ಶನಿವಾರ, ಮೇ 7, 2016

ಕಲಬುರ್ಗಿ ರಂಗಾಯಣದ ಕರ್ಮಕಾಂಡ :


ಹುಡುಗಿ ಹಠಾವೋ, ರಂಗಾಯಣ ಬಚಾವೋ...

ಧರಣಿ ನಿರತ ರಂಗಾಯಣದ ಕಲಾವಿದರುಗಳು

ಕನ್ನಡಿಗರ ಹೆಮ್ಮೆಯ ರಂಗಸಂಸ್ಥೆಯಾಗಿ ರಂಗಾಯಣ ಬೆಳೆಯಬೇಕು, ಕರ್ನಾಟಕದ ನಾಲ್ಕು ಪ್ರಮುಖ ಪ್ರಾಂತ್ಯಗಳಲ್ಲಿ ತನ್ನ ಶಾಖೆಯನ್ನು ಹೊಂದಿ ರಂಗಭೂಮಿಯನ್ನು ಅದು ಶ್ರೀಮಂತಗೊಳಿಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ರಂಗದಿಗ್ಗಜರಾದ ಬಿ.ವಿ.ಕಾರಂತರು ಹೊಂದಿದ್ದರು.  1989ರಲ್ಲಿ ಮೈಸೂರಲ್ಲಿ ರಾಜ್ಯ ಸರಕಾರದ ಮೊದಲ ವೃತ್ತಿಪರ ರೆಪರ್ಟರಿಯಾಗಿ ರಂಗಾಯಣ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಸರಕಾರವೂ ಸಹ ಕೊಟ್ಯಾಂತರ ರೂಪಾಯಿ ಹಣವನ್ನು ರಂಗಾಯಣಕ್ಕೆ ಕೊಡಮಾಡುತ್ತಲೇ ಬಂದಿತು. ಕಾರಂತರಿದ್ದಾಗ ಅವರ ನಿರ್ದೇಶಕತ್ವದಲ್ಲಿ  ಮೈಸೂರಿನಲ್ಲಿ ರಂಗಾಯಣವು ಅಸ್ಥಿತ್ವಕ್ಕೆ ಬಂದು ಅನೇಕಾನೇಕ ವಿಶಿಷ್ಟ ರಂಗಪ್ರಯೋಗಗಳನ್ನು  ಮಾಡಿತು. ಕಾರಂತರ ಕಾಲಾನಂತರ ರಂಗಕರ್ಮಿಗಳ ಒತ್ತಾಯಕ್ಕೆ ಮಣಿದ ಸರಕಾರವು ಶಿವಮೊಗ್ಗ, ಧಾರವಾಡ ಹಾಗೂ ಕಲಬುರ್ಗಿಯಲ್ಲಿ ರಂಗಾಯಣವನ್ನು ಆರಂಭಿಸಲು ಅನುಮತಿಯನ್ನಿತ್ತು ಬೇಕಾದಷ್ಟು ಅನುದಾನವನ್ನು ಬಿಡುಗಡೆ ಮಾಡಿ ಸಾಕಷ್ಟು ವಿಳಂಬದ ನಂತರ ಪ್ರತಿಯೊಂದು ರಂಗಾಯಣಕ್ಕೂ ನಿರ್ದೇಶಕರನ್ನು ನಿಯಮಿಸಿತು. ಈ ಎಲ್ಲಾ ರಂಗಾಯಣದ ಆರ್ಥಿಕತೆಯ ನಿಯಂತ್ರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಂಡಿತು. ಆಡಳಿತಾತ್ಮಕ ನೀತಿ ನಿರ್ಧಾರವನ್ನು ತೆಗೆದುಕೊಳ್ಳುವ ಹೊಣೆಗಾರಿಕೆಯನ್ನು ನಿರ್ವಹಿಸಲು 1994 ರಲ್ಲಿ ರಂಗಸಮಾಜವನ್ನು ಹುಟ್ಟುಹಾಕಲಾಯಿತು.


