ಸೋಮವಾರ, ಮೇ 25, 2015

ಕಾಂಪ್ಲೆಕ್ಸ ಬದುಕಿಗೆ ಇಂಟರ್‌ಮಿಕ್ಸ ಪರಿಹಾರ ಕೊಡುವ ನಗೆನಾಟಕ “ಬೀಚಿ ಹೌಸ್”:




ಬೀಚಿ ಕನ್ನಡ ಹಾಸ್ಯಸಾಹಿತ್ಯ ಲೋಕದ ಹೆಸರಾಂತ ಬರಹಗಾರರು. ತಮ್ಮ ತೀಕ್ಷ್ಣವಾದ ವಿಡಂಬಣೆ ಮೂಲಕ ನಮ್ಮ ಸಮಾಜದ ನ್ಯೂನ್ಯತೆಗಳನ್ನು ಮನಮುಟ್ಟುವಹಾಗೆ ತಮ್ಮ ಬರಹಗಳಲ್ಲಿ ಕಟ್ಟಿಕೊಟ್ಟು ಹಾಸ್ಯಸಾಹಿತ್ಯ ಕ್ಷೇತ್ರದಲ್ಲಿ ಅಮರರಾಗಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಬೀಚಿ ಬರೆಯುತ್ತಿದ್ದ ಪ್ರಶ್ನೋತ್ತರಗಳನ್ನೇ ಆಧರಿಸಿ ಅಂತರಂಗ ತಂಡವು ಉತ್ತರಭೂಪ ಎನ್ನುವ ನಗೆ ನಾಟಕವನ್ನು ಈಗಾಗಲೇ ನಿರ್ಮಿಸಿ ಪ್ರದರ್ಶಿಸಿದೆ. ಈಗ ಬೀಚಿಯವರ ಹಾಸ್ಯ ಬರಹಗಳನ್ನಾಧರಿಸಿ ಎನ್.ಸಿ.ಮಹೇಶರವರು ಬೀಚಿ ಹೌಸ್ ಎನ್ನುವ ಕಾಮಡಿ ನಾಟಕವನ್ನು ರಚಿಸಿದ್ದಾರೆ. ಡ್ರಾಮಾಟಿಕ್ಸ್ ತಂಡದ ಕಲಾವಿದರಿಗೆ ರಾಜೇಂದ್ರ ಕಾರಂತರವರು ನಾಟಕವನ್ನು ನಿರ್ದೇಶಿಸಿದ್ದು 2015, ಮೇ 22 ರಂದು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಪ್ರದರ್ಶನಗೊಂಡು ನೋಡುಗರನ್ನು ನಗೆಗಡಲಲ್ಲಿ ತೇಲಿಸಿ ಮುಳುಗಿಸುವಲ್ಲಿ ಯಶಸ್ವಿಯಾಯಿತು.



ಚೌಡಯ್ಯ ಮೇಮೋರಿಯಲ್ ಹಾಲ್ ಎನ್ನುವುದು ಕನ್ನಡ ರಂಗಭೂಮಿಗೆ ಗಗನ ಕುಸುಮವೇ ಆಗಿತ್ತು. ಬೆಂಗಳೂರಿನಲ್ಲೇ ದೊಡ್ಡದಾದ ಸಭಾಂಗಣವನ್ನು ಪ್ರೇಕ್ಷಕರಿಂದ ಭರ್ತಿ ಮಾಡುವುದು ಅಷ್ಟು ಸುಲಭದ್ದಲ್ಲ. ಅದೂ ಕನ್ನಡ ನಾಟಕಗಳಿಗೆ ತಾಕತ್ತು ಅಷ್ಟಿರಲಿಲ್ಲ. ಅಪರೂಪಕ್ಕೆ ಕನ್ನಡ ನಾಟಕಗಳು ಇಲ್ಲಿ ಪ್ರದರ್ಶನಗೊಂಡರೂ ಸಹ ಹೆಚ್ಚು ಪ್ರೇಕ್ಷಕರು ಬರುತ್ತಿರಲಿಲ್ಲ. ಹಾಗೂ ಅತಿಯಾದ ಬಾಡಿಗೆಯನ್ನು ಭರಿಸಿ ಕಡಿಮೆ ಪ್ರೇಕ್ಷಕರಿಗೆ ನಾಟಕ ತೋರಿಸುವ ಸಾಹಸವನ್ನು ಕನ್ನಡ ರಂಗಭೂಮಿಯವರು ಮಾಡಲಿಲ್ಲ. ಆದರೆ.... ಭ್ರಮೆಯನ್ನು ಬೀಚಿ ಹೌಸ್ ಒಡೆದು ಹಾಕಿ ವಿಸ್ಮಯಗೊಳಿಸಿತು. ಚೌಡಯ್ಯ.... ಮುಕ್ಕಾಲು ಭಾಗ ಪ್ರೇಕ್ಷಕರಿಂದ ತುಂಬಿತ್ತು. ಅರ್ಧದಷ್ಟು ಜನ ಪುಕ್ಕಟೆ ಪಾಸ್ ತೆಗೆದುಕೊಂಡು ಬಂದರೂ ಇನ್ನರ್ಧದಷ್ಟು ಜನ ದುಬಾರಿ ಟಿಕೆಟ್ ಕೊಂಡುಕೊಂಡು ಬಂದವರಾಗಿದ್ದರು. ಇಡೀ ನಾಟಕದ ಪ್ರತಿ ಸಂಭಾಷಣೆಯನ್ನೂ ಸಹ ಪ್ರೇಕ್ಷಕರು ಎಂಜಾಯ್ ಮಾಡಿದರು. ನೋಡುಗರ ಮನರಂಜಿಸಿ ನಗಿಸುವಲ್ಲಿ ಬೀಚಿ ಹೌಸ್ ಅಪಾರವಾಗಿ ಸಫಲವಾಯಿತು. ಕೊಟ್ಟ ಟಿಕೆಟ್ ಹಣಕ್ಕೆ ಮೋಸವಾಗಲಿಲ್ಲ, ಆರಂಭದಿಂದ ಕೊನೆಯವರೆಗೂ ಚೌಡಯ್ಯ ಹಾಲ್ ನಲ್ಲಿ ನಗೆಯೆನ್ನುವುದು ಆಗಾಗ ನಿಂತು ನಿಂತು ಮಳೆ ಜೋರಾಗಿ ಹೊಡೆದಂತೆ ಭಾಸವಾಗುತ್ತಿತ್ತು.

