ಸೋಮವಾರ, ಏಪ್ರಿಲ್ 13, 2015

ಕಣ್ಮನ ಸೆಳೆಯುವ ದೃಶ್ಯಕಾವ್ಯ “ಕರ್ಣಭಾರ”:





ಭಾಸಕವಿಯ ಕರ್ಣಭಾರ ರೂಪಕವು ಮಹಾಭಾರತದ ದುರಂತ ಪಾತ್ರವಾದ ಕರ್ಣನ ತಲ್ಲಣಗಳನ್ನು ಚಿತ್ರಿಸುತ್ತದೆ. ರೂಪಕದೊಳಗಿನ ರಂಗ ಸಾಧ್ಯತೆಗಳನ್ನು ಕಲಾತ್ಮಕವಾಗಿ ವಿಸ್ತರಿಸಿ ದೃಶ್ಯಕಾವ್ಯವೊಂದನ್ನು ಡಾ.ಶ್ರೀಪಾದ ಭಟ್ ರವರು ತುಳು ಭಾಷೆಯಲ್ಲಿ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ. ಸತ್ಯ ಉಡುಪಿರವರು  ತುಳುವಿನಲ್ಲಿ ರಂಗರೂಪಗೊಳಿಸಿದ್ದಾರೆ.  ಮಣಿಪಾಲದ ಸಂಗಮ ಕಲಾವಿದೆರ್ ತಂಡ ನಾಟಕವನ್ನು ನಿರ್ಮಿಸಿದೆ. ಸಂಸ ಬಯಲು ರಂಗಮಂದಿರದಲ್ಲಿ ರಂಗನಿರಂತರ ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ 2015 ಏಪ್ರಿಲ್ 7 ರಂದು ಕರ್ಣಭಾರ ಪ್ರದರ್ಶನಗೊಂಡು ನೋಡುಗರನ್ನು ವಿಸ್ಮಯಗೊಳಿಸಿತು.

ಭಾಸ ಮಹಾಕವಿಯ ಕರ್ಣಭಾರ ಎನ್ನುವ ಕಿರುನಾಟಕಕ್ಕೆ ಅದೇ ಭಾಸನ ಧೂತ ಘಟೋದ್ಘಜ ನಾಟಕದ ಕೆಲವು ಅಂಶಗಳನ್ನು ಕಸಿ ಮಾಡಿ ವಿಶಿಷ್ಟವಾದ ರೂಪಕವೊಂದನ್ನು ಡಾ.ಶ್ರೀಪಾದರು ಕಟ್ಟಿಕೊಟ್ಟಿದ್ದಾರೆ. ಕುರುಕ್ಷೇತ್ರ ಯುದ್ದಕ್ಕೆ ಸಿದ್ಧನಾಗಿ ಹೊರಟಿದ್ದ ಸೇನಾಧಿಪತಿ ಕರ್ಣನು ತನ್ನ ರಥದ ಸಾರಥಿಯಾಗಿದ್ದ ಶಲ್ಯನಿಗೆ ತನ್ನ ಬದುಕಿನ ದುರಂತಗಾಥೆಯನ್ನು ಹೇಳುತ್ತಲೇ ವ್ಯವಸ್ಥೆಯ ಕುತಂತ್ರವನ್ನು ಬಯಲುಗೊಳಿಸುವುದು ನಾಟಕದ ಸಾರವಾಗಿದೆ. ಆದರೆ ಕರ್ಣ ತೆರೆದಿಟ್ಟ ಕಠೋರ ಸತ್ಯಗಳು ಮಾತ್ರ ತಾಯಿ ಗುರು ದೈವದ ಸ್ವಾರ್ಥವನ್ನು ರಂಗದಂಗಳದಲ್ಲಿ ಬೆತ್ತಲುಗೊಳಿಸುತ್ತವೆ.



ಹೆತ್ತು ತೊರೆದ ತಾಯಿ ಕುಂತಿ ಬಂದು ಕರ್ಣನಿಗೆ ತೊಟ್ಟ ಬಾಣವ ಮತ್ತೆ ತೊಡದಿರು ಎಂಬ ವರ ಪಡೆದು ಆತನ ಯುದ್ಧ ಸಾಮರ್ಥ್ಯವನ್ನು ಮಿತಿಗೊಳಿಸಿದರೆ, ಗುರು ಪರುಷರಾಮ ಅಗತ್ಯವಿದ್ದಾಗ ಶಸ್ತ್ರಪ್ರಯೋಗ ಮಂತ್ರಗಳೇ ಮರೆತುಹೋಗಲಿ ಎಂದು ಶಾಪ ಕೊಟ್ಟು ಕರ್ಣನ ಅವನತಿಗೆ ಕಾರಣನಾಗುತ್ತಾನೆ. ತನ್ನ ಮಗ ಅರ್ಜುನನನ್ನು ರಕ್ಷಿಸಲು ತಂತ್ರ ಹೂಡಿದ ಇಂದ್ರದೇವನು ಬ್ರಾಹ್ಮಣ ವೇಷದಲ್ಲಿ ಬಂದು ಕರ್ಣನ ಕವಚ ಕುಂಡಲಗಳನ್ನು ದಾನವಾಗಿ ಪಡೆದು ಕರ್ಣನ ಅವಸಾನಕ್ಕೆ ಪೂರ್ವಸಿದ್ದತೆ ಮಾಡಿಕೊಳ್ಳುತ್ತಾನೆ. ಇದೇ ಇಂದ್ರನೇ ದುಂಬಿಯಾಗಿ ಬಂದು ಕರ್ಣ ಕ್ಷತ್ರೀಯ ಎಂಬುದನ್ನು ಸಾಬೀತು ಪಡಿಸಿ ಪರುಷುರಾಮನ ಶಾಪ ಪ್ರಕರಣಕ್ಕೂ ಪ್ರೇರಕನಾಗುತ್ತಾನೆ. ಹೀಗೆ.... ಕಾಯಬೇಕಾದವರೇ ಕೊಲ್ಲುವ ಕಾರ್ಯಕ್ಕೆ ಕಾರಣೀಭೂತರಾಗಿ ಕರ್ಣನ ಬದುಕನ್ನೇ ಸರ್ವನಾಶಮಾಡಿದ್ದನ್ನು ನಾಟಕ ಪ್ರಶ್ನಿಸುತ್ತದೆ. ನಾಟಕದ ಕರ್ತು ಭಾಸನ ಆಶಯಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಇಡೀ ನಾಟಕವನ್ನು ಮರುವ್ಯಾಖ್ಯಾನ ಮಾಡುವ ಪ್ರಯತ್ನ ಕರ್ಣಭಾರದಲ್ಲಿದೆ.

