ಸೋಮವಾರ, ಏಪ್ರಿಲ್ 22, 2019

ಪ್ರಮಾಣ ಪತ್ರ ಪ್ರಹಸನ :



( ಒಂಚೂರು ವಯಸ್ಸಾದ ಬೋಳು ತಲೆಯ ವ್ಯಕ್ತಿಯೊಬ್ಬರು ಹಳೆಯ ಕಛೇರಿಯ ಪುರಾತನ ಖುರ್ಚಿಯ ಮೇಲೆ ಕುಳಿತು ಮೊಬೈಲಲ್ಲಿ ಮಾತಾಡುತ್ತಿದ್ದಾರೆ. ಅವರ ಮುಂದಿರುವ ಟೇಬಲ್ ಮೇಲಿನ ಪ್ಲೇಟ್ ಮೇಲೆ ಡಾ. ಎಸ್ ಎಂದೂ ಅದರ ಕೆಳಗೆ ಹೆಸರಿಗಿಂತಾ ದೊಡ್ಡದಾಗಿ ಪ್ರಮಾಣ ಪತ್ರ ಪರಿಶೋಧಕರು ಎಂದೂ ಬರೆದಿದೆ)

ಡಾ.ಎಸ್ : ( ಪೋನಲ್ಲಿ)  ಏನು... ಏನ್ ಹೇಳ್ತಿದ್ದೀರಿ. ರೀತಿ ಅಕಾಡೆಮಿಕ್ ಕೆಲಸ ಮಾಡಲು  ಅವರಿಗೆ ಏನ್ರೀ ಅರ್ಹತೆ ಇದೆ. ನೊ ನೋ ನೊ ಇದನ್ನ ನಾನು ಪ್ರಶ್ನೆ ಮಾಡ್ತೀನಿ. ಪ್ರಮಾಣ ಪತ್ರ ಇಲ್ಲದೇ ಹೀಗೆಲ್ಲಾ ಅವರಿವರಿಗೆ ಗೈಡ್ ಆಗೋ ಹಾಗಿಲ್ಲ... ಇಟ್  ಇಜ್ ಕ್ರೈಂ ಸೇ... ಇಡ್ರೀ ಪೋನು...

(ಅಷ್ಟರಲ್ಲಿ ವ್ಯಕ್ತಿಯೊಬ್ಬ ಒಳ ಬಂದು ಪೋನಲ್ಲಿ ಜೋರಾಗಿ ಮಾತಾಡುತ್ತಿದ್ದ ವ್ಯಕ್ತಿಯನ್ನು ಕಂಡು ಆತಂಕದಿಂದ)

ವ್ಯಕ್ತಿ : ಸಾರ್... ತಾವು ಎಸ್ ರವರಲ್ಲವೇ..

ಡಾ.ಎಸ್ : ನೊ ನೋ... ಬರೀ ಎಸ್ ಅಲ್ಲಾ... ಯಾಮ್ ಡಾಕ್ಟರ್ ಎಸ್.ಎಸ್... (ಗತ್ತಿನಿಂದಾ). ಹೇಳ್ರೀ ಏನಾಗ್ಬೇಕಿತ್ತು.

ವ್ಯಕ್ತಿ : ಅದು.. ಅದೂ... ನಂಗೆ ನಿಮ್ಮಿಂದಾ ಒಂದು ಪ್ರಮಾಣ ಪತ್ರ ಬೇಕಿತ್ತು ಸರ್.. 

