ಬುಧವಾರ, ಮಾರ್ಚ್ 23, 2016

ರಂಗದಂಗಳದಲ್ಲಿ ಮಹಾಭಾರತದ ’ಮತ್ಸ್ಯಗಂಧಿ’ :



ಮಹಾಭಾರತ ಮಹಾಕಾವ್ಯದ ಮಹಾತಿರುವು ಇರುವುದೇ ಮತ್ಸ್ಯಗಂಧಿ ಪ್ರಕರಣದಲ್ಲಿ. ಬೆಸ್ತನ ಮಗಳು ಮತ್ಸ್ಯಗಂಧಿ ಹಲವಾರು ಸ್ಥಿತ್ಯಂತರಗಳಿಗೆ ಸಿಲುಕಿ ಕುರುವಂಶದ ಮಹಾರಾಣಿಯಾಗಿ ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ಹಾಗೂ ಅವುಗಳಿಂದಾಗುವ ಪರಿಣಾಮಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಪ್ರಯತ್ನವೇ "ಮತ್ಸ್ಯಗಂಧಿ" ರಂಗಪ್ರಯೋಗ. ರೂಪಾಂತರ ರಂಗತಂಡಕ್ಕೆ 25 ವರ್ಷ ತುಂಬಿದ ಬೆಳ್ಳಿಹಬ್ಬದ ನೆನಪಿನಲ್ಲಿ 2016, ಮಾರ್ಚ 18 ರಿಂದ 20 ವರೆಗೆರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ "ಬೆಳ್ಳಿ ಬೆಳಕು" ರಜತ ರಂಗ ಸಂಭ್ರಮ ನಾಟಕೋತ್ಸವದ ಕೊನೆಯ ದಿನವಾದ ಮಾರ್ಚ 20 ರಂದು ಡಾ.ಪ್ರಭಾಕರ ಶಿಶಿಲರವರು ಬರೆದ ಕಾದಂಬರಿ ಆಧರಿಸಿ ಎನ್.ಟಿ.ಪ್ರಸನ್ನಕುಮಾರ್ರವರು ರಂಗರೂಪಗೊಳಿಸಿದಮತ್ಸ್ಯಗಂಧಿನಾಟಕವು ಕೆಎಸ್ಡಿಎಲ್ ಚಂದ್ರುರವರ ನಿರ್ದೇಶನದಲ್ಲಿರೂಪಾಂತರತಂಡದ ಕಲಾವಿದರಿಂದ ಪ್ರದರ್ಶಿಸಲಾಯಿತು

ಯಮನಾ ನದಿಯಲ್ಲಿ ತೇಲಿ ಬಂದ ಹೆಣ್ಣು ಮಗುವನ್ನು ಬೆಸ್ತನೊಬ್ಬ ಸಾಕಿದ್ದು. ಮತ್ಸ್ಯಗಂಧಿ ಬೆಳೆದು ಯುವತಿಯಾದಾಗ ಪಾರಾಶರ ಮುನಿ ಅಕ್ಷರ ಕಲಿಸುವ ನೆಪದಲ್ಲಿ ಮೋಹಿಸಿ ಮಗುವನು ದಯಪಾಲಿಸಿ ತದನಂತರ ಮಗುವಿನೊಂದಿಗೆ ಹೊರಟು ಹೋಗಿದ್ದು. ಹಸ್ತಿನಾವತಿಯ ರಾಜ ಶಂತನು ಮತ್ಸ್ಯಗಂಧಿಯನ್ನು ಮದುವೆಯಾಗುವುದಾಗಿ ಬಯಸಿದಾಗ ಆಕೆಯ ಕಂದನೆ ರಾಜನಾಗಬೇಕೆಂದು ಬೆಸ್ತನು ಶರತ್ತು ವಿಧಿಸಿದ್ದು. ಇದು ತಿಳಿದ ರಾಜನ ಮೊದಲ ಹೆಂಡತಿಯ ಮಗ ದೇವವೃತನು (ಭೀಷ್ಮ) ತಂದೆಯ ಬಯಕೆಗಾಗಿ ಅಜೀವ ಬ್ರಹ್ಮಚರ್ಯ ಹಾಗೂ ರಾಜನಾಗದಿರುವ ಪ್ರತಿಜ್ಞೆ ಮಾಡಿ ತಂದೆಗೆ ಮತ್ಸ್ಯಗಂಧಿಯೊಂದಿಗೆ ಮದುವೆ ಮಾಡಿಸಿದ್ದು. ಅವರಿಬ್ಬರಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಎನ್ನುವ ಇಬ್ಬರು ಮಕ್ಕಳು ಹುಟ್ಟಿದ್ದು. ಭೀಷ್ಮನ ಪ್ರತಿಜ್ಞೆ ತಿಳಿದು ಶಂತನು ರಾಜ ತೀರಿಕೊಂಡು ತದನಂತರ ಚಿತ್ರಾಂಗದ ಕೂಡಾ ಅನಾರೋಗ್ಯದಿಂದ ಸತ್ತಾಗ ವಿಚಿತ್ರವೀರ್ಯನಿಗೆ ಪಟ್ಟಕಟ್ಟಿದ್ದು. ಮತ್ಸ್ಯಗಂಧಿಯ ಆದೇಶದಂತೆ ಆತನಿಗೆ ಮದುವೆ ಮಾಡಲು ಕಾಶಿರಾಜನ ಮೂವರು ಕುವರಿಯರನ್ನು ಭೀಷ್ಮ ಗೆದ್ದು ತಂದು ಅಂಬಿಕೆ ಅಂಬಾಲಿಕೆಯರೊಂದಿಗೆ ಮದುವೆ ಮಾಡಿಸಿದ್ದು. ಭೀಷ್ಮನಿಂದ ನಿರಾಕರಿಸಲ್ಪಟ್ಟು ಅತ್ತ ಸಾಲ್ವರಾಜನಿಂದಲೂ ಪರಿತ್ಯಕ್ತಳಾದ ಅಂಬೆ ಅಗ್ನಿಗೆ ಹಾರಿ ಸತ್ತಿದ್ದು. ಅನಾರೋಗ್ಯದಿಂದ ವಿಚಿತ್ರವೀರ್ಯ ಸತ್ತಾಗ ಸಿಂಹಾಸನದ ಉತ್ತರಾಧಿಕಾರಿಯ ಪ್ರಶ್ನೆ ಬಂದಾಗ ನಿಯೋಗ ಪದ್ದತಿಯ ಮೂಲಕ ಅಂಬಿಕೆ ಅಂಬಾಲಿಕೆಯರಿಗೆ ಮತ್ಸ್ಯಗಂಧಿಯ ಮೊದಲ ಮಗ ವೇದವ್ಯಾಸ ಮುನಿಯೊಂದಿಗೆ ಸಂಯೋಗ ಮಾಡಿಸಿ ಪುತ್ರಭಾಗ್ಯ ಗಳಿಸಿದ್ದು. ಕೂಡಿಕೆಯ ಸಮಯ ಹೆದರಿಕೆಯಿಂದ ಕಣ್ಣು ಮುಚ್ಚಿದ ಅಂಬಿಕೆಗೆ ಕುರುಡು ಮಗ ದೃತರಾಷ್ಟ್ರ ಜನಿಸಿದರೆ, ಹೆದರಿ ಬಿಳಿಚಿಕೊಂಡ ಅಂಬಾಲಿಕೆಗೆ ರೋಗಿಷ್ಟನಾದ ಪಾಂಡುರಾಜ ಜನಿಸಿ, ದಾಸಿಗೆ ಆರೋಗ್ಯವಂತನಾದ ವಿಧುರ ಹುಟ್ಟಿದ್ದು. ಪಟ್ಟಕ್ಕೆ ಮತ್ತೆ ಅಸಮರ್ಥ ಉತ್ತರಾಧಿಕಾರಿ ಹುಟ್ಟಿದ್ದರಿಂದ ನೊಂದ ಮತ್ಸ್ಯಗಂಧಿ ನೊಂದು ಅನಾರೋಗ್ಯಕ್ಕೆ ತುತ್ತಾಗಿ ಮಗ ವೇದವ್ಯಾಸನ ಮಡಿಲಲ್ಲಿ ಪ್ರಾಣಬಿಟ್ಟಿದ್ದು..... ಹೀಗೆ ಇಷ್ಟೆಲ್ಲಾ ಮಹಾಭಾರತದ ಪುರಾಣದ ಸನ್ನಿವೇಶಗಳನ್ನು ಮತ್ಸ್ಯಗಂಧಿ ನಾಟಕವು ದೃಶ್ಯಗಳ ಮೂಲಕ ತೋರಿಸುತ್ತಾ ಹೋಗುತ್ತದೆ.




