ಶುಕ್ರವಾರ, ಮಾರ್ಚ್ 22, 2019

ರಂಗಾಯಣದ ಬಿಳಿಯಾನೆ ಪ್ರಹಸನ :




ಸರಕಾರ : ಥೂ..ಥೋ... ಈ ಆನೆ ಸಾಕೋದು ಬಹಳಾನೇ ಕಷ್ಟ ಕಣ್ರಿ.. ಇದರಿಂದ ಆದಾಯಾ ಬರೋದಿರ‍್ಲಿ, ಇದನ್ನ ಮೆಂಟೇನ್ ಮಾಡೋದೇ ಹರಸಾಹಸ ಆಗೋಗಿದೆ. ಇದಕ್ಕೇನಾದ್ರೂ ದಾರಿ ಮಾಡಬೇಕಲ್ಲಾ..

ಸೆಕ್ರೇಟರಿ : ಸಾರ್.. ಹಂಗೆಲ್ಲಾ ನಾವು ಪಬ್ಲಿಕ್ಕಾಗಿ ಹೇಳಿದ್ರೆ ರಂಗಭೂಮಿಯವರು ಸಿಟ್ಟಿಗೇಳ್ತಾರೆ ಸಾರ್. ಧರಣಿ ಸತ್ಯಾಗ್ರಹ ಮಾಡ್ತಾರೆ. ಇದು ಅಂತಿಂತಾ ಆನೆ ಅಲ್ಲಾ ಸಾರ್. ರಂಗಾಯಣದ ಆನೆ. ಮೊದಲೆಲ್ಲಾ ಈ ಆನೆ ಚೆನ್ನಾಗಿಯೇ ಇತ್ತು ಸಾರ್.. ಮಾವುತ ಹೇಳಿದ ಮಾತನ್ನ ಚೆನ್ನಾಗಿ ಕೇಳ್ತಾಯಿತ್ತು. ಆದರೆ.. ಮಾವುತರು ಬದಲಾದಂತೆಲ್ಲಾ ಮರಿ ಆನೆ ಹಿರಿಯಾನೆ ಆಯ್ತು, ಹಿರಿಯಾನೆ ಹೋಗಿ ಈಗ ಬಿಳಿಯಾನೆ ಆಗಿ ಬೆಳೆದಿದೆ. ಸರಕಾರವೇ ನೇಮಿಸಿದ ಮಾವುತರ ಮಾತಿರಲಿ, ಸರಕಾರಿ ಅಧಿಕಾರಿಗಳ ಮಾತೇ ಕೇಳ್ತಿಲ್ಲಾ ಅಂತೀನಿ..

ಸರಕಾರ : ಹಾಗಾದ್ರೆ ಹೇಗ್ರಿ ಮಾಡೋದು? ಇದೊಂತರಾ ಬಿಸಿತುಪ್ಪಾ ಆಯ್ತಲ್ರಿ. ಇದನ್ನ ಇಟ್ಕೊಂಡು ಸಾಕೋದಕ್ಕೂ ಆಗ್ತಿಲ್ಲಾ.. ಆ ಕಡೆ ನಾಡಿಂದಾ ಕಾಡಿಗೆ ಓಡ್ಸೋಕ್ಕೂ ಆಗ್ತಿಲ್ಲಾ.. ಬಲೇ ಪಜೀತಿ ಆಯ್ತಲ್ಲಾ. ಏನಾದ್ರೂ ಐಡಿಯಾ ಇದ್ರೆ ಕೊಡ್ರಿ.

ಸೆಕ್ರೆಟರಿ : ಒಂದು ಐನಾತಿ ಐಡಿಯಾ ಐತೆ ಸಾರ್. ಈ ಆನೆಯನ್ನ ಊರೂರಲ್ಲಿ ಪ್ರದರ್ಶನ ಮಾಡಿಸೋದು, ಟಿಕೇಟಿ ಇಟ್ಟು ಜನರಿಂದ ಹಣ ಪಡಿಯೋದು, ಬಂದ ಹಣದಲ್ಲಿ ಈ ಆನೆಯನ್ನ ಸಾಕೋದು..

ಸರಕಾರ : ಅದನ್ನೆಲ್ಲಾ ಮಾಡಿ ನೋಡಿದ್ದಾಯ್ತಲ್ಲಾ.. ಆದ್ರೂ ಈ ಆನೆ ಕರೆಸಿ ಪ್ರದರ್ಶನ ಮಾಡೋಕೂ ಜನ ಮುಂದೆ ಬರ‍್ತಿಲ್ಲವಲ್ಲಾ.

ಸೆಕ್ರೇಟರಿ : ಅದು ಹಂಗಲ್ಲಾ ಸಾರ್. ನಾನು ಮಾವುತನ ಹತ್ತಿರ ಮಾತಾಡಿದ್ದೀನಿ. ಆನೆ ಮುಂದೆ ಕುವೆಂಪುರವರ ಭಾವಚಿತ್ರ ಹಾಕೋದು, ಆನೆ ಮೇಲೆ ಅವರ ಜ್ಞಾನಪೀಠ ಪುರಸ್ಕೃತ ಗ್ರಂಥ ಶ್ರೀರಾಮಾಯನ ದರ್ಶನಂ ಇಡೋದು. ಆನೆ ನೋಡೋಕೆ ಜನ ಬರದೇ ಇದ್ರೂ ಜ್ಞಾನಪೀಠ ಕೃತಿಯನ್ನಾದರೂ ನೋಡೋಕೆ ಜನ ಟಿಕೇಟ್ ತಗೊಂಡು ಬರ‍್ತಾರೆ ಸಾರ್.. ಕುವೆಂಪುರವರ ಹೆಸರಲ್ಲೇ ಮಾರ್ಕೆಟಿಂಗ್ ಮಾಡಿದ್ರಾಯ್ತು. 



