನ್ನೇ ಅವಮಾನಿಸುವ ಅವರ ಸ್ವಾಭಿಮಾನಕ್ಕೆ ದಕ್ಕೆ ತರುವ ಕೆಲಸವನ್ನು ನಾಟಕ ಅಕಾಡೆಮಿಯೇ ಮಾಡಿದರೆ ಅದು ಸಾರ್ವಕಾಲಿಕ ಅಕ್ಷಮ್ಯ. ಈಗ ಆಗಿದ್ದೂ ಸಹ ಅದೇ. ನಾಟಕ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಮೂವತ್ತು ಜನ ರಂಗಸಾಧಕ ಕಲಾವಿದರಿಗೆ ಅಕಾಡೆಮಿಯು ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಆದರೆ ಈಗಿನ ನಾಟಕ ಅಕಾಡೆಮಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜನವರಿ 3 ರಂದು ನಡೆದ ಸವ೵ಸದಸ್ಯರ ಸಭೆಯಲ್ಲಿ ಘೋಷಿತ ಪ್ರಶಸ್ತಿಗಳನ್ನು ಅಸಿಂಧುಗೊಳಿಸಿ ಹೊಸದಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಯಾವುದೇ ಅಕಾಡೆಮಿಯ ನಾಲ್ಕು ದಶಕಗಳ ಇತಿಹಾಸದಲ್ಲಿ ಕೊಟ್ಟ ಪ್ರಶಸ್ತಿಗಳನ್ನು ರದ್ದು ಮಾಡಿದ ಘಟನೆ ಇಲ್ಲಿವರೆಗೂ ನಡೆದಿರಲಿಲ್ಲ. ಅಂತಹ ಅನಪೇಕ್ಷಿತ ಅನಗತ್ಯ ಘಟನೆಗೆ  ನಾಂದಿ ಹಾಡಿದ್ದಕ್ಕೆ ಇಡೀ ಕನ್ನಡ ರಂಗಭೂಮಿ ಹಾಗೂ ಪತ್ರಿಕಾ ಮಾಧ್ಯಮ ತಮ್ಮ ಅಸಹನೆಯನ್ನು ಪ್ರಕಟಿಸಿತು. ಕಲಾವಿದರ ಸ್ವಾಭಿಮಾನವನ್ನು ಅವಮಾನಿಸಿದ ನಾಟಕ ಅಕಾಡೆಮಿಯ ಘನತೆಗೂ ಸಹ ಈ ನಕಾರಾತ್ಮಕ ನಿರ್ಧಾರದಿಂದಾಗಿ ದಕ್ಕೆಯಾಯಿತು. ಅಕಾಡೆಮಿಯ ಚರಿತ್ರೆಯಲ್ಲಿ ಇದೊಂದು ಕಪ್ಪುಚುಕ್ಕೆಯಾಯಿತು.

ಅಕಾಡೆಮಿಗೆ ಹೊಸದಾಗಿ ಆಯ್ಕೆಗೊಂಡ ಅಧ್ಯಕ್ಷರು ಹಾಗೂ ಸದಸ್ಯರಿಗೆ ಘೋಷಿತ ಪ್ರಶಸ್ತಿ ಆಯ್ಕೆಯ ಕುರಿತು ಸರಿಯಾದ ಮಾಹಿತಿ ನೀಡಬೇಕಾದ ಅಕಾಡೆಮಿಯ ರಿಜಿಸ್ಟ್ರಾರ್ರವರು ತಪ್ಪು ಮಾಹಿತಿಯನ್ನು ನೀಡಿ ಎಲ್ಲರನ್ನೂ ನಂಬಿಸಿದರು ಹಾಗೂ ದಿಕ್ಕುತಪ್ಪಿಸಿದರು. ಅವರು ಹೇಳಿದ ಮಾಹಿತಿಗಳನ್ನು ನಂಬಿದ ಸವ೵ಸದಸ್ಯರ ಸಭೆ ಘೋಷಿತ ಪ್ರಶಸ್ತಿಗಳನ್ನು ಅಸಿಂಧುಗೊಳಿಸುವಂತಹ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದೆ ಹಾಗೂ ಅದನ್ನು ಸಮಥಿ೵ಸಿಕೊಳ್ಳುವ ಅನಿವಾಯ೵ತೆ ನಿಮ್ಮದಾಗಿದೆ. ಜನವರಿ 4 ರಂದು ತಮ್ಮನ್ನು ಬೇಟಿಯಾದ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರು ಸಹ ತಮಗೆ ದೊರೆತ ಸುಳ್ಳು ಮಾಹಿತಿಗಳನ್ನೇ ಹೇಳಿ ನಿಮ್ಮನ್ನು ಒಪ್ಪಿಸಲು ಪ್ರಯತ್ನಿಸಿ ನಿಮ್ಮನ್ನೂ ಸಹ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.

ನಾಟಕ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಸದಸ್ಯನಾಗಿದ್ದ ನನಗೆ ಗೊತ್ತಿರುವ ಕೆಲವಾರು ನಿಜ ಮಾಹಿತಿಗಳನ್ನು ನಿಮ್ಮ ಮುಂದಿಟ್ಟು ಮನದಟ್ಟುಮಾಡಲೆಂದೇ ಈ ಪತ್ರವನ್ನು ಬರೆಯುತ್ತಿರುವೆ. ಅಕಾಡೆಮಿಯ ಅಧ್ಯಕ್ಷರು ಸದಸ್ಯರುಗಳು ಬದಲಾದರೂ ಅಕಾಡೆಮಿಯೊಂದು ಕೈಗೊಂಡ ಸಕಾರಾತ್ಮಕ  ನಿಣ೵ಯ ಬದಲಾಗಬಾರದು ಹಾಗೂ ನಾಟಕ ಅಕಾಡೆಮಿಯ ಘನತೆಗೆ ಯಾವುದೇ ಕಾರಣಕ್ಕೂ ಕುಂದು ಬರಬಾರದು, ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ನೀವು ಖಳನಾಯಕರಾಗಿ ದಾಖಲಾಗಬಾರದು ಎನ್ನುವುದೇ ಈ ಪತ್ರ ಬರೆಯುವುದರ ಹಿಂದಿರುವ ಪ್ರಾಮಾಣಿಕ ಉದ್ದೇಶವಾಗಿದೆ. ಮಾನ್ಯ ಸಚಿವರಾದ ತಮ್ಮ ಮುಂದೆ ನಾಟಕ ಅಕಾಡೆಮಿಯ ಅಧ್ಯಕ್ಷರು ಹೇಳಿದ ಹಾಗೂ ಕೆಲವು ಪತ್ರಿಕೆಗಳಿಗೆ ಅವರು ಕೊಟ್ಟ ಕೆಲವಾರು ತಪ್ಪು ಮಾಹಿತಿಗಳಿಗೆ ಸರಿಯಾದ ಉತ್ತರಗಳು ಇಲ್ಲಿವೆ. ಇದಕ್ಕೆ ಪೂರಕವಾಗಿ ಅಗತ್ಯ ದಾಖಲೆಗಳನ್ನೂ ಸಹ ಈಗಾಗಲೇ ನಿಮಗೆ ಕೊಡಲಾಗಿದೆ. ಈ ಪತ್ರದ ಜೊತೆಗೂ ಲಗತ್ತಿಸಲಾಗಿದೆ.  
   
1.     ಅಕಾಡೆಮಿಯ ಹಿಂದಿನ ಅಧ್ಯಕ್ಷರು ತರಾತುರಿಯಲ್ಲಿ ಪ್ರಶಸ್ತಿಗಳನ್ನು ಘೋಷಿಸಿದ್ದು ಅಸಿಂಧು..?