ಇಡೀ ನಾಟಕದಲ್ಲಿ ನಾಯಕನಾದ ಕರ್ಣ ಕೇಂದ್ರದಲ್ಲಿದ್ದು, ಪರೀಧಿಯಲ್ಲಿ ಕುಂತಿ, ಪರುಷುರಾಮ ಹಾಗೂ ಇಂದ್ರರು ಖಳನಾಯಕರಾಗಿ  ಚಿತ್ರಿತರಾಗಿದ್ದಾರೆ. ಕರ್ಣನ ದೃಷ್ಟಿಕೋನದಲ್ಲಿ ಇಡೀ ನಾಟಕ ಪ್ರಸ್ತುತಗೊಂಡಿದ್ದು ವ್ಯವಸ್ಥೆಯ ಕುತಂತ್ರಕ್ಕೆ ಸಮರ್ಥ ಪ್ರತಿಭಾನ್ವಿತ ಯೋಧನೊಬ್ಬ ಹೇಗೆ ಬಲಿಪಶುವಾಗುತ್ತಾನೆ ಎನ್ನುವುದನ್ನು ಕರ್ಣಭಾರ ನಾಟಕ ಅತ್ಯಂತ ಸೊಗಸಾಗಿ ಬಿಂಬಿಸುತ್ತದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಭಾಸನ ಕರ್ಣನು ಬಾಹ್ಯ ಒತ್ತಡಗಳಿಗಿಂತ ತನ್ನ ಆಂತರಿಕ ಉದಾತ್ತತೆಯ ಅವಿವೇಕತನಕ್ಕೆ ತನ್ನನ್ನು ತಾನೇ ಬಲಿಪಶುವಾಗಿಸಲು ಸಿದ್ಧತೆ ಮಾಡಿಕೊಂಡನೇನೋ ಎನ್ನುವ ಭಾವನೆ ನೋಡುಗರಿಗೆ ಬಾರದೇ ಇರದು. ಯಾಕೆಂದರೆ ಖಳಪಾತ್ರಗಳ ತಂತ್ರಗಾರಿಕೆಯ ಬಗ್ಗೆ ಅರಿವಿದ್ದೂ, ತನ್ನ ಅವಸಾನಕ್ಕೆ ನಡೆಯುತ್ತಿರುವ ಕುತಂತ್ರಗಳ ಕುರಿತು ತಿಳುವಳಿಕೆ ಇದ್ದೂ ಸಹ ಕರ್ಣ ಕೇಳಿದವರಿಗೆ ಕೇಳಿದ್ದನ್ನೆಲ್ಲಾ ಕೊಟ್ಟು ಬರಿದಾಗಿ ಬಲಿಯಾಗಿದ್ದು ಅತಿರೇಕ ಆದರ್ಶವೆನಿಸುತ್ತದೆ. ಮಾತಿಗೆ ಉದಾಹರಣೆಯೊಂದು ಇದೇ ನಾಟಕದಲ್ಲಿದೆ. ಬ್ರಾಹ್ಮಣ ವೇಷದಲ್ಲಿ ಬಂದು ಕವಚ ದಾನ ಪಡೆದಿದ್ದು ಇಂದ್ರನೇ ಎಂದು ಶಲ್ಯ ಎಚ್ಚರಿಸುತ್ತಾನೆ. ತನ್ನ ಕುಕಾರ್ಯದಿಂದ ನಾಚಿಕೆಪಟ್ಟ ಇಂದ್ರ ಒಂದು ಆಯುಧವನ್ನು ತನ್ನ ಧೂತನ ಕೈಯಲ್ಲಿ ಕೊಟ್ಟು ಕಳುಹಿಸಿದಾಗಲೂ ಕರ್ಣ ಅದನ್ನೂ ನಿರಾಕರಿಸುತ್ತಾನೆ. ಎಲ್ಲರಿಂದಲೂ ಹವಿಸ್ಸನ್ನು ದಾನವಾಗಿ ಪಡೆಯುವ ದೇವೆಂದ್ರ ಬಂದು ನನ್ನ ಮುಂದೆ ಭಿಕ್ಷುಕನಂತೆ ಬೇಡಿ ದಾನ ಪಡೆದಿದ್ದಕ್ಕೆ ಕರ್ಣ ಹೆಮ್ಮೆ ಪಡುತ್ತಾನೆ. ಸೋತಿದ್ದು ತಾನಲ್ಲ ಇಂದ್ರ ಎಂದು ಗರ್ವ ಪಡುತ್ತಾನೆ. ಆದರೆ ತನ್ನ ಅವಸಾನಕ್ಕಿಂತಲೂ, ತನ್ನನ್ನೇ ನಂಬಿದ ಕುರುಸೇನೆಯ ಸೋಲಿಗಿಂತಲೂ ಕರ್ಣನಿಗೆ ತನ್ನ ವ್ಯಕ್ತಿಗತ ಪ್ರತಿಷ್ಠೆ, ಹಾಗೂ ವ್ಯಯಕ್ತಿಕ ಕೀರ್ತಿ ಬಲು ಮುಖ್ಯವಾಗಿತ್ತೇನೋ ಎಂಬ ಸಂದೇಹ ನಾಟಕವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತದೆ.

ನಾಟಕದ ಕೊನೆಗೆ ಭಾಸನದ್ದಲ್ಲದ ಸಂದೇಶವನ್ನು ನಿರ್ದೇಶಕ ಶ್ರೀಪಾದರು ಕೊಟ್ಟಿದ್ದಾರೆ. ತಾಯಿ-ಗುರು-ದೈವದ ಬೆಂಬಲವಿಲ್ಲದಿದ್ದರೂ ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಸಶಕ್ತ ಸಂದೇಶವನ್ನು ಸೂತ್ರದಾರನ ಮೂಲಕ ಹೇಳಿಸುತ್ತಾರೆ. ಇದು ನಿಜಕ್ಕೂ ಸಮಾಜಕ್ಕೆ ನಾಟಕ ಕೊಡುವ ಸಕಾರಾತ್ಮಕವಾದ ಸಂದೇಶವಾಗಿದೆ. ನಾಟಕ ಪ್ರದರ್ಶನದ ಉದ್ದೇಶವೂ ಇದೇ ಆಗಿದೆ. ಆದರೆ ಕರ್ಣ ಹಾಳಾಗಿದ್ದು ಅತಿಯಾದ ಆತ್ಮವಿಶ್ವಾಸದಿಂದ. ಮಾತಿಗೆ ಕಟ್ಟುಬಿದ್ದು ತನ್ನಲ್ಲಿರುವ ಪ್ರಭಲವಾದ ಶಸ್ತ್ರಪ್ರಯೋಗ ಸಾಮರ್ಥ್ಯವನ್ನು ಮಿತಿಗೊಳಿಸಿಕೊಂಡುತನ್ನ ಪ್ರಾಣ ರಕ್ಷಣೆಗಿದ್ದ ಕವಚಗಳನ್ನೇ ಶತ್ರುಪಕ್ಷದವರಿಗೆ ದಾನ ಮಾಡಿ... ಕೇವಲ ಆತ್ಮವಿಶ್ವಾಸದಿಂದಲೆ ಗೆಲ್ಲುವೆನೆಂಬ ಅತಿಯಾದ ಆತ್ಮಸ್ತೈರ್ಯವೇ ಕರ್ಣನ ಅವಸಾನಕ್ಕೆ ಕಾರಣವಾಯಿತು. ಆತ್ಮವಿಶ್ವಾಸದ ಆಶಯವನ್ನು ಹೇಳುವ ನಾಟಕ ಅತಿಯಾದ ಆತ್ಮವಿಶ್ವಾಸದಿಂದಾಗಿ ಕರ್ಣನಂತಾ ಕರ್ಣನೇ ಸರ್ವನಾಶವಾಗಿರುವುದನ್ನೂ ತೋರಿಸುತ್ತದೆ.

