ಸೋಮವಾರ, ಆಗಸ್ಟ್ 18, 2014

“ದೊಡ್ಡಾಟ ಶೈಲಿಯಲ್ಲಿ ಮೂಡಿಬಂದ “ವೀರ ರಾಣಿ ಕಿತ್ತೂರು ಚೆನ್ನಮ್ಮ”: ಒಂದು ಸಾರ್ಥಕ ಪ್ರಯತ್ನ.





                 ತುಂ ತಕಜನ ದೀಂ ತಕಜನ ತುಂ ತಕಜನ ತಾ...
              ತುಂ ತಕಜನ ದೀಂ ತಕಜನ ತುಂ ತಕಜನ ತಾ... ಥೈಯಾ
              ತುಂ ತಕಜನ ತಾ....

ಮೇಳದವರ ಸಿರಿಕಂಠದಿಂದ ಬರುವ ಸಂಗೀತಾಲಾಪ ಕೇಳಿದರೆ ಸಾಕು ದೊಡ್ಡಾಟವೊಂದು ಅನಾವರಣಗೊಳ್ಳುತ್ತಿದೆ ಎಂದೇ ಅರ್ಥ. ಕೇಳುಗರ ಎದೆಬಡಿತ ತಾಳಕ್ಕೆ ತಕ್ಕಂತೆ ಸ್ಪಂದಿಸುತ್ತಿದೆ ಎಂದೇ ಅರ್ಥ. ಹಾಡು ಸಂಗೀತ ಕುಣಿತ ವೇಷ ಮಾತುಗಾರಿಕೆಗಳು ವಿಜ್ರಂಭಿಸುತ್ತಿವೆ ಎಂದೇ ಅರ್ಥ. ಎಲ್ಲಾ ರೀತಿಯ ಅರ್ಥಗಳನ್ನು ಸೇರಿಸಿದ ಸಾರ್ಥಕ ಪ್ರಯತ್ನವೊಂದನ್ನು ವೀರ ರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ನೋಡುವುದೇ ಒಂದು ಸಂಭ್ರಮ.

ದೊಡ್ಡಾಟ ಎನ್ನುವುದು ನಿಜವಾದ ಅರ್ಥದಲ್ಲಿ ವಿಶಿಷ್ಟ ಶೈಲಿಯ ಗಂಡು ಕಲೆ. ಶತಮಾನಗಳಿಂದ ಉತ್ತರ ಕರ್ನಾಟಕದಲ್ಲಿ ತಲೆಮಾರುಗಳಿಂದ ತಲೆಮಾರಿಗೆ ಹರಿದು ಬಂದ ಜಾನಪದ ರಂಗಕಲೆ. ಕಾಲನ ಗತಿಗೆ ಸ್ಪಂದಿಸದ ಕಾರಣದಿಂದಾಗಿ ಈಗ ಅವಸಾನದಂಚಿಗೆ ಬಂದು ನಿಂತಿದೆ. ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಪರಿಷ್ಕರಣೆಗೊಳಗಾಗಬೇಕಾದ ಅಗತ್ಯತೆ ಇದೆ.


ನಿಟ್ಟಿನಲ್ಲಿ ಜೂನ್ 28ರಂದು ತೀರಿಕೊಂಡ ಜಾನಪದ ಜಂಗಮ ಡಾ.ಬಸವರಾಜ ಮಲಶೆಟ್ಟಿಯವರು ತುಂಬಾ ಪ್ರಯತ್ನಿಸಿದ್ದರು. ಪರಿಷ್ಕೃತ ರೂಪದ ಗಿರಿಜಾ ಕಲ್ಯಾಣ ದೊಡ್ಡಾಟವನ್ನು ರಚಿಸಿ ಪ್ರದರ್ಶಿಸಿದರು. ಡಾ.ಮಲಶೆಟ್ಟಿಯವರ ಆಶಯವನ್ನು ಮುಂದುವರೆಸಿರುವ ಗ್ರಾಮರಂಗ ತಂಡವು ಮೂಡಲಪಾಯ ದೊಡ್ಡಾಟದ ಕುರಿತು ತರಬೇತಿ ಶಿಬಿರಗಳನ್ನು ಆಯೋಜಿಸಿ ಯುವ ಜನರಿಗೆ ದೊಡ್ಡಾಟದ ಹೆಜ್ಜೆ, ಹಾಡು, ಶೈಲಿಯ ಪ್ರಾಯೋಗಿಕ ತರಬೇತಿಯನ್ನು ಕೊಡುತ್ತಿದೆ. ಗ್ರಾಮರಂಗ ರೂವಾರಿ ಎಂ.ಎಸ್.ಮಾಳವಾಡರು ದೊಡ್ಡಾಟವನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಪರಿಷ್ಕರಿಸಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಎನ್ನುವ ಐತಿಹಾಸಿಕ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.

ಜುಲೈ 20 ರಿಂದ 29 ರವರೆಗೆ ಗದುಗಿನ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಮೂಡಲಪಾಯ ದೊಡ್ಡಾಟ ರಂಗ ತರಬೇತಿ ಶಿಬಿರದ ಸಮಾರೋಪದ ದಿನವಾದ 2014 ಜುಲೈ 29ರಂದು ಶಿಬಿರಾರ್ಥಿಗಳಿಂದ ...ಕಿತ್ತೂರು ಚೆನ್ನಮ್ಮ ದೊಡ್ಡಾಟವು ಪ್ರದರ್ಶನಗೊಂಡು ನೋಡುಗರಲ್ಲಿ ಒಂದು ರೀತಿಯ ಸಂಚಲನವನ್ನುಂಟುವಾಡುವಲ್ಲಿ ಯಶಸ್ವಿಯಾಯಿತು. ಎಂ.ಎಸ್.ಮಾಳವಾಡರು ಐತಿಹಾಸಿಕ ವಸ್ತುವುಳ್ಳ ದೊಡ್ಡಾಟವನ್ನು ರಚಿಸಿ ನಿರ್ದೇಶಿಸುವ ಮೂಲಕ ದೊಡ್ಡಾಟದಲ್ಲಿ ಹಲವಾರು ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದಾರೆ.

ಆದಿಯಿಂದಲೂ ಪೌರಾಣಿಕ ಪರಿಕಲ್ಪನೆಯಲ್ಲಿಯೇ ಮೂಡಿಬಂದಿರುವ ದೊಡ್ಡಾಟ ಪ್ರಕಾರದ ಪರಂಪರಾಗತ ಚೌಕಟ್ಟನ್ನು ಒಡೆದು ಹಾಕಿ ಐತಿಹಾಸಿಕ ವಿಷಯವನ್ನಿಟ್ಟುಕೊಂಡು ದೊಡ್ಡಾಟವನ್ನು ಕಟ್ಟಿಕೊಟ್ಟಿದ್ದೇ ದೊಡ್ಡಾಟ ಕ್ಷೇತ್ರದಲ್ಲಿ ಒಂದು ಹೊಸ ಹೆಜ್ಜೆ. ಜಾನಪದ ರಂಗಭೂಮಿಯಲ್ಲಿ ಯಾವಾಗಲೂ ಆರಂಭದಲ್ಲಿ ಗಣಪತಿಯ ಪಾತ್ರ ಹಾಗೂ ಅವನ ಸ್ತುತಿಯೇ ನಾಟಕದ ಸಂವಿಧಾನವೇನೋ ಎನ್ನುವಂತಿತ್ತು. ಆದರೆ ಬ್ರಾಹ್ಮಿಣಿಕಲ್ ಪರಿಕಲ್ಪನೆಯ ಐಡೆಂಟಿಟಿಯಾದ ಕಾಲ್ಪನಿಕ ಗಣೇಶನನ್ನು ಕೈಬಿಟ್ಟು ಅದರ ಬದಲಾಗಿ ಬಸವಣ್ಣನ ಪಾತ್ರ ಸೃಷ್ಟಿಸಿ ಸ್ತುತಿಸಿದ ರೀತಿ ...ಚೆನ್ನಮ್ಮ ದೊಡ್ಡಾಟದ ವಿಶೇಷತೆಯಾಗಿದೆ. ಹೀಗೆ ಮಿಥ್ಗಳನ್ನು ಒಡೆದು ಕಟ್ಟುವ ಕ್ರಿಯೆ ರಂಗಭೂಮಿಯಲ್ಲಿ ಅಗತ್ಯವಾಗಿದೆ. ಜೊತೆಗೆ ದೊಡ್ಡಾಟದ ಅವಧಿ ಅಹೋರಾತ್ರಿಯದ್ದಾಗಿರುತ್ತದೆ. ಈಗ ಜನರಿಗೆ ರಾತ್ರಿಪೂರಾ ನಾಟಕ ನೊಡುವ ಆತುರ ಕಾತುರ ಸಹನೆ ಇಲ್ಲ. ಹೀಗಾಗಿ ಎಂಟು ಗಂಟೆಗಳ ಕಾಲಾವಧಿಯಲ್ಲಿ ನಡೆಯುವ ದೊಡ್ಡಾಟ ಪರಂಪರೆಗೆ ಒಂದಿಷ್ಟು ಬದಲಾವಣೆ ತಂದು ಮೂರುವರೆ ಗಂಟೆಗೆ ಕಾಲಾವಧಿಯನ್ನು ಸೀಮಿತಿ ಗೊಳಿಸಿದ್ದು ...ಚಿನ್ನಮ್ಮ ನಾಟಕದ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ಕಿತ್ತೂರು ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ವೀರಮಹಿಳೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷ ಸಾಮ್ರಾಜ್ಯವನ್ನು ವಿರೋಧಿಸಿ ಯುದ್ದಮಾಡಿದ ಮೊಟ್ಟಮೊದಲ ದಿಟ್ಟ ರಾಣಿ. ನಾಡಪ್ರೀತಿಗೆ, ದೇಶಭಕ್ತಿಗೆ ಪ್ರೇರಕಳಾದ ಚೆನ್ನಮ್ಮನನ್ನು ನಾಟಕದಲ್ಲಿ ಕಟ್ಟಿಕೊಡುವುದೇ ಒಂದು ವಿಶಿಷ್ಟ ಅನುಭವ. ಅದರಲ್ಲೂ ಶೈಲೀಕೃತವಾದ ದೊಡ್ಡಾಟದಲ್ಲಿ ಚಾರಿತ್ರಿಕ ವೀರಗಾತೆಯನ್ನು ಹೇಳುವುದು ನಿಜಕ್ಕೂ ಸವಾಲಿನ ಕೆಲಸ. ಯಾಕೆಂದರೆ ಐತಿಹಾಸಿಕ ವ್ಯಕ್ತಿಗಳಿಗೆ ಪೌರಾಣಿಕ ವೇಷಗಳನ್ನು ತೊಡಿಸಿ, ಶೈಲೀಕೃತಿ ಕುಣಿತಗಳನ್ನು  ಕಲಿಸಿ, ಕಾವ್ಯಾತ್ಮಕ ಪ್ರಾಸಬದ್ದ ಮಾತುಗಳನ್ನಾಡಿಸಿ, ಹಾಡು ಸಂಗೀತಗಳ ಮೂಲಕ ಕಥೆಯನ್ನು ನಿರೂಪಿಸುವ ರೀತಿ ಸುಶಿಕ್ಷಿತ ನೋಡುಗರಿಗೆ ಅವಾಸ್ತವವೆನಿಸುತ್ತದೆ. ಆದರೆ ವಾಸ್ತವಿಕ ಘಟನೆಗಳನ್ನು ಅವಾಸ್ತವಿಕ ರಂಗತಂತ್ರಗಳ ಮೂಲಕ ಪ್ರಸ್ತುತ ಪಡಿಸಿರುವ ದೊಡ್ಡಾಟದ ನಿರ್ದೇಶಕ ಎಂ.ಎಸ್.ಮಾಳವಾಡರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ. ದೊಡ್ಡಾಟ ಕೇವಲ ಪೌರಾಣಿಕ ಸಂದರ್ಭಗಳಿಗೆ ಮಾತ್ರ ಅನ್ವಯವಾಗುತ್ತದೆ ಐತಿಹಾಸಿಕಕ್ಕಲ್ಲ ಎಂದು ಡಾ.ಮಲಶೆಟ್ಟಿಯಂತಹ ಜಾನಪದ ತಜ್ಞರೂ ಅಪಸ್ವರ ಎತ್ತಿದ್ದರು. ಆದರೆ ಮಾಳವಾಡರು ಇದನ್ನೇ ಸವಾಲಾಗಿ ತೆಗೆದುಕೊಂಡು ವೀರ ರಾಣಿ ಕಿತ್ತೂರು ಚೆನ್ನಮ್ಮ ಚಾರಿತ್ರಿಕ ನಾಟಕವನ್ನು ರಚಿಸಿ ದೊಡ್ಡಾಟದ ಶೈಲಿಗೆ ಅಳವಡಿಸಿ ಪ್ರದರ್ಶಿಸಿದ್ದು ಸ್ಮರಣೀಯವಾಗಿದೆ. ಹಾಗೂ ಐತಿಹಾಸಿಕ ಸಂದರ್ಭಗಳನ್ನೂ ದೊಡ್ಡಾಟದಲ್ಲಿ ಅಳವಡಿಸಬಹುದಾದ ಸಾಧ್ಯತೆಗಳನ್ನು ಮುಕ್ತವಾಗಿಸಿದೆ.



