ಬುಧವಾರ, ಮಾರ್ಚ್ 26, 2014

“ವಿಶ್ವ ರಂಗಭೂಮಿ ದಿನ”ದ ಇತಿಹಾಸ ಮತ್ತು ಸಂದೇಶ


 
ಇಂದು ಮಾರ್ಚ 27, ವಿಶ್ವ ರಂಗಭೂಮಿ ದಿನ. ಜಗತ್ತಿನಾದ್ಯಂತ ರಂಗಪ್ರೀಯರು ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿಯೊಂದು ನಾಟಕದ ತಯಾರಿ ಹಾಗೂ ಪ್ರದರ್ಶನವೇ ಪ್ರತಿಯೊಬ್ಬ ಕಲಾವಿದ ಹಾಗೂ ರಂಗತಂಡದವರಿಗೆ ಒಂದು ಸಂಭ್ರಮವೇ. ಆದರೆ ಜಗತ್ತಿನ ಎಲ್ಲಾ ರಂಗಕರ್ಮಿಗಳೂ ಏಕಕಾಲಕ್ಕೆ ಸಂಭ್ರಮಿಸುವ ವರ್ಷದ ಏಕೈಕ ದಿನ ಮಾರ್ಚ 27 ವರ್ಡ ಥೀಯಟರ್ ಡೇ.

ಯಾವುದೇ ಆಚರಣೆಯನ್ನು ಆಚರಿಸುವ ಮುನ್ನ ಅದರ ಹಿನ್ನಲೆಯನ್ನೊಂದಿಷ್ಟು ತಿಳಿದುಕೊಂಡು ಸಂಭ್ರಮಿಸುವುದು ಸೂಕ್ತ, ಇಲ್ಲವಾದರೆ ಅಂತಹ ಆಚರಣೆಗಳು ಅಂಧಾನುಕರಣೆಯಾಗುತ್ತವೆ. ಆದ್ದರಿಂದ ವಿಶ್ವ ರಂಗಭೂಮಿ ದಿನದ ಇತಿಹಾಸವನ್ನು ಅರ್ಥಮಾಡಿಕೊಳ್ಳೋಣ. ಇಂಟರನ್ಯಾಷನಲ್ ಥೇಯಟರ್ ಇನ್ಸ್ಟಿಟ್ಯೂಟ್ (ಐಟಿಐ) ಎನ್ನುವ ಸಂಘಟನೆಯೊಂದಿದೆ. ಕೆಲವು ರಂಗಭೂಮಿ ಹಾಗೂ ನೃತ್ಯಕ್ಷೇತ್ರದ ಪರಿಣಿತರು ಸೇರಿ 1948ರಲ್ಲಿ ಐಟಿಐ ಯನ್ನು ಸ್ಥಾಪಿಸಿದರು.ವಿಶ್ವ ಸಂಘಟನೆಯಾದ ಯುನೆಸ್ಕೋ ಐಟಿಐ ಯನ್ನು ಪ್ರಾಯೋಜಿಸುತ್ತದೆ. ನೂರಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಸಂಸ್ಥೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ದೇಶ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ನಡೆಸುತ್ತಿದೆ. ರಂಗ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತದೆ. ವಿಶ್ವ ರಂಗ ಪ್ರಶಸ್ತಿಗಳನ್ನು ಆಯ್ದ ರಂಗಕರ್ಮಿಗಳಿಗೆ ಕೊಟ್ಟು ಗೌರವಿಸುತ್ತದೆ. ಅಂತರಾಷ್ಟ್ರೀಯ ರಂಗೋತ್ಸವಗಳನ್ನು ಸಂಘಟಿಸುತ್ತದೆ.