ಮತ್ಸ್ಯಗಂಧಿಯನ್ನು ಕೇಂದ್ರವಾಗಿಟ್ಟುಕೊಂಡು ಮಹಾಭಾರತದ ಪ್ರಮುಖ ಘಟ್ಟವನ್ನು ಕಟ್ಟಿಕೊಡುವ ಪ್ರಯತ್ನವನ್ನು ನಾಟಕವು ಮಾಡುತ್ತದೆ. ಬೆಸ್ತರ ಮಹಿಳೆ ಮತ್ಸ್ಯಗಂಧಿ ತನ್ನ ಬದುಕಿನಲ್ಲಿ ಬಂದ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವುದನ್ನು ಮನೋಜ್ಞವಾಗಿ ತೋರಿಸಲಾಗಿದೆ. ಬಳಸಿ ಬಿಸಾಕಿ ಹೋದ ಪರಾಶರನ ಅಗಲಿಕೆಯ ನೋವು, ಕರುಳ ಕುಡಿ ಬಾಲ್ಯದಲ್ಲೇ ತಂದೆ ಪಾಲಾಗಿದ್ದರಿಂದಾದ ಒಡಲುರಿಯ ಸಂಕಟ, ಕುರು ಸಾಮ್ರಾಜ್ಯದ ರಾಣಿಯಾದನಂತರ ಅಕಾಲಿಕವಾದ ಪತಿಯ ಸಾವು, ಬೆಳೆದು ನಿಂತ ಮಗ ಅನಾರೋಗ್ಯದಿಂದ ಅಸುನಿಗಿದ್ದು, ಭೀಷ್ಮನ ಪ್ರತಿಜ್ಞೆಗೆ ತಾನು ಕಾರಣನಾದೆನಲ್ಲಾ ಎನ್ನುವ ಪಾಶ್ಚಾತ್ತಾಪಅಸಮರ್ಥ ಮಗನಿಗೆ ಕಾಶಿ ಕುವರಿಯರನ್ನು ಮದುವೆ ಮಾಡಿಸಿ ಮೋಸ ಮಾಡಿದ ತಳಮಳ, ಅಂಬೆಯ ಸಾವಿಗೆ ತಾನೇ ಕಾರಣವಾದ ತಲ್ಲಣ, ಕೊನೆಯ ಮಗನೂ ಸತ್ತು ವಿಧಿವೆಯರಾದ ಸೊಸೆಯಂದಿರು...ನಿಯೋಗ ಪದ್ದತಿಯಿಂದ ಸೊಸೆಯರಿಗೆ ಮಕ್ಕಳಾದರೂ ಹುಟ್ಟಿದ ಮಕ್ಕಳು ಆರೋಗ್ಯಪೂರ್ಣವಾಗಿಲ್ಲವಲ್ಲಾ ಎನ್ನುವ ಚಿಂತೆ... ಹೀಗೆ ಮತ್ಸ್ಯಗಂಧಿ ಒಂದಾದ ನಂತರ ಒಂದು ಸಮಸ್ಯೆಗಳ ಭಾರವನ್ನು ತನ್ನ ಎದೆಯ ಮೇಲೆ ಹೇರಿಕೊಂಡೇ ಬಳಲಿದಳು. ಎಲ್ಲದಕ್ಕೂ ತಾನೇ ಕಾರಣನಾದೆನೆಲ್ಲಾ ಎನ್ನುವ ಪಾಪಪ್ರಜ್ಞೆಯಿಂದ ತಲ್ಲಣಿಸಿ ಹೋದಳು. ಇಡೀ ಕುರುಕುಲದ ಆಗುಹೋಗುಗಳಿಗೆ ತನ್ನ ನಿರ್ಧಾರಗಳೇ ಮುಳುವಾದದ್ದು ಕಂಡು ಅಪಾರವಾಗಿ ನೊಂದುಕೊಂಡಳು. ಮಹಾಭಾರತದಲ್ಲಿ ಕುಂತಿ, ದ್ರೌಪತಿಗಳು ಮಾತ್ರ ದುರಂತ ಮಹಿಳಾ ಪಾತ್ರಗಳೆಂದರೆ ಅವರ ಪಟ್ಟಿಯಲ್ಲಿ ಮತ್ಸ್ಯಗಂಧಿ ಕೂಡಾ ನೊಂದ ಮಹಿಳೆಯೇ ಆಗಿದ್ದನ್ನು ನಾಟಕ ಸಾಬೀತು ಪಡಿಸುತ್ತದೆ. ಮತ್ಸ್ಯಗಂಧಿ ಆಸೆ ಪಟ್ಟಂತೆ ಏನೂ ನಡೆಯುವುದೇ ಇಲ್ಲ. ಆಕೆ ಏನೋ ಅಂದುಕೊಂಡರೆ ಅದು ಇನ್ನೇನೋ ಆಗುವುದು ನಾಟಕದ ತಿರುಳಾಗಿದ್ದು ಕೊನೆಗೆ ತಾನು ಬೆಳೆದ ಯಮುನಾ ನದಿ ತೀರವನ್ನು ನೋಡುವ ಬಯಕೆ ಕೂಡಾ ಈಡೇರಲಿಲ್ಲ. ಪರುಷ ಪ್ರಧಾನವಾದ ಸಂಕೀರ್ಣ ವ್ಯವಸ್ಥೆಯಲ್ಲಿ ಮತ್ಸ್ಯಗಂಧಿ ಎನ್ನುವ ದುರಂತ ಮಹಿಳಾ ಪಾತ್ರದ ತಲ್ಲಣಗಳನ್ನು ನಾಟಕವು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿಕೊಟ್ಟಿದೆ.    