 ಜಗಮಗಿಸುವ ಪಾತ್ರಗಳ ವೇಷಗಾರಿಕೆ, ರಂಗದಂಗಳದ ತುಂಬಾ ಪಾತ್ರಗಳ ಹೆಜ್ಜೆ ಕುಣಿತ, ಕೇಳುಗರ ಎದೆಬಡಿತ ಹೆಚ್ಚಿಸುವ ಹಿಮ್ಮೇಳದ ಮದ್ದಲೆ ಸಂಗೀತ, ವಿಶಿಷ್ಟ ಶೈಲಿಯ ಹಾಡುಗಾರಿಕೆ.... ಹೀಗೆ ದೊಡ್ಡಾಟವನ್ನು ಬರೀ ಕೇಳುವುದಲ್ಲ ನೋಡಿ ಅನುಭವಿಸಿಯೇ ಸವಿಯಬೇಕು. ಕೃಷಿ ಮೂಲ ಶ್ರಮ ಸಂಸ್ಕೃತಿಯ ಕಲೆಯನ್ನು ರಂಗವೇದಿಕೆಯ ಮೇಲೆ ನೋಡುವುದೇ ಒಂದು ಸೌಭಾಗ್ಯ. ಪ್ರೇಕ್ಷಕರಿಗೆ ..... ಕಿತ್ತೂರು ಚೆನ್ನಮ್ಮ ದೊಡ್ಡಾಟ ಪ್ರದರ್ಶನವು ವಿಶಿಷ್ಟ ರೀತಿಯ ಅನುಭೂತಿಯನ್ನು ಕೊಟ್ಟಿದ್ದಂತೂ ಸುಳ್ಳಲ್ಲ. ದೊಡ್ಡಾಟ ಪ್ರದರ್ಶನದಲ್ಲಿ ಹಲವಾರು ರೀತಿಯಲ್ಲಿ ಪರಿಷ್ಕರಣೆಗಳನ್ನು ಮಾಡಲಾಗಿದೆ. ದೊಡ್ಡಾಟದ ಉಳಿವಿಗಾಗಿ ಈಗ ಅದರ ಅಗತ್ಯವೂ ಇದೆ.

ಹಾಡು ಸಂಗೀತದಲ್ಲಿ ಪರಿಷ್ಕರಣೆ : ಹಳ್ಳೀಯ ಒಕ್ಕಲು ದುಡಿದುಡಿದು ಸವೆದೋರು.. ಎನ್ನುವ ದೊಡ್ಡಾಟದ ಆರಂಭದ ಹಾಡು ಶ್ರಮ ಸಂಸ್ಕೃತಿಯ ಗ್ರಾಮೀಣ ಜನಪದ ಕಲೆಗೆ ಸಂಕೇತವಾಗಿ ಮೂಡಿಬಂದಿದೆ. ಇಡೀ ದೊಡ್ಡಾಟದ ಅಂತಃಸತ್ವ ಇರುವುದೇ ಹಾಡುಗಾರಿಕೆಯಲ್ಲಿ. ಹಾಡಿಗೆ ತಕ್ಕಂತೆ ರಾಗರತಿಯ ರಂಗೇಳುವಂತೆ ಸ್ಪಂದಿಸುವ ಮೇಳ ಹಾಗೂ ಮೇಳಿಗರ ತಾಳ, ಮದ್ದಲೆಗಳುಂಟುವಾಡುವ ಉನ್ಮಾದದಲ್ಲಿ. ಬಹುತೇಕ ದೊಡ್ಡಾಟಗಳಲ್ಲಿ ಕತೆಗಾರನ ಬಾಯಲ್ಲಿ ಬರುವ ಹಾಡುಗಾರಿಕೆ ಕೇಳಲು ಅದ್ಭುತ ಎನಿಸಿದರೂ ಸುಲಭಕ್ಕೆ ಅರ್ಥವಾಗುವುದೇ ಇಲ್ಲ. ಆದರೆ ...ಕಿತ್ತೂರು ಚೆನ್ನಮ್ಮ ದೊಡ್ಡಾಟದ ವಿಶೇಷತೆ ಏನೆಂದರೆ ಬಳಸಿದ ಎಲ್ಲಾ ಹಾಡುಗಳ ಸಾಹಿತ್ಯ ಕೇಳುಗರಿಗೆ ಸ್ಪಷ್ಟವಾಗಿ ಅರ್ಥವಾಗುವಂತಿದೆ. ಸಂಗೀತ ಎನ್ನುವುದು ಹಾಡಿನ ಸಾಹಿತ್ಯದ ಮೇಲೆ ಸವಾರಿ ಮಾಡದೇ ಜೊತೆಜೊತೆಗೆ ಮೂಡಿಬಂದಿದೆ. ಪಾರಂಪರಿಕ ದೊಡ್ಡಾಟಗಳಲ್ಲಿ ಹಾಡಿನ ಭಾರವೇ ಹೆಚ್ಚಾಗಿದ್ದು ನಾಟಕದಲ್ಲಿ ಅವುಗಳ ಸಂಖ್ಯೆಯನ್ನು ಮಿತಿಗೊಳಿಸಿ ೧೪ ಹಾಡುಗಳನ್ನು ಮಾತ್ರ ಬಳಸಲಾಗಿದೆ. ಇನ್ನೂ ವಿಶೇಷತೆ ಏನೆಂದರೆ ಆರುವರೆ ಕಪ್ ಸ್ವರಾಲಾಪವನ್ನು ನಾಲ್ಕುವರೆ ಕಪ್ಗೆ ಇಳಿಸಿ ಹಾಡುಗಾರ (ಕಥೆಗಾರ) ಮೇಲಿದ್ದ ಶ್ರಮವನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಹಾಡಿನಲ್ಲಿ ಕಿರುಚಾಟ ಕಡಿಮೆಯಾಗಿ ಭಾವನೆಗಳು ಒಡಮೂಡಿ ಸಾಹಿತ್ಯದಲ್ಲಿ ಸ್ಪಷ್ಟತೆ ಮೂಡಿಬಂದಿದೆ. ಇದರಿಂದಾಗಿ ಹಾಡಿನ ಸೌಂದರ್ಯ ಹೆಚ್ಚಾಗಿದೆ. ಹಾಡು ಸಂಗೀತದಲ್ಲಾದ ಹೊಸ ಪರಿಷ್ಕರಣೆ ಜನಮುಖಿಯಾಗಿದ್ದು ದೊಡ್ಡಾಟದ ಉಳಿವಿಗೆ ಇಂತಹ ಬದಲಾವಣೆ ತುರ್ತು ಅಗತ್ಯವಾಗಿದೆ. ರಾತ್ರಿಯಿಂದ ಬೆಳಿಗ್ಗೆವರೆಗೂ ದೊಡ್ಡಾಟ ಮಾಡಬೇಕಾದ ಅನಿವಾರ್ಯತೆ ಇದ್ದಾಗ ಪಾತ್ರಗಳು ಮಾತು ನಟನೆಯಲ್ಲಿ ಮಾಡಿದ್ದನ್ನೇ ಮತ್ತೆ ಹಾಡಿನಲ್ಲಿ ಪುನರಾವರ್ತಿಸಲಾಗುತ್ತಿತ್ತು. ಇದು ಒಂದಿಷ್ಟು ಬೇಸರವನ್ನುಂಟುಮಾಡುತ್ತಿತ್ತು. ಇಂತಹ ರಿಪಿಟೇಶನ್ನಿಗೆ ಚೆನ್ನಮ್ಮ ದೊಡ್ಡಾಟದಲ್ಲಿ ಅವಕಾಶವಿಲ್ಲದ್ದರಿಂದ ನಾಟಕ ಎಲ್ಲೂ ಬೋರೆನ್ನಿಸದೇ ನೋಡಿಸಿಕೊಂಡು ಹೋಗುತ್ತದೆ. ಜೊತೆಗೆ ದೊಡ್ಡಾಟ ಎನ್ನುವುದು ಹಾಡು ಕೇಂದ್ರಿತ ಕಲೆಯಾಗಿದೆ. ಹಾಡುಗಳ ಮೂಲಕ ಕಥೆಯನ್ನು ಕಥೆಗಾರ (ಹಾಡುಗಾರ) ಮುನ್ನೆಡೆಸುತ್ತಾನೆ. ಅದಕ್ಕೆ ಪೂರಕವಾಗಿ ಪಾತ್ರಗಳು ಬಂದು ಕುಣಿದು ಒಂದೆರಡು ಮಾತು ಹೇಳಿ ಹೋಗುತ್ತವೆ (ಸಾರಥಿ ಪಾತ್ರ ಇದಕ್ಕೆ ಅಪವಾದ). ಇದರಿಂದಾಗಿ ಅಭಿನಯ ಹಾಗೂ ಸಂಭಾಷಣೆಗೆ ಹೆಚ್ಚು ಅವಕಾಶವಿಲ್ಲದಾಗುತ್ತದೆ. ಸಮಸ್ಯೆಯನ್ನು ಮನಗಂಡು ... ಚೆನ್ನಮ್ಮ ನಾಟಕವನ್ನು ಸಂಭಾಷನಾ ಕೇಂದ್ರಿತವಾಗಿ ಕಟ್ಟಿಕೊಟ್ಟಿದ್ದು ಹಾಗೂ ಹಾಡುಗಳನ್ನು ಪೂರಕವಾಗಿ ಬಳಸಿದ್ದರಿಂದ ಪ್ರದರ್ಶನ ನೋಡುಗರಿಗೆಲ್ಲರಿಗೂ ಅರ್ಥವಾಗುವಂತೆ ಸ್ಪಂದಿಸಿದೆಇದು ನಾಟಕದ ಯಶಸ್ಸಿಗೆ ಮೂಲ ಕಾರಣವೂ ಆಗಿದೆ.