ಸರ್.. ಅಕಾಡೆಮಿಯಲ್ಲಿ ವಾರ್ಷಿಕವಾಗಿ ಕನಿಷ್ಟ ಮೂರು ಸರ್ವಸದಸ್ಯರ ಸಭೆಯನ್ನು ಕರೆಯಲಾಗುತ್ತದೆ. ಎರಡನೇ ಸಭೆಯಲ್ಲಿ ಪ್ರಶಸ್ತಿಗೆ ಅರ್ಹರನ್ನು ಕಾರ್ಯಕಾರಿ ಸಮಿತಿ ಆಯ್ಕೆ ಮಾಡುತ್ತದೆ. ಹಾಗೂ ಮೂರನೆಯ ಸಭೆಯ ನಂತರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹೀಗೆಯೇ ಎರಡನೆಯ ಸರ್ವ ಸದಸ್ಯರ ಸಭೆಯನ್ನು 2019, ಜುಲೈ 29ರಂದು ನಡೆಸಲು ಮೂರು ವಾರಗಳ ಮೊದಲೇ ಪೂರ್ವಭಾವಿಯಾಗಿ ನಿರ್ಧರಿಸಿ 17ದಿನಗಳ ಮುನ್ನವೇ ಅಕಾಡೆಮಿಯ ಎಲ್ಲಾ ಸದಸ್ಯರುಗಳಿಗೂ ಜುಲೈ 12ರಂದು ಪತ್ರಗಳನ್ನು ಕಳುಹಿಸಲಾಗಿತ್ತು. ಈ ಪತ್ರಕ್ಕೆ ಅಕಾಡೆಮಿಯ ರೆಜಿಸ್ಟ್ರಾರ್‍ರವರೇ ಖುದ್ದಾಗಿ ಸಹಿ ಮಾಡಿದ್ದು ಅದರಲ್ಲಿ 2019-20ನೇ ಸಾಲಿನ ಪ್ರಶಸ್ತಿ ಬಗ್ಗೆ ಎಂದು ಕಾರ್ಯಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಆಗ ಇನ್ನೂ ಬಿಜೆಪಿ ಸರಕಾರ ಆಡಳಿತದಲ್ಲಿದ್ದಿಲ್ಲ. ಪೂವ೵ಯೋಜನೆಯಂತೆ 29ನೇ ದಿನಾಂಕದಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಕಾರ್ಯಸೂಚಿಗೆ ಅನುಗುಣವಾಗಿ ಅರ್ಹ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅದು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಹೀಗೆ ಪ್ರಕಟವಾದ ನಂತರ ಆಗಸ್ಟ್ 1 ರಂದು ಸರಕಾರ ಅಕಾಡೆಮಿಯ ನೇಮಕಾತಿಗಳನ್ನು ರದ್ದು ಮಾಡಿತೇ ಹೊರತು ಪ್ರಶಸ್ತಿ ಪ್ರಕಟವಾಗುವುದಕ್ಕಿಂತ ಮುಂಚೆಯಲ್ಲ. ಸರಕಾರ ಬದಲಾದಂತೆಲ್ಲಾ ಅಕಾಡೆಮಿಗಳಿಗೂ ಬದಲಾವಣೆ ತಂದೇ ತರುತ್ತದೆ ಎಂಬುದನ್ನು ಮೊದಲೇ ಮನಗಾಣುವುದು ಹೇಗೆ? ಸರಕಾರದಿಂದ ನಾಮನಿರ್ದೇಶನದ ರದ್ದತಿ ಕುರಿತ ಆದೇಶ ಬರುವುದಕ್ಕಿಂತಾ ಮುಂಚೆ ತೆಗೆದುಕೊಂಡ ಅಕಾಡೆಮಿಯ ಸರ್ವಸದಸ್ಯರ ನಿರ್ಧಾರವನ್ನು ಅಸಿಂಧು, ಅಕ್ರಮ ಎಂದು ಕರೆಯುವುದು ಎಷ್ಟು ಸರಿ..?

 
ರಿಜಿಸ್ಟ್ರಾರ್ ರವರೇ ಖುದ್ದಾಗಿ ಸಹಿ ಮಾಡಿದ ಅಧೀಕೃತ ಪತ್ರ
 
ಇಲಾಖೆ ನಿರ್ದೇಶಕರಿಂದ ಅಕಾಡೆಮಿ ರದ್ದತಿಯ ಆದೇಶ ಪತ್ರ

2.     ನವೆಂಬರ್ ಡಿಸೆಂಬರ್ ತಿಂಗಳಲ್ಲಿ ನಡೆಯುವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಜುಲೈ ಕೊನೆಯಲ್ಲಿ ಮಾಡಿದ್ದೇ ತಪ್ಪು..?

ಸರ್... ಇಂತಹುದೇ ತಿಂಗಳಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಬೇಕು ಎನ್ನುವ ನಿಯಮ ನಾಟಕ ಅಕಾಡೆಮಿಯ ಬೈಲಾದಲ್ಲಿ ಎಲ್ಲಿಯೂ ನಮೂದಾಗಿಲ್ಲ. ಅಕಸ್ಮಾತ್ ವರ್ಷದ ಕೊನೆಗೇ ಪ್ರಶಸ್ತಿ ಆಯ್ಕೆಗಳು ಆಗಬೇಕೆಂಬುದೇ ನಿಯಮ ಇದ್ದಲ್ಲಿ ಅದನ್ನು ಅಕಾಡೆಮಿಯ ಅಧ್ಯಕ್ಷರ ಗಮನಕ್ಕೆ ತರಬೇಕಾದದ್ದು ಅಕಾಡೆಮಿಯ ರಿಜಿಸ್ಟ್ರಾರ್ರವರ ಕರ್ತವ್ಯವಾಗಿತ್ತು. 2019-20ನೇ ಸಾಲಿನ ಪ್ರಶಸ್ತಿ ಬಗ್ಗೆ ಎಂದು ಕಾರ್ಯಸೂಚಿಯಲ್ಲಿ ನಮೂದಿಸಿ ಎಲ್ಲಾ ಸದಸ್ಯರಿಗೂ ಲಿಖಿತ ಪತ್ರದ ಮೂಲಕ ಸವ೵ಸದಸ್ಯರ ಸಭೆಗೆ ಆಹ್ವಾನಿಸಿದ್ದು ರಿಜಿಸ್ಟ್ರಾರ್ರವರೇ ಹೊರತು ಅಧ್ಯಕ್ಷರಲ್ಲ. ಬೇಕಿದ್ದರೆ ಅವರು ಎಲ್ಲಾ ಸದಸ್ಯರಿಗೂ ಬರೆದ ಪತ್ರದ ಪ್ರತಿಗಳನ್ನು ನೀವು ಪರಿಶೀಲಿಸಿ. ಅದರಲ್ಲಿ ರಿಜಿಸ್ಟ್ರಾರ್ರವರ ಸಹಿ ಇರುವುದರಿಂದ ಇದಕ್ಕೆಲ್ಲಾ ಅವರೇ ಹೊಣೆಗಾರರಾಗುತ್ತಾರೆಯೇ ಹೊರತು ಬೇರೆಯವರಲ್ಲ. ರಿಜಿಸ್ಟ್ರಾರ್ ಮಾಡಿದ ತಪ್ಪಿಗೆ ಘೋಷಿತ ಪ್ರಶಸ್ತಿಗಳನ್ನು ರದ್ದು ಮಾಡಿ ಕಲಾವಿದರಿಗೆ ಮಾನಸಿಕವಾಗಿ ನೋವು ಕೊಡುವುದು ತಪ್ಪಲ್ಲವೇ ಸರ್..

3.     ರೆಜಿಸ್ಟ್ರಾರ್‍ರವರ ಸಹಿ ಇಲ್ಲದೇ ಅಧ್ಯಕ್ಷರೇ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದ್ದಾರೆ..