ಡಾ.ಎಸ್: ಪ್ರಮಾಣ ಪತ್ರ... ಯು ಮೀನ್ ಸರ್ಟಿಫಿಕೇಟ್.. ಕೊಡೋಣ.. ಕೊಡೋಣ... ಮೊದಲು ನೀವು ಅದಕ್ಕೆ ಯೋಗ್ಯರೋ ಅಲ್ಲವೋ ಅಂತಾ ಪರಿಶೀಲನೆ ಮಾಡಬೇಕು.. ಸುಮ್ನೆ ಕೊಡೋಕೆ ಅದೇನು ದೇವಸ್ಥಾನದ  ಪ್ರಸಾದಾನಾ

ವ್ಯಕ್ತಿ : ಸರ್... ನಾಟಕ ಅಕಾಡೆಮಿಯೋರು ಫೆಲೋಷಿಪ್ ಅಧ್ಯಯನ ಪ್ರಬಂಧ ಬರೆಯಲು ಕೆಲವರನ್ನ ಆಯ್ಕೆ ಮಾಡಿದ್ದಾರೆ... 

ಡಾ.ಎಸ್ : ಹೌದಾ.. ಹಾಗಾದರೆ.. ನೀವು ಅದಕ್ಕೆ ಆಯ್ಕೆ ಆಗಿದ್ದೀರಿ. ಸಂತೋಷಾ... ಅಧ್ಯಯನಕ್ಕೆ ಮಾರ್ಗದರ್ಶಕರು ಮೀನ್ ಗೈಡ್ ಬೇಕಾಗಿದ್ದರಿಂದ ನನ್ನ ಹತ್ರ ಮಾರ್ಗದರ್ಶಕರಾಗಿ ಅಂತಾ ಗೋಗರೆದು ಕೇಳಿಕೊಳ್ಳಲು ಬಂದಿದ್ದೀರೀ.. ಅಲ್ವಾ? ಮಾಡ್ತೇನೆ...ಮಾಡ್ತೇನೆ... ನಾನು ದರ್ಶನ ಮಾರ್ಗದರ್ಶನ ಎರಡನ್ನೂ ಮಾಡ್ತೇನೆ. ನೀವು ಸರಿಯಾದ... ಸೂಕ್ತವಾದ ಕ್ವಾಲಿಪೈಡ್ ಸಾಧಕ ವ್ಯಕ್ತಿಯ ಹತ್ತಿರ ಬಂದಿದ್ದೀರಿ... ನಾನಿರೋದೆ ಅದಕ್ಕೆ ಕಣ್ರೀ... ಎಷ್ಟು ಜನರಿಗೆ ಗೈಡ್ ಮಾಡಿದ್ದೇನೆ

ವ್ಯಕ್ತಿ : ಸರ್ … ಅದು.. ಅದು..

ಡಾ.ಎಸ್ : ಹೂಂ ಮತ್ತೆ. ಸಿಟಿಯಲ್ಲಿ ಯಾರಿಗೆ ಏನೇ ಬೇಕಾದ್ರೂ ನನ್ನ ಹತ್ತಿರಾನೇ ಬರೋದು. ಎಲ್ಲರಿಗೂ ನಾನೇ ಗೈಡ್ ಮಾಡೋದು. ಬೇರೆಯವರು ಯಾರಾದ್ರೂ ಗೈಡ್ ಮಾಡಿದ್ರೆ ನಾನು ಸುಮ್ಮನೇ ಬಿಡ್ತೀನಾ... ಅವರ ಅರ್ಹತೆ ಯೋಗ್ಯತೆಗಳನ್ನೆಲ್ಲಾ  ಜಾಲಾಡಿ ಬಿಡ್ತೀನಿ.  ನಾನಿರೋದಾದರೂ ಯಾಕೆ..?

ವ್ಯಕ್ತಿ : ಸರ್... ನಾನು ಬಂದಿರೋದು ಅದಕ್ಕಲ್ಲಾ ಸರ್... ನಾನು ಮಾರ್ಗದರ್ಶಕ ಆಗ್ಬೇಕು ಅಂತಾ ಅಕಾಡೆಮಿಯವರ ಒತ್ತಾಯ. ಆದರೆ ಹಾಗೆ ಫೆಲೋಶಿಪ್ ಗೈಡ್ ಆಗೋಕೆ ನಿಮ್ಮಿಂದ ಒಂದು ಪ್ರಮಾಣ ಪತ್ರ ಬೇಕಂತಾ ಹೇಳಿದರು.. ಇಲ್ಲಾಂದ್ರೆ  ನೀವು  ಕಿರಿಕ್ ಮಾಡ್ತೀರಾ ಅಂತಂದ್ರು. ಅದಕ್ಕೆ ನಿಮ್ಮ ಹತ್ರಾ ಬಂದೆ ಸಾರ್.