ಹಾಸ್ಯಕ್ಕೆ ಇರುವ ಗುಣವೇ ಅಂತದು. ಅದೂ ಬೆಂಗಳೂರಿನಂತಹ ಯಾಂತ್ರಿಕ ತಲ್ಲಣದ ಬದುಕಿನಲ್ಲಿ ಜನರಿಗೆ ಮನರಂಜನೆ ಕೊರತೆ ಇದೆ. ಕೊರತೆಯನ್ನು ನೀಗಿಸುವಲ್ಲಿ ಟಿವಿ ಹಾಗೂ ಸಿನೆಮಾಗಳೂ ಸಹ ವಿಫಲವಾಗಿವೆ. ಬದುಕಿನ ಜಂಜಾಟಗಳನ್ನು ಮರೆಸಿ ಮನೋಲ್ಲಾಸ ಕೊಡುವಂತಹ ನಾಟಕಗಳು ಜನಸಾಮಾನ್ಯರನ್ನು ಸೆಳೆಯುತ್ತವೆ. ಅದಕ್ಕಾಗಿಯೇ ಹಾಸ್ಯ ಮೇಳಗಳು ಎಲ್ಲೇ ನಡೆಯಲಿ ಹೌಸ್ಪುಲ್ ಆಗುತ್ತವೆ. ಹಾಸ್ಯ ಮೇಳದ ಇನ್ನೊಂದು ರೂಪವಾದ ಬೀಚಿ ಹೌಸ್ ಸಹ ಒಂದೂಮುಕ್ಕಾಲು ಗಂಟೆಗಳ ಕಾಲ ಪಂಚ್ ಸಂಭಾಷಣೆಗಳ ಮೂಲಕ ದ್ವಂದ್ವಾರ್ಥರಹಿತ ಮನರಂಜನೆಯನ್ನು ಕೊಡುವುದರಿಂದ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನದ್ದಾಗಿದೆಮೊದಲನೇ ಪ್ರದರ್ಶನದಲ್ಲೇ ಬೀಚಿ ಹೌಸ್ ತನ್ನ ಉದ್ದೇಶದಲ್ಲಿ ಯಶಸ್ವಿಯಾಗಿದೆ.




ಬೀಚಿ ಹೌಸ್ ನ್ನು ನಾಟಕ ರೂಪದ ಸ್ಟ್ಯಾಂಡಪ್ ಕಾಮೆಡಿ ಶೋ ಎನ್ನಿ, ಹಾಸ್ಯ ಮೇಳದ ಇನ್ನೊಂದು ಅವತಾರ ಎನ್ನಿ, ಬೀಚಿ ಬರಹ ಹಾಗೂ ಪಂಚ್ ಸಂಭಾಷಣೆಗಳ ಪ್ರದರ್ಶನವೆನ್ನಿ.... ಎನೇ ಅಂದರೂ ಸರಿ ಜನರನ್ನು ನಗಿಸುವುದನ್ನೇ ಗುರಿಯಾಗಿಸಿಕೊಂಡಿದ್ದರಿಂದ ಬೇರೆಯೇನನ್ನೂ ನಾಟಕದ ಮೇಲೆ ಆರೋಪಿಸುವಂತಿಲ್ಲ. ತರ್ಕಬದ್ಧ ನಾಟಕೀಯತೆ, ತಾತ್ವಿಕ ದೃಶ್ಯ ಸಂಯೋಜನೆ, ಸೈದ್ದಾಂತಿಕ ಅರ್ಥವಂತಿಕೆ, ರೂಪಕ ಸಿದ್ದಾಂತ, ಸಿನಿಮ್ಯಾಟಿಕ್ಸ್.... ಮುಂತಾದ ಆಧುನಿಕ ನಾಟಕಗಳ ಅವಿಷ್ಕಾರಗಳನ್ನು ನಾಟಕದಲ್ಲಿ ಅಪೇಕ್ಷಿಸುವಂತಿಲ್ಲ. ಇಡೀ ನಾಟಕದ ಉದ್ದೇಶ ಒಂದೇ ಶತಾಯ ಗತಾಯ ಪ್ರೇಕ್ಷಕರನ್ನು ನಗಿಸಬೇಕು, ಪ್ರತಿ ಮಾತು, ಪ್ರತಿ ಚಲನೆ, ಪ್ರತಿ ದೃಶ್ಯ ನೋಡುಗರಿಗೆ ಕಚುಗುಳಿ ಇಡಬೇಕು. ಉದ್ದೇಶದ ಈಡೇರಿಕೆಗೆ ರಾಜೇಂದ್ರ ಕಾರಂತರು ಬದ್ಧವಾಗಿದ್ದಾರೆ, ಬೀಚಿಯವರ ಬರವಣಿಗೆಯ ಆಳದಲ್ಲಿರುವ ವಿಷಾದವನ್ನು ಮರೆಮಾಚಿ ವಿನೋದವನ್ನು ನೋಡುಗರಿಗೆ ಉದಾರವಾಗಿ ಹಂಚುವಲ್ಲಿ ಸಫಲರಾಗಿದ್ದಾರೆ.

ಕುಟುಂಬವೊಂದರಲ್ಲಿ ನಡೆಯುವ ಅರಾಜಕತೆಯ ಅತಿರೇಕಗಳನ್ನು ಅತಿರಂಜಿತವಾಗಿ ತೋರಿಸಿ ನೋಡುಗರನ್ನು ನಗಿಸುವ ಪ್ರಯತ್ನ ಬೀಚಿ ಹೌಸ್ ನಾಟಕದ್ದಾಗಿದೆ. ಹೌದು ಮನೆಯ ಹೆಸರೇ ಬೀಚಿ ಹೌಸ್. ಬೀಚಿಯವರು ತಮ್ಮ ಲಘುಬರಹಗಳಲ್ಲಿ ಸೃಷ್ಟಿಸಿದ ಕೆಲವಾರು ವ್ಯಕ್ತಿಗಳು ಮನೆಯಲ್ಲಿ  ಪಾತ್ರವಾಗಿವೆ. ಗಂಗಾಧರ ಹಾಗೂ ಉಮಾ ದಂಪತಿಗಳಿಗೆ ಗಾಯತ್ರಿ ಎನ್ನುವ ಮಗಳು, ಸದಾನಂದ ಹಾಗೂ ಸೂರ್ಯ ಎನ್ನುವ ಇಬ್ಬರು ಗಂಡು ಮಕ್ಕಳು. ಐದು ಜನರಿರುವ ಐಲು ಕುಟುಂಬದ ವಿಚಿತ್ರ ಮನೆಗೆ ಜನಾರ್ಧನ್ ಅಲಿಯಾಸ್ ಜನ್ನಿ  ಅತಿಥಿಯಾಗಿ ಬಂದು ಪರದಾಡುವುದೇ ನಾಟಕದ ಒಂದೆಳೆ ಕಥೆ. ಪ್ರತಿಯೊಂದು ಪಾತ್ರವೂ ತನ್ನದೇ ಆದ ವಿಕ್ಷಿಪ್ತತೆಯನ್ನು ಹೊಂದಿದೆ. ಪ್ರತಿ ಪಾತ್ರದ ಮಾತುಗಳೂ ಅಸಂಬದ್ದವಾಗಿವೆ. ವಿಕ್ಷಿಪ್ತ ಪಾತ್ರಗಳ ಅಸಂಬದ್ದತೆಯನ್ನು ಅಸಂಗತ ದೃಶ್ಯಗಳ ಮೂಲಕ ನಾಟಕವಾಗಿ ಕಟ್ಟಿಕೊಡುವುದೇ ನಾಟಕದ ಆಶಯವಾಗಿದೆ.


