ಮಂಗಳವಾರ, ಡಿಸೆಂಬರ್ 20, 2016

ಕಲಾವಿದ ಮಂಜುನಾಥ ಬೆಳಕೆರೆ ಅಕಾಲಿಕ ನಿರ್ಗಮನ; ರಂಗಕರ್ಮಿಗೆ ಅಂತಿಮ ನಮನ





 

ಯಾರಾದರೂ ಸಾಧಕರು ಸತ್ತರೆ ತುಂಬಲಾಗದ ನಷ್ಟ, ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಅನಾಥವಾಯಿತು, ಶೂನ್ಯವೊಂದು ಆವರಿಸಿತು ಎಂಬೆಲ್ಲಾ ಅತಿಶಯೋಕ್ತಿಯ ಮಾತುಗಳನ್ನು ಹೇಳುವುದು ಹಾಗೂ ಬರೆಯುವುದನ್ನು ಗಮನಿಸಬಹುದು. ಸಾಧಕ ವ್ಯಕ್ತಿ ತೀರಿಕೊಂಡಾಗ ಅನುಕಂಪದಿಂದ ಈ ರೀತಿಯ ಹೇಳಿಕೆಗಳು ಬರುವುದು ಸಾಮಾನ್ಯ. ಒಬ್ಬ ವ್ಯಕ್ತಿ ತನ್ನ ಇತಿಮಿತಿಯಲ್ಲಿ ಸಾಧನೆ ಮಾಡಿ ಮಡಿದಾಗ ಅವರ ಸಾಮಾಜಿಕ ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕಾದದ್ದು ಬದುಕಿದವರ ಕರ್ತವ್ಯ. ಆದರೆ.. ವಯಸ್ಸಾಗಿಯೋ ಅಥವಾ ಅನಾರೋಗ್ಯದಿಂದಲೋ ಇಲ್ಲವೇ ನಿರಾಸಕ್ತಿಯಿಂದಲೋ ಒಬ್ಬ ವ್ಯಕ್ತಿಯ ಕ್ರಿಯಾಶೀಲತೆ ನಿಂತು ಹೋದ ನಂತರ ಮರಣಹೊಂದಿದಾಗ ತುಂಬಲಾರದ ನಷ್ಟವಾಯಿತು, ಶೂನ್ಯ ಸೃಷ್ಟಿಯಾಯಿತು ಎಂದರೆ ಅದು ಸತ್ಯಕ್ಕೆ ದೂರದ ಮಾತು. ಯಾಕೆಂದರೆ ಅವರ ಕೊಡುಗೆ ಈಗಾಗಲೇ ಸಮಾಜಕ್ಕೆ ಸಂದಾಗಿದೆ. ಇನ್ನು ಯಾವುದೇ ರೀತಿಯ ಸಾಧನೆ ಅವರಿಂದ ಸಾಧ್ಯವೇ ಇಲ್ಲವಾಗಿರುತ್ತದೆ, ಆಗ ಅವರ ಕೆಲಸಗಳನ್ನು ಸ್ಮರಿಸಿಕೊಳ್ಳುವ ಕೆಲಸ ಆಗಬೇಕೆ ಹೊರತು ಅತಿರೇಕದ ಅವಾಸ್ತವಿಕ ಶೂನ್ಯಗಳನ್ನು ಸೃಷ್ಟಿಸುವುದು ಸಮಂಜಸವಲ್ಲಾ. ಆದರೆ.. ರಂಗಾಯಣದ ಕಲಾವಿದ ಮಂಜುನಾಥ ಬೆಳಗೆರೆಯಂತವರಿಗೆ ಈ ಮಾತು ಅನ್ವಯಿಸುವುದಿಲ್ಲ.

ಯಾಕೆಂದರೆ ಅವರಲ್ಲಿ ಇನ್ನೂ ಪುಟಿಯುತ್ತಿದ್ದ ಕ್ರಿಯಾಶೀಲತೆ ಇತ್ತು, ಪ್ರತಿ ದಿನ ಏನಾದರೂ ಮಾಡಬೇಕೆಂಬ ತುಡಿತವಿತ್ತು, ಪ್ರತಿಕ್ಷಣ ಯಾವುದೋ ನಾಟಕದ ಬಗ್ಗೆಯೋ, ರಂಗತರಬೇತಿಯ ಕುರಿತೋ ಇಲ್ಲವೇ ತಾವು ನಟಿಸುವ ಪಾತ್ರದ ಕುರಿತೋ ಯೋಚಿಸುತ್ತಲೇ ತೊಡಗಿಕೊಳ್ಳುವ ದಾವಂತ ಇರುತ್ತಿತ್ತು. ಅವರಿಗೆ ಇನ್ನೂ ಕೇವಲ ಐವತ್ತೆರಡು ವರ್ಷ ವಯಸ್ಸಷ್ಟೇ. ಇನ್ನೂ ಸಾಧಿಸಬೇಕಾದದ್ದು ಬೇಕಾದಷ್ಟಿತ್ತು. ಅಯಸ್ಸು ಗಟ್ಟಿಯಾಗಿದ್ದರೆ ನಟಿಸಲು ಬೇಕಾದಷ್ಟು ನಾಟಕಗಳಿದ್ದವು, ನಾಟಕವಾಗಿ ಬರೆಯಲು ಬೇಕಾದಷ್ಟು ವಿಷಯಗಳಿದ್ದವು, ತರಬೇತಿಗೊಳಿಸಲು ನೂರಾರು ಯುವಕ ಯುವತಿಯರಿದ್ದರು. ಆದರೇನು ಮಾಡೋದು ಅವರ ಆಯಸ್ಸು ಅರ್ಧ ದಾರಿಯ ಪಯಣದಲ್ಲೇ ಮುಗಿದೇ ಹೋಯಿತು. ಬೆಳಕೆರೆಯವರಿಂದ ಇನ್ನೂ ರಂಗಭೂಮಿಗೆ ಸಲ್ಲಬಹುದಾದ ಕೊಡುಗೆ ಇನ್ನಿಲ್ಲದಾಯಿತು. ಅಷ್ಟರ ಮಟ್ಟಿಗೆ ಮಂಜುನಾಥರವರ ಅಗಲಿಕೆಯಿಂದಾಗಿ ರಂಗಭೂಮಿಗೆ ನಷ್ಟವಾಯಿತು. ಬಹುಪ್ರತಿಭೆಯ ಕಲಾವಿದನ ನಿರ್ಗಮನ ಒಂದಿಷ್ಟಾದರೂ ಶೂನ್ಯವನ್ನು ಸೃಷ್ಟಿಸಿತು.   ಕಾಲನಿಗೆ ಕರುಣೆ ಎಂಬುದಿಲ್ಲ. ಫಲ ಕೊಡುವ ಮರವನ್ನೇ ಉರುಳಿಸಿಬಿಟ್ಟ. ಮಂಜುನಾಥ ಬೆಳಕೆರೆ ಎನ್ನುವ ರಂಗಮಿತ್ರ ಇನ್ನಿಲ್ಲ ಎನ್ನುವ ಸುದ್ದಿಯೇ ಅವರನ್ನು ಬಲ್ಲ ಅನೇಕರಿಗೆ ತಳಮಳವನ್ನು ಹುಟ್ಟಿಸಿದ್ದಂತೂ ದಿಟ.


