ಗುರುವಾರ, ಅಕ್ಟೋಬರ್ 17, 2019

ನೋಡುಗರನ್ನು ಬೆಚ್ಚಿ ಬೀಳಿಸಿದ ‘ಹೇಳಲು ಮರೆತ ಕಥೆಗಳು’.


ರಂಗದಮೇಲೆ ಸಿಡಿದ ಮಂಗಳಮುಖಿಯರ ಆಕ್ರೋಶ. ನಟಿಸಿದವರೆಲ್ಲಾ ಲೈಂಗಿಕ ಅಲ್ಪಸಂಖ್ಯಾತರೆಂಬುದು ಈ ನಾಟಕದ ವಿಶೇಷ..



ಮಂಗಳಮುಖಿಯರ ಬದುಕು ಬವಣೆ ಕುರಿತ ನಾಟಕಗಳು ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಶೋಷಿತ ಲೈಂಗಿಕ ಅಲ್ಪಸಂಖ್ಯಾತರ ಅಭಿವ್ಯಕ್ತಿಗೆ ರಂಗಮಾಧ್ಯಮ ವೇದಿಕೆಯಾಗುತ್ತಿರುವುದು ಸ್ವಾಗತಾರ್ಹ. ಶೇಖಡಾವಾರು ಲೆಕ್ಕದಲ್ಲಿ ಮಂಗಳಮುಖಿಯರ ಸಂಖ್ಯೆ ಕಡಿಮೆ ಇದ್ದರೂ ಅವರು ಅನುಭವಿಸುತ್ತಿರುವ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳು ಮಾತ್ರ ಅಪಾರ. ಸಮಾಜದೊಳಗಿದ್ದೂ ಬಹಿಷ್ಕೃತರಾಗಿ ಬದುಕುತ್ತಿರುವ ಈ ಸಮುದಾಯ ನುಂಗಿಕೊಳ್ಳುತ್ತಿರುವ ಅವಮಾನ ಅಗಣಿತ. ತಾವೂ ಎಲ್ಲರಂತೆ ಮನುಷ್ಯರು, ನಮ್ಮನ್ನೂ ಎಲ್ಲರಂತೆ ಪರಿಗಣಿಸಿ ಎಂದು ಹೇಳುವ ಪ್ರಯತ್ನವನ್ನು ರಂಗಪ್ರಯೋಗದ ಮೂಲಕ ಮಾಡುವ ಪ್ರಯತ್ನವೇ ಪರೆಯಾನ್ ಮರನ್ನ ಕಥೆಗಳ್, ಅಂದರೆ ಹೇಳಲು ಮರೆತ ಕಥೆಗಳು.

ಮಲಯಾಳಿ ಭಾಷೆಯ ಈ ನಾಟಕವನ್ನು ಕೇರಳದ ಎರ್ನಾಕುಲಮ್ಮಿನ ಧ್ವಯ ರಂಗತಂಡ ನಿರ್ಮಿಸಿದೆ. ಶ್ರೀಜಿತ್ ಸುಂದರಂ ನಿರ್ದೇಶಿಸಿದ ಈ ಪರೆಯಾನ್ ಮರನ್ನ ಕಥೆಗಳ್ ನಾಟಕದಲ್ಲಿ ನಟಿಸಿದವರೆಲ್ಲರೂ ಮಂಗಳಮುಖಿಯರೇ ಎನ್ನುವುದು ವಿಶೇಷ. ರಂಗನಿರಂತರ ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ 2019, ಆಕ್ಟೋಬರ್ 16ರಂದು ಪ್ರದರ್ಶನಗೊಂಡ ಈ ನಾಟಕವು ಎಲ್ಲಾ ಆಯಾಮಗಳಲ್ಲೂ ನೋಡುಗರನ್ನು ಬೆಚ್ಚಿ ಬೀಳಿಸುವಂತಿತ್ತು.

ಈ ರಂಗಪ್ರಯೋಗದಲ್ಲಿ ನಾಟಕದ ಸೂಕ್ಷ್ಮತೆಗಳಿಲ್ಲ, ರಂಗಶಿಸ್ತು ಅನ್ನುವುದೂ ಕಾಣಿಸುವುದಿಲ್ಲ. ಪಾತ್ರಗಳಿಗೆ ಆಡುವ ಭಾಷೆಯ ಏರಿಳಿತಗಳ ಮೇಲೆ ನಿಯಂತ್ರಣವಿಲ್ಲ. ರಂಗವ್ಯಾಕರಣದ ಅರಿವಿಲ್ಲ. ಹಾಡು ಸಂಗೀತಗಳ ಸ್ವರತಾಳ ವಿನ್ಯಾಸಗಳಲ್ಲಿ ಹೊಂದಾಣಿಕೆಯಿಲ್ಲ. ಅಭಿನಯದ ತಿಳಿವೂ ಬಹುತೇಕ ಕಲಾವಿದರಿಗಿಲ್ಲ, ಬೆಳಕಿನ ವಿನ್ಯಾಸ ಮೂಡ್ ಹುಟ್ಟಿಸುವಲ್ಲಿ ಸಹಕರಿಸಲಿಲ್ಲ. ಹೇಳಿಕೊಳ್ಳುವಂತಹ ಸೆಟ್ ಕೂಡಾ ಇಲ್ಲ.  ಕಥೆಯೆಂಬುದು ಮೊದಲೇ ಇಲ್ಲ, ಅಸಲಿಗೆ ಸ್ಕ್ರಿಪ್ಟ್ ಕೂಡಾ ಬರೆಯಲಾಗಿಲ್ಲ.