ಗಂಗಾಧರನಿಗೆ ಹೆಂಡತಿಯ ಅತಿರೇಕಗಳನ್ನು ಕಂಡರಾಗದು, ಉಮಾಳಿಗೆ ಗಂಡನ ಲೇವಡಿಯನ್ನು ಸಹಿಸಲಾಗದು. ಮಗಳೂ ಸಹ ಅಮ್ಮನ ಪಡಿಯಚ್ಚು ಗಂಡಸರನ್ನು ಕಂಡರಾಗದು. ಮಗ ಸದಾನಂದ ವಿರಕ್ತನಾಗಿ ಆಧ್ಯಾತ್ಮವಾದಿಯಾದರೆ ಇನ್ನೊಬ್ಬ ಮಗ ಸೂರ್ಯ ತರ್ಕಾತೀತ ಕ್ರಾಂತಿಕಾರಿ. ಜೊತೆಗೆ ಮನೆಗೆ ಅತಿಥಿಯಾಗಿ ಬರುವ ಜನ್ನಿ. ಎಲ್ಲರೂ ಒಂದೊಂದು ದಿಕ್ಕು. ಎಲ್ಲ ದಿಕ್ಕುಗಳು ಒಂದೇ ಮನೆಯಲ್ಲಿ ಸೇರಿ ತಮ್ಮ ವಿಕ್ಷಿಪ್ತ ನಡುವಳಿಕೆ ಹಾಗೂ ಮಾತುಗಳಿಂದ ನೋಡುಗರೆದೆಯಲ್ಲಿ ನಗೆಯ ನಗಾರಿಯನ್ನು ಬಾರಿಸುತ್ತವೆಹುಚ್ಚಾಸ್ಪತ್ರೆಯಂತಿರುವ ಮನೆಗೆ ಮನೋವೈದ್ಯನಂತೆ ಬರುವ ಗಾಯತ್ರಿಯ ಪ್ರೇಮಿ ತರುಣ್ ತನ್ನ ಇಂಟರಮಿಕ್ಸ್ ತಂತ್ರದಿಂದ ಎಲ್ಲರ ಸ್ವಭಾವವನ್ನು ಬದಲಾಯಿಸುವುದೇ ನಾಟಕದ ಅತ್ಯಮೂಲ್ಯವಾದ ಕ್ಲೈಮ್ಯಾಕ್ಸ್ ಹಾಗೂ ಸಂದೇಶ.


ಬೀಚಿ ಹೌಸ್ ನಲ್ಲಿರುವ ಪಾತ್ರಗಳು ಅತಿರೇಕಗೊಂಡಿರಬಹುದು ಆದರೆ.... ಎಲ್ಲಾ ನಮೂನಿ ಪಾತ್ರಗಳು ಎಲ್ಲರ ಕುಟುಂಬದಲ್ಲಿ ಯಾವು ಯಾವುದೋ ರೂಪದಲ್ಲಿ ಇದ್ದೇ ಇರುತ್ತವೆ. ಅಹಂಕಾರ, ಸರ್ವಾಧಿಕಾರಿ ಮನೋಭಾವನೆ, ಶ್ರೇಷ್ಠತೆಯ ವ್ಯಸನ ಹಾಗೂ ತನ್ನ ನಂಬಿಕೆಯನ್ನು ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನಗಳು ಜಾಗತೀಕರಣದ ಕಾಲಘಟ್ಟದಲ್ಲಿ ನಗರಕೇಂದ್ರಿತ ಬಹುತೇಕ ಕುಟುಂಬಗಳಲ್ಲಿ ಸರ್ವೇಸಾಮಾನ್ಯವಾಗಿವೆ. ಪರಸ್ಪರ ಹೊಂದಾಣಿಕೆ ಹಾಗೂ ಸಹನೆ ಎನ್ನುವುದು ಕುಟುಂಬಗಳಿಂದ ಮಾಯವಾಗಿದೆ. ಇದಕ್ಕೆ ಗಂಡು ಹೆಣ್ಣು ಎನ್ನುವ ಬೇಧವೇ ಇಲ್ಲಆದರೆ... ರೀತಿಯ ಮನೋವ್ಯಾಧಿಗೊಂದು ಚಿಕಿತ್ಸೆ ಕಂಡುಹಿಡಿಯುವುದೇ ಸವಾಲಿನ ಕೆಲಸ. ಆದರೆ ನಗಿಸುತ್ತಾ ನಗಿಸುತ್ತಾ ನಾಟಕ ಇಗೋ (ಅಹಂ) ರೋಗಕ್ಕೆ ಒಂದು ದಿವ್ಯೌಷಧಿಯ ಸಾಧ್ಯತೆಯನ್ನು ನಾಟಕದ ಮೂಲಕ ತೋರಿಸಿಕೊಟ್ಟಿದೆ. ಅದೇ ಇಂಟರಮಿಕ್ಸ್ ಟೆಕ್ನಿಕ್. ಅಂದರೆ ಒಬ್ಬರು ಇನ್ನೊಬ್ಬರ ಅಂತರಂಗವನ್ನರಿತು ಬದಲಾಗುವುದು. ಮಾನಸಿಕವಾಗಿ ಅವನು ಅವಳಾಗುವುದು, ಅವಳು ಅವನಾಗುವುದು. ವೈರುದ್ದ ಮನಸ್ಥಿತಿಯ ಸ್ವಭಾವಗಳನ್ನು ಪರಸ್ಪರ ಅದಲು ಬದಲು ಮಾಡಿಕೊಳ್ಳುವುದು. ಇದರ ಒಟ್ಟೂ ಸಾರ ಇಷ್ಟೇ ಒಬ್ಬರಿನ್ನೊಬ್ಬರು ಅರ್ಥಮಾಡಿಕೊಂಡು ನಡೆಯುವುದುಇದೊಂದು ಇಂಪ್ರ್ಯಾಕ್ಟಿಕಲ್ ಥೀಯರಿ ಎಂದೆನಿಸಿದರೂ ಮನುಷ್ಯ ಮನುಷ್ಯರ ನಡುವೆ ಬೆಳೆದಿರುವ ಅಹಂಕಾರದ ಗೋಡೆಗಳನ್ನು ಒಡೆದು ಹಾಕಿ ಪರಸ್ಪರ ಅರ್ಥೈಸಿಕೊಳ್ಳಲು ಪ್ರೇರೇಪಿಸುವ ಉತ್ತಮ ಮಾರ್ಗ ಎನ್ನಿಸುತ್ತದೆ. ನಾಟಕದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಅಂತರಂಗದೊಳಹೊಕ್ಕು ಇಂಟರ್ಮಿಕ್ಸ್ ಆಗುವಂತಹುದನ್ನು ಹಾಸ್ಯಕ್ಕಾಗಿಯೇ ನಾಟಕದಲ್ಲಿ ಬಳಲಾಗಿದೆಯಾದರೂ ವಾಸ್ತವದಲ್ಲಿ ಕೌಟುಂಬಿಕ ಸ್ವಾಸ್ಥ್ಯಕ್ಕಾಗಿ ಇದು ಬೇಕಾಗಿದೆ. ಸಾಮಾಜಿಕ ಸೌಖ್ಯಕ್ಕಾಗಿ ತುಂಬಾ ಅಗತ್ಯವಾಗಿದೆ. ತನ್ನಂತೆ ಮತ್ತೊಬ್ಬರು ಎಂದರಿತು ಹೊಂದಾಣಿಕೆ ಮಾಡಿಕೊಂಡು ಬದುಕುವಂತಹ ವಾತಾವರಣ ಇಂದು ತುರ್ತಿನ ಅಪೇಕ್ಷೆಯಾಗಿದೆ. ಅತಿರಂಜಕ ವಿನೋದದ ಜೊತೆಗೆ ವಿಭಿನ್ನ ವಿಚಾರದ ಹೊಳವನ್ನು ನೋಡುಗರ ತಲೆಗೆ ಹುಳದಂತೆ ಬಿಡುವಲ್ಲಿ ಬೀಚಿ ಹೌಸ್ ಸಫಲವಾಗಿದೆ.