ಸರಕಾರ : ಏನಾದ್ರೂ ಮಾಡ್ರಿ, ಸರಕಾರದ ಹೆಸರೂ ಕೆಡಬಾರ‍್ದು, ಆ ಬಿಳಿಯಾನೆ ಸರಕಾರಕ್ಕ ಹೊರೇನೂ ಆಗಬಾರ‍್ದು ಆ ರೀತಿ ಐಡಿಯಾ ಮಾಡಿ.. ಏನಾಯ್ತು ಅಂತಾ ಆದಷ್ಟು ಬೇಗ ರಿಪೋರ್ಟ ಮಾಡಿ.

ಸೆಕ್ರೆಟರಿ : ಸರಿ ಸಾರ್.. ಎಲ್ಲಾ ಜವಾಬ್ದಾರಿ ಆನೆಯನ್ನ ನೋಡಿಕೊಳ್ಳೋ ಮಾವುತನಿಗೆ ಒಪ್ಪಿಸ್ತೀನಿ, ನೀವೇನೂ ಚಿಂತೆ ಮಾಡಿಬೇಡಿ.. ಸರಕಾರದ ಹಿತರಕ್ಷಣೆ ಮಾಡೋದೇ ಅಧಿಕಾರಿಗಳಾದ ನಮ್ಮ ಕೆಲಸ..


ದೃಶ್ಯ : 2
ಮಾವುತ : (ಪೋನಿನಲ್ಲಿ) ನಮಸ್ಕಾರ.. ಯಾರು ಉಡುಪಿಯ ರಂಗಭೂಮಿಯವರಾ.. ನಾವು ರಂಗಾಯಣದವರು. ಬಿಳಿಯಾನೆಯ ಮೇಲೆ ಶ್ರೀರಾಮಾಯನ ದರ್ಶನಂ ಕೃತಿ ಪ್ರದರ್ಶನವನ್ನ ಮಾಡುವ ಯೋಜನೆ ಹಾಕಿಕೊಂಡಿದ್ದು ನಿಮಗೆ ಗೊತ್ತಿರಬಹುದು. ನಿಮ್ಮ ಉಡುಪಿಯಲ್ಲಿ ಪ್ರದರ್ಶನವನ್ನು ನೀವು ಏರ್ಪಡಿಸಲೇಬೇಕು ಅನ್ನೋದು ನಮ್ಮ ಅಭಿಲಾಷೆ. ಏನಂತೀರಿ..

ಸಂಘಟಕ : ಹೌದಾ.. ತುಂಬಾ ಒಳ್ಳೇ ಸುದ್ದಿ ಮಾರ್ರಾಯ್ರೆ.. ಆದರೆ.. ನಮ್ಮದು ಚಿಕ್ಕ ರಂಗಸಂಸ್ಥೆ, ನಿಮ್ಮ ಸರಕಾರಿ ಐರಾವತವನ್ನು ಸಾಕೋವಷ್ಟು ಇನ್ನೂ ದೊಡ್ಡಮಟ್ಟದಲ್ಲಿ ನಾವಿಲ್ಲ.. ಮರಿಯಾನೆಗಳಿದ್ದರೆ ಕಳಿಸಿ ಪ್ರದರ್ಶಿಸುವಾ..

ಮಾವುತ : ಓಹೋ.. ಅದು ಹಾಗಲ್ಲಾ.. ನೀವು ಕುವೆಂಪುರವರ ಹೆಸರು ಕೇಳಿದ್ದೀರಲ್ವಾ.. ಅವರಿಗೆ ಜ್ಞಾನಪೀಠ ಅವಾರ್ಡ ತಂದುಕೊಟ್ಟ ಗ್ರಂಥ ಇದೆಯಲ್ಲಾ.. ಅದನ್ನ ನಾವು ಬಿಳಿಯಾನೆ ಮೇಲಿಟ್ಟು ಕಳಿಸ್ತೇವೆ.. ನೀವು ಟಿಕೆಟ್ ಇಟ್ಟು ಪ್ರದರ್ಶನ ಮಾಡಿದ್ರೆ ತುಂಬಾ ಲಾಭ ಬರಲಿಕ್ಕುಂಟು.

ಸಂಘಟಕ : ಹೌದಾ.. ನಿಜಕ್ಕೂ ಲಾಭ ಬರಲಿಕ್ಕುಂಟಾ.. ಹಾಗೆ ಬರೋದಿದ್ರೆ ಒಳ್ಳೇಯದು..  ಆದ್ರೆ.. ಆ ಐರಾವತಕ್ಕೆ ತಕ್ಕುದಾದ ಸ್ಟೇಜ್ ಬೇಕಲ್ಲಾ, ಅಂತಾ ದೊಡ್ಡ ವೇದಿಕೆ ನಮ್ಮ ಉಡುಪಿಯಲ್ಲಿಲ್ಲ ಮಾರ್ರೆ.. ನಿಮ್ಮ ಆನೆಯನ್ನ ಬೇರೆ ಊರಿಗೆ ಕಳಿಸಿ.. ನಮಗೆ ಅದು ಈಗ ಅದು ಬೇಡಾ..