ಕುಮಾರವ್ಯಾಸ ಭಾರತದಲ್ಲಿ ಕೃಷ್ಣನೇ ಬ್ರಾಹ್ಮಣ ವೇಷದಲ್ಲಿ ಬಂದು ಕವಚಕುಂಡಲಗಳ ದಾನವನ್ನು ಕರ್ಣನಿಂದ ಪಡೆದರೆ, ಭಾಸಕವಿಯ ಕರ್ಣಭಾರದಲ್ಲಿ ಇಂದ್ರನೇ ಹಾರವನ ವೇಷದಲ್ಲಿ ಬಂದು ದಾನ ಪಡೆಯುತ್ತಾನೆ. ಶ್ರೀಪಾದರು ಇಂದ್ರನ ಕಪಟತನವನ್ನು ಹಾಗೂ ಬ್ರಾಹ್ಮಣನ ವಂಚಕತನವನ್ನು ನಾಟಕದಲ್ಲಿ ಲೇವಡಿ ಮಾಡಿದ ರೀತಿಯಂತೂ ಅವಿಸ್ಮರಣೀಯ. ಸ್ವತಃ ಬ್ರಾಹ್ಮಣರಾದ ಶ್ರೀಪಾದ ಭಟ್ರವರು  ಬ್ರಾಹ್ಮಣ್ಯದ ಕುತಂತ್ರವನ್ನು ವಿಡಂಬನಾತ್ಮಕವಾಗಿ ತೋರಿಸಿದ್ದು ಅವರ ಜ್ಯಾತ್ಯಾತೀತ ಮನೋಭಾವಕ್ಕೆ ಸಾಕ್ಷಿಯಾಗಿದೆ. ಭಾಸಕವಿಯು ಇಂದ್ರನನ್ನು ಮಾತ್ರ ವಂಚಕ ಎಂದು ಹೇಳಲು ಕರ್ಣಭಾರದಲ್ಲಿ ಪ್ರಯತ್ನಿಸಿದ್ದರೆಶ್ರೀಪಾದರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬ್ರಾಹ್ಮಣ್ಯದ ವಂಚಕತನದ ಹಲವು ಆಯಾಮಗಳನ್ನು ಅತಿಶಯವಾಗಿಯೇ ಚಿತ್ರಿಸಿದ್ದಾರೆ. ಇದು ನಾಟಕದ ಪ್ರಮುಖವಾದ ಆಕರ್ಷಣೆಯಾಗಿದ್ದು ಗಂಭೀರವಾದ ನಾಟಕ ನಿರೂಪಣೆಯ ನಡುವೆ ಬ್ರಾಹ್ಮಣ ಪ್ರಹಸನವು ಪ್ರೇಕ್ಷಕರಿಗೆ ರಿಲೀಪ್ ನೀಡುವ ಜೊತೆಗೆ ಅಪಾರವಾದ ಮನರಂಜನೆ ಕೊಡುವಲ್ಲಿ ಸಫಲವಾಗಿದೆ.

ಕರ್ಣಭಾರ ನಾಟಕದ ಸೊಗಸಿರುವುದು ಅದರ ಕಲಾತ್ಮಕ ನಿರೂಪನಾ ಕ್ರಮದಲ್ಲಿ. ಅಭಿನಯ, ಹಾಡು, ಸಂಗೀತ ಹಾಗೂ ನೃತ್ಯಗಳ ಹದವಾದ ಸಂಯೋಜನೆಯಲ್ಲಿ. ಚಿಕ್ಕಪುಟ್ಟ ಬದಲಾಯಿಸಬಹುದಾದ ನ್ಯೂನ್ಯತೆಗಳನ್ನು ಹೊರತು ಪಡಿಸಿದರೆ ನಾಟಕವೆಂದರೆ ಹೀಗಿರಬೇಕು ಎಂದು ಹೇಳಬಹುದಾದ ಪ್ರಯೋಗವನ್ನು ಡಾ.ಶ್ರೀಪಾದ ಭಟ್ರವರು ಕಟ್ಟಿಕೊಟ್ಟಿದ್ದಾರೆ. ಮತ್ತೊಮ್ಮೆ ತಮ್ಮ ನಿರ್ದೇಶನದ ಪ್ರತಿಭೆಯನ್ನು ಕರ್ಣಭಾರದಲ್ಲಿ ಸಾಬೀತು ಪಡಿಸಿದ್ದಾರೆ. ರಂಗಭೂಮಿ ಕುರಿತು ಅಕಾಡೆಮಿಕ್ ಶಿಕ್ಷಣ ಪಡೆದ ನಿರ್ದೇಶಕರನ್ನು ಮೀರಿಸುವ ಹಾಗೆ ನಾನ್ಅಕಾಡೆಮಿಕ್ ಪ್ರತಿಭೆ ಡಾ.ಶ್ರೀಪಾದ ಭಟ್ರವರು ನೋಡುಗರನ್ನು ವಿಸ್ಮಯಗೊಳಿಸುವಂತೆ ನಾಟಕವನ್ನು ನಿರ್ದೇಶಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.