ಇದು ಇನ್ನೊಂದು ಸುಳ್ಳು ಮಾಹಿತಿ. ಇದನ್ನೇ ರೆಜಿಸ್ಟ್ರಾರ್‍ರವರು ಹೇಳುತ್ತಾ ಎಲ್ಲರನ್ನೂ ನಂಬಿಸಿದ್ದಾರೆ ಹಾಗೂ ಅದನ್ನೇ ನಿಮಗೂ ಹೇಳಿ ನಂಬಿಸಲಾಗಿದೆ. ರಿಜಿಸ್ಟ್ರಾರ್ರವರು ಆಡಿದ ಚದುರಂಗದ ಆಟಕ್ಕೆ ಎಲ್ಲರೂ ಕಾಯಿಗಳಾಗಿದ್ದು ಪ್ರಶಸ್ತಿ ವಂಚಿತ ಕಲಾವಿದರು ಬಲುಪಶುಗಳಾಗಿದ್ದಾರೆ. ಹಿಂದಿನ ಅಕಾಡೆಮಿಯಲ್ಲಿ ನಡೆದ ಸವ೵ಸದಸ್ಯರ ಸಭೆಯ ನಡಾವಳಿಗಳ ಪ್ರತಿ ಕೊಡಲು ನಿಕಟಪೂವ೵ ಅಧ್ಯಕ್ಷರಾದ ಲೊಕೇಶರವರು ಅದೆಷ್ಟು ಸಲ ಮನವಿ ಮಾಡಿಕೊಂಡರೂ ರೆಜಿಸ್ಟ್ರಾರ್‍ರವರು ಕೊಡಲು ನಿರಾಕರಿಸಿದ್ದರ ಹಿಂದೆ ಅವರ ನ್ಯೂನ್ಯತೆಗಳನ್ನು ಮುಚ್ಚಿಕೊಳ್ಳುವ ಹುನ್ನಾರವಿತ್ತು. ಅವರು ಹೇಳಿದ ಸುಳ್ಳು ಅದೆಲ್ಲಿ ಬಯಲಾಗುತ್ತದೋ ಎನ್ನುವ ಆತಂಕ ಅವರದು. ಆದರೆ ಪಟ್ಟು ಬಿಡದೇ ಆರ್‍ಟಿಐ ನಲ್ಲಿ ಅರ್ಜಿ ಸಲ್ಲಿಸಿ ಸರ್ವಸದಸ್ಯರ ಸಭೆಯ ನಡಾವಳಿಗಳ ಪ್ರತಿಯನ್ನು ಲೊಕೇಶರವರು ಪಡೆಯಬೇಕಾಯ್ತು. ಹಾಗೂ 29ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಬಹುಮತದ ತೀರ್ಮಾನದಿಂದ ಆಯ್ಕೆಯಾದ ಪ್ರಶಸ್ತಿ ಆಯ್ಕೆಯ ಪಟ್ಟಿಗೆ ಅಧ್ಯಕ್ಷರ ಜೊತೆಗೆ ರೆಜಿಸ್ಟ್ರಾರ್ ಅವರ ಸಹಿಯೂ ಇತ್ತು. ಅಧ್ಯಕ್ಷರು ಹಾಗೂ ಸದಸ್ಯರುಗಳ ಸವ೵ಸದಸ್ಯರ ಸಮಿತಿ ಒಂದಾಗಿ ಒಪ್ಪಿದ ಪ್ರಶಸ್ತಿ ಆಯ್ಕೆ ಪಟ್ಟಿಗೆ ಅನುಮತಿಸಿ ರೆಜಿಸ್ಟ್ರಾರ್ ಸಹಿ ಮಾಡಿದ ಮೇಲೆ ಘೋಷಿತ ಪ್ರಶಸ್ತಿಗಳು ಅಕ್ರಮ ಆಯ್ಕೆ ಹೇಗಾಗುತ್ತವೆ. ಅಕಾಡೆಮಿಗೆ ಸರ್ವಸದಸ್ಯರ ಸಭೆಯ ನಿರ್ಣಯವೇ ಅಂತಿಮ ಅಲ್ಲವೇ. ಈಗಿನ ಅಕಾಡೆಮಿಯವರ ಪ್ರಕಾರ ಇದೆಲ್ಲವೂ ಅಕ್ರಮ ಎನ್ನುವುದೇ ನಿಜವಾದಲ್ಲಿ ಅದಕ್ಕೆ ಮೂಲಭೂತ ಕಾರಣರಾದ ಆಡಳಿತಾಧಿಕಾರಿ ರಿಜಿಸ್ಟ್ರಾರ್ರವರು ಇನ್ನೂ ಅಲ್ಲಿ ಯಾಕಿದ್ದಾರೆ.? ಮೊದಲು ಶಿಕ್ಷೆಯಾಗಬೇಕಾದದ್ದು ಅವರಿಗಲ್ಲವೆ? ಅವರ ಮೇಲೆ ಇಲಾಖೆಯ ವಿಚಾರಣೆಗೆ ನೀವು ಆದೇಶಿಸುವುದು ಸೂಕ್ತವಲ್ಲವೆ ಸಾರ್..

4.     ಪ್ರೆಸ್ ಮೀಟ್ ಮಾಡದೇ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು ಸರಿಯಲ್ಲ.

ಹಾಗಂತ ಯಾವ ಬೈಲಾದಲ್ಲೂ ಹೇಳಿಲ್ಲ. ಘೋಷಿತಗೊಂಡ ಪ್ರಶಸ್ತಿಯ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳಬೇಕೆಂದರೆ ಸುದ್ದಿಗೋಷ್ಠಿ ಮಾಡಬೇಕೆಂಬ ನಿಯಮವೇನಿಲ್ಲ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪತ್ರಿಕಾ ಕಾರ್ಯಾಲಯಗಳಿಗೆ ತಲುಪಿ ಮಾರನೆಯ ದಿನ ಪ್ರಕಟಗೊಂಡಿತು. ಇದರಲ್ಲಿ ತಪ್ಪೇನು?. ಪ್ರಶಸ್ತಿ ಆಯ್ಕೆ ಎಂದರೆ ಯಾರಿಗೂ ಗೊತ್ತಾಗದಂತೆ ಮಾಡುವ ರಹಸ್ಯ ಕಾರ್ಯಾಚರಣೆ ಏನಲ್ಲವಲ್ಲ. 2019-20ರ ಸಾಲಿನ ಪ್ರಶಸ್ತಿಗಳನ್ನೂ ಸಹ ಸರ್ವಸದಸ್ಯರ ಸಭೆಯಲ್ಲಿ ಅನುಮೋದನೆಗೊಂಡ ಕೂಡಲೇ ಪ್ರೆಸ್‍ಮೀಟ್ ಕರೆದು ಹಾಗೂ ಈಮೇಲ್ ಮೂಲಕ ವಿವರಗಳನ್ನು ಪತ್ರಿಕೆಗಳಿಗೆ ಕೊಡಲಾಗಿತ್ತು ಹಾಗೂ ಪತ್ರಿಕೆಯವರೇ ಯಾವುಯಾವುದೋ ಮೂಲಗಳಿಂದ ವಿವರ ಪಡೆದು ಪ್ರಕಟಿಸಿದ್ದರು. ಯಾವುದರ ಮೂಲಕ ಹೇಗೆ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುತ್ತೀರೆಂಬುದು ಮುಖ್ಯವೋ ಇಲ್ಲಾ ಪ್ರಶಸ್ತಿ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವುದು ಮುಖ್ಯವೋ. ಪ್ರಶಸ್ತಿ ಘೋಷಣೆಯಾದ ಕೂಡಲೇ ಪತ್ರಿಕೆಗಳಿಗೆ ಸುದ್ದಿ ಹೋಗದೇ ವಿಳಂಬ ಮಾಡಿದರೆ ಕುತೂಹಲ ತಾಳದ ಸದಸ್ಯರುಗಳೇ ವಿಷಯವನ್ನು ಪಬ್ಲಿಕ್ ಮಾಡುವ ಸಾಧ್ಯತೆಗಳಿಗೆ ಹಿಂದಿನ ಅನುಭವಗಳೇ ಸಾಕ್ಷಿಯಾಗಿದ್ದರಿಂದ ಆದಷ್ಟು ಬೇಗ ಪತ್ರಿಕೆಗಳಿಗೆ ಕಳುಹಿಸುವ ಇಲ್ಲವೇ ಪ್ರೆಸ್ ಮೀಟ್ ಮಾಡುವ ಕೆಲಸವನ್ನು ಮಾಡಲಾಗುತ್ತದೆ. ಈಗ ಇವರೂ ಸಹ ಮಾಡಿದ್ದೂ ಹೀಗೆ ಅಲ್ಲವೇ.. ಜನವರಿ 3ರಂದು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿ ಜನವರಿ 4 ರಂದು ಅಧೀಕೃತವಾಗಿ ಪತ್ರಿಕಾಗೋಷ್ಠಿ ಕರೆಯದೇ ಪಟ್ಟಿಯನ್ನು ಪತ್ರಿಕೆಗಳಿಗೆ ಕಳುಹಿಸಿದ್ದು ಇವರ ಆತುರದ ನಿಧಾ೵ರವಲ್ಲವೇ ಸರ್..