ಮಾವುತ : ಹೀಗಂದ್ರೆ ಹೇಗೆ.. ನೀವು ಒಳ್ಳೆಯ ಸಂಘಟಕರು ಅಂತಾ ಕೇಳಿದ್ದೀವಿ. ನಿಮಗೇನೂ ಹೆಚ್ಚು ಹೊರೆ ಆಗೋದಿಲ್ಲಾ. ಲೈಟ್ಸ್, ಸೆಟ್ಸ್ ಎಲ್ಲಾ ನಾವೇ ತರೀವಿ.. ನೀವು ಆನೆಗೆ ಹಾಗೂ ಅದರ ಜೊತೆಗೆ ಬರೋ ಜನರಿಗೆ ಊಟ ವಸತಿ ಮಾತ್ರ ನೋಡ್ಕಂಡ್ರೆ ಸಾಕು. ಟಿಕೇಟ್ಟಿನಿಂದಾ ಬರೋ ಹಣವೆಲ್ಲ ನಿಮಗೆ.. ನಮಗೇನೂ ಕೊಡಬೇಕಾಗಿಲ್ಲ. ಒಟ್ಟಿನ ಮೇಲೆ ನಿಮ್ಮೂರಿನ ಜನ ನಮ್ಮ ಆನೆ ನೋಡಬೇಕು.. ಅಷ್ಟೇ..

ಸಂಘಟಕ : ಹೌದಾ.. ಊಟ ವಸತಿ ಮಾತ್ರ ಕೊಟ್ರೆ ಸಾಕಾ.. ಬಂದ ಹಣವೆಲ್ಲಾ ನಮಗೇನಾ. ಹಾಗಾದ್ರೆ ಆಗಬಹುದು. ನಮ್ಮ ಎಂಜಿಎಂ ಕಾಲೇಜಲ್ಲಿ ಬಯಲುರಂಗ ಮಂಟಪ ಉಂಟು ಮಾರ್ರಾಯ್ರೆ.. ಅಲ್ಲಿ ಆನೆ ಪ್ರದರ್ಶನ ಮಾಡೋವಾ.. ಅದಕ್ಕೆ ಪರದೆ ಗಿರದೆ ಶಾಮಿಯಾನ ಬೇಕಲ್ವಾ..

ಮಾವುತ : ಅದಕ್ಕೆಂತಾ ಖರ್ಚಾಗುತ್ತೆ.. ಶಾಮಿಯಾನದವನಿಗೆ ಹೇಳಿದ್ರೆ ಅವರೇ ತಂದಾಕ್ತಾರೆ. ಹಂಗೆ ಮೈಕು ಮತ್ತು ಸ್ಪೀಕರ್ ತರೋದಕ್ಕೆ ಹೇಳಿ.. ನಿಮಗೆ ಟಿಕೆಟ್ ಮಾರಿದ ಹಣ ಪ್ರದರ್ಶನ ಮಾಡೋಕೆ ಮುಂಚೆನೆ ಬರುತ್ತಲ್ವಾ ಅದರಲ್ಲಿ ಸ್ವಲ್ಪ ಖರ್ಚು ಮಾಡಿ. ರಂಗಾಯಣದ ಬಿಳಿಯಾನೆ ಬರ‍್ತಿದೆ, ಕುವೆಂಪುರವರ ಕೃತಿ ಹೊತ್ತು ತರ‍್ತಿದೆ ಅಂತೆಲ್ಲಾ ಪ್ರಚಾರ ಮಾಡಿ. ಆಗ ನೋಡಿ.. ಜನ ಓಡೋಡಿ ಬರ್ತಾರೆ. ಮುಗಿಬಿದ್ದು ಟಿಕೇಟ್ ಕೊಂಡಕೊಳ್ತಾರೆ. ಮುಂದಿನ ತಿಂಗಳು ಮಾರ್ಚ 17ರಂದು ಪ್ರದರ್ಶನ ಮಾಡಬಹುದಲ್ವಾ..

ಸಂಘಟಕ : ನೀವು ಇಷ್ಟೆಲ್ಲಾ ಒತ್ತಾಯ ಮಾಡಿ ಹೇಳಿದ್ದರಿಂದ ಆಯ್ತು, ಒಪ್ಪಿಕೊಳ್ತೇವೆ.. ನಿಮ್ಮ ಐರಾವತದ ಪ್ರದರ್ಶನ ನಮ್ಮೂರಲ್ಲಿ ಆಗಿಬಿಡಲಿ. ನಮ್ಮೂರಿನ ಜನಕ್ಕೂ ಆನೆ ನೋಡಿದ ಆನಂದ ಸಿಗೋದಿದ್ರೆ ಸಿಗಲಿ, ಆಯ್ತು.. ಕಟ್ ಮಾಡ್ಲಾ ಪೋನು..


ದೃಶ್ಯ : 3
ಒಬ್ಬ : ಆನೆ ಹೆಸರಲ್ಲಿ ಲಾಭ ಮಾಡ್ಕೊಂತಿರೋ ಸಂಘಟಕರಿಗೆ ದಿಕ್ಕಾರ.

