ಸೋಮವಾರ, ಜುಲೈ 31, 2017

ಅರ್ಚನಾ ಮೇಡಂ ನಿರ್ಗಮಿತ; ವಿಶುಕುಮಾರ್ ರವರಿಗೆ ಸ್ವಾಗತ

ಕಾನೂನಿಗೆ ಕರುಣೆ  ಇಲ್ಲದಿದ್ದರೂ  ಕಾನೂನು ರಕ್ಷಕರಿಗೆ  ಕರುಳಿರಬೇಕು:



ಈ ಆದೇಶ ಮುಂದೆಂದೋ ಆಗಬಹುದೆಂಬ ಊಹೆ ಇತ್ತು.. ಆದರೆ ಇಷ್ಟು ಬೇಗ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ದೀಢಿರ್ ನಿರ್ದಾರ ತೆಗೆದುಕೊಳ್ಳುತ್ತಾರೆಂದು ಯಾರೆಂದರೆ ಯಾರೂ ಊಹಿಸಿರಲಿಲ್ಲಾ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೇವಲ ಮೂರು ತಿಂಗಳ ಹಿಂದೆ ನಿರ್ದೇಶಕಿಯಾಗಿ ನಿಯುಕ್ತಿಗೊಂಡಿದ್ದ ಎಂ.ಎಸ್. ಅರ್ಚನಾರವರು ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗೆ ವರ್ಗಾವಣೆಗೊಂಡಿದ್ದಾರೆ. ಅವರ ಜಾಗಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾಗಿದ್ದ ಎನ್.ಆರ್.ವಿಶುಕುಮಾರ್‌ರವರನ್ನು ನೇಮಿಸಲಾಗಿದೆ. ವಿಶುಕುಮಾರರವರ ಜಾಗಕ್ಕೆ ಐಪಿಎಸ್ ಅಧಿಕಾರಿ ಈಶಾನ್ಯ ವಿಭಾಗದ ಡಿಸಿಪಿ ಡಾ.ಪಿ.ಎಸ್.ಹರ್ಷರವರನ್ನು ವರ್ಗಾವಣೆ ಮಾಡಲಾಗಿದೆ. ಕಾನೂನು ರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತ ಪೋಲೀಸ್ ಅಧಿಕಾರಿಯೊಬ್ಬರನ್ನು ವಾರ್ತಾ ಇಲಾಖೆಗೆ ಸರಕಾರ ತಂದು ಕೂಡಿಸಿರುವುದು ಪ್ರಶ್ನಾರ್ಹ, ಆದರೆ ಡೈನಾಮಿಕ್ ಆಗಿ ಕೆಲಸಮಾಡುವ ವಿಶುಕುಮಾರ್‌ರವರು ಸಂಸ್ಕೃತಿ ಇಲಾಖೆಗೆ ನಿರ್ದೇಶಕರನ್ನಾಗಿಸಿದ್ದು ಸ್ತುತ್ಯಾರ್ಹ.     


ಅದ್ಯಾಕೆ ಮೂರೇ ತಿಂಗಳಲ್ಲಿ ಅಕಾಲಿಕವಾಗಿ ಅರ್ಚನಾರವರು ಸಂಸ್ಕೃತಿ ಇಲಾಖೆಯಿಂದಾ ಎತ್ತಂಗಡಿಯಾದರು? ಯಾಕೆಂದರೆ ಕಲೆ ಮತ್ತು ಸಂಸ್ಕೃತಿ ಇಲಾಖೆಗೆ ಅವರ ಅತಿರೇಕದ ನಿಲುವುಗಳು ಹೊಂದಾಣಿಕೆಯಾಗದಂತಿದ್ದವು. ಹಲವಾರು ಕಲಾವಿದರು ಹಾಗೂ ರಂಗಕರ್ಮಿಗಳು ಅರ್ಚನಾರವರ ಬಿಗಿ ಕಟ್ಟಳೆಗಳಿಂದ ಬೇಸರಗೊಂಡಿದ್ದರು. ಕಾನೂನುಗಳನ್ನು