ಈ ಎಲ್ಲಾ ಇಲ್ಲಗಳ ನಡುವೆ ಅಲ್ಲಿರುವುದು ಲೈಂಗಿಕ ಅಲ್ಪಸಂಖ್ಯಾತರ ಹತಾಷೆಯ ರೋದನೆ, ಅಸಹಾಯಕತೆಯ ವೇದನೆ, ಕುದಿಯುವ ಸಿಟ್ಟು ಮತ್ತು ಸಿಡಿದೇಳುವಂತಹ ಅಸಹನೆ. ಸಮಾಜದಲ್ಲಿ ತಮಗೊಂದು ಅಸ್ಮಿತೆಯೆನ್ನುವುದೇ ಇಲ್ಲದೇ ಅನಾಮಿಕರಂತೆ ಬದುಕುವ ಈ ಸಮುದಾಯದವರ ಅಂತರಂಗದಲ್ಲಿ ಧಗಧಗಿಸುವ ಜ್ವಾಲಾಮುಖಿಯಂತಹ ಆಕ್ರೋಶ ಮಾತ್ರ ನಾಟಕದಾದ್ಯಂತ ಧಾವಾನಲದಂತೆ ದಾಂಗುಡಿ ಇಟ್ಟಿದೆ. ತಮ್ಮದೇ ಕುಟುಂಬದಿಂದ ಪರಿತ್ಯಕ್ತರಾಗಿ, ರಕ್ಷಿಸಬೇಕಾದ ಆರಕ್ಷಕರಿಂದ ಹಿಂಸೆ ಹಲ್ಲೆಗೊಳಗಾಗಿ, ಸಮಾಜದಿಂದ ನಿರ್ಲಕ್ಷಕ್ಕೊಳಗಾಗಿ, ಅಪಮಾನಕಾರಿ ಬದುಕನ್ನು ಬದುಕುತ್ತಿರುವ ಮಂಗಳಮುಖಿಯರ ಸಂಕಷ್ಟಗಳು ಈ ನಾಟಕದಲ್ಲಿ ಹಸಿಹಸಿಯಾಗಿ ಅನಾವರಣಗೊಂಡಿವೆ.

ಮಂಗಳಮುಖಿಯರಿಗಾಗಿಯೇ ಆಯೋಜನೆಗೊಂಡ ರಂಗಶಿಬಿರವೊಂದರಲ್ಲಿ ತಯಾರಾದ  ಕೊಲ್ಯಾಜ್ ಮಾದರಿಯ ಈ ನಾಟಕದಲ್ಲಿ ಬಿಡಿ ಬಿಡಿ ಘಟನೆಗಳನ್ನು ಕ್ರಮಬದ್ಧವಲ್ಲದ ರೀತಿಯಲ್ಲಿ ಜೋಡಿಸಲಾಗಿದೆ. ಇದರಲ್ಲಿ ನಟಿಸಿರುವವರೆಲ್ಲಾ ಟ್ರಾನ್ಸ್‌ಜಂಡರ್ ಸಮುದಾಯದವರೇ ಆಗಿರುವುದರಿಂದ ತಮ್ಮ ಮೇಲಾದ ದಮನ, ದಬ್ಬಾಳಿಕೆ, ಶೋಷಣೆಯ ಅನುಭವಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಮಂಗಳಮುಖಿಯರ ಭಗ್ನಗೊಂಡ ಸ್ವಾಭಿಮಾನ, ಛಿದ್ರಗೊಂಡ ಕನಸುಗಳು, ಅಸಹನೀಯ ಅವಮಾನ, ನುಚ್ಚುನೂರಾದ ನೀರಿಕ್ಷೆಗಳು, ನೋವು ಕೊಡುವ ನಂಬಿಕೆದ್ರೋಹ, ನಿರಾಸೆ ತರುವ ವಂಚನೆಗಳೆಲ್ಲವೂ ಚಿಕ್ಕಪುಟ್ಟ ದೃಶ್ಯಗಳಾಗಿ ನಾಟಕದಾದ್ಯಂತ ಮೂಡಿಬಂದಿವೆ. ಇದೊಂದು ಪಕ್ಕಾ ಇಪ್ರೋವೈಸೇಶನ್ ಪ್ಲೆ..


ಪ್ರತಿಯೊಂದು ಪಾತ್ರದ ಗೋಳಿಕರಣ ನೋಡುಗರನ್ನು ತಲ್ಲಣಗೊಳಿಸಿದರೆ, ರಂಗವೇದಿಕೆ ಮೇಲೆ ಹಾಕಿದ ಹೊಗೆ ಮಾತ್ರ ವೇದಿಕೆಯನ್ನು ದಾಟಿ ಪ್ರೇಕ್ಷಾಗ್ರಹವನ್ನು ಪ್ರವೇಶಿಸಿ ನೋಡುಗರ ಕಣ್ಣುಗಳಲ್ಲಿ ನೀರು ತರಿಸಿತು. ಸ್ಮಶಾನದಲ್ಲಿ ಹೆಣದ ಮುಂದೆ ಬರುವಂತಹ ದಟ್ಟ ಖಡು ವಾಸನೆ ಇಲ್ಲಿ ಪ್ರೇಕ್ಷಕರ ಮೂಗನ್ನು ತುಂಬಿ ಆಕ್ರಮಿಸಿ ಅಸಹನೀಯ ಮುಜುಗರವನ್ನುಂಟು ಮಾಡಿತು. ಮಂಗಳಮುಖಿಯರ ನೋವಿನ ಮುಂದೆ ಈ ಹೊಗೆ ಮತ್ತು ವಾಸನೆಗಳೂ ಸಹ ಅಲಕ್ಷಕ್ಕೊಳಗಾಗಿದ್ದು ಸೋಜಿಗ. ಹೀಗೆ ಪ್ರೇಕ್ಷಕರ ಪಂಚೇಂದ್ರಿಯಗಳ ಮೇಲೆ ಪ್ರಹಾರ ಮಾಡುವುದು ಸರಿಯಲ್ಲ ಎನ್ನುವುದರ ಅರಿವು ನಿರ್ದೇಶಕರಿಗಿದ್ದರೆ ನಾಟಕ ಒಂದಿಷ್ಟು ಸಹನೀಯವಾಗಬಲ್ಲುದು.