ಡಾ.ಎಸ್ : ಏನ್ರಿ ಏನ್ರೀ ಇದು ಅನ್ಯಾಯ... ಅಕಾಡೆಮಿಯವರಿಗೆ ಬುದ್ದಿ ಗಿದ್ದಿ ಏನಾದ್ರೂ ಇದೆಯಾ? ನನ್ನಂತಾ ಮೋಸ್ಟ್ ಕ್ವಾಲಿಫೈಡ್ ಡಾಕ್ಟರೇಟ್ ಸಾಧಕನನ್ನ ಬಿಟ್ಟು ನೀವು ನಿಮ್ಮಂತವರನ್ನೆಲ್ಲಾ ಕೇಳ್ತಾರಲ್ರಿ.. ಅದಕ್ಕೆ ಈಗೀಗ ಸಂಶೋಧನಾ ಪ್ರಬಂಧಗಳಿಗೆ ಮೂರು ಕಾಸಿನ ಬೆಲೆ ಇಲ್ಲ. ಹೋಗಲಿ ಬಿಡಿ ಅಕಾಡೆಮಿಯವರಿಗೆ ಎಲ್ಲಿ ಯಾವಾಗ ಕೊಕ್ಕೆ ಹಾಕಬೇಕು ಅಂತಾ ನಂಗೆ ಗೊತ್ತಿದೆ.. ಅತ್ಯಂತ ಯೋಗ್ಯನಾದ ನಂಗೆ ಸಿಗದೇ ಇರೋ ಅವಕಾಶ ಬೇರೆಯವರಿಗೆ ಸಿಕ್ಕರೆ ನಾನು ಸುಮ್ಮನೆ ಬಿಡ್ತೀನಾ... ವಾಟ್ಸಾಪ್ ಫೇಸ್ಬುಕ್ನಲ್ಲಿ ಕಮೆಂಟ್ ಹಾಕಿ ಅಕಾಡೆಮಿಗೆ ಅಕಾಡೆಮೀನಾ ಅಲ್ಲಾಡ್ಸಿ ಬಿಡ್ತೀನಿ... ಹೋಗ್ಲಿ ಬಿಡಿ... ಈಗ ನಿಮಗೆ ನನ್ನಿಂದ ಪ್ರಮಾಣ ಪತ್ರ ಬೇಕು ಅಷ್ಟೇ ತಾನೆ?

ವ್ಯಕ್ತಿ : ಹೌದು ಸರ್.. ನೀವು ದೊಡ್ಡ ಮನಸ್ಸು ಮಾಡಿ  ' ನಾನು ಮಾರ್ಗದರ್ಶಕನಾಗಲು ಯೋಗ್ಯ' ಅಂತಾ ಒಂದೇ  ಒಂದು ಪ್ರಮಾಣ ಪತ್ರ ಕೊಟ್ಟರೆ....

ಡಾ.ಎಸ್ : ಹಾಗೆಲ್ಲಾ ಸುಖಾಸುಮ್ನೆ ಕೇಳಿದವರಿಗೆಲ್ಲಾ ಕೊಡೋಕಾಗುತ್ತೇನ್ರಿ.. ಮೊದಲು ನಾನು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ...  ಯಾವ ವಿಷಯದ ಮೇಲೆ ಡಾಕ್ಟರೇಟ್ ಮಾಡಿದ್ದೀರಿ?

ವ್ಯಕ್ತಿ : ಇಲ್ಲಾ ಸರ್ ನಾನು ಡಾಕ್ಟರ್ ಅಲ್ಲಾ.. ಥೇಯಟರ್ ಪ್ರ್ಯಾಕ್ಟಿಶ್ನರ್.