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಹೇಗೆ ಪುರುಷನಿಂದ ಬಳಕೆಗೊಳಗಾಗಿ ಬಲಿಪಶುವಾಗುತ್ತಾಳೆ ಎಂಬುದನ್ನು ನಾಟಕ ಅನಾವರಣಗೊಳಿಸುತ್ತದೆ. ಯುವತಿಯಾದ ಮತ್ಸ್ಯಗಂಧಿಯನ್ನು ತನ್ನ ಬಯಕೆಗೆ ಪರಾಶರ ಮುನಿ ಬಳಸಿಕೊಂಡು ಹುಟ್ಟಿದ ಮಗುವಿನೊಂದಿಗೆ ಹೊರಟು ಹೋಗುತ್ತಾನೆ. ಆತನಿಗೆ ತನ್ನ ಬಯಕೆ ತೀರಿಸಲು ಹಾಗೂ ಬೀಜ ಬೆಳೆಯಲು ಭೂಮಿ ಬೇಕಾಗಿತ್ತೇ ಹೊರತು ಭೂಮಿ ಜೊತೆಗಿನ ಸಂಬಂಧವಲ್ಲ. ಸಂತೋಷ ಹಾಗೂ ಸಂತಾನಕ್ಕಾಗಿಯೇ ಹೆಣ್ಣು ಇರುವುದೇ ಹೊರತು ಮಹಿಳೆಗೆ ಸ್ವಂತ ಅಸ್ತಿತ್ವವೇ ಇಲ್ಲ ಎನ್ನುವುದಕ್ಕೆ ಮತ್ಸ್ಯಗಂಧಿ ರೂಪಕವಾಗಿದ್ದಾಳೆ. ಶಂತನು ರಾಜನಿಗೂ ವಿರಹದುರಿ ತಣಿಸಲು ಹೆಣ್ಣು ಬೇಕಾಗಿತ್ತು. ಭೀಷ್ಮನಿಗೆ ತ್ಯಾಗಮಯಿಯಾಗುವ ಬಯಕೆ. ಗೆದ್ದು ಬಲವಂತದಿಂದ ಕರೆತಂದ ಕಾಶಿಯ ರಾಜಕುವರಿಯರಿಗೂ ಇಲ್ಲಿ ಆಯ್ಕೆ ಸ್ವಾತಂತ್ರ್ಯ ಎನ್ನುವುದಿಲ್ಲ. ನಪುಂಸಕನೆಂದು ಗೊತ್ತಿದ್ದರೂ ವಿಚಿತ್ರವೀರ್ಯನೊಂದಿಗೆ ಮದುವೆಯಾಗುವ ಅನಿವಾರ್ಯತೆಯನ್ನು ಪಿತೃಪ್ರಧಾನ ವ್ಯವಸ್ಥೆ ಸೃಷ್ಟಿಸುತ್ತದೆ. ಇರುವ ವ್ಯವಸ್ಥೆಯನ್ನು ಮಹಿಳೆ ವಿರೋಧಿಸಿದರೆ ಎಲ್ಲಿಯೂ ಸಲ್ಲದವರಾಗಿ ಅತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಅಂಬೆಯ ಪ್ರಕರಣ ಸಾಬೀತುಪಡಿಸುತ್ತದೆ. ಜನಸಾಮಾನ್ಯರನ್ನು ಬಿಡಿ ಋಷಿಮುನಿಗಳು, ರಾಜ ಮಹಾರಾಜರುಗಳು ತಮ್ಮ ತಮ್ಮ ಸ್ವಾರ್ಥಹಿತಾಸಕ್ತಿಗೆ ಮಹಿಳೆಯರನ್ನು ಬಳಸಿಕೊಳ್ಳತ್ತಲೇ ಬಂದಿರುವುದಕ್ಕೆ ದೇಶದ ಪ್ರಾತಿನಿಧಿಕ ಮಹಾಕಾವ್ಯವಾದ ಮಹಾಭಾರತದಲ್ಲಿ ಅನೇಕಾನೇಕ ಉದಾಹರಣೆಗಳಿವೆ. ಅದರಲ್ಲಿ ಮತ್ಸ್ಯಗಂಧಿ, ಅಂಬೆ ಸಹೋದರಿಯರು ಕೇವಲ ಪಾತ್ರಗಳಷ್ಟೇ.