ಇಲ್ಲಿ ಎಲ್ಲವೂ ಅತೀ ಎನ್ನುವಷ್ಟಿವೆ. ನಟ-ನಟಿಯರ ಉಡುಪುಗಳ ಬಣ್ಣಗಳು ನೋಡುಗರ ಕಣ್ಣಿಗೆ ರಾಚುವಂತಿವೆ. ವರ್ಣಾಲಂಕಾರ ಅಗತ್ಯಕ್ಕಿಂತ ಹೆಚ್ಚಿಗೇ ಮಾಡಲಾಗಿದೆ. ಬೆಳಕು ತನ್ನ ಮೋಹಕತೆ ಕಳೆದುಕೊಂಡು ತೀಕ್ಷ್ಣತೆಯನ್ನು ಹೆಚ್ಚಿಸಿದೆ. ಅವರ ಸಾಂಪ್ರದಾಯಿಕ ಪೂಜೆ ಆಚರಣೆಗಳೂ ಸಹ ರಂಗವೇದಿಕೆಗೆ ಭಾರ. ಮಾತುಗಳಿವೆಯೇ ಹೊರತು ಸಂಭಾಷಣೆಗಳಾಗಿಲ್ಲ. ಇಡೀ ನಾಟಕವೇ ವೈಬ್ರೆಂಟ್ ಆಗಿದೆ,  ವೈಲಂಟ್ ಆಗಿದೆ,  ಸಿಕ್ಕಾಪಟ್ಟೆ ಲೌಡ್ ಆಗಿದೆ. ಹೌದು.. ರೋಸಿ ಹೋದ ನಿರ್ಲಕ್ಷಿತ ಸಮುದಾಯ ಹೀಗೇ ಇರುವುದು ಎಂಬುದು ನಿಜ ಇರಬಹುದಾದರೂ ಅದನ್ನು ರಂಗವೇದಿಕೆಯಲ್ಲಿ ಪ್ರಸ್ತುತ ಪಡಿಸುವಾಗ ರಂಗಸೂಕ್ಷ್ಮತೆಗಳನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರುವುದು ಸೂಕ್ತ. ನಾಟಕ ಕಲಾತ್ಮಕತೆಯ ಜೊತೆಗೆ ಭಾವನೆಗಳನ್ನು ಸ್ಪುರಿಸಬೇಕೆ ಹೊರತು ಹಸಿಹಸಿಯಾಗಿ ಭಾವಾತಿರೇಕದ ತಾರಕವನ್ನು ತೋರುವುದು ತರವಲ್ಲ. ಅವರಲ್ಲಿ ಆತಂಕವಿದೆ, ಅಕ್ರೋಶವಿದೆ ಎಂಬುದೂ ದಿಟ. ಆದರೆ ಅವುಗಳನ್ನು ವ್ಯಕ್ತಪಡಿಸುವಾಗ ನಿಯಂತ್ರಣವನ್ನೂ ಹೊಂದಬೇಕಾದದ್ದನ್ನು ರಂಗಕಲೆ ಅಪೇಕ್ಷಿಸುತ್ತದೆ. ಬರೀ ಅತಿಯಾದ ಸಿಟ್ಟು, ಆಕ್ರೋಶ, ಘೋಷಣೆಗಳು ಬೀದಿ ನಾಟಕದಲ್ಲಿ ಇರಬಹುದಾಗಿದೆಯೇ ಹೊರತು ವೇದಿಕೆಯ ನಾಟಕಗಳಲ್ಲಿ ಅಲ್ಲ.


ನಾಟಕದ ಕೊನೆಕೊನೆಗಂತೂ ನಟರೆಲ್ಲರೂ ಒಬ್ಬೊಬ್ಬರಾಗಿ ಪ್ರೇಕ್ಷಕರತ್ತಲೇ ತೋರು ಬೆರಳು ತೋರಿ ಆರೋಪಗಳ ಬಾಣಗಳನ್ನು ಪ್ರಯೋಗಿಸುತ್ತಾರೆ. ಅದಕ್ಕೆ ಅದೇ ಸಮುದಾಯದ ಕೆಲವಾರು ಪ್ರೇಕ್ಷಕರು ಚೆಪ್ಪಾಳೆ ಹೊಡೆದು ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಾರೆ. ಪ್ರೇಕ್ಷಗ್ರಹದಲ್ಲಿದ್ದವರೆಲ್ಲಾ ಮಂಗಳಮುಖಿಯರ ವಿರೋಧಿಗಳು, ಅವರಿಂದಲೇ ತಮಗೆ ಸಂಕಷ್ಟಗಳು ಬಂದಿರುವುದು ಅನ್ನುವ ರೀತಿಯಲ್ಲಿ ನಟರು ತಮ್ಮೆಲ್ಲಾ ಅಂತರಂಗದ ಆಕ್ರೋಶವನ್ನು  ನಡೆನುಡಿಗಳಲ್ಲಿ ಹೊರಹಾಕುತ್ತಾ  ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು  ಪ್ರೇಕ್ಷಕರ ಮೇಲೆ ಪ್ರಯೋಗಿಸುತ್ತಾರೆ. ಇದು ನಿಜಕ್ಕೂ ಅತಿರೇಕದ ನಡೆಯಾಗಿದೆ. ಪ್ರೇಕ್ಷಕರೆಲ್ಲರೂ ಲೈಂಗಿಕ ಅಲ್ಪ ಸಂಖ್ಯಾತರ ವಿರೋಧಿಗಳೂ ಅಲ್ಲಾ, ಇವರ ವೇದನೆಗಳಿಗೆ ಕಾರಣೀಭೂತರೂ ಅಲ್ಲಾ. ಯಾವುದೇ ರಂಗಕರ್ಮಿ ಕಲಾವಿದರು ಹಾಗೂ ಕಲಾಪೋಷಕರಿಗೆ ಮಂಗಳಮುಖಿಯರ ಮೇಲೆ ಯಾವ ತಕರಾರೂ ಇಲ್ಲ.

