ಮಂಗಳವಾರ, ಮಾರ್ಚ್ 22, 2016

ಅಕಾಲಿಕವಾಗಿ ಅಗಲಿದ ಕಲಾವಿದ ರಕ್ಷಿತ್ ಗೆ ರಂಗನಮನ :

ಯುವರಂಗಕರ್ಮಿರಕ್ಷಿತ್ನಿನಗಿದೋ ವಿದಾಯ :
                               

   
ಇಲ್ಲಾ ಹೀಗಾಗಬಾರದಿತ್ತು. ಅನೇಕ ವರ್ಷದ ಪರಿಶ್ರಮ ಫಲಕೊಡುವ ಸಂದರ್ಭದಲ್ಲಿ, ಸಾವಕಾಶವಾಗಿ ರಂಗಭೂಮಿಯಲ್ಲಿ ತನ್ನದೇ ಆದ ಐಡೆಂಟಿಟಿಯನ್ನು ಗಳಿಸಿಕೊಳ್ಳುವಂತಹ  ಕಾಲಘಟ್ಟದಲ್ಲಿ  ಕಲಾವಿದನೊಬ್ಬ ಅಕಾಲ ಮೃತ್ಯುವಿಗೆ ಆಹುತಿಯಾಗಬಾರದಿತ್ತು. ಅಭಿನಯ ಕಲಾವಿದನಾಗಿ, ರಂಗ ನಿರ್ದೇಶಕನಾಗಿ, ರಂಗಶಿಕ್ಷಕನಾಗಿ, ಗಾಯಕನಾಗಿ, ಸಂಗೀತ ಸಂಯೋಜಕನಾಗಿ.. ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹಾಗೂ ಅನಂತ ಬದ್ಧತೆಯಿಂದ ತೊಡಗಿಸಿಕೊಂಡಿದ್ದ ಹರೆಯದ ಯುವಕ ರಕ್ಷಿತ್ ಮೇಲೆ ಕಾಲನಿಗೆ ಕರುಣೆ ಇಲ್ಲವಾಯ್ತು. ಈಗಿನ್ನೂ ಇಪ್ಪತ್ತೈದರ ಹರೆಯ. ಏನನ್ನೋ ಸಾಧಿಸುವ ಹುಮ್ಮಸ್ಸಿನ ವಯಸ್ಸು. ಆದರೆ ಅನಿರೀಕ್ಷಿತ ಅಪಘಾತದ ಆಘಾತದಿಂದ ಚೇತರಿಸಿಕೊಳ್ಳಲಾಗದ ಯುವ ಕಲಾವಿದ ರಕ್ಷಿತ್ ಮಾರ್ಚ 14 ರಾತ್ರಿ ಅಕಾಲಿಕವಾಗಿ ಅಸುನೀಗಿದ್ದು ಬೆಂಗಳೂರಿನ ರಂಗಗೆಳೆಯರಿಗೆ ನಿಜಕ್ಕೂ ಆಘಾತವೆನಿಸಿತು.

ರಕ್ಷಿತ್ ಹಂಸಲೇಖರವರದೇಸಿಕಾಲೇಜಿನಲ್ಲಿ ಕಲಿಯುತ್ತಲೇ ಅಲ್ಲಿಯೇ ನಾಟಕದ ಮೇಷ್ಟ್ರಾಗಿ ತೊಡಗಿಸಿಕೊಂಡಿದ್ದರು. ದೇಸಿ ಕಾಲೇಜಿನ ಕೊನೆಯ ಸೆಮಿಸ್ಟಾರಿನ ಪ್ರಾಜೆಕ್ಟ್ ರಿಪೋರ್ಟನ್ನು ಕಾಲೇಜಿಗೆ ಸಲ್ಲಿಸಿ ತುಂಬಾ ಖುಷಿಯಿಂದಲೇ ನಿರಾಳತೆಯನ್ನು ಅನುಭವಿಸುತ್ತಿದ್ದ ರಕ್ಷಿತ್ ಸಂತಸವನ್ನು ಕೊನೆಗಾಣಿಸಲೆಂದೇ ಅಂದು ಸಾವು ಲಾರಿ ರೂಪದಲ್ಲಿ ದಾರಿಯಲ್ಲಿ ನಿಂತಿತ್ತು. ಅದು ರಾತ್ರಿ ಸರಿಸುಮಾರು ಹನ್ನೊಂದುವರೆ ಗಂಟೆಯ ಸಮಯ. ಕೋನನಕುಂಟೆಯಿಂದ ಅಂಜನಾಪುರದತ್ತ ಹೋಗುವ ದಾರಿಯಲ್ಲಿ ಮರಳಿನ ಲಾರಿಗಳು ನಿಲ್ಲಿಸುವುದು ವಾಡಿಕೆ. ವೇಗದ ಬದುಕನ್ನು