5. ಅಕಾಡೆಮಿ ಘೋಷಿಸಿದ ಪ್ರಶಸ್ತಿಯ ಪಟ್ಟಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅನುಮತಿ ಇರಲಿಲ್ಲ.

ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಿಂದ ನಡೆಯುತ್ತಿದ್ದರೂ ಸ್ವಾಯತ್ತತೆ ಹೊಂದಿರುವ ಸಂಸ್ಥೆಗಳು. ಇದನ್ನು ಸರಕಾರವೇ ಒಪ್ಪಿಕೊಂಡ ಬರುಗೂರರ ಸಾಂಸ್ಕೃತಿಕ ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸ್ವಾಯತ್ತ ಸಂಸ್ಥೆಯಲ್ಲಿ ಸರ್ವಸದಸ್ಯರ ಸಭೆಯ ತೀರ್ಮಾನವೇ ಅಂತಿಮ. ಆ ಸಭೆ ತೆಗೆದುಕೊಂಡ ನಿರ್ಣಯ ಬೈಲಾ ಪ್ರಕಾರ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ಅನುಮೋದಿಸುವುದು ಮಾತ್ರ ರೆಜಿಸ್ಟ್ರಾರ್‍ರವರ ಕರ್ತವ್ಯ. ಹೀಗೆ ಸರ್ವಸದಸ್ಯರ ಸಮಿತಿಯೊಂದು ಬಹುಮತದಿಂದ ಆಯ್ಕೆ ಮಾಡಲಾದ ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ ಇಲಾಖೆಯ ನಿರ್ದೇಶಕರ ಅನುಮತಿ ಬೇಕೆಂಬುದು ಯಾವ ಬೈಲಾದಲ್ಲೂ ಹೇಳಿಲ್ಲ. ಬೈಲಾ ಪ್ರಕಾರವೇ ಮಾಡಲಾದ ಕಾರ್ಯಕಾರೀ ಸಮಿತಿಯ ತೀರ್ಮಾನದಲ್ಲಿ ಅನಗತ್ಯವಾಗಿ ಮೂಗುತೂರಿಸುವ ಅಧಿಕಾರ ರೆಜಿಸ್ಟ್ರಾರ್‍ರವರಿಗೂ ಇಲ್ಲಾ, ಇಲಾಖೆಯ ನಿರ್ದೇಶಕರಿಗೂ ಇಲ್ಲಾ. ಇದು ಗೊತ್ತಿದ್ದರೂ ರೆಜಿಸ್ಟ್ರಾರ್ ಮೇಡಂ ತಮಗಿಲ್ಲದ ಅಧಿಕಾರವನ್ನು ಚಲಾಯಿಸಲು ಪ್ರಯತ್ನಿಸುತ್ತಿರುವುದೇ ಅಕಾಡೆಮಿಯ ಸ್ವಾಯತ್ತತೆಗೆ ದಕ್ಕೆಯನ್ನುಂಟುಮಾಡುವಂತಹುದು. ಅಧ್ಯಕ್ಷರುಗಳ ಜೊತೆಗೆ ಸಂಘರ್ಷಕ್ಕೆ ಕಾರಣವಾಗುವಂತಹುದು. ತಾವು ಮಾಡಿದ ತಪ್ಪನ್ನು ಮರೆಮಾಚಲು ರಿಜಿಸ್ಟ್ರಾರ್ ರವರು ಆಗಿದ್ದ ಇಲಾಖೆಯ ನಿರ್ದೇಶಕರ ಮೇಲೆ ಹೇಳುತ್ತಾ ಎಲ್ಲರನ್ನೂ ದಿಕ್ಕುತಪ್ಪಿಸುತ್ತಿದ್ದಾರೆ. 

6.     ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಬರೆಯಲಾದ ಪತ್ರಕ್ಕೆ ರೆಜಿಸ್ಟ್ರಾರ್ ಸಹಿ ಮಾಡಿಲ್ಲ.

ಅರೆ.. ಸರ್ವಸದಸ್ಯರ ಸಭೆಯೇ ಅಂಗೀಕರಿಸಿದ ನಿರ್ಣಯಗಳಿಗೆ ಸ್ವತಃ ರೆಜಿಸ್ಟ್ರಾರ್‍ರವರೇ ಸಹಿ ಮಾಡಿ ತಮ್ಮ ಅನುಮೋದನೆಯನ್ನು ತಿಳಿಸಿದ ಮೇಲೆ ಮತ್ತೇನಿದೆ ಸರ್..  ಕಾರ್ಯಕಾರಿ ಸಮಿತಿ ನಿರ್ಧರಿಸಿಯಾಗಿದೆ, ಹೇಗೋ ಪತ್ರಿಕೆಗಳಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಸ್ವಾಯತ್ತ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಅಕಾಡೆಮಿ ಅಧ್ಯಕ್ಷರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಪತ್ರ ಬರೆಯುವುದು ತಪ್ಪಾ? ಯಾಕೆ ಬರೆಯಬಾರದು? ಅಧ್ಯಕ್ಷರು ಪತ್ರ ಬರೆಯಬಾರದು ಅಂತಾ ಯಾವ ಬೈಲಾದಲ್ಲಿದೆ. ಅಕಾಡೆಮಿಗಳ ಸ್ವಾಯತ್ತತೆಯನ್ನು ಶತಾಯ ಗತಾಯ ಮೊಟಕುಗೊಳಿಸುವುದೇ ಈ ಅಧಿಕಾರಿವರ್ಗದವರ ತಂತ್ರಗಾರಿಕೆಯಾದರೆ ಅಕಾಡೆಮಿ ಮುನ್ನಡೆಯುವುದಾದರೂ ಹೇಗೆ..? ಎಲ್ಲಾ ಅಧಿಕಾರಗಳನ್ನೂ ತಮ್ಮ ಕೈಯಲ್ಲಿ ಇಟ್ಟುಕೊಂಡು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸೂತ್ರದ ಬೊಂಬೆಯಂತೆ ಆಟ ಆಡಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಈಗಲೂ ಆಗಿದ್ದು ಅಕಾಡೆಮಿಯ ಸ್ವಾಯತ್ತತೆಯ ಮೇಲೆ ಅಧಿಕಾರಿಶಾಹಿಯ ಸವಾರಿ ಮಾತ್ರ. ಇದಕ್ಕೆ ಬಲಿಪಶುವಾಗಿದ್ದು ಮಾತ್ರ ಪ್ರಶಸ್ತಿ ಪುರಸ್ಕೃತ ರಂಗಕಲಾವಿದರು. 