ಮಹಿಳೆಯರನ್ನು ಹೀಯಾಳಿಸುವುದು ನಾಟಕದಲ್ಲಿ ಒಂದಿಷ್ಟು ಹೆಚ್ಚೆನಿಸುತ್ತದೆ. ಬೀಚಿಯವರೂ ಸಹ ತಮ್ಮ ಹಾಸ್ಯ ಬರವಣಿಗೆಯಲ್ಲಿ ಮಹಿಳೆಯರ ಅದರಲ್ಲೂ ಹೆಂಡತಿಯ ಕಾಲೆಳೆಯುವದನ್ನು ಅತಿಯಾಗಿಯೇ ಮಾಡಿದ್ದಾರೆ. ಅದನ್ನೇ ನಾಟಕದಲ್ಲೂ ರಂಜನೀಯವಾಗಿ  ಮುಂದುವರೆಸಲಾಗಿದೆಬಹುಷಃ ಎಲ್ಲಾ ಕಾಮೆಡಿ ಶೋಗಳಲ್ಲಿ ಹೆಂಡತಿಯರನ್ನು ಲೇವಡಿ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಹೆಂಡತಿಯನ್ನು ಹಿಯಾಳಿಸಿ, ನಾಯಿಗೆ ಹೋಲಿಸಿ ನಗಿಸುವುದನ್ನು ಹಾಸ್ಯ ಮೇಳಗಳಲ್ಲಿ ಗಮನಿಸಬಹುದಾಗಿದೆ. ನಾಟಕವೂ ಸಹ ಅಂತಹ ಲೇಡಿ ಲೇವಡಿ ಕೈಂಕರ್ಯಕ್ಕೆ ಕೊಡುಗೆಯನ್ನಿತ್ತಿದೆ. ಕೆಲವರಿಗೆ ಹೆಂಡತಿ ಖಾಯಿಲೆಯಾದರೆ ಇನ್ನು ಕೆಲವರಿಗೆ ಖಾಯಿಲೆಯೇ ಹೆಂಡತಿ, ಗಂಡು ದೇವರು ಕುಡಿತದ ಅಮಲಿನಲ್ಲಿ ಹೆಣ್ಣನ್ನು ಸೃಷ್ಟಿಸಿದ, ಹೆಣ್ಣಿಗೆ ಬರೀ ತಲೆಯಿದೆಯೇ ಹೊರತು ಹೃದಯವಿಲ್ಲ, ಹೆಣ್ಣಿನ ಕಣ್ಣಲ್ಲಿ ಬರೀ ನೀರು ನೋಡಬಹುದೇ ಹೊರತು ನೋವನ್ನಲ್ಲ.... ಹೀಗೆ ಹಲವಾರು ಮಹಿಳಾ ವಿರೋಧಿ ಮಾತುಗಳು ನಾಟಕದಾದ್ಯಂತ ಅನುರಣಿಸಿವೆಬೀಚಿಯವರಿಂದ ಹಿಡಿದು ನಾಟಕ ನಿರ್ಮಿಸಿದವರು, ರಚಿಸಿದವರು, ನಿರ್ದೇಶಿಸಿದವರು, ಆಯೋಜಿಸಿದವರೆಲ್ಲಾ ಪುರುಷರೇ ಆಗಿದ್ದರಿಂದಲೋ ಏನೋ ಮಹಿಳಾ ನಿಂದನೆ ನಾಟಕದಾದ್ಯಂತ ಯಥೇಚ್ಚವಾಗಿದೆ. ಹಾಗೂ ಹೆಣ್ಣನ್ನು ಹೀಯಾಳಿಸಿ, ಖಂಡಿಸಿ, ಲೇವಡಿ ಮಾಡಿ ಅದರಿಂದ ನಗೆಯನ್ನು ಹುಟ್ಟಿಸುವ ವಿಕೃತತೆ ಪುರುಷ ಪ್ರಧಾನ ಸಮಾಜದ ಒಂದು ಭಾಗವಾಗಿಯೇ ಬೆಳೆದು ಬಂದಿದೆಅದಕ್ಕೆ ನಾಟಕ ವ್ಯತಿರಿಕ್ತವಾಗೇನೂ ಇಲ್ಲ. ರಾಜೇಂದ್ರ ಕಾರಂತರಂತಹ ಸೂಕ್ಷ್ಮ ಮನಸ್ಸಿನ ನಿರ್ದೇಶಕರು ಮಹಿಳಾ ನಿಂದನೆಯ ಮಾತುಗಳ ಮೊನಚನ್ನು ಒಂದಿಷ್ಟು ಕಡಿಮೆ ಮಾಡಬೇಕಾಗಿತ್ತು. ಅಚ್ಚರಿ ಏನೆಂದರೆ ಬಹುತೇಕ ಮಹಿಳಾ ನಿಂದನೆಯ ಮಾತುಗಳನ್ನು ನಾಟಕದಲ್ಲಿ ಆಡಿದ್ದು ಸ್ವತಃ ಗಂಗಾಧರ ಪಾತ್ರಧಾರಿ ರಾಜೇಂದ್ರ ಕಾರಂತರೇ ಆಗಿದ್ದಾರೆ. ಅಬಲೆಯಾಗಿದ್ದ ಮಹಿಳೆ ತನ್ನ ಅಸ್ತಿತ್ವಕ್ಕಾಗಿ, ಐಡೆಂಟಿಟಿಗಾಗಿ ಹರಸಾಹಸ ಪಡುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅವರನ್ನು ಲೇವಡಿಗೊಳಪಡಿಸುವುದು ಸ್ತ್ರೀವಿರೋಧಿ ಎಂದೆನಿಸಿಕೊಳ್ಳುತ್ತದೆಮೊದಲು ನಿರ್ದೇಶಕರಾದಿಯಾಗಿ ನಾಟಕದ ನಿರ್ಮಿತಿಯಲ್ಲಿ ಭಾಗಿದಾರರಾದ ಎಲ್ಲಾ ಪುರುಷರೂ ನಾಟಕದಲ್ಲಿ ಹೇಳಲಾದ ಇಂಟರ್ಮಿಕ್ಸ ಟೆಕ್ನಿಕ್ನ್ನು ಬಳಿಸಿ ಮಹಿಳೆಯರ ಅಂತರಂಗದೊಳಗೆ ಇಳಿದು, ಅವರ ಅಸಹಾಯಕತೆ, ಅಭದ್ರತೆ, ನೋವುಗಳನ್ನು ಅನುಭವಿಸಿದ ನಂತರ ಇಡೀ ನಾಟಕವನ್ನು ಮರಳಿ ಕಟ್ಟಿದರೆ ನಾಟಕ ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ಪಡೆಯುವುದರಲ್ಲಿ ಸಂದೇಹವಿಲ್ಲ.