ಆಧುನಿಕ ರಂಗಭೂಮಿಯ ವಿಶೇಷತೆ ಇರುವುದು ಪುರಾಣಗಳನ್ನು ಮುರಿದು ಮತ್ತೆ ಕಟ್ಟಿಕೊಡುವುದರಲ್ಲಿ. ಆದರೆ... ಮತ್ಸ್ಯಗಂಧಿನಾಟಕದಲ್ಲಿ ಪುರಾಣದಲ್ಲಿ ಇದ್ದದ್ದನ್ನು ಇದ್ದ ಹಾಗೆ ತೋರಿಸುತ್ತಾ, ಜನರಿಗೆ ಈಗಾಗಲೇ ಗೊತ್ತಿದ್ದುದನ್ನೇ ಮತ್ತೆ ತೋರಿಸುವ ಪ್ರಯತ್ನ ಮಾಡಿಲಾಗಿದೆ. ಗೊತ್ತಿರುವುದನ್ನೇ ಹೇಳಲು ನಾಟಕವಾದರೂ ಯಾಕೆ ಬೇಕು? ಅದರಲ್ಲಿ ಏನಾದರೂ ವಿಶೇಷವಿರಬೇಕಲ್ಲವೆ? ಆದರೆ ಅಂತಹ ಯಾವುದೇ ವಿಶೇಷತೆಗಳು ನಾಟಕದಲ್ಲಿ ಕಾಣಿಸುತ್ತಿಲ್ಲ. ಯಥಾವತ್ ದೃಶ್ಯಗಳನ್ನು ಮರುಸೃಷ್ಟಿಸುವುದಕ್ಕೆ ಸೀಮಿತವಾದ ನಾಟಕವು ಆಕೃತಿಯ ಅಂತರಾಳವನ್ನು ಹೊಕ್ಕು ಹೊಸದಾದ ನೋಟವನ್ನು ಕಟ್ಟಿಕೊಡುವುದರಲ್ಲಿ ವಿಫಲವಾಗಿದೆ. ರಂಗಪಠ್ಯದಲ್ಲಿ ಅಂತಹ ಹೊಸತನವೇನಿಲ್ಲ. ನಿರ್ದೇಶಕರು ಸಹ ಹೊಸಹೊಳಹುಗಳತ್ತ ಗಮನಕೊಟ್ಟಿಲ್ಲ. ಮರೆತು ಮಸುಕಾಗಿರಬಹುದಾದ ಮಹಾಭಾರತದ ಘಟನೆಗಳನ್ನು ಮತ್ತೊಮ್ಮೆ ಪ್ರೇಕ್ಷಕರ ಮನದಲ್ಲಿ ಮರುಕಳಿಸುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾಗಿದೆ.

ನಾಟಕದಲ್ಲಿ ಪರಾಶರ ಋಷಿಯ ಪಾತ್ರವನ್ನು ಮುರಿದುಹಾಕಿ ವಿಕ್ಷಿಪ್ತವಾಗಿ ಮತ್ತೆ ಕಟ್ಟುವ ಪ್ರಯತ್ನ ಮಾಡಲಾಗಿದೆ. ವಶಿಷ್ಟ ಮಹರ್ಷಿಯ ಮೊಮ್ಮಗನಾದ ಪರಾಶರನು ಬ್ರಾಹ್ಮಣ ಸಂಜಾತ ಪುರೋಹಿತಶಾಹಿ ಕುಲಸ್ತನೆಂಬುದು ಪುರಾಣಗಳಲ್ಲಿ  ಸ್ಪಷ್ಟವಾಗಿಯೇ ಇದೆ. ವಶಿಷ್ಟ ಮಹರ್ಷಿಯ ಮೊಮ್ಮಗ ತಾನೆಂದು ಸ್ವತಃ ಪರಾಶರ ಪಾತ್ರವೇ ನಾಟಕದಲ್ಲಿ ಹೇಳಿಕೊಳ್ಳುತ್ತದೆ. ಆದರೆ ನಾಟಕದ ನಿರ್ದೇಶಕರು ವೈದಿಕ ಋಷಿಯ ನಾಮ ಜನಿವಾರಗಳನ್ನೆಲ್ಲಾ ನಾಮಾವಶೇಷಮಾಡಿ ಜಟಾಧಾರಿ ಅಘೋರಿಯಂತೆ ಚಿತ್ರಿಸಿದ್ದಾರೆ. ಮೈಎಲ್ಲಾ ಬೂದಿ ಬಡೆದುಕೊಂಡು ನಾಗಾಸ್ವಾಮಿಗಳಂತೆ ಕಾಣುವ ಮಾಂಸಾಹಾರಿಯಾದ ಅಘೋರಿ ಪಾತ್ರಕ್ಕೂ ಹಾಗೂ ನಾಟಕದಲ್ಲಿ ಪ್ರಸ್ತಾಪಿಸಲಾದ ಸನಾತನ ಮಹರ್ಷಿ ಪರಾಶರನಿಗೂ ವೇಶದಲ್ಲಿ ನಡವಳಿಕೆಯಲ್ಲಿ ಹೋಲಿಕೆಯೆಂಬುದೇ ಇಲ್ಲ. ತಾತನಂತೆ ಮೊಮ್ಮಗನಿಲ್ಲದಿದ್ದರೂ ಚಿಂತೆಯಿಲ್ಲ, ತಂದೆಯಂತೆ ಮಗನಿರಬೇಕೆಂಬುದು