ಮುಂದಿಟ್ಟುಕೊಂಡು ಸ್ಟ್ರಿಕ್ಟ್ ಆಗಿ ಅಧಿಕಾರ ಮಾಡುವುದು ಬೇರೆ ಇಲಾಖೆಗಳಿಗೆ ಸರಿಹೋಗಬಹುದಾದರೂ ಸಂಸ್ಕೃತಿ ಇಲಾಖೆಗೆ ಸರಿಹೊಂದುವಂತಹುದಲ್ಲಾ. ಇಲ್ಲಿ ಕೆಲಸ ಮಾಡಬೇಕಾದವರಿಗೆ ಕಲೆ ಸಾಹಿತ್ಯ ಸಂಸ್ಕೃತಿ ಕುರಿತು ಸ್ಪಂದನೆ ಇರಬೇಕು, ಕಲಾವಿದರ ಬಗ್ಗೆ ಮಾನವೀಯ ತುಡಿತ ಇರಬೇಕು. ಕಲೆ ಸಾಹಿತ್ಯಕ್ಕೆ ಅನುಕೂಲ ಆಗುವ ಹಾಗಿದ್ದರೆ ಕಾನೂನಿನ ಬಿಗಿ ಮುಷ್ಟಿಯನ್ನು ಸಡಿಲಿಸುವ ಇರಾದೆ ಇರಬೇಕು. ಆದರೆ.. ಅರ್ಚನಾ ಮೇಡಂ ಕಟ್ಟಳೆಗಳ ಕಟ್ಟನ್ನು ತಲೆಯಲ್ಲಿಟ್ಟುಕೊಂಡು ಕಲಾವಿದರನ್ನು ಅವುಗಳಲ್ಲಿ ಕಟ್ಟಿಹಾಕುವ ಕೆಲಸವನ್ನು ಮಾಡತೊಡಗಿದಾಗ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಯಿತು. ಇದಕ್ಕೆ ಹಲವಾರು ಉದಾಹರಣೆ ಕೊಡಬಹುದು. 


ಮೇ 14 ರಂದು ಶಿವು ಹೊನ್ನಗಾಣಹಳ್ಳಿ ಎನ್ನುವ ಯುವ ರಂಗಕರ್ಮಿ ತಾನು ಪ್ರೀತಿಸಿದ ಪೂಜಾ ಎನ್ನುವ ಯುವತಿಯನ್ನು ಅತ್ಯಂತ ಸರಳವಾಗಿ ಕಲಾಕ್ಷೇತ್ರದ ಆವರಣದೊಳಗಿನ ಕ್ಯಾಂಟೀನ್ ಬಳಿ ಇರುವ ಆಲದ ಮರದ ಬುಡದಲ್ಲಿ ವಿವಾಹವಾದ. ಈ ವಿಷಯ ಒಂದು ದಿನ ಮೊದಲೆ ಗೊತ್ತಾದಾಗ ಅರ್ಚನಾರವರು ಪೊಲೀಸ್‌ರನ್ನು ಕರೆಸಿ ಹಾಕಿದ ಪುಟ್ಟ ಚಪ್ಪರವನ್ನು ತೆರುವುಗೊಳಿಸಿದರು. ಆದರೂ ಪಟ್ಟು ಬಿಡದೇ ಇನ್ನೂರು ಜನ ರಂಗಕಲಾವಿದರ ಸಮ್ಮುಖದಲ್ಲಿ ಶಿವು ಸಾಂಕೇತಿಕವಾಗಿ ಮಂತ್ರಮಾಂಗಲ್ಯ ಪಠಣದೊಂದಿಗೆ ಮದುವೆಯಾದ. ಇದು ಗೊತ್ತಾಗಿದ್ದೇ ತಡ ಕೆಂಡಾಮಂಡಲವಾದ ಅರ್ಚನಾ ಮೇಡಂ ಕಲಾಕ್ಷೇತ್ರದ ಸಿಬ್ಬಂದಿಯನ್ನು ತಾರಾಮಾರಾ ತರಾಟೆಗೆ ತೆಗೆದುಕೊಂಡರು. ಇಬ್ಬರು ಸೆಕ್ಯೂರಿಟಿ ಗಾರ್ಡಗಳಿಗೆ ನೋಟೀಸ್ ನೀಡಿದರು. ಮದುವೆಯಾದ ದಂಪತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು. ಇದೆಲ್ಲಾ ಬೇಕಿರಲಿಲ್ಲಾ.. ಕೆಲವೊಮ್ಮೆ ಕೆಲವೊಂದನ್ನು ಮಾನವೀಯ ನೆಲೆಯಲ್ಲಿ ನೋಡಿ ಜಾಣ ಕುರುಡನ್ನು ತೋರಿಸುವುದು ಅಧಿಕಾರಿಗಳಿಗೆ ಉತ್ತಮ. ಕಾನೂನಿಗೆ ಕರುಣೆ ಇಲ್ಲದಿದ್ದರೂ ಕಾನೂನು ರಕ್ಷಕರಿಗೆ ಕರುಳಿರಬೇಕು. ಅದೂ ಮಹಿಳೆಯಾದ ಅರ್ಚನಾರಂತವರಿಗೆ ಮಾತೃತ್ವದ ಗುಣವೂ ಇರಬೇಕು. ಕಲಾಕ್ಷೇತ್ರದ ಒಳಗಾಗಲಿ ಇಲ್ಲವೇ ಆವರಣದಲ್ಲಾಗಲೀ ಮದುವೆಗಳಿಗೆ ಅವಕಾಶವಿಲ್ಲವೆಂದು ಇಲಾಖೆಯ ಕಾನೂನು ಹೇಳುತ್ತದೆ. ಆದರೆ ಅಲ್ಲಿ ಆಗಿದ್ದು ಅದ್ದೂರಿ ವಿವಾಹವಲ್ಲ. ಅರ್ಧ ಗಂಟೆಯ ಸಾಂಕೇತಿಕ ಮದುವೆ. ಅದೂ ಇಬ್ಬರು ಕಲಾವಿದರು ಪ್ರೀತಿಸಿ ಒಂದಾಗುವ ಸಂತಸದ ಗಳಿಗೆ.  ಪೊಲೀಸ್ ಸ್ಟೇಶನ್ನುಗಳಲ್ಲೇ ಪ್ರೇಮವಿವಾಹ ಮಾಡಿಸಿ ಪೊಲೀಸ್ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ. ಅಂತಹುದರಲ್ಲಿ ಕಲಾವಿದರ ಸಾಂಕೇತಿಕ ಮದುವೆಗೆ ಸಾಕ್ಷಿಯಾಗದಿದ್ದರೂ ಸುಮ್ಮನಿದ್ದರೆ ಸಾಕಾಗಿತ್ತು. ಅದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವ ನಿರ್ಧಾರವೇ ಅತಿರೇಕವಾಗಿತ್ತು.

ಇನ್ನೂ ಒಂದು ಉದಾಹರಣೆ ಹೀಗಿದೆ. ಹಿರಿಯ ರಂಗಕರ್ಮಿಗಳೆಲ್ಲಾ ಸೇರಿ ಜುಲೈ 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ (ಸುಬ್ಬಣ್ಣ) ನವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದರು. ಅದಕ್ಕೂ ಮುಂಚೆ ಸುಬ್ಬಣ್ಣನವರ ಕುರಿತು ಸಾಕ್ಷಚಿತ್ರವೊಂದನ್ನು ನಿರ್ಮಿಸಲು ಬಿ.ಸುರೇಶರವರು ಮುಂದಾದರು. ಸಾಕ್ಷಚಿತ್ರವನ್ನು ನಿರ್ದೇಶಿಸುವ ಹೊಣೆಗಾರಿಕೆ ಚಿಕ್ಕಸುರೇಶ ವಹಿಸಿಕೊಂಡರು. ಆ ಸಾಕ್ಷಚಿತ್ರಕ್ಕೆ ಸುಬ್ಬಣ್ಣ ಹಾಗೂ ಜೆ.ಲೋಕೇಶರವರ ಬೈಟ್ ಬೇಕಾಗಿತ್ತು. ಅದು ಕಲಾಕ್ಷೇತ್ರದ ಆವರಣದಲ್ಲಿ ಶೂಟ್ ಮಾಡಿದರೆ ಚೆನ್ನಾಗಿತ್ತೆಂದು ಚಿಕ್ಕಸುರೇಶ್ ನಿರ್ಧರಿಸಿದರು. ಸುಮ್ಮನೇ ತಮ್ಮ ಪಾಡಿಗೆ ತಾವು ಹತ್ತು ನಿಮಿಷಗಳ ಕಾಲ ಕಲಾಕ್ಷೇತ್ರದ ಮೆಟ್ಟಲುಗಳ ಮೇಲೆ ಸುಬ್ಬಣ್ಣನವರನ್ನು ಕೂರಿಸಿ ಚಿತ್ರೀಕರಿಸಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ.. ಒಂದು