ರೂಢಿಸಿಕೊಂಡಿದ್ದ ರಕ್ಷಿತ್ ಅವತ್ತು ಬೈಕಿನಲ್ಲಿ ಸ್ಪೀಡಾಗಿಯೇ ಮನೆಕಡೆ ಹೊರಟಿದ್ದರು. ಹುಷಾರಾಗಿ ಹೋಗಿದ್ದರೆ ಇನ್ನೇನು ಐದು ನಿಮಿಷಗಳಲ್ಲಿ ಸೇಫಾಗಿ ಮನೆ ತಲುಪಬಹುದಾಗಿತ್ತು. ಒಂದು ಸಂಭವನೀಯ ದುರಂತ ತಪ್ಪಿಸಬಹುದಾಗಿತ್ತು. ಆದರೆ.. ತಲೆಗೆ ಹಾಕಿಕೊಳ್ಳುವ ಹೆಲ್ಮೆಟ್ನ್ನು ಮುಂದಿರಿಸಿಕೊಂಡು ಸ್ಪೀಡಾಗಿ ಹೋಗಿದ್ದೇ ಅನಾಹುತಕ್ಕೆ ಕಾರಣವಾಯಿತು. ಅರಿವಿಗೆ ಬರುವಷ್ಟರಲ್ಲಿ ರಸ್ತೆ ಬದಿ ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಎದೆಗೆ ಏಟಾದ ಪೋರ್ಸಿಗೆ ಹಿಂದಕ್ಕೆ ಬಿದ್ದ ರಕ್ಷಿತ್ ತಲೆ ನೆಲಕ್ಕಪ್ಪಳಸಿದಾಗ ಅಲ್ಲೇ ಕಾಯುತ್ತಿದ್ದ ಸಾವು ಆವರಿಸಿಕೊಂಡಿತು. ರಕ್ಷಿತ್ ಮನೆಯಲ್ಲಿ ಸಂಪೂರ್ಣ ಕತ್ತಲಾವರಿಸಿತು. ವಿಷಯ ಗೊತ್ತಾದ ವಯಸ್ಸಾದ ಹೆತ್ತವರಿಗೆ ದಿಕ್ಕೇ ತೋಚದಾಯಿತು. ಇರುವ ಒಬ್ಬನೇ ಒಬ್ಬ ಮಗ ಶವವಾಗಿ ಮನೆಗೆ ಬಂದರೆ ಹೆತ್ತವರ ಗೋಳು ಊಹಿಸಿಕೊಳ್ಳಲು ಸಾಧ್ಯವಿದೆಯಾ? ಈಗಷ್ಟೇ ಒಂದು ವರ್ಷದ ಹಿಂದೆ ಹೊಸ ಮನೆ ಕಟ್ಟಿಸಿಕೊಂಡು ಹಾಯಾಗಿದ್ದ ಕುಟುಂಬದ ಆಧಾರಸ್ಥಂಭವೇ ಕುಸಿದು ಬಿದ್ದಾಗ ವಯೋವೃದ್ದ ಪಾಲಕರ ಸಂಕಟಕ್ಕೆ ಪರ್ಯಾಯಗಳಾದರೂ ಎಲ್ಲಿವೆ ?


ಶಾಲೆ ಕಾಲೇಜಿನ ದಿನಮಾನಗಳಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡ ರಕ್ಷಿತ್ ಥೇಯಟರ್ ಮೇಲೆ ಅದೆಷ್ಟು ವ್ಯಾಮೋಹ ಬೆಳೆಸಿಕೊಂಡನೆಂದರೆ ರಂಗಭೂಮಿಯನ್ನೇ ಬದುಕಾಗಿಸಿಕೊಳ್ಳುತ್ತೇನೆಂದು ನಿರ್ಧರಿಸಿಬಿಟ್ಟಿದ್ದ. ಹೆತ್ತವರು ಹಾಗೂ ಗೆಳೆಯರು "ರಂಗಭೂಮಿ ಇರೋದು ಹವ್ಯಾಸಕ್ಕಾಗಿ ಮಾತ್ರವೇ ಹೊರತು ಬದುಕು ಸಾಗಿಸಲು ಅಲ್ಲ" ಎಂದು ಬೇಕಾದಷ್ಟು ಬುದ್ದಿ ಹೇಳಿದರೂ ಆತ ಕೇಳಲೇ ಇಲ್ಲ. ಸ್ವತಃ ರಂಗ ಗುರುಗಳಾದ ಕವತ್ತಾರರೇ ಕರೆದು ಬುದ್ದಿ ಹೇಳಿದರೂ ರಂಗಭೂಮಿಯಲ್ಲೇ ಬದುಕುತ್ತೇನೆ, ಇಲ್ಲಿಯೇ ಸಂಪಾದಿಸಿ ತೋರಿಸುತ್ತೇನೆಂದು