ಇನ್ನೊಬ್ಬ : ಏನು..? ಒಂದು ಟಿಕೇಟಿಗೆ ನೂರುಪಾಯಿಯಾ, ಡೋನರ್ ಪಾಸ್ ಸಾವಿರ ರೂಪಾಯಿಯಾ.. ಅಯ್ಯ್ಯೋ ಅನ್ಯಾಯಾ.. ಇದು ಲೂಟಿ ಮಾರ್ರಾಯ್ರೆ.. ಮಹಾಲೂಟಿ.. ಹಗಲು ದರೋಡೆ.

ಮತ್ತೊಬ್ಬ : ಇದನ್ನು ಸ್ಥಳೀಯರು ಖಂಡಿಸಲೇಬೇಕು, ರಂಗಕರ್ಮಿಗಳೆಲ್ಲಾ ಪ್ರತಿಭಟಿಸಬೇಕು.

ಸಂಘಟಕ : ಇದು ಸಾಮಾನ್ಯ ಆನೆಯಲ್ಲಾ.. ಐರಾವತ ಸ್ವಾಮಿ ಐರಾವತ.. ಅದು ಎಷ್ಟು ದೊಡ್ಡದಿದೆಯೋ ಖರ್ಚೂ ಅದಕ್ಕಿಂತಾ ಹೆಚ್ಚಿದೆ. ಕೊಡುವ ದಾನಿಗಳು ಮುಂದೆ ಬಂದರೆ ಬೇಡ ಅನ್ನಲು ನಾವ್ಯಾರು? ನಾವೇನೂ ಯಾರಿಗೂ ಬಲವಂತಾ ಮಾಡ್ತಿಲ್ಲಾ. ಮುಂದೆ ಕುಳಿತು ಆನೆಯನ್ನು ಕಣ್ತುಂಬಿ ನೋಡಬೇಕೆನ್ನುವವರು ಡೋನರ್‌ಪಾಸ್ ಕೊಳ್ತಾರೆ. ಆಗದವರು ನೂರುಪಾಯಿ ಕೊಟ್ಟು ಟಿಕೇಟ್ ತಗೋತಾರೆ.. ಇದರಲ್ಲೇನಿದೆ ಅನ್ಯಾಯಾ..

ಒಬ್ಬ : ಇದರಲ್ಲೇ ಇರೋದು ಅನ್ಯಾಯಾ. ಪ್ರೇಕ್ಷಕರಲ್ಲಿ ತಾರತಮ್ಯ ಮಾಡ್ರೀರೇನ್ರಿ. ಮುಂದೆ ಕೂತವರು ದಾನಿಗಳಾದರೆ ಹಿಂದೆ ಕೂತವರು ಕಾಂಜಿಪೀಂಜಿಗಳಾ.. ರಂಗಭೂಮಿಯಲ್ಲಿ ಇಂತಾ ಅಸಮಾನತೆಗೆ ದಿಕ್ಕಾರ..

ಇನ್ನೊಬ್ಬ : ಹೌದೌದು.. ಇಂತಹುದನ್ನ ಖಂಡಿಸಲೇಬೇಕು.. ಸ್ಥಳೀಯರಂತೂ ಪ್ರತಿಭಟಿಸಲೇಬೇಕು.

ಮತ್ತೊಬ್ಬ : ಲಾಭಕೋರ ರಂಗಭೂಮಿ ಸಂಘಟನೆಗೆ ದಿಕ್ಕಾರ.. ದಿಕ್ಕಾರಾ..

ಸಂಘಟಕ : ರೀ ಸ್ವಾಮಿ ದಿಕ್ಕಾರೇಶ್ವರಗಳಿರಾ.. ಹೆತ್ತವರಿಗಷ್ಟೇ ಹೆರಿಗೆ ನೋವು ಗೊತ್ತಾಗೋದೇ ಹೊರತು ಡಾಕ್ಟರ್ ಕಂಪೌಂಡರ್ ಗಳಿಗಲ್ಲಾ. ಅದೇರೀತಿ ಸಂಘಟಕರ ನೋವು ರಂಗನಿರ್ದೇಶಕ ಪ್ರೇಕ್ಷಕರಿಗೆ ಅರ್ಥವಾಗೋದಿಲ್ಲಾ. ನೀವೆಲ್ಲಾ ಬೇಡಾ ಅಂದ್ರ ಬೇಡಾ ಬಿಡಿ. ಆಗೋ ಖರ್ಚನ್ನ ನೀವು ದಿಕ್ಕಾರ ಕೂಗೋರು ಕೊಟ್ಟರೆ ನಾವು ಪುಕ್ಸಟ್ಟೆ ತೋರಿಸ್ತೀವಿ..

ಒಬ್ಬ : ನಮಗೇನು ಮಾಡೋಕೆ ಬೇರೆ ಕೆಲಸ ಇಲ್ವಾ.. ನೀನೇ ಆನೆ ತೋರಿಸ್ಕೋ ಹೋಗು.. ಜನರ ಗಮನ ಸೆಳೆಯೋಕೆ ನಾವು ದಿಕ್ಕಾರ ಕೂಗಬೇಕು ಕೂಗ್ತೀವಿ.. ವಾಟ್ಸಾಪ್ ಫೇಸ್ಬುಕ್‌ಗಳಲ್ಲೆಲ್ಲಾ ಬರೀಬೇಕು ಬರೀತೀವಿ.