ದಿನ ಮುಂಚೆ ಚಿಕ್ಕಸುರೇಶ್ ಹೋಗಿ ಅರ್ಚನಾರವರನ್ನು ಬೇಟಿಯಾಗಿ ಚಿತ್ರೀಕರಣಕ್ಕೆ ಅನುಮತಿ ಕೇಳಿದಾಗ ಕಲಾಕ್ಷೇತ್ರದಲ್ಲಿ ಚಿತ್ರೀಕರಣ ಸಾಧ್ಯವೇ ಇಲ್ಲಾ. ಶೂಟಿಂಗ್ ಮಾಡಲೇ ಕೂಡದು ಎಂದು ಕೋರಿಕೆಯನ್ನು ನಿರಾಕರಿಸಿದರು. ಇದರಿಂದ ಅತೀವವಾಗಿ ಬೇಸರಗೊಂಡ ಚಿಕ್ಕಸುರೇಶ್ ಸುಬ್ಬಣ್ಣನವರ ಮನೆಗೆ ಹೋಗಿ ಶೂಟಿಂಗ್ ಮುಗಿಸಿದರು. ಆದರೆ ಅರ್ಚನಾರವರ ಅತಾರ್ಕಿಕ ನಿರ್ಧಾರದಿಂದ ನೊಂದುಕೊಂಡ ಡಾ.ವಿಜಯಮ್ಮನವರು ಹಾಗೂ ರಂಗಸಂಪದದ ಲೊಕೇಶರವರು ತಮ್ಮ ಅಸಮಾಧಾನವನ್ನು ಸಚಿವೆ ಉಮಾಶ್ರೀಯವರ ಗಮನಕ್ಕೆ ತಂದರು.

ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಯಾವುದೇ ಅಭ್ಯಂತರಗಳಿಲ್ಲಾ. ಟಿವಿ ವಾಹಿನಿಗಳು ಬಂದು ಚಿತ್ರೀಕರಿಸುವಾಗ ಯಾವುದೇ ಅಡೆ ತಡೆಗಳಿಲ್ಲಾ. ಆದರೆ.. ಸಾಕ್ಷಚಿತ್ರವೊಂದಕ್ಕೆ ಹಿರಿಯ ರಂಗಕರ್ಮಿಗಳ ಮಾತುಗಳನ್ನು ಚಿತ್ರೀಕರಿಸಬೇಕೆಂದರೆ ಅದಕ್ಕೆ ನಿರ್ಬಂಧ ವಿಧಿಸುವುದು ಎಷ್ಟು ಸರಿ? ಎಂದು ರಂಗಕಲಾವಿದರುಗಳು ತಮ್ಮ ತಮ್ಮಲ್ಲೇ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮಹಿಳೆಯೊಬ್ಬಳು ಸಂಸ್ಕೃತಿ ಇಲಾಖೆಗೆ ಬಂದರೆ ಇನ್ನೂ ಹೆಚ್ಚು ಸಮರ್ಥವಾಗಿ ಕಲೆ ಮತ್ತು ಸಂಸ್ಕೃತಿಯ ಕೆಲಸಗಳು ಆಗಬಲ್ಲವು ಎನ್ನುವ ಉಮಾಶ್ರೀಯವರ ಮಹಿಳಾಪರ ಆಲೋಚನೆಯನ್ನು ಅರ್ಚನಾರವರು ಬುಡಮೇಲುಗೊಳಿಸಿದ್ದರು. ಕಲೆ ಮತ್ತು ಸಂಸ್ಕೃತಿಯ ಗಂಧ ಗಾಳಿ ಇರದ, ಕಾನೂನಾಸ್ತ್ರವನ್ನು ಹಿಡಿದ ಅರ್ಚನಾರಂತಹ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಕ್ತವಲ್ಲ ಎನ್ನುವುದು ಸಚಿವೆ ಉಮಾಶ್ರೀಯವರಿಗೆ ಮನದಟ್ಟಾದ ತಕ್ಷಣ ಅವರ ವರ್ಗಾವಣೆ ಮಾಡಲು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಕಲೆಯ ಬಗ್ಗೆ ಒಲವಿರುವ, ಕಲಾವಿದರ ಬಗ್ಗೆ ಆದರವಿರುವ ಹಾಗೂ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಅಧಿಕಾರಿಯನ್ನು ಸಂಸ್ಕೃತಿ ಇಲಾಖೆಗೆ ಕೊಡಿ ಎಂದು ಒತ್ತಾಯಿಸಿದರು. ಉಮಾಶ್ರೀಯವರ ಆಗ್ರಹವನ್ನು ಪುರಸ್ಕರಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸ್ಕೃತಿ ಇಲಾಖೆಗೆ ಸೂಕ್ತವೆನ್ನಿಸುವ ಅಧಿಕಾರಿ ಎನ್.ಆರ್.ವಿಶುಕುಮಾರ್‌ರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನಾಗಿ ನಿಯೋಜಿಸಿ ಜುಲೈ ೩೧ರಂದು ಆದೇಶಿಸಿದರು. ಅರ್ಚನಾರವರು ಅಕಾಲಿಕವಾಗಿ ಎತ್ತಂಡಿಯಾದರು. ಅರ್ಚನಾರವರ ಅತಿರೇಕದ ನಿರ್ಧಾರಗಳಿಂದ ನೊಂದುಕೊಂಡಿದ್ದ ಹಲವಾರು ಕಲಾವಿದರು ಹಾಗೂ ರಂಗಕರ್ಮಿಗಳು ನಿಟ್ಟುಸಿರು ಬಿಟ್ಟರು.

ವಿಶುಕುಮಾರ್‌ರವರು ವಾರ್ತಾ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಿದವರು.  ಇತ್ತೀಚೆಗೆ ಭಾರತ ಭಾಗ್ಯವಿಧಾತ ಎನ್ನುವ ಅಂಬೇಡ್ಕರ್‌ರವರ ಕುರಿತ ಬೆಳಕು ದ್ವನಿ ರೂಪಕವನ್ನು ಅಪಾರ ಆಸಕ್ತಿ ವಹಿಸಿ ವಾರ್ತಾ ಇಲಾಖೆಯಿಂದ ವಿಶುಕುಮಾರರು ಆಯೋಜಿಸಿ ಯಶಸ್ವಿಯಾಗಿದ್ದರು. ಕಲಾವಿದರು ಹಾಗೂ ರಂಗಕರ್ಮಿಗಳ ಜೊತೆಗೆ ಆತ್ಮೀಯ ಸಂಬಂಧವನ್ನು ಹೊಂದಿದವರು. ಎಲ್ಲಕ್ಕಿಂತ ಹೆಚ್ಚಾಗಿ ಕಲೆ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಒಲವುಳ್ಳವರು. ಇಂತಹ ಅಧಿಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಕ್ತ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಈ ಹಿಂದೆ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ದಯಾನಂದರವರು ಇಲಾಖೆಯಲ್ಲಿ ಅನೇಕ ಸಕಾರಾತ್ಮಕ ಬೆಳವಣಿಗೆಗಳ ರೂವಾರಿಯಾಗಿದ್ದರು. ಸಚಿವೆ ಉಮಾಶ್ರೀಯವರ ಯೋಜನೆಗಳನ್ನು ಕ್ರಿಯಾಶೀಲವಾಗಿ ಕಾರ್ಯರೂಪಕ್ಕೆ ತಂದರು. ಕಲಾಕ್ಷೇತ್ರವನ್ನು ಅಕರ್ಷನೀಯವಾಗಿ ಕಂಗೊಳಿಸುವಂತೆ ಮಾಡಿದವರು. ಆನ್‌ಲೈನ್ ಪೇಮೇಂಟ್ ವ್ಯವಸ್ಥೆಯನ್ನು ಜಾರಿಗೊಳಿಸಿ ರಂಗದಲ್ಲಾಳಿಗಳ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರು. ಇಲಾಖೆಯ ಅನುದಾನವನ್ನು ದುರುಪಯೋಗ ಪಡಿಸಿಕೊಂಡ ನಲವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದರು. ಕೆಲವರ ಮೇಲೆ ಪೊಲೀಸ್ ಕೇಸುಗಳನ್ನೂ ಹಾಕಿ ರಂಗಭೂಮಿಯ ಖದೀಮ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದ್ದರು.  ದಯಾನಂದರವರ ಕಾರ್ಯತತ್ಪರತೆ, ನಿಷ್ಟುರತೆ, ಸ್ನೇಹಪರತೆ ಮತ್ತು ಕಲೆ ಸಂಸ್ಕೃತಿಯ ಮೇಲಿರುವ ಆಸಕ್ತಿಗಳು ವಿಶುಕುಮಾರರಿಗೆ ಮಾದರಿಯಾಗಬೇಕಿದೆ. ಸಚಿವೆ ಉಮಾಶ್ರೀಯವರ ಉತ್ತಮ ಆಲೋಚನೆಗಳನ್ನು ಸಮರ್ಥವಾಗಿ ಕಾರ್ಯಗತಗೊಳಿಸುವ ಕೆಲಸವನ್ನು ವಿಶುಕುಮಾರವರು ಮಾಡುತ್ತಾರೆಂಬ ನಂಬಿಕೆಯೂ ಇದೆ. ತಮ್ಮ ಸಂಘಟನಾ ಸಾಮರ್ಥ್ಯವನ್ನು ಈಗಾಗಲೇ ವಾರ್ತಾ ಇಲಾಖೆಯ ನಿರ್ದೇಶಕರಾಗಿ ವಿಶುಕುಮಾರರವರು ಸಾಬೀತು ಪಡಿಸಿದ್ದಾರೆ. ಕಾನೂನುಗಳ ಕಟ್ಟಳೆಗಳ ಚೌಕಟ್ಟುಗಳಾಚೆಗೂ ಕಲೆ ಮತ್ತು ಸಂಸ್ಕೃತಿಯನ್ನು ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ.ಹಾಗೆಯೇ ಈ ವರ್ಷದ ಕೊನೆಗೆ ವಿಶ್ವ ಕನ್ನಡ ಸಮ್ಮೇಳನವನ್ನು ಬೇರೆ ಸರಕಾರ ಅದ್ದೂರಿಯಾಗಿ ಆಚರಿಸಬೇಕಿದೆ. ಅಂತಹ ಬೃಹತ್ ಈವೆಂಟನ್ನು ಸಂಘಟಿಸುವ ಸಾಮರ್ಥ್ಯ ಅರ್ಚನಾರವರಂತಹ ಅಕಾಡೆಮಿಕ್ ಅಧಿಕಾರಿಗೆ ಇಲ್ಲವೆಂಬುದು ಸರಕಾರಕ್ಕೂ ಮನವರಿಕೆಯಾಗಿದೆ. ಹಲವಾರು ಸರಕಾರಿ ಈವೆಂಟ್ ಗಳನ್ನು ಯಶಸ್ವಿಯಾಗಿ ಸಂಘಟಿಸಿದ ವಿಶುಕುಮಾರ್ ರಂತವರ ಸಾರಥ್ಯ ಅಗತ್ಯವಾಗಿದೆ. ಇದನ್ನೂ ಸಹ ಗಮನದಲ್ಲಿಟ್ಟುಕೊಂಡು ಸರಕಾರ ವಿಶುಕುಮಾರರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕರೆತಂದಿದೆ.. ಏಕಾಏಕಿ ಅರ್ಚನಾರವರನ್ನು ಸದರಿ ಇಲಾಖೆಯಿಂದ ತೆರವುಗೊಳಿಸಿದೆ.