ಡಿಸೆಂಬರ್ 18ರ ರಾತ್ರಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ಭಾರತದ ವಿವಿಧ ಯುನಿವರ್ಸಿಟಿಗಳ ಕಾಲೇಜುಗಳ ನಾಟಕ ಸ್ಪರ್ಧೆಯ ತೀರ್ಪುಗಾರನಾಗಿ ಹೋಗಿದ್ದ ನಾನು ಬೆಳಿಗ್ಗೆಯಿಂದಾ ಹದಿನಾಲ್ಕು ನಾಟಕಗಳನ್ನು ನೋಡಿ ನನ್ನ ತೀರ್ಪು ಬರೆದುಕೊಟ್ಟು ಮನೆಗೆ ಬಂದು ಉಸ್ಸಪ್ಪಾ ಅಂತಾ ಕೂತಿದ್ದೆ. ಆಗ ನನಗೆ ಪೋನ್ ಮಾಡಿದ ರಂಗ ಗೆಳೆಯ ಮಂಜುನಾಥ ಬೆಳಕೆರೆ ರಂಗಾಯಣದ ಬಹುರೂಪಿ ರಂಗೋತ್ಸವಕ್ಕೆ ಈ ಸಲ ತಪ್ಪದೇ ಬರಲೇಬೇಕು, ಬಂದು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಲೇಖನ ಬರೆಯಲೇಬೇಕುಎಂದು ಆಗ್ರಹಿಸಿದ. ರಂಗಾಯಣಕ್ಕೆ ಚಂದ್ರಲೇಖೆ ಎನ್ನುವ ಹೊಸ ನಾಟಕವೊಂದನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹರ್ಷದಿಂದ ತಿಳಿಸಿದ. ಆ ನಾಟಕದ ತಾಲಿಂ ಆರಂಭವಾಗಿದ್ದು ಅದನ್ನು ಮುಗಿಸಿಕೊಂಡ ಬರಲು ಇಷ್ಟು ತಡವಾಯಿತೆಂದೂ ಹೇಳಿದ. ನಾನು ಬರೆದ ಬಾದರದಿನ್ನಿಯವರ ಲೇಖನದ ಕುರಿತು ಮಾತಾಡಿದ. ಅವರ ಮಾತುಗಳಲ್ಲಿ ಅದೇನೋ ಅವಸರ ಇದ್ದಂತಿತ್ತು. ದ್ವನಿ ಸಣ್ಣಗೆ ನಡುಗುತ್ತಿರುವಂತೆ ಭಾಸವಾಯಿತು. ಯಾಕೆಂದು ಕೇಳಿದೆ. ಇಲ್ಲಾ ಒಂಚೂರು ಸುಸ್ತೆಂದು ಸಬೂಬು ಹೇಳಿದ. ಆರೋಗ್ಯದ ಬಗ್ಗೆ ಗಮನಕೊಡು ಮಾರಾಯಾ.. ಈ ನಾಟಕ ಮಾಡೋದು ಮಾಡಿಸೋದೆಲ್ಲಾ ಜೀವನ ಪೂರ್ತಿ ಇರೋದೆ ಎಂದು ಆತಂಕದಿಂದಲೇ ಹೇಳಿದೆ.. ಆದರೆ.. ಮರುದಿನ ಡಿಸೆಂಬರ್ ೧೯ರಂದು ಬೆಳಿಗ್ಗೆ ಹತ್ತು ಗಂಟೆಗೆ ನಾನು ಊಹಿಸದ ಸುದ್ದಿಯೊಂದು ಮೈಸೂರಿನಿಂದ ಬಂತು. ಬೆಳಕೆರೆಯವರಿಗೆ ಹೃದಯಾಘಾತವಾಗಿ ತೀರಿಕೊಂಡರೆಂದು ರಂಗಾಯಣದ ರಂಗಶಿಕ್ಷಣ ಕೇಂದ್ರದಲ್ಲಿರುವ ನನ್ನ ಶಿಷ್ಯನೊಬ್ಬ ಪೋನಾಯಿಸಿದ. ಬೇರೆ ಗೆಳೆಯರಿಗೆ ಪೋನ್ ಮಾಡಿ ಸುದ್ದಿಯ ಬಗ್ಗೆ ತಿಳಿದುಕೊಳ್ಳೋಣ ಎನ್ನುವಷ್ಟರಲ್ಲೇ ಬೆಳಕೆರೆ ಎನ್ನುವ ಹೃದಯವಂತ ರಂಗಜೀವಿಯ ಹೃದಯಬಡಿತ ನಿಂತ ಸುದ್ದಿಯೇ ಎಲ್ಲಾ ಕಡೆಯಿಂದ ಹರಿದು ಬಂತು. ನಿನ್ನೆ ಇದ್ದವ ಇಂದಿಲ್ಲಾ ಎಂದು ನಂಬುವುದೇ ಅಸಾಧ್ಯವೆನಿಸಿತ್ತು. ಆದರೂ ಹೇಗಾದರೂ ಇದೊಂದು ಸುದ್ದಿ ಸುಳ್ಳಾಗಬಹುದೆಂಬ ನಿರೀಕ್ಷೆಯೂ ಸುಳ್ಳಾಯಿತು. ಕ್ರಿಯಾಶೀಲ ಜೀವವೊಂದು ಅಕಾಲಿಕವಾಗಿ ಕಾಲನ ವಶವಾಯಿತು.

ಬದುಕು ಅಂದರೆ ಇಷ್ಟೇನಾ? ಆಗಿದ್ದು ಈಗಿಲ್ಲ ಎನ್ನುವುದು ಬದುಕಿನ ಅನಿಶ್ಚಿತತೆಯ ಸಂಕೇತಾನಾ? ಅಥವಾ ಕೆಲಸದ ಒತ್ತಡದ ದಾವಂತದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದ್ದಕ್ಕೆ  ದೇಹ ವ್ಯಕ್ತಿಗೆ ಕೊಡುವ ಅಂತಿಮ ಶಿಕ್ಷೇನಾ? ನಿಜಕ್ಕೂ ಕ್ರಿಯಾಶೀಲ ವ್ಯಕ್ತಿಗಳ ಅಕಾಲಿಕ ನಿರ್ಗಮನವಾದಾಗಲೆಲ್ಲಾ ಈ ಪ್ರಶ್ನೆಗಳು ಕಾಡತೊಡಗುತ್ತವೆ. ಇನ್ನೂ ಬದುಕಿ ಬಾಳಿ ಅನೇಕ ಜನರಿಗೆ ನೆರಳಾಗುವ ಹೆಮ್ಮರ ಧರಶಾಹಿಯಾದಾಗ ಬೇಸರ ಮಡುಗಟ್ಟುತ್ತದೆ. ಬೆಳಕೆರೆಯಂತಹ ರಂಗಕರ್ಮಿಗಳು ಸಾಧನೆಯ ಹಾದಿಯ ನಡುವೆ ಕೆಲಸ ಬಿಟ್ಟೆದ್ದು ಹೋದಾಗ ನಿರಾಸೆ ಮನಸನ್ನು ಹಿಂಡುತ್ತದೆ. ಆದರೂ ಸಾವೆಂಬುದ ತಡೆಯುವುದು ಯಾರ ಕೈಯಲ್ಲೂ ಇಲ್ಲವಲ್ಲಾ.. ಅಗಲಿದ ರಂಗಮಿತ್ರನಿಗೆ ಅಂತಿಮ ನಮನ ಸಲ್ಲಿಸಿ ಅವರು ಕಲಾಲೋಕಕ್ಕೆ ಕೊಟ್ಟ ಕೊಡುಗೆಯನ್ನು ನೆನಪಿಸಿಕೊಳ್ಳುವುದೊಂದೇ ಬದುಕಿರುವ ನಮಗಿರುವ ಏಕೈಕ ಮಾರ್ಗ ಹಾಗೂ ಕರ್ತವ್ಯವಾಗಿದೆ.