    
ಹಾಸ್ಯ ನಾಟಕವನ್ನು ಮಾಡುವುದು ಬೇರೆ ಬಗೆಯ ನಾಟಕಗಳಿಗಿಂತ ಸವಾಲಿನ ಕೆಲಸ. ಸಂಭಾಷಣೆಯೇ ಇಲ್ಲಿ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಪ್ರತಿ ಪಾತ್ರದ ಮಾತುಗಳಲ್ಲಿ  ಟೈಮಿಂಗ್ ಸೆನ್ಸ್ ಎನ್ನುವುದು ಅತೀ ಮುಖ್ಯ. ಹೀಗಾಗಿ ನಾಟಕದಲ್ಲಿ ಪಾತ್ರವಹಿಸಿದ ಎಲ್ಲಾ ಅನುಭವೀ ನಟರು ತಮ್ಮ ನಟನಾ ಸಾಮರ್ಥ್ಯವನ್ನು ಮೀರಿ ಮಾತಿನ ಸಾಮರ್ಥ್ಯ ಹಾಗೂ ಸಮಯ ಪ್ರಜ್ಞೆಯ ಸಾಕಾರದಲ್ಲಿ ತುಂಬಾ ಶ್ರಮಿಸಿ ನೋಡುಗರನ್ನು ಸುದೀರ್ಘ ಅವಧಿಯ ಕಾಲ ಹಿಡಿದಿಟ್ಟಿದ್ದಾರೆ. ಗಂಗಾಧರ ಪಾತ್ರದಲ್ಲಿ ಅಭಿನಯಿಸಿದ ರಾಜೇಂದ್ರ ಕಾರಂತರು ತಮ್ಮ ಪಂಚ್ ಡೈಲಾಗ್ಗಳಿಂದ ನಗೆ ಉಕ್ಕಿಸುವಲ್ಲಿ ಯಶಸ್ವಿಯಾದರಾದರೂ ಅದ್ಯಾಕೊ ಪಾತ್ರದ ಆಳಕ್ಕೆ ಇಳಿಯಲೇ ಇಲ್ಲ. ನಾಟಕದ ನಿರ್ದೇಶನವನ್ನೂ ಮಾಡಿ ಮುಖ್ಯ ಪಾತ್ರವನ್ನು ಅಭಿನಯಿಸಬೇಕಾಗಿದ್ದರಿಂದ ಕಾರಂತರಿಗೆ ಪಾತ್ರ ದಕ್ಕಲಿಲ್ಲ. ಜನಾರ್ಧನ ಪಾತ್ರದ ಕಲಾಗಂಗೋತ್ರಿ ಕಿಟ್ಟಿರವರ ಸಹಜಾಭಿನಯ ಗಮನಾರ್ಹವಾಗಿದೆ. ಉಳಿದಂತೆ ಉಮಾ ಪಾತ್ರಕ್ಕೆ ಹೇಳಿಮಾಡಿಸಿದಂತಿರುವ ಸೀತಾ ಕೋಟೆ ಬಿಡುಬೀಸಾದ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮೂರು ಜನ ಅನುಭವಿ ನಟರ ಜೊತೆಗೆ ಹೊಸ ನಟರೂ ಸಹ ತಮ್ಮ ಮಾತಿನ ಒರಸೆ ಹಾಗೂ ವಿಕ್ಷಿಪ್ತ ನಟನೆಯಿಂದ ಗಮನಸೆಳೆದರು. ಸದಾನಂದನಾಗಿ ಸಿದ್ದಾರ್ಥ, ಸೂರ್ಯನಾಗಿ ಶರಣ್, ಡಾಕ್ಟರ್ ಆಗಿ ಕೊಪ್ಪರ್, ತರುಣ್ ಆಗಿ ಉಮೇಶ್.... ಇವರೆಲ್ಲಾ ತಮ್ಮ ಓವರ್ ಆಕ್ಟಿಂಗ್ ಶೈಲಿಯಿಂದ ನಗೆಯ ಹೊನಲನ್ನು ನಾಟಕದಾದ್ಯಂತ ಮೆಂಟೇನ್ ಮಾಡಿದರುಇಂತಹ ಹಾಸ್ಯ ಕೇಂದ್ರಿತ ನಾಟಕಗಳಿಗೆ ಅತಿಶಯ ನಟನೆ ಅಗತ್ಯವೆನಿಸುತ್ತದೆ. ಇಡೀ ನಾಟಕದಲ್ಲಿ ಸೆಟ್ನ್ನು ಹೊರತು ಪಡಿಸಿ ಯಾವುದೂ ರಿಯಾಲಿಸ್ಟಿಕ್ ಅಲ್ಲವೇ ಅಲ್ಲ. ಅತಿ ನಾಟಕೀಯತೆಯ ವೈಭವೀಕರಣದ ಮೂಲಕವೇ ನಾಟಕವನ್ನು ಗೆಲ್ಲಿಸಬೇಕಾಗಿದೆ. ಹಾಗೂ ನಿಟ್ಟಿನಲ್ಲಿ ನಾಟಕ ತುಂಬಾನೇ ಯಶಸ್ವಿಯಾಗಿದೆ.


