ಗುರುವಾರ, ಅಕ್ಟೋಬರ್ 17, 2019

ನೋಡುಗರನ್ನು ಬೆಚ್ಚಿ ಬೀಳಿಸಿದ ‘ಹೇಳಲು ಮರೆತ ಕಥೆಗಳು’.


ರಂಗದಮೇಲೆ ಸಿಡಿದ ಮಂಗಳಮುಖಿಯರ ಆಕ್ರೋಶ. ನಟಿಸಿದವರೆಲ್ಲಾ ಲೈಂಗಿಕ ಅಲ್ಪಸಂಖ್ಯಾತರೆಂಬುದು ಈ ನಾಟಕದ ವಿಶೇಷ..



ಮಂಗಳಮುಖಿಯರ ಬದುಕು ಬವಣೆ ಕುರಿತ ನಾಟಕಗಳು ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಶೋಷಿತ ಲೈಂಗಿಕ ಅಲ್ಪಸಂಖ್ಯಾತರ ಅಭಿವ್ಯಕ್ತಿಗೆ ರಂಗಮಾಧ್ಯಮ ವೇದಿಕೆಯಾಗುತ್ತಿರುವುದು ಸ್ವಾಗತಾರ್ಹ. ಶೇಖಡಾವಾರು ಲೆಕ್ಕದಲ್ಲಿ ಮಂಗಳಮುಖಿಯರ ಸಂಖ್ಯೆ ಕಡಿಮೆ ಇದ್ದರೂ ಅವರು ಅನುಭವಿಸುತ್ತಿರುವ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳು ಮಾತ್ರ ಅಪಾರ. ಸಮಾಜದೊಳಗಿದ್ದೂ ಬಹಿಷ್ಕೃತರಾಗಿ ಬದುಕುತ್ತಿರುವ ಈ ಸಮುದಾಯ ನುಂಗಿಕೊಳ್ಳುತ್ತಿರುವ ಅವಮಾನ ಅಗಣಿತ. ತಾವೂ ಎಲ್ಲರಂತೆ ಮನುಷ್ಯರು, ನಮ್ಮನ್ನೂ ಎಲ್ಲರಂತೆ ಪರಿಗಣಿಸಿ ಎಂದು ಹೇಳುವ ಪ್ರಯತ್ನವನ್ನು ರಂಗಪ್ರಯೋಗದ ಮೂಲಕ ಮಾಡುವ ಪ್ರಯತ್ನವೇ ಪರೆಯಾನ್ ಮರನ್ನ ಕಥೆಗಳ್, ಅಂದರೆ ಹೇಳಲು ಮರೆತ ಕಥೆಗಳು.

ಮಲಯಾಳಿ ಭಾಷೆಯ ಈ ನಾಟಕವನ್ನು ಕೇರಳದ ಎರ್ನಾಕುಲಮ್ಮಿನ ಧ್ವಯ ರಂಗತಂಡ ನಿರ್ಮಿಸಿದೆ. ಶ್ರೀಜಿತ್ ಸುಂದರಂ ನಿರ್ದೇಶಿಸಿದ ಈ ಪರೆಯಾನ್ ಮರನ್ನ ಕಥೆಗಳ್ ನಾಟಕದಲ್ಲಿ ನಟಿಸಿದವರೆಲ್ಲರೂ ಮಂಗಳಮುಖಿಯರೇ ಎನ್ನುವುದು ವಿಶೇಷ. ರಂಗನಿರಂತರ ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ 2019, ಆಕ್ಟೋಬರ್ 16ರಂದು ಪ್ರದರ್ಶನಗೊಂಡ ಈ ನಾಟಕವು ಎಲ್ಲಾ ಆಯಾಮಗಳಲ್ಲೂ ನೋಡುಗರನ್ನು ಬೆಚ್ಚಿ ಬೀಳಿಸುವಂತಿತ್ತು.