ವಾದಿಸಿದ. ಹರೆಯದ ಹುಡುಗನ ಆವೇಶದ ಮಾತುಗಳೆಂದು ಬಹುತೇಕರು ಭಾವಿಸಿದ್ದರು. ಆದರೆ ಹೇಳಿದ್ದನ್ನು ಸಾಧಿಸುವ ನಿಟ್ಟಿನಲ್ಲಿ ರಕ್ಷಿತ್ ದಿಟ್ಟವಾದ ಹೆಜ್ಜೆಗಳನ್ನು ಇಡುವುದನ್ನು ನೋಡಿದವರಿಗೆ ಆತನ ಮೇಲೆ ಇತ್ತೀಚೆಗೆ ಭರವಸೆ ಬರತೊಡಗಿತ್ತು. ಮೈಸೂರಿನ ಬಾಪು ಶ್ರೀನಿವಾಸರವರ ಮಾರ್ಗದರ್ಶನದಲ್ಲಿ CATS (Creative Artistic & Theatre Science)  ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ವಿಜ್ಞಾನದ ಮೂಲಕ ರಂಗಕೌಶಲ್ಯವನ್ನು ಕಲಿಸುವ ಪ್ರಯತ್ನವನ್ನು ರಕ್ಷಿತ್ ಶುರುಮಾಡಿದ್ದರು. ಹೊಸಬಗೆಯ ರಂಗಭಾಷೆಯ ಸಂಶೋಧನೆ ಮತ್ತು ಮನೋರಂಗಭೂಮಿ ಪರಿಕಲ್ಪನೆ ಕುರಿತು ಪ್ರಯೋಗಗಳನ್ನು ಅಳವಡಿಸುವ ಪ್ರಯತ್ನ ಸಂಸ್ಥೆಯಲ್ಲಿ ಆರಂಭಗೊಂಡಿತ್ತು. ಹಾಗೆಯೇ ಪೂರ್ವಸಿದ್ಧತೆ ಇಲ್ಲದೇ ದಿಡೀರ್ ಆಗಿ ಜನರ ನಡುವೆಯಿಂದಲೇ ನಾಟಕ ಕಟ್ಟುವಂತಹ ಗೇರಿಲ್ಲಾ ಥೇಯಟರ್ ಮಾದರಿಯ ಬೀದಿನಾಟಕಗಳ ಪ್ರಯೋಗಶೀಲತೆಯ ಕುರಿತೂ ಪ್ರಯತ್ನಗಳು ಜಾರಿಯಲ್ಲಿದ್ದವು.

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ರಂಗಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ರಕ್ಷಿತ್ ಅಲ್ಲಿಯ ವಿದ್ಯಾರ್ಥಿಗಳಿಗೆ ರಂಗಕಾರ್ಯಾಗಾರಗಳನ್ನು ನಡೆಸಿಕೊಡುತ್ತಿದ್ದರು. ಅಲ್ಲಿಯ ಆಂಗ್ಲಭಾಷಾ ರಂಗಭೂಮಿಯ ಬೆನ್ನೆಲುಬಾಗಿ ಕೆಲಸ ಮಾಡಿದರು. ಸಂಭಾಷಣೆ ಹಾಗೂ ಸಂಗೀತಗಳನ್ನು ಪೂರ್ವಭಾವಿಯಾಗಿ ರೆಕಾರ್ಡ ಮಾಡಿಸಿ ಮಕ್ಕಳ ನಾಟಕಗಳನ್ನು ಇಂಗ್ಲೀಷಲ್ಲಿ ಮಾಡಿಸುತ್ತಿದ್ದರು. ಬದುಕಿಗೆ ಬೇಕಾದ ಸಂಪಾದನೆಗಾಗಿ ಕ್ರೈಸ್ಟ್ ಕಾಲೇಜಿನ ಆಂಗ್ಲಭಾಷಾ ರಂಗಭೂಮಿಯಲ್ಲಿ ರಕ್ಷಿತ್ ಕೆಲಸ ಮಾಡುತ್ತಿದ್ದರೆ, ಖುಷಿಗಾಗಿ ಹಾಗೂ ಪ್ರತಿಭೆಯ ಅನಾವರಣಕ್ಕಾಗಿ ಕನ್ನಡ ರಂಗಭೂಮಿಯಲ್ಲಿ ಬದ್ಧತೆಯಿಂದ ತೊಡಗಿಕೊಂಡಿದ್ದರು.


ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ರಂಗಗೆಳೆಯರ ಗುಂಪಲ್ಲೇ ಹೆಚ್ಚು ಬುದ್ದಿವಂತನೆನೆಸಿಕೊಂಡಿದ್ದ ರಕ್ಷಿತ್ ತಲೆಯಲ್ಲಿ ಯಾವಾಗಲೂ ದೊಡ್ಡ ದೊಡ್ಡ ಪ್ರಾಜೆಕ್ಟ್ಗಳೇ ತುಂಬಿಕೊಂಡಿರುತ್ತಿದ್ದವು. ಶ್ರೀ ಶ್ರೀ ರವಿಶಂಕರರವರ ಆರ್ಟ ಆಪ್ ಲಿವಿಂಗ್ ಸಂಸ್ಥೆಯೊಂದಿಗೆ ಥೇಯಟರ್ ಡೀಲ್ ಮಾಡಿಕೊಂಡಿದ್ದ ರಕ್ಷಿತ್ ಇನ್ನೇನು ಕೆಲಸ ಆರಂಭಿಸುವವರಿದ್ದರು. ತನ್ನ ಹಾಗೆಯೇ ಕ್ರಿಯೇಟಿವ್ ಆಗಿರುವ ಹತ್ತು ಜನ ಯುವರಂಗಕರ್ಮಿಗಳನ್ನು ಆಯ್ದುಕೊಂಡಿದ್ದರು. ಆರ್ಟ ಆಪ್ ಲಿವಿಂಗ್ ಸಂಸ್ಥೆಯ ವತಿಯಿಂದ ಶಾಲೆ ಕಾಲೇಜುಗಳಲ್ಲಿಥೇಯಟರ್ ಸಾಪ್ಟ್ ಸ್ಕಿಲ್ ಟ್ರೇನಿಂಗ್ಕೊಡುವ ಕಾರ್ಯ ಇನ್ನೇನು ಚಾಲನೆಗೊಳಗಾಗಬೇಕಿತ್ತು. ಅಷ್ಟರಲ್ಲಿ ರಕ್ಷಿತ್ ಇಲ್ಲವಾದರು. ಹಲವಾರು ಶಾಲೆ ಕಾಲೇಜುಗಳಲ್ಲಿ ವರ್ಕಶಾಪ್ಗಳನ್ನು ಮಾಡುತ್ತಾ ರಂಗಭೂಮಿಯಿಂದಲೇ ಹಣ ಮಾಡಬೇಕು ಎನ್ನುವುದನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದ ರಕ್ಷಿತ್ರವರಲ್ಲಿ  ಒಂದು ಸಾಮಾಜಿಕ ಕಳಕಳಿಯನ್ನೂ ಗಮನಿಸಲೇಬೇಕು. ಕಳೆದ ಎರಡು ವರ್ಷಗಳಿಂದಅಂಗಣಎನ್ನುವ ಹೆಸರಲ್ಲಿ ಬೇಸಿಗೆ ಶಿಬಿರವನ್ನು ಆರಂಭಿಸಿದ್ದರು. ಉಳ್ಳವರ ಮಕ್ಕಳಿಂದ ಪೀಸ್ ಪಡೆದರೆ ಸ್ಲಂ ಮಕ್ಕಳಿಗೆ ಉಚಿತವಾಗಿ ಶಿಬಿರದಲ್ಲಿ ರಂಗತರಬೇತಿಯನ್ನು ಕೊಡುತ್ತಿದ್ದರು. ರಕ್ಷಿತ್ ತೀರಿಕೊಂಡ ಮಾರನೆಯ ದಿನ ಕೊಳಗೇರಿ ಮಕ್ಕಳೆಲ್ಲಾ ಅವರ ಮನೆಯ ಮುಂದೆ ಬಂದು ದುಃಖಿಸುತ್ತಿದ್ದ ರೀತಿ ಎಂತಹ ಕಲ್ಲೆದೆಯವರನ್ನೂ ಕರಗಿಸುವಂತಿತ್ತು.
  

ಇತ್ತೀಚೆಗಷ್ಟೇಪಂಚಮುಖಿರಂಗತಂಡಕ್ಕೆ "ಏವಂ ಇಂದ್ರಜಿತ್" ನಾಟಕವನ್ನು ನಿರ್ದೇಶಿಸಿ ಭರವಸೆಯ ರಂಗನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಕ್ಷಿತ್ಪಂಚಮುಖಿತಂಡದ ನಂಗ್ಯಾಕೋ ಡೌಟು, ಕಾಯೋಕಲ್ಪ, ರಿಹರ್ಸಲ್ ಪ್ರಸಂಗ, ಕ್ರಾಂತಿ ಬಂತು ಕ್ರಾಂತಿ ನಾಟಕಗಳಲ್ಲಿ ಲೀಡ್ರೋಲ್ನಲ್ಲಿ ನಟಿಸಿದ್ದರು. ಹಂಸಲೇಖರವರದೇಸಿಕಾಲೇಜು ಕವತ್ತಾರರ ನಿರ್ದೇಶನದಲ್ಲಿ ನಿರ್ಮಿಸಿದ ಚಂದ್ರಶೇಖರ ಕಂಬಾರರಶಿವರಾತ್ರಿನಾಟಕದಲ್ಲಿ ಬಿಜ್ಜಳನ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದರು. ಇದೇ ಶಿವರಾತ್ರಿ ನಾಟಕವನ್ನು ಪ್ರಯೋಗರಂಗ ತಂಡವು ನಿರ್ಮಿಸಿದ್ದಾಗ ಬಿಜ್ಜಳನ ಪಾತ್ರ ಬಿಟ್ಟು ಬಾಕಿ ಎಲ್ಲಾ ಪಾತ್ರಗಳನ್ನೂ ಮರುಪ್ರದರ್ಶನಗಳಲ್ಲಿ ಮಾಡಿ ತಮ್ಮ ಅಭಿನಯ ಪ್ರತಿಭೆಯನ್ನು ರಕ್ಷಿತ್ ಸಾಬಿತುಪಡಿಸಿದ್ದರು. ’ಸಮುದಾಯಕ್ಕೆ ಎಂ.ಎಸ್.ಸತ್ಯೂರವರು ನಿರ್ದೇಶಿಸಿದ್ದ ರಾಜಾರಾಣಿ ನಾಟಕದಲ್ಲಿ ನಿರೂಪಕನ ಪಾತ್ರವನ್ನು ನಿರ್ವಹಿಸಿದ್ದರು. ಕೃಷ್ಣಮೂರ್ತಿ ಕವತ್ತಾರರ ರಂಗಗರಡಿಯಲ್ಲಿ ಪಳಗಿದ ರಕ್ಷಿತ್ ಕವತ್ತಾರರ ಕರಿಯಜ್ಜನ ಕಥೆಗಳು, ಶಸ್ತ್ರಪರ್ವ, ಶ್ರಾದ್ಧ, ಲಯ.. ಹಲವಾರು ನಾಟಕಗಳಲ್ಲಿ ಅಭಿನಯಿಸುವ ಜೊತೆಗೆ ರಂಗನೇಪತ್ಯದ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು.

ರಂಗಭೂಮಿಯಲ್ಲಿ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಬಯಸದೇ ತನ್ನದೇ ಆದ ದಾರಿಯನ್ನು ಕಂಡುಕೊಳ್ಳುವ ತುಡಿತವಿದ್ದ ರಕ್ಷಿತ್ ಕ್ರಿಯಾಶೀಲ ಇನೋವೇಟಿವ್ ಆಲೋಚನೆಗಳನ್ನು ಅನುಷ್ಠಾನಗೊಳಿಸಲು ಸದಾ ಪ್ರಯತ್ನಿಸುತ್ತಿರುವುದು ಅವರ ಜೊತೆ ಇದ್ದವರಿಗೆ ಗೊತ್ತಿರುವಂತಹುದು. ರಂಗಭೂಮಿಯನ್ನೇ ನಂಬಿಕೊಂಡು ಬದುಕುತ್ತೇನೆ ಎನ್ನುವ ಮನೋಸ್ತೈರ್ಯ ಹಾಗೂ ಹುಂಬುದೈರ್ಯ ಮೆಚ್ಚುವಂತಹುದು. ಆದರೆ ಅದು ಕೇವಲ ಹದಿಹರೆಯದ ಆವೇಶದ ಮಾತಾಗದೇ ನಿಟ್ಟಿನಲ್ಲಿ ಸತತ ಪ್ರಯತ್ನವನ್ನು ಮಾಡುತ್ತಿದ್ದ ರಕ್ಷಿತ್ ಮೇಲೆ ಅವರ ಗೆಳೆಯರಿಗೆ ಇತ್ತೀಚೆಗೆ ಭರವಸೆ ಮೂಡತೊಡಗಿತ್ತು.