ದೃಶ್ಯ : 4
ಮಾವುತ : (ಮೊಬೈಲ್ನಲ್ಲಿ) ಅಬಾಬಾ.. ಎಷ್ಟೊಂದು ಜನರನ್ನ ಸೇರಿಸಿದ್ರೀ ನೀವು ನಮ್ಮ ಆನೆ ನೋಡೋಕೆ. ಅದ್ಬುತಾ.. ಅತ್ಯದ್ಬುತ.

ಸಂಘಟಕ : ಅದಿರಲಿ  ಮಾರ್ರೆ.. ಲಾಭನಷ್ಟದ ಕುರಿತು ಮಾತಾಡೋಣ..

ಮಾವುತ : ಲಾಭ ಎಲ್ಲಾ ನಿಮಗೆ.. ನಮಗೇನೂ ಒಂದು ನೈಯಾಪೈಸೆ ಬೇಕಾಗಿಲ್ಲಾ. ಆನೆ ಜೊತೆ ಬಂದವರನ್ನ ಚೆನ್ನಾಗಿ ನೋಡಿಕೊಂಡ್ರಿ.. ಅದಕ್ಕೆ ನಿಮಗೊಂದು ಥ್ಯಾಂಕ್ಸ ಹೇಳೋಣಾ ಅಂತಾ ಪೋನ್ ಮಾಡಿದೆ..

ಸಂಘಟಕ : ಅದಲ್ಲಾರೀ.. ಮೊದಲು ಲೆಕ್ಕ ಲೆಕ್ಕಾ ಹೇಳ್ತೀನಿ  ಕೇಳ್ರಿ..

ಮಾವುತ : ನೀವು ನಮಗೆ ಎಷ್ಟು ಲಾಭ ಬಂತೂ ಅಂತಾ ಲೆಕ್ಕಾ ಹೇಳೋ ಅಗತ್ಯಾನೇ ಇಲ್ಲಾ ಬಿಡಿ. ಎಲ್ಲಾ ನಿಮ್ದೆ. ಅದೇನೋ ಡೋನರ್ ಪಾಸ್ ಅಂತಾ ಬೇರೆ ಇಟ್ಟು ತಲಾ ಸಾವಿರಾರು ರೂಪಾಯಿ ಕಲೆಕ್ಟ್ ಮಾಡಿದ್ರಂತಲ್ಲಾ. ಅದಕ್ಕೆ ಪ್ರಸಿದ್ಧ ರಂಗನಿರ್ದೇಶಕರೊಬ್ಬರು ನನಗೆ ಪೋನ್ ಮಾಡಿದ್ರು. ಆನೆ ಪ್ರದರ್ಶನ ರದ್ದು ಮಾಡಿ, ಆನೆ ಹೆಸರಲ್ಲಿ ಇಲ್ಲಿ ಹಣದ ಲೂಟಿ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ನಾವು ಇಂತಾದ್ದಕ್ಕೆಲ್ಲಾ ಇಂಪಾರ್ಟನ್ಸ್ ಕೊಡೋಕೆ ಹೋಗೋದಿಲ್ಲಾ. ರಂಗಸಂಘಟಕರೂ ಬದುಕ್ ಬೇಕು ಹಾಗೇನೆ ನಮ್ಮ ಆನೆಗೂ ಬೆಲೆ ಬರಬೇಕು.. ಇದು ಹೇಳಿಕೇಳಿ ಸರಕಾರದ ಆನೆ ನೋಡಿ.. ಜನರ ಸೇವೆಗೆ ಸದಾ ಸಿದ್ದ. ರಂಗಸಂಘಟಕರ ಹಿತರಕ್ಷಣೆಗೆ ಸದಾ ಬದ್ದ.

ಸಂಘಟಕ : (ಸಹನೆ ಕಳೆದುಕೊಂಡು) ಅಯ್ಯೋ.. ನಿಮಗೂ ನಿಮ್ಮ ಆನೆಗೂ ಒಂದು  ದೊಡ್ಡ ನಮಸ್ಕಾರಾ ಮಾರಾಯ್ರೆ. ಸುಮ್ಕೆ ಇಲ್ಲದ್ದನ್ನೆಲ್ಲಾ ಮಾತಾಡಿ ನಮ್ಮ ಮಂಡೆಬಿಸಿ ಮಾಡಬೇಡಿ. ಆ ನಿಮ್ಮ ಐರಾವತವನ್ನ ಹೇಗೋ ಸಾಕಬಹುದು.. ಆದರೆ ಅದರ ಜೊತೆ ಬಂದಿದ್ದರಲ್ಲಾ ಐವತ್ತು ಜನ ಬಿಳಿಯಾನೆಯ ಪರಿಪಾಲಕರು ಅವರನ್ನು ಸಾಕೋದರಲ್ಲೇ ನಾವು ಹಾಳಾಗಿ ಹೋದ್ವಿ. ಅವರಿಗೆ ಉಡುಪಿ ಬಿಸಿಲು ಆಗೋದಿಲ್ವಂತೆ. ಎಸಿ ರೂಮೇ ಬೇಕಂತೆ. ಬರೀ ಲಾಜಿಂಗ್ ಬಾಡಿಗೇನೇ ನಲವತ್ತು ಸಾವಿರ ಕಟ್ಟಿದ್ದೀನಿ ಗೊತ್ತೇನ್ರೀ..