ಈ ರಂಗಪ್ರಯೋಗದಲ್ಲಿ ನಾಟಕದ ಸೂಕ್ಷ್ಮತೆಗಳಿಲ್ಲ, ರಂಗಶಿಸ್ತು ಅನ್ನುವುದೂ ಕಾಣಿಸುವುದಿಲ್ಲ. ಪಾತ್ರಗಳಿಗೆ ಆಡುವ ಭಾಷೆಯ ಏರಿಳಿತಗಳ ಮೇಲೆ ನಿಯಂತ್ರಣವಿಲ್ಲ. ರಂಗವ್ಯಾಕರಣದ ಅರಿವಿಲ್ಲ. ಹಾಡು ಸಂಗೀತಗಳ ಸ್ವರತಾಳ ವಿನ್ಯಾಸಗಳಲ್ಲಿ ಹೊಂದಾಣಿಕೆಯಿಲ್ಲ. ಅಭಿನಯದ ತಿಳಿವೂ ಬಹುತೇಕ ಕಲಾವಿದರಿಗಿಲ್ಲ, ಬೆಳಕಿನ ವಿನ್ಯಾಸ ಮೂಡ್ ಹುಟ್ಟಿಸುವಲ್ಲಿ ಸಹಕರಿಸಲಿಲ್ಲ. ಹೇಳಿಕೊಳ್ಳುವಂತಹ ಸೆಟ್ ಕೂಡಾ ಇಲ್ಲ.  ಕಥೆಯೆಂಬುದು ಮೊದಲೇ ಇಲ್ಲ, ಅಸಲಿಗೆ ಸ್ಕ್ರಿಪ್ಟ್ ಕೂಡಾ ಬರೆಯಲಾಗಿಲ್ಲ.



ಈ ಎಲ್ಲಾ ಇಲ್ಲಗಳ ನಡುವೆ ಅಲ್ಲಿರುವುದು ಲೈಂಗಿಕ ಅಲ್ಪಸಂಖ್ಯಾತರ ಹತಾಷೆಯ ರೋದನೆ, ಅಸಹಾಯಕತೆಯ ವೇದನೆ, ಕುದಿಯುವ ಸಿಟ್ಟು ಮತ್ತು ಸಿಡಿದೇಳುವಂತಹ ಅಸಹನೆ. ಸಮಾಜದಲ್ಲಿ ತಮಗೊಂದು ಅಸ್ಮಿತೆಯೆನ್ನುವುದೇ ಇಲ್ಲದೇ ಅನಾಮಿಕರಂತೆ ಬದುಕುವ ಈ ಸಮುದಾಯದವರ ಅಂತರಂಗದಲ್ಲಿ ಧಗಧಗಿಸುವ ಜ್ವಾಲಾಮುಖಿಯಂತಹ ಆಕ್ರೋಶ ಮಾತ್ರ ನಾಟಕದಾದ್ಯಂತ ಧಾವಾನಲದಂತೆ ದಾಂಗುಡಿ ಇಟ್ಟಿದೆ. ತಮ್ಮದೇ ಕುಟುಂಬದಿಂದ ಪರಿತ್ಯಕ್ತರಾಗಿ, ರಕ್ಷಿಸಬೇಕಾದ ಆರಕ್ಷಕರಿಂದ ಹಿಂಸೆ ಹಲ್ಲೆಗೊಳಗಾಗಿ, ಸಮಾಜದಿಂದ ನಿರ್ಲಕ್ಷಕ್ಕೊಳಗಾಗಿ, ಅಪಮಾನಕಾರಿ ಬದುಕನ್ನು ಬದುಕುತ್ತಿರುವ ಮಂಗಳಮುಖಿಯರ ಸಂಕಷ್ಟಗಳು ಈ ನಾಟಕದಲ್ಲಿ ಹಸಿಹಸಿಯಾಗಿ ಅನಾವರಣಗೊಂಡಿವೆ.