ಆದರೆ.. ಬಿಚ್ಚಿದ ತೋರುಬೆರಳಿನ ಕೆಳಗಿನ ಮುಚ್ಚಿದ ಮೂರು ಬೆರಳು ತಮ್ಮತ್ತಲೇ ನೋಡುತ್ತವೆ ಎನ್ನುವುದರ ಅರಿವೂ ಇರದೇ ಸಮಾಜವೇ ಸರಿ ಇಲ್ಲಾ, ರೇಪಿಸ್ಟರು, ಪಾಪಿಸ್ಟರು, ಹಿಂಸಕರು ಇದ್ದಾರೆ ಎಂಬುದೇ ಈ ನಾಟಕ ಮಾಡಿದವರ ನಂಬಿಕೆಯಾಗಿದ್ದರೆ ತಮ್ಮ ಸಮುದಾಯದ ಒಳಗೂ ಇವೆಲ್ಲವೂ ಇವೆ ಎನ್ನುವುದರ ಪರಿಜ್ಞಾನ ಇರಬೇಕಾಗುತ್ತದೆ. ಕಳ್ಳರು ಸುಳ್ಳರು ಮೋಸಗಾರರು ವಂಚಕರು ಪೀಡಕರುಗಳೂ ಸಹ ಈ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲೂ ಇದ್ದಾರೆ. ಅವರ ಪೀಡನೆಗೆ ಒಳಗಾದವರು ಮಂಗಳಮುಖಿಯರ ಮುಖ ಕಂಡರೆ ಮುಖ ತಿರುಗಿಸುತ್ತಾರೆ. ತಾವು ಹಾಗಲ್ಲವೆಂದು ತೋರುವ ಪ್ರಯತ್ನಗಳನ್ನು ಈ ಸಮುದಾಯ ಮೊದಲು ಮಾಡಬೇಕಾಗಿದೆ. ಸಮಾಜವೇ ಆಗಲಿ ಅಥವಾ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವೇ ಆಗಿರಲಿ ಎಲ್ಲಾ ಕಡೆಯೂ ಅಸಹನೀಯ ಘಟನೆಗಳು ನಡೆಯುತ್ತವೆ. ಒಬ್ಬರು ಇನ್ನೊಬ್ಬರ ಮೇಲೆ ಆರೋಪಿಸಿ ಏನೂ ಪ್ರಯೋಜನವಿಲ್ಲ. ಈ ರೀತಿಯ ತರ್ಕವಿಲ್ಲದ ಆರೋಪಗಳು ಇನ್ನಷ್ಟು ಅಸಹನೆಯನ್ನು ಹುಟ್ಟಿಸುತ್ತವೆ. ಸಮಾಜ ಮತ್ತು ಸಮುದಾಯದ ನಡುವೆ ಅಘೋಷಿತ ಗೋಡೆಯನ್ನು ಕಟ್ಟುತ್ತವೆ. ಆ ಗೋಡೆಯನ್ನು ಬೀಳಿಸಬೇಕಾದರೆ ಅದು ಮಾನವೀಯತೆಯಿಂದ ಮಾತ್ರ ಸಾಧ್ಯ. ಬೇರೆಯವರಿಂದ ಬಯಸುತ್ತಿರುವ ಆ ಮಾನವೀಯ ಕಳಕಳಿಯನ್ನು ಈ ಸಮುದಾಯದವರೂ ಸಹ ತೋರಿದರೆ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬಹುದಾಗಿದೆ. ಲಿಂಗ ತಾರತಮ್ಯವನ್ನು ದೂರಮಾಡಲು ಮನುಷ್ಯತ್ವದ ಅಗತ್ಯತೆಯನ್ನು ಹೇಳಿದ್ದರೆ ಈ ನಾಟಕ ಸಾರ್ಥಕವಾಗುತ್ತಿತ್ತು. ದಮನದಿಂದ ಹೊರಬರುವ ದಾರಿಗಳನ್ನು ಕಂಡುಕೊಳ್ಳುವ ಸಾಧ್ಯತೆಗಳನ್ನು ರಂಗಪ್ರಯೋಗ ಸೂಚಿಸಿದ್ದರೆ ಚೆನ್ನಾಗಿತ್ತು. 
 
ಶ್ರೀಜಿತ್ ಸುಂದರಂ
ಆದರೂ ನಾಟಕದ ಕೊನೆಗೆ ಈ ಮಂಗಳಮುಖಿಯರ ಮೇಲಿನ ದಮನ ಶೋಷಣೆಗೆ ಕಾರಣ ಆ ಸಮುದಾಯವೋ,  ಇಲ್ಲವೇ ಸಮಾಜವೋ ಅಥವಾ ಆ ದೇವರೋ..? ಎನ್ನುವ ಪ್ರಶ್ನೆಯನ್ನು ಈ ನಾಟಕ ಪ್ರೇಕ್ಷಕರ ಮುಂದಿಡುತ್ತದೆ. ದೇವರ ಮಾತು ಬಿಡಿ. ಈ ಶೋಷಿತ ಸಮುದಾಯ ಹಾಗೂ ಸಮಾಜದ ನಡುವಿನ ಕಂದರವನ್ನು ಮುಚ್ಚಿ ಬದುಕನ್ನು ಸುಂದರಗೊಳಿಸಬೇಕೆಂದರೆ ಈ ಶೋಷಿತ ಸಮುದಾಯಕ್ಕೆ  ಶಿಕ್ಷಣದ ಅಗತ್ಯತೆ ಇದೆ. ಕೆಲವೇ ಕೆಲವು ಮಂಗಳಮುಖಿಯರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡಿರುವ ಮಾದರಿಗಳನ್ನು ಸಮುದಾಯವು ಅನುಕರಿಸಬೇಕಾಗಿದೆ. ಪೀಡನೆಗೆ ಪೀಡನೆ, ಶೋಷಣೆಗೆ ಶೋಷಣೆ, ಹಿಂಸೆಗೆ ಹಿಂಸೆ ಎಂಬ ಮನೋವಿನ್ಯಾಸವೇ ಬದಲಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ನಾಟಕದ ನಿಮಾತೃಗಳು ಯೋಚಿಸಬೇಕಾಗಿದೆ. ಸಮಾಜದ ಮನಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಕ್ಕಿಂತಾ ತಮ್ಮ ಸಮುದಾಯದವರ ಮನಸ್ಥಿತಿಯನ್ನು ಬದಲಾಯಿಸುವತ್ತ  ಚಿತ್ತ ಹರಿಸಬೇಕಿದೆ. ಅಲ್ಪಸಂಖ್ಯಾತ ಸಮುದಾಯದವರನ್ನು ಎಚ್ಚರಿಸುವ, ಅವರಲ್ಲಿ ಅರಿವನ್ನು ಮೂಡಿಸುವ,  ಮಂಗಳಮುಖಿ ಸಮುದಾಯದಲ್ಲಿ ಮಡುಗಟ್ಟಿರುವ ಮೌಢ್ಯಗಳನ್ನು ಮೀರುವಂತಹ, ಅಲ್ಲಿರುವ ತಾರತಮ್ಯವನ್ನು ದಿಕ್ಕರಿಸುವಂತಹ, ಸ್ವಾವಲಂಬಿ ಬದುಕನ್ನು ಕಟ್ಟುವಂತಹ ಉದ್ದೇಶಕ್ಕೆ ಪೂರಕವಾಗಿ ರಂಗಮಾಧ್ಯಮವನ್ನು ಬಳಸಿಕೊಂಡರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಬಹುದಾಗಿದೆ.  


ನಾಟಕದ ಕಾರಣ ಪರಿಣಾಮಗಳೇನೇ ಇರಲಿ ರಂಗಭೂಮಿಯಿಂದ ದೂರವೇ ಇದ್ದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ನಾಟಕ ನಿರ್ಮಿಸಲು, ನಟಿಸಲು, ಸಂಘಟಿಸಲು ಪ್ರಯತ್ನಿಸುತ್ತಿರುವುದೇ ಆಶಾದಾಯಕವಾದ ಸಂಗತಿ. ರಂಗಭೂಮಿಯ ವ್ಯಾಪ್ತಿ ಪ್ರದೇಶದಿಂದ ದೂರವೇ ಉಳಿದಿದ್ದ ಈ ಸಮುದಾಯದವರು ರಂಗಮುಖೇನ ತಮ್ಮ ಆತಂಕಗಳನ್ನು  ತೋರಿಸಲು ಆಸಕ್ತಿ ತೋರಿಸುತ್ತಿರುವುದು ಅಭಿನಂದನೀಯ. ಇಂತಹ ನಿರ್ಲಕ್ಷಿತ ಸಮುದಾಯದವರ ನಾಟಕವನ್ನು ಆಹ್ವಾನಿಸಿ ನಾಟಕ ಪ್ರದರ್ಶನಕ್ಕೆ ವೇದಿಕೆಯನ್ನು ವದಗಿಸಿಕೊಟ್ಟ ರಂಗನಿರಂತರ ರಂಗಸಂಘಟನೆಯ ರಂಗಕಾಯಕ ಸ್ತುತ್ಯಾರ್ಹ.
 

-ಶಶಿಕಾಂತ ಯಡಹಳ್ಳಿ    


ಚಿತ್ರಗಳ ಕೃಪೆ – ತಾಯಿ ಲೊಕೇಶ್

ಬುಧವಾರ, ಅಕ್ಟೋಬರ್ 16, 2019

ಕಣ್ಮನ ಸೆಳೆದ ಮರಾಠಿ ನಾಟಕ “ಸಂಗೀತ್ ದೇವ್‌ಬಭಾಲಿ.”





ಭಾಷಾ ಸಂಹನದ ಸಮಸ್ಯೆಯಿಂದಾಗಿ ಮರಾಠೀಯೇತರ ಪ್ರೇಕ್ಷಕರ ಅರಿವಿಗೆ ಈ ನಾಟಕದ ವಸ್ತು ವಿಷಯ ಸಂಪೂರ್ಣ ದಕ್ಕಲಿಲ್ಲವಾದರೂ ಇಡೀ ರಂಗಪ್ರಯೋಗ ಕೊಟ್ಟ ಅನುಭೂತಿ ಮಾತ್ರ ಅನನ್ಯವಾಗಿತ್ತು.  ಪಾತ್ರಗಳ ಮನೋಜ್ಞ ಅಭಿನಯವಂತೂ ನೋಡುಗರ ಚಿತ್ತಭಿತ್ತಿಯಲ್ಲಿ  ಚಲಿಸುವ ಚಿತ್ತಾರಗಳನ್ನು ಚಿತ್ರಿಸಿದಂತಿತ್ತು. ನಾಟಕದಾದ್ಯಂತ ಬಳಸಲಾದ ಬಣ್ಣ ಬೆಳಕುಗಳಂತೂ ಪ್ರೇಕ್ಷಕರ ಕಣ್ಮನ ಸೂರೆಗೊಂಡಿತು. ನಾಟಕದಲ್ಲಿ ಕಥೆಯನ್ನು ಹುಡುಕುವ ಪ್ರೇಕ್ಷಕರ ಮನಸುಗಳಿಗೆ ಕಥೆಯನ್ನೂ ಮೀರಿದ ಅನುಭವವನ್ನು ಕಟ್ಟಿಕೊಡಲಾಯಿತು. ಅದು ಮರಾಠಿಯ ಜನಪ್ರೀಯ ನಾಟಕ ಸಂಗೀತ್ ದೇವ್‌ಬಭಾಲಿ ರಂಗಪ್ರಯೋಗ.

ಭದ್ರಕಾಳಿ ಪ್ರೊಡಕ್ಷನ್ಸ್‌ರವರ ನಿರ್ಮಾಣದ ಸಂಗೀತ್ ದೇವ್ ಬಭಾಲಿ ನಾಟಕವನ್ನು ಪ್ರಾಜಕ್ತ್ ದೇಶ್‌ಮುಖ್‌ರವರು ನಿರ್ದೇಶಿಸಿದ್ದು ರಂಗನಿರಂತರ ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಎರಡನೇಯ ದಿನವಾದ 2019, ಅಕ್ಟೋಬರ್ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರ ಮನಸೂರೆಗೊಂಡಿತು.

ಇಡೀ ನಾಟಕದಲ್ಲಿ ಹೇಳಿಕೊಳ್ಳುವಂತಹ ಕಥಾನಕವೇನಿಲ್ಲ, ಇಬ್ಬರು ಮಹಿಳೆಯರನ್ನು ಹೊರತು ಪಡಿಸಿ ಬೇರೆ ಪಾತ್ರಗಳಿಲ್ಲ. ಕುತೂಹಲಕಾರಿ ಸಂದರ್ಭಗಳಿಲ್ಲ,  ಬದಲಾಗುವ ಸನ್ನಿವೇಶಗಳಿಲ್ಲ. ದೃಶ್ಯವೈಭವಗಳಿಲ್ಲ,  ಸಿದ್ದ ಮಾದರಿ ನಾಟಕಗಳ ಸೂತ್ರಗಳೂ ಇಲ್ಲ. ಕನ್ನಡದ ಪ್ರೇಕ್ಷಕರಿಗೆ ಮರಾಠಿ ಭಾಷೆಯ ಸಂವಹನವೂ ಸಾಧ್ಯವಾಗಲಿಲ್ಲ.. ಆದರೂ ಇಬ್ಬರೇ ಪಾತ್ರದಾರಿಗಳ ಈ ನಾಟಕ ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಕದಲದಂತೆ ಕೂಡಿಸಿ ನೋಡಿಸಿಕೊಂಡು ಹೋಗಿದ್ದಂತೂ ವಿಸ್ಮಯದ ಸಂಗತಿ.