"ತನ್ನ ರಂಗಮುಖಿ ಕಾರ್ಯದಲ್ಲಿ ಬದ್ಧತೆಯೊಂದಿಗೆ ನಿರಂತರತೆಯನ್ನು ಸದಾ ಕಾಪಾಡಿಕೊಂಡಿದ್ದ ರಕ್ಷಿತ್ ಮನದೊಳಗೆ ಯಾವುದೇ ಕಲ್ಮಷ ಹಾಗೂ ಸ್ವಾರ್ಥ ಇಲ್ಲದೇ ಕೇವಲ ಥೀಯಟರ್ ಬಗ್ಗೆ ಮಾತ್ರ ನಿಷ್ಠೆಯಿಂದ ಕಾರ್ಯಪ್ರವೃತ್ತರಾಗಿದ್ದುದು ಇಂದಿನ ಯುವಕರಿಗೆ ಮಾದರಿಯಾಗಿದೆ. ಆದರೆ ಇಟ್ಟ ಗುರಿ ಮುಟ್ಟಲು ಅಳವಡಿಸಿಕೊಂಡಿದ್ದ ವೇಗ ಮಾತ್ರ ಅಪಾಯಕಾರಿಯಾಗಿದೆ" ಎಂದು ರಕ್ಷಿತ್ರವರ ರಂಗಗುರು ಕೃಷ್ಣಮೂರ್ತಿ ಕವತ್ತಾರರು ನೆನಪಿಸಿಕೊಳ್ಳುತ್ತಾರೆ. ಹೌದು ಸಾಧನೆಯ ಹಾದಿಯಲ್ಲಿದ್ದವರು ತಾಳ್ಮೆ ಹಾಗೂ ಸಹನೆಯನ್ನೂ ರೂಢಿಸಿಕೊಳ್ಳಬೇಕಾಗುತ್ತದೆ. ಆದಷ್ಟು ಬೇಗ ಗುರಿಮುಟ್ಟುವ ದಾವಂತದಲ್ಲಿ ರಕ್ಷಿತ್ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸದೇ ಆತುರಕ್ಕೆ ಬಿದ್ದು ಬದುಕನ್ನೇ ಕಳೆದುಕೊಂಡಿದ್ದು ಮಾತ್ರ ಅಕ್ಷಮ್ಯ. ಅದೇನು ಅವಸರವಿತ್ತೋ ಏನೋ ಇಷ್ಟು ಚಿಕ್ಕವಯಸ್ಸಿನಲ್ಲಿ ಯುವರಂಗಕರ್ಮಿ ಖಾಯಂ ಆಗಿ ರಂಗನೇಪತ್ಯಕ್ಕೆ ಸೇರಿದ್ದಂತೂ ಅತ್ಯಂತ ಬೇಸರದ ಸಂಗತಿ.


ಏನೇನೋ ಸಾಧಿಸಬೇಕೆಂದುಕೊಂಡ ಮಹತ್ವಾಂಕಾಂಕ್ಷೆಯ ಯುವಕರು ಅದೇಕೆ ಅವಸರಕ್ಕೆ ಬಿದ್ದು ಹೀಗೆ ಬದುಕು ಕಳೆದುಕೊಳ್ಳುತ್ತಾರೆಂಬುದು ತಿಳಿದಾಗಲೆಲ್ಲಾ ಹೃದಯ ಹಿಂಡಿದಂತಾಗುತ್ತದೆ. ಸಮುದಾಯದ ಗುಂಡಣ್ಣನವರ ಮಗ ಶಶಾಂಕ್ ಹೀಗೆಯೇ ಭಾವನಾತ್ಮಕ ಕ್ಷಣಗಳಲ್ಲಿ ನೀಗಿಕೊಂಡರು. ಅಂತರಂಗ ತಂಡದಲ್ಲಿ ಕ್ರಿಯಾಶೀಲವಾಗಿದ್ದ ಹರ್ಷ ಕೂಡಾ ತನ್ನ ಸಾವನ್ನು ಆಹ್ವಾನಿಸಿಕೊಂಡರು. ಇತ್ತೀಚೆಗೆ ಇನ್ನೊಬ್ಬ ಯುವ ಕಲಾವಿದ ದೇವಾನಂದ್ ಸಹ ಕುಡಿತದ ವ್ಯಸನಕ್ಕೆ ಬಿದ್ದು ಸಾವನ್ನು ಅಪ್ಪಿಕೊಂಡರು. ಅದ್ಯಾವ ಒತ್ತಡ ಯುವ ಕಲಾವಿದರನ್ನು ಹೀಗೆ ದುರಂತಕ್ಕೆ ದೂಡುತ್ತದೆಯೋ ಗೊತ್ತಿಲ್ಲ. ಆದರೆ ರಂಗಭೂಮಿಗಂತೂ ಅಷ್ಟರ ಮಟ್ಟಿಗೆ ನಷ್ಟವಾಗುವುದಂತೂ ತಪ್ಪಿಲ್ಲ.