ಮಂಗಳಮುಖಿಯರಿಗಾಗಿಯೇ ಆಯೋಜನೆಗೊಂಡ ರಂಗಶಿಬಿರವೊಂದರಲ್ಲಿ ತಯಾರಾದ  ಕೊಲ್ಯಾಜ್ ಮಾದರಿಯ ಈ ನಾಟಕದಲ್ಲಿ ಬಿಡಿ ಬಿಡಿ ಘಟನೆಗಳನ್ನು ಕ್ರಮಬದ್ಧವಲ್ಲದ ರೀತಿಯಲ್ಲಿ ಜೋಡಿಸಲಾಗಿದೆ. ಇದರಲ್ಲಿ ನಟಿಸಿರುವವರೆಲ್ಲಾ ಟ್ರಾನ್ಸ್‌ಜಂಡರ್ ಸಮುದಾಯದವರೇ ಆಗಿರುವುದರಿಂದ ತಮ್ಮ ಮೇಲಾದ ದಮನ, ದಬ್ಬಾಳಿಕೆ, ಶೋಷಣೆಯ ಅನುಭವಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಮಂಗಳಮುಖಿಯರ ಭಗ್ನಗೊಂಡ ಸ್ವಾಭಿಮಾನ, ಛಿದ್ರಗೊಂಡ ಕನಸುಗಳು, ಅಸಹನೀಯ ಅವಮಾನ, ನುಚ್ಚುನೂರಾದ ನೀರಿಕ್ಷೆಗಳು, ನೋವು ಕೊಡುವ ನಂಬಿಕೆದ್ರೋಹ, ನಿರಾಸೆ ತರುವ ವಂಚನೆಗಳೆಲ್ಲವೂ ಚಿಕ್ಕಪುಟ್ಟ ದೃಶ್ಯಗಳಾಗಿ ನಾಟಕದಾದ್ಯಂತ ಮೂಡಿಬಂದಿವೆ. ಇದೊಂದು ಪಕ್ಕಾ ಇಪ್ರೋವೈಸೇಶನ್ ಪ್ಲೆ..


ಪ್ರತಿಯೊಂದು ಪಾತ್ರದ ಗೋಳಿಕರಣ ನೋಡುಗರನ್ನು ತಲ್ಲಣಗೊಳಿಸಿದರೆ, ರಂಗವೇದಿಕೆ ಮೇಲೆ ಹಾಕಿದ ಹೊಗೆ ಮಾತ್ರ ವೇದಿಕೆಯನ್ನು ದಾಟಿ ಪ್ರೇಕ್ಷಾಗ್ರಹವನ್ನು ಪ್ರವೇಶಿಸಿ ನೋಡುಗರ ಕಣ್ಣುಗಳಲ್ಲಿ ನೀರು ತರಿಸಿತು. ಸ್ಮಶಾನದಲ್ಲಿ ಹೆಣದ ಮುಂದೆ ಬರುವಂತಹ ದಟ್ಟ ಖಡು ವಾಸನೆ ಇಲ್ಲಿ ಪ್ರೇಕ್ಷಕರ ಮೂಗನ್ನು ತುಂಬಿ ಆಕ್ರಮಿಸಿ ಅಸಹನೀಯ ಮುಜುಗರವನ್ನುಂಟು ಮಾಡಿತು. ಮಂಗಳಮುಖಿಯರ ನೋವಿನ ಮುಂದೆ ಈ ಹೊಗೆ ಮತ್ತು ವಾಸನೆಗಳೂ ಸಹ ಅಲಕ್ಷಕ್ಕೊಳಗಾಗಿದ್ದು ಸೋಜಿಗ. ಹೀಗೆ ಪ್ರೇಕ್ಷಕರ ಪಂಚೇಂದ್ರಿಯಗಳ ಮೇಲೆ ಪ್ರಹಾರ ಮಾಡುವುದು ಸರಿಯಲ್ಲ ಎನ್ನುವುದರ ಅರಿವು ನಿರ್ದೇಶಕರಿಗಿದ್ದರೆ ನಾಟಕ ಒಂದಿಷ್ಟು ಸಹನೀಯವಾಗಬಲ್ಲುದು.