ಮಾವುತ : ಹೌದಾ.. ಅದರಲ್ಲಿ ತಪ್ಪೇನಿಲ್ಲಾ ಬಿಡಿ. ಸರಕಾರದ ಆನೆ ಬಿಸಿಲಲ್ಲಿ ಬೆಂದುಹೋಗಬಾರದು ನೋಡಿ.. ಅದರ ಬಳಗಕ್ಕೆ ಎಸಿ ರೂಮು ಮಾಡಿದ್ರೆ ತಪ್ಪೇನೂ ಇಲ್ಲಾ. ಇದೆಲ್ಲಾ ನೀವು ರಂಗಾಯಣಕ್ಕೆ ಮಾಡುವ ಸೇವೆ ಅಂದ್ಕೊಳ್ಳಿ.

ಸಂಘಟಕ : ನಾವೇನೋ ಹತ್ತಾರು ಜನ ಬರ‍್ತಾರೆ ಅನ್ಕೊಂಡ್ರೆ.. ಐವತ್ತರವತ್ತು ಜನ ಆನೆ ಜೊತೆ ಬಂದ್ರೆ.. ಅವರಿಗೆ ತಿಂಡಿ, ಎರಡೊತ್ತು ಊಟ, ಬೇಕ್ ಬೇಕಾದಾಗ ಕಾಫಿ ಜ್ಯೂಸ್‌ಗಳಿಗೆ ಮೂವತ್ತು ಸಾವಿರ ಎಗರೋಗ್ತಲ್ಲಾ ಮಾರಾಯ್ರೆ.. ಅದನ್ನೆಲ್ಲಾ ಯಾರು ಕೊಡೋದು..

ಮಾವುತ : ಇಷ್ಟಕ್ಕೆಲ್ಲಾ ಚಿಂತೆ ಮಾಡಿದ್ರೆ ಹೇಗೆ.. ನೀವು ಉಡುಪಿಯವರು.. ಇಡೀ ವಿಶ್ವಾದ್ಯಂತ ಹೊಟೇಲ್ ತೆರೆದು ಜಗತ್ತಿನ ಜನರಿಗೆ ಊಟ ಹಾಕೋ ಉದಾರಿ ಜನ. ಈ ಅರವತ್ತು ಜನಕ್ಕೆ ಊಟ ತಿಂಡಿಗೆಲ್ಲಾ ಲೆಕ್ಕಾ ಹಾಕಿದ್ರೆ ಹೆಂಗೆ..

ಸಂಘಟಕ : ಅಯ್ಯೋ.. ನಮ್ಮ ಕಷ್ಟ ನಿಮಗೆ ಹೇಗೆ ಹೇಳೋದು. ಸ್ಟೇಜು, ಶಾಮಿಯಾನಾ, ಖುರ್ಚಿ, ಸ್ಪೀಕರ‍್ಗಳು, ಮೈಕು, ಜನರೇಟರು ಅದು ಇದು ಪರಿಕರಗಳ ಬಾಡಿಗೆಗೆನೇ ಒಂದು ಲಕ್ಷದ ಮೇಲೆ ಖರ್ಚಾಗಿದೆಯಲ್ಲಾ ಇದನ್ನ ನಿಮ್ಮ ಸರಕಾರ ಕೊಡುತ್ತಾ..

ಮಾವುತ : ನಿಮ್ಮ ಖರ್ಚಿಗೂ ಸರಕಾರಕ್ಕೂ ಅದೆಂತಹ ಸಂಬಂಧ ಕಟ್ತೀರಿ ರಾಯ್ರೆ.. ನೀವೇನು ಸುಮ್ಮನೇ ಧರ್ಮಕ್ಕಾ ಆನೆ ಪ್ರದರ್ಶನ ಮಾಡಿದ್ದು. ಟಿಕೇಟ್ ಇಟ್ಟಿಲ್ವಾ. ಡೊನರ್ ಪಾಸ್ ಕೊಟ್ಟಿಲ್ವಾ, ಆನೆಯ ಪ್ರಸಿದ್ದಿಯಿಂದಾಗಿ ಜನ ಬಂದು ಥೇಯಟರ್ ತುಂಬಿಲ್ವಾ.. ಮತ್ತೆಂತಹುದು ಪಿರಿಪಿರಿ ನಿಮ್ಮದು.