ಮೂರು ತಿಂಗಳ ಹಿಂದೆ ಮೂರು ದಿನಗಳ ಕಾಲ ಕುಪ್ಪಳ್ಳಿಯಲ್ಲಿ ನಾಟಕ ರಚನಾ ಕಮ್ಮಟದಲ್ಲಿ ಬೆಳಕೆರೆ ಭಾಗವಹಿಸಿದ್ದರು. ಅವರೊಂದಿಗೆ ನಾನು ಕಳೆದ ಆ ಮೂರು ದಿನಗಳು ಹಾಗೂ ಅವರೊಂದಿಗೆ ಆಗ ನಡೆದ ರಂಗಭೂಮಿ ಕುರಿತ ಚರ್ಚೆಗಳು ಅವಿಸ್ಮರಣೀಯ. ನಾಟಕವೊಂದನ್ನು ಬರೆದುಕೊಂಡು ಬಂದು ಅದರ ಕುರಿತು ಕಮ್ಮಟದಲ್ಲಿ  ಚರ್ಚಿಸಬೇಕಿತ್ತು. ಆದರೆ ಕೆಲಸದ ಒತ್ತಡದಿಂದಾಗಿ ಮಂಜುನಾಥ ಬೆಳಕೆರೆಗೆ ನಾಟಕ ಬರೆದುಕೊಂಡು ಬರಲು ಆಗಲೇ ಇಲ್ಲಾ. ಬೆಳಿಗ್ಗೆಯಲ್ಲಾ ಬೇರೆಯವರ ನಾಟಕಗಳ ಕುರಿತ ಚರ್ಚೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ ಬೆಳಕೆರೆ ರಾತ್ರಿ ಎಲ್ಲಾ ಶಿಭಿರಾರ್ಥಿಗಳು ಊಟ ಮುಗಿಸಿ ಮಲಗಿದ ನಂತರ ನಾಟಕ ಬರೆಯಲು ಕುಳಿತುಕೊಳ್ಳುತ್ತಿದ್ದರು. ಆ ಕಡೆ ರಂಗಾಯಣದ ರಾಮನಾಥರು ಈ ಕಡೆ ಬೆಳಕೆರೆ ಮಂಜುನಾಥರು ತಮ್ಮ ನಾಟಕಗಳ ದೃಶ್ಯಗಳನ್ನು ಬರೆಯುತ್ತಾ ಕೂತರೆಂದರೆ ಜಗದ ಪರಿವನ್ನೇ ಮರೆಯುತ್ತಿದ್ದರು. ರಾತ್ರಿ ಎರಡು ಮೂರು ಗಂಟೆಗಳ ಕಾಲ ಆದಷ್ಟು ತನ್ಮಯತೆಯಿಂದ ದೃಶ್ಯಗಳನ್ನು ಕಟ್ಟಿ ಬೆಳಿಗ್ಗೆ ಮತ್ತೆ ಎಲ್ಲರ ಜೊತೆಗೆ ಚರ್ಚೆಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದ ಮಂಜುನಾಥರ ರಂಗಬದ್ದತೆಗೆ ಉಘೇ ಹೇಳಲೇಬೇಕು.

ಹೀಗೆ ಕಮ್ಮಟದಲ್ಲಿ ಬರೆದ ರಥಯಾತ್ರೆ ನಾಟಕದ ದೃಶ್ಯಗಳನ್ನು ಬೆಳಿಗ್ಗೆ ಕೂತು ನನಗೆ ವಿವರಿಸುತ್ತಾ.. ತಿಳಿಸಿದ ಬದಲಾವಣೆಗಳನ್ನು ಅರಿತು ಮತ್ತೆ ತಮ್ಮ ಸ್ಕ್ರಿಪ್ಟನ್ನು ತಿದ್ದುತ್ತಾ ಮೂರನೆಯ ದಿನದ ಹೊತ್ತಿಗೆ ಕೋಮುಸಂಘರ್ಷದಲ್ಲಿ ದಮನಕ್ಕೊಳಗಾದ ಹೆಣ್ಣಿನ ಕುರಿತ ಒಂದು ಒಳ್ಳೆಯ ನಾಟಕದ ರೀಡಿಂಗ್ ಕೊಟ್ಟೇ ಬಿಟ್ಟರು. ಅವರ ದೃಶ್ಯಗಳನ್ನು ಕಟ್ಟುವ ಶಕ್ತಿ ಸಶಕ್ತವಾಗಿತ್ತು. ಅವರು ಮೊದಲು ನಾಟಕದ ಕಥಾಸಾರಾಂಶ ಹೇಳಿದಾಗ ಇದನ್ನು ಹೇಗಪ್ಪಾ ನಾಟಕ ಮಾಡ್ತಾರೆ ಎನ್ನುವ ಆತಂಕ ನನ್ನನ್ನು ಕಾಡಿದ್ದಂತೂ ಸತ್ಯ. ಆದರೆ ಅದು ದೃಶ್ಯರೂಪದಲ್ಲಿ ರಂಗಪಠ್ಯವಾದಾಗ ಕೊಟ್ಟ ಹೊಳಹುಗಳೇ ಅನನ್ಯವಾಗಿದ್ದವು. ಮಹಿಳೆಯ ಮೇಲೆ ಪುರುಷರ ನೇರ ಕ್ರೌರ್ಯವನ್ನು ಎಲ್ಲಿಯೂ ಹೇಳದ ಈ ರಥಯಾತ್ರೆ ನಾಟಕ ಭಾವನಾತ್ಮಕವಾಗಿಯೇ ಮಹಿಳೆ ಅನುಭವಿಸುವ ಮಾನಸಿಕ ಹಿಂಸೆಯನ್ನು ತಣ್ಣಗೆ ಹೇಳುತ್ತಾ ಹೋಗುತ್ತದೆ. ಪುರುಷರ ಅತಿರೇಕದ ಸಿದ್ದಾಂತಗಳು ಅದು ಹೇಗೆ ಮನೆಯೊಳಗಿರುವ ಮಹಿಳೆಯನ್ನು ಬಾಧಿಸುತ್ತವೆ ಎನ್ನುವುದರ ಮೇಲೆ ಈ ನಾಟಕ ಬೆಳಕು ಚೆಲ್ಲುತ್ತದೆ. ಈಗ ಈ ರಥಯಾತ್ರೆ ನಾಟಕವು ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ ತಂಡದಿಂದ ರಂಗವೇದಿಕೆಯ ಮೇಲೆ ಪ್ರದರ್ಶನಕ್ಕೆ ಸಿದ್ದವಾಗಿದೆ. ಆದರೆ ತಮ್ಮದೇ ನಾಟಕವನ್ನು ನೋಡುವ ಭಾಗ್ಯ ಬೆಳಕೆರೆಗೆ ಇಲ್ಲದೇ ಹೋಯಿತು. ಈ ನಾಟಕದ ಟೆಕ್ನಿಕಲ್ ಶೋ ಆದಾಗ ಕೆಲಸದ ಒತ್ತಡದಿಂದ ಬರಲಿಲ್ಲ. ಆ ನಾಟಕಕ್ಕೆ ಒಂದೆರಡು ಹಾಡು ಬರೆದು ಕೊಡುವುದು ಬಾಕಿ ಇತ್ತು. ಅದನ್ನೂ ಮಾಡಲಿಲ್ಲ. ಮಹತ್ವಾಂಕಾಂಕ್ಷೆಯಿಂದ ಬರೆದ ನಾಟಕದ ಪ್ರದರ್ಶನವನ್ನು ನೋಡುವ ಮೊದಲೇ ನಾಟಕಕಾರ ನಿರ್ಗಮಿಸಿಯಾಗಿತ್ತು. ಇತ್ತ ಬೆಳಕೆರೆ ಬರೆದ ಕೊಟ್ಟ ಕೊನೆಯ ನಾಟಕ ರಥಯಾತ್ರೆ ರಂಗಭೂಮಿಗೆ ದಕ್ಕಿತು. ಅತ್ತ ಮೈಸೂರಲ್ಲಿ ಬೆಳಕೆರೆಯ ಅಂತಿಮಯಾತ್ರೆಯೂ ಮುಗಿದಿತ್ತು.


ಬೆಳಕೆರೆಯವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ. ಎಪ್ಪತ್ತರ ದಶಕದಲ್ಲಿ ರಂಗಭೂಮಿಯತ್ತ ಆಕರ್ಷಿತರಾದ ಬೆಳಗೆರೆ ರಂಗಶಿಕ್ಷಣ ಕಲಿಯುವ ಅದಮ್ಯ ಆಸೆಯಿಂದ ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರಕ್ಕೆ ಸೇರಿದರು. ಒಂದು ವರ್ಷದ ಶಿಕ್ಷಣ ಪಡೆದು ಕೆಲವಾರು ನಾಟಕಗಳಲ್ಲಿ ನಟಿಸಿ ಗಮನಸೆಳೆದರು. ನೀನಾಸಮ್‌ನಲ್ಲಿದ್ದಾಗಲೇ ತಮ್ಮ ಅಭಿನಯದ ಮೂಲಕ ರಂಗದಿಗ್ಗಜ ಬಿವಿ ಕಾರಂತರ ಗಮನ ಸೆಳೆದರು. ೧೯೮೯ರಲ್ಲಿ ಮೈಸೂರಿನಲ್ಲಿ ರಂಗಾಯಣವನ್ನು ರಂಗಕರ್ಮಿಗಳ ಒತ್ತಾಯದ ಮೇರೆಗೆ ಸರಕಾರ ಆರಂಭಿಸಿದಾಗ ಅದರ ಮೊದಲ ನಿರ್ದೇಶಕರಾದ ಕಾರಂತರು ರಂಗಾಯಣಕ್ಕೆ ಕಲಾವಿದರನ್ನು ಆಯ್ಕೆ ಮಾಡಿಕೊಂಡಾಗ ಅದರಲ್ಲಿ ಮಂಜುನಾಥವರ ಹೆಸರೂ ಮುಂಚೂಣಿಯಲ್ಲಿತ್ತು. ಅವತ್ತಿನಿಂದ ಕೊನೆಯ ಉಸಿರಿರುವವರೆಗೂ ಅಂದರೆ ಇಪ್ಪತ್ತೇಳು ವರ್ಷಗಳಿಂದ ಸತತವಾಗಿ ರಂಗಾಯಣದ ಕಲಾವಿದರಾಗಿ ಸೇವೆ ಸಲ್ಲಿಸಿದ ಬೆಳಕೆರೆ ರಂಗಾಯಣದ ಬಹುತೇಕ ನಾಟಕಗಳಲ್ಲಿ ನಟಿಸಿದ್ದಾರೆ. ಪ್ರಸನ್ನರವರ ನಿರ್ದೇಶನದಲ್ಲಿ ಮೂಡಿಬಂದ ಪುಗಳೇಂದಿ ನಾಟಕದ ಪುಗಳೇಂದಿ ಪಾತ್ರವನ್ನು ಬೆಳಕೆರೆ ಅಭಿನಯಿದ್ದ ರೀತಿ ಆ ನಾಟಕ ನೋಡಿದವರ ಮನಸ್ಸಲ್ಲಿ ಇವತ್ತಿಗೂ ಅಚ್ಚಳಿಯದೇ ಉಳಿಯುವಂತಿದೆ. ತಮ್ಮ ವಿಶಿಷ್ಟವಾದ ಮಾನರಿಸಂ ಮತ್ತು ವಿಕ್ಷಿಪ್ತ ದ್ವನಿಯಿಂದಾಗಿ ಯಾವುದೇ ಪಾತ್ರಕ್ಕೆ ಜೀವತುಂಬುತ್ತಿದ್ದ ಮಂಜುನಾಥ ಬೆಳಕೆರೆ ನೋಡುಗರ ಮನಸ್ಸು ಸೆಳೆಯುತ್ತಿದ್ದರು. ತಮಗೆ ಕೊಟ್ಟ ಪಾತ್ರ ಅದೆಷ್ಟೇ ಪುಟ್ಟದಾಗಿದ್ದರೂ ಸಿಕ್ಕ ಅವಕಾಶದಲ್ಲೇ ಮಿಂಚಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಬೆಳಕೆರೆ ಸಿದ್ದಹಸ್ತರಾಗಿದ್ದರು. ಅವರು ಬರೆದ ನನ್ನೊಲು ನೀ ನಿನ್ನೊಳು ನಾ’ ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆರ್ಯಭಟ ಹಾಗೂ ಗ್ರಾಮ ರಂಗ ಪ್ರಶಸ್ತಿಗಳು ಲಭಿಸಿವೆ. ಜೀವಮಾನ ಸಾಧನೆಗೆ ನಾಟಕ ಅಕಾಡೆಮಿ ಪ್ರಶಸ್ತಿ ಕೊಟ್ಟು ಗೌರವಿಸಿದೆ. ರಾಷ್ಟ್ರೀಯ ಮಾನವ ಸಂಪನ್ಮೂಲ ಇಲಾಖೆಯ ಜ್ಯೂನಿಯರ್ ಫೆಲೋಶಿಪ್ ಕೂಡಾ ಲಭಿಸಿತ್ತು. ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಿಕ್ಕುವುದು ಬಾಕಿ ಇತ್ತು.. ಅಷ್ಟರಲ್ಲಿ….


ಬೆಳಕೆರೆಯವರ ದ್ವನಿ ಎಲ್ಲರಂತಿರದೇ ಒಂಚೂರು ಕೀರಲಾಗಿತ್ತು. ಗಂಡು ಮತ್ತು ಹೆಣ್ಣು ದ್ವನಿಗಳ ಮಿಶ್ರಣದಂತಿತ್ತು. ಭಾಷಾ ಪ್ರಯೋಗದಲ್ಲೂ ನ್ಯೂನ್ಯತೆಯಿತ್ತು. ಅದನ್ನು ಕುರಿತು ಕೆಲವರು ಅಪಹಾಸ್ಯ ಮಾಡಿದ್ದೂ ಇದೆ. ಆದರೆ ತಮಗಿರುವ ಕೊರತೆಯನ್ನೇ ಶಕ್ತಿಯನ್ನಾಗಿಸಿಕೊಂಡು ಪಾತ್ರಕ್ಕೆ ಜೀವತುಂಬುತ್ತಿದ್ದರು. ಈ ದ್ವನಿಯ ಸಮಸ್ಯೆಯಿಂದಾಗಿ ರಂಗಾಯಣದ ಬಹುತೇಕ ನಾಟಕಗಳಲ್ಲಿ ಹಾಸ್ಯ ಪಾತ್ರಗಳೇ ಸಿಕ್ಕುತ್ತಿದ್ದವು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಬೆಳಕೆರೆ ಸದಾ ಪ್ರಯತ್ನಿಸುತ್ತಿದ್ದರು. ಆದರೂ ಒಳಗೊಳಗೆ ತಮ್ಮ ದ್ವನಿಯ ಕುರಿತು ಹಾಗೂ ಸಿಗುವ ಪಾತ್ರಗಳ ಕುರಿತು ಹಾಗೂ ಜನರಾಡಿಕೊಳ್ಳುವುದರ ಕುರಿತು ಬೇಸರ ಇದ್ದೇ ಇತ್ತು. ಆಗ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ನಟನೆಯ ಜೊತೆಜೊತೆಗೆ ಸಾಹಿತ್ಯದತ್ತ ತೊಡಗಿಸಿಕೊಂಡು ಬರವಣಿಗೆಯನ್ನು ಹಠಕ್ಕೆ ಬಿದ್ದು ರೂಢಿಸಿಕೊಂಡರು. ಮೊದಲು ಕವಿತೆಗಳಿಂದ ಆರಂಭವಾದ ಸಾಹಿತ್ಯ ಕೃಷಿ ನಂತರ ಕೆಲವಾರು ಪತ್ರಿಕೆಗಳಿಗೆ ಬಿಡಿ ಲೇಖನಗಳನ್ನು ಬರೆಯುವಷ್ಟು ತೀವ್ರಗೊಂಡಿತು. ಆ ನಂತರ ನಾಟಕಗಳನ್ನು ಬರೆಯಲು ಆರಂಭಿಸಿದರು.  ಇದಿ ಮುಂಡೆ ಮಗಳು, ಶರೀಫ, ನನ್ನೊಳು ನೀ ನಿನ್ನೊಳು ನಾ, ರಾಜಾಶ್ರಯ, ಕುಂಕುಮ, ಕುಹೂ ಕುಹೂ ಕೋಗಿಲೆ.. ಹೀಗೆ ಹದಿನೆಂಟಕ್ಕೂ ಹೆಚ್ಚು ನಾಟಕಗಳನ್ನು ಬರೆದು ನಾಟಕದ ಕೊರತೆಯನ್ನು ಅನುಭವಿಸುತ್ತಿದ್ದ ರಂಗಭೂಮಿಗೆ ರಂಗಪಠ್ಯಗಳ ಕೊಡುಗೆಯನ್ನು ಕೊಟ್ಟರು. 1997ರಲ್ಲಿ ಶರೀಪ್ ನಾಟಕ ಬರೆದು ಸಾಣೆಹಳ್ಳಿಯ ಶಿವಕುಮಾರ ಕಲಾಸಂಘಕ್ಕೆ ನಿರ್ದೆಶಿಸಿದ್ದರು.  ಆ ನಾಟಕವನ್ನು 2002 ರಲ್ಲಿ ಸಿಜಿಕೆಯವರು ಸಾಣೇಹಳ್ಳಿಯ ಶಿವಸಂಚಾರಕ್ಕೆ ಸೋರುತಿಹುದು ಮನೆಯ ಮಾಳಿಗೆ ಹೆಸರಲ್ಲಿ ನಿರ್ದೇಶಿಸಿದ್ದರು. ಆ ನಂತರ ಇಪ್ಟಾ ಸೇರಿದಂತೆ ಹಲವಾರು ತಂಡಗಳು ಈ ಶರೀಫ್ ನಾಟಕವನ್ನು ಆಡಿಸಿದ್ದಾರೆ.  ಪರಸ್ಪರ ಎನ್ನುವ ರಂಗತಂಡವನ್ನೂ ಹುಟ್ಟು ಹಾಕಿ ಕೆಲವು ನಾಟಕಗಳನ್ನು ನಿರ್ದೇಶಿಸಿದ್ದರು. ರಂಗಾಯಣದ ರಜಾ ಕಾಲದಲ್ಲಿ ಹೊರಗಿನ ಬೇರೆ ತಂಡಗಳಿಗೂ ನಾಟಕಗಳನ್ನು ನಿರ್ದೇಶಿಸಿ ರಜಾಕಾಲವನ್ನೂ ಸಹ ರಂಗಕ್ರಿಯೆಗೆ ಮುಡುಪಾಗಿಡುವ ಬದ್ದತೆಯನ್ನು ಹೊಂದಿದ್ದರು. ರಂಗಾಯಣದ ವತಿಯಿಂದ ದೆಹಲಿಗೂ ಹೋಗಿ ಕನ್ನಡ ಸಂಘಕ್ಕೆ ಸೇವಂತಿ ಪ್ರಸಂಗ ನಾಟಕವನ್ನು ನಿರ್ದೇಶಿಸಿ ಬಂದಿದ್ದರು.