  
ಐಟಿಐ ಮತ್ತು ಯುನೆಸ್ಕೋ ಎರಡೂ ಸೇರಿ 1998ರಲ್ಲಿ ಥೇಯಟರ್ ಆಂಡ್ ಕಲ್ಚರ್ ಆಪ್ ಸಿವಿಲಿಜೇಶನ್ ಎನ್ನುವ ಕಾರ್ಯಕ್ರಮವನ್ನು ಲಾಂಚ್ ಮಾಡಿವೆ. ಮೂಲಕ ಅಂತರಾಷ್ಟೀಯ ರಂಗ ಕಾರ್ಯಾಗಾರಗಳನ್ನು ನಡೆಸುವುದು, ಕಲಾವಿದರಿಗೆ ಆಭಿನಯ ತರಬೇತಿಗಳನ್ನು ಆಯೋಜಿಸುವುದು, ರಂಗಭೂಮಿ ಕುರಿತ ಮಾಹಿತಿ ಹಾಗೂ ಹೊಸ ಐಡಿಯಾಗಳನ್ನು ವಿನಿಮಯ ಮಾಡಿಕೊಳ್ಳುವುದು, ರಂಗಕಲೆಯ ತರಬೇತಿ ಮೆಥಡ್ನ್ನು  ತಿಳಿಸಿವುದು ಹೀಗೆ... ಹಲವಾರು ರಂಗ ಸಂಬಂಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಾ ಬಂದಿದೆ.

1961ರಲ್ಲಿ ವಿಯನ್ನಾದಲ್ಲಿ ನಡೆದ ಸಂಘಟನೆಯ ಒಂಬತ್ತನೆಯ ವಿಶ್ವ ಕಾಂಗ್ರೆಸ್ನಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವ ರಂಗ ದಿನಾಚರಣೆಯನ್ನು ಕುರಿತು ಸಮ್ಮೇಳನದ ಅಧ್ಯಕ್ಷರಾಗಿದ್ದ ರವಿ ಕಿವಿಯಾ ರವರು ಪ್ರಸ್ತಾಪಿಸಿ ಸಭೆಯ ಅನುಮೋದನೆಯನ್ನು ಪಡೆದರು.
ಜಗತ್ತಿನ ಪ್ರದರ್ಶನ ಕಲೆಯಲ್ಲಿ ತೊಡಗಿಕೊಂಡ ಕಲಾವಿದರೆಲ್ಲಾ ಒಂದೇ ಕುಟುಂಬವೆಂಬುದನ್ನು ಪ್ರತಿಪಾದಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಕಲೆಗಳ ಅಭಿವೃದ್ದಿಯ ಅರಿವನ್ನು ಮೂಡಿಸಲು ವಿಶ್ವರಂಗಭೂಮಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 1962 ಮಾರ್ಚ 27 ರಂದು ಪ್ಯಾರಿಸ್ ನಲ್ಲಿ 'ಥೇಯಟರ್ ಆಪ್ ನೇಷನ್ಸಅಸ್ಥಿತ್ವಕ್ಕೆ ಬಂದ ನೆನಪಿಗಾಗಿ ಪ್ರತಿವರ್ಷ ಮಾರ್ಚ 26 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಬೇಕು ಹಾಗೂ ಪ್ರತಿ ವರ್ಷ ಒಂದು ದೇಶದ ಪ್ರಸಿದ್ಧ ರಂಗಕರ್ಮಿಯೊಬ್ಬರು ರಂಗಭೂಮಿ ಕುರಿತು ಮಹತ್ವದ ಸಂದೇಶವನ್ನು ಕೊಡಬೇಕುಎಂದು ವಿಶ್ವ ಕಾಂಗ್ರೆಸ್ ಸಭೆ ನಿರ್ಣಯವನ್ನು ಕೈಗೊಂಡಿತು. 1962ರಿಂದ ಐಟಿಐ ವಿಶ್ವ ರಂಗಭೂಮಿ ದಿನವನ್ನು ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದೆ. ಮೊದಲ ಬಾರಿಗೆ 1962 ಮಾರ್ಚ 27 ರಂದು ಜಿಯಾನ್ ಕಾಕ್ಟಿಯೋರವರು ಮೊದಲ ವಿಶ್ವರಂಗಭೂಮಿ ದಿನದ ಸಂದೇಶವನ್ನು ಬರೆದು ಪ್ರಕಟಿಸಿದರು.