ಇಲ್ಲಿ ಎಲ್ಲವೂ ಅತೀ ಎನ್ನುವಷ್ಟಿವೆ. ನಟ-ನಟಿಯರ ಉಡುಪುಗಳ ಬಣ್ಣಗಳು ನೋಡುಗರ ಕಣ್ಣಿಗೆ ರಾಚುವಂತಿವೆ. ವರ್ಣಾಲಂಕಾರ ಅಗತ್ಯಕ್ಕಿಂತ ಹೆಚ್ಚಿಗೇ ಮಾಡಲಾಗಿದೆ. ಬೆಳಕು ತನ್ನ ಮೋಹಕತೆ ಕಳೆದುಕೊಂಡು ತೀಕ್ಷ್ಣತೆಯನ್ನು ಹೆಚ್ಚಿಸಿದೆ. ಅವರ ಸಾಂಪ್ರದಾಯಿಕ ಪೂಜೆ ಆಚರಣೆಗಳೂ ಸಹ ರಂಗವೇದಿಕೆಗೆ ಭಾರ. ಮಾತುಗಳಿವೆಯೇ ಹೊರತು ಸಂಭಾಷಣೆಗಳಾಗಿಲ್ಲ. ಇಡೀ ನಾಟಕವೇ ವೈಬ್ರೆಂಟ್ ಆಗಿದೆ,  ವೈಲಂಟ್ ಆಗಿದೆ,  ಸಿಕ್ಕಾಪಟ್ಟೆ ಲೌಡ್ ಆಗಿದೆ. ಹೌದು.. ರೋಸಿ ಹೋದ ನಿರ್ಲಕ್ಷಿತ ಸಮುದಾಯ ಹೀಗೇ ಇರುವುದು ಎಂಬುದು ನಿಜ ಇರಬಹುದಾದರೂ ಅದನ್ನು ರಂಗವೇದಿಕೆಯಲ್ಲಿ ಪ್ರಸ್ತುತ ಪಡಿಸುವಾಗ ರಂಗಸೂಕ್ಷ್ಮತೆಗಳನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರುವುದು ಸೂಕ್ತ. ನಾಟಕ ಕಲಾತ್ಮಕತೆಯ ಜೊತೆಗೆ ಭಾವನೆಗಳನ್ನು ಸ್ಪುರಿಸಬೇಕೆ ಹೊರತು ಹಸಿಹಸಿಯಾಗಿ ಭಾವಾತಿರೇಕದ ತಾರಕವನ್ನು ತೋರುವುದು ತರವಲ್ಲ. ಅವರಲ್ಲಿ ಆತಂಕವಿದೆ, ಅಕ್ರೋಶವಿದೆ ಎಂಬುದೂ ದಿಟ. ಆದರೆ ಅವುಗಳನ್ನು ವ್ಯಕ್ತಪಡಿಸುವಾಗ ನಿಯಂತ್ರಣವನ್ನೂ ಹೊಂದಬೇಕಾದದ್ದನ್ನು ರಂಗಕಲೆ ಅಪೇಕ್ಷಿಸುತ್ತದೆ. ಬರೀ ಅತಿಯಾದ ಸಿಟ್ಟು, ಆಕ್ರೋಶ, ಘೋಷಣೆಗಳು ಬೀದಿ ನಾಟಕದಲ್ಲಿ ಇರಬಹುದಾಗಿದೆಯೇ ಹೊರತು ವೇದಿಕೆಯ ನಾಟಕಗಳಲ್ಲಿ ಅಲ್ಲ.