ರಂಗದಿಗ್ಗಜ ಬಿ.ವಿ.ಕಾರಂತ
ಅಂತರಾಷ್ಟ್ರೀಯ ಮಟ್ಟದಲ್ಲಿ ರಂಗಾಯಣವನ್ನು ಕಟ್ಟಿ ಬೆಳೆಸುವ ಬಿ.ವಿ.ಕಾರಂತರ ಮಹತ್ವಾಂಕಾಂಕ್ಷೆ ಈಡೇರಿತಾ...? ಕರ್ನಾಟಕದ ರಂಗಾಸಕ್ತರು ಕಂಡ ಕನಸು ನನಸಾಯಿತಾ...? ಸಮಸ್ತ ಜನತೆಯ ತೆರಿಗೆ ಹಣ ಸಾರ್ಥಕವಾಗಿ ಉಪಯೋಗವಾಯಿತಾ..? ವಿಶಿಷ್ಟ ರಂಗಚಟುವಟಿಕೆಗಳಿಗೆ ರಂಗಾಯಣಗಳು ದೇಶಕ್ಕೆ ಮಾದರಿಯಾದವಾ..? ಎಂದು ಪ್ರಶ್ನಿಸಿಕೊಂಡರೆ ಉತ್ತರ ಮಾತ್ರ ನಕಾರಾತ್ಮಕವಾಗಿಯೇ ಇರುವುದು ವಿಪರ್ಯಾಸಕರವಾಗಿದೆ. ಇಡೀ ದೇಶಕ್ಕೆ ತನ್ನ ರಂಗಕ್ರಿಯೆಗಳಿಂದ ಮಾದರಿಯಾಗಬೇಕಿದ್ದ ರಂಗಾಯಣವು ಯಾವಾಗಲೂ ವಾದ ವಿವಾದ ಹಗರಣಗಳ ಕೇಂದ್ರವಾಗುತ್ತಿರುವುದು ರೇಜಿಗೆ ಹುಟ್ಟಿಸುವಂತಿದೆ. ಮೊದಲು ಇದ್ದ ಒಂದೇ ರಂಗಾಯಣದಲ್ಲೇ ಕಲಾವಿದರ ಅಸಹಕಾರ, ನಿರ್ದೇಶಕರುಗಳ ಅಸಹಾಯಕತೆ, ರಂಗಸಮಾಜದ ನಿರ್ಲಿಪ್ತತೆ,  ಸರಕಾರಿ ಅಧಿಕಾರಿಗಳ ಸರ್ವಾಧಿಕಾರಿ ಮನೋಭಾವಗಳಿಂದಾಗಿ ಮೈಸೂರು ರಂಗಾಯಣ ಕಾಲಕಾಲಕ್ಕೆ ನಕಾರಾತ್ಮಕವಾಗಿ ಸುದ್ದಿ ಮಾಡುತ್ತಲೇ ಬಂದಿದೆ. ನಾಟಕದ ಕ್ರಿಯೆಗಳಿಗಿಂತಾ ನಾಟಕೇತರ ಅಂಶಗಳೇ ರಂಗಾಯಣದಲ್ಲಿ ಮಹತ್ವ ಪಡೆಯುತ್ತಾ ಜನರ ಸಹನೆಯನ್ನು ಕೆಣಕುತ್ತಲೇ ಬಂದಿವೆ. ಇಡೀ  ಕರ್ನಾಟಕವನ್ನು ಪ್ರತಿನಿಧಿಸಿಬೇಕಿದ್ದ ರಂಗಾಯಣವು ಕೊನೆಗೆ ಮೈಸೂರಿಗಷ್ಟೇ ಸೀಮಿತವಾದಾಗ ಕನ್ನಡ ರಂಗಕರ್ಮಿಗಳಿಗೆ ಅಪಾರ ನಿರಾಶೆಯೂ ಆಗಿದೆ.