ಅವತ್ತಿನಿಂದ ಪ್ರತಿವರ್ಷ ಐಟಿಐ ಸೆಂಟ್ರಲ್ ಕಮಿಟಿಯವರು ಒಂದು ದೇಶದ ಪ್ರಮುಖ ರಂಗಕರ್ಮಿಯೊಬ್ಬರನ್ನು ಆಹ್ವಾನಿಸಿ ವಿಶ್ವ ರಂಗ ಸೌಹಾರ್ಧತೆ ಕುರಿತು ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಗ್ರಹಿಸುತ್ತಾರೆ. ಅಂತಹ ಆಹ್ವಾನಿತರು ಕೊಡುವ ಅಂತರಾಷ್ಟ್ರೀಯ ರಂಗ ಸಂದೇಶವನ್ನು ಅಧಿಕೃತವಾಗಿ ಪ್ರಕಟಿಸಿ ಪ್ರಚಾರಪಡಿಸಲಾಗುತ್ತದೆ. ಸಂದೇಶವನ್ನು ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗುತ್ತದೆ. ಇಂತಹ ಸಂದೇಶವನ್ನು ಹಲವಾರು ದೇಶಗಳ ವೃತ್ತಪತ್ರಿಕೆಗಳಲ್ಲಿ ಮುದ್ರಿಸಲಾಗುತ್ತದೆ. ರೇಡಿಯೋ ಹಾಗು ಟಿವಿಗಳಲ್ಲಿ ಬಿತ್ತರಿಸಲಾಗುತ್ತದೆ. ಜಗತ್ತಿನಾದ್ಯಂತ ನಡೆಯುವ ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಸಂದೇಶವನ್ನು ಓದಲಾಗುತ್ತದೆ. ಐಟಿಐ ಸಂಸ್ಥೆಯಿಂದಲೇ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ  ವಿಶ್ವ ರಂಗಭೂಮಿ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.  ಉಳಿದಂತೆ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಹಲವಾರು ರಂಗಸಂಘಟನೆಗಳು, ರಂಗತಂಡಗಳು ಮಾರ್ಚ 27ರಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶ್ವ ರಂಗಭೂಮಿ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.
.
ವಿಪರ್ಯಾಸ ನೋಡಿ, ಹೆಚ್ಚು ಕಡಿಮೆ ನೂರು ದೇಶಗಳಲ್ಲಿ ತನ್ನ ಕೇಂದ್ರವನ್ನು ಹೊಂದಿರುವ ಐಟಿಐ ಭಾರತದಲ್ಲಿ ಇನ್ನೂ ಅಸ್ತಿತ್ವವನ್ನೇ ಹೊಂದಿಲ್ಲ. ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ದಂತಹ ಚಿಕ್ಕಪುಟ್ಟ ದೇಶಗಳಲ್ಲಿ ಸಹ ಐಟಿಐ ಕೇಂದ್ರಗಳಿವೆ. ದೇಶಗಳು ಐಟಿಐ ಮತ್ತು ಯುನೆಸ್ಕೋದ ಸಾಂಸ್ಕೃತಿಕ ಲಾಭಗಳನ್ನು ಪಡೆಯುತ್ತಿವೆ. ಆದರೆ ಪ್ರದರ್ಶನ ಕಲೆಗಳಲ್ಲಿ ತುಂಬಾ ಶ್ರೀಮಂತವಾಗಿರುವ ಭಾರತದೇಶ ಯಾಕೆ ಇನ್ನೂ ಐಟಿಐ ಕೇಂದ್ರವನ್ನು ಹೊಂದಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಭಾರತದ ಸರಕಾರಕ್ಕೆ ನಿಶ್ಚಿತವಾದ ಒಂದು ಸಾಂಸ್ಕೃತಿಕ ನೀತಿಯೇ ಇಲ್ಲದಿರುವಾಗಿ ಅದಕ್ಕೆ ಎಲ್ಲಾ ಸಾಂಸ್ಕೃತಿಕ ವಿನಿಮಯದ ಪ್ರಾಮುಖ್ಯತೆಯ ಅರಿವಾದರೂ ಎಲ್ಲಾಗುತ್ತದೆ. ಐಟಿಐ ಭಾಗವಾಗದಿದ್ದರೆ ಏನಂತೆ... ಭಾರತ ದೇಶಾದ್ಯಂತ ವಿಶ್ವ ರಂಗಭೂಮಿ ದಿನವನ್ನು ಆಚರಿಸಿ ಸಂಭ್ರಮಿಸುತ್ತಿರುವುದು ಭಾರತೀಯ ರಂಗಕರ್ಮಿಗಳ ರಂಗನಿಷ್ಟೆಯನ್ನು ತೋರುತ್ತದೆ. ಕಲೆ ಎನ್ನುವುದಕ್ಕೆ ಗಡಿ-ಭಾಷೆಯ ಹಂಗಿಲ್ಲ. ಆದ್ದರಿಂದ ಬನ್ನಿ ಎಲ್ಲಾ ರಂಗಪ್ರೀಯರು ವಿಶ್ವ ರಂಗಭೂಮಿ ದಿನವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸೋಣ.