ಡಾ.ಎಸ್ : ಏಳ್ರೀ ಎದ್ದೇಳ್ರೀ ಮೇಲೆ. ಡಾಕ್ಟರೇಟ್ ಮಾಡಿಲ್ಲ ಅಂದ ಮೇಲೆ ಮಾರ್ಗದರ್ಶನ ಮಾಡೋಕೆ ನಿಮಗೆಲ್ರಿ ಇದೆ ಅರ್ಹತೆ. ಡಾಕ್ಟರೇಟ್ ಮಾಡಿದ ನಾನೇ ಅವಕಾಶ ಇಲ್ಲದೇ ವಾಟ್ಸಾಪ್ ಕಾಮೆಂಟ್ ಮಾಡ್ತಾ ಅವರಿವರಿಗೆ ಕೊಕ್ಕೆ ಹಾಕ್ತಾ ಕೂತಿರುವಾಗ...

ವ್ಯಕ್ತಿ : ಸಾರ್ ಹಾಗಲ್ಲಾ ಸರ್... ನನಗೆ ರಂಗಭೂಮಿಯಲ್ಲಿ ಮೂವತ್ತು ವರ್ಷದ ಅನುಭವ ಇದೆ.. ಇಷ್ಟು ಸಾಕಲ್ವಾ ಸಾರ್ ಬೇರೆಯವರಿಗೆ ಗೈಡ್ ಮಾಡೋಕೆ.

ಡಾ.ಎಸ್ : ರೀ... ನಿಮಗೆ ಬುದ್ದಿ ಇದೆಯೇನ್ರೀ. ಎಷ್ಟು ವರ್ಷ ಕೆಲಸಾ ಮಾಡಿದ್ರೇನು ಕಂಪೌಂಡರ್ ಎಂದಾದ್ರೂ ಡಾಕ್ಟರ್ ಆಗೋಕೆ ಆಗುತ್ತೇನ್ರಿ. ಡಾಕ್ಟರೇಟ್ ಮಾಡಬೇಕ್ರಿ... ನನ್ನಂತಾ ಅಕಾಡೆಮಿಕ್ ಸ್ಕಾಲರ್ ವ್ಯಕ್ತಿಗೆ ಸಿಗಬೇಕಾದ ಅವಕಾಶ ನಿಮ್ಮಂತಾ ಪ್ರ್ಯಾಕ್ಟಿಸ್ನರ್ಗೆ ಸಿಗುತ್ತೇನ್ರಿ.. 

ವ್ಯಕ್ತಿ : ಇಲ್ಲಾ ಅನ್ಬೇಡ್ರಿ ಸರ್.  ಬೇಕಾದ್ರೆ ಪ್ರಶ್ನೆ ಕೇಳಿ ನನ್ನ ಟೆಸ್ಟ್ ಮಾಡಿ ಪ್ರಮಾಣ ಪತ್ರ ಕೊಡಿ..

ಡಾ.ಎಸ್ : ನಿಮ್ಮನ್ನ ನೋಡಿದ್ರೆ ನಾಟಕದ ಬಗ್ಗೆ ಆಳವಾಗಿ ಏನೂ ಗೊತ್ತಿಲ್ಲಾಂತ ಕಾಣ್ಸುತ್ತೆ.. ಆದರೂ ಕೇಳ್ತೇನೆ  ಕಾವ್ಯೇಶು ನಾಟಕಂ ರಮ್ಯಂಅಂತಾ ಯಾರು ಹೇಳಿದ್ದು.

ವ್ಯಕ್ತಿ : ಅದೇ ಈಗ ನೀವೇ ಹೇಳಿದ್ರಲ್ಲಾ ಸರ್.