ರಂಗಾಯಣ ಕೇವಲ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಬಾರದು, ಅದು ಕರ್ನಾಟಕದ ಇನ್ನೂ ಮೂರು ಪ್ರಾಂತ್ಯಗಳಲ್ಲಿ ಕೂಡಾ ಅಸ್ತಿತ್ವಕ್ಕೆ ಬರಬೇಕು ಎನ್ನುವ ಕಾರಂತರ ಆಶಯದಂತೆ ಮೈಸೂರು ರಂಗಾಯಣ (ಮೈಸೂರು), ಕರಾವಳಿ ರಂಗಾಯಣ (ಧಾರವಾಡ) ಮಲೆನಾಡು ರಂಗಾಯಣ (ಶಿವಮೊಗ್ಗ) ಹಾಗೂ ಹೈದರಾಬಾದ್ ಕರ್ನಾಟಕ ರಂಗಾಯಣ (ಕಲಬುರಗಿ) ಗಳನ್ನು ಕರ್ನಾಟಕ ಸರಕಾರ ಸ್ಥಾಪಿಸಿತು. ಈ ಇನ್ನೂ ಮೂರು ರಂಗಾಯಣಗಳು ಅಸ್ತಿತ್ವಕ್ಕೆ ಬಂದಾಗಲಾದರೂ ಪ್ರಾದೇಶಿಕ ರಂಗಚಟುವಟಿಕೆಗಳು ಗರಿಗೆದರಬಹುದು ಎನ್ನುವ ನಿರೀಕ್ಷೆಯೂ ಈಗ ಹುಸಿಯಾಗುತ್ತಾ ಬಂದಿದೆ.  ಶಿವಮೊಗ್ಗ ರಂಗಾಯಣ ಬಹುತೇಕ ಬೇಸಿಗೆ ಶಿಬಿರಗಳಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತಿದೆ. ಧಾರವಾಡ ರಂಗಾಯಣ ತಮಾಶದಂತಹ ಡಬಲ್‌ಮೀನಿಂಗ್ ನಾಟಕವನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಇನ್ನು ಕಲಬುರ್ಗಿ ರಂಗಾಯಣವಂತೂ ರಂಗಾಯಣದ ಇತಿಹಾಸದಲ್ಲೇ ಆಗಿರದಂತಹಾ ಎಡವಟ್ಟನ್ನು ಮಾಡಿಕೊಂಡು ವಿವಾದಗ್ರಸ್ಥವಾಗಿ ಸಂಪೂರ್ಣ ನಿಷ್ಕ್ರೀಯವಾಗಿದೆ.

ರಂಗಾಯಣದ ಇತಿಹಾಸವನ್ನು ಕೆದಕಿದರೆ ಬೇಕಾದಷ್ಟು ಆಂತರಿಕ ಹಾಗೂ ಬಾಹ್ಯ ಬಂಡಾಯಗಳು ನಡೆದು ಹೋಗಿವೆ.  ರಂಗಾಯಣದೊಳಗಿನ ಗುಂಪುಗಾರಿಕೆ ಹಾಗೂ ವ್ಯಕ್ತಿ ಪ್ರತಿಷ್ಟೆಗಳು ಆಗಾಗ ಬಯಲಿಗೆ ಬಿದ್ದಿವೆ. ಕಲಾವಿದರ ಹಾಗೂ ನಿರ್ದೇಶಕರುಗಳ ನಡುವಿನ ಸಂಘರ್ಷ, ನಿರ್ದೇಶಕರು ಹಾಗೂ ಸರಕಾರಿ  ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟಗಳು ರಂಗಾಯಣದ ಆವರಣ ಬಿಟ್ಟು ನಾಡಿನಾದ್ಯಂತ ಹರಿದಾಡಿವೆ. ಆದರೆ.. ಎಂದೂ ಜಾತಿಯತೆ ಎನ್ನುವುದು ರಂಗಾಯಣದಲ್ಲಿ ಸ್ಪೋಟಗೊಂಡಿರಲಿಲ್ಲ. ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳ ನಡುವೆಯೂ ಜಾತಿ  ಸಾಮರಸ್ಯವನ್ನು ರಂಗಭೂಮಿ ಕಾಪಾಡಿಕೊಂಡು ಬಂದಂತೆ ರಂಗಾಯಣವೂ ಕಾಪಿಟ್ಟುಕೊಂಡೇ ಇಲ್ಲಿವರೆಗೂ ಬಂದಿತ್ತು. ಆದರೆ.. ಕಲಬುರ್ಗಿ ರಂಗಾಯಣ ಈಗ ಜಾತಿಯತೆಯ ಗುಂಪುಗಾರಿಕೆಯ ಆಡಂಬೋಲವಾಗಿ ಆಡಿಕೊಳ್ಳುವವರ ಬಾಯಿಗೆ ಎಲೆಯಡಿಕೆಯಾಗಿ ಹೋಯಿತು. ಜಾತಿಯತೆಯ ಜಾಢ್ಯವು ರಂಗಭೂಮಿಗೂ ಮೆತ್ತಿಕೊಂಡು ಕಲಬುರ್ಗಿ ರಂಗಾಯಣವನ್ನು ರೋಗಗ್ರಸ್ಥವಾಗಿಸಿತು.