  
ವರ್ಷ 2014ರಲ್ಲಿ ವಿಶ್ವ ರಂಗಭೂಮಿ ಸಂದೇಶವನ್ನು ಕೊಟ್ಟಿದ್ದು ದಕ್ಷಿಣ ಆಫ್ರಿಕಾದ ರಂಗಕರ್ಮಿ ಬ್ರೆಟ್ ಬೈಲೆ. ಬ್ರೆಟ್ ಒಬ್ಬ ನಾಟಕಕಾರ, ವಿನ್ಯಾಸಕಾರ ಹಾಗೂ ರಂಗನಿರ್ದೇಶಕನಾಗಿ ದಕ್ಷಿಣ ಆಫ್ರಿಕಾದಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಅವರ ನಾಟಕಗಳು ಯುರೋಪ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಪ್ರಮುಖ ನಗರಗಳಲ್ಲಿ ಪ್ರಯೋಗಗೊಂಡಿವೆ. ವರ್ಷ ಐಟಿಐ ಸಂಸ್ಥೆಯವರು ವಿಶ್ವರಂಗಭೂಮಿ ಸಂದೇಶ ಕೊಡಲು ಬ್ರೆಟ್ ರವರನ್ನು ಆಹ್ವಾನಿಸಿದೆ. "ಬಂಡವಾಳಶಾಹಿ ದಬ್ಬಾಳಿಕೆ, ಅಸಮಾನತೆ ತುಂಬಿರುವ ಜಗತ್ತಿನಲ್ಲಿ ಕಲೆ ಎಂಬುದು ಸಾಮಾಜಿಕ ಪ್ರಣಾಳಿಕೆಗಳಿಂದ ಹೊರತಾಗಿರಬೇಕು. ಸಮಾಜವನ್ನು ಪುನಶ್ಚೇತನಗೊಳಿಸಿ ಜನತೆಯನ್ನು ಸಬಲೀಕರಣಗೊಳಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಸಂಪತ್ತನ್ನು ಸಂಭ್ರಮಿಸಲು ಮೊದಲು ನಮ್ಮನ್ನು ಬೇರ್ಪಡಿಸುವ ಗಡಿಗಳನ್ನು ಕಿತ್ತೆಸೆದು ಒಗ್ಗೊಡಬೇಕು" ಎಂದು ಜಗತ್ತಿನ ಎಲ್ಲಾ ರಂಗಕರ್ಮಿ ಕಲಾವಿದರಿಗೆ  ಬ್ರೆಟ್ ರವರು ಅದ್ಬುತವಾದ ವಿಶ್ವರಂಗಭೂಮಿ ಸಂದೇಶವನ್ನು ಕೊಟ್ಟಿದ್ದಾರೆ. 
  