      
ನಾಟಕ ಎಂದರೆ ಮೈದುಂಬಿ ನಟಿಸುತ್ತಿದ್ದ ರಕ್ಷಿತ್ ಅತ್ಯಂತ ಉತ್ಸಾಹಿ ಯುವಕ. ಸಂಗೀತ ಹಾಗೂ ರಂಗಭೂಮಿಯನ್ನು ಅತಿಯಾಗಿ ಪ್ರೀತಿಸಿ ದ್ಯಾನಿಸಿದ ಕಲಾವಿದ. ರಂಗಭೂಮಿಯಲ್ಲಿ ಏನನ್ನಾದರೂ ಸಾಧಿಸಬೇಕು, ಹಾಡು ಸಂಗೀತದಲ್ಲಿ ಸಾಧನೆ ಮಾಡಬೇಕು, ರಂಗಭೂಮಿಯಲ್ಲಿಯೇ ಏನನ್ನಾದರೂ ಸಾಧಿಸಿ ಬದುಕಿ ತೋರಿಸಬೇಕು... ಎನ್ನುವ ಮಹತ್ವಾಂಕಾಂಕ್ಷೆಯನ್ನು ಇಟ್ಟುಕೊಂಡು ಶ್ರಮಿಸುತ್ತಿದ್ದ ಯುವರಂಗಕರ್ಮಿಯ ಆಶಯ ಇಷ್ಟು ಬೇಗ ನಿರಾಶೆಯಾಗುತ್ತದೆಂಬುದು ಯಾರೆಂದರೆ ಯಾರಿಗೂ ತಿಳಿದಿರಲಿಲ್ಲ. ಸ್ವತಃ ರಕ್ಷಿತ್ಗೆ ಕೂಡಾ. ಸಾವು ಮರಾಮೋಸ ಮಾಡಿಬಿಟ್ಟಿತು.

ರಕ್ಷಿತ್ರವರ ಆತುರ ಹಾಗೂ ನಿರ್ಲಕ್ಷಗಳು ಈಗಿನ ಯುವಕರಿಗೆ ಎಚ್ಚರಿಕೆಯನ್ನು ನೀಡಬೇಕಿದೆ ಹಾಗೆಯೇ ಅವರ ರಂಗಬದ್ಧತೆ, ನಿರಂತರತೆ ಹಾಗೂ ಕ್ರಿಯಾಶೀಲ ನಡೆಗಳು ಇಂದಿನ ಯುವ ತಲೆಮಾರಿನವರಿಗೆ ಮಾದರಿಯಾಗಬೇಕಿದೆ. ಒಟ್ಟಾರೆಯಾಗಿ ರಕ್ಷಿತ್ರವರ ಅಗಲಿಕೆಯಿಂದ ಅತಂತ್ರವಾಗಿ ಉಳಿದ ಅವರ ರಂಗಭೂಮಿ ಕುರಿತ ಸೃಜನಶೀಲ ಆಶಯ ಹಾಗೂ ಯೋಜನೆಗಳನ್ನು ಅವರ ರಂಗಗೆಳೆಯರು ಮುಂದುವರೆಸಿಕೊಂಡು ಹೋಗಬೇಕಿದೆ. ರಕ್ಷಿತ್ ಕೇವಲ ರಂಗಗೆಳೆಯರ ಮನದಲ್ಲಿ ನೆನಪಾಗಿ ಮಾತ್ರ ಉಳಿಯದೇ ರಂಗಕೈಂಕರ್ಯಕ್ಕೆ ಪ್ರೇರಣೆಯಾಗಬೇಕಿದೆ. ಎಲ್ಲಕ್ಕಿಂತ ಮೊದಲು ತಮ್ಮ ಮನೆಯ ಬೆಳಕನ್ನೇ ಕಳೆದುಕೊಂಡು ಮನದ ಕತ್ತಲೆಯಲ್ಲಿ ಜರ್ಜರಿತರಾಗಿರುವ ರಕ್ಷಿತ್ರವರ ತಂದೆ ತಾಯಿಗಳಿಗೆ ಇಡೀ ರಂಗಭೂಮಿ, ಸಂಸ್ಕೃತಿ ಇಲಾಖೆ, ನಾಟಕ ಅಕಾಡೆಮಿ ಹಾಗೂ ರಂಗತಂಡಗಳು ಸಾಂತ್ವನ ಹೇಳಬೇಕಿದೆ. ಸ್ವಂತ ಬದುಕನ್ನು ಬಿಟ್ಟು ರಂಗಭೂಮಿಗಾಗಿ ಬದ್ಧತೆಯಿಂದ ತೊಡಗಿಸಿಕೊಂಡಿದ್ದ ರಕ್ಷಿತ್ ಹೆಸರಲ್ಲಿ ನಾಟಕ ಅಕಾಡೆಮಿಯು ಪ್ರಶಸ್ತಿಯೊಂದನ್ನು ಪ್ರಕಟಿಸಿ, ಕನ್ನಡ ರಂಗಭೂಮಿಯನ್ನೇ ಬದುಕಾಗಿಸಿಕೊಂಡು ಅಪೂರ್ವ ಸಾಧನೆ ಮಾಡಿದ ಯುವಕರನ್ನು ಗುರುತಿಸಿ ಪ್ರತಿವರ್ಷ ಕೊಡಮಾಡುವ ಮೂಲಕ ರಕ್ಷಿತ್ ಹೆಸರನ್ನು ಉಳಿಸಬಹುದಾಗಿದೆ ಹಾಗೂ ಯುವ ಜನರನ್ನು ಹೆಚ್ಚು ಹೆಚ್ಚಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬಹದಾಗಿದೆ. ನಾಟಕ ಅಕಾಡೆಮಿ ಇಂತಹ ಸ್ತುತ್ಯಾರ್ಹ ಕೆಲಸ ಮಾಡುವುದು ಅಸಾಧ್ಯವಾದ್ದರಿಂದ ರಂಗಕರ್ಮಿಗಳು ಅದರಲ್ಲೂ ಯುವ ರಂಗಕರ್ಮಿಗಳು ಇದಕ್ಕಾಗಿ ಒತ್ತಾಯಿಸಬೇಕಾಗಿದೆ. ಒಟ್ಟಾರೆಯಾಗಿ ರಕ್ಷಿತ್ನಂತಹ ಯುವರಂಗಕರ್ಮಿಯ ರಂಗಕೊಡುಗೆ ಅವರ ಸಾವಿನಲ್ಲಿ ಮುಕ್ತಾಯವಾಗದೇ ಮುಂದಿನ ತಲೆಮಾರಿಗೆ ಪ್ರೇರಕವಾಗುವ ಹಾಗೆ ಮಾಡಬೇಕಿದೆ. ಇದರ ಹೊಣೆಗಾರಿಗೆ ರಂಗಕರ್ಮಿಗಳ ಮೇಲಿದೆ.    

                                                   - ಶಶಿಕಾಂತ ಯಡಹಳ್ಳಿ




















ಅಂತಿಮ ವಿದಾಯ
***************
ಅರೆಕ್ಷಣದ ಆತುರಕೆ
ಅನಿರೀಕ್ಷಿತ ಅಪಘಾತದಿ
ಮರುಕ್ಷಣ ಅಸುನೀಗಿದ
ಯುವನಟನ ನಿರ್ಗಮನ
ಅರಗಿಸಿಕೊಳ್ಳುವುದೆಂತಾ ಬೇಗೆ...
ಬದುಕಿ ಬಾಳಬೇಕಾದ
ಹರೆಯದ ವಯದಲಿ
ರಂಗಗೆಳೆಯ ಅಗಲಿದರೆ
ಗಂಟಲಲಿ ಅನ್ನ ನೀರು
ಇಳಿದೀತು ಹೇಗೆ...?
ಎಷ್ಟೊಂದು ಕನಸಿತ್ತು ಕಣ್ಣಲಿ
ಅದಮ್ಯ ಉತ್ಸಾಹ ಮನದಲಿ
ಸತತ ಯತ್ನ ಸಾಧನೆಯ ಹಾದಿಯಲಿ
ಎಲ್ಲ ಬಿಟ್ಟು ಇಲ್ಲವಾದ ನಟನಿಗೆ
ಹೇಳಲಿ ಹೇಗೆ ಅಂತಿಮ ವಿದಾಯ.?
ಯಾರೂ ಊಹಿಸಿರಲಿಲ್ಲ ಗೆಳೆಯ
ಜೀವನ ನಾಟಕದ ಕೊನೆಯಂಕ
ನಡುವೆ ತಂದು ಪರದೆ ಎಳೆದು
ನೇಪತ್ಯ ಸೇರುವೆಯೆಂದು....
ರಂಗರಸಿಕರಿಗೆ ರಸಭಂಗಮಾಡಿ
ಇಷ್ಟು ಬೇಗ ಆಟ ಮುಗಿಸುವೆಯೆಂದು...
ಕಾಲನಿಗೆ ಬಲಿಯೇ ಬೇಕೆಂದಿದ್ದರೆ
ಕೋಟಿ ಕೋಟಿ ಜನರಿದ್ದರು
ಬದುಕಿದ್ದು ಸತ್ತಂತವರು...
ಕರುಣೆಯಿಲ್ಲ ಸಾವಿಗೆ
ಕಲೆಗಾಗಿ ಬದುಕಿದ ಜೀವ ಜಾರಿತು...
ರಂಗಮನೆ ಬೆಳಗುವ ದೀವಿಗೆ
ಅಕಾಲ ಬಿರುಗಾಳಿಗೆ ಆರಿತು...
(ಮಾರ್ಚ 14 ರಂದು ಆಕಸ್ಮಿಕವಾಗಿ ಅಪಘಾತದಲ್ಲಿ ತೀರಿಕೊಂಡ ಯುವ ರಂಗಕರ್ಮಿ ರಕ್ಷಿತ್ ನೆನಪಲ್ಲಿ ಈ ಕಾವ್ಯ ನಮನ)
- ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