ನಾಟಕ ತುಳು ಭಾಷೆಯಲ್ಲಿದ್ದರೂ ಭಾಷೆ ಗೊತ್ತಿಲ್ಲದವರಿಗೂ ಸಹ ದೃಶ್ಯವೈಭವದ ಮೂಲಕವೇ ಸಂವಹನವಾಗುವಂತಿದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ ಅತೀ ಕಡಿಮೆ ಮಾತು ಹಾಗೂ ಹೆಚ್ಚು ಕ್ರಿಯೆಗಳು ನಾಟಕದಾದ್ಯಂತ ಸಕ್ರೀಯವಾಗಿವೆ. ನಾಟಕದಲ್ಲಿರುವ ನಿರಂತರ ಕ್ರಿಯೆ ಹಾಗೂ ಚಲನಶೀಲತೆಗಳು ನೋಡುಗರನ್ನು ಅತ್ತಿತ್ತ ನೋಡಲೂ ಪುರುಸೊತ್ತು ಕೊಡದಂತೆ ಸೆಳೆಯುತ್ತವೆ. ಆದರೆ.... ಕರ್ಣಭಾರವು ಕೆಲವಾರು ಸಾಂಕೇತಿಕ ಭಾರಗಳನ್ನೂ ಸಹ ಸಾಮಾನ್ಯ ಪ್ರೇಕ್ಷಕನ ಮೇಲೆ ಹೇರುತ್ತದೆ. ಯಾರಿಗೆ ಈಗಾಗಲೇ ಮಹಾಭಾರತದ ಕರ್ಣನ ಕಥೆ ಗೊತ್ತಿದೆಯೋ ಅಂತವರು ಮಾತ್ರ ದೃಶ್ಯಗಳನ್ನು ಕಥೆಗೆ ರಿಲೇಟ್ ಮಾಡುತ್ತಾ ಅರ್ಥ್ಯಸಿಕೊಳ್ಳುತ್ತಾ ನಾಟಕ ನೋಡಿ ಖುಷಿಪಡಬಹುದಾಗಿದೆ. ಆದರೆ ಕರ್ಣಭಾರದ ಹಿನ್ನೆಲೆ ಗೊತ್ತಿಲ್ಲದವರಿಗೆ ಇಡೀ ನಾಟಕ ಸಂಪೂರ್ಣವಾಗಿ ಅರ್ಥವಾಗುವುದು ತುಸು ಕಷ್ಟವೇ. ಇದಕ್ಕೆ ಕಾರಣ ನಾಟಕದ ಉಲ್ಟಾಪಲ್ಟಾ ನಿರೂಪಣಾ ಕ್ರಮವಾಗಿದೆ. ವಿಭಿನ್ನ ಕಾಲಘಟ್ಟದಲ್ಲಿ ನಡೆದಿರುವ ಮೂರು ಪ್ರಮುಖ ಘಟನೆಗಳನ್ನು (ಕುಂತಿ, ಪರಶುರಾಮ ಮತ್ತು ಇಂದ್ರ) ಒಂದೇ ಸಮಯಕ್ಕೆ ಪ್ಲಾಶ್ಬ್ಯಾಕ್ ತಂತ್ರದಲ್ಲಿ ತೋರಿಸಿದ್ದು ಒಂದಿಷ್ಟು ಗಲಿಬಿಲಿಯನ್ನುಂಟುಮಾಡಿದರೆ ಕ್ಲೈಮ್ಯಾಕ್ಸನಲ್ಲಿ ರಥದ ಚಕ್ರ ಭೂಮಿಯಲ್ಲಿ ಹೂತಾಗ ಎತ್ತಲು ಪ್ರಯತ್ನಿಸಿದ ಕರ್ಣ ವಿಫಲನಾದ ನಂತರ ಮತ್ತೆ ರಥವೇರಿ ಯುದ್ಧಕ್ಕೆ ಹೊರಡುತ್ತಾನೆ. ಕಥಾಕತಿತ ಕರ್ಣನ ಸಾವನ್ನು ಹಾಗೂ ಸೋಲನ್ನು ತೋರಿಸದೇ ಮತ್ತೆ ಕರ್ಣ ಎಲ್ಲಾ ಸಂಕಷ್ಟಗಳನ್ನು ಮೀರಿ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಯುದ್ದಕ್ಕೆ ಹೊರಡುವುದು ನಾಟಕದ ಸಕಾರಾತ್ಮಕ ಅಂಶವಾದರೂ ಅದು ನಾಟಕದಲ್ಲಿ ಸ್ಪಷ್ಟವಾಗಿ ಮೂಡಿಬಂದಿಲ್ಲದಿರುವುದು ನೋಡುಗರ ಗೊಂದಲಕ್ಕೆ ಕಾರಣವಾದಂತಿದೆ. ನಾಟಕದ ನಿರೂಪನಾ ಕ್ರಮದಲ್ಲಿರುವ ಬೌದ್ದಿಕ ಕಲಾತ್ಮಕ ಅಭಿವ್ಯಕ್ತಿ ನಾಟಕದ ಶಕ್ತಿಯಾದಂತೆಯೇ ಸ್ಪಷ್ಟತೆಯನ್ನು ಸಾಂಕೇತಿಕತೆಯಲ್ಲಿ ಡೈಲ್ಯೂಟ್ ಮಾಡಿರುವುದು ನಾಟಕದ ದೌರ್ಬಲ್ಯವೂ ಆಗಿದೆ. ಆದರೆ....ಕರ್ಣಭಾರ ನಾಟಕದ ದೃಶ್ಯ ಸಾಮರ್ಥ್ಯ ಎಷ್ಟಿದೆ ಎಂದರೆ ಕಥೆಯ ಅರ್ಥವಂತಿಕೆಯ ಸಂವಹನವನ್ನೂ ಮೀರಿ ನಾಟಕವು ದೃಶ್ಯವೈಭವದಲ್ಲಿ ನೋಡುಗರನ್ನು ಹಿಡಿದಿಡುತ್ತದೆ. ಅರ್ಥವಂತಿಕೆ, ಕಥಾನಕತೆ, ತಾತ್ವಿಕತೆ, ತಾರ್ಕಿಕತೆಗಳೆಲ್ಲವನ್ನೂ ಬದಿಗೆ ತಳ್ಳಿ ನಾಟಕ ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಕರೆದುಕೊಂಡು ಹೋಗಿ ತೇಲಿಸುತ್ತದೆ.

ಕರ್ಣಭಾರ ನಾಟಕದಲ್ಲಿ ಅಭಿನಯಕ್ಕೆ ಪೂರಕವಾಗಿ ರಂಗತಂತ್ರಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮತೂಕದ ದೃಶ್ಯಗಳನ್ನು ಸೃಷ್ಟಿಸಿದ್ದು ನಾಟಕದ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಯಕ್ಷಗಾನದ ಕಲಾತ್ಮಕ ಅಂಶಗಳಾದ ಪಾತ್ರ ಚಲನೆ, ದೇಹಭಾಷೆ, ಎನರ್ಜಿ, ಹಿನ್ನೆಲೆ ಸಂಗೀತ ಹಾಗೂ ನೃತ್ಯ ಸಂಯೋಜನೆಗಳು ಇಡೀ ನಾಟಕಕ್ಕೆ ಆಕರ್ಷಣೆಯನ್ನು ತಂದುಕೊಟ್ಟಿವೆ. ಯಾವುದೇ ಒಂದು ನಿರ್ದಿಷ್ಟ ಸಂಗೀತ ಪ್ರಕಾರವನ್ನು ಅಳವಡಿಸದೇ ದೃಶ್ಯದ ಅಗತ್ಯಕ್ಕೆ ತಕ್ಕಂತೆ ಸಂಗೀತದ ಹಲವಾರು ಪ್ರಕಾರಗಳನ್ನು ಬಳಸಿಕೊಂಡು ಸಂಗೀತ ವಿಭಾಗವನ್ನು ನಾಟಕದಲ್ಲಿ ವಿಶಿಷ್ಟವಾಗಿ ಸಂಯೋಜಿಸಿದ ಶ್ರೀಪಾದಭಟ್ರವರು ಹೊಸರೀತಿಯ ರಂಗಸಂಗೀತ ಭಾಷೆಯನ್ನು ರಂಗಭೂಮಿಗೆ ನಾಟಕದ ಮೂಲಕ ಕೊಡಮಾಡಿದ್ದಾರೆ. ಸಂಗೀತದಲ್ಲಿ ರೀತಿಯ ಪ್ರಯೋಗಗಳನ್ನು ಬಿ.ವಿ.ಕಾರಂತರು ಮಾಡಿ ರಂಗಸಂಗೀತಕ್ಕೆ ಹೊಸ ಭಾಷ್ಯವನ್ನು ಕೊಟ್ಟಿದ್ದರು. ಕಾರಂತರ ರಂಗಸಂಗೀತ ಸಾಧ್ಯತೆಯನ್ನು ಶ್ರೀಪಾದರು ಇನ್ನೂ ವಿಸ್ತರಿಸಿ ಕರ್ಣಭಾರವನ್ನು ಹಿನ್ನೆಲೆ ಸಂಗೀತಪ್ರಧಾನ ನಾಟಕವನ್ನಾಗಿಸಿದ್ದಾರೆ. ನಾಟಕದ ಪ್ರಮುಖ ವಿಶೇಷತೆ ಏನೆಂದರೆ ಚಕ್ರತಾಳವನ್ನು ನಾಟಕದಾದ್ಯಂತ ಬಳಸಿರುವುದು ಹಾಗೂ ಕಲಾವಿದರೆ ವೇದಿಕೆಯಲ್ಲಿ ಅದನ್ನು ನುಡಿಸಿರುವುದು. ಚಕ್ರತಾಳದ ಪೋರ್ಸಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಂತೂ ಸುಳ್ಳಲ್ಲ. ಕೇವಲ ಚಕ್ರತಾಳವನ್ನು ಒಂದು ಸಂಗೀತ ವಾಧ್ಯವನ್ನಾಗಿ ಮಾತ್ರ ಬಳಸದೇ ಅದನ್ನು ವಿವಿಧ ಆಯಮಗಳಲ್ಲಿ ನಾಟಕದ ಪ್ರಾಪರ್ಟಿಯಾಗಿ ಬಳಿಸಿದ್ದೇ ಅನನ್ಯವಾದ ಪರಿಕಲ್ಪನೆಯಾಗಿದೆ. ಚಕ್ರತಾಳ ಇಲ್ಲಿ  ಯುದ್ದಾಸ್ತ್ರವಾಗಿ, ಹಸುವಿನ ಕೊಂಬಾಗಿ ಇನ್ನೂ ಏನೇನೋ ಆಗಿ ಸಾಂಕೇತಿಕ ಬಳಕೆಗೊಳಗಾಗಿ ನೋಡುಗರಲ್ಲಿ ವಿಸ್ಮಯವನ್ನು ಸೃಷ್ಟಿಸಿತುಸಂಗೀತವಾದ್ಯವೊಂದನ್ನು ಇಷ್ಟೊಂದು ಬಗೆಯಲ್ಲಿ ರಂಗಪರಿಕರವಾಗಿ ಬಳಸಬಹುದಾದ ಸಾಧ್ಯತೆಗಳನ್ನು ಕರ್ಣಭಾರ ನಾಟಕ ತೋರಿಸಿಕೊಟ್ಟಿತು. ತಾ ತತ್ ತರಿಕಿತ ತತ್ ತಾ...  ಎನ್ನುವ ಹಿಮ್ಮೇಳದ ಆಲಾಪಕ್ಕೆ ತಕ್ಕಂತೆ ನಟರು ಹೆಜ್ಜೆ ಹಾಕುವ ಪರಿಯನ್ನು ನೋಡಿಯೇ ಅನುಭವಿಸಬೇಕು.   ನಾಟಕದ ಪ್ರತಿಯೊಂದು ಚಲನೆಯೂ ಸಹ ಒಂದು ರೀತಿಯ ಮ್ಯೂಸಿಕಲ್ ನೋಟ್ಸ್ ಆಗಿರುವುದು ಹಾಗೂ ಪ್ರತಿಯೊಂದು ಪ್ರೇಮ್ ಸಹ ಕಲಾತ್ಮಕವಾಗಿ ಚಿತ್ರಿತವಾಗಿರುವುದು ನಿರ್ದೇಶಕರ ಕ್ರಿಯಾಶೀಲತೆ ಹಾಗೂ ರಂಗಬದ್ದತೆಗೆ ಸಾಕ್ಷಿಯಾಗಿವೆ. ರಂಗಸಂಗೀತದಲ್ಲಿ ಹಿಮ್ಮೇಳ ಅದರಲ್ಲೂ ಚಂಡೆ ವಾದ್ಯದ ಬಳಕೆ ಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡಿತು.