ಇದು ಪಕ್ಕಾ ಮಾತಿನ ನಾಟಕ. ನಾಟಕದಾದ್ಯಂತ ವಿಜ್ರಂಭಿಸುವುದೇ ಮಾತುಗಳು. ಆದರೆ ಇವು ಯಾವವೂ ಸಾಮಾನ್ಯ ಮಾತುಗಳಾಗಿರದೇ ಬೀಚಿಯವರ ಒಗಟಿನ ಮಾತುಗಳಾಗಿವೆ. ಬೀಚಿಯವರ ಒಂದೊಂದು ವಾಕ್ಯವೂ ಕೆಲವಾರು ಅರ್ಥಗಳನ್ನು ಹೊರಹೊಮ್ಮಿಸುತ್ತವೆ. ವಾಕ್ಯಗಳನ್ನು ಬರೀ ಕೇಳಿದ ತಕ್ಷಣ ಅರ್ಥವಾಗದಿದ್ದರೂ ಒಂದಿಷ್ಟು ಆಲೋಚಿಸಿದರೆ ಅದರ ಮಾರ್ಮಿಕತೆ ಅರಿವಾಗುತ್ತದೆ. ಆದರೆ ನಾಟಕದಲ್ಲಿ ಒಂದು ಡೈಲಾಗ್ ಪ್ರೇಕ್ಷಕರ ಕಿವಿಯನ್ನು ತಲುಪಿ ಮೆದುಳಲ್ಲಿ ಇಳಿಯಬೇಕು ಎನ್ನುವುದರಲ್ಲಿಯೇ ಇನ್ನೊಂದು ಮಾತು ಅಪ್ಪಳಿಸುತ್ತದೆ. ಹೀಗೆ ಪಂಚ್ಗಳ ಮೇಲೆ ಪಂಚ್ ಮಾತುಗಳು ಪ್ರೇಕ್ಷಕರಲ್ಲಿ ನಗೆ ಹುಟ್ಟಿಸುತ್ತವೆಯೇ ಹೊರತು ಅದನ್ನು ಅರ್ಥೈಸಿಕೊಳ್ಳಲು ಅರೆಕ್ಷಣವೂ ಸಮಯ ಕೊಡುವುದಿಲ್ಲ. ನಾಟಕದಾದ್ಯಂತ ನಗೆಯ ಟೆಂಪೋವನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಂಭಾಷಣೆಗಳು ವೇಗವನ್ನು ಪಡೆಯುತ್ತವೆ. ಮಾತಿಗೆ ಮಾತು ಘರ್ಷಿಸುತ್ತಾ ಅರ್ಥಸಾಧ್ಯತೆಯನ್ನು ಆಪೋಷಣ ತೆಗೆದುಕೊಂಡಂತಿವೆ. ಅಗತ್ಯ ಇರುವಲ್ಲೆಲ್ಲಾ ಪಾಸ್ಗಳನ್ನು ಕೊಟ್ಟು ಸಂಭಾಷಣೆಗಳನ್ನು ಪಂಚ್ ಮಾಡಿದ್ದರೆ ಬೀಚಿಯವರ ಪ್ರತಿ ಮಾತಿನ ಒಳಾರ್ಥ ಪ್ರೇಕ್ಷಕರನ್ನು ಸಮರ್ಥವಾಗಿ ತಲುಪಬಹುದಾಗಿತ್ತು. ಸಾಧ್ಯತೆಯ ಬಗ್ಗೆಯೂ ಸಹ ನಿರ್ದೇಶಕರು ಪ್ರಯೋಗಶೀಲರಾದರೆ ಪ್ರೇಕ್ಷಕರ ಮೆದುಳನ್ನಷ್ಟೇ ತಲುಪುವ ನಾಟಕ ನೋಡುಗರ ಎದೆಯಾಳಕ್ಕೂ ಇಳಿಸಬಹುದಾಗಿದೆ.
    