ಡಾ. ಎಸ್: ಕವಿ ಕಾಳಿದಾಸ ಹೇಳಿದ್ದು ಅಂತಾ ಕೂಡಾ ಗೊತ್ತಿಲ್ಲದ ನಿಮಗೆ ಹೇಗ್ರೀ ಪ್ರಮಾಣ ಪತ್ರ ಕೊಡಲಿ

ವ್ಯಕ್ತಿ : ಅದು  ಕಾಳಿದಾಸ ಹೇಳಿದ್ದಲ್ಲಾ ಸರ್..

ಡಾ.ಎಸ್ : ಥೋ ಥೋ... ನಾನು ನಾಟಕದಲ್ಲಿ ಡಾಕ್ಟರೇಟ್ ಮಾಡಿದ್ದೀನಿ... ನಾನು ಹೇಳಿದ್ದು ಸುಳ್ಳು ಅಂತಾ ಹೇಳೋಕೆ ನಿಮಗೆಷ್ಟು ದೈರ್ಯ?

ವ್ಯಕ್ತಿ : ಧೈರ್ಯ ಅಲ್ಲಾ ಸರ್ ಸತ್ಯ. ಕಾಳಿದಾಸನ ಶಾಕುಂತಲಾ ನಾಟಕದ ಕುರಿತು ಕಾವ್ಯ ಮಿಮಾಂಸಕರೊಬ್ಬರು ಶ್ಲೋಕವನ್ನು ಬರೆದಿದ್ದು ಸರ್.. ಸಾಕ್ಷಿ ಬೇಕಾದರೆ ಇಲ್ಲಿದೆ ನೋಡಿ.. ನಾನೇ ಪತ್ರಿಕೆಯಲ್ಲಿ ಆಧಾರ ಸಮೇತ ಬರೆದ ಲೇಖನ.

ಡಾ.ಎಸ್ : ( ತಲೆ ಕೆರೆದುಕೊಂಡು ಲೇಖನ ಓದಿ) ಅದು ಹೋಗ್ಲಿ..  ನಾಟಕ ಗೀಟಕಾ ನೋಡೋ ಚಟಾ ಏನಾದ್ರೂ ಇದೆಯಾ

ವ್ಯಕ್ತಿ : ಇದೆ ಸರ್... ಮೂವತ್ತು ವರ್ಷದಿಂದ ಎಲ್ಲಾ ಪ್ರಮುಖ ನಾಟಕಗಳನ್ನ ನೋಡಿದ್ದೇನೆ ಸರ್. ನಾ ನೋಡಿದ ಬಹುತೇಕ ನಾಟಕಗಳಿಗೆ ವಿಮರ್ಶೆ ಕೂಡಾ ಬರೆದಿದ್ದೇನೆ.. ಎಲ್ಲಾ ಪ್ರಮುಖ ಪತ್ರಿಕೆಯಲ್ಲೂ ಪ್ರಕಟವಾಗಿವೆ. ಪೈಲಲ್ಲಿ ಇವೆ ನೋಡಿ ಪ್ರಕಟಗೊಂಡ ವಿಮರ್ಶೆಗಳು.

ಡಾ.ಎಸ್: ಹೌದಲ್ರೀ ಎಷ್ಟೊಂದು ನಾಟಕದ ಬಗ್ಗೆ ಬರೆದಿದ್ದೀರಲ್ಲಾ...ಇವೆಲ್ಲಾ ನೀವೇ ಬರೆದಿದ್ದಾ ಇಲ್ಲಾ ಬೇರೆಯವರಿಂದ ಬರೆಸಿದ್ದಾ? ಹೋಗಲಿ ನಾಟಕದ ಸ್ಕ್ರಿಪ್ಟ್ ಹೇಗಿರುತ್ತೆ ಅಂತಾನಾದ್ರೂ ಗೊತ್ತೇನ್ರಿ?

ವ್ಯಕ್ತಿ : ಗೊತ್ತಿದೆ ಸರ್. ಮೂವತ್ತು ಸ್ಟೇಜ್ ನಾಟಕ, ಮೂವತ್ತೈದು ಬೀದಿ ನಾಟಕ ಬರೆದು ಆಡ್ಸಿದ್ದೇನೆ ಸರ್... ನೂರಾರು ಪ್ರದರ್ಶನ ಕೂಡಾ ಆಗಿದ್ದಾವೆ ಸರ್.