7.     ಉಮಾಶ್ರೀಯವರೇ ಆಯ್ಕೆ ಮಾಡಿದವರು ಅವರಿಗೇ ಜೀವಮಾನದ ಸಾಧನೆ ಪ್ರಶಸ್ತಿ ಕೊಟ್ಟಿದ್ದು ತಪ್ಪು..

ಇಂತವರಿಗೆ ಪ್ರಶಸ್ತಿ ಕೊಡಬೇಕು, ಇಂತವರಿಗೆ ಬೇಡವೆಂದು ಬೈಲಾದಲ್ಲಾಗಲಿ ಇಲ್ಲವೇ ಸಾಂಸ್ಕೃತಿಕ ನೀತಿಯಲ್ಲಾಗಲೀ ಎಲ್ಲೂ ನಮೂದಾಗಿಲ್ಲ ಸರ್..  ನಾಟಕ ಅಕಾಡೆಮಿ ರಾಜಕಾರಣಿ ಉಮಾಶ್ರೀಯವರಿಗೆ ಪ್ರಶಸ್ತಿಯನ್ನು ಕೊಟ್ಟಿಲ್ಲಾ ಹಾಗೂ ರಾಜಕಾರಣಿಗಳಿಗೆ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ಕೊಡಲೂ ಬರುವುದಿಲ್ಲ. ಪ್ರಶಸ್ತಿ ಘೋಷಣೆಯಾದಾಗ ಉಮಾಶ್ರೀಯವರು ಸಚಿವರೇನು ಶಾಸಕರೂ ಆಗಿರಲಿಲ್ಲ. ಕನ್ನಡ ರಂಗಭೂಮಿಯ ಜನಪ್ರೀಯ ಅಭಿನೇತ್ರಿ ಉಮಾಶ್ರೀಯವರ ಜೀವಮಾನದ ಸಾಧನೆಗಾಗಿ ಪ್ರಶಸ್ತಿಯನ್ನು ಕೊಡಮಾಡಲಾಗಿದೆ. ಅದರ ಹಿಂದೆ ಪ್ರಬಲ ಕಾರಣವೂ ಇದೆ. ಕಳೆದ ಎರಡು ವರ್ಷಗಳಲ್ಲಿ ನಾಟಕ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿಗಳಾದ ಪ್ರಸನ್ನ ಹಾಗೂ ಗಂಗಾಧರಸ್ವಾಮಿಯವರಿಗೆ ಕೊಟ್ಟು ಗೌರವಿಸಲಾಗಿತ್ತು. ಈ ಇಬ್ಬರೂ ಸಹ ರಂಗ ನಿರ್ದೇಶಕರಾಗಿದ್ದು ಹವ್ಯಾಸಿ ರಂಗಭೂಮಿಯವರಾಗಿದ್ದರು. ಈ ಸಲ ಅಭಿನಯ ಕಲಾವಿದರನ್ನು ಆಯ್ಕೆಮಾಡುವುದು ಸೂಕ್ತವಾಗಿತ್ತು. ಎರಡೂ ಸಲ ಪುರುಷರನ್ನೇ ಪ್ರಶಸ್ತಿಗೆ ಪರಿಗಣಿಸಿದ್ದರಿಂದ ಈ ಸಲ ಸಾಧಕ ಮಹಿಳೆಯೊಬ್ಬರಿಗೆ ಪ್ರಶಸ್ತಿ ಕೊಡುವುದು ಲಿಂಗಸಮಾನತೆ ದೃಷ್ಟಿಯಿಂದ ಸರಿಯಾದ ಕ್ರಮವಾಗಿತ್ತು. ವೃತ್ತಿರಂಗಭೂಮಿ, ಗ್ರಾಮೀಣ ರಂಗಭೂಮಿ ಹಾಗೂ ಪೌರಾಣಿಕ ರಂಗಭೂಮಿಯವರು ತಮ್ಮ ಕ್ಷೇತ್ರದ ಸಾಧಕರೊಬ್ಬರಿಗೆ ಜೀವಮಾನದ ಪ್ರಶಸ್ತಿಯನ್ನು ಕೊಡಲೇಬೇಕು ಎಂದು ಅಧ್ಯಕ್ಷರನ್ನು ಒತ್ತಾಯಿಸತೊಡಗಿದ್ದರು. ಇರುವುದೊಂದೇ ಪ್ರಶಸ್ತಿ ರಂಗಭೂಮಿಯ ಯಾವ ವಿಭಾಗದವರಿಗೆ ಕೊಡುವುದು? ಎಂಬ ಪ್ರಶ್ನೆ ಕಾರ್ಯಕಾರಿ ಸಮಿತಿಯ ಮುಂದೆ ಬಂದಾಗ ಹವ್ಯಾಸಿ, ಗ್ರಾಮೀಣ, ವೃತ್ತಿ, ಪೌರಾಣಿಕ ಹಾಗೂ ಕೈಗಾರಿಕಾ ರಂಗಭೂಮಿಗೆ ಅಪಾರವಾದ ಕೊಡುಗೆಯನ್ನು ಕೊಟ್ಟ ಮಹಿಳಾ ಕಲಾವಿದೆಯೊಬ್ಬರಿಗೆ ಈ ಸಲದ ಜೀವಮಾನದ ಪ್ರಶಸ್ತಿಯನ್ನು ಕೊಡುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಈ ಮಾನದಂಡಕ್ಕೆ ಉಮಾಶ್ರೀಯವರ ಹೆಸರು ಸೂಕ್ತವಾದ ಆಯ್ಕೆಯಾಗಿತ್ತು. ಹೀಗಾಗಿ ಸರ್ವಸಮ್ಮತದ ಆಯ್ಕೆಯಾಗಿ ಉಮಾಶ್ರೀಯವರನ್ನು ಪ್ರಶಸ್ತಿಗೆ ಪರಿಗಣಿಸಿ ಆಯ್ಕೆ ಮಾಡಲಾಯಿತು. ಕಲಾವಿದೆ ಉಮಾಶ್ರೀಯವರ ಆಯ್ಕೆಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ ಯಾಕೆಂದರೆ ಅವರು ಜೀವಮಾನದ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದಾರೆ. ಅವರ ಹಾಗೆ ಸಮಗ್ರ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಜನಪ್ರೀಯವಾದ ಇನ್ನೊಬ್ಬ ಕಲಾವಿದೆಯ ಹೆಸರನ್ನು ಹುಡುಕುವುದೂ ಸಾಧ್ಯವಿಲ್ಲ. ಉಮಾಶ್ರೀಯವರು ಉತ್ತಮ ಕಲಾವಿದೆ ಎಂದು ನೀವು ಒಪ್ಪಿಕೊಂಡಿದ್ದೀರಿ.