ಪ್ರತಿವರ್ಷ ವಿಶ್ವ ರಂಗಭೂಮಿ ಸಂದೇಶವನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ರಂಗಪ್ರೀಯರಿಗೆ ತಿಳಿಸುವ ಕೆಲಸವನ್ನು ವೃತದಂತೆ ಆಚರಿಸಿಕೊಂಡು ಬಂದವರು ಮೈಸೂರಿನ ರಂಗಕರ್ಮಿ ಶ್ರೀಕಂಠ ಗುಂಡಪ್ಪವರವರು. ವರ್ಷವೂ ಸಹ ಬ್ರೆಟ್ರವರ ಸಂದೇಶವನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ಯಥಾವತ್ತಾಗಿ ಇಲ್ಲಿ ಕೆಳಗೆ ಕೊಡಲಾಗಿದೆ. ಬ್ರೆಟ್ ರವರ ಸಂಕ್ಷಿಪ್ತ ಪರಿಚಯವೂ ಇದೆ.

 ವಿಶ್ವ ರಂಗಭೂಮಿ ಸಂದೇಶ 2014 :

"ಎಲ್ಲೆಲ್ಲಿ ಮಾನವ ಸಮುದಾಯವಿದೆಯೋ ಅಲ್ಲಲ್ಲಿ ಪ್ರದರ್ಶನದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ಸಣ್ಣಸಣ್ಣ ಹಳ್ಳಿಗಳ ಮರದಕೆಳಗೆ, ಮಹಾನಗರಗಳ ಹೈಟೆಕ್ ವೇದಿಕೆಗಳಲ್ಲಿ, ಶಾಲೆಗಳ ಸಭಾಂಗಣದಲ್ಲಿ, ಬಯಲಲ್ಲಿ ಮತ್ತು ದೇವಾಲಯಗಳಲ್ಲಿ, ನಗರದ ಸಂಕೀರ್ಣಗಳಲ್ಲಿ ಸಮುದಾಯ ಕೇಂದ್ರಗಳಲ್ಲಿ, ನಗರದೊಳಗಿನ ನೆಲಮಾಳಿಗೆಗಳಲ್ಲಿ ಜನರು ಒಗ್ಗೂಡಿ ತಾವೇ ಸೃಷ್ಟಿಸಿಕೊಂಡ ಅಲ್ಪಕಾಲಿಕ ರಂಗಜಗತ್ತಿನಲ್ಲಿ ಮಾನವ ಜಟಿಲತೆ, ವೈವಿಧ್ಯತೆ ಮತ್ತು ದೌರ್ಬಲ್ಯಗಳನ್ನು ಅಭಿನಯ ಮತ್ತು ಧ್ವನಿಯ ಮೂಲಕ ಜೀವಂತವಾಗಿ ವ್ಯಕ್ತಪಡಿಸುತ್ತಾರೆ. ದುಖಿಃಸಲು, ನೆನಪಿಸಿಕೊಳ್ಳಲು, ನಗಲು, ಅವಲೋಕಿಸಲು, ಕಲಿಯಲು, ಧೃಡೀಕರಿಸಿಕೊಳ್ಳಲು, ಕಲ್ಪಿಸಿಕೊಳ್ಳಲು, ದೇವರ ಅವತಾರಗಳನ್ನು ಆವಾಹಿಸಲು ತಾಂತ್ರಿಕ ನೈಪುಣ್ಯತೆ, ಸೌಂದರ್ಯ, ಅನುಕಂಪ ಹಾಗು ಪೈಶಾಚಿಕತೆಗಳಲ್ಲಿರುವ ನಮ್ಮ ಸಾಮಥ್ರ್ಯವನ್ನು ನೋಡಿ ಆಶ್ಚರ್ಯಪಡಲು ನಾವು ಸೇರುತ್ತೇವೆ.