ಡಾ.ಎಸ್ : ನಾಟಕ ಬರೆಯೋದಲ್ದೆ ನಿರ್ದೇಶನ ಕೂಡಾ ಮಾಡ್ತೀರಾ? ಭೇಷ್ ಅಮೇಲೆ..

ವ್ಯಕ್ತಿ : ಇಪ್ಪತ್ತು ವರ್ಷದಿಂದ ಸಾವಿರಾರು ಯುವಕರಿಗೆ ಅಭಿನಯ ತರಬೇತಿ ಕೂಡಾ ಕೊಟ್ಟಿದ್ದೀನಿ...ಈಗಲೂ ಕೊಡ್ತಿದ್ದೀನಿ ಸರ್.. ನಂದೆ ತರಬೇತಿ ಸಂಸ್ಥೆ ಕೂಡಾ ಇದೆ..ನಮ್ಮ ಸಂಸ್ಥೆ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಇಲ್ಲಿದೆ ನೋಡಿ ಸರ್...

ಡಾ.ಎಸ್ : (ಖುರ್ಚಿಯಿಂದ ಎದ್ದು ನಿಂತು) ವೆರಿ ವೆರಿ ಇಂಟ್ರೆಸ್ಟಿಂಗ್. ಇನ್ನೂ ಏನ್ರೀ ಮಾಡ್ತೀರಿ...?

ವ್ಯಕ್ತಿ : ಅಂತಾದ್ದೇನಿಲ್ಲಾ ಸರ್... ರಂಗಭೂಮಿ ಕುರಿತು ನೂರಾರು ಪ್ರಬಂಧ ಮಂಡನೆ ಮಾಡಿದ್ದೇನೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಎಂಎ, ಪಿಹೆಚ್ಡಿ ಮಾಡೋ ವಿದ್ಯಾರ್ಥಿಗಳಿಗೆ ರಂಗಭೂಮಿಯ ಬೇರೆ ಬೇರೆ ವಿಷಯಗಳ ಕುರಿತು ಪಾಠ ಮಾಡಿದ್ದೇನೆ ಸರ್

ಡಾ.ಎಸ್ : ( ವ್ಯಕ್ತಿಯ ಹತ್ತಿರ ಬಂದು) ಹೌದಾ... ಆಮೇಲೆ.. 

ವ್ಯಕ್ತಿ : ಮತ್ತೇನಿಲ್ಲಾ ಸರ್... ಅನೇಕ ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು ಏರ್ಪಡಿಸಿದ ನಾಟಕ ಸ್ಪರ್ಧೆಗಳಿಗೆ ತೀರ್ಪುಗಾರನಾಗಿದ್ದೇನೆ ಸರ್.

ಡಾ.ಎಸ್ : ಎಲ್ಲಾ ಮಾಡಿದ್ದಾಯ್ತಲ್ಲಾ... ಇನ್ನೇನಾದ್ರೂ ಬಾಕಿ ಇದೆಯಾ ಮಾಡೋಕೆ

ವ್ಯಕ್ತಿ : ಅಂತಾದ್ದೇನೂ ಬಾಕಿ ಇಲ್ಲಾ ಸರ್. ರಂಗಭೂಮಿ ಕುರಿತ ಪತ್ರಿಕೆಗಳ ಸಂಪಾದಕನಾಗಿದ್ದೆ ಸರ್. ನಾಡಿನ  ಎಲ್ಲಾ ಪತ್ರಿಕೆಗಳಲ್ಲೂ ರಂಗಲೇಖನಗಳನ್ನ ಬರೆದಿದ್ದೆ...ಈಗಲೂ ಬರೀತಾ ಇರುವೆ ಸರ್..