ಸರ್.. ಮೇಲೆ ಹೇಳಿದ ಸತ್ಯ ಸಂಗತಿಗಳನ್ನು ದಯವಿಟ್ಟು ಮತ್ತೊಮ್ಮೆ ಪರಿಶೀಲಿಸಿ. ರಿಜಿಸ್ಟ್ರಾರ್ ರವರು ಹೇಳಿದ ತಪ್ಪು ಮಾಹಿತಿಗಳ ಹಿಂದಿರುವ ಸತ್ಯವನ್ನು ಅರಿಯಲು ದಯವಿಟ್ಟು ಪ್ರಯತ್ನಿಸಿ. ಆಯ್ಕೆಯ ಹಿಂದೆ ತಾಂತ್ರಿಕ ದೋಷಗಳಿವೆಯಾ ಇಲ್ಲವಾ ಎನ್ನುವುದು ಈಗ ಮುಖ್ಯವಾದ ಸಂಗತಿಯಲ್ಲಾ. 30 ಜನ ಕಲಾವಿದರ ಸ್ವಾಭಿಮಾನದ ಪ್ರಶ್ನೆ ಇದರಲ್ಲಿದೆ. ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಬಹುತೇಕರು ಕನ್ನಡ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ. ಹಲವಾರು ವರ್ಷಗಳ ಕಾಲ ಪರಿಶ್ರಮವಹಿಸಿದ್ದಾರೆ. ಯಾವುದೇ ಜಾತಿ, ಧರ್ಮ, ಪಕ್ಷಗಳ ಪಕ್ಷಪಾತವಿಲ್ಲದೇ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಪಟ್ಟಿಯಲ್ಲಿರುವ ಬಹುತೇಕರು ತಮಗೆ ಪ್ರಶಸ್ತಿ ಕೊಡಬೇಕೆಂದು ಅರ್ಜಿ ಸಲ್ಲಿಸಿಲ್ಲ, ದುಂಬಾಲು ಬಿದ್ದಿಲ್ಲ, ಲಾಭಿ ಮಾಡಿಲ್ಲ. ಅಕಾಡೆಮಿಯೇ ಕರೆದು ಕೊಡುತ್ತೇನೆ ಎಂದು ಘೋಷಿಸಿದ ಪ್ರಶಸ್ತಿಯನ್ನು ಅಕಾಡೆಮಿಯೇ ರದ್ದು ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ.  ಇದರಿಂದ ಸರಕಾರಕ್ಕೆ ಮುಜುಗರವಾಗುವುದರಲ್ಲಿ ಸುಳ್ಳಿಲ್ಲ.

ಕಲಾವಿದರು ಮೂಲಭೂತವಾಗಿ ಭಾವುಕ ಜೀವಿಗಳು. ಪ್ರಶಸ್ತಿ ಬಂದಾಗ ಸಂಭ್ರಮಿಸಿದ್ದಾರೆ. ತಮ್ಮ ಶ್ರಮ ಸಾರ್ಥಕವಾಯಿತು ಎಂದು ಸಂತಸ ಪಟ್ಟಿದ್ದಾರೆ. ಪ್ರಶಸ್ತಿ ಬಂದಿದ್ದನ್ನೇ ನೆಪವಾಗಿಟ್ಟುಕೊಂಡು ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪಡೆಯುವವರನ್ನು ಸನ್ಮಾನಿಸಿ ಗೌರವಿಸಿವೆ. ಈಗ ಕೊಡಲಾಗುತ್ತದೆ ಎಂದು ಭರವಸೆ ಕೊಟ್ಟು ಇದ್ದಕ್ಕಿದ್ದಂತೆ ಪ್ರಶಸ್ತಿ ರದ್ದು ಮಾಡಿದರೆ ಕಲಾವಿದರ ಸ್ವಾಭಿಮಾನಕ್ಕೆ ಪೆಟ್ಟುಬೀಳುತ್ತದೆ. ಕಲಾವಿದರು ಅತೀವವಾದ ಮಾನಸಿಕ ವೇದನೆ ಮತ್ತು  ಅವಮಾನಕ್ಕೆ ತುತ್ತಾಗುತ್ತಾರೆ. ಕಲಾವಿದರ ಬಗ್ಗೆ ಪ್ರೀತಿ, ಕಕ್ಕುಲಾತಿ, ಮಮತೆ, ಗೌರವ ಇಲ್ಲದ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಜೊತೆಗೆ ಈ ಯಾವುದರಲ್ಲೂ ಹಸ್ತಕ್ಷೇಪ ಮಾಡದ ನೀವೂ ಸಹ ಪ್ರಶ್ನಾರ್ಹರಾಗುತ್ತೀರಿ. ಪ್ರಶಸ್ತಿಯನ್ನು ಘೋಷಿಸಿ ರದ್ದುಪಡಿಸಿದ್ದಕ್ಕಾಗಿ ಇಡೀ ಅಕಾಡೆಮಿಯೇ ವಿಶ್ವಾಸಾಹ೵ತೆ ಕಳೆದುಕೊಳ್ಳುತ್ತದೆ. ಯಾರೋ ಒಂದಿಬ್ಬರು ಸದಸ್ಯರು ಹಾಗೂ ಅಧಿಕಾರಿಗಳ ಸೇಡಿನ ರಾಜಕೀಯಕ್ಕೆ ರಂಗಸಾಧಕ ಕಲಾವಿದರು ಬಲಿಪಶುವಾಗುವುದನ್ನು ಇಡೀ ರಂಗಭೂಮಿ ಒಂದಾಗಿ ಖಂಡಿಸುತ್ತಿದೆ.

ಸರ್.. ಇಷ್ಟಕ್ಕೂ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಭೀಮಸೇನ್ ರವರ ನೇಮಕಾತಿಯೇ ನೈತಿಕವಾಗಿ ಹಾಗೂ ತಾಂತ್ರಿಕವಾಗಿ ಅಕ್ರಮವಾಗಿದೆ. ಯಾಕೆಂದರೆ. ಅಕಾಡೆಮಿಗಳ ಬೈಲಾ ನಡಾವಳಿಗಳ ಪ್ರಕಾರ ಅಕಾಡೆಮಿ ಅಧ್ಯಕ್ಷರಾಗಬೇಕಾದವರು ಬೇರೆ ಕಡೆ ನೌಕರಿ ಮಾಡಕೂಡದು ಎಂದಿದೆ. ಯಾಕೆಂದರೆ ಅಕಾಡೆಮಿಗೆ ಪೂಣಾ೵ವಧಿ ಅಧ್ಯಕ್ಷ ಇರಲಿ ಎಂಬುದು ಅದರ ಹಿಂದಿರುವ ಉದ್ದೇಶ. ಆದರೆ ಭೀಮಸೇನರವರು ತುಮಕೂರಿನ ಮೆಡಿಕಲ್ ಕಾಲೇಜಿನಲ್ಲಿ ಈಗಲೂ ಪ್ರೊಪೆಸರ್ ಆಗಿ ಕೆಲಸ ಮಾಡುತ್ತಿದ್ದು ಜೊತೆಗೆ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಪೂಣಾ೵ವಧಿ ಹೆಸರಲ್ಲಿ ಪಾಟ೵ಟೈಂ ಕಾಯಕ ಮಾಡುತ್ತಿದ್ದಾರೆ. ಎರಡೂ ಕಡೆ ಸಂಬಳ ಸಾರಿಗೆ ಸವಲತ್ತುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ತಪ್ಪಲ್ಲವೆ ಸಾರ್.. ಯಾವಾಗ ಅವರು ಪೂಣಾ೵ವಧಿಯಾಗಿ ನಾಟಕ ಅಕಾಡೆಮಿಯ ಕಾಯ೵ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲವೋ ಆಗ ಅಧ್ಯಕ್ಷರಾಗಿ ಮುಂದುವರೆಯಬಾರದಿತ್ತು. ಅಧ್ಯಕ್ಷತೆಯೇ ಬೇಕೆಂದಿದ್ದರೆ ಮೆಡಿಕಲ್ ಕಾಲೇಜಿನ ನೌಕರಿ ಬಿಡಬೇಕಾಗಿತ್ತು. ಈ ಹಿಂದೆ ವಾತಾ೵ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ ಆರ್.ನಾಗೇಶ್ ರವರು ಹಾಗೂ ಕಪ್ಪಣ್ಣನವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಪೂಣಾ೵ವಧಿಯಾಗಿ ತೊಡಗಿಸಿಕೊಂಡಿದ್ದರು. ಆದರೆ.. ಅದಕ್ಕೆ ವ್ಯತಿರಿಕ್ತವಾಗಿ, ಬೈಲಾಗೆ ವಿರುದ್ಧವಾಗಿ ಅಧ್ಯಕ್ಷರು ನಡೆದುಕೊಳ್ಳುತ್ತಿದ್ದಾರೆ. ಎರಡೂ ಕಡೆಗೂ ನ್ಯಾಯ ಸಲ್ಲಿಸಲಾಗದೇ ಸೋತಿದ್ದಾರೆ. ಅವರೇ ಒಪ್ಪಿಕೊಂಡ ಯಾವುದೇ ರಂಗಭೂಮಿ ಕಾಯ೵ಕ್ರಮಗಳಿಗೂ ಹೋಗಲಾರದೇ ರಂಗಸಂಘಟಕರಿಗೆ ತೊಂದರೆ ಕೊಡುತ್ತಿದ್ದಾರೆ. ಅಕಾಡೆಮಿಯಲ್ಲಿ ಕೆಟ್ಟ ಸಂಪ್ರದಾಯಗಳನ್ನು ಹುಟ್ಟು ಹಾಕಿದ್ದಾರೆ.