ಸಂಘಟಕ : ರೀ ಸ್ವಾಮಿ.. ಆ ಹೊಟ್ಟೆಕಿಚ್ಚಿನ ಜನರ ಹಾಗೇನೇ ನೀವು ಮಾತಾಡ್ತೀರಲ್ರೀ. ನಾವು ಊರೆಲ್ಲಾ ಅಲೆದು ಅವರಿವರನ್ನ ಕಾಡಿ ಬೇಡಿ ಡೋನರ್ ಪಾಸ್ ಮಾರಿದ್ರೂ ಮೂವತ್ತು ಜನ ತಗೊಂಡಿಲ್ಲಾ. ಅವರಿವರಿಗೆ ನಮಗೆ ಬೇಕಾದವರಿಗೆ ನಾವೇ ಪುಕ್ಸಟ್ಟೆ ಪಾಸ್ ಕೊಟ್ಟು ಬಂದ್ವಿ. ಊರು ತುಂಬಾ ಬ್ಯಾನರ್ ಕಟ್ಟಿದ್ವಿ, ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ವಿ.. ಅದಕ್ಕೂ ಹಣ ಖರ್ಚಾಯಿತು. ಆಗ ಜನ ಬಂದ್ರು. ಖುರ್ಚಿ ತುಂಬಿದ್ರು. ಆದರೆ.. ಬಂದ ಹಣಕ್ಕೆ, ನಿಮ್ಮ ಆನೆಗೆ ಮಾಡಿದ ಖರ್ಚಿಗೆ ನಿನ್ನೆಯಿಂದಾ ಆರು ಜನ ಕೂತು ಲೆಕ್ಕ ಹಾಕಿದ್ಮೇಲೆ ಗೊತ್ತಾಯ್ತು ನಲವತ್ತು ಸಾವಿರ ರೂಪಾಯಿ ನಷ್ಟ ಆಗಿದೆ ಅಂತಾ.. ನಮಗಾದ ನಷ್ಟವನ್ನ ಯಾರ್ರೀ ಈಗ ಕಟ್ಟಿಕೊಡ್ತಾರೆ.

ಮಾವುತ : ಹೌದಾ. ನಿಮಗೆ ಲಾಭ ಬಂದಿಲ್ವಾ. ಮತ್ತೆ ಆ ಮಂದಿ ನಂಗೆ ಪೋನ್ ಮಾಡಿ ಆನೆ ಹೆಸರಲ್ಲಿ ದಾನಿಗಳಿಂದ ಬೇಕಾದಷ್ಟು ಹಣ ಲೂಟಿ ಮಾಡಿದ್ರಿ ಅಂತಾ ಹೇಳಿದ್ರಲ್ಲಾ. ನಿಜವಾಗಿಯೂ ನಿಮಗೆ ಲಾಭ ಬಂದಿಲ್ವಾ..

ಸಂಘಟಕ : ಸುಳ್ಳು  ಲೆಕ್ಕ ಹೇಳೋದಿಕ್ಕೆ ನಾನು ಸರಕಾರವೂ ಅಲ್ಲಾ, ಸರಕಾರಿ ಅಧಿಕಾರಿಯೂ ಅಲ್ಲಾ ಮಾರಾಯ್ರೆ. ನಿಮ್ಮ ಆನೆ ಪ್ರದರ್ಶನ ಮಾಡಿ ಇತ್ತ ಹಣವೂ ಹೋಯ್ತು, ಅತ್ತ ಹೆಸರೂ ಹಾಳಾಯ್ತು. ಎಷ್ಟೊಂದು ಹೆಸರು ಮಾಡಿದ್ದ ನಮ್ಮ ಸಂಘಟನೆ ಆ ಹೊಟ್ಟೆಕಿಚ್ಚಿನವರ ಬಾಯಿಗೆ ಎಲೆಅಡಿಕೆ ಆಯ್ತು.

ಮಾವುತ : ಓಹೋ ಹಾಗೋ.. ಈ ವಿಷಯ ನನಗೆ ಆನೆಯಾಣೆಗೂ ಗೊತ್ತಿರಲಿಲ್ಲ, ಸಾರಿ.. ಅದ್ಯಾರೋ ಹೊಟ್ಟೆಕಿಚ್ಚಿನವರು ಅಂದ್ರಲ್ಲಾ.. ಅವರು ಹೇಳಿದ್ದನ್ನೇ ನಾವು ನಂಬಿ ತಪ್ಪಾಗಿ ತಿಳಕೊಂಡಿದ್ವಿ. ಇದನ್ನೆಲ್ಲಾ ರಂಗಭೂಮಿಗೆ ನೀವು ಮಾಡಿದ ಸೇವೆ ಅನ್ಕೊಳ್ಳಿ. ಚಿಂತೆ ಮಾಡಬೇಡಿ.. ನಮ್ಮ ಆನೆಗೆ ಈಗಲೂ ತುಂಬಾ ಡಿಮ್ಯಾಂಡ್ ಇದೆ. ಇನ್ನೊಂದು ಸಲ ನಿಮ್ಮೂರಿಗೆ ಇಲ್ಲಾ ನಿಮ್ಮ ಅಕ್ಕಪಕ್ಕದ ಪಟ್ಟಣಕ್ಕೆ ಆನೆ ಕಳಿಸಿ ಕೊಡ್ತೀವಿ. ನೀವು ಇನ್ನೊಮ್ಮೆ ನಮ್ಮ ಜಗತ್ಪ್ರಸಿದ್ದ ಆನೆಯನ್ನ ಪ್ರದರ್ಶನ ಮಾಡಿ ಹಣ ಸಂಪಾದನೆ ಮಾಡಿಕೋಬಹುದು. ನಿಮಗೆ ಈಗಾದ ನಷ್ಟ ತುಂಬಿಕೊಂಡು ಲಾಭಾನೂ ಮಾಡ್ಕೋಬಹುದು.

