ಸೋಮವಾರ, ಏಪ್ರಿಲ್ 22, 2019

ಕೆರತಾನಂದ ಪ್ರಹಸನ :



( ಪಂಡಿತರಿಗೆ ಯಾವಾಗಲೂ ಅನಿಸಿದ್ದನ್ನು ಹೇಳುವ ಆತುರ. ಏನಾದರೂ ಹೇಳಬೇಕೆಂಬ ಬಯಕೆಯಾದರೆ ಅವರಿಗೆ ನಾಲಿಗೆಯಲ್ಲಿ ನವೆ ಶುರುವಾಗುತ್ತಿತ್ತು. ಕವಿಮಿತ್ರರೆಲ್ಲಾ ಸೇರಿ ಬುದ್ದಿವಂತರಾದ ಪಂಡಿತರಿಗೂ ತಮ್ಮ ಕವಿಗೋಷ್ಟಿಗೆ ಆಮಂತ್ರಿಸಿದರು. ಆಗ...)

ಕಿರಿ ಕವಿ :
ಹೊರಟಿದ್ದೆ ನೋಡಲೊಂದು ಗುಂಡು ಮುಖ..
ಹೊರಟಿದ್ದೆ ನೋಡಲೊಂದು ಗುಂಡು ಮುಖ
ಬೆಕ್ಕಡ್ಡ ಬಂದಂತೆ ಬಂತೊಂದು ಗಂಡು ಮುಖ...

ಎಲ್ಲರೂ : ವಾವ್ವಾ... ವಾವ್ವಾ...ವಾರೆವ್ವಾ..

ಹಿರಿ ಕವಿ : 
ನಮ್ಮ ಕಾಲದಲ್ಲಿ ಹೀಗಿರಲಿಲ್ಲ
ನಮ್ಮ ಕಾಲದಲ್ಲಿ ಹೀಗಿರಲಿಲ್ಲ..
ನಾವು ಹೆಣ್ಣು ಮಣ್ಣು ಹೊನ್ನಿನ ಆಸೆಗಾಗಿ ಬಾಳ್ತಿದ್ದೆವೇ 
ಹೊರತು ಸಿಗಲಿಲ್ಲಾಂತ ಸಾಯ್ತಿರಲಿಲ್ಲ..
ನಮ್ಮ ಕಾಲದಲ್ಲಿ ಹೀಗಿರಲಿಲ್ಲ..

ಎಲ್ಲರೂ : ಆಹಾ.. ಅಹಾಹಾ..

( ಕವಿತೆಗಳನ್ನೆಲ್ಲಾ ಕೇಳಿ ಪಂಡಿತರ ನಾಲಿಗೆಯಲ್ಲಿ ತುರಿಕೆ ಶುರುವಾಯ್ತು... ಅಂಗೈಯನ್ನು ಕೆರೆದುಕೊಳ್ಳುತ್ತಾ..)
ಪಂಡಿತ : what is this nansense. ಈಗ ನಮ್ಮ ದೇಶದ ಸ್ಥಿತಿ ಗತಿ ಅಪಾಯದಲ್ಲಿರುವಾಗ ಇದೆಂತಾ ಕವಿತೆ. I like to tell u one thing...

ಕವಿ 1 : ಸರ್ರss... ಇದು ಕವಿಗೋಷ್ಟಿ ಅದss. ಇಲ್ಲಿ ಏನss  ಹೇಳಬೇಕಂದ್ರೂ ಕವಿತಾ ಕಟ್ಟೇ ಹೇಳ್ಬೇಕ್ರಿ.. ಭಾಷಣ ಮಾಡೂದು ಬ್ಯಾಡ್ರೀ...

ಪಂಡಿತ : ( ಅಂಗೈಯನ್ನು ಬೆರಳುಗಳಿಂದ ಕೆರೆಯುತ್ತಾ)  poem means it include everything which all existing in this world.. you know..

ಕವಿ 2 : ನೀವೇನ್ ಹೇಳ್ತಿದ್ದೀರಿ ಅನ್ನೂದು ನಮ್ಗ ಅರ್ಥಾನೇ ಆಗ್ತಿಲ್ಲ.. ಒಂಚೂರು ಕಸ್ತೂರಿ ಕನ್ನಡದಾಗ ಬಿಡಿಸಿ ಹೇಳ್ರಲ್ಲಾ...