ಅಭಿನಯದಲ್ಲಿ ಪ್ರತಿ ಪಾತ್ರವೂ ತಮ್ಮ ದೇಹಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡಿವೆ. ವಾಚಿಕಾಭಿನಯ ತುಂಬಾ ಕಡಿಮೆ ಇರುವುದರಿಂದ ಆಂಗಿಕಾಭಿನಯದಲ್ಲೇ ನಾಟಕವನ್ನು ಸಂವಹನಮಾಡುವ ಅನಿವಾರ್ಯತೆ ಕಲಾವಿದರದ್ದಾಗಿದ್ದು ಅದರಲ್ಲಿ ಬಹುತೇಕ ಎಲ್ಲಾ ಕಲಾವಿದರೂ ಯಶಸ್ವಿಯಾಗಿದ್ದಾರೆ. ಕರ್ಣನ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ ದಿವಾಕರ್ ಕಟೀಲುರವರ ನಟನೆ ಹಾಗೂ ಶಲ್ಯನಾಗಿ ಸಂದೀಪ್ ಪೆರ್ಡೂರ್ರವರ ಅಭಿನಯ ಸಾಮರ್ಥ್ಯ ಗಮನಸೆಳೆಯುವಂತಿತ್ತು. ನಾಟಕದಲ್ಲಿ ತಮ್ಮ ವಿಚಿತ್ರ ಹಾಗೂ ವಿಶಿಷ್ಟ ಅಭಿನಯದಿಂದ ಹಾಸ್ಯದ ಹೊನಲನ್ನು ಹರಿಸುವಲ್ಲಿ ಬ್ರಾಹ್ಮಣ ಪಾತ್ರಧಾರಿ ಪ್ರಶಾಂತ್ ಉದ್ಯಾವರ ಯಶಸ್ವಿಯಾದರು. ಇಂದ್ರನಾಗಿ ಭೂಷನ್ ನಟನೆ ಪಾತ್ರೋಚಿತವಾಗಿದ್ದು ಇಂದ್ರನ ದೂತನ ನಟನೆ ಮಾತ್ರ ರೊಬೋಟ್ ಮಾದರಿಯಲ್ಲಿದ್ದು ವೇಶಕ್ಕೂ ಅಭಿನಯಕ್ಕೂ ಸಂಬಂಧವೇ ಇರದಂತಿತ್ತು. ಚಕ್ರತಾಳದ ಗುಂಪಿನ ಎಲ್ಲಾ ಕಿರಿಯ ನಟಿಯರ ಚಲನೆಯಲ್ಲಿದ್ದ ಪೋರ್ಸ ಹಾಗೂ ಚಕ್ರತಾಳ ಬಳಕೆಯಲ್ಲಿದ್ದ ಕೌಶಲ ನಾಟಕದಲ್ಲಿ ಪ್ರಮುಖವಾಗಿ ಎದ್ದು ಕಾಣಿಸುವಂತಿತ್ತು. ದುರಂತ ನಾಯಕ ಕರ್ಣನ ಭಾವತೀವ್ರತೆಯ ಕೊರತೆಯನ್ನು ಅಭಿನಯ ಹಾಗೂ ಇತರೇ ರಂಗತಂತ್ರಗಳು ಮರೆಸಿ ಮೆರೆಯುತ್ತವೆ.  
         
ನಾಟಕ ಮೊದಲ ನೋಟಕ್ಕೆ ಗಮನ ಸೆಳೆಯುವುದು ದಾಮೋದರ ನಾಯ್ಕರವರ ರಂಗವಿನ್ಯಾಸದಿಂದಾಗಿ. ಸೆಟ್ ಅದೆಷ್ಟು ಸಾಂಕೇತಿಕವಾಗಿ ಹಾಗೂ ಕಲಾತ್ಮಕವಾಗಿ ಮೂಡಿಬಂದಿದೆ ಎಂದರೆ ಅದು ಇಡೀ ನಾಟಕದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಹತ್ತುವ ಮೆಟ್ಟಿಲ ಅಕ್ಕಪಕ್ಕದಲ್ಲಿ ರಥದ ಎರಡು ಗಾಲಿಗಳು ಹಾಗೂ ಎಡಬಲಕ್ಕೆ ಪ್ಲಾಟ್ ಪಾರಂಗಳು ಇಷ್ಟೇ ನಾಟಕದಲ್ಲಿ ಬಳಸಲಾದ ಸ್ಥಿರ ಸೆಟ್ಗಳಾಗಿದ್ದರೂ ಪ್ರತಿಯೊಂದು ದೃಶ್ಯಕ್ಕೂ ಹಲವು ಆಯಾಮಗಳಲ್ಲಿ ಬಳಕೆಯಾಗಿದ್ದು ನಾಟಕದ ಸೌಂದರ್ಯವನ್ನು ಹೆಚ್ಚಿಸಿದೆ. ಪ್ರತಿ ಪಾತ್ರದ ವಸ್ತ್ರಾಲಂಕಾರವನ್ನು ನೋಡುವುದೇ ಒಂದು ಚೆಂದ. ಸೆಟ್ ಹಾಗೂ ಕಾಸ್ಟ್ರೂಮ್ಗಳ ಮೇಲೆ ಬಣ್ಣಬಣ್ಣದ ಬೆಳಕು (ಬೆಳಕಿನ ವಿನ್ಯಾಸ ರಾಜು ಮಣಿಪಾಲ) ಬಿದ್ದು ಪ್ರತಿ ದೃಶ್ಯಗಳೂ ಶ್ರಿಮಂತವಾಗಿ ಮೂಡಿಬಂದಿವೆ. ಆದರೆ ಯಕ್ಷಗಾನದ ರಾಕ್ಷಸ ಪಾತ್ರದಂತೆ ಕಾಣುವ ಇಂದ್ರನ ಧೂತನ ಗೆಟಪ್ ಮಾತ್ರ ಇಡೀ ನಾಟಕದಲ್ಲಿ ಆಭಾಸಕಾರಿಯಾಗಿದೆ. ಪಂಜುಗಳ ಬಳಕೆ ಅದರ ಮಂದ ಬೆಳಕು ದೃಶ್ಯಕ್ಕೆ ಅಂದವನ್ನು ತಂದಿದೆ. ಆದರೆ.... ಹಿಂದೆ ಬಿಳಿ ಪರದೆ (ಸೈಕ್) ಇತ್ತಾದರೂ ಅದನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿತ್ತು. ದೃಶ್ಯದ ಮೂಡಿಗೆ ತಕ್ಕಂತೆ ಸೈಕ್ ತನ್ನ ಬಣ್ಣ ಬದಲಿಸಿದ್ದರೆ ನಾಟಕದ ನೋಟ ಇನ್ನೂ ಹೆಚ್ಚು ಅರ್ಥಪೂರ್ಣವಾಗಬಹುದಾಗಿತ್ತು. ಕೊನೆಗೂ ಸೈಕ್ ಬಳಕೆಯ ಕೊರತೆ ನಾಟಕದ ಒಂದು ನ್ಯೂನ್ಯತೆಯಾಗಿಯೇ ಉಳಿಯಿತು.
   