ರಂಗಾಯಣದ ಚೌಕಟ್ಟಿನ ಆಚೆಯೂ ಗುರುತಿಸಿಕೊಳ್ಳುವ ಮಹತ್ವಾಂಕಾಂಕ್ಷೆ ಬೆಳಕೆರೆಯವರಿಗಿತ್ತು. ನಾಗಾಭರಣರವರ ಕೆಲವು ಸಿನೆಮಾ ಹಾಗೂ ಸೀರಿಯಲ್‌ಗಳಿಗೆ ಸ್ಕ್ರಿಪ್ಟ್ ಹಾಗೂ ಸಂಭಾಷಣೆಗಳನ್ನು ಬರೆದರು. ನಾಲ್ಕಾರು ಸಿನೆಮಾಗಳಲ್ಲೂ ಸಹ ನಟಿಸಿದರಾದರೂ ಅದ್ಯಾಕೋ ರಂಗಭೂಮಿ ಅವರನ್ನು ಸಿನೆಮಾಕ್ಷೇತ್ರಕ್ಕೆ ಬಿಟ್ಟುಕೊಡಲಿಲ್ಲ. ಕೆಲವು ನಾಟಕಗಳನ್ನು ನಿರ್ದೇಶಿಸಿದ ಬೆಳಕೆರೆಯವರಿಗೆ ಜಾನಪದದತ್ತ ಅದೆಂತದೋ ಒಲವು. ಹೆಚ್ಚೆಚ್ಚು ಓದುವುದು ಹಾಗೂ ಅದನ್ನು ಕುರಿತು ಬರೆಯುವುದು ಅವರ ಬದುಕಿನ ಭಾಗವೇ ಆಗಿತ್ತು. ಕೆಳವರ್ಗದಿಂದ ಬಂದು ತನ್ನ ಪ್ರತಿಭೆ ಹಾಗೂ ಸಾಧಿಸುವ ಛಲದಿಂದಾಗಿ ಅಸ್ಮಿತೆಯನ್ನು ಕಂಡುಕೊಂಡ ಬೆಳಕೆರೆಯವರಿಗೆ ಹಠಕ್ಕೆ ಬಿದ್ದು ಏನನ್ನಾದರೂ ಸಾಧಿಸುವ ಛಲ ರೂಢಿಯಾಗಿತ್ತು. ತಾನು ಅಂದುಕೊಂಡಿದ್ದೇ ಆಗಬೇಕು ಎನ್ನುವ ತುಡಿತವೂ ಅವರಲ್ಲಿ ಹಠಮಾರಿತನವನ್ನು ಬೆಳೆಸಿತ್ತು. ಆ ಹಠಮಾರಿ ಜಿದ್ದಿನ ವ್ಯಕ್ತಿತ್ವ ಬೆಳಕೆರೆಯ ಶಕ್ತಿಯೂ ಹಾಗೂ ದೌರ್ಬಲ್ಯವೂ ಆಗಿತ್ತು.  ಹಲವಾರು ಸಲ ರಂಗಾಯಣದ ಕಲಾವಿದರೆಲ್ಲಾ ಒಂದು ಕಡೆಯಾದರೆ ತಾವೊಬ್ಬರೇ ಇನ್ನೊಂದು ಕಡೆ ಇದ್ದು ತಮ್ಮ ನಿಲುವಿಗೆ ಅಂಟಿಕೊಂಡಿದ್ದಿದೆ. ರಂಗಾಯಣದಲ್ಲಿ ಆಡಳಿತ ವರ್ಗ ಹಾಗೂ ಕಲಾವಿದರುಗಳ ನಡುವೆ ಸಂಘರ್ಷಗಳಾದಾಗ ಆಳುವ ವ್ಯವಸ್ಥೆಯ ಜೊತೆಗೆ ಇದ್ದದ್ದು ಕೆಲವರಲ್ಲಿ ಆತಂಕ ಹುಟ್ಟಿಸಿದರೂ ಯಾವುದೇ ಕಾರಣಕ್ಕೂ ರಂಗಾಯಣ ಮುಚ್ಚಬಾರದು.. ಆಡಳಿತ ವ್ಯವಸ್ಥೆಯ ವಿರುದ್ಧ ಹೋದರೆ ರಂಗಾಯಣಕ್ಕೆ ಉಳಿಗಾಲವಿಲ್ಲ ಎಂಬುದು ಬೆಳಕೆರೆಯವರ ಅಚಲ ನಿಲುವಾಗಿತ್ತು. ಸಹಕಲಾವಿದರ ವಿರೋಧವನ್ನು ಕಟ್ಟಿಕೊಂಡು ರಂಗಾಯಣದ ಅಸ್ತಿತ್ವ ಉಳಿಸಿಕೊಳ್ಳಲು ಹಲವಾರು ಸಲ ಪ್ರಯತ್ನಿಸಿದ್ದಿದೆ. ಕೆಲವರು ಅವಕಾಶವಾದಿ ಎಂದು ಜರಿದರೂ ಲೆಕ್ಕಿಸದೇ ರಂಗಾಯಣ ಉಳಿಯಬೇಕು ಎನ್ನುವತ್ತಲೇ ತಮ್ಮ ಪ್ರಯತ್ನವನ್ನು ಬೆಳಕೆರೆ ಮಾಡಿದ್ದಿದೆ. ಅವರ ನಿರ್ಧಾರಗಳ ಹಿಂದೆ ಮಹತ್ವಾಕಾಂಕ್ಷೆಯೊಂದು ಯಾವಾಗಲೂ ಕೆಲಸ ಮಾಡುತ್ತಲೇ ಇರುವುದನ್ನು ಗಮನಿಸಬಹುದಾಗಿದೆ. ಆ ಮಹತ್ವಾಕಾಂಕ್ಷೆಗಾಗಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದೂ ಅವರ ಅಕಾಲಿಕ ನಿರ್ಗಮನಕ್ಕೆ ಒಂದು ಕಾರಣವೂ ಆಗಿದೆ.


ಏಕಕಾಲಕ್ಕೆ ಹಲವು ಕೆಲಸಗಳನ್ನು ಹಠಕ್ಕೆ ಬಿದ್ದು ಮಾಡುತ್ತಿದ್ದ ಬೆಳಕೆರೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಮಯವೇ ಇರಲಿಲ್ಲ. ಅನಿಯಮಿತ ಕೆಲಸ, ಅಕಾಲಿಕ ಊಟೋಪಚಾರ ಜೊತೆಗೆ ಸದಾ ಒತ್ತಡಗಳಲ್ಲಿ ಇರುತ್ತಿದ್ದ ಮಂಜುನಾಥ ಆರೋಗ್ಯವನ್ನು ತೀರಾ ನಿರ್ಲಕ್ಷಿಸಿದ್ದರು. ನಲವತ್ತಕ್ಕೆಲ್ಲಾ ಬಿಪಿ ಶುಗರ್‌ಗಳನ್ನು ಖಾಯಂ ಅತಿಥಿಗಳನ್ನಾಗಿ ಆಹ್ವಾನಿಸಿಕೊಂಡಿದ್ದರು. ಅಲೋಪತಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೂ ಅದರಲ್ಲೂ ಒಂದು ಶಿಸ್ತಿರಲಿಲ್ಲ. ಕೊನೆಗೆ ಆ ಔಷಧಗಳಿಂದಾಗಿ ಬೇಸತ್ತು ಅವುಗಳ ಸೇವನೆಯನ್ನೇ ಕೈಬಿಟ್ಟು ಇದ್ದಕ್ಕಿದ್ದಂತೆ ಆಯುರ್ವೇದದ ಔಷದೋಪಚಾರಗಳನ್ನು ಶುರುಮಾಡಿಕೊಂಡಿದ್ದರು. ಹೀಗಾಗಿ ಅಲೋಪತಿಗೆ ಒಗ್ಗಿಕೊಂಡಿದ್ದ ದೇಹ ಇದ್ದಕ್ಕಿದಂತೆ ಬದಲಾದ ಆಯುರ‍್ವೇದದ ಔಷಧಿಗಳಿಗೆ ಹೊಂದಿಕೊಳ್ಳಲಾರದೇ ಪರಿತಪಿಸಿತು. ನೋಡುವಷ್ಟು ದಿನ ನೋಡಿ, ತಾಳುವಷ್ಟು ದಿನ ತಾಳಿ.. ತನ್ನ ಶಕ್ತಿ ಮೀರಿ ಮಿಡಿಯುವಷ್ಟು ಕ್ಷಣ ಬಡಿಯುತ್ತಿದ್ದ ಹೃದಯ ಇದ್ದಕ್ಕಿದ್ದಂತೆ ಒಂದು ಮಾತನ್ನೂ ಹೇಳದೇ ಕೊಡದೇ ನಿಂತೇ ಹೋಯಿತು. ಅನುದಿನ ಜೊತೆಯಲಿದ್ದ ಜೀವವೆಂಬೂ ಹಂಸ ಒಂದು ಮಾತು ಹೇಳದೇ ಹಾರಿಹೋಯಿತು. ಇನ್ನೂ ಏನೇನೋ ಸಾಧಿಸಬೇಕೆಂದು ಹಾತೊರೆಯುತ್ತಿದ್ದ ಮಹತ್ವಾಂಕಾಂಕ್ಷೆಯ ಬುದ್ದಿ ಮನಸ್ಸು ಹಾಗೂ ದೇಹಗಳು ಹೃದಯಸ್ಥಂಬನದ ಜೊತೆಗೆ ಸ್ಥಬ್ದವಾದವು. ಯಾರೂ ನಿರೀಕ್ಷಿಸದೇ ಇದ್ದ ಬೆಳಕೆರೆಯ ಸಾವು ರಂಗಕರ್ಮಿಗಳಿಗೆ ಅನಿರೀಕ್ಷಿತವಾದ ಆಘಾತವನ್ನುಂಟು ಮಾಡಿತು. ಬರೆಯುತ್ತಿದ್ದ ನಾಟಕಗಳನ್ನು ಅರ್ಧಕ್ಕೆ ಬಿಟ್ಟು.. ಹೊಸ ನಾಟಕದ ತಾಲಿಮನ್ನು ಎರಡೇ ದಿನಕ್ಕೆ ನಿಲ್ಲಿಸಿ, ಒಪ್ಪಿಕೊಂಡ ಬಹುರೂಪಿ ನಾಟಕೋತ್ಸವದ ಆಯೋಜನೆಯ ಕರ್ತವ್ಯದಿಂದ ವಿಮುಖನಾಗಿ ಶಾಶ್ವತವಾಗಿ ಈ ಲೋಕದಿಂದ ವಿದಾಯ ಹೇಳಿದ ಮಂಜುನಾಥ ಬೆಳೆಕೆರೆ ಎಂಬ ಕಲಾವಿದ ಮಿತ್ರನಿಗೆ ಅದು ಹೇಗೆ ಅಂತಿಮ ನಮನ ಸಲ್ಲಿಸೋದು.