ಪಂಡಿತ : (ತನ್ನ ಬಾಯೊಳಗೆ ಹಲ್ಲಿನಿಂದ ನಾಲಿಗೆಯನ್ನು ಕೆರೆದುಕೊಳ್ಳುತ್ತಾ) u see.. ಎಲ್ಲಾ ಯಾಕ್.. ಎಲ್ರೂವೇ ಕವಿತಾ ಕವಿತಾ ಅಂತಿದ್ದೀರಿ. ಕವಿತೆಗೆ ಗದ್ಯ ಪದ್ಯ ಗಪದ್ಯ ರಗಳೆ ಪಗಳೆ  ಎಲ್ಲಾ ಇರಬೇಕು. ಭಾಷಣ ವಾದ ಸಂವಾದ ಇಲ್ಲದ ಮೇಲೆ  ಕವಿಗುಂಪಿನ ಗೋಷ್ಟಿ why.. 

ಹಿರಿಕವಿ : ಇದು ಕವಿಗಳ ಗುಂಪು ಐತೆ ಪಂಡಿತರೇ.. ಇಲ್ಲಿ ಕಾವ್ಯದ ಕುರಿತು ಚರ್ಚೆ ಮಾಡ್ತೀವಿ. ಕವಿತೆ ಕಟ್ಟಿ ಹೇಳ್ತೀವಿ. ಬೇರೇದೆಲ್ಲಾ ಇಲ್ಲಿ ಬೇಕಿಲ್ಲಾ ಮಹನೀಯರೆ...

ಪಂಡಿತ: ( ಎದೆಯನ್ನು ಪರಪರ ಅಂತಾ ಕೆರೆದುಕೊಂಡು) ಬರೀ ಕವಿತಾ ಅಂತ ಅಂದ್ರೆ ಹೆಂಗೆ. ಜಗತ್ತಲ್ಲಿ ಎಷ್ಟೊಂದು ಸಂಗತಿಗಳು ಇವೆ.. ಎಷ್ಟೊಂದು ರೀತಿಯಲ್ಲಿ ಅಭಿವ್ಯಕ್ತಿಸಬಹುದು. ನಾನೀಗ ರಾಜಕೀಯದ ಕುರಿತು ಭಾಷಣ ಮಾಡಬೇಕು.. 

ಕವಿ 1: ಅದು ಹಂಗಲ್ರೀ ಸರ್ರss... ಇದು ಕವಿಗಳ ಗೋಷ್ಟಿ ಐತಿ. ನಮ್ದು ಕವಿಗಳ ಗುಂಪು.. ಇಲ್ಲಿ ರಾಜಕೀಯ ಭಾಷಣ ಗೀಷಣ ಮಾಡೋಹಂಗಿಲ್ಲ. ನೀವೇನರ  ಹೇಳಾಕಬೇಕಂದ್ರ ಕವಿತಾ ಕಟ್ಟಿ ಹೇಳ್ರಿ... ಹಾಡು ಕಟ್ಟಿ ಹಾಡ್ರಿ... ಆದರss ರಾಜಕೀಯದ ಮಾತು ಇಲ್ಲಿ ಬ್ಯಾಡ್ರೀ ಸರ್ರss ಕೈ ಮುಗೀತೇನೆ. ನಿಮ್ಮ ಪಾದಪದ್ಮಕಮಲಗಳಿಗೆ ಅಡ್ಡ ಬೀಳ್ತೇನೆ... 

ಪಂಡಿತ : ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಅದು ಇವತ್ತಿನ ತುರ್ತು ಅಗತ್ಯಾ ಐತಿ.. ಬೇರೇ ಏನೂ ಬೇಡಾ...  ಬರೀ ಕವಿತೇನೇ ಬೇಕೆಂದರೆ ಕವಿಗಳ ಗುಂಪನ್ನ ವಿಸರ್ಜಿಸಿ ಬಿಡಿ.. ನೀವೇ ನನ್ನ ಇಲ್ಲಿಗೆ ಕರೆದಿದ್ದು. ನಾನಂತೂ ಇಲ್ಲಿಂದಾ ಬಿಲ್ಕುಲ್ ಹೊರಗೆ ಹೊಗೋದಿಲ್ಲ. ನೀವೇ ಬೇಕಾದ್ರೆ ಎತ್ತಿ ಹೊರಗ್ ಹಾಕ್ರಿ...