ನಾಟಕದ ಕೊನೆಕೊನೆಗಂತೂ ನಟರೆಲ್ಲರೂ ಒಬ್ಬೊಬ್ಬರಾಗಿ ಪ್ರೇಕ್ಷಕರತ್ತಲೇ ತೋರು ಬೆರಳು ತೋರಿ ಆರೋಪಗಳ ಬಾಣಗಳನ್ನು ಪ್ರಯೋಗಿಸುತ್ತಾರೆ. ಅದಕ್ಕೆ ಅದೇ ಸಮುದಾಯದ ಕೆಲವಾರು ಪ್ರೇಕ್ಷಕರು ಚೆಪ್ಪಾಳೆ ಹೊಡೆದು ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಾರೆ. ಪ್ರೇಕ್ಷಗ್ರಹದಲ್ಲಿದ್ದವರೆಲ್ಲಾ ಮಂಗಳಮುಖಿಯರ ವಿರೋಧಿಗಳು, ಅವರಿಂದಲೇ ತಮಗೆ ಸಂಕಷ್ಟಗಳು ಬಂದಿರುವುದು ಅನ್ನುವ ರೀತಿಯಲ್ಲಿ ನಟರು ತಮ್ಮೆಲ್ಲಾ ಅಂತರಂಗದ ಆಕ್ರೋಶವನ್ನು  ನಡೆನುಡಿಗಳಲ್ಲಿ ಹೊರಹಾಕುತ್ತಾ  ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು  ಪ್ರೇಕ್ಷಕರ ಮೇಲೆ ಪ್ರಯೋಗಿಸುತ್ತಾರೆ. ಇದು ನಿಜಕ್ಕೂ ಅತಿರೇಕದ ನಡೆಯಾಗಿದೆ. ಪ್ರೇಕ್ಷಕರೆಲ್ಲರೂ ಲೈಂಗಿಕ ಅಲ್ಪ ಸಂಖ್ಯಾತರ ವಿರೋಧಿಗಳೂ ಅಲ್ಲಾ, ಇವರ ವೇದನೆಗಳಿಗೆ ಕಾರಣೀಭೂತರೂ ಅಲ್ಲಾ. ಯಾವುದೇ ರಂಗಕರ್ಮಿ ಕಲಾವಿದರು ಹಾಗೂ ಕಲಾಪೋಷಕರಿಗೆ ಮಂಗಳಮುಖಿಯರ ಮೇಲೆ ಯಾವ ತಕರಾರೂ ಇಲ್ಲ.

ಆದರೆ.. ಬಿಚ್ಚಿದ ತೋರುಬೆರಳಿನ ಕೆಳಗಿನ ಮುಚ್ಚಿದ ಮೂರು ಬೆರಳು ತಮ್ಮತ್ತಲೇ ನೋಡುತ್ತವೆ ಎನ್ನುವುದರ ಅರಿವೂ ಇರದೇ ಸಮಾಜವೇ ಸರಿ ಇಲ್ಲಾ, ರೇಪಿಸ್ಟರು, ಪಾಪಿಸ್ಟರು, ಹಿಂಸಕರು ಇದ್ದಾರೆ ಎಂಬುದೇ ಈ ನಾಟಕ ಮಾಡಿದವರ ನಂಬಿಕೆಯಾಗಿದ್ದರೆ ತಮ್ಮ ಸಮುದಾಯದ ಒಳಗೂ ಇವೆಲ್ಲವೂ ಇವೆ ಎನ್ನುವುದರ ಪರಿಜ್ಞಾನ ಇರಬೇಕಾಗುತ್ತದೆ. ಕಳ್ಳರು ಸುಳ್ಳರು ಮೋಸಗಾರರು ವಂಚಕರು ಪೀಡಕರುಗಳೂ ಸಹ ಈ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದಲ್ಲೂ ಇದ್ದಾರೆ. ಅವರ ಪೀಡನೆಗೆ ಒಳಗಾದವರು ಮಂಗಳಮುಖಿಯರ ಮುಖ ಕಂಡರೆ ಮುಖ ತಿರುಗಿಸುತ್ತಾರೆ. ತಾವು ಹಾಗಲ್ಲವೆಂದು ತೋರುವ ಪ್ರಯತ್ನಗಳನ್ನು ಈ ಸಮುದಾಯ ಮೊದಲು ಮಾಡಬೇಕಾಗಿದೆ. ಸಮಾಜವೇ ಆಗಲಿ ಅಥವಾ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವೇ ಆಗಿರಲಿ ಎಲ್ಲಾ ಕಡೆಯೂ ಅಸಹನೀಯ ಘಟನೆಗಳು ನಡೆಯುತ್ತವೆ. ಒಬ್ಬರು ಇನ್ನೊಬ್ಬರ ಮೇಲೆ ಆರೋಪಿಸಿ ಏನೂ ಪ್ರಯೋಜನವಿಲ್ಲ. ಈ ರೀತಿಯ ತರ್ಕವಿಲ್ಲದ ಆರೋಪಗಳು ಇನ್ನಷ್ಟು ಅಸಹನೆಯನ್ನು ಹುಟ್ಟಿಸುತ್ತವೆ. ಸಮಾಜ ಮತ್ತು ಸಮುದಾಯದ ನಡುವೆ ಅಘೋಷಿತ ಗೋಡೆಯನ್ನು ಕಟ್ಟುತ್ತವೆ. ಆ ಗೋಡೆಯನ್ನು ಬೀಳಿಸಬೇಕಾದರೆ ಅದು ಮಾನವೀಯತೆಯಿಂದ ಮಾತ್ರ ಸಾಧ್ಯ. ಬೇರೆಯವರಿಂದ ಬಯಸುತ್ತಿರುವ ಆ ಮಾನವೀಯ ಕಳಕಳಿಯನ್ನು ಈ ಸಮುದಾಯದವರೂ ಸಹ ತೋರಿದರೆ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬಹುದಾಗಿದೆ. ಲಿಂಗ ತಾರತಮ್ಯವನ್ನು ದೂರಮಾಡಲು ಮನುಷ್ಯತ್ವದ ಅಗತ್ಯತೆಯನ್ನು ಹೇಳಿದ್ದರೆ ಈ ನಾಟಕ ಸಾರ್ಥಕವಾಗುತ್ತಿತ್ತು. ದಮನದಿಂದ ಹೊರಬರುವ ದಾರಿಗಳನ್ನು ಕಂಡುಕೊಳ್ಳುವ ಸಾಧ್ಯತೆಗಳನ್ನು ರಂಗಪ್ರಯೋಗ ಸೂಚಿಸಿದ್ದರೆ ಚೆನ್ನಾಗಿತ್ತು. 
 