ಮಹಾರಾಷ್ಟ್ರದಲ್ಲಿರುವ ಪಂಡರಾಪುರದ ಪಾಂಡುರಂಗ ವಿಠ್ಠಲ ಬಲು ಪ್ರಸಿದ್ಧ ಜನಪ್ರೀಯ ದೇವರು. ಪಾಂಡುರಂಗನ ಪರಮ ಭಕ್ತ ಸಂತ ತುಕಾರಾಮ್ ಅಂತೂ ಮರಾಠಿ ಭಾಷಿಕರ ಸ್ಮರಣೆಯಲ್ಲಿ ಚಿರಸ್ಥಾಯಿಯಾಗಿ ನೆಲೆಗೊಂಡ ಹೆಸರು.  ಈ ಭಗವಂತ ಮತ್ತು ಭಕ್ತನ ಕುರಿತು ದಂತಕತೆಗಳು ಬೇಕಾದಷ್ಟಿವೆ. ಅಂತಹುದೊಂದು ಪವಾಡಸದೃಶ ಸನ್ನಿವೇಶದ ಎಳೆಯನ್ನು ವಿಸ್ತರಿಸಿ ಪ್ರಾಜಕ್ತ್ ದೇಶಮುಖರವರು ಈ ವಿಶಿಷ್ಟ ನಾಟಕವನ್ನು ರಚಿಸಿದ್ದಾರೆ. ಸಂತ ತುಕಾರಾಮ್ ಅಭಂಗಗಳನ್ನು (ಹಾಡುಗಳು) ರಚಿಸಿ ಹಾಡುತ್ತಾ ಕಾಡುಮೇಡುಗಳಲ್ಲಿ ಪಾಂಡುರಂಗನನ್ನು ಹುಡುಕುತ್ತಾ ಅಲೆಯುತ್ತಿರುವಾಗ ತುಂಬು ಬಸುರಿಯಾದ ಆತನ ಹೆಂಡತಿ ಅವಲಿ ಮನೆಯಲ್ಲಿ ಒಬ್ಬಳೇ ಯಾತನೆ ಪಡುತ್ತಿರುತ್ತಾಳೆ. ಅವಲಿಯ ಪಾದಕ್ಕೆ ಮುಳ್ಳೊಂದು ಚುಚ್ಚಿ ಗಾಯವಾದರೆ ಪಾಂಡುರಂಗನ ಪಾದದಲ್ಲಿ ರಕ್ತ ಸುರಿದು ನೋವಾಯಿತಂತೆ. ಅದನ್ನು ನೋಡಿದ ಪಾಂಡುರಂಗನ ಪತ್ನಿ ರುಕ್ಮಿಣಿ (ರುಕ್ಕೂಬಾಯಿ) ದೇವರ ಅಂಗಾಲಿಗಾದ ಗಾಯಕ್ಕೆ ಕಾರಣರಾದವರನ್ನು ಹುಡುಕಿಕೊಂಡು ತುಕಾರಾಮನ ಮನೆಗೆ ಬಂದು ತುಕಾರಾಮನ ಹೆಂಡತಿಯ ಸೇವೆ ಮಾಡಿ ಅವಳ ಕಾಲಿನ ಗಾಯ ವಾಸಿ ಮಾಡಿ ಹೋಗುತ್ತಾಳೆ ಎಂಬುದೊಂದು ದಂತಕತೆ.

ಇದನ್ನೇ ಆಧರಿಸಿ ಭಗವಂತ ಪಾಂಡುರಂಗನ ಪತ್ನಿ ಹಾಗೂ ಭಕ್ತ ತುಕಾರಾಮನ ಹೆಂಡತಿ ಈ ಇಬ್ಬರನ್ನೇ ಇಟ್ಟುಕೊಂಡು ಇಡೀ ನಾಟಕವನ್ನು ಕಟ್ಟಿ ಕೊಡಲಾಗಿದೆ. ಇದೊಂತರ ದ್ವಿಪಾತ್ರಾಭಿನಯವಾದರೂ ಎಲ್ಲಿಯೂ ಬೋರ್ ಹೊಡಿಸದೇ ನೋಡುಗರಿಗೆ ವಿಶಿಷ್ಟವಾದ ಅನುಭವವನ್ನು ಕೊಟ್ಟಿತು. ಇಡೀ ನಾಟಕದ ಕೇಂದ್ರ ಬಿಂದು ಪಾಂಡುರಂಗ ವಿಠ್ಠಲ. ಅವಲಿ ಮತ್ತು ರುಕ್ಕುಬಾಯಿ ಇಬ್ಬರೂ ಪಾಂಡುರಂಗನಿಗಾಗಿ ಹಂಬಲಿಸುವವರೇ.  ಆವಲಿ ನಿಂದಾಸ್ತುತಿಯ ಮೂಲಕ ದೇವನನ್ನು ಆರಾಧಿಸಿದರೆ, ರುಕ್ಕುಬಾಯಿ ಪತಿಯ ಒಲುಮೆಗೆ ಹಾತೊರೆಯುತ್ತಿರುವವಳು. ಪತಿಯಿಂದ ಅಗಲಿ ಒಂಟಿಯಾಗಿದ್ದ ಆವಲಿಗೆ ಬಾಹ್ಯ ಗಾಯವಾದರೆ, ಗಂಡನ ಪ್ರೀತಿಗಾಗಿ ಹಂಬಲಿಸುವ ರುಕ್ಕುವಿಗೆ ಅಂತರಂಗದ ಮನದಗಾಯ. ಆವಲಿಯ ಗಾಯ ವಾಸಿ ಮಾಡುವ ಪ್ರಯತ್ನದಲ್ಲಿ ತನ್ನ ಅಂತರಂಗದ ಗಾಯ ವಾಸಿಮಾಡಿಕೊಳ್ಳಲು ರುಕ್ಕು ಬಯಸುತ್ತಾಳೆ. ಪತಿಯ ಸಾಂಗತ್ಯಕ್ಕಾಗಿ ಜೊತೆಗೆ ಭಗವಂತನ ಕೃಪೆಗಾಗಿ ಹಾತೊರೆಯುತ್ತಿದ್ದ ಈ ಎರಡು ಹೆಣ್ಣು ಜೀವಗಳ ತಳಮಳಗಳನ್ನು ಇಡೀ ನಾಟಕ ಅನಾವರಣಗೊಳಿಸುತ್ತದೆ.