ಮೂಲ ಮಟ್ಟುಗಳ ಬಳಕೆ : ದೊಡ್ಡಾಟದ ಸಂಗೀತಕ್ಕೆ ತನ್ನದೇ ಆದ ಶೈಲಿ ಇದೆ. ಅದಕ್ಕೆ ಮೂಡಲಪಾಯ ದೇಸಿ ಸಂಗೀತ ಮಟ್ಟುಗಳು ಎನ್ನುತ್ತಾರೆ. ಇದು ನಮ್ಮ ಜಾನಪದರು ಅವಿಷ್ಕರಿಸಿದ ವಿಶಿಷ್ಟವಾದ ಸಂಗೀತ ಶೈಲಿ. ದೊಡ್ಡಾಟದ ಸಂಗೀತವು ಎಂದೂ ಶುದ್ದ ಶಾಸ್ತ್ರೀಯ ಸಂಗೀತಕ್ಕೆ ಒಳಪಡಲೇ ಇಲ್ಲ. ಅದರ ಅಗತ್ಯವೂ ನಮ್ಮ ಜನಪದರಿಗೆ ಇರಲಿಲ್ಲ. ಆದರೆ ಬರುಬರುತ್ತಾ ಉತ್ತರಾದಿ ಮತ್ತು ದಕ್ಷಿಣಾದಿ ಶಿಷ್ಟ ಸಂಗೀತದ ಛಾಯೆ ದೊಡ್ಡಾಟದ ಸಂಗೀತದಲ್ಲಿ ಮೂಡತೊಡಗಿತು. .... ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಶಾಸ್ತ್ರೀಯ ಸಂಗೀತದ ಪ್ರಭಾವವನ್ನು ನಗಣ್ಯಗೊಳಿಸಿ ಪಕ್ಕಾ ಮೂಡಲಪಾಯ ದೇಸಿ ಸಂಗೀತ ಶೈಲಿಯ ಮಟ್ಟುಗಳನ್ನೇ ಬಳಸಿ ಮೂಲ ಶೈಲಿಗೆ ಬದ್ದತೆಯನ್ನು ತೋರಲಾಗಿದ್ದು ಒಟ್ಟು ಹದಿನಾಲ್ಕು ಮಟ್ಟುಗಳನ್ನು ಬಳಸಲಾಗಿದೆ. ಇದರಿಂದಾಗಿ ಮೂಲ ಸಂಗೀತದ ಸೊಗಡನ್ನು ಕೆಳುಗರು ಆನಂದಿಸಬಹುದಾಗಿದೆ.

ಮರುಹುಟ್ಟು ಪಡೆದ ವೇಶಭೂಷಣಗಳು
... ಚೆನ್ನಮ್ಮ ದೊಡ್ಡಾಟದಲ್ಲಿ ದೃಶ್ಯ ವೈಭವವನ್ನು ವೇಶಭೂಷಣಗಳು ಕಟ್ಟಿಕೊಟ್ಟವು. ಈಗ ಅಳಿದುಳಿದ ಯಾವುದೇ ದೊಡ್ಡಾಟ ತಂಡಗಳನ್ನು ಗಮನಿಸಿದರೂ ಶತಮಾಗಳಷ್ಟು ಹಳೆಯ ವೇಷಗಳೇ ಇನ್ನೂ ಬಳಕೆಯಲ್ಲಿವೆ. ಇನ್ನೂ ದುರಂತವೇನೆಂದರೆ ಈಗ ದೊಡ್ಡಾಟದ ವೇಶಭೂಷಣಗಳನ್ನು ತಯಾರಿಸುವವರೇ ಇಲ್ಲವಾಗಿದ್ದಾರೆ. ದೊಡ್ಡಾಟದಲ್ಲಿ ಸಕ್ರೀಯವಾಗಿದ್ದವರ ಮನೆಯಲ್ಲಿ ಕೆಲವು ಹಳೆಯ ವೇಶಭೂಷಣಗಳಿವೆಯಾದರೂ ಅವರು ಅವುಗಳನ್ನು ಪೂರ್ವಿಕರ ಆಸ್ತಿ ಎನ್ನುವಂತೆ ಪೂಜೆ ಮಾಡುತ್ತಿದ್ದಾರೆಯೇ ಹೊರತು ಬೇರೆ ತಂಡಗಳಿಗೆ ಕೊಡುವುದೇ ಇಲ್ಲ. ಹೀಗಾಗಿ ಅಪರೂಪಕ್ಕೊಮ್ಮೆ ದೊಡ್ಡಾಟ ಆಡುವ ತಂಡದವರಿಗೂ ಸಹ ವೇಶಭೂಷಣಗಳು ದೊರೆಯದೆ ರಟ್ಟಿನಲ್ಲಿ ಬಣ್ಣದ ಪೇಪರ್ ಅಂಟಿಸಿ ಬಳಸುವ ಅನಿವಾರ್ಯತೆ ಇದೆಆದರೆ... ಎಂ.ಎಸ್.ಮಾಳವಾಡರ ಮಾರ್ಗದರ್ಶನದಲ್ಲಿ ಮರಿತಮ್ಮಪ್ಪ ಹಾಗೂ ರಾಮನಗೌಡ ಪಾಟೀಲರು ತುಂಬಾ ಪರಿಶ್ರಮವಹಿಸಿ ಮರುನಿರ್ಮಿಸಿದ ವೇಶಭೂಷಣಗಳು ... ಚೆನ್ನಮ್ಮ ದೊಡ್ಡಾಟದ ಪಾತ್ರಗಳನ್ನು ಜಗಮಗಿಸುವಂತೆ ಮಾಡಿವೆನೋಡುಗರ ಕಣ್ಮನ ಸೆಳೆಯುವಂತಿವೆ. ಹೊಸದಾಗಿ ವೇಶಭೂಷಣಗಳನ್ನು ತಯಾರಿಸಿದ್ದೇನೋ ಸರಿ, ಹಾಗೆ ಮಾಡುವಾಗ ಅವುಗಳ ತೂಕವನ್ನು ಕಡಿಮೆ ಮಾಡಬೇಕಾಗಿತ್ತು. ಭುಜ ಕಿರೀಟ, ತಲೆಕಿರೀಟಗಳ ಭಾರದಿಂದಾಗಿ ನಟರ ಗಮನ ಅಭಿನಯಕ್ಕಿಂತ ಅವುಗಳನ್ನು ನಿಭಾಯಿಸುವುದಕ್ಕೆ ವ್ಯಯವಾದಂತಿದೆಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ  ಭಾರವನ್ನು ತಡೆದುಕೊಳ್ಳುವ ಗಟ್ಟಿ ಮುಟ್ಟಾದ ಜಗಜಟ್ಟಿ ಗಂಡಸರಿದ್ದರು. ಆದರೆ ಈಗಿನ ವಿದ್ಯಾವಂತ ಯುವಕರಿಗೆ ಶಕ್ತಿ ಇಲ್ಲ. ಜೊತೆಗೆ ಭಾರ ಹೊರುವ ಅನುಭವವೂ ಇಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಾಂಪ್ರದಾಯಿಕ ಮಾದರಿಯ ವೇಶಭೂಷಣಗಳಿಗೆ ಹಗುರಾದ ಆಧುನಿಕ ವಸ್ತುಗಳನ್ನು ಬಳಸಿ ಭಾರವನ್ನು ಕಡಿತಗೊಳಿಸಿ ಯುವ ನಟರನ್ನು ಯಮಭಾರದಿಂದ ಪಾರು ಮಾಡುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ.


ಕ್ರಿಯಾಮೂಲ ಕುಣಿತಗಳು : ದೊಡ್ಡಾಟದ ಬಲು ದೊಡ್ಡ ಶಕ್ತಿ ಇರುವುದು ಕುಣಿತಗಳಲ್ಲಿ. ಶ್ರಮ ಮೂಲ ಸಂಸ್ಕೃತಿಯ ಪ್ರತೀಕವಾಗಿರುವ ದೊಡ್ಡಾಟದಲ್ಲಿ ಕ್ರಿಯಾಮೂಲ ಕುಣಿತಗಳಿವೆ. ರೈತಾಪಿ ಕೂಲಿ ಜನತೆ ತಮ್ಮ ದಿನನಿತ್ಯದ ಬದುಕಿನ ಚಟುವಟಿಕೆಗಳನ್ನೇ ಕುಣಿತಗಳಾಗಿ ಮಾರ್ಪಡಿಸಿ ದೊಡ್ಡಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ. ಕುಣಿತಗಳಲ್ಲಿ ಪ್ರಮುಖವಾಗಿ ಸ್ತ್ರೀ ಕುಣಿತ ಹಾಗೂ ಪುರುಷ ಕುಣಿತಗಳಿವೆ. ಸ್ತ್ರೀ ಕುಣಿತಗಳಲ್ಲಿ ಹೂ ಹರಿಯೋ ಕುಣಿತ, ನೀರು ಸೇದೋ ಕುಣಿತ, ಕೊಡ ಹೊರುವ, ಹೂ ಪೋಣಿಸುವ, ತೋರಣ ಕಟ್ಟುವ, ಹತ್ತಿ ಬಿಡಿಸುವ, ಮಜ್ಜಿಗೆ ಕಡಿಯುವ, ಕನ್ನಡಿ ನೋಡುವ... ಕುಣಿತ ಹಾಗೂ ಕಿರುಕುಣಿತಗಳಿವೆ. ಹಾಗೆಯೇ ಪುರುಷ ಕುಣಿತಗಳಲ್ಲಿ ಮುಖ್ಯವಾಗಿ ಕಣ ತುಳಿಯುವ, ಎತ್ತು ಗದರಿಸುವ, ಬಿತ್ತುವ ಕುಣಿತಗಳಿವೆ. ಲಾಲಿ ಕುಣಿತ ಹಾಗೂ ಯುದ್ದದ ಗತ್ತು ಕುಣಿತಗಳಿವೆ. ಈಗ ಆಧುನಿಕ ದೊಡ್ಡಾಟದ ಕಲಾವಿದರು ಇವುಗಳನ್ನೇ ಪರಿಷ್ಕರಿಸಿ ಎರಡೆಜ್ಜೆ ಕುಣಿತ, ನಾಲ್ಕೆಜ್ಜೆ ಕುಣಿತ, ಆರು ಹೆಜ್ಜೆ ಕುಣಿತ ಎಂದು ಸರಳಗೊಳಿಸಿದ್ದಾರೆ. ಎಲ್ಲಾ ಬಗೆಯ ಹೆಜ್ಜೆ ಕುಣಿತಗಳನ್ನು ...ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಸೊಗಸಾಗಿ ಬಳಸಲಾಗಿದೆ. ಪಾತ್ರಗಳ ಆಗಮನ ಮತ್ತು ನಿರ್ಗಮನಕ್ಕೆ ಬಳಸಲಾದ ಶೈಲಿಕೃತ ಎರಡೆಜ್ಜೆ ಮತ್ತು ನಾಲ್ಕೆಜ್ಜೆ ಕುಣಿತಗಳು ನೋಡುಗರಿಗೆ ವಿಶಿಷ್ಟ ಅನುಭವವನ್ನು ಕೊಡುತ್ತವೆ. ಹೆಜ್ಜೆಗಳೇನೋ ಸರಿ, ಆದರೆ ಹೆಜ್ಜೆಗೆ ತಕ್ಕಂತ ನಟನೆ ಹಾಗೂ ಅದಕ್ಕೆ ತಕ್ಕ ಭಾವನೆಗಳೂ ಸಹ ಮೂಡಿಬರಬೇಕಿತ್ತು. ಬಹುಷಃ ಇದು ದೊಡ್ಡಾಟದ ಕೊರತೆಯೇ ಆಗಿದೆ. ಹಾಡು ಕುಣಿತಗಳಿಗೆ ಕೊಟ್ಟ ಮಹತ್ವವನ್ನು ಭಾವಾಭಿವ್ಯಕ್ತಿ ಹಾಗೂ ಆಂಗಿಕಾಭಿನಯಕ್ಕೆ ಕೊಡದೇ ಹೋಗಿದ್ದು ಸಹ ದೊಡ್ಡಾಟದ ಹಿನ್ನೆಡೆಗೆ ಕಾರಣವಾಗಿದೆಯಕ್ಷಗಾನ ಮತ್ತು ಕಥಕ್ಕಳಿಗಳಲ್ಲಿ ಕುಣಿತದಷ್ಟೇ ಮಹತ್ವವನ್ನು ಅಭಿನಯ ಮತ್ತು ಭಾವಾಭಿವ್ಯಕ್ತಿಗೆ ಕೊಡಲಾಗಿದೆ. ಆದರೆ ದೊಡ್ಡಾಟ ಪರಂಪರೆಯಲ್ಲಿ ಇದು ಸಪ್ಪೆಯಾಗಿದೆ. ...ಚೆನ್ನಮ್ಮ ನಾಟಕದಲ್ಲೂ ಸಹ ಅಭಿನಯ ಅದರಲ್ಲೂ ಸಾತ್ವಿಕಾಭಿನಯದ ಕೊರತೆ ಎದ್ದು ಕಾಣಿಸುವಂತಿದೆ. ನಿರ್ದೇಶಕರು ನಿಟ್ಟಿನಲ್ಲಿ ಕಲಾವಿದರನ್ನು ತರಬೇತುಗೊಳಿಸಿ ರೂಪಿಸಿದರೆ ದೊಡ್ಡಾಟ ಇನ್ನೂ ಚೆನ್ನಾಗಿ ಮೂಡಿಬರುತ್ತದೆ.