ಪುನಶ್ಚೇತನ ಮತ್ತು ಸಬಲೀಕರಣಗೊಳ್ಳಲು ವಿಭಿನ್ನ ಸಂಸ್ಕೃತಿಗಳ ಸಂಪತ್ತನ್ನು ಸಂಭ್ರಮಿಸಲು, ನಮ್ಮನ್ನು ಬೇರ್ಪಡಿಸುವ ಗಡಿಗಳನ್ನು ಕಿತ್ತೊಗೆಯಲು ಒಗ್ಗೂಡುತ್ತೇವೆ. ಎಲ್ಲೆಲ್ಲಿ ಮಾನವ ಸಮುದಾಯವಿದೆಯೋ ಅಲ್ಲಲ್ಲಿ ಪ್ರದರ್ಶನದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ಅದು ಸಮುದಾಯದಲ್ಲಿ ಜನಿಸಿ ವಿಭಿನ್ನ ಸಂಪ್ರದಾಯಗಳ ಮುಖವಾಡಗಳನ್ನು ವೇಷಭೂಷಣಗಳನ್ನು ಧರಿಸಿ ಭಾಷೆ ಲಯ ಮತ್ತು ಸಂಜ್ಞೆಗಳನ್ನು ಮೈಗೂಡಿಸಿಕೊಂಡು ನಮ್ಮಗಳ ನಡುವೆ ನೆಲೆಯೂರಿದೆ. ಪ್ರಾಚೀನ ಚೈತನ್ಯದೊಂದಿಗೆ ಕೆಲಸ ಮಾಡುವ ಕಲಾವಿದರಾದ ನಮ್ಮನ್ನು ಹೃದಯದ ಮೂಲಕ ಅಭಿಪ್ರಾಯಗಳ ಮೂಲಕ ಮತ್ತು ದೇಹದ ಮೂಲಕ ಚೈತನ್ಯವನ್ನು ಹರಿಸಿ ನಮ್ಮ ಲೌಕಿಕ ವಾಸ್ತವತೆಯಯನ್ನು ಆಕರ್ಷಕ ನಿಗೂಢಗಳನ್ನು ಬಹಿರಂಗ ಪಡಿಸಲು ಒತ್ತಾಯಿಸುತ್ತದೆ.

ಬಂಡವಾಳಶಾಹಿ ದಬ್ಬಾಳಿಕೆಯಿಂದ ಲಕ್ಷಾಂತರ ಜನ ಸಂಘರ್ಷ ಮತ್ತು ಸಂಕಷ್ಟಗಳಿಗೆ ಒಳಗಾಗಿ ಬದುಕಲು ಹೋರಾಡುತ್ತಿರುವ ದಶಕದಲ್ಲಿ ನಮ್ಮ ರಹಸ್ಯಗಳನ್ನು ಕಸಿದುಕೊಂಡು ಗೂಢಚಾರಿಗಳ ಮೂಲಕ ದಾಳಿಮಾಡುವ ಮತ್ತು ನಮ್ಮ ಮಾತುಗಳನ್ನು ನಿರ್ಬಂಧಗೊಳಿಸಿ ಮೂಗುತೂರಿಸುವ ರಕಾರದ ಆಡಳಿತದಲ್ಲಿ ಅರಣ್ಯನಾಶ, ಪ್ರಾಣಿಸಂಕುಲದ ನಾಶ, ವಿಷಪೂರಿತವಾಗುತ್ತಿರುವ ಸಾಗರ; ವ್ಯಕ್ತಪಡಿಸಲು ಇವುಗಳಲ್ಲಿ ಯಾವ ಅನುಭವ ನಮ್ಮನ್ನು ಒತ್ತಾಯಿಸುತ್ತದೆ. ಒಂದು ರಾಷ್ಟ್ರ, ಒಂದು ಜನಾಂಗ ಒಂದು ಲಿಂಗ, ಲೈಂಗಿಕ ಆದ್ಯತೆ, ಒಂದು ಧರ್ಮ, ಒಂದು ಸಿದ್ಧಾಂತ ಒಂದು ಸಾಮಾಜಿಕ ಚೌಕಟ್ಟು ಉಳಿದವುಗಳಿಗಿಂತ ಅತ್ಯುತ್ತಮ ಎಂದು ನಮ್ಮ ಮನವೊಲಿಸುವ ಪ್ರಾಬಲ್ಯಪೂರಿತ ಆದೇಶಗಳಿರುವ ಅಸಮಾನತೆಯ ಜಗತ್ತಿನಲ್ಲಿ ಕಲೆಯು ಸಾಮಾಜಿಕ ಪ್ರಣಾಳಿಕೆಯಿಂದ ಮುಕ್ತವಾಗಿರಬೇಕೆಂಬ ಒತ್ತಾಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ?