ಭಕ್ತಿಮಾರ್ಗದ ಶಕ್ತಿಯನ್ನು ತೋರುವ, ಭಕ್ತಿಗೆ ಭಗವಂತ ಒಲಿಯುವನೆಂಬ ನಂಬಿಕೆಯನ್ನು ಗಟ್ಟಿಗೊಳಿಸುವ ಹಾಗೂ ನಿಜ ಭಕ್ತರ ಸೇವೆಗೆ ಸ್ವತಃ ದೇವರೇ ಬರುತ್ತಾನೆಂಬ ವಿಶ್ವಾಸವನ್ನು ಹೆಚ್ಚಿಸುವಂತಹ ಅನೇಕಾನೇಕ ದಂತಕತೆಗಳು ನಮ್ಮ ಪುರಾಣೇತಿಹಾಸದಲ್ಲಿ ಹಾಸುಹೊಕ್ಕಾಗಿವೆ. ದಮನಕ್ಕೊಳಗಾದ ಹೇಮರೆಡ್ಡಿ ಮಲ್ಲಮ್ಮಳ ಮನೆಗೆ ಬರುವ ಮಲ್ಲಿಕಾರ್ಜುನ ಮನೆಯ ಕೆಲಸಗಳನ್ನೆಲ್ಲಾ ಮಾಡಿದ್ದು, ಹಿಂದಿನ ಕಲ್ಲಿನ ಗೋಡೆ ಒಡೆದು ಹಿಂತಿರುಗಿ ನಿಂತು ಭಕ್ತ ಕನಕನಿಗೆ ಕೃಷ್ಣ ದರ್ಶನ ಕೊಟ್ಟಿದ್ದು.. ಇಂತಹ ಪವಾಡಗಳಿಗೇನೂ ಕಡಿಮೆಯಿಲ್ಲ. ನಂಬಿಕೆಯ ಅತಿರೇಕದಲ್ಲಿ ಮಿಂದೇಳುವ ಭಕ್ತರಿಗೆ ಇಂತಹ ಪವಾಡ ಪುಣ್ಯಕಥೆಗಳು ಭ್ರಮೆಯ ಲೋಕವನ್ನೇ ಸೃಷ್ಟಿಸಬಲ್ಲುದು, ಜೊತೆಗೆ ತಲ್ಲಣಗೊಂಡ ಮನಸುಗಳಿಗೆ ಸಾಂತ್ವನವನ್ನೂ ಹೇಳಬಲ್ಲವು.  ವೈಚಾರಿಕತೆಯನ್ನು ಪಕ್ಕಕ್ಕಿಟ್ಟು ರೂಢಿಗತ ಪುರೋಹಿತಶಾಹಿ ಪ್ರಣೀತ ನಂಬಿಕೆಗಳಿಗೆ ಇಂಬು ಕೊಡುವಂತಹ ಸಾಧ್ಯತೆಗಳೂ ಸಹ ಈ ನಾಟಕದಲ್ಲಿವೆಯಾದರೂ ಭಗವಂತನನ್ನು ರೂಪಕವಾಗಿಟ್ಟುಕೊಂಡು ಪ್ರೀತಿಗಾಗಿ ಹಂಬಲಿಸುವ ಇಬ್ಬರು ಮಹಿಳೆಯರ ಸಂಕಟಗಳನ್ನು ಹೇಳುವಲ್ಲಿ ಈ ನಾಟಕ ಯಶಸ್ವಿಯಾಗಿದೆ.

ಪುರುಷಪ್ರಧಾನ ಪರಂಪರೆಯಲ್ಲಿ ಭಗವಂತನ ಹೆಂಡತಿಯೇ ಇರಲಿ, ಇಲ್ಲವೇ ಭಕ್ತನ ಪತ್ನಿಯೇ ಆಗಿರಲಿ ಇಬ್ಬರೂ ಸಹ ಸಂಕಷ್ಟ ವೇದನೆಗಳಿಗೆ ತುತ್ತಾಗುತ್ತಾರೆ ಹಾಗೂ ಅದರಿಂದ ಹೊರಬರಲು ದೇವರಲ್ಲಿ ಮೊರೆಯಿಡಬೇಕಾಗುತ್ತದೆ ಎಂಬುದೂ ಈ ನಾಟಕದ ಒಳಾರ್ಥವಾದಂತಿದೆ. ತನ್ನ ಪತಿ ತುಕಾರಾಂ ತನ್ನಿಂದ ಅಗಲಿ ಹೋಗಲು ಕಾರಣವಾದ ಪಾಂಡುರಂಗನನ್ನು ನಿಂದಿಸುತ್ತಲೇ ಸಂಕಷ್ಟ ಪರಿಹಾರಕ್ಕೆ ಅದೇ ದೇವರನ್ನೇ ಆರಾಧಿಸುವ ಅವಲಿ ಹಾಗೂ ತನ್ನ ಪತಿಯ ಒಲುಮೆಗಾಗಿ ಭಕ್ತರ ಪಾದಸೇವೆ ಮಾಡಲೂ ಸಿದ್ದಳಾಗಿರುವ ರುಕ್ಕುಬಾಯಿ ಈ ಇಬ್ಬರೂ ಸಹ ಆರಾಧಕ ಮನಸ್ಥಿತಿಯುಳ್ಳವರೇ. ಇಬ್ಬರೂ ತಮ್ಮ ವೇದನೆಗೆ ಭಗವಂತನ ಕೃಪಾಕಟಾಕ್ಷವನ್ನು ಬಯಸುವವರೇ.  ತಮ್ಮಿಂದ ವಿಮುಖರಾದ ಗಂಡಂದಿರ ಸಾಂಗತ್ಯ ಪಡೆಯಲು ಹಾತೊರೆಯುವ ಮಹಿಳೆಯರ ಅಂತರಂಗದ ತಲ್ಲಣಗಳು ಈ ನಾಟಕದ ಸಾರವಾಗಿದೆ. ಇದೊಂದು ಭಕ್ತಿಮಾರ್ಗದ ದೃಷ್ಟಾಂತವೆಂದು ಮೇಲ್ನೋಟಕ್ಕೆ ಹೇಳಬಹುದಾದರೂ ಈ ನಾಟಕದ ಅಂತರಂಗದಲ್ಲಿ ಮಹಿಳೆಯರ ನೋವು, ಹತಾಷೆ, ಒಂಟಿತನ ಹರಳುಗಟ್ಟಿದೆ. ಪತಿ ದೂರಾದರೂ ಪತ್ನಿ ಮಾತ್ರ ಆತನ ಒಲುಮೆಗಾಗಿ ತಹತಹಿಸುವ, ಸಾಂಗತ್ಯಕ್ಕಾಗಿ ಆರಾಧಿಸುವ ಪರಿಯನ್ನು ಪುರುಷಪ್ರಧಾನ ವ್ಯವಸ್ಥೆ ಮಹಿಳೆಗೆ ಅನಿವಾರ್ಯವಾಗಿಸಿದೆ. ಮಹಿಳೆಯರಲ್ಲಿ ಆ ನಂಬಿಕೆಯನ್ನು ಗಟ್ಟಿಗೊಳಿಸಲು ಇಂತಹ ಪುರಾಣಗಳನ್ನು ಹುಟ್ಟಿಸಿ, ದಂತಕಥೆಗಳನ್ನು ಸೃಷ್ಟಿಸಿ ಮಹಿಳೆಯರನ್ನು ನಂಬಿಕೆಗಳಿಗೆ ಕಟ್ಟಿಹಾಕುವ ಹುನ್ನಾರ ಪರಂಪರೆಯಿಂದ ಮುಂದುವರೆಯುತ್ತಾ ಬಂದಿದೆ. ಇಂತಹ ಆಶಯಗಳೂ ಸಹ ಈ ನಾಟಕದೊಳಗೆ ಅಡಗಿ ಕುಳಿತಿವೆ.