ಮಹಿಳೆಯರ ಭಾಗವಹಿಸುವಿಕೆ : ಬಯಲಾಟ ಪ್ರದರ್ಶನ ಪರಂಪರೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಇಲ್ಲವೇ ಇಲ್ಲ. ಪುರುಷಪ್ರಧಾನ್ಯತೆ ಜಾನಪದ ರಂಗಭೂಮಿಯಲ್ಲಿ ಮೊದಲಿನಿಂದಲೂ ರೂಢಿಗತವಾಗಿ ಬಂದಿದೆ. ಸ್ತ್ರೀ ಪಾತ್ರಗಳನ್ನೂ ಸಹ ಪುರುಷರೇ ಅಭಿನಯಿಸುವುದು ಸಾಂಪ್ರದಾಯಿಕವಾಗಿದೆ. ರೂಢಿಗತ ಸಂಪ್ರದಾಯವನ್ನು .... ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಮುರಿದು ಹಾಕಲಾಗಿದೆರಾಣಿ ಚೆನ್ನಮ್ಮಳ ಪಾತ್ರಕ್ಕೆ ಮಹಿಳೆಯನ್ನೇ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ದೊಡ್ಡಾಟ ಪರಂಪರೆಯಲ್ಲಿ ಮೆರೆಯುವ ಪುರುಷ ಪಾರಂಪರ್ಯವನ್ನು ಒಡೆದು ಹಾಕಿ ಸ್ತ್ರೀಯರ ಭಾಗವಹಿಸುವಿಕೆಯನ್ನು ಅಳವಡಿಸಿ ಲಿಂಗತಾರತಮ್ಯವನ್ನು ಸರಿಪಡಿಸಿದ್ದಕ್ಕೆ ದೊಡ್ಡಾಟ ಸಾಕ್ಷಿಯಾಗಿದೆ. ಸ್ತ್ರೀ ಪಾತ್ರವನ್ನು ಸ್ತ್ರೀಯರೇ ಅಭಿನಯಿಸಿದ್ದರಿಂದ ದ್ವನಿ ಹಾಗೂ ನಟನೆಯಲ್ಲಿ ಕೃತಕತೆ ಇಲ್ಲದಂತಾಗಿ ಸಹಜ ಜೀವಂತಿಕೆ ಮೂಡಿ ಬಂದಿದೆ. ಇದು ಇಡೀ ದೊಡ್ಡಾಟ ಪ್ರಯೋಗಕ್ಕೆ ಜೀವಕಳೆ ತಂದಿದೆ. ಹಾಗೂ ಇದೀಗ ತಾನೆ ಕಾಲೇಜಿಗೆ ಹೋಗುತ್ತಿರುವ ನಂದಾ ಎನ್ನುವ ಯುವತಿಯು ರಾಣಿ ಚೆನ್ನಮ್ಮಳ ಪಾತ್ರವನ್ನು ಅದ್ಬುತವಾಗಿ ಅಭಿನಯಿಸಿ ನೋಡುಗರಲ್ಲಿ ಸಂಚಲನವನ್ನುಂಟು ಮಾಡಿದಳು.

ಶೃಂಗಾರ-ಹಾಸ್ಯ ರಸಗಳ ಬಳಕೆ : ದೊಡ್ಡಾಟ ಪರಂಪರೆಯಲ್ಲಿ ಶೃಂಗಾರ ರಸಕ್ಕೆ ಅಘೋಷಿತ ನಿರ್ಬಂಧ ಹಾಕಿದಂತಿದೆ. ವೀರ, ಕರುಣ ಇಲ್ಲವೇ ರೌದ್ರ ರಸಗಳೇ ಹೆಚ್ಚು ಬಳಕೆಯಾಗಿವೆ. ಆದರೆ ... ಚೆನ್ನಮ್ಮ ದೊಡ್ಡಾಟದಲ್ಲಿ ಆರಂಭದಲ್ಲೇ ಶೃಂಗಾರ ರಸದ ದೃಶ್ಯವನ್ನು ಅಳವಡಿಸಲಾಗಿದೆ. ಕಿತ್ತೂರಿನ ದೊರೆ ಮಲ್ಲಸರ್ಜ ಹಾಗೂ ಚೆನ್ನಮ್ಮ ದಂಪತಿಗಳು ಉದ್ಯಾನವನಕ್ಕೆ ವಾಯುವಿಹಾರಕ್ಕೆ ಬಂದು ಪ್ರಕೃತಿಯನ್ನು ವರ್ಣಿಸುತ್ತಾ ನಲಿಯುವ ದೃಶ್ಯ ಸೊಗಸಾಗಿ ಮೂಡಿಬಂದಿದೆಅದೇ ರೀತಿ ಹಾಸ್ಯರಸ ದೃಶ್ಯಗಳ ಸೃಷ್ಟಿಯೂ ದೊಡ್ಡಾಟದಲ್ಲಿ ಕಡಿಮೆ. ಸಾರಥಿಯ ಸಾಂದರ್ಭಿಕ ಶಬ್ಧ ಪ್ರಾಸ ಪ್ರಯೋಗದ ಪಂಚ್ಗಳನ್ನು ಹೊರತುಪಡಿಸಿ ಹಾಸ್ಯ ದೃಶ್ಯಗಳನ್ನು ಮನರಂಜೆಗಾಗಿ ಸೃಷ್ಟಿಸಲಾಗಿಲ್ಲ. ಪಾರಿಜಾತಗಳಲ್ಲಿ ಹಾಸ್ಯಕ್ಕೆ ಪ್ರತ್ಯೇಕ ದೃಶ್ಯಗಳಿವೆಯಾದರೂ ದೊಡ್ಡಾಟದಲ್ಲಿ ಕಡಿಮೆ. ಹಾಸ್ಯರಸದ ಕೊರತೆಯನ್ನು ನಿಗಲು, ನೋಡುಗರಿಗೆ ಮನರಂಜನೆಯನ್ನು ಕೊಡಲು ಸಾರಥಿ ಪಾತ್ರದ ಮೂಲಕ ಪ್ರಸ್ತುತ ಸಮಾಜವನ್ನು ವಿಶ್ಲೇಷಿಸುವಂತಹ ಕೆಲವು ಹಾಸ್ಯ ಪ್ರಸಂಗಗಳನ್ನು ಅಳವಡಿಸುವ ಮೂಲಕ ರೌದ್ರ, ಕರುಣ ರಸಗಳ ಏಕತಾನತೆಯನ್ನು ಒಡೆದು ಹಾಕಿ ನೋಡುಗರಿಗೆ ಆಗಾಗ ರಿಲೀಪ್ ಕೊಡುವ ಕೆಲಸವನ್ನು ದೊಡ್ಡಾಟ ಪ್ರಯೋಗದಲ್ಲಿ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಮತ್ತು ಅದು ದೊಡ್ಡಾಟವನ್ನು ಇನ್ನೂ ಆಕರ್ಷನೀಯವಾಗಿಸಿದೆ.

ಸ್ತ್ರೀ ಪ್ರಧಾನ ಪ್ರಯೋಗ : ಗ್ರಾಮರಂಗದ ವೀರ ರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟ ಪ್ರಯೋಗವು ಭವಿಷ್ಯದಲ್ಲಿ ದೊಡ್ಡಾಟಗಳಿಗೆ ಮಾದರಿಯಾಗುವಂತೆ ಒಂದು ಹಂತದಲ್ಲಿ ಪರಿಷ್ಕರಣೆಗೊಳಗಾಗಿದೆ. ದೊಡ್ಡಾಟದ ಟೆಕ್ಸ್ಟನಲ್ಲಿ ಬದಲಾವಣೆ ಬರಬೇಕಿತ್ತು, ಬಂದಿದೆ. ದೊಡ್ಡಾಟದ ಶೈಲಿಗೆ ಎಲ್ಲೂ ಭಂಗ ಬರದಂತೆ ಐತಿಹಾಸಿಕ ವಸ್ತುವುಳ್ಳ ವಿಷಯವನ್ನು ದೊಡ್ಡಾಟಕ್ಕೆ ಅಳವಡಿಸಿದ್ದೇ ದೊಡ್ಡಾಟ ಪರಂಪರೆಯಲ್ಲಿ ಹೊಸ ಮೈಲುಗಲ್ಲಾಗಿದೆ. ಧಾರ್ಮಿಕ ಆಚರಣೆಗಳ ಭಾಗವಾದ ಪೌರಾಣಿಕ ಪರಿಕಲ್ಪನೆಯ ದೊಡ್ಡಾಟಗಳಲ್ಲಿ ಮನುವಾದಿ ಮಾತುಗಳು ಹಾಗೂ ದೃಶ್ಯಗಳು ಬೇಕಾದಷ್ಟಿರುತ್ತಿದ್ದವು. ಪುರುಷ ಪ್ರಧಾನತೆಗೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. ಮಹಿಳೆಯರನ್ನು ಲೇವಡಿ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಎನ್ನುವಂತೆ ಸ್ತ್ರೀ ಪ್ರಧಾನವಾದ ರಾಣಿ ಚೆನ್ನಮ್ಮಳ ವಸ್ತು ಆಧಾರಿತ ದೊಡ್ಡಾಟವನ್ನು ರಚಿಸಿ ಆಡಿಸಿರುವುದು ಸ್ತ್ರುತ್ಯಾರ್ಹವೆನಿಸುವಂತಹುದು. ಚೆನ್ನಮ್ಮಳ ಮೂಲಕ ಮಹಿಳೆಯರ ಜಾಣ್ಮೆ, ದಿಟ್ಟತನ, ಕಷ್ಟ ಸಹಿಷ್ಣುತೆ, ಕ್ಲಿಷ್ಟಕರ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಗುಣ, ದೇಶಭಕ್ತಿ, ಮುಂದಾಗುವ ಅಪಾಯಗಳನ್ನು ಮೊದಲೇ ಊಹಿಸುವ ಶಕ್ತಿ.... ಗಳನ್ನು ದೊಡ್ಡಾಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಪುರುಷ ಪಾರಂಪರ್ಯವನ್ನು ಮುರಿದು ಸ್ತ್ರೀ ಪ್ರಧಾನ ದೊಡ್ಡಾಟವನ್ನು ಕಟ್ಟಿ ಕೊಟ್ಟಿರುವುದೇ ಜಾನಪದ ರಂಗಪರಂಪರೆಯಲ್ಲಿ ಕ್ರಾಂತಿಕಾರಕ ಎನ್ನುವ ಬದಲಾವಣೆಯಾಗಿದೆ.