ಹಿರಿಕವಿ : ಇದೊಳ್ಳೆ ಪಜೀತಿಗೆ ಬಂತಲ್ಲಾ.. ಗುಂಪಲ್ಲಿರೋರೆಲ್ಲಾ ಕವಿತೆ ಬಿಟ್ಟು ಇದೇ ರೀತಿ ತಮಗನ್ನಿಸಿದ್ದನ್ನೆಲ್ಲಾ ಚರ್ಚೆ ಮಾಡೋಕೆ ಶುರು ಮಾಡಿದ್ರ ಕವಿಗಳ ಗುಂಪು  ಕಟ್ಟಿ ಏನು ಪ್ರಯೋಜನಾ

ಕಿರಿಕವಿ : ಅಯ್ಯೋ ಇಂತಾ ಪಂಡಿತರನ್ನ ಇಟ್ಕೊಳ್ಳೋ ಹಂಗೂ ಇಲ್ಲಾ ಅನುಭವಿಸೋ ಹಾಂಗೂ ಇಲ್ಲಾ... ಏನಪ್ಪಾ ಮಾಡೋದು ಈಗ...

ಪಂಡಿತ : ನೀವೇನಾದ್ರೂ ಹೇಳಿ.. ಅದೆಲ್ಲಾ ನಂಗೊತ್ತಿಲ್ಲ...ನಾನೂ ನಿಮ್ಮ ಗುಂಪಲ್ಲೇ ಇರ್ತೇನೆ... ನಂಗೆ ರಾಜಕೀಯ ಮಾತಾಡ್ಬೇಕು ಅಂತಾ ತುರಿಕೆಯಾದಾಗೆಲ್ಲಾ ನಾ ಮಾತಾಡ್ತೇನೆ. ಈಗ ಎರಡು ಸಾಲು ಹೇಳಿ ಹೋಗ್ತೇನೆ. The job of a wood cutter is not just to cut wood but to keep the axe sharp always. ( ಎಂದು ಹೇಳಿದ ಪಂಡಿತರು  ಕವಿಗಳ ತಲೆಯಲ್ಲಿ ಹುಳ ಬಿಟ್ಟು ತಲೆಯನ್ನು ಪರಪರನೇ ತುರಿಸಿಕೊಳ್ಳುತ್ತ ತಾತ್ಕಾಲಿಕವಾಗಿ ನಿರ್ಗಮಿಸಿದರು.. )

ಕಿರಿಕವಿ : ಕವಿತೆಗೂ, ತುರಿಕೆಗೂ, ವುಡ್ ಕಟ್ಟರಿಗೂ ಎತ್ತನಿಂದೆತ್ತ ಸಂಬಂಧ ಅಂತಾ ಹಿರಿ ಕವಿಗಳು ಬಿಡಿಸಿ ಹೇಳಬೇಕೆಂದು ನನ್ನ ಸವಿನಯ ಪ್ರಾರ್ಥನೆ

ಹಿರಿ ಕವಿ : ( ಕಿವಿಯನ್ನು ಕೆರೆದುಕೊಳ್ಳುತ್ತಾ) ಅದು ಏನಪಾಂತಂದ್ರೆ... ಅಂದ್ರೆ... ವುಡ್ ಅಂದರೆ ಕಟ್ಟಿಗೆ... ಕಟ್ಟರ್ ಅಂದ್ರೆ ಕತ್ತರಿಸುವುದು... ಅಂತಂದ್ರೆ... ಅಂದ್ರೆ.. (ಪರಪರ ತಲೆ ಕೆರೆಯತೊಡಗಿದ)

ಕವಿ 1 : ಅದು ಹಂಗಲ್ರೀ ಸರ್ರss. ಕೊಡ್ಲಿರೀ ಕೊಡ್ಲಿ... ಕೊಡ್ಲಿ ಕೆಲಸಾ ಬರೀ ಕಟ್ಟಿಗೀ ಕಡಿಯೂದಷ್ಟ ಅಲ್ಲಂತ್ರಿ...

ಕವಿ 2 : ಹೌದೌದು.. ಮಂದಿ ತಲಿ ಕಡಿಯೋದಕ್ಕೂ ಬಳಸಬಹುದು ಹೌದಲ್ವೋ...