ನಿರ್ದೇಶಕರ ಅಭಿಲಾಷೆಯಾಗಿದ್ದು ಪರಾಶರನಂತೆಯೇ ಆತನ ಮಗ ವೇದವ್ಯಾಸ ಕೂಡಾ ಜಟಾಧಾರಿ ಅಘೋರಿಯೇ ಆಗಿದ್ದಾನೆ. ಪಾತ್ರದ ಹಿನ್ನಲೆಯನ್ನು ತಿರುಚಿ ಕೇವಲ ದೃಶ್ಯವೈಭವ ಸೃಷ್ಟಿಸಲು ಪರಾಶರ ಹಾಗೂ ವೇದವ್ಯಾಸನನ್ನು ಅಘೋರಿಯಾಗಿಸಿದ್ದು ಪ್ರಶ್ನಾರ್ಹವಾಗಿದೆ. ನೋಡಲು ಅಘೋರಿಯ ಆವಾಂತರಗಳು ಚೆಂದಕಾಣಿಸುತ್ತದೆಯಾದರೂ ತರ್ಕಕ್ಕೆ ಅಳವಡಿಸಿದಾಗ ಸಂದೇಹಗಳು ಕಾಡತೊಡಗುತ್ತವೆ. ವೈದಿಕ ಋಷಿ ಇಲ್ಲಿ ಅಘೋರಿಯಾಗುತ್ತಾನೆ. ಬ್ರಾಹ್ಮಣನಾದ ಪರಶುರಾಮ ಕ್ಷತ್ರೀಯನಾಗುತ್ತಾನೆ... ಹೀಗೆ ನಿರ್ದೇಶಕರ ತರ್ಕಾತೀತ ಪರಿಕಲ್ಪನೆಗಳು ನಾಟಕದ ಪಾತ್ರಪೋಷಣೆಯಲ್ಲಿ ವಿಭಿನ್ನ ಆಯಾಮ ಪಡೆದಿವೆ

ಪ್ರತಿಯೊಂದು ದೃಶ್ಯಗಳನ್ನು ಸಂಯೋಜಿಸಿದ ರೀತಿ ತುಂಬಾ ವಿಶೇಷವಾಗಿ ಮೂಡಿಬಂದಿದ್ದು, ಬ್ಲಾಕಿಂಗ್ನಲ್ಲಿ ನಾಟಕ ಗೆದ್ದಿದೆ. ನಾಗರಿಕರ ಗುಂಪಿನ ದೃಶ್ಯ ಮಾತ್ರ ತುರುಕಿದಂತಿದ್ದು ಹೊಸ ನಟರು ಮಾತು ಮರೆತಿದ್ದು ಒಂದಿಷ್ಟು ಆಭಾಸವೆನಿಸುವಂತಿತ್ತು. ಇಡೀ ನಾಟಕವನ್ನು ತೂಗಿಸಿಕೊಂಡು ಹೋಗುವಲ್ಲಿ ಮತ್ಸ್ಯಗಂಧಿ ಪಾತ್ರಧಾರಿ ರಂಜಿತಾ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ. ಅವರ ಮಾತಲ್ಲಿ ಇರುವ ಸ್ಪಷ್ಟತೆ, ನಟನೆಯಲ್ಲಿರುವ ಎನರ್ಜಿ, ಮುಖದಲ್ಲಿ ಮೂಡುವ ಭಾವನೆಗಳು ಗಮನಾರ್ಹವಾಗಿದ್ದವು. ಆದರೆ ಮಗು ತನ್ನನ್ನು ಅಗಲಿ ಹೋಗುವಾಗ ಮಾತೃಭಾವನೆಯ ಮಹಪೂರ ಹರಿಸಬಹುದಾಗಿತ್ತುಪರಾಶರ ಹಾಗೂ ವೇದವ್ಯಾಸ ತಂದೆ ಮಕ್ಕಳ ಎರಡೂ ಪಾತ್ರಗಳನ್ನು ಮೈದುಂಬಿ ನಟಿಸಿದ ಹರೀಶ್ರವರ ಅಭಿನಯ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ಅಂಬೆ ಪಾತ್ರಕ್ಕೆ ಸಿತಾರಾ ನ್ಯಾಯವೊದಗಿಸಿದ್ದಾರೆ. ಭೀಷ್ಮನ ಪಾತ್ರಕ್ಕೆ ವೇಣು ನಟನೆ ಯಾಕೋ ದುರ್ಬಲವೆನ್ನಿಸಿತು. ಶಂತನು ರಾಜನ ಪಾತ್ರಕ್ಕೆ ಶ್ರೀಹರ್ಷ ಇನ್ನೂ ಪಳಗಬೇಕಿದೆ. ಮಿಕ್ಕೆಲ್ಲಾ ಪಾತ್ರಗಳನ್ನು ಹೊಸ ಹುಡುಗರೇ ನಟಿಸಿದ್ದು ತಮ್ಮ ಪಾತ್ರಗಳಲ್ಲಿ ಇಳಿದು ಅಭಿನಯಿಸಲು ಇನ್ನೂ ಪರಿಶ್ರಮಪಡಬೇಕಿದೆ.