ಈಗ ಪ್ರಶಸ್ತಿಗೆ ಪಾತ್ರರಾಗಿರುವ ಕಲಾವಿದರ ಹಿತಾಸಕ್ತಿಯನ್ನು ಕಾಪಾಡುವ ಹೊಣೆಗಾರಿಕೆ ಹಾಗೂ ನಾಟಕ ಅಕಾಡೆಮಿಯ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಸಚಿವರಾದ ನಿಮ್ಮ ಕೈಯಲ್ಲಿದೆ. ಯಾರೇ ಆಗಲಿ ಕಲಾವಿದರು ಕಲಾವಿದರೆ,, ರಂಗಭೂಮಿಯವರು ರಂಗಭೂಮಿಯವರೇ.. ಯಾವುದೇ ಕಲಾವಿದರಿಗೆ ಅವಮಾನವಾದರೂ ಅದು ರಂಗಭೂಮಿಯವರಿಗಾದ ಅವಮಾನವೇ. ರಂಗಭೂಮಿಯಲ್ಲಿ ತೊಡಗಿಸಿಕೊಂಡ ಎಲ್ಲರೂ ಕುಲಬಾಂಧವರೇ. ಬಂಧುಗಳ ಸ್ವಾಭಿಮಾನಕ್ಕೆ ದಕ್ಕೆಯಾಗುವುದನ್ನು ಸಹಿಸಲಾಗದು, ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ರಂಗಭೂಮಿಯ ಐಕ್ಯತೆಯನ್ನು ಉಳಿಸಲು, ಅಕಾಡೆಮಿಯ ಸ್ವಾಯತ್ತತೆಯನ್ನು ಕಾಪಾಡಲು, ಕಲಾವಿದರುಗಳ ಸ್ವಾಭಿಮಾನವನ್ನು ಎತ್ತಿಹಿಡಿಯಲು, ಅಧಿಕಾರಿಗಳ ಕುತಂತ್ರವನ್ನು ಬಯಲುಮಾಡಲು ಒಂದಾಗಬೇಕಿದೆ. ಏನಕೇನ ಪ್ರಕಾರೇಣ ಘೋಷಿತಗೊಂಡ ಪ್ರಶಸ್ತಿಗಳನ್ನು ಕಲಾವಿದರುಗಳಿಗೆ ಕೊಟ್ಟು ಗೌರವಿಸುವ ಮೂಲಕ ಅಕಾಡೆಮಿಯ ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ. ಯಾಕೆಂದರೆ ಅಕಾಡೆಮಿಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಬದಲಾಗುತ್ತಾರೆಯೇ ಹೊರತು ಅಕಾಡೆಮಿ ಅಲ್ಲಾ. 

ಈಗಾಗಲೇ ಹೊಸ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಘೋಷಿಸಲಾಗಿದೆ. ಈಗೇನು ಮಾಡುವುದು ಎನ್ನುವುದೇ ಈಗಿನ ಪ್ರಶ್ನೆ.

1.      ಕಲಾವಿದರ ಗೌರವವನ್ನು ಎತ್ತಿ ಹಿಡಿಯಲು ಹೊಸದಾಗಿ ಪ್ರಕಟಗೊಂಡ ಪ್ರಶಸ್ತಿ ಪುರಸ್ಕೃತರ ಜೊತೆಗೆ  ಈಗಾಗಲೇ ಘೋಷಿತವಾದ ಪ್ರಶಸ್ತಿಗಳನ್ನು ಪ್ರದಾನ ಮಾಡುವುದರಿಂದ ಅಕಾಡೆಮಿ ಮಯಾ೵ದೆ ಉಳಿಯುತ್ತದೆ. ಕಲಾವಿದರಿಗೂ ನೆಮ್ಮದಿ ಸಿಗುತ್ತದೆ. ಸಚಿವರಿಗೂ ಅತೀ ಹೆಚ್ಚು ಗೌರವ ದಕ್ಕುತ್ತದೆ.

2.     ಇದಕ್ಕೂ ರಿಜಿಸ್ಟ್ರಾರ್ ರವರು ತಕರಾರು ಮಾಡುತ್ತಾರೆ. 30 ಜನರಿಗೆ ಮಾತ್ರ ಪ್ರಶಸ್ತಿ ಕೊಡಲು ಬೈಲಾ ಪ್ರಕಾರ ಸಾಧ್ಯ, ಹಾಗೂ ಹೆಚ್ಚಿನವರಿಗೆ ಪ್ರಶಸ್ತಿ ಕೊಡಲು ಹಣ ಎಲ್ಲಿಂದ ತರುವುದು ಎಂದು ಅಡ್ಡಗಾಲು ಹಾಕುತ್ತಾರೆ. ಇದಕ್ಕಾಗಿ ಮಾನ್ಯ ಸಚಿವರಾದ ತಾವು ವಿಶೇಷ ಅನುಮತಿಯ ಜೊತೆಗೆ ಹದಿನೈದು ಲಕ್ಷ ರೂಪಾಯಿಗಳ ಹೆಚ್ಚುವರಿ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಲು ಆದೇಶಿಸಿದರೆ ಈ ಸಮಸ್ಯೆ ಸುಖಾಂತ್ಯವಾಗುತ್ತದೆ. ತಮಗೂ ದೊಡ್ಡ ಹೆಸರನ್ನು ತರುತ್ತದೆ.

3.     ಇಲ್ಲವಾದರೆ.. ಈಗಾಗಲೇ ಘೋಷಿತವಾದಂತೆ 2019-20ರ ಸಾಲಿನ ಪ್ರಶಸ್ತಿಗಳ ಜೊತೆಗೆ ಈಗ ಹೊಸದಾಗಿ ಆಯ್ಕೆಗೊಂಡ ಪ್ರಶಸ್ತಿಗಳನ್ನು 2020-21ನೇ ಸಾಲಿನದೆಂದು ಪರಿಗಣಿಸಿ ಮಾಚ೵ ತಿಂಗಳು ಕಳೆದ ನಂತರ ಎರಡೂ ವಷ೵ದ ಪ್ರಶಸ್ತಿಗಳನ್ನು ಒಂದೇ ದಿನ ಪ್ರದಾನ ಮಾಡುವುದರಿಂದ ಅಕಾಡೆಮಿಯ ಘನತೆ ಹೆಚ್ಚುತ್ತದೆ. ಇದಕ್ಕೆ ಕಾರಣವಾದವರೆಲ್ಲಾ ದೊಡ್ಡವರೆಣಿಸಿಕೊಳ್ಳುತ್ತಾರೆ. ಹಾಗೂ ಮಾಚ೵ ನಂತರ ಹೊಸ ಅನುದಾನವೂ ಬರುವುದರಿಂದ ಹೆಚ್ಚುವರಿ ಆಥಿ೵ಕ ಭಾರವೂ ಅಕಾಡೆಮಿಗೆ ಬೀಳಲಾರದು. ಈ ಹಿಂದೆ ಶೇಖ ಮಾಸ್ತರ್‍ರವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಎರಡು ವರ್ಷಗಳ ಪ್ರಶಸ್ತಿಯನ್ನೂ ಒಂದೇ ಬಾರಿಗೆ ಕೊಟ್ಟ ಉದಾಹರಣೆಯೂ ಇದೆ.