ಮಾತುಗಾರಿಕೆಯಲ್ಲಿ ಪರಿಷ್ಕರಣೆ : ಸಾಂಪ್ರದಾಯಿಕ ದೊಡ್ಡಾಟದಲ್ಲಿ ಹಾಡು-ಸಂಗೀತಗಳ ಅಬ್ಬರದಲ್ಲಿ ಪಾತ್ರಗಳ ಮಾತುಗಳು ಕ್ಷೀಣವೆನಿಸುತ್ತವೆ. ಆದರೆ ...ಕಿತ್ತೂರು ಚೆನ್ನಮ್ಮ ಪ್ರಯೋಗದ ವಿಶೇಷತೆ ಏನೆಂದರೆ ಹಾಡುಗಳನ್ನು ಅಗತ್ಯಕ್ಕೆ ತಕ್ಕಷ್ಟೇ ಬಳಸಿ ಸಂಭಾಷಣೆಗಳ ಮೂಲಕ ಇಡೀ ದೊಡ್ಡಾಟವನ್ನು ಕಟ್ಟಿಕೊಡಲಾಗಿದೆಕೇವಲ ಹಾಡು-ಸಂಗೀತ ಪ್ರಧಾನವಾದ ದೊಡ್ಡಾಟ ರಂಗಪ್ರಕಾರವನ್ನು ಪರಿಷ್ಕರಿಸಿ ಕಥಾ ನಿರೂಪಣೆಗೆ ಅತ್ಯಗತ್ಯವಾದ ಸಂಭಾಷಣೆಗಳನ್ನು ಬಳಸಿ ಪ್ರೇಕ್ಷಕರ ಗ್ರಹಿಕೆಗೆ ಸರಳವಾಗಿ ಸಂವಹನವಾಗುವಂತೆ ಮಾಡಿದ್ದು ದೊಡ್ಡಾಟದ ಬಹುದೊಡ್ಡ ಸಕಾರಾತ್ಮಕ ಅಂಶವಾಗಿದೆ. ಮೂಲ ದೊಡ್ಡಾಟದಲ್ಲಿ ಕೆಳುತ್ತೇನೆ ಹೇಳುವಂತವನಾಗು... ಹೇಳುತ್ತೇನೆ ಕೇಳುವಂತವನಾಗು.. ಎನ್ನುವ ಮಾತುಗಳು ತುಂಬಾ ಸಲ ಪುನರಾವರ್ತನೆಗೊಂಡು ಕೇಳುಗರಲ್ಲಿ ಏಕತಾನತೆಯನ್ನುಂಟು ಮಾಡುತ್ತವೆ. ಏಕತಾನತೆಯನ್ನು .... ಚೆನ್ನಮ್ಮ ದೊಡ್ಡಾಟದಲ್ಲಿ ಕಡಿತಗೊಳಿಸಿ ಅಗತ್ಯವಿದ್ದಾಗ ಅಪರೂಪಕ್ಕೆ ಮಾತು ಬಳಸಿದ್ದು ಉತ್ತಮವಾಗಿದೆ. ಅದೇ ರೀತಿ ಪ್ರಾಸಬದ್ದತೆ ಎನ್ನುವುದು ದೊಡ್ಡಾಟ ಶೈಲಿಯ ಗುಣವಿಶೇಷ. ಪ್ರತಿ ಪಾತ್ರವೂ ತನ್ನ ಒಂದು ಸಂಭಾಷಣೆಯನ್ನು ಪೂರ್ಣಗೊಳಿಸುವ ಮುನ್ನ ಪ್ರಾಸಬದ್ಧ ಶಬ್ದಗಳಿಂದ ಮುಕ್ತಾಯ ಮಾಡುತ್ತವೆ. ಉದಾಹರಣೆಗೆ... ಕಾಂತಾ ನನ್ನ  ಮನಸ್ಸೀಗ ಶಾಂತಾ, ಅಲ್ಲವೆ ಕಾಂತೆ ನೀ ಬಲು ಗುಣವಂತೆ, ಹೋಗಿ ಬಾ ಕಂದ ನಿನ್ನ ಮಾತು ಬಲು ಚೆಂದ,.... ಹೀಗೆ ಪ್ರಾಸಬದ್ದತೆ ಪ್ರತಿಯೊಂದು ಪಾತ್ರದ ಮೂಲಕ ಇಡೀ ನಾಟಕದಾದ್ಯಂತ ಪ್ರಸ್ತಾಪಗೊಳ್ಳುತ್ತದೆ. ಮೂಲ ದೊಡ್ಡಾಟಗಳಲ್ಲಿ ಕಡಿಮೆ ಸಂಭಾಷಣೆಗಳಿದ್ದುದರಿಂದ ಪ್ರಾಸ ಎನ್ನುವುದು  ಅತೀ ಎನ್ನಿಸುವಂತಿದ್ದವು. ಆದರೆ, ....ಚೆನ್ನಮ್ಮ ನಾಟಕವನ್ನು ಸಂಭಾಷಣಾ ಪ್ರಧಾನ ನಾಟಕವಾಗಿಸಿದ್ದರಿಂದ ಪ್ರತಿ ಸಂಭಾಷನೆಯ ಅಂತ್ಯದ ಪ್ರಾಸಬದ್ದತೆ ಕೇಳುಗರಿಗೆ ಭಾರವೆನಿಸದೇ ಸೋಜಿಗವೆನ್ನಿಸುವಂತಿದ್ದವು. ಸಂಭಾಷಣೆಗಳ ರಚನೆ ನಾಟಕಕ್ಕೆ ಒಂದು ರೀತಿಯ ಪೋರ್ಸನ್ನು ಕೊಟ್ಟಿವೆ.

ವೈಚಾರಿಕತೆಯ ಅಳವಡಿಕೆ : ಜಾನಪದ ರಂಗಭೂಮಿಯಲ್ಲಿ ವೈಚಾರಿಕತೆಯ ಕೊರತೆ ಕಂಡುಬರುತ್ತದೆ. ಆಧುನಿಕ ರಂಗಭೂಮಿಯ ಹಾಗೆ ವಿಚಾರಪೂರ್ಣ ತಾರ್ಕಿಕ ನಾಟಕಗಳು ದೊಡ್ಡಾಟದಲ್ಲಿ ಇರುವುದಿಲ್ಲ. ಆಧುನಿಕ ರಂಗಭೂಮಿಯವರು ಪೌರಾಣಿಕ ವಸ್ತುಗಳನ್ನು ಆಯ್ದು ನಾಟಕವಾಗಿ ಕಟ್ಟಿದರೂ ಪೌರಾಣಿಕ ರೂಪಕಗಳಲ್ಲಿ ಸಾಂಕೇತಿಕವಾಗಿಯಾದರೂ ಪ್ರಸ್ತುತತೆಯನ್ನು ಚರ್ಚಿಸುತ್ತಾರೆ. ಗ್ರಾಮೀಣ ಮೂಲದ ಅನಕ್ಷರಸ್ತ ಶ್ರಮಿಕ ಜನಾಂಗ ಬೆಳೆಸಿಕೊಂಡು ಬಂದ ಬಯಲಾಟಗಳಲ್ಲಿ  ವೈಚಾರಿಕತೆ ಅಥವಾ ಬೌದ್ಧಕ ಪ್ರಕರತೆ ಹಾಗೂ ತಾತ್ವಿಕ ನಿಖರತೆ ಎನ್ನುವುದಕ್ಕೆ ಅವಕಾಶವೇ ಇಲ್ಲವಾಗಿತ್ತು. ಕೊರತೆಯನ್ನು ಮನಗಂಡ ಸುಶಿಕ್ಷಿತರಾದ ಎಂ.ಎಸ್.ಮಾಳವಾಡರು ...ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಹಲವಾರು ವೈಚಾರಿಕ ಅಂಶಗಳನ್ನು ಸೇರಿಸಿ ಐತಿಹಾಸಿಕ ವಸ್ತುವುಳ್ಳ ದೊಡ್ಡಾಟದಲ್ಲಿ ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುತ್ತಾರೆ.

ಉದಾಹರಣೆಗೆ...   ...ಚೆನ್ನಮ್ಮ ನಾಟಕದಲ್ಲಿ ಕೋಮು ಸೌಹಾರ್ಧತೆಗೆ ಒತ್ತು  ಕೊಡಲಾಗಿದೆ. ತನ್ನ ತವರಿನ ಚಿನ್ನಾಭರಣಗಳನ್ನು ಮಸೀದಿ  ನಿರ್ಮಾಣಕ್ಕೆ ಚೆನ್ನಮ್ಮ ಮುಸ್ಲೀಮರಿಗೆ ಕೊಟ್ಟು ಸರ್ವಧರ್ಮ ಸಮನ್ವಯದ ಮಾತಾಡುತ್ತಾಳೆ. ಅದೇ ಸಂದರ್ಭಕ್ಕೆ ಮಾನವೀಯತೆ ಮೆರೆಯೋಣ, ಹೃದಯಗಳ ಬೆಸೆಯೋಣ..ಸರ್ವಧರ್ಮೀಯರ ಬೀಡು ಕಿತ್ತೂರು, ಶಾಂತಿ ಸಹನೆಯ ನಾಡು... ಎನ್ನುವ ಹಾಡು ಕತೆಗಾರನ ಬಾಯಿಂದ ಹೊಮ್ಮುತ್ತದೆ. ಜೊತೆಗೆ ಭಿನ್ನಾಭಿಪ್ರಾಯ ಅಳಿಸೋಣ, ಭಾವೈಕೈತೆ ಬೆಳೆಸೋಣ ಎನ್ನುವ ಸಾರ್ವಕಾಲಿಕ ಸಂದೇಶ ಕೊಡುವ ಮೂಲಕ ನಾಟಕ ಕೋಮುಸೌಹಾರ್ಧತೆಗೆ ಪ್ರೇರಕವಾಗಿ ಮೂಡಿಬಂದಿದೆ. ಕೋಮುದ್ವೇಶವನ್ನೇ ಬಿತ್ತಿ ಅಧಿಕಾರದ ಬೆಳೆ ಬೆಳೆಯುವ ಪ್ರಸ್ತುತ ಕೋಮುವಾದಿ ವ್ಯವಸ್ಥೆಗೆ ವಿರುದ್ಧವಾಗಿ ಎಲ್ಲಾ ಕೋಮಿನ ಜನ ಒಟ್ಟಾಗಿ ಬದುಕುವಂತೆ ಪ್ರೇರೇಪಿಸುವ ಸ್ತುತ್ಯಾರ್ಹ ಕೆಲಸವನ್ನು ..ಕಿತ್ತೂರು ಚೆನ್ನಮ್ಮ ದೊಡ್ಡಾಟದಲ್ಲಿ ಮಾಡಲಾಗಿದೆ. ಹಾಗೂ ಕೋಮು ಸಾಮರಸ್ಯ ಎನ್ನುವುದು ಸಧ್ಯದ ತುರ್ತು ಅಗತ್ಯವೂ ಆಗಿದೆ.

ಉಳಿಗಮಾನ್ಯ ಶೋಷಣೆಯನ್ನು ವಿರೋಧಿಸಿ ದುಡಿಯುವ ವರ್ಗಗಳ ಪರ ನಿಲ್ಲುವ ಚೆನ್ನಮ್ಮನನ್ನು ದೊಡ್ಡಾಟದಲ್ಲಿ ಸಮಾನತೆಯ ಹರಿಕಾರಳನ್ನಾಗಿ ಚಿತ್ರಿಸಲಾಗಿದೆ. ನಾಡಿನ ಅಭಿವೃದ್ದಿ ಎನ್ನುವುದು ಧನ ಸಂಗ್ರಹದಲ್ಲಿಲ್ಲ, ನಾಡಿನ ಪ್ರಜೆಗಳ ಸಮೃದ್ದಿಯಲ್ಲಿದೆ.. ಎಂದು ಹೇಳುವ ಚೆನ್ನಮ್ಮ ತನ್ನ ಜನಪರ ಕಳಕಳಿಯನ್ನು ತೋರಿಸುತ್ತಾಳೆ. ಜೊತೆಗೆ ಬ್ರಿಟೀಷರ ವಿಸ್ತರಣಾವಾದ, ಸಾಮ್ರಾಜ್ಯವಾದಗಳನ್ನು ವಿರೋಧಿಸುವ ಚೆನ್ನಮ್ಮ ನಾವು ಶಸ್ತ್ರಾಸ್ತ್ರಗಳನ್ನು ಆತ್ಮರಕ್ಷಣೆಗೆ ಬಳಸಿದರೆ, ವಿದೇಶಿಗಳು ಮಾರಣಹೋಮಕ್ಕೆ ಬಳಸುತ್ತಾರೆ... ಎಂದು ಹೇಳುತ್ತಾ ಶಸ್ತ್ರಗಳ ದುರ್ಬಳಕೆ ಕುರಿತು ಎಚ್ಚರಿಸುತ್ತಾಳೆ. ಖಡ್ಗಕ್ಕಿಂತ ಕ್ರೂರವಾದ ಬ್ರಿಟೀಷ್ ಸಂಸ್ಕೃತಿಯ ಬಗ್ಗೆ ನಾವು ಎಚ್ಚರದಿಂದಿರಬೇಕು, ವಿದೇಶಿ ವಿಕೃತ ಸಂಸ್ಕೃತಿಯನ್ನು ಎಲ್ಲರೂ ವಿರೋಧಿಸಲೇಬೇಕು ಎನ್ನುವ ಮಾತುಗಳನ್ನು ಚೆನ್ನಮ್ಮಳಿಂದ ಹೇಳಿಸಲಾಗಿದೆ. ದೇಸಿ ಸಂಸ್ಕೃತಿಯನ್ನು ತುಳಿದು ವಿದೇಶಿ ವಿಕೃತ ಸಂಸ್ಕೃತಿ ದೇಶಾದ್ಯಂತ ಅಟ್ಟಹಾಸ ಮಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಚೆನ್ನಮ್ಮ ಹೇಳುವ ಮಾತುಗಳು ಅತ್ಯಂತ ಸೂಕ್ತವಾಗಿವೆ. ಮನುಷ್ಯನ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯಕ್ಕಿಂತ ಮೇಲು ಯಾವುದೂ ಇಲ್ಲ ಎಂದು ಹೇಳುವ ಚೆನ್ನಮ್ಮ ನೋಡುಗರಲ್ಲಿ ಸ್ವಾಭಿಮಾನದ ಕಿಚ್ಚನ್ನು ಪ್ರೇರೇಪಿಸುತ್ತಾಳೆ. ಅದೇ ಸಂದರ್ಭಕ್ಕೆ ತೊಲಗಲಿ ಪರತಂತ್ರ, ದೊರೆಯಲಿ ಸ್ವಾತಂತ್ರ್ಯ.. ಎನ್ನುವ ಹಾಡು ಕೇಳುಗರೆದೆಯಲ್ಲಿ ಪ್ರತಿದ್ವನಿಸುತ್ತದೆ. ಒಟ್ಟಾರೆಯಾಗಿ ಕಿತ್ತೂರು ಚೆನ್ನಮ್ಮನನ್ನು  ನೆಪವಾಗಿರಿಸಿಕೊಂಡು ಪ್ರಸ್ತುತ ಸಂದರ್ಭದ ಅಗತ್ಯಕ್ಕೆ ಸ್ಪಂದಿಸುವಂತೆ ಸಂಭಾಷಣೆಗಳನ್ನು ಕಟ್ಟಿಕೊಡಲಾಗಿದೆ. ಐತಿಹಾಸಿಕ ನಾಟಕದಲ್ಲಿ ಸಮಕಾಲೀನ ವಿಚಾರಗಳನ್ನು ಪ್ರಸ್ತುತಪಡಿಸುತ್ತಾ ಸಾರ್ವಕಾಲಿಕ ನಾಟಕವನ್ನಾಗಿಸುವಲ್ಲಿ ಎಂ.ಎಸ್.ಮಾಳವಾಡರು ಶ್ರಮಿಸಿದ್ದಾರೆ. ವೈಚಾರಿಕ ನೆಲೆಯಲ್ಲಿ ಕಿತ್ತೂರು ಚೆನ್ನಮ್ಮ ದೊಡ್ಡಾಟವನ್ನು ಪ್ರಸ್ತುತಪಡಿಸಿದ್ದಾರೆ.

ಹೀಗೆ... ಪಾರಂಪರಿಕ ದೊಡ್ಡಾಟಗಳಿಗೆ ಹೋಲಿಸಿದರೆ ವೀರ ರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟವು ಹಲವಾರು ಆಯಾಮಗಳಲ್ಲಿ ಪರಿಷ್ಕರಣೆಗೊಂಡಿದೆ. ಸುದೀರ್ಘ ಕಾಲಾವಧಿಯನ್ನು ಕಡಿತಗೊಳಿಸಿ ಮೂರುವರೆ ಗಂಟೆಯೊಳಗೆ ಇಡೀ ನಾಟಕವನ್ನು ಪ್ರದರ್ಶಿಸಲಾಗಿದೆ. ಆದರೂ ಇನ್ನೂ ಪ್ರಯೋಗ ಇನ್ನೂ ಪರಿಪೂರ್ಣ ಎನ್ನಿಸುವುದಿಲ್ಲ. ಇನ್ನೂ ತಲಸ್ಪರ್ಷಿ ಪರಿಷ್ಕರಣೆಯ ಅಗತ್ಯವಿದೆ ಎಂದೆನಿಸುತ್ತದೆ. ಸಕಾರಾತ್ಮಕ ಅಂಶಗಳಷ್ಟೇ ನಕಾರಾತ್ಮಕ ಅಂಶಗಳೂ ಇವೆ. ದೊಡ್ಡಾಟದ ಕಾಯಕಲ್ಪದ ಆಶಯದಿಂದ ಅವುಗಳನ್ನಿಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
 
ದೊಡ್ಡಾಟದ ರಚನೆ, ಸಂಭಾಷಣೆ, ವೇಷಗಾರಿಕೆ ಹಾಗೂ ಹಾಡುಗಳ ಅಳವಡಿಕೆಯವರೆಗೂ ಎಂ.ಎಸ್.ಮಾಳವಾಡರು ಯಶಸ್ವಿಯಾಗಿದ್ದಾರೆ. ರಂಗಸಂಘಟಕರಾಗಿಯೂ ಅವರ ಶ್ರಮ ಅಲ್ಲಗಳೆಯುವಂತಿಲ್ಲ. ಆದರೆ... ಏಕಕಾಲಕ್ಕೆ ಸಕಲೆಂಟು ಜವಾಬ್ದಾರಿಗಳನ್ನು ಒಬ್ಬರೇ ನಿರ್ವಹಿಸಿದ್ದರಿಂದಲೋ ಏನೋ ದೊಡ್ಡಾಟದ ನಿರ್ದೇಶನದಲ್ಲಿ ಮಾಳವಾಡರು ನಿರೀಕ್ಷಿತ ಯಶಸ್ಸನ್ನು ಹೊಂದಲಾಗಿಲ್ಲ. ಹಾಗೆ ನೋಡಿದರೆ ಜಾನಪದ ರಂಗಭೂಮಿಯಲ್ಲಿ ನಿರ್ದೇಶಕನೆನ್ನುವವನೇ ಅಪ್ರಸ್ತುತ. ಗ್ರಾಮೀಣ ಹವ್ಯಾಸಿ ರಂಗಭೂಮಿಯಲ್ಲಿ ಪೇಟಿ ಮಾಸ್ತರ್ ಇರುವಂತೆ ಜಾನಪದ ರಂಗಭೂಮಿಯ ದೊಡ್ಡಾಟದಲ್ಲಿ ಕತೆಗಾರನೇ ಒಂದು ರೀತಿಯಲ್ಲಿ ನಿರ್ದೇಶಕ, ಹಾಡುಗಾರ, ಸಂಗೀತಗಾರ ಎಲ್ಲವೂ ಆಗಿರುತ್ತಾನೆ. ಆದರೆ.. ಕಥೆಗಾರ ಎನ್ನುವವ ಹೆಚ್ಚಾಗಿ ಅನಕ್ಷರಸ್ತನಾಗಿರುತ್ತಾನೆ. ಇಲ್ಲವೇ ಅಕ್ಷರಸ್ತನಾಗಿದ್ದರೂ ಪಾರಂಪರಿಕ ಶೈಲಿ, ವಸ್ತುವನ್ನೇ ಮುಂದುವರೆಸಿರುತ್ತಾನೆ. ಪಾರಂಪರಿಕ ದೊಡ್ಡಾಟದ ದೌರ್ಬಲ್ಯವಿರುವುದು ಅದರ ಶೈಲಿಯಲ್ಲಲ್ಲ ಅಶಿಸ್ತಿನಲ್ಲಿ. ವ್ಯಕ್ತಿಗತ ವೈಭವೀಕರಣಗಳು ಗ್ರಾಮೀಣ ಕಲೆಯಲ್ಲಿ ವಿಜ್ರಂಭಿಸುತ್ತವೆ. ಅಗತ್ಯ ಇರಲಿ ಬಿಡಲಿ ವೇದಿಕೆ ಮೇಲೆ ಮುಖ ತೋರಿಸುವುದು, ಪಾತ್ರಗಳು ಅತಿರೇಕವಾಗಿ ಮಾತಾಡುವುದು, ಮೇಳದವರು ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದು ತಮ್ಮತನ ಮರೆಯುವುದು.. ಇದೆಲ್ಲಾ ಗ್ರಾಮೀಣ ಪ್ರದೇಶಗಳ ದೊಡ್ಡಾಟಗಳಲ್ಲಿ ಮಾಮೂಲುಜಾನಪದ ರಂಗಭೂಮಿಯ ಮಿತಿಗಳು ಹಾಗೂ ಆಧುನಿಕ ರಂಗಭೂಮಿಯ ಸಾಧ್ಯತೆಗಳ ಬಗ್ಗೆ ಅರಿವುಳ್ಳ ಎಂ.ಎಸ್.ಮಾಳವಾಡರು ದೊಡ್ಡಾಟದಲ್ಲಿ ಪರಿಷ್ಕರಣೆ ತರುವಲ್ಲಿ ಒಂದು ಹಂತದವರೆಗೂ ಯಶಸ್ವಿಯಾಗಿದ್ದಾರಾದರೂ ರಂಗಶಿಸ್ತನ್ನು ಅಳವಡಿಸುವುದರಲ್ಲಿ ವಿಫಲರಾಗಿದ್ದಾರೆ. ಸುಶಿಕ್ಷಿತ ನಿರ್ದೇಶಕ, ನಟರು, ಮೇಳದವರೆಲ್ಲಾ ಸೇರಿ ನಗರಪ್ರದೇಶದಲ್ಲಿ ದೊಡ್ಡಾಟವನ್ನು ಪ್ರದರ್ಶಿಸುತ್ತಿರುವಾಗ ನಾಟಕದಾದ್ಯಂತ ಶಿಸ್ತನ್ನು ಅಪೇಕ್ಷಿಸಲಾಗಿತ್ತು. ಆದರೆ... ಗ್ರಾಮೀಣ ಕಲಾವಿದರಷ್ಟಲ್ಲದಿದ್ದರೂ ವಿದ್ಯವಂತ ಕಲಾವಿದರು ತಮ್ಮ ನಡೆ, ನುಡಿ ಕಲಾಪ್ರದರ್ಶನಗಳಲ್ಲಿ ಸಂಯಮ ಹಾಗೂ ಶಿಸ್ತನ್ನು ರೂಢಿಸಿಕೊಳ್ಳಬೇಕಾಗಿತ್ತು. ಆದರೆ ಅದು ಸಾಧ್ಯವಾಗದಿದ್ದುದೇ ದೊಡ್ಡಾಟದ ಅತೀ ದೊಡ್ಡ ದೌರ್ಬಲ್ಯವಾಗಿದೆ.