ಇದು ಬೀಚಿ ಹೌಸ್ ನಾಟಕದ ಮೊಟ್ಟ ಮೊದಲ ಪ್ರದರ್ಶನ ಆಗಿದ್ದರಿಂದ ಇನ್ನೂ ಕೆಲವು ನ್ಯೂನ್ಯತೆಗಳು ಕಂಡುಬರುತ್ತವೆ. ಆಗಾಗ ಸ್ಟೇಜ್ ಇಂಬ್ಯಾಲನ್ಸ್ ಆಗುವುದು, ಎಂಟ್ರಿ ಎಕ್ಸಿಟ್ಗಳಲ್ಲಿ ಖರಾರುವಕ್ಕತೆ ಇಲ್ಲದೇ ಇರುವುದು. ಅತಾರ್ಕಿಕವಾದ ನಟರ ಚಲನೆಗಳು, ಕೆಲವೊಮ್ಮೆ ಬ್ಲಾಕಿಂಗ್ನಲ್ಲಿ ರಿಪಿಟೇಶನ್ಗಳು... ಇವುಗಳತ್ತ ಒಂದಿಷ್ಟು ನಿರ್ದೇಶಕರು ಗಮನ ಹರಿಸಿದರೆ ನಾಟಕ ಇನ್ನೂ ಚೆನ್ನಾಗಿ ಮೂಡಿಬರುತ್ತದೆ. ಹಾಗೆಯೇ ನಾಟಕದಲ್ಲಿ ಸೃಷ್ಟಿಸಲಾದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕನ ದೃಶ್ಯವೊಂದು ನಾಟಕಕ್ಕೆ ಅನಗತ್ಯವೆನಿಸುತ್ತದೆ. ದೃಶ್ಯವನ್ನು ಕೈಬಿಟ್ಟಿದ್ದರೂ ನಾಟಕಕ್ಕೆ ಯಾವುದೇ ಧಕ್ಕೆ ಬರುತ್ತಿರಲಿಲ್ಲ. ಬೆಳಕು ಪ್ರತಿ ದೃಶ್ಯಗಳನ್ನು ಬೆಳಗಿದೆ ಆದರೆ ಅದರಲ್ಲಿ ಯಾವುದೇ ಬದಲಾವಣೆ ಇಲ್ಲವಾಗಿದೆ. ಇಡೀ ನಾಟಕದಲ್ಲಿ ಖಳನಾಯಕನ ಪಾತ್ರವನ್ನು ವಹಿಸಿದ್ದು ಸಿನೆಮಾ ಹಾಡುಗಳು. ದೃಶ್ಯಕ್ಕೆ ಅಗತ್ಯ ಇರಲಿ ಬಿಡಲಿ ಪ್ರತಿಸಲ ಬೆಳಕು ಪೇಡಿನ್ ಮತ್ತು ಪೇಡ್ಔಟ್ ಆಗುವಾಗ ಕನ್ನಡ ಸಿನೆಮಾ ಹಾಡುಗಳ ಒಂದೆರಡು ಸಾಲುಗಳನ್ನು ಕೇಳಿಸಲಾಗುತ್ತದೆ. ಅದೂ ಸಹ ಕೇಳುಗರ ಕಿವಿತಮಟೆ ಹರಿದು ಹೋಗುವಂತೆ.... ಹೀಗಾಗಿ ಹಾಡಿನ ಮಧುರತೆ ಕರ್ಕಶತೆಯಲ್ಲಿ ಬದಲಾಗಿ ಪ್ರೇಕ್ಷಕರಿಗೆ ಸಹಿಸಲಸಾಧ್ಯ ಕಿರಿಕಿರಿಯಾಗಿದ್ದಂತೂ ಸುಳ್ಳಲ್ಲ. ಅದ್ಯಾಕೋ ರಾಮಕೃಷ್ಣ ಕನ್ನರಪಾಡಿಯವರ ಪ್ರಸಾಧನದಲ್ಲಿ ಅಂತಹ ವಿಶೇಷವೇನೂ ಇಲ್ಲವಾಗಿದೆ. ವೇಷಮರೆಸಿಕೊಂಡು ಬಂದ ತರುಣ್ ಪಾತ್ರ ರಷ್ಯಾ ಅಂಕಲ್ ಆದಾಗ ಕೆಂಚು ದಾಡಿ ಹಾಕಲಾಗಿದ್ದು ಅದು ಪಕ್ಕಾ ಕೃತಕವೆನ್ನುವುದು ಪ್ರೇಕ್ಷಕರಿಗೆ ಸ್ಪಷ್ಪವಾಗಿ ಅರಿವಾಗುತ್ತದೆ. ಸಂಗೀತ ಸಂಯೋಜಕನ ಪಾತ್ರಕ್ಕೆ ಯಾವುದೋ ಗುಡಿಯ ಪೂಜಾರಿಯ ಹಾಗೆ ಯಾಕೆ ಮೇಕಪ್ ಮಾಡಲಾಯಿತೋ ಗೊತ್ತಿಲ್ಲ. ಉಳಿದೆಲ್ಲಾ ಪಾತ್ರಗಳಿಗೂ ಸಹ ಮೇಕಪ್ ಹಾಕಿರುವುದೇ ಗೊತ್ತಾಗೋದಿಲ್ಲ.


ಇಡೀ ನಾಟಕದಲ್ಲಿ ಮೇಲ್ನೋಟಕ್ಕೆ ಆಕರ್ಷಣೀಯವಾಗಿರುವುದು ರಂಗವಿನ್ಯಾಸ. ರಿಯಾಲಿಸ್ಟಿಕ್ ಮಾದರಿಯಲ್ಲಿ ಒಂದು ಮನೆಯ ಹಾಲ್ನ್ನು ಯಥಾವತ್ ಸೃಷ್ಟಿಸಲಾಗಿದೆ. ಆಧುನಿಕ ನಾಟಕಗಳು ಸೆಟ್ಗಳ ಭಾರವನ್ನು ಕಡಿತಗೊಳಿಸುತ್ತಾ, ಸಾಂಕೇತಿಕಗೊಳಿಸುತ್ತಾ ಹೋಗುತ್ತಿರುವಾಗ ಬೀಚಿ ಹೌಸ್ ನಾಟಕದಲ್ಲಿ ಕಂಪನಿ ನಾಟಕಗಳ ಮಾದರಿಯಲ್ಲಿ  ಸೆಟ್ ಹಾಕಲಾಗಿದೆ. ಅತೀ ದೊಡ್ಡ ಸೆಟ್ ಹಾಕಿದಾಗ ನಟರು ಕುಬ್ಜರಾಗಿ ಕಾಣಿಸುವ ಅಪಾಯವನ್ನೂ ನಾಟಕದಲ್ಲಿ ನೋಡಬಹುದಾಗಿದೆ. ರೀತಿಯ ಸೆಟ್ ಹಾಕಿದಾಗ ಆಗುವ ಇನ್ನೊಂದು ಸಮಸ್ಯೆ ಏನೆಂದರೆ ಬೇರೆ ದೃಶ್ಯಗಳನ್ನೂ ಸಹ ಇದೇ ಸೆಟ್ ಮುಂದೆನೇ ತೋರಿಸಬೇಕಾಗುತ್ತದೆ. ಅದು ಒಂಚೂರು ಆಭಾಸಕಾರಿ ಎನಿಸುತ್ತದೆ. ನೋಡಲು ಅದೆಷ್ಟೇ ಭವ್ಯ ಸೆಟ್ ಇದ್ದರೂ ಅದು ನಟರ ಪ್ರಾಮುಖ್ಯತೆಯನ್ನು ಮಿತಿಗೊಳಿಸಿದರೆ, ಬೇರೆ ದೃಶ್ಯಗಳ ಮೂಡನ್ನು ಕಡಿತಗೊಳಿಸಿದರೆ ಇಂತಹ ಸೆಟ್ಗಳ ಅಗತ್ಯ ನಾಟಕಕ್ಕೆ ಎಷ್ಟು ಎನ್ನುವುದನ್ನು ಆಲೋಚಿಸಬೇಕಿದೆ. ಆದರೆ.... ನಗೆಯೊಂದೇ ಪ್ರಧಾನ ಧಾರೆಯಾಗಿ ಪ್ರವಹಿಸುತ್ತಿರುವಾಗ ಎಲ್ಲಾ ಸಿನಿಮಿಯಾಟಿಕ್ಸ್ ರಂಗತಂತ್ರಗಳ ಅಗತ್ಯತೆಗಳು ನಗೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತವೆ ಎನ್ನುವುದಕ್ಕೆ ನಾಟಕವೇ ಸಾಕ್ಷಿಯಾಗಿದೆ.