ಕಾಸ್ಟೂಮ್ಸ್ಗಳು ಪಾತ್ರಕ್ಕೆ ಪೂರಕವಾಗಿ ಮೂಡಿಬಂದಿದ್ದಾವಾದರೂ ಸಮಯದ ಅಂತರದಲ್ಲಿ ಉಡುಪು ಬದಲಾಯಿಸಿದ್ದರೆ ಚೆಂದಾಗಿತ್ತು. ಮತ್ಸ್ಯಗಂಧಿಯು ಅರಂಭದಿಂದ ರಾಜನರಮನೆಗೆ ಹೋಗುವವರೆಗೂ ಒಂದೇ ಕಾಸ್ಟೂಮ್ನಲ್ಲಿರುವ ಅಗತ್ಯವಿರಲಿಲ್ಲ. ಯಾಕೆಂದರೆ ಘಟ್ಟ ಕನಿಷ್ಟ ಅಂದರೂ ಏಳೆಂಟು ವರ್ಷಗಳ ಅಂತರದಲ್ಲಿ ನಡೆಯುವ ಘಟನಾವಳಿಗಳನ್ನು ಒಳಗೊಂಡಿದೆ. ಭೀಷ್ಮ ಅಪ್ಪನಿಗೆ ಮದುವೆ ಮಾಡುವಾಗ ಹೇಗಿದ್ದನೋ ಹಾಗೆಯೇ ಕೊನೆಯವರೆಗೂ ಅದೇ ಗೆಟಪ್ಪಿನಲ್ಲಿರೋದು ಆಭಾಸವೆನಿಸುತ್ತದೆ. ಯುವಕ ದೇವವೃತ ಮುಂದೆ ಭೀಷ್ಮಾಚಾರ್ಯ ಎನ್ನಿಸಿಕೊಳ್ಳುವ ಹಂತದಲ್ಲಿ ಒಂದಿಷ್ಟು ಉಡುಗೆ ತೊಡುಗೆ ಹಾಗೂ ಮೇಕಪ್ಪಲ್ಲಿ ಬದಲಾವಣೆ ಮಾಡಿದ್ದರೆ ಸೂಕ್ತವೆನಿಸುತ್ತಿತ್ತು. ಕಾಲ ಸರಿದಂತೆ ಪಾತ್ರಕ್ಕಾಗುವ ವಯೋಮಾನಕ್ಕೆ ತಕ್ಕಂತೆ ಮತ್ಸ್ಯಗಂಧಿ, ಭೀಷ್ಮ, ಶಂತನುಗಳ ಪಾತ್ರಗಳಲ್ಲಿ ಬದಲಾವಣೆ ಅಗತ್ಯವೆನಿಸುತ್ತದೆ.

ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಬೆಳಕಿನ ವಿನ್ಯಾಸ ನಾಟಕದಲ್ಲಿ ನೋಡುಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದವು. ಪರಾಶರ ಮತ್ತು ಮತ್ಸ್ಯಗಂಧಿಯ ಮಿಲನದ ದೃಶ್ಯ ಒಂಚೂರು ಅತಿ ಅನ್ನಿಸಿದರೂ ಹಿತವೆನಿಸಿದ್ದಂತೂ ಸತ್ಯ. ಯಮುನಾ ನದಿಯ ಎಫೆಕ್ಟನ್ನು ಸೈಕ್ ಬಳಿಸಿ ತೋರಿಸಿದ್ದು ಹಾಗೂ ನಾಟಕದ ದೃಶ್ಯಗಳಿಗೆ ತಕ್ಕಂತೆ ಸೈಕ್ ಬಣ್ಣವನ್ನು ಬದಲಿಸಿದ್ದು ನಾಟಕದ ಹೈಲೈಟ್ ಆಗಿದೆ. ಲೈಟಿಂಗ್ಗೆ ಕೊಟ್ಟಷ್ಟೇ ಗಮನವನ್ನು ಸಂಗೀತಕ್ಕೂ ಕೊಟ್ಟಿದ್ದರೆ ನಾಟಕದ ಖದರ್ರೇ ಬೇರೆಯಾಗುತ್ತಿತ್ತು.  