ಮಂಜುನಾಥ ನಟಿಸಿದ ಕೊಟ್ಟ ಕೊನೆಯ ನಾಟಕ ಮಹಾಮಾಯೆ. ಆ ನಾಟಕದಲ್ಲಿ ಅವರದು ಗೋರಿ ತೋಡುವ ಮಾರನ ಪಾತ್ರ. ಬೆಳಕೆರೆಯವರ ಪಾರ್ಥೀವ ಶರೀರವನ್ನು ಹುಗಿಯಲು ಸ್ಮಶಾನದಲ್ಲಿ  ಗೋರಿ ತೋಡುತ್ತಿರುವುದನ್ನು ನೋಡಿದ ನಟ ಮಂಡ್ಯರಮೇಶರವರಿಗೆ ಕಣ್ಣೀರು ಮಡುಗಟ್ಟಿತಂತೆ. ನಾಟಕದಲ್ಲಿ ಗೋರಿ ತೋಡುವ ಪಾತ್ರದಾರಿಗೆ ಈಗ ಇಲ್ಲಿ ಇನ್ಯಾರೋ ಗೋರಿ ತೋಡುವ ವಾಸ್ತವ ರೂಪಕವನ್ನು ನೋಡಿ ಕರುಳು ಕಿವಿಚಿದ್ದಂತೂ ದಿಟ. ನಾಟಕದ ಮಾರನ ಹಾಗೆಯೇ ಮಂಜುನಾಥರವರೂ ಸಹ ತಮ್ಮ ಬದುಕಿನ ಗೋರಿಯನ್ನು ತಾವೇ ತೋಡಿಕೊಂಡರಾ? ದೇಹದ ಕನಿಷ್ಟ ಅಗತ್ಯತೆಗಳನ್ನು ನಿರ್ಲಕ್ಷಿಸಿ ಒತ್ತಡದ  ಕೆಲಸಗಳಲ್ಲಿ ತೊಡಗಿ ಸಾವನ್ನು ತಮಗರಿವಾದಂತೆ ಆಹ್ವಾನಿಸಿಕೊಂಡರಾ? ಹೌದು ಹಾಗೊಂದು ಅನುಮಾನ ಕಾಡದೇ ಇರದು. ಮೂರು ವರ್ಷಗಳ ಹಿಂದೇನೇ ಹೃದಯ ಮೈಲ್ಡ್ ಅಟ್ಯಾಕ್ ಕೊಟ್ಟು ಎಚ್ಚರಿಕೆಯನ್ನು ಹೇಳಿತ್ತು. ನನ್ನನ್ನು ಸರಿಯಾಗಿ ನೋಡಿಕೋ ಎಂದು ಸಾಂಕೇತಿಕವಾಗಿ ಕೇಳಿಕೊಂಡಿತ್ತು. ಆದರೆ.. ಅದರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿದಾಗ ಮತ್ತೆ ನಿಲ್ಲುವ ಸೂಚನೆಯನ್ನು ಡಿಸೆಂಬರ್ ೧೯ರಂದು ಜೋರಾಗಿಯೇ ಕೊಟ್ಟಿತು. ಕೊನೆಯ ಕ್ಷಣಗಳಲ್ಲಿ ಅದರ ಅರಿವಾಗಿ ತಲ್ಲಣಿಸಿ ಹೋದ ಬೆಳಕೆರೆ ಬಿಎಂ ಹಾಸ್ಪಿಟಲ್ ಸಿಬ್ಬಂದಿಗೆ ಶೀಘ್ರವಾಗಿ ಚಿಕಿತ್ಸೆ ಕೊಡಲು ಆಗ್ರಹಿಸಿದರು. ಆದರೆ ಆಸ್ಪತ್ರೆಯಲ್ಲಿ ಡಾಕ್ಟರಗಳೇ ಆಗ ಇರಲಿಲ್ಲ. ನರ್ಸಗಳಿಗೆ ಅನುಭವವಿಲ್ಲ. ವೈದ್ಯರು ಬಂದು ಚಿಕಿತ್ಸೆ ಆರಂಭಿಸುವ ಹೊತ್ತಿಗೆ ನೊಂದುಕೊಂಡ ಹೃದಯ ನಿಂತೇ ಹೋಗಿತ್ತು. ಅದರ ಎಚ್ಚರಿಕೆಯನ್ನೂ ಗಮನಿಸದ ಮಂಜುನಾಥ ನಿಜ ಜೀವನದಲ್ಲೂ ಗೋರಿ ಅಗೆಯುವ ಮಾರನ ಪಾತ್ರಕ್ಕೆ ಪಾತ್ರದಾರಿಯ ಬದುಕೇ ರೂಪಕವಾಗಿದ್ದೊಂದು ದೊಡ್ಡ ವಿಪರ್ಯಾಸ.


ರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ನಾಟಕಗಳನ್ನು ಕಟ್ಟಿಕೊಡುತ್ತಿದ್ದ ಮಂಜುನಾಥ ಬೆಳಕೆರೆಗೆ ಇದುವರೆಗೂ ಸ್ವಂತ ಮನೆಯನ್ನೂ ಮಾಡಿಕೊಳ್ಳಲಾಗಲಿಲ್ಲ. ರಂಗಾಯಣದ ಸರಕಾರಿ ನೌಕರಿ ಹೆಸರಿಗೆ ಖಾಯಂ ಅನ್ನೋದನ್ನ ಬಿಟ್ಟರೆ ಬೇರೆ ಯಾವುದೇ ವೈಯಕ್ತಿಕ ಹಾಗೂ ಕೌಟುಂಬಿಕ ಭದ್ರತೆಗಳಿಲ್ಲ. ಅರವತ್ತು ವಯಸ್ಸಾದರೆ ರಂಗಾಯಣದ ಬಾಗಿಲಿಗೆ ಕೈಮುಗಿದು ಕಲಾವಿದರು ಮನೆಗೆ ಹೋಗಬೇಕಷ್ಟೇ. ಕಲಾವಿದರಿಗೆ ಪೆನ್ಶನ್ ಅನ್ನೋದು ಇಲ್ಲವೇ ಇಲ್ಲ. ಬದುಕು ಪೂರಾ ರಂಗಾಯಣಕ್ಕೆ ದುಡಿದು ವಯಸ್ಸಾದ ನಂತರದ ಬದುಕಿಗೆ ಏನೂ ಇಲ್ಲದೇ ಆರ್ಥಿಕವಾಗಿ ತೊಂದರೆ ಅನುಭವಿಸುವುದಂತೂ ತಪ್ಪೋದಿಲ್ಲ. ಸಂಬಳದ ಹೊರತು ಇಲ್ಲಿ ಯಾವ ಗಿಂಬಳಗಳೂ ದಕ್ಕೋದಿಲ್ಲ. ಇಂತಹ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದ ಬೆಳಕೆರೆ ಕುಟುಂಬ ಈಗ ಸಂಪೂರ್ಣವಾಗಿ ಅತಂತ್ರ ಸ್ಥಿತಿಯಲ್ಲಿದೆ. ಇಂಜನೀಯರಿಂಗ್ ಓದುತ್ತಿರುವ ಮಗನ ಮುಂದಿನ ಓದಿಗೆ ಬೇರೆ ಆರ್ಥಿಕ ದಾರಿಗಳಿಲ್ಲದಾಗಿದೆ. ಮನೆವಾರ್ತೆ ನೋಡಿಕೊಳ್ಳುತ್ತಿರುವ ಪತ್ನಿ ಪ್ರಶಾಂತಿಯವರಿಗೆ ಈಗ ದಿಕ್ಕೇ ತೋಚದಂತಾ ಪರಿಸ್ಥಿತಿ. ಸಧ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಉಮಾಶ್ರೀಯವರು ರಂಗಾಯಣದ ಕ್ವಾರ್ಟರ‍್ಸ್ ಖಾಲಿ ಮಾಡಿಸುವುದು ಬೇಡವೆಂದು ಉದಾತ್ತತೆ ಮೆರೆದಿದ್ದಾರೆ. ಆದರೂ ಎಲ್ಲರ ಅನುಕಂಪ ಕರಗಿದ ಮೇಲೆ, ಸರಕಾರದ ಮನೆಯನ್ನು ಬಿಟ್ಟುಕೊಡಲೇಬೇಕಾಗುತ್ತದೆ. ರಂಗಭೂಮಿಗೆ ಮೂರು ದಶಕಗಳ ಕಾಲ ನಿರಂತರವಾಗಿ ದುಡಿದ ಜೀವವೊಂದು ಮಡಿದಾಗ ಅವರ ಕುಟುಂಬ ಹೀಗೆ ಅನಾಥವಾಗುವುದು ನಿಜಕ್ಕೂ ಅಮಾನವೀಯವಾಗಿದೆ. ರಂಗಾಯಣದ ಕಲಾವಿದರಿಗೆ ನಿವೃತ್ತಿ ವೇತನ ಕೊಡಿ ಇಲ್ಲವೇ ತೀರಿಕೊಂಡರೆ ಅಥವಾ ನಿವೃತ್ತರಾದರೆ ಅವರ ಮುಂದಿನ ಬದುಕಿಗೆ ಬೇಕಾದಷ್ಟು ಹಣವನು ಇಡುಗಂಟಾಗಿಯಾದರೂ ಕೊಡಿ ಎಂದು ರಂಗಾಯಣದ ಕಲಾವಿದರುಗಳು, ನಿರ್ದೇಶಕರುಗಳು, ಕೆಲವು ರಂಗಕರ್ಮಿಗಳು ಅಷ್ಟೇ ಯಾಕೆ ರಂಗಸಮಾಜದ ಸದಸ್ಯರುಗಳು ಒತ್ತಾಯಿಸುತ್ತಲೇ ಬಂದಿದ್ದಾರೆ.