ಎಲ್ಲಾ ಸರಿ ಆದರೆ ನಾಟಕಕ್ಕೆ ಬೀಚಿ ಹೌಸ್ ಎಂಬ ಇಂಗ್ಲಿಷ್ ಹೆಸರನ್ಯಾಕೆ ಇಟ್ಟರು? ಬೀಚಿ ಬಂಗಲೆ ಎಂದಿದ್ದರೂ ನಾಟಕದ ಉದ್ದೇಶದಲ್ಲಿ ಯಾವುದೇ ಕೊರತೆ ಬರುತ್ತಿರಲಿಲ್ಲ. ಕನ್ನಡ ಸಿನೆಮಾಗಳಿಗೆ ಇಂಗ್ಲೀಷ್ ಟೈಟಲ್ಸ್ ಇಡುವ ಹಾಗೆ ಕನ್ನಡ ನಾಟಕಗಳಿಗೂ ಗೀಳು ಅಂಟಿಕೊಂಡಿತಾ? ಬೇಕಿರಲಿಲ್ಲ. ಬಹುಷಃ ನಾಟಕವನ್ನು ನಿರ್ಮಿಸಿದ ಡ್ರಾಮಾಟ್ರಿಕ್ಸ್ ತಂಡದ ಹೆಸರೂ ಸಹ ಆಂಗ್ಲಮಯವಾಗಿದ್ದರಿಂದ ಇಂಗ್ಲೀಷ್ ಶೀರ್ಷಿಕೆಯಲ್ಲಿ ಕನ್ನಡ ನಾಟಕ ಮಾಡಲಾಯಿತಾ? ಇದ್ದರೂ ಇರಬಹುದು ಆದರೆ.... ಇಂಗ್ಲೀಷ್ ಪದಮೋಹ ಯಾಕೆ?


ನಿರ್ದೇಶಕ ರಾಜೇಂದ್ರ ಕಾರಂತ್
ನಾಟಕದಲ್ಲಿ ಬೀಚಿಯವರನ್ನೇ ಸಾಂಕೇತಿಕವಾಗಿ ಬರಮಾಡಿಕೊಳ್ಳಲಾಗಿದೆ. ಹುಕ್ಕಾ ಇಲ್ಲದೇ ಜೀವ ಜೀವನ ಎರಡೂ ಇಲ್ಲಾ ಎಂದು ಬೀಚಿ ಹೇಳುತ್ತಾರೆ... ಇದು ನಕಾರಾತ್ಮಕ ಆಲೋಚನೆ ಎನಿಸುತ್ತದೆ. ಧೂಮಪಾನವೇ ಆರೋಗ್ಯಕ್ಕೆ ಹಾನಿಕರವಾಗಿರುವಾಗ ಬೀಚಿಯವರ ವ್ಯಯಕ್ತಿಕ ಖಯಾಲಿಯನ್ನು ಸಾರ್ವತ್ರಿಕವಾಗಿ ನಾಟಕದ ಮೂಲಕ ಹೇಳುವ ಅಗತ್ಯವಿರಲಿಲ್ಲ. ತಂಬಾಕು ಸೇವನೆ ಜೀವ ಹಾಗೂ ಜೀವನ ಎರಡಕ್ಕೂ ಅಪಾಯಕಾರಿಯಾಗಿರುವಾಗ ಬೀಚಿ ಮೂಲಕ ವ್ಯತಿರಿಕ್ತ ಮಾತನ್ನು ನಾಟಕದಲ್ಲಿ ಹೇಳಿಸಿದ್ದು ಸಮಂಜಸವೆನ್ನಿಸುವುದಿಲ್ಲ. ನಕಾರಾತ್ಮಕತೆಯನ್ನು ಸಕಾರಾತ್ಮಕತೆಯಾಗಿ ಬದಲಾಯಿಸುವುದೇ ರಂಗಭೂಮಿಯ ಉದ್ದೇಶವಾಗಿದೆ. ಕೆಲಸವನ್ನು ನಾಟಕದಲ್ಲಿ ಮಾಡಲಾಗಿದೆ. ಆದರೆ ಕೊಟ್ಟ ಕೊನೆಗೆ ದೂಮಪಾನವನ್ನು ಸಮರ್ಥಿಸುವಂತಹ ಮಾತು ಅನಗತ್ಯವಾಗಿತ್ತು. ಸಾರ್ವಜನಿಕರ ಹಿತಾಸಕ್ತಿಯಿಂದ ಮಾತನ್ನು ಕೈಬಿಟ್ಟಿದ್ದರೂ ನಾಟಕಕ್ಕೆ ಯಾವುದೇ ಕೊರತೆಯಾಗುತ್ತಿರಲಿಲ್ಲ. ಇಡೀ ನಾಟಕ ಅರ್ಥವಿಲ್ಲದ ರೂಪಕದ ಹಾಗೆ, ಸಿದ್ದ ಸೂತ್ರವಿಲ್ಲದ ನಾಟಕದ ಹಾಗೆ ಮೂಡಿ ಬಂದಿದೆ. ಆದರೆ.... ಮನುಷ್ಯ ಮನುಷ್ಯನನ್ನು ಅರಿತು ಬಾಳಬೇಕು, ಹೊಂದಾಣಿಕೆ ಎನ್ನುವುದು ಬದುಕಾಗಬೇಕು ಎನ್ನುವ ಅಮೂಲ್ಯವಾದ ಸಂದೇಶವನ್ನು ಬೀಚಿ ಹೌಸ್ ಸಾರುತ್ತದೆ. ಅರಾಜಕತೆಯನ್ನು ಮೀರಿ ಕೌಟುಂಬಿಕ ಸ್ವಾಸ್ಥ್ಯಕ್ಕೆ ಈಗ ತಕ್ಷಣ ಬೇಕಾಗಿರುವುದೇ ಪರಸ್ಪರ ಅರ್ಥಮಾಡಿಕೊಂಡು ಬಾಳಬೇಕಾದ ಅನಿವಾರ್ಯತೆ. ಕಾಂಪ್ಲೆಕ್ಸ ಬದುಕಿನ ಸಮಸ್ಯೆಗಳಿಗೆ ಇಂಟರ್ಮಿಕ್ಸ ಪರಿಹಾರವನ್ನು ಹೇಳುವ ನಾಟಕ ನೆಮ್ಮದಿಯ ಬದುಕಿನ ಮೂಲ ಮಂತ್ರವನ್ನು ಹೇಳುವಲ್ಲಿ ಯಶಸ್ವಿಯಾಗಿದೆ.   

                          -ಶಶಿಕಾಂತ ಯಡಹಳ್ಳಿ




               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