ವ್ಯವಸ್ಥಾಪನೆ ಜವಾಬ್ದಾರಿ ಇರುವವರು ಪ್ರದರ್ಶನ ನಡೆದಾಗಲೇ ವೇದಿಕೆ ಮೇಲೆ ಅನಗತ್ಯವಾಗಿ ಮುಖ ತೋರಿಸುವುದು. ವ್ಯವಸ್ಥಾಪಕರ ಮಕ್ಕಳು ನಿರಾತಂಕವಾಗಿ ಎಲ್ಲರಿಗೂ ಕಾಣುವಂತೆ ವೇದಿಕೆ ಹಿಂದೆ ಅಕ್ಕಪಕ್ಕದಲ್ಲಿ ಚೇಷ್ಟೆಗಳನ್ನು ಮಾಡುತ್ತಾ ಓಡಾಡುವುದು, ಕಲಾವಿದರಲ್ಲದವರೂ ವೇದಿಕೆ ಮೇಲೆ ಎಡಬಲಗಳಲ್ಲಿ ಸಂಚರಿಸುವುದು... ಇಂತಹ ಅನಗತ್ಯ ಕ್ರಿಯೆಗಳನ್ನು ನಿರ್ದೇಶಕರು ನಿರ್ಬಂಧಿಸಲೇ ಬೇಕಿತ್ತು. ಹೊರಗಿನವರು ಹೋಗಲಿ ಮೇಳದವರು ನಾಟಕ ನಡೆದಾಗಲೇ ಮೊಬೈಲಿನಲ್ಲಿ ಮಾತಾಡುವುದುಅನಗತ್ಯವಾಗಿ ಒಳಹೊರಗೆ ಓಡಾಡುವುದು, ಕಲಾವಿದರಿಗೆ ಮೈಕಿನ ಸಾಧ್ಯತೆ ಹಾಗೂ ಸಾಮರ್ಥ್ಯದ ಅರಿವಿಲ್ಲದಿರುವುದು, ಪ್ರದರ್ಶನ ನಡೆದಾಗಲೇ ಹಲವಾರು ಬಾರಿ ಮೈಕನ್ನು ಸರಿಪಡಿಸುವುದು... ಇಂತಹ ಅನೇಕ ಬೇಜವಾಬ್ದಾರಿಯ ಅತಿರೇಕಗಳು ನಾಟಕದ ಸ್ವಾರಸ್ಯವನ್ನು ಹಾಳುಮಾಡಿದವು. ದೊಡ್ಡಾಟ ಎನ್ನುವುದು ನಿಜವಾಗಿ ಪರಿಷ್ಕರಣೆಗೆ ಒಳಗೊಳ್ಳಬೇಕಾದಲ್ಲಿ ಅದನ್ನು ರಂಗಶಿಸ್ತಿನ ಮೂಲಕ ಮಾಡಲೇಬೇಕು ಎನ್ನುವುದು ಪ್ರದರ್ಶನದಿಂದ ಮನದಟ್ಟಾಗುತ್ತದೆ.

ದೊಡ್ಡಾಟದಲ್ಲಿ ನಟಿಸಿದ ಕಲಾವಿದರಿಗೆ ತಾಲಿಮಿನ ಕೊರತೆ ಕಂಡುಬರುತ್ತದೆ. ಲೀಲಾಜಾಲವಾಗಿ ಅಭಿನಯಿಸಲು ಕಲಿಯಬೇಕಾಗಿದೆಇಡೀ ನಾಟಕದಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ನೋಡುಗರ ಗಮನವನ್ನು ಸೆಳೆದದ್ದು ಚೆನ್ನಮ್ಮನ ಪಾತ್ರದಾರಿ ಬಿ.ನಂದಾ. ಮಲ್ಲಸರ್ಜನಾಗಿ ಬಸವರಾಜ ಹಾಗೂ ಶಿವಲಿಂಗರುದ್ರಸರ್ಜಾನಾಗಿ ಸಿದ್ದಾರೂಢ ಬಡಿಗೇರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಮಹಾಪ್ರಧಾನಿಯಾಗಿ ನಟಿಸಿದ ರಾಜಶೇಖರ್ ಮಾಳವಾಡರ ನಟನೆ ಚೆನ್ನಾಗಿತ್ತಾದರೂ ವೇಶಭೂಷಣಗಳ ಭಾರದಲ್ಲಿ ನಟನೆ ಸೊರಗಿದಂತೆನಿಸಿತು. ಸಂಗೊಳ್ಳಿ ರಾಯಣ್ಣನಾಗಿ ಬಸವರಾಜ ದೊಡಮನಿ ಅಭಿನಯ ಸೊಗಸಾಗಿತ್ತಾದರೂ ಮಾತಿನ ಏರಿಳಿತಗಳನ್ನು ರೂಢಿಸಿಕೊಳ್ಳಬೇಕಾಗಿತ್ತು. ನಾಟಕದಲ್ಲಿ ಥ್ಯಾಕರೆ ಹಾಗೂ ಮನ್ರೋ ಬ್ರಿಟಿಷ್ ಅಧಿಕಾರಿಗಳನ್ನು ಬಪೂನ್ಗಳ ಹಾಗೆ ತೋರಿಸಿದ್ದು ನೋಡುಗರಿಗೆ ಖುಷಿಕೊಡುತ್ತದಾದರೂ ಅದು ಅವಾಸ್ತವವೆನಿಸುವವಂತೆ ಮೂಡಿ ಬಂದಿದೆ. ಸಾರಥಿಯಾಗಿ ಶರಣಪ್ಪ ಅಯ್ಯಣ್ಣವರ ತನ್ನ ಟೈಂಸೆನ್ಸನಿಂದಾಗಿ ಪಾತ್ರವನ್ನು ಗೆಲ್ಲಿಸಿದ್ದಾರೆ. ಅಭಿನಯದ ಜೊತೆಗೆ ಪ್ರತಿ ಪಾತ್ರಗಳಿಗೂ ಕಾಸ್ಟೂಮ್ಸ ರಿಹರ್ಸಲ್ಸ ಮಾಡಿಸದೇ ಇರುವುದರಿಂದ ಪ್ರಮುಖ ಪಾತ್ರಗಳು ವೇಶಭೂಷಣದ ಭಾರದಿಂದ ಬಳಲಿ ಅಭಿನಯದಲ್ಲಿ ಸೊರಗಿದಂತಿವೆ. ಚೆನ್ನಮ್ಮನನ್ನು ಹೊರತು ಪಡಿಸಿ ಎಲ್ಲಾ ಕಲಾವಿದರೂ ಭಾವಾಭಿನಯದಲ್ಲಿ ಇನ್ನೂ ಪಳಗಬೇಕಿದೆ. ನಿರ್ದೇಶಕರು ಬ್ಲಾಕಿಂಗ್, ಮೂವಮೆಂಟ್, ಎಂಟ್ರಿ-ಎಕ್ಸಿಟ್, ಸ್ಟೇಜ್ ಬ್ಯಾಲನ್ಸಿಂಗ್ಗಳನ್ನು ಕರಾರುವಕ್ಕಾಗಿ ಬಳಸಬೇಕಾಗಿದೆ. ಪ್ರತಿಯೊಂದು ಪಾತ್ರವೂ ಮೈಕಿನ ಮುಂದೆ ನಿಂತು ಸರದಿಯ ಪ್ರಕಾರ ಸಂಭಾಷಣೆ ಹೇಳಿದರೆ ನಾಟಕವೆನಿಸುವುದಿಲ್ಲ. ಸಹಜತೆ ಬರಬೇಕೆಂದರೆ ಪಾತ್ರಗಳಿಗೆ ಅಗತ್ಯ ಚಲನೆ ಬಲು ಮುಖ್ಯವೆನಿಸುತ್ತದೆ. ಅಭಿನಯ ವಿಭಾಗದಲ್ಲಿ ನಿರ್ದೇಶಕರು ಇನ್ನೂ ತುಂಬಾ ಪರಿಶ್ರಮ ವಹಿಸಬೇಕಿದೆ. ಆಧುನಿಕ ರಂಗಭೂಮಿಯ ಅಭಿನಯ ತಂತ್ರಗಳನ್ನು ದೊಡ್ಡಾಟದಲ್ಲಿ ಅಳವಡಿಸಿಕೊಂಡರೆ ನಾಟಕವನ್ನು ಜನಪ್ರೀಯಗೊಳಿಸಬಹುದಾಗಿದೆ. ಏನೇ ಆದರೂ ಕಾಲೇಜು ಓದುವ, ಅಭಿನಯಕ್ಕೆ ಹೊಸದಾಗಿ ತೊಡಗಿಸಿಕೊಂಡಿರುವ ಯುವಕರನ್ನು ಹತ್ತೇದಿನಗಳ ಕಾರ್ಯಾಗಾರದಲ್ಲಿ ತರಬೇತುಗೊಳಿಸಿ ದೊಡ್ಡಾಟದಂತಹ ಕ್ಲಿಷ್ಟಕರವಾದ ನಾಟಕವನ್ನು ಪ್ರದರ್ಶಿಸಿದ್ದು ನಿಜಕ್ಕೂ ಅಭಿನಂದನೀಯವಾಗಿದೆ.                   
ದೊಡ್ಡಾಟಕ್ಕೆ ಪೂರಕವಾಗಿ ತಾಂತ್ರಿಕತೆಯನ್ನು ಚೆನ್ನಾಗಿ ಬಳಸಿಕೊಳ್ಳಬಹುದಾಗಿತ್ತು. ನಾಟಕದಲ್ಲಿ ಅಗತ್ಯ ಮೂಡ್ ಸೃಷ್ಟಿಸಲು ಬೆಳಕು ವಿನ್ಯಾಸದ ಅಗತ್ಯವಿತ್ತು. ಆದರೆ ಜನರಲ್ ಲೈಟಿಂಗ್ ಮಾಡಿಕೊಂಡಿದ್ದು, ಬೆಳಕಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ಇರುವುದು, ದೃಶ್ಯಗಳ ನಡುವೆ ಬ್ಲಾಕ್ಔಟ್ಗಳನ್ನು ಕೊಡದೇ ಇರುವುದು, ಪೇಡ್ಇನ್ ಪೇಡ್ಔಟ್ಗಳನ್ನು ಬಳಸದೇ ಇರುವುದು ದೊಡ್ಡಾಟದ ಬಹು ದೊಡ್ಡ ಕೊರತೆಯಾಗಿತ್ತುಮೈಕ್ ವ್ಯವಸ್ಥೆ ಅದೆಷ್ಟು ಅದ್ವಾನ ಆಗಿತ್ತೆಂದರೆ ಪ್ರತಿ ಪಾತ್ರಗಳು ಮೈಕನ್ನು ಹುಡುಕಿಕೊಂಡು ಬಂದು ಮಾತಾಡಿ ಹಿಂದೆ ಸರಿಯಬೇಕಾಗಿತ್ತು. ಇದು ನಿಜಕ್ಕೂ ಆಭಾಸವನ್ನುಂಟುಮಾಡಿತು. ನಾಟಕದ ತಯಾರಿಗೆ ಕೊಟ್ಟಷ್ಟೇ ಮಹತ್ವವನ್ನು ನಿರ್ದೇಶಕರು ತಾಂತ್ರಿಕ ಅಂಶಗಳಿಗೂ ಕೊಡಬೇಕಾಗಿತ್ತು. ಹಿಮ್ಮೇಳದವರು ಇನ್ನೂ ಹಾಡು ಸಂಗೀತದಲ್ಲಿ ಪಳಗಬೇಕಾಗಿದೆ. ಹಾರ್ಮೋನಿಯಂ ನುಡಿಸುವ ಶಂಕ್ರಪ್ಪ ಸಂಕಣ್ಣವರಿಗೆ ಇನ್ನೂ ದೊಡ್ಡಾಟದ ನಾಡಿ ಮಿಡಿತ ಗೊತ್ತಾಗಿಲ್ಲ. ದೊಡ್ಡಾಟದ ಅತೀ ಮುಖ್ಯ ಸಂಗೀತ ಸಾಧನವೆಂದರೆ ಮದ್ದಲೆ. ಕೇಳುಗರ ಎದೆಬಡಿತ ಹೆಚ್ಚಿಸುವ ಕೆಲಸವನ್ನು ಮದ್ದಲೆ ಮಾಡುತ್ತದೆ. ಆದರೆ ಚಂದ್ರಶೇಖರ್ ಗುರೆಣ್ಣನವರ ಬಾರಿಸುತ್ತಿದ್ದ ಮದ್ದಲೆ ನಾದ ಅದ್ಯಾಕೋ ಮಂದವಾಗಿತ್ತು. ಯುದ್ದದ ದೃಶ್ಯದಲ್ಲೂ ಸಹ ಮದ್ದಲೆ ವಿಜ್ರಂಭಿಸಲಿಲ್ಲ. ಹೇಮಂತ ಭಜಂತ್ರಿಯವರ ಶಹನಾಯಿ ವಾದನ ಕೆಲವೊಮ್ಮೆ ಹಾಡಿನ ಪಿಚ್ ಮೀರಿ ಹೋಗುತ್ತಿತ್ತು. ಕಥೆಗಾರನಾಗಿ ವಿರೇಶ ಬಡಿಗೇರ್ ಹಾಗೂ ಹಿಮ್ಮೇಳದಲ್ಲಿ ಬಸವರಾಜ ಶಿಗ್ಗಾಂವಿ ಇಬ್ಬರೂ ತಮ್ಮ ಶಕ್ತಿ ಮೀರಿ ಹಾಡುಗಳಿಗೆ ಜೀವ ಕೊಡಲು ಪ್ರಯತ್ನಿಸಿದ್ದಾರೆ. ಹೊಸ ತಲೆಮಾರಿನ ಹಾಡು ಸಂಗೀತದ ಮೇಳದವರಿಗೆ ಇನ್ನೂ ಅನುಭವದ ಕೊರತೆ ಇದ್ದು ಹಿರಿಯ ತಲೆಮಾರಿನವರಿಂದ ಹೆಚ್ಚಿನ ತರಬೇತಿಯ ಅಗತ್ಯವಿದೆ ಎಂದೆನಿಸುತ್ತದೆ.