ಎಲ್ಲರೂ : ಹ್ಹ ಹ್ಹಹ್ಹ  (ಜೋರಾಗಿ ನಗುತ್ತಾರೆ)

ಕವಿ 1: ಅದು ಹಂಗಲ್ರೀ.. ಕೊಡ್ಲೀ ಕೆಲ್ಸಾ ಕಟ್ಟಿಗಿ ಕಡಿಯೂದು ಅಷ್ಟ ಅಲ್ಲಾ ತನ್ನ ಮೂತಿ ತಾನss ಚೂಪು ಮಾಡ್ಕೊಳ್ಳೋದು ಅಂತಾ ಅದರರ್ಥ ಏನ್ರೀ...

ಕಿರಿಕವಿ : ಹಾಂ. ಹೌದಾ! ಕೊಡ್ಲಿ ತನ್ನ ಮೂತಿ ತಾನಾ ಅಟೋಮ್ಯಾಟಿಕ್ ಆಗಿ ಚೂಪ್ ಮಾಡ್ಕೊಂಡ್ರ ಮತ್ತಾಕ ನಾವ್ ಮಂಡಾಗಿರೋ ಕೊಡ್ಲಿ ಕಲ್ಲಿಗೆ ಮಸೀಬೇಕು.. ಕುಲಿಮಿಯವ್ನಿಗೆ ಕೊಟ್ಟು ಬೆಂಕಿಗೆ ಹಾಕಿಸಿ ಸುತ್ತಿಗಿಯಿಂದ ಹೊಡಿಸಬೇಕು

ಕವಿ 2 : ಅಂತಾ ಅಟೋಮ್ಯಾಟಿಕ್ ಸೆಲ್ಪ ಚೂಪಾಗೋ ಕೊಡ್ಲಿ ಎಲ್ಲಿ ಸಿಗುತ್ತೇ ಅಂತಾ ಆ ಪಂಡಿತನಿಗೆ ಕೇಳ್ರಪ್ಪೋ.. ನಂಗೊಂದು ನಮ್ಮಪ್ಪನಿಗೊಂದು ಎರಡು ಬೇಕು...

ಹಿರಿ ಕವಿ : ಇದss ಬೇಡಾ ಅನ್ನೋದು. ಕವಿತೆ ಬಗ್ಗೆ ಚರ್ಚೆ ಮಾಡೋ ನಮ್ಮ ಗುಂಪಿನಾಗ ಈಗ ಅನಗತ್ಯವಾಗಿ ಕೊಡ್ಲಿ ಬಗ್ಗೆ ಚರ್ಚೆ ಮಾಡ್ತಾ ಕೂತಿದ್ದೀವಿ. ಇದು ನಮ್ಮ ಕವಿಗುಂಪಿನ ನಿಯಮಕ್ಕೆ ವಿರುದ್ದವಾದದ್ದು... ನಿಮಗ ಯಾರಿಗಾದ್ರೂ ಏನಾದ್ರೂ ಹೇಳಲೇಬೇಕು ಅನ್ನೋ ತುರಿಕೆ ಶುರುವಾದ್ರೆ ಹೊರಗೆ ಹೋಗಿ ಕೆರಕೊಂಡು ಬನ್ರಿ.... ಇಲ್ಲಿ ಕವಿ ಗುಂಪಿನೊಳಗ ಬರೀ ಕವಿತಾ.. ಕವಿತಾ... ಕವಿತಾ ಇರಲಿ... (ಎಂದು ಹಿರಿಕವಿಗಳು ಆದೇಶ ಮಾಡಿದರು. ಅಷ್ಟರಲ್ಲಿ ಒಬ್ಬ ಕವಿ ಹೊರಕ್ಕೆ ಅವಸರದಲ್ಲಿ ಹೊರಡತೊಡಗಿದ