ನಾವು ಪರಿಷ್ಕೃತ ಬೇಡಿಕೆಗಳನ್ನು ಪೂರೈಸುವ ಸಭಾಂಗಣದ ರಂಗಸ್ಥಳದ ಕಲಾವಿದರೋ? ಅಥವಾ ನಮ್ಮಲ್ಲಿನ ಶಕ್ತಿಯನ್ನು ಬಳಸಿಕೊಂಡು ಸಮಾಜದ ಹೃದಯ ಮನಸ್ಸುಗಳನ್ನು ತಿಳಿಗೊಳಿಸಿ ಜನರನ್ನು ಒಗ್ಗೂಡಿಸಿ, ಪ್ರೇರೇಪಿಸಿ, ಮುದಗೊಳಿಸಿ ತಿಳಿಹೇಳಿ, ಆಶಾಭಾವನೆ ಹಾಗು ಮುಕ್ತಮನಸ್ಸಿನ ಸಹಯೋಗವನ್ನುಂಟುಮಾಡುವ ಕಲಾವಿದರೋ?

------------


ಬ್ರೆಟ್ ಬೈಲೆ ಕಿರುಪರಿಚಯ: ಬ್ರೆಟ್ ಬೈಲೆ ದಕ್ಷಿಣ ಆಫ್ರಿಕಾದ ನಾಟಕಕಾರ ವಿನ್ಯಾಸಕಾರ ನಿರ್ದೇಶಕ. ಮೂರನೇ ಜಗತ್ತಿನ ಬನ್ಫೈಟ್ (ಕಲಾತಂಡ) ಕಲಾತ್ಮಕ ನಿರ್ದೇಶಕ. ಜಿಂಬಾಬ್ವೆ, ಉಗಾಂಡ, ಹೈಟಿ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಯು.ಕೆ ಮತ್ತು ಯುರೋಪ್, ದಕ್ಷಿಣ ಆಫ್ರಿಕಾದಾದ್ಯಂತ ಪ್ರದರ್ಶನಗಳನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ರಂಗಸಂಸ್ಥೆಯ ಮ್ಯೂಜಿಕ್ ಥಿಯೇಟರ್ ನೌಕಾರ್ಯಕ್ರಮದ ತೀರ್ಪುಗಾರರಾಗಿ ಜೋಹಾನ್ಸ್ಬರ್ಗನ ಕಲೆ ಮತ್ತು ಸಂಸ್ಕೃತಿಯ ಆರಂಭ ಪ್ರದರ್ಶನದ ನಿರ್ದೇಶಕರಾಗಿ ದುಡಿದವರು.



                                 -ಶಶಿಕಾಂತ ಯಡಹಳ್ಳಿ 



 
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