ಈ ಎಲ್ಲಾ ತರ್ಕ ತಾತ್ವಿಕತೆಗಳನ್ನೆಲ್ಲಾ ಬದಿಗಿಟ್ಟು ಕೇವಲ ನಾಟಕವನ್ನು ನಾಟಕವಾಗಿ ನೋಡುತ್ತಾ ಹೋದರೆ ಮನಸಿಗೆ ಹಿತಾನಂದವನ್ನು ತಂದುಕೊಳ್ಳಬಹುದಾಗಿದೆ. ಇಡೀ ನಾಟಕದಲ್ಲಿ ಅತ್ಯಂತ ಗಮನಸೆಳೆಯುವುದು ನಟನೆ. ಅವಲಿಯಾಗಿ ಶುಭಾಂಗಿ ಸದಾವವಾರ್ತೆ ಹಾಗೂ ರುಕ್ಕುಬಾಯಿಯಾಗಿ ಮಾನಸಿ ಜೋಶಿ ಅದ್ಬುತವಾದ ಅಭಿನಯ ನೀಡಿದ್ದಾರೆ. ಪಾತ್ರಗಳೇ ತಾವಾಗಿದ್ದಾರೆ. ಅಭಿನಯ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿದ್ದಾರೆ.  ಪ್ರದೀಪ್ ಮುಳೆಯವರ ಸ್ಥಿರ ರಂಗಸಜ್ಜಿಕೆ ವಿನ್ಯಾಸ ಅನನ್ಯವಾಗಿತ್ತು.  ಪ್ರಫುಲ್ಲ ದೀಕ್ಷಿತ್‌ರವರ ಬೆಳಕಿನ ವಿನ್ಯಾಸ ಇಡೀ ನಾಟಕಕ್ಕೆ ಕಾವ್ಯಾತ್ಮಕತೆಯನ್ನು ಕಟ್ಟಿಕೊಟ್ಟಿದೆ. ಸಮಯದ ವ್ಯತ್ಯಾಸ, ಹರಿಯುವ ನೀರಿನ ಹರಿವು, ನಟರ ಭಾವತೀವ್ರತೆಗಳನ್ನೆಲ್ಲಾ ಬೆಳಕಿನಲ್ಲಿ ಒಡಮೂಡಿಸಿ ಅಚ್ಚರಿಯನ್ನು ಸೃಷ್ಟಿಸಲಾಗಿದೆ. ಸಂತ ತುಕಾರಾಮ್‌ರವರ ಅಭಂಗ್ ಗೀತೆಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಲಾಗಿದೆ. ಆನಂದ ಓಕ್ ರವರ ಸಂಗೀತ ಸಂಯೋಜನೆ ಕೇಳುಗರ ಕಿವಿಗೆ ಮಾಧುರ್ಯವನ್ನು ಹರಿಸಿದೆ. ಪಾತ್ರದಾರಿಗಳೇ ಹಾಡುಗಳನ್ನು ನಟಿಸುತ್ತಲೇ ಹಾಡಿದ್ದು ವಿಶೇಷ. ಹಾಡುಗಳನ್ನು ಹೆಚ್ಚಾಗಿ ಬಳಸಿದ್ದು ಇಡೀ ರಂಗಪ್ರಯೋಗವೇ ಸಂಗೀತ ಪ್ರಧಾನವಾಗಿದೆ.

ಇಂತಹ ಅಪರೂಪದ ನಾಟಕವನ್ನು ಕಟ್ಟಿಕೊಟ್ಟು ಯುವನಿರ್ದೇಶಕ ಪ್ರಾಜಕ್ತ್ ದೇಶಮುಖರವರಿಗೆ ವಂದನೆಗಳು. ಈಗಾಗಲೇ 275ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡ ಈ ಮರಾಠಿ ನಾಟಕವನ್ನು ಕರೆಸಿ ಕನ್ನಡಿಗರಿಗೆ ತೋರಿಸಿದ ರಂಗನಿರಂತರದ ಸಂಘಟಕರಿಗೆ ಅಭಿನಂದನೆಗಳು.  
   
-ಶಶಿಕಾಂತ ಯಡಹಳ್ಳಿ      

ಚಿತ್ರಗಳ ಕೃಪೆ.. ತಾಯಿ ಲೊಕೇಶ್
 
ನಿರ್ದೇಶಕ ಪ್ರಾಜಕ್ತ್ ದೇಶಮುಖ