ಸಂಘಟಕ : ಅಯ್ಯೋ.. ಆನೆಸ್ವಾಮಿ.. ಬೇಡಾಸ್ವಾಮಿ.. ನಿಮ್ಮ ಆನೆ ಪಾದ ಇಟ್ಟಲ್ಲೆಲ್ಲಾ ನಷ್ಟ ಅಂತಾ ಎಲ್ಲಾಕಡೆ ಹೇಳ್ತಿದ್ದಾರೆ. ಬೆಳಗಾವಿಗೆ ಆನೆ ಕಳಿಸಿದ್ರಿ, ಸಂಘಟಕರಿಗೆ ನಲವತ್ತೈದು ಸಾವಿರ ಗೋವಿಂದ.. ದಾವಣಗೆರೆಗೆ ಆನೆ ಹೋಯ್ತು, ರಂಗಸಂಘಟಕರ ಮೂವತ್ತೈದು ಸಾವಿರ ಹಣ ಮುಂಡಾಮೋಚ್ತು. ಎಲ್ಲೆಲ್ಲಿ ನಿಮ್ಮ ಬಿಳಿಯಾನೆ ಹೋಗಿ ತನ್ನ ಭೀಮಪಾದ ಊರಿದೆಯೋ ಅಲ್ಲೆಲ್ಲಾ ಲಾಭ ಬಿಡಿ ಆದ ನಷ್ಟ ಭರಿಸೋದು ಕಷ್ಟ ಆಗಿದೆ. ಇನ್ನೊಮ್ಮೆ ಈ ನಿಮ್ಮ ಸರಕಾರಿ ಐರಾವತದ ಸಹವಾಸವೇ ಬೇಡಾ ಅಂತಾ ಎಲ್ಲರೂ ಅಂಬೋ ಅಂತಿದ್ದಾರೆ. ನೀವು ಬ್ಯಾಡಾ.. ನಿಮ್ಮ ಸಹವಾಸವೂ ಬೇಡಾ.. ನಿಮ್ಮ ಆನೆ ನಿಮ್ಮಲ್ಲೆ ಇರಲಿ. ನಿಮಗೂ ನಿಮ್ಮ ಆನೆಗೂ ಒಂದೊಡ್ಡ ನಮಸ್ಕಾರಾ..

ಮಾವುತ : ರೀ.. ರೀ... ಥತ್.. ಕಟ್ಟೇ ಮಾಡ್ಬಿಟ್ನಲ್ಲಾ. ಇದೊಳ್ಳೆ ಸರಕಾರಿ ಆನೆ ಸಹವಾಸ ಆಯ್ತಲ್ಲಾ ನನಗೆ. ಇದನ್ನ ಇದ್ದಲ್ಲೇ ಕಟ್ಟೋ ಹಾಗಿಲ್ಲಾ. ಊರೂರಿಗೆ ಕಳಿಸಿ ಪ್ರದರ್ಶನ ಮಾಡದೇ ಬಿಡೋಹಂಗಿಲ್ಲಾ. ಕಟ್ಟಿದ್ರೆ ರಂಗಕರ್ಮಿಗಳು, ಪತ್ರಕರ್ತರು ಉಗೀತಾರ. ಪ್ರದರ್ಶನ ಮಾಡೋಕೆ ಕಳಿಸಿದ್ರೆ ಸಂಘಟಕರು ಲಾಸೋ ಲಾಸು ಅಂತಾರೆ. ಏನೂ ಮಾಡದೇ ಹೋದ್ರೆ ಸರಕಾರಿ ಅಧಿಕಾರಿಗಳು ಗರಂ ಆಗ್ತಾರೆ.. ಏನಪ್ಪಾ ಮಾಡೋದು.. ಮೈಸೂರಿನ ರಂಗಾಯಣೇಶ್ವರಾ..  

-ಶಶಿಕಾಂತ ಯಡಹಳ್ಳಿ







4 ಕಾಮೆಂಟ್‌ಗಳು:

  1. ಒಳ್ಳೆಯ ಪ್ರಹಸನ ಬರೆದಿರಿ ಯಡಹಳ್ಳಿ ಅವರೇ ಕಂಗ್ರಾಟ್ಸ್. ರಂಗಾಯಣ ಬಂದು ಉಳಿದವರ ನಾಟಕ ಬಂದು.ಸರ್ಕಾರ ಕೈ ಹಾಕಿದ್ದೆಲ್ಲ ಹಿಂಗ ಒಳ್ಳೆಯ ಆಶಯ ಈಡೇರುವದಿಲ್ಲ ಬಿಳಿ ಆನೆ ಬಗ್ಗೆ ಬೀದಿ ನಾಟಕ ಮಾಡಬಹುದು.

    ಪ್ರತ್ಯುತ್ತರಅಳಿಸಿ
  2. ಬಿಳಿ ಆನೆ ಮತ್ತು ಐರಾವತ ಎರಡನ್ನೂ ಸಾಕಬೇಕಂದ್ರೆ ಒಂದು ದೇಶವೇ ಹಡಾಲೆದ್ದು ಹೋಗುವಾಗ! ಬಡ ಸಂಘಟಕರ ಪಾಡೇನು? ಚೆನ್ನಾಗಿದೆ ಪ್ರಹಸನ.ವಂದನೆಗಳು.

    ಪ್ರತ್ಯುತ್ತರಅಳಿಸಿ
  3. 😅😅😅😅😅😅😅😅😅😅😅😅😅😅😅😅😂😂😂😂😂😂😂😂😂😂😂😂😂😂😂

    ಪ್ರತ್ಯುತ್ತರಅಳಿಸಿ