ಆದರೆ ಪಂಚೇಂದ್ರಿಯಗಳನ್ನು ಕಳೆದುಕೊಂಡ ಸರಕಾರಕ್ಕೆ ಕಲಾವಿದರ ಬದುಕಿನ ಸೂಕ್ಷ್ಮತೆ ಅರ್ಥ ಆಗುವುದಾದರೂ ಹೇಗೆ? ರಂಗಭೂಮಿಯ ಕಲಾವಿದೆಯಾದ ಉಮಾಶ್ರೀಯವರೇ ಸಂಸ್ಕೃತಿ ಇಲಾಖೆಯ ಮಂತ್ರಿಣಿಯಾಗಿದ್ದರಿಂದ ರಂಗಾಯಣದ ಕಲಾವಿದರ ನಿವೃತ್ತಿ ನಂತರದ ಬದುಕಿಗೆ ಕನಿಷ್ಟ ಭದ್ರತೆ ಸಿಗುತ್ತದೆ ಎಂದೇ ಎಲ್ಲರೂ ಬಯಸಿದ್ದರು. ಆದರೆ ಉಮಾಶ್ರೀಯವರೂ ಸಹ ಈ ಕುರಿತು ಒಲವು ತೋರಲಿಲ್ಲ.  ರಂಗಾಯಣದ ಸದಸ್ಯರಾದ ಮಂಡ್ಯ ರಮೇಶ ಹಾಗೂ ಇತರರು ರಂಗಸಮಾಜಕ್ಕೆ ರಾಜೀನಾಮೆ ಪತ್ರವನ್ನೂ ಕಳುಹಿಸಿಕೊಟ್ಟರು. ಆದರೆ ಇಲ್ಲವರೆಗೂ ರಾಜೀನಾಮೆ ಅಂಗೀಕಾರವೂ ಆಗಿಲ್ಲಾ.. ರಂಗಾಯಣದ ಕಲಾವಿದರಿಗೆ ಆರ್ಥಿಕ ಕನಿಷ್ಟ ಭದ್ರತೆಯೂ ಸಿಕ್ಕಿಲ್ಲ. ರಂಗದ ಮೇಲೆ ತಮ್ಮ ಪ್ರತಿಭೆಯ ಮೂಲಕ ವಿಜ್ರಂಭಿಸುವ ಕಲಾವಿದರ ಅಂತಿಮ ಹಂತದ ಬದುಕು ಹೀಗೆ ತ್ರಿಶಂಕು ಆಗುವುದು ಇಡೀ ಸಮಾಜಕ್ಕೆ ಅವಮಾನಕರವಾದದ್ದು. ಮಂಜುನಾಥ ಬೆಳಕೆರೆಯವರ ಅನಿರೀಕ್ಷಿತ ನಿರ್ಗಮನದ ನಂತರ ಅವರ ಕುಟುಂಬ ವರ್ಗ ಅನುಭವಿಸುತ್ತಿರುವ ಆರ್ಥಿಕ ಸಮಸ್ಯೆಯನ್ನು ಪರಿಗಣಿಸಿಯಾದರೂ ರಂಗಾಯಣದ ಕಲಾವಿದರಿಗೆ ನಿವೃತ್ತಿಯ ನಂತರದ ಭದ್ರತೆಯನ್ನು ಒದಗಿಸುವತ್ತ ಸರಕಾರದ ಚಿತ್ತ ಇರಬೇಕಿದೆ. ಉಮಾಶ್ರೀಯವರು ಮನಸ್ಸು ಮಾಡಿದರೆ ಇದು ಅಸಾಧ್ಯವಾದ ಕೆಲಸವೇನಲ್ಲ.


ಮೊಟ್ಟ ಮೊದಲು ರಂಗಕರ್ಮಿಗಳು ಸಂಸ್ಕೃತಿ ಇಲಾಖೆ ಹಾಗೂ ಸರಕಾರದ ಮೇಲೆ ಒತ್ತಡ ತಂದು ಮಂಜುನಾಥರವರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಸರಕಾರದಿಂದ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ನಾಟಕಗಳ ಮೂಲಕ ಸಮಾಜಕ್ಕೆ ಕಲೆಯ ಕೊಡುಗೆಯನ್ನು ಕೊಟ್ಟ ಕಲಾವಿದರ ಅಂತಿಮ ಹಂತದ ಬದುಕು ಹಾಗೂ ಅವರ ಕುಟುಂಬ ಪರಿವಾರ ನೆಮ್ಮದಿಯಾಗಿ ಬದುಕುವಂತಹ  ವ್ಯವಸ್ಥೆಯೊಂದನ್ನು ಸರಕಾರ ಈ ಕೂಡಲೇ ಮಾಡಬೇಕಿದೆ. ಬೆಳಕೆರೆಯವರನ್ನೂ ಒಳಗೊಂಡಂತೆ ರಂಗಾಯಣದಿಂದ ನಿವೃತ್ತರಾಗುವ ಎಲ್ಲರಿಗೂ ಆರ್ಥಿಕ ಪರಿಹಾರವನ್ನು ಕೊಡುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು.. ಮಾಡದಿದ್ದರೆ ಎಲ್ಲಾ ಕಲಾವಿದರು ರಂಗಕರ್ಮಿಗಳು ಒತ್ತಡ ತರುವ ಮೂಲಕ ನೀಗಿಕೊಂಡ ಮಂಜುನಾಥ ಬೆಳಕೆರೆಯವರಿಗೆ ಅಂತಿಮ ನಮನ ಸಲ್ಲಿಸಬೇಕಿದೆ. ಕಲಾವಿದರು ಹಾಗೂ ಅವರ ಕುಟುಂಬವರ್ಗ ಘನತೆವೆತ್ತ ಗೌರವಾನ್ವಿತ ಬದುಕನ್ನು ಬಾಳುವ ಅವಕಾಶವನ್ನು ಸರಕಾರ ಕಲ್ಪಿಸಿಕೊಡುವ ಮೂಲಕ ಅಗಲಿದ ಕಲಾವಿದನ ಪರಿಶ್ರಮಕ್ಕೆ ಪ್ರತಿಫಲವನ್ನು ಕೊಡಬೇಕಾಗಿದೆ. ಇಲ್ಲವಾದರೆ ಕಲೆಯನ್ನೇ ನಂಬಿಕೊಂಡು ಬದುಕುವಂತಹ ಅನೇಕ ಜನರಲ್ಲಿ  ಸಮಾಜ ಹಾಗೂ ಸರಕಾರದ ಮೇಲೆ ವಿಶ್ವಾಸವೇ ಇಲ್ಲವಾಗುತ್ತದೆ. ಮುಂದಿನ ತಲೆಮಾರು ಕಲೆಯಿಂದ ದೂರಾಗುವಂತಹ ಅಪಾಯವೂ ಕಾದಿದೆ. ರಂಗಭೂಮಿಯ ಒಳತಿಗಾಗಿ ಕಲಾವಿದರನ್ನು ಉಳಿಸಬೇಕು, ಬೆಳೆಸಬೇಕು ಹಾಗೂ ಅವರೂ ಈ ಸಮಾಜದ ಅಂಗವಾಗಿ ಗೌರವಯುತವಾಗಿ ಬಾಳಬೇಕು. ಕಲಾವಿದರನ್ನೇ ನಂಬಿದ ಕುಟುಂಬ ವರ್ಗ ನೆಮ್ಮದಿಯಾಗಿ ಬದುಕುವ ವ್ಯವಸ್ಥೆಯೊಂದು ನಿರ್ಮಾಣವಾಗಬೇಕು. ಮಂಜುನಾಥರವರ ಅಗಲಿಕೆ ವ್ಯರ್ಥವಾಗದೇ ಉಳಿದ ಕಲಾವಿದರುಗಳ  ಬದುಕಿನ ಆರ್ಥಿಕ ಸುಬದ್ರತೆಗೆ ದಾರಿಯಾಗಬೇಕು. ಹೋಗಿ  ಬಾ ರಂಗಗೆಳೆಯ ಬೆಳಕೆರೆ.. ನಿಮ್ಮ ನೆನಪೊಂದೇ ಇನ್ನು ನಮಗಾಸರೆ...

-ಶಶಿಕಾಂತ ಯಡಹಳ್ಳಿ      


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