ನಾಟಕದ ಮೂಡಿಗೆ ತಕ್ಕಂತೆ ಸ್ಪಂದಿಸಬಹುದಾಗಿದ್ದ ಸಂಗೀತ ಹಾಗೂ ಹಾಡುಗಳು ನಾಟಕದಾದ್ಯಂತ ದುರ್ಭಲವಾಗಿ ಮೂಡಿಬಂದು ದೃಶ್ಯಕ್ಕೆ ಅಗತ್ಯವಾದ ಮೂಡ್ ಸೃಷ್ಟಿಸುವಲ್ಲಿ ವಿಫಲವಾದವು. ಸಂಗೀತದಲ್ಲಿ ಪೋರ್ಸ ಇಲ್ಲ, ಹಾಡಿನಲ್ಲಿ ಮಾಧುರ್ಯವೂ ಇರಲಿಲ್ಲ. ಸಂಗೀತ ಹಾಡುಗಳು ದೃಶ್ಯಗಳಿಗೆ ಸರಿಯಾಗಿ ಬ್ಲೆಂಡ್ ಆಗಲಿಲ್ಲ. ನಿರ್ದೇಶಕರು ನಿಟ್ಟಿನತ್ತ ಗಮನ ಹರಿಸುವುದುತ್ತಮ. ನಾಟಕದಾದ್ಯಂತ ಖಳನಾಯಕನಾಗಿ ಕಾಡಿದ್ದು ಮೈಕ್ ಸಿಸ್ಟಂ. ಡೀಪ್ ಸ್ಟೇಜ್ನಲ್ಲಿನ ದೃಶ್ಯಗಳಲ್ಲಿ ನಟರು ಮಾತಾಡಿದ ಮಾತುಗಳೇ ಪ್ರೇಕ್ಷಕರಿಗೆ ಕೇಳದಂತಾಗಿ ರಸಭಂಗವಾಯಿತು. ಬಹುಷಃ ಮೊದಲ ಪ್ರದರ್ಶನವಾಗಿದ್ದರಿಂದಲೋ ಏನೋ ಬ್ಲಾಕ್ಔಟ್ಗಳು ಹೆಚ್ಚು ಹೊತ್ತು ಬ್ಲಾಂಕ್ ಆಗಿ ಗೊಂದಲಕಾರಿಯಾಗಿದ್ದವು. ಹಾಡು ಸಂಗೀತಗಳ ನಿರ್ವಹಣೆಯನ್ನು ದೃಶ್ಯಕ್ಕನುಗುಣವಾಗಿ ಮಾಡಿದ್ದರೆ, ಬ್ಲಾಕ್ಔಟ್ಗಳ ಸಮಯ ಕಡಿತಗೊಳಿಸಿದ್ದರೆ, ಕಥಾ ಮುಂದುವರಿಕೆಯನ್ನು ಕೇವಲ ಮೈಕಲ್ಲಿ ಹೇಳದೇ ದೃಶ್ಯಗಳ ಮೂಲಕವೋ ಇಲ್ಲವೇ ಪಾತ್ರಗಳ ಮೂಲಕವೋ ಹೇಳಿಸಿದ್ದರೆಮುಖ್ಯ ಪಾತ್ರದಾರಿಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಪಾತ್ರಧಾರಿಗಳ ನಟನೆ ಹಾಗೂ ಸಂಭಾಷಣೆಯಲ್ಲಿ ಪೋರ್ಸ ಇದ್ದಿದ್ದರೆ, ಇಡೀ ನಾಟಕ ಹೊಸ ಹೊಳಹುಗಳನ್ನು ಹೇಳುವಂತಿದ್ದರೆ.. "ಮತ್ಸ್ಯಗಂಧಿ" ಅತ್ಯುತ್ತಮ ನಾಟಕವಾಗಿ ಮೂಡಿ ಬರುವಲ್ಲಿ ಸಂದೇಹವೇ ಇಲ್ಲ. ಮರು ಪ್ರದರ್ಶನಗಳಲ್ಲಿ ಸರಿಪಡಿಸುವ ಸಾಧ್ಯತೆಗಳಂತೂ ಮುಕ್ತವಾಗಿವೆ.  
  
                                     ಶಶಿಕಾಂತ ಯಡಹಳ್ಳಿ       




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