ಹಿರಿ ಕವಿ : ಇಷ್ಟು ಅವಸರದಲ್ಲಿ ಎಲ್ಲಿಗೆ ಓಡ್ತಿದ್ದೀ ಇರು ವಂದನಾರ್ಪನೆ ಮಾಡೋಣಂತೆ

ಕಿರಿ ಕವಿ : ತಪ್ಪು ತಿಳಿಬ್ಯಾಡ್ರಿ.. ನಂಗ್ಯಾಕೋ ತುರಿಕೆ ತಡಿಯೋಕೆ ಆಗ್ತಿಲ್ಲ. ನಾಲಿಗೆ ತುಂಬಾ ಒಂತರಾ ನವೆ... ಏನೇನೋ ಹೇಳಬೇಕಂತಾ ಒಳಗಿಂದ ಒತ್ತಡ ಬರ್ತಿದೆ. ಅದಕ್ಕೆ ಹೊರಗ ಹೋಗಿ ಸಮಾಧಾನ ಆಗುವವರೆಗೂ ತುರಿಸ್ಕೊಂಡು ಬರ್ತೀನಿ.. ಇಲ್ಲೆ ಕೆರಕೊಂಡ್ರೆ ನಿಮಗೆಲ್ಲಾ ತೊಂದರೆ ಆಗ್ಬೋದು... ಚರ್ಚೆ ದಿಕ್ಕ ತಪ್ಪಬಹುದು, ಗುಂಪಿನ ರೂಲ್ಸು ಬ್ರೇಕ್ ಆಗ್ಬೋದು.. ಎಲ್ರೂ ತುರಿಕೆ ಶುರು ಮಾಡ್ಕೊಂಡ್ರೆ ಇದು ಕವಿಗೋಷ್ಟಿ ಆಗೋ ಬದಲು ಕುಷ್ಟ ರೋಗಿಗಳ ತುರಿಕೆ ಗೋಷ್ಟಿ ಆಗಬೋದು... ( ಎಂದವನೇ ಹೊರಕ್ಕೆ ಓಡಿದಾ)

ಹಿರಿ ಕವಿ : ಇವತ್ತು ಇಲ್ಲಿಗೆ ಗೋಷ್ಟಿ ಮುಕ್ತಾಯವಾಯ್ತು. ನಾಳೆ ಬರುವಾಗ ಎಲ್ಲರೂ ಕಟ್ಟಿಗೆ ಕಡಿಯುವ ಕೊಡಲಿಯ ಬಗ್ಗೆ ಕವಿತೆ ಬರಕೊಂಡು ಬನ್ರಿ

ಕವಿ  1: ಅಟೋಮ್ಯಾಟಿಕ್ ಚೂಪಾಗೋ ಕೊಡ್ಲಿ ಬಗ್ಗೆ ಹೌದಲ್ರೀ... 

ಹಿರಿ ಕವಿ : ಏನಾದ್ರೂ ಬರೀರಿ... ಆದ್ರ ಬರೆದಿದ್ದು ಕವಿತಾ ಆಗಿರ್ಲಿ. ನಂಗೂ ಯಾಕೋ ಮೈತುಂಬಾ ತುರಿಕೆ ಶುರುವಾಗ್ತಿದೆ. ಯಾರ್ಯಾರಿಗೆ ತುರಿಕೆ ಶುರುವಾಗಿದೆಯೋ ಅವ್ರೆಲ್ಲಾ ಒಟ್ಟಿಗೆ ಸೇರಿ ಕೆರಕೊಳ್ತಾ ನಮ್ಮ ನಮ್ಮ ಮನೆಗೆ ಹೊಗೋಣ ಬನ್ರಿ. ಇಲ್ಲೆ ಇದ್ರೆ ಅದೇನೋ ಅಂತಾರಲ್ಲಾ.. ಮಾತು ಮನಿ ಕೆಡಿಸ್ತು...

ಕವಿ 2: ತೂತು...

ಹಿರಿಕವಿ : ಅದನ್ನೂ ಹೇಳ್ಬೇಕೇನೋ.. ನಡೀರಿ ನಡೀರಿ.. ತುರಿಕೆ ಬಂದಲ್ಲೆಲ್ಲಾ ಕೆರಕೊಳ್ತಾ ಕೆರತಾನಂದ ಪಡೀರಿ...

ಕವಿ 1: ಕೆರತಾನಂದ ಸ್ವಾಮಿಗಳಿಗೆ

ಎಲ್ಲರೂ :  ಜೈ....

ಕವಿ 2 : ತುರಿಕೆ ಪಂಡಿತರಿಗೆ

ಎಲ್ಲರೂ : ಜೈ

( ಇಲ್ಲಿಗೆ ಇಂದಿಗೆ ಕವಿಗಳ ಗುಂಪು ಬರಕಾಸ್ತಾಯ್ತು)

* * * * *


- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