ಪಸ್ತುತ ಪ್ರಯೋಗದಲ್ಲಿ ಮಾಸ್ಕ್ ನ್ಯೂನ್ಯತೆಯನ್ನು ಸರಿಪಡಿಸಲೇಬೇಕಾಗಿತ್ತು. ಅಭಿಮನ್ಯು ಯುದ್ದಪ್ರಕರಣದಲ್ಲಿ ನೋಡುಗರಿಗೆ ಅಭಿಮನ್ಯು ಕಾಣಿಸದೇ ಆತನ ಸುತ್ತಲೂ ಸೈನಿಕರೇ ವಿಜ್ರಂಭಿಸುವುದು ಆಭಾಸವೆನಿಸಿತು. ಚಕ್ರತಾಳದ ಗುಂಪು ಸಹ ವೇದಿಕೆಯ ಮುಂಬಾಗದಲ್ಲಿ ಸಾಲಾಗಿ ನಿಂತಿದ್ದರಿಂದ ಪ್ರೇಕ್ಷಾಗ್ರಹದ ಎಡ ಹಾಗೂ ಬಲಭಾಗದ ಪ್ರೇಕ್ಷಕರಿಗೆ ವೇದಿಕೆಯ ನಡುವೆ ನಡೆಯುವ ಕರ್ಣ ಹಾಗೂ ಶಲ್ಯರ ಮಹತ್ವದ ಅಭಿನಯ ಕಾಣದೇ ಹೋಯಿತು. ಗುಂಪು ಬಳಕೆಯಲ್ಲಿ ನಿರ್ದೇಶಕರು ಇನ್ನಷ್ಟು ಮುತುವರ್ಜಿ ವಹಿಸಿದರೆ ನ್ಯೂನ್ಯತೆಯನ್ನು ತಡೆಯಬಹುದಾಗಿದೆ ಹಾಗೂ ಪ್ರತಿ ದೃಶ್ಯ ಹಾಗೂ ಪಾತ್ರದ ಅಭಿನಯವನ್ನು ಪ್ರೇಕ್ಷಕರಿಗೆ ಅಡೆತಡೆ ಇಲ್ಲದಂತೆ ಮುಟ್ಟಿಸಬಹುದಾಗಿದೆ.


 ಇದನ್ನು ಹೊರತು ಪಡಿಸಿ ನೋಡಿದರೆ, ಪ್ರತಿಯೊಂದು ದೃಶ್ಯ ಸಂಯೋಜನೆಯೂ ಅನನ್ಯವಾಗಿವೆ. ಅಭಿಮನ್ಯುವಿನ ಚಕ್ರವ್ಯೂಹ ಪ್ರವೇಶ ಹಾಗೂ ಸಾಂಕೇತಿಕ ಹತ್ಯೆ, ಇಂದ್ರ ದುಂಬಿಯಾಗುವ ಹಾಗೂ ಬ್ರಾಹ್ಮಣನಾಗಿ ರೂಪಾಂತರ ಹೊಂದುವ ದೃಶ್ಯ ಸಂಯೋಜನೆ, ಕರ್ಣ ಹಾಗೂ ಶಲ್ಯರ ರಥದ ಸಂಚಲನತೆ, ಯುದ್ಧದ ದೃಶ್ಯಸೃಷ್ಟಿಗಳು ನಾಟಕವನ್ನು ಆಕರ್ಷಣೀಯವಾಗಿಸಿವೆ. ಅದರಲ್ಲೂ ಬ್ರಾಹ್ಮಣ ದಾನ ಕೇಳಲು ಬಂದಾಗ ಹಸುಗಳು, ಅಶ್ವಗಳು, ಆನೆಗಳನ್ನು ಗುಂಪು ಬಳಕೆ ಹಾಗೂ ಚಕ್ರತಾಳದ ಸಹಾಯದಿಂದ ಸಂಯೋಜಿಸಿದ ರೀತಿಯಂತೂ ಮರೆಯಲು ಸಾಧ್ಯವೇ ಇಲ್ಲದಂತಹ ದೃಶ್ಯವಾಗಿವೆ. ಬರೀ ಮಾತಲ್ಲಿ ಹೇಳಬಹುದಾದದ್ದನ್ನೆಲ್ಲಾ ದೃಶ್ಯ ಸಂಯೋಜನೆಯ ಮೂಲಕವೇ ತೋರಿಸುವ ನಿರ್ದೇಶಕರ ಸೃಜನಶೀಲತೆ ನಿಜಕ್ಕೂ ಅಭಿನಂದನಾರ್ಹವಾಗಿದೆ. ಇನ್ನೊಂದು ವಿಶೇಷತೆ ಏನೆಂದರೆ   ನಾಟಕದ ನಿರ್ದೇಶನ ಮಾಡಿದ ಡಾ.ಶ್ರಿಪಾದ ಭಟ್ರಿಗೆ ತುಳು ಭಾಷೆಯ ಗಂಧಗಾಳಿ ಗೊತ್ತಿಲ್ಲ. ಸದಾ ದುಭಾಷಿಯನ್ನಿಟ್ಟುಕೊಂಡೇ ಇಡೀ ನಾಟಕವನ್ನು ಅದ್ಭುತವಾಗಿ ಕಟ್ಟಿಕೊಟ್ಟ ರೀತಿ ವಿಶೇಷವೆನಿಸುತ್ತದೆ. ಕ್ರಿಯಾಶೀಲ ನಿರ್ದೇಶಕನಿಗೆ ಭಾಷೆಗಿಂತಲೂ ರಂಗಭಾಷೆ, ಅಂಗಭಾಷೆ, ಸಂಗೀತ ಭಾಷೆ  ಪ್ರಮುಖವಾಗುತ್ತದೆ ಎನ್ನುವುದಕ್ಕೆ ತುಳು ಬರದ ಶ್ರೀಪಾದರು ತುಳುವಿನಲ್ಲಿ ನಾಟಕವನ್ನು ನಿರ್ದೇಶಿಸಿದ್ದೇ ಪುರಾವೆಯಾಗಿದೆ.
  