ಶ್ರೀಜಿತ್ ಸುಂದರಂ
ಆದರೂ ನಾಟಕದ ಕೊನೆಗೆ ಈ ಮಂಗಳಮುಖಿಯರ ಮೇಲಿನ ದಮನ ಶೋಷಣೆಗೆ ಕಾರಣ ಆ ಸಮುದಾಯವೋ,  ಇಲ್ಲವೇ ಸಮಾಜವೋ ಅಥವಾ ಆ ದೇವರೋ..? ಎನ್ನುವ ಪ್ರಶ್ನೆಯನ್ನು ಈ ನಾಟಕ ಪ್ರೇಕ್ಷಕರ ಮುಂದಿಡುತ್ತದೆ. ದೇವರ ಮಾತು ಬಿಡಿ. ಈ ಶೋಷಿತ ಸಮುದಾಯ ಹಾಗೂ ಸಮಾಜದ ನಡುವಿನ ಕಂದರವನ್ನು ಮುಚ್ಚಿ ಬದುಕನ್ನು ಸುಂದರಗೊಳಿಸಬೇಕೆಂದರೆ ಈ ಶೋಷಿತ ಸಮುದಾಯಕ್ಕೆ  ಶಿಕ್ಷಣದ ಅಗತ್ಯತೆ ಇದೆ. ಕೆಲವೇ ಕೆಲವು ಮಂಗಳಮುಖಿಯರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡಿರುವ ಮಾದರಿಗಳನ್ನು ಸಮುದಾಯವು ಅನುಕರಿಸಬೇಕಾಗಿದೆ. ಪೀಡನೆಗೆ ಪೀಡನೆ, ಶೋಷಣೆಗೆ ಶೋಷಣೆ, ಹಿಂಸೆಗೆ ಹಿಂಸೆ ಎಂಬ ಮನೋವಿನ್ಯಾಸವೇ ಬದಲಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ನಾಟಕದ ನಿಮಾತೃಗಳು ಯೋಚಿಸಬೇಕಾಗಿದೆ. ಸಮಾಜದ ಮನಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಕ್ಕಿಂತಾ ತಮ್ಮ ಸಮುದಾಯದವರ ಮನಸ್ಥಿತಿಯನ್ನು ಬದಲಾಯಿಸುವತ್ತ  ಚಿತ್ತ ಹರಿಸಬೇಕಿದೆ. ಅಲ್ಪಸಂಖ್ಯಾತ ಸಮುದಾಯದವರನ್ನು ಎಚ್ಚರಿಸುವ, ಅವರಲ್ಲಿ ಅರಿವನ್ನು ಮೂಡಿಸುವ,  ಮಂಗಳಮುಖಿ ಸಮುದಾಯದಲ್ಲಿ ಮಡುಗಟ್ಟಿರುವ ಮೌಢ್ಯಗಳನ್ನು ಮೀರುವಂತಹ, ಅಲ್ಲಿರುವ ತಾರತಮ್ಯವನ್ನು ದಿಕ್ಕರಿಸುವಂತಹ, ಸ್ವಾವಲಂಬಿ ಬದುಕನ್ನು ಕಟ್ಟುವಂತಹ ಉದ್ದೇಶಕ್ಕೆ ಪೂರಕವಾಗಿ ರಂಗಮಾಧ್ಯಮವನ್ನು ಬಳಸಿಕೊಂಡರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಬಹುದಾಗಿದೆ.  


ನಾಟಕದ ಕಾರಣ ಪರಿಣಾಮಗಳೇನೇ ಇರಲಿ ರಂಗಭೂಮಿಯಿಂದ ದೂರವೇ ಇದ್ದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ನಾಟಕ ನಿರ್ಮಿಸಲು, ನಟಿಸಲು, ಸಂಘಟಿಸಲು ಪ್ರಯತ್ನಿಸುತ್ತಿರುವುದೇ ಆಶಾದಾಯಕವಾದ ಸಂಗತಿ. ರಂಗಭೂಮಿಯ ವ್ಯಾಪ್ತಿ ಪ್ರದೇಶದಿಂದ ದೂರವೇ ಉಳಿದಿದ್ದ ಈ ಸಮುದಾಯದವರು ರಂಗಮುಖೇನ ತಮ್ಮ ಆತಂಕಗಳನ್ನು  ತೋರಿಸಲು ಆಸಕ್ತಿ ತೋರಿಸುತ್ತಿರುವುದು ಅಭಿನಂದನೀಯ. ಇಂತಹ ನಿರ್ಲಕ್ಷಿತ ಸಮುದಾಯದವರ ನಾಟಕವನ್ನು ಆಹ್ವಾನಿಸಿ ನಾಟಕ ಪ್ರದರ್ಶನಕ್ಕೆ ವೇದಿಕೆಯನ್ನು ವದಗಿಸಿಕೊಟ್ಟ ರಂಗನಿರಂತರ ರಂಗಸಂಘಟನೆಯ ರಂಗಕಾಯಕ ಸ್ತುತ್ಯಾರ್ಹ.
 

-ಶಶಿಕಾಂತ ಯಡಹಳ್ಳಿ    


ಚಿತ್ರಗಳ ಕೃಪೆ – ತಾಯಿ ಲೊಕೇಶ್

1 ಕಾಮೆಂಟ್‌:

  1. ನಿಮ್ಮ ವಿವರಣೆ ಮತ್ತು ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

    ನಮ್ಮ ಪ್ರಯೋಗ್ ತಂಡದಿಂದ ಮಂಗಳ ಮುಖಿ ನಾಟಕ ನಿಮ್ಮ‌ಎಲ್ಲಾ ಅನಿಸಿಕೆಗಳನ್ನು ಕೂಡಿದ ಕಥೆಯನ್ನು ಹಾಗೂ ಅವರಿಗೆ ಬೇಕಾದ ಶಿಕ್ಷಣದ ಬಗ್ಗೆ ಅವರು ಜೀವನವನ್ನು ಸಮಾಜವನ್ನು ತಿದ್ದುವ ಬದಲಿಗೆ ಅವರಲ್ಲಿ ಆಗ ಬೇಕಾದ ಬದಲಾವಣೆಯನ್ನು ಎತ್ತಿ ಹಿಡಿಯುವ ಮೂಲಕ ಒಂದು ವಿಭಿನ್ನ ಪ್ರಯೋಗ ಮಾಡುತ್ತಿದ್ದೇವೆ.
    ದಯವಿಟ್ಟು ನಮ್ಮ‌ನಾಟಕ ವೀಕ್ಷಿಸಿ

    ಪ್ರತ್ಯುತ್ತರಅಳಿಸಿ