4.     ಅಕಾಡೆಮಿಗೆ ಅಧ್ಯಕ್ಷರು ಸದಸ್ಯರುಗಳು ಯಾವುದೇ ರಾಜಕೀಯ ಕಾರಣಗಳಿಗೆ ಆಯ್ಕೆಯಾಗಿರಲಿ. ಆದರೆ ಒಮ್ಮೆ ರಂಗಭೂಮಿಯನ್ನು ಪ್ರತಿನಿಧಿಸುವ ನಾಟಕ ಅಕಾಡೆಮಿಗೆ ನೇಮಕವಾದಮೇಲೆ ಸಮಗ್ರ ರಂಗಭೂಮಿಯ ಹಿತಾಸಕ್ತಿಯೇ ಅಕಾಡೆಮಿಯ ಧ್ಯೇಯವಾಗಿರಲಿ ಎಂದು ಅವರಿಗೆ ತಾವು ಕಿವಿಮಾತು ಹೇಳುವುದು ಸಾಂಸ್ಕೃತಿಕ ಲೋಕದ ಹಿತದೃಷ್ಟಿಯಿಂದ ಒಳ್ಳೆಯದು.

5. ಈ ಎಲ್ಲಾ ಅವಘಡಕ್ಕೆ ಮೂಲ ಕಾರಣೀಕತ೵ರಾಗಿರುವ ರಿಜಿಸ್ಟ್ರಾರ್ ರವರನ್ನು ತಪ್ಪು ಮಾಹಿತಿ ಕೊಟ್ಟಿದ್ದಕ್ಕಾಗಿ ವಿಚಾರಣೆಗೆ ಒಳಪಡಿಸಿ ವಗಾ೵ವಣೆ ಮಾಡುವುದು ಈಗಿನ ತುತು೵ ಅಗತ್ಯವಾಗಿದೆ.  ಇಲ್ಲವಾದರೆ ಸ್ವಾಯತ್ತ ಸಂಸ್ಥೆಯಾದ ನಾಟಕ ಅಕಾಡೆಮಿಯನ್ನು ದಾರಿ ತಪ್ಪಿಸಿ ಅದಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮುಂದುವರೆಯುತ್ತದೆ. ನಾಟಕ ಅಕಾಡೆಮಿಗಾಗಿ ಸರಕಾರ ಕೊಡುವ ವಾಷಿ೵ಕ ಅನುದಾನದಲ್ಲಿ ರಿಜಿಸ್ಟ್ರಾರ್ ರವರು ತಮ್ಮ ದೈನಂದಿನ ಸಾರಿಗೆ ವೆಚ್ಚ (ತಿಂಗಳಿಗೆ ಅಂದಾಜು 30 ಸಾವಿರ) ವನ್ನು ಪಡೆಯುತ್ತಿದ್ದಾರೆ. ಬೇರೆ ಯಾವ ಅಕಾಡೆಮಿಗಳ ರಿಜಿಸ್ಟ್ರಾರ್ ರವರಿಗೆ ಇಲ್ಲದ ಸವಲತ್ತನ್ನು ಅಕ್ರಮವಾಗಿ ಇವರು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕಲೆ ಹಾಗೂ ಕಲಾವಿದರಿಗಾಗಿ ಮುಡುಪಿಟ್ಟ ಎಂಬತ್ತು ಲಕ್ಷದಷ್ಟು ಹಣದಲ್ಲಿ ವಾಷಿ೵ಕವಾಗಿ ಮೂರ್ನಾಲ್ಕು ಲಕ್ಷದಷ್ಟು ಹಣ ರಿಜಿಸ್ಟ್ರಾರ್ ರವರ ಸಾರಿಗೆಗೆ ಖಚಾ೵ಗುತ್ತಿದೆ. ಇದನ್ನು ಮೊದಲು ನಿಲ್ಲಿಸಿದರೆ ಆ ಹಣ ಅಕಾಡೆಮಿಯ ಕೆಲಸಕಾಯ೵ಗಳಿಗೆ ಸದುಪಯೋಗವಾಗುತ್ತದೆ.  
   
ಮಾನ್ಯ ಸಚಿವರೆ.. 

ಇಷ್ಟಕ್ಕೂ ನಿಮಗಿನ್ನೂ ಸಂದೇಹಗಳಿದ್ದರೆ ದಾಖಲೆಗಳ ಸಮೇತ ಬಂದು ನಿಮಗೆ ಮನದಟ್ಟು ಮಾಡಲು ನಾವು ಸಿದ್ದರಾಗಿದ್ದೇವೆ. ಕಲಾವಿದರೇ ರಂಗಭೂಮಿಯ ಉಳಿವಿಗೆ ಮೂಲ ಆಕರ. ಅವರ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ವ್ಯಕ್ತಿಯಾಗಲಿ ಇಲ್ಲವೇ ಸಂಸ್ಥೆಯಾಗಲಿ ರಂಗಭೂಮಿಯ ಇತಿಹಾಸದಲ್ಲಿ ಖಳನಾಯಕರಾಗಿ ದಾಖಲಾಗುತ್ತಾರೆ. ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಆದರೆ ರಂಗಕರ್ಮಿಗಳು ರಂಗಭೂಮಿಯಲ್ಲೇ ಕಾರ್ಯನಿರತರಾಗಿ ಇರಬೇಕಾಗುತ್ತದೆ. ಕಲಾವಿದರಿಗೆ ಅಗೌರವ ತರುವಂತಹ ಯಾವುದೇ ಪ್ರಯತ್ನಗಳನ್ನು ಎಲ್ಲರೂ ವಿರೋಧಿಸಲೇಬೇಕಲ್ಲವೇ.. ಇಂತಹ ಯಾವುದೇ ಪ್ರತಿರೋಧಕ್ಕೆ ಅವಕಾಶವನ್ನು ಕೊಡದೇ ಈ ಹಿಂದೆ ಘೋಷಿತವಾದಂತೆ ಕಲಾವಿದರಿಗೆ ಪ್ರಶಸ್ತಿಗಳನ್ನು ಕೊಟ್ಟು ಕಲಾವಿದರ ಆತ್ಮಗೌರವವನ್ನು ಕಾಪಾಡುತ್ತೀರಿ ಹಾಗೂ ನಾಟಕ ಅಕಾಡೆಮಿಯ ಘನತೆಯನ್ನೂ ಉಳಿಸುತ್ತೀರಿ ಎಂದು ನಂಬಿದ್ದೇನೆ. 

-ಶಶಿಕಾಂತ ಯಡಹಳ್ಳಿ
ನಿಕಟಪೂವ೵ ಸದಸ್ಯ, ಕನಾ೵ಟಕ ನಾಟಕ ಅಕಾಡೆಮಿ



ರಿಜಿಸ್ಟ್ರಾರ್ ರವರು ಸಹಿ ಮಾಡಿದ ಸವ೵ ಸದಸ್ಯರ ನಡಾವಳಿ ದಾಖಲೆಗಳು ಇಲ್ಲಿವೆ