ಕರ್ಣಭಾರ ಯಾಕೆ ಭಾಷಾತೀತವಾಗಿ ಜನರನ್ನು ಆಕರ್ಷಿಸಿತು? ಅದಕ್ಕೆ ಪ್ರಮುಖ ಕಾರಣ ನಾಟಕದೊಳಗಿನ ಈಸ್ತಟಿಕ್ ಸೆನ್ಸ್ ಮತ್ತು ದೃಶ್ಯ ಸೃಷ್ಟಿಯಲ್ಲಿನ ಸಿನಿಮಿಯಾಟಿಕ್ಸ್. ನಾಟಕದ ಎಲ್ಲಾ ವಿಭಾಗದಲ್ಲೂ ಸಹ ರಂಗಶಿಸ್ತು ಹಾಗೂ ಸೌಂದರ್ಯ ಪ್ರಜ್ಞೆ ಎದ್ದು ಕಾಣಿಸುತ್ತದೆ. ರೀತಿಯ ರಂಗತಂತ್ರ ಬಳಕೆಯಲ್ಲಿ ಪ್ರಸ್ತುತ ರಂಗಭೂಮಿಯಲ್ಲಿ ಶ್ರೀಪಾದ ಭಟ್ಟರಿಗೆ ಶ್ರೀಪಾದ ಭಟ್ಟರೇ ಹೋಲಿಕೆಯಾಗಿದ್ದಾರೆ. ಬಿ.ವಿ.ಕಾರಂತರ ನಂತರ ಸಿನಿಮಿಯಾಟಿಕ್ಸ ತಂತ್ರಗಳನ್ನು ವ್ಯಾಪಕವಾಗಿ ಬಳಸುವ ಹಾಗೂ ಪ್ರತಿಯೊಂದು ರಂಗವಿಭಾಗದಲ್ಲೂ ಸೌಂದರ್ಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ನಿರ್ದೇಶಕ ಡಾ.ಶ್ರೀಪಾದ ಭಟ್ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಬಹುದಿನಗಳ ಕಾಲ ಕರ್ಣಭಾರ ರೂಪಕವು ನೋಡುಗರನ್ನು ಕಾಡದೇ ಬಿಡುವುದಿಲ್ಲ.  

                                 -ಶಶಿಕಾಂತ ಯಡಹಳ್ಳಿ



ಸಂಗಮ್ ಕಲಾವಿದೆರ್ ಮಣಿಪಾಲ (ರಿ) : ಕಳೆದ 15 ವರ್ಷಗಳಿಂದಲೂ ಈ ರಂಗತಂಡ ಪ್ರಯೋಗಶೀಲ ರಂಗಪ್ರಯೋಗಗಳಿಂದ ಗಮನಸೆಳೆದಿದೆ. ಮುಖ್ಯವಾಗಿ ತುಳು ರಂಗಭೂಮಿಯ ಕರಾವಳಿ ಭಾಗದ ಸಮಸ್ಯೆಗಳಿಗೆ ರಂಗಭೂಮಿಯ ಮೂಲಕ ಸ್ಪಂದಿಸಿದೆ. ಮೋಲಿಯೇರ್, ಟಾಗೋರ್, ತೇಜಸ್ವಿ, ಉದಯ್ ಪ್ರಕಾಶರಂತಹ ಖ್ಯಾತ ಬರಹಗಾರರನ್ನು ತುಳುವಿಗೆ ಪರಿಚಯಿಸುವ ಪ್ರಯತ್ನ ನಡೆಸುತ್ತಿದೆ.  ಅಂತೆಯೇ ಭಾಸ ಮಹಾಕವಿಯ ಅಭಿಜಾತ ರಂಗಪ್ರಯೋಗಗಳನ್ನು ತುಳುವಿನಲ್ಲಿ ಕೈಗೆತ್ತಿಕೊಂಡು ರಂಗಪರಂಪರೆಗಳ ಕೊಂಡಿಗಳನ್ನು ಬೆಸೆಯುವ ಪ್ರಯತ್ನದಲ್ಲಿದೆ. ಜೊತೆಗೆ ಮಕ್ಕಳ ರಂಗಭೂಮಿಯಲ್ಲೂ ಸಹ ಸಾಧ್ಯವಾದಷ್ಟು ಕೆಲಸ ಮಾಡುತ್ತಿದೆ.


ಡಾ.ಶ್ರೀಪಾದ ಭಟ್
ನಿರ್ದೇಶಕ ಡಾ.ಶ್ರೀಪಾದ ಭಟ್ :  ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿರುವ ಶ್ರೀಪಾದ ಭಟ್ ರವರು ರಂಗಪ್ರವೃತ್ತಿಯನ್ನೇ ಪ್ರಮುಖವಾಗಿ ತೆಗೆದುಕೊಂಡು  ಆಧುನಿಕ ಕನ್ನಡ ರಂಗಭೂಮಿಯಲ್ಲಿ ಪ್ರಮುಖ ರಂಗನಿರ್ದೇಶಕರಾಗಿ ಹೆಸರು ಪಡೆದಿದ್ದಾರೆ. ಶಿಕ್ಷಣ, ಸಾಹಿತ್ಯ, ಜಾನಪದ, ಸಂಗೀತ ಕ್ಷೇತ್ರಗಳಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ರಂಗನಾಟಕ, ಬೀದಿನಾಟಕ, ಮಕ್ಕಳ ನಾಟಕಗಳೂ ಸೇರಿದಂತೆ ರಂಗಭೂಮಿಯ ಹಲವು ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಅಪರೂಪದ ನಾಟಕಗಳನ್ನು ಕನ್ನಡ ರಂಗಭೂಮಿಗೆ ಕೊಟ್ಟಿದ್ದಾರೆ. ಇವರ ನಿರ್ದೇಶನದ ಪ್ರತಿಭೆಗಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳು ದೊರಕಿವೆ. ಇವರ ನಿರ್ದೇಶನದ ಕಂಸಾಯಣ, ಮಕ್ಕಳ ಟ್ಯಾಗೋರ್, ರೆಕ್ಕೆ ಕಟ್ಟುವಿರಾ, ಮತ್ತು ಕರ್ಣಭಾರ ನಾಟಕಗಳು  ರಾಷ್ಟ್ರೀಯ ನಾಟಕ ಶಾಲೆಯ ರಂಗಭಾರತಿ ಉತ್ಸವದಲ್ಲಿ ಪ್ರದರ್ಶನಗೊಂಡಿವೆ. ಡಾ.ಶ್ರೀಪಾದರಿಗೆ ಶಿಕ್ಷಣ ಸಿರಿ ರಾಜ್ಯಪ್ರಶಸ್ತಿ, ಕರ್ನಾಟಕ ಸರ್ಕಾರದ ಉತ್ತಮ ಶಿಕ್ಷಕ ಪ್ರಶಸ್ತಿ, ನಾಟಕ  ಅಕಾಡೆಮಿಯ ಸಿಜಿಕೆ ಪ್ರಶಸ್ತಿ, ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿಗಳು ಲಭಿಸಿವೆ. ಇವರ 'ಬಹುಭೂಮಿಕೆ' ಹಾಗೂ 'ಉತ್ತರ ಕನ್ನಡದ ಜನಪದ ರಂಗಭೂಮಿ' ಕೃತಿಗಳು ಪ್ರಕಟಗೊಂಡಿವೆ. ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.    
                    
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