ಡಾ.ಎಸ್ : ಹೌದ್ರಿ.. ನಾನೂ ಆಗಾಗ ಲೋಕಲ್ ಪತ್ರಿಕೆಗಳಿಗೆ ಬರೆದು ವಾಟ್ಸಾಪಿಗೆ ಹಾಕ್ತಾ ಇರ್ತೇನೆ ಬಿಡಿ.  ಆಯ್ತಾ ಇನ್ನೂ ಏನಾದ್ರೂ ನೀವು ಮಾಡಿದ್ದು ಬಾಕಿ ಇದೆಯಾ

ವ್ಯಕ್ತಿ : ಅಂತಾದ್ದೇನಿಲ್ಲಾ ಸರ್. ಸ್ವಂತದ್ದೊಂದು ಆಪ್ತ ರಂಗಮಂದಿರ ಕಟ್ಕೊಂಡು ನಾಟಕಾ ಆಡಿಸ್ತಾ, ಪ್ರದರ್ಶನ ಮಾಡ್ತಾ ಬಡಾವಣೆ ರಂಗಭೂಮಿ ಬೆಳೆಸೋದಕ್ಕೆ ಪ್ರಯತ್ನ ಮಾಡ್ತಾ ಇದ್ದೇನೆ ಸರ್. ದಯವಿಟ್ಟು ಒಂದು ಪ್ರಮಾಣ ಪತ್ರ ಕೊಟ್ಟು ಉಪಕಾರ ಮಾಡಿ ಸರ್..

ಡಾ.ಎಸ್ : ನಿಮಗ್ಯಾಕೆ ಸರ್ ಪ್ರಮಾಣ ಪತ್ರ...? ರಂಗಭೂಮಿಯಲ್ಲಿ ಎಲ್ಲಾನೂ ಮಾಡಿ ಅನುಭವ ಇರುವ ನಿಮಗ್ಯಾಕೆ ಬೇಕು ಹೇಳಿ ಪ್ರಮಾಣ ಪತ್ರ? ಎಲ್ಲ ತಿಳಿದ ನಿಮ್ಮಂತಾ ಅನುಭವಿಗಳು ಹೊಸಬರಿಗೆ ಮಾರ್ಗದರ್ಶನ ಮಾಡಲೇಬೇಕು. ಅದೇ ಸೂಕ್ತ.. ಪ್ರಮಾಣ ಪತ್ರ ಡಿಗ್ರೀ ಡಾಕ್ಟರೇಟಗಳಿಗಿಂತಾ ಅನುಭವ ದೊಡ್ಡದು

( ಅಷ್ಟರಲ್ಲಿ ಕಿಟಕಿಯಿಂದ ಅತೃಪ್ತ ಆತ್ಮವೊಂದು ಇಣಿಕಿ ನೋಡಿ...)

ಅತೃಪ್ತಾತ್ಮ : ಬೇಡಾ ಡಾಕ್ಟರೇ ಸರ್ಟಿಪಿಕೇಟ್ ಕೊಡಬೇಡಿ. ಅಖಂಡ ಪ್ರಖಾಂಡ ಪಂಡಿತನಿಗೆ ಪ್ರಮಾಣ ಪತ್ರ ಕೊಡಲೇಬೇಡಿ. ತಾನೊಬ್ಬನೇ ಸಾಚಾ ನಾವೆಲ್ಲಾ ಬಚ್ಚಾಗಳು ಅಂತಾ ತಿಳಕೊಂಡಿರುವ ಸಾಂಸ್ಕೃತಿಕ ಸುಧಾರಕನಿಗೆ ಸಹಾಯ ಮಾಡಬೇಡಿ. ಉರಿ...ಅಯ್ಯೋ ಉರಿ... ತಾಳದ ಉದರ ಉರಿ.. ಅಸಹನೆಯ ಉರಿ.. ಅಸಹಿಷ್ಣುತತೆಯ ಉರಿ... ( ಎನ್ನುತ್ತಾ ಗಹಗಹಿಸಿ ಡಾಕ್ಟರ್ ಎಸ್ ದೇಹದೊಳಗೆ ಸೇರಿಕೊಂಡಿತು)