ದಯಾನಂದರವರು ವರ್ಗಾವಣೆಯಾಗಿ ಹೋಗುವ ಮುನ್ನ ಮೂರು ತಿಂಗಳ ಒಳಗಾಗಿ ರವೀಂದ್ರ ಕಲಾಕ್ಷೇತ್ರದ ಬೆಳಕು ಹಾಗೂ ದ್ವನಿ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದಾಗ ಎಪ್ರೀಲ್ 5 ರಂದು ಹೋರಾಟನಿರತ ರಂಗ-ಗೆಳೆಯರಿಗೆ ಮಾತು ಕೊಟ್ಟಿದ್ದರು. ಆದರೆ ಈಗಾಗಲೇ ನಾಲ್ಕು ತಿಂಗಳುಗಳು ಕಳೆದರೂ ಇನ್ನೂ ಟೆಂಡರ್ ಪ್ರಕ್ರಿಯೆಯೇ ಫೈನಲ್ ಆಗಿಲ್ಲಾ. ರಂಗಗೆಳೆಯರ ಕೋರಿಕೆಗೆ ಕೂಡಲೇ ಸ್ಪಂದಿಸಿದ್ದ ಸಚಿವೆ ಉಮಾಶ್ರೀಯವರು ಲೊಕೋಪಯೋಗಿ ಇಲಾಖೆಯ ಮೇಲೆ ಒತ್ತಡ ತಂದು ಟೆಂಡರ್ ಪ್ರಕ್ರಿಯೆ ತೀವ್ರಗೊಳಿಸಲು ಒತ್ತಾಯಿಸಿದ್ದರು. ದಯಾನಂದರವರು ಹೋದ ನಂತರ ನಿರ್ದೇಶಕಿಯಾಗಿ ಬಂದ ಅರ್ಚನಾರವರು ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ತೋರದೇ ಕಾಲಹರಣ ಮಾಡಿದರು.. ಹೀಗಾಗಿ ಇಡೀ ಯೋಜನೆ ನೆನಗುದಿಗೆ ಬಿದ್ದಿತು. ವಿಶುಕುಮಾರರವರು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಬಂದ ತಕ್ಷಣ ಮೊಟ್ಟ ಮೊದಲು ಕಲಾಕ್ಷೇತ್ರದ ಬೆಳಕು ಹಾಗೂ ದ್ವನಿಯ ಆಧುನೀಕರಣವನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನವನ್ನು ತೀವ್ರಗೊಳಿಸಬೇಕಿದೆ. ಇದಕ್ಕೆ ಸಚಿವೆ ಉಮಾಶ್ರೀಯವರ ಬೆಂಬಲವೂ ಇದೆ. ಲೊಕೋಪಯೋಗಿ ಇಲಾಖೆಯ ಹಿಂದೆ ಬಿದ್ದು ಟೆಂಡರ್ ಪ್ರಕ್ರಿಯಯನ್ನು ಆದಷ್ಟು ಬೇಗ ಮುಗಿಸಲು ಒತ್ತಡ ತರಬೇಕಿದೆ. ಇಲ್ಲವಾದರೆ ಮತ್ತೊಮ್ಮೆ ರಂಗಗೆಳೆಯರು ಕಲಾಕ್ಷೇತ್ರದ ಮುಂದೆ ಹೋರಾಟಕ್ಕಿಳಿಯುವ ಅನಿವಾರ್ಯತೆ ಉಂಟಾಗುತ್ತದೆ. 

ಸ್ವತಃ ಉತ್ತಮ ಕಲಾವಿದೆಯಾದ ಉಮಾಶ್ರೀಯವರೇ ಸಂಸ್ಕೃತಿ ಇಲಾಖೆಯ ಸಚಿವೆಯಾಗಿದ್ದು ಸಾಧ್ಯವಾದಷ್ಟೂ ಕಲೆ ಮತ್ತು ಸಂಸ್ಕೃತಿ ಕಟ್ಟಲು ತಮ್ಮ ಬದ್ಧತೆಯನ್ನು ತಮ್ಮ ರಾಜಕೀಯ ಒತ್ತಡಗಳ ನಡುವೆಯೂ ಆಗಾಗ ತೋರಿಸುತ್ತಲೇ ಇದ್ದಾರೆ. ಕಲಾವಿದರ ಬೇಡಿಕೆಗಳ ಒತ್ತಾಯಗಳಿಗೆ ತೀವ್ರವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ. ಆದರೆ ಅವರೊಬ್ಬರೇ ಏನು ತಾನೆ ಮಾಡಲು ಸಾಧ್ಯ? ಈಗ ನಿರ್ದೇಶಕರಾಗಿ ನಿಯುಕ್ತಿಗೊಂಡಿರುವ ವಿಶುಕುಮಾರರವರೂ ಸಹ ಕಲೆಯತ್ತ ಒಲವನ್ನು ಹೊಂದಿರುವುದು ಸಾಬೀತಾಗಿದೆ. ವಿಶುಕುಮಾರರ ಮೇಲೆ ಎಲ್ಲಾ ಕಲಾವಿದರುಗಳು. ಸಾಹಿತಿಗಳು ಹಾಗೂ ರಂಗಕರ್ಮಿಗಳು ಅಪಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಂಗದಲ್ಲಾಳಿಗಳಿಂದ ಒಂದು ಅಂತರವನ್ನು ಕಾಪಾಡಿಕೊಂಡು., ನಿಜವಾಗಿ ಕೆಲಸ ಮಾಡುತ್ತಿರುವ ಕಲಾವಿದರುಗಳಿಗೆ ಆರ್ಥಿಕ, ನೈತಿಕ ಬೆಂಬಲವನ್ನು ಕೊಡುತ್ತಾ ಸಂಸ್ಕೃತಿ ಇಲಾಖೆಯನ್ನು ಜನಮುಖಿಯಾಗಿ ಮುನ್ನಡೆಸುವ ಕೆಲಸವನ್ನು ವಿಶುಕುಮಾರರವರು ಮಾಡಲಿ ಹಾಗೂ ಮಾಡುತ್ತಾರೆ ಎನ್ನುವುದೇ ನಮ್ಮೆಲ್ಲರ ನಿರೀಕ್ಷೆಯಾಗಿದೆ. ಕಲೆಯ ಉಳಿವು ಹಾಗೂ ಬೆಳವಣಿಗೆಗೆ ಕೇಳಿದಷ್ಟು ಹಣ ಕೊಡಲು ಸಿದ್ದರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಬೇಕಾದ ಅನುಕೂಲತೆಗಳನ್ನು ಕೊಟ್ಟು ಹಲವಾರು ಹೊಸ ಹೊಸ ಪ್ರಾಜೆಕ್ಟಗಳಿಗೆ ಅನುಮೋದನೆಯನ್ನು ಕೊಡಲು ಮಾನ್ಯ ಸಚಿವೆ ಉಮಾಶ್ರೀಯವರು ಸಿದ್ದರಾಗಿದ್ದಾರೆ.. ಇಷ್ಟೆಲ್ಲಾ ಇದ್ದರೂ ಸರಕಾರ ಕೊಟ್ಟ ಹಣವನ್ನು ಕ್ರಿಯಾಶೀಲ ಕೆಲಸಗಳಿಗಾಗಿ ಬಳಸುವ ಹಾಗೂ ಸರಕಾರಿ ಪ್ರಾಜೆಕ್ಟಗಳನ್ನು ರಂಗಗುತ್ತಿಗೆದಾರರ ಹಿಡಿತದಿಂದ ಬಿಡಿಸಿ ರಂಗಬದ್ದತೆ ಇರುವ ಸಂಘಟಕರಿಗೆ ವಹಿಸಿಕೊಟ್ಟು ಜನಮೆಚ್ಚುವ ಕೆಲಸಗಳನ್ನು ವಿಶುಕುಮಾರರವರು ಅಪಾರ ಸಿದ್ದತೆ ಹಾಗೂ ಅನನ್ಯ ಬದ್ದತೆಗಳಿಂದ ಮಾಡಬೇಕಿದೆ ಹಾಗೂ ಮಾಡುತ್ತಾರೆಂಬ ನಂಬಿಕೆಯೂ ಎಲ್ಲಾ ಕಲಾವಿದರು ಹಾಗೂ ರಂಗಕರ್ಮಿಗಳದ್ದಾಗಿದೆ. ಅಪಾರವಾದ ನಿರೀಕ್ಷೆಗಳನ್ನು ನಿರಾಸೆಗೊಳಿಸಲಾರರು ಎನ್ನುವ ಭರವಸೆಯೊಂದಿಗೆ ನಾವೆಲ್ಲರೂ ವಿಶುಕುಮಾರರವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿರ್ದೇಶಕರನ್ನಾಗಿ ಒಪ್ಪಿಕೊಂಡು ಅಹ್ವಾನಿಸಬೇಕಿದೆ ಹಾಗೂ ಅಭಿನಂದಿಸಬೇಕಿದೆ . ಹಾಗೆಯೇ ಸಚಿವೆ ಉಮಾಶ್ರೀಯವರಿಗೂ ಅಭಿನಂದನೆಗಳು.

ವೆಲ್ ಕಮ್ ಟು ವಿಶುಕುಮಾರ್ ಸರ್, ಗುಡ್ ಬೈ ಅರ್ಚನಾ ಮೇಡಂ...

-ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