ರಂಗತಂತ್ರಗಳ ಕೊರತೆಯನ್ನು ಮುಚ್ಚಿಹಾಕಿದ್ದು ಮರಿತಮ್ಮಪ್ಪ ಸುಣಗಾರರವರ ವಸ್ತ್ರವಿನ್ಯಾಸ. ಪ್ರತಿಯೊಂದು ಪಾತ್ರಗಳನ್ನು ವೇಶಭೂಷಣಗಳು ಕಳೆಗಟ್ಟಿಸಿದ್ದವು. ಸಮರ್ಪಕವಾಗಿ ಬಣ್ಣ ಬಣ್ಣದ ಬೆಳಕನ್ನು ಕೊಟ್ಟಿದ್ದರೆ ಅದರ ಖದರ್ರೇ ಅದ್ಬುತವಾಗಿರುತ್ತಿತ್ತು. ದೊಡ್ಡಾಟದ ದುರಂತವೇನೆಂದರೆ ಮೇಕಪ್ ಮಾಡುವವರೇ ಇಲ್ಲದಿರುವುದು. ನಾಟಕಗಳಿಗೆ ಮೇಕಪ್ ಮಾಡುವ ವರ್ಣಾಲಂಕಾರದ ಹಿರಿಯ ಕಲಾವಿದ ಗಜಾನನ ಮಹಾಲೆಯವರನ್ನು ಕರೆತಂದು ದೊಡ್ಡಾಟಕ್ಕೆ ಮೇಕಪ್ ಮಾಡಿಸಲಾಗಿತ್ತು. ಮಹಾಲೆಯವರ ಕೌಶಲದಲ್ಲಿ ಪಾತ್ರಗಳು ಕಳೆಗಟ್ಟಿದವು. ಆಂಗಿಕ, ವಾಚಿಕ ಹಾಗೂ ಸಾತ್ವಿಕ ಅಭಿನಯದ ಕೊರತೆಯನ್ನು ಆಹಾರ್ಯಾಭಿನಯ ತುಂಬಿಕೊಟ್ಟಿತು, ನೋಡುಗರ ಕಣ್ಮನ ಸೆಳೆಯಿತು.

ವೀರ ರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟ ಇನ್ನೂ ಸೊಗಸಾಗಿ ಮೂಡಿ ಬರಬೇಕೆಂದರೆ ಒಂದಿಷ್ಟು ಎಡಿಟ್ ಮಾಡಿ, ಅನಗತ್ಯ ದೃಶ್ಯಗಳನ್ನು ತೆಗೆದು ಹಾಕಲೇಬೇಕಾಗಿದೆ. ನಾಟಕದ ಕೊನೆಕೊನೆಗೆ ಚೆನ್ನಮ್ಮ ತೀರಿಕೊಂಡ ಸುದ್ದಿ ತಿಳಿದ ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ಗೋಳಾಡುವುದು ತುಂಬಾ ದೀರ್ಘವೆನಿಸಿ ಪಕ್ಕಾ ಮೆಲೋಡ್ರಾಮಾ ಆಗಿದೆ. ಇಡೀ ದೃಶ್ಯವನ್ನು ಪರಿಷ್ಕರಿಸುವುದುತ್ತಮ. ಅಭಿನಯ ಹಾಗೂ ತಾಂತ್ರಿಕತೆಯಲ್ಲಿ ಇನ್ನೂ ಶ್ರಮವಹಿಸಬೇಕಾಗಿದೆ. ಈಗಾಗಲೇ ಸ್ಕ್ರಿಪ್ಟನಲ್ಲಿ ಪರಿಷ್ಕೃತಗೊಂಡ ದೊಡ್ಡಾಟ ಪ್ರದರ್ಶನದಲ್ಲಿ ಕೂಡಾ ಇನ್ನೂ ಪರಿಷ್ಕರಣೆಗೆ ಒಳಗಾಗಬೇಕಾಗಿದೆ. ಮರು ಪ್ರದರ್ಶನಗಳಲ್ಲಿ ಪ್ರಯತ್ನಿಸಬಹುದಾಗಿದೆ.


ದೊಡ್ಡಾಟದ ಪರಿಷ್ಕರಣೆ ಎಂದರೆ ಕೇವಲ ಪ್ರದರ್ಶನದ ಅವಧಿಯಲ್ಲಿ, ರಚನೆಯಲ್ಲಿ, ಶೈಲಿಯಲ್ಲಿ, ಹಾಡು ಸಂಗೀತದ ಅಳವಡಿಕೆಯಲ್ಲಿ ಮಾತ್ರ ಮಾಡಿದರೆ ಸಾಲದು, ಹೊಸ ತಲೆಮಾರಿನ ಜನರಿಗೆ ದೊಡ್ಡಾಟವನ್ನು ತಲುಪಿಸಬೇಕೆಂದರೆ ದೊಡ್ಡಾಟದ ಶೈಲಿಯ ಜೊತೆಗೆ ಆಧುನಿಕ ರಂಗಭೂಮಿಯ ರಂಗಶಿಸ್ತು, ಅಭಿನಯ, ಆಧುನಿಕ ತಾಂತ್ರಿಕತೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕಾಗಿದೆ. ನಿಟ್ಟಿನಲ್ಲಿ ಗ್ರಾಮರಂಗ ತಂಡವು ಮುನ್ನಡೆದರೆ, ಎಂ.ಎಸ್.ಮಾಳವಾಡರು ನಾಟಕವನ್ನು ಇನ್ನೂ ಪರಿಷ್ಕರಿಸಿದರೆ ದೊಡ್ಡಾಟದ ಪರಂಪರೆಗೆ ಕಾಯಕಲ್ಪ ಕೊಡುವಂತಹ ಹೊಸ ಮಾರ್ಗವೊಂದನ್ನು ಹಾಕಿಕೊಟ್ಟಂತಾಗುತ್ತದೆ. ಮತ್ತು ದೊಡ್ಡಾಟದ ಉಳಿವಿಗಾಗಿ ಅಂತಹ ಹೊಸ ಹೆಜ್ಜೆಗಳ ಅಗತ್ಯತೆಯೂ ಇದೆ. ಏನೇ ಆಗಲಿ ಜಾನಪದ ರಂಗಭೂಮಿ ಮತ್ತೆ ತನ್ನ ಮೊದಲಿನ ಜನಪ್ರೀಯತೆಯನ್ನು ಉಳಿಸಿಕೊಳ್ಳಬೇಕಿದೆ. ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಗ್ರಾಮರಂಗ ರಂಗತಂಡಕ್ಕೂ ಹಾಗೂ ಅದರ ರೂವಾರಿಗಳಾದ ಎಂ.ಎಸ್. ಮಾಳವಾಡರಿಗೂ ಅಭಿನಂದನೆಗಳನ್ನು ಹೇಳಲೇಬೇಕಿದೆ.

                                    -ಶಶಿಕಾಂತ ಯಡಹಳ್ಳಿ     





       
     
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