ಡಾ. ಎಸ್ : (ಇದ್ದಕ್ಕಿದ್ದಂತೆ ತನ್ನ ವರ್ತನೆಯನ್ನು ಬದಲಾಯಿಸಿಕೊಂಡು) ಹೌದು... ಅಯ್ಯೋ  ಉರಿ .. ಉರಿ... ಅಸೂಯೆಯ ಉರಿ... ಅಸಹನೆಯ ಉರಿ... ನನಗಿಂತಾ ಯಾರೂ ಶ್ರೇಷ್ಟರಲ್ಲಾ... ನಾನೇ ಎಲ್ಲರಿಗಿಂತಾ ಸರ್ವ ಶ್ರೇಷ್ಠ. ನಿನಗೆ ಎಷ್ಟು ಅನುಭವ ಇದ್ದರೇನು ಬಂತು ಭಾಗ್ಯ? ಕ್ವಾಲಿಟಿ ಇದ್ದರೂ ಕ್ವಾಲಿಫಿಕೇಶನ್ ಇಲ್ಲಾ ಎಂದ ಮೇಲೆ ಗೈಡ್ ಆಗಲು ಸಾಧ್ಯವೇ ಇಲ್ಲ. ಇದನ್ನು ನಾನು ಒಪ್ಪುವುದೂ ಇಲ್ಲಾ... ನಾನೇ ಬುದ್ದಿವಂತಾ... ನನಗಿಂತ ಬುದ್ದಿವಂತರು ಇರಬಾರದು... ಇದ್ದರೆ ಅಂತವರನ್ನು ಕಾಡದೇ ಸುಮ್ಮನೆ ಬಿಡಬಾರದು... ನಿಂದನೆ... ಹಾಂ... ನಿಂದಿಸಿ ನಿಮ್ಮಂತವರ ಆತ್ಮಸ್ಥೈರ್ಯವನ್ನ ಕೊಲ್ಲಬೇಕು. ಇಲ್ಲಸಲ್ಲದ್ದನ್ನು ಅಪಪ್ರಚಾರ ಮಾಡಿ ಅನರ್ಹನೆಂದು ಸಾಬೀತು ಮಾಡಬೇಕು. ನೋಡಿಲ್ಲಿ, ವ್ಯಸನ.... ಶ್ರೇಷ್ಟತೆಯ ವ್ಯಸನ ನನ್ನ ತಲೆಗೇರಿ ಕುಳಿತಿದೆ... ಉರಿ...ಬುಡದಿಂದ ಮುಡಿಯವರೆಗೆ ಅಸಹನೆಯ ಉರಿ ಧಗಧಗನೆ ಉರಿಯುತ್ತಿದೆ. ಬೇರೆಯವರು ಬೆಳೆಯಬಾರದು.. ನಾನು... ನಾನು ...ನನ್ನಲ್ಲಿರುವುದು ಕೇವಲ ನಾನು ಎಂಬುದು  ಮಾತ್ರ...  ಬಾಕಿ ಎಲ್ಲಾ ಗೋಮೂತ್ರ.... ಉರಿ...ಉರಿ... ( ಎನ್ನುತ್ತಾ ಡಾಕ್ಟರ್ ಅರಚಾಡಿ ಕಿರುಚಾಡಿ ದೆವ್ವ ಬಂದವರಂತೆ ಹೊರಳಾಡಿ ಎದ್ದು ಹೊರಗೆ ಓಡಿ ಹೋಗುತ್ತಾನೆ... ಅವರ ಹಿಂಗೆ ವ್ಯಕ್ತಿ ಕೂಡಾ ಹೋಗುತ್ತಾ..)

ವ್ಯಕ್ತಿ : ಸರ್... ಪ್ರಮಾಣ ಪತ್ರ ಸರ್... ಸರ್ಟಿಫಿಕೇಟ್ ಸರ್...( ಎನ್ನುತ್ತಾ ಓಡುತ್ತಾನೆ.)

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