ಪ್ರೊ.. ಆರ್.ಕೆ.ಹುಡುಗಿ
ಕಲಬುರಗಿ ರಂಗಾಯಣದ ಕಥೆ ಮತ್ತು ವ್ಯಥೆ ಸ್ವಾರಸ್ಯಕರವಾಗಿರುವಷ್ಟೇ ದುರಂತಮಯವೂ ಆಗಿದೆ. ಅದೆಲ್ಲವನ್ನೂ ವಿವರವಾಗಿ ಚರ್ಚಿಸುವುದೇ ಈ ಲೇಖನದ ಆಶಯವೂ ಆಗಿದೆ. ಯಾವಾಗ 2013 ಸೆಪ್ಟೆಂಬರ್ 4 ರಂದು ಕಲಬುರ್ಗಿಗೆ ರಂಗಾಯಣ ಮಂಜೂರಾಯಿತೋ ಆಗ ಅದರ ನಿರ್ದೇಶಕರು ಯಾರಾಗಬೇಕೆಂಬ ಚರ್ಚೆ ಶುರುವಾಯಿತು. ಸಮುದಾಯದ ಹಾಲಿ ಅಧ್ಯಕ್ಷರಾಗಿರುವ ಪ್ರೊ.ಆರ್.ಕೆ.ಹುಡುಗಿ, ನಾಟಕದಾರ ಎಲ್ಬಿಕೆ ಆಲ್ದಾಳ್, ಪ್ರಭಾಕರ್ ಸಾತಕೇಡ್ ಹಾಗೂ ಶಂಕರಯ್ಯ ಗಂಟಿರವರ ಹೆಸರುಗಳನ್ನು ರಂಗಸಮಾಜ ಸರಕಾರಕ್ಕೆ ರೆಕಮೆಂಡ್ ಮಾಡಲಾಗಿತ್ತು ಹಾಗೂ ಹುಡುಗಿಯವರೇ ನಿರ್ದೇಶಕರಾಗುವಂತೆ ನೋಡಿಕೊಳ್ಳಲಾಯಿತು. 2014ರ ನವೆಂಬರ್ 29 ರಂದು ಪ್ರೊ.ಹುಡುಗಿಯವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.   ಮಾಜಿ ಸಿ.ಎಂ ಧರ್ಮಸಿಂಗ್‌ರವರ ಕೃಪಾಕಟಾಕ್ಷವೂ ಹುಡುಗಿಯವರ ಮೇಲಿತ್ತು.  ಆರಂಭದ ಹಂತದಲ್ಲೇ ಆಯ್ಕೆ ವಿಚಾರದಲ್ಲಿ ಸರಕಾರ ತಪ್ಪು ನಿರ್ಧಾರ ತೆಗೆದುಕೊಂಡಿದ್ದರ ಫಲವೇ ಈಗಿನ ಕಲಬುರಗಿ ರಂಗಾಯಣದ ಬಿಕ್ಕಟ್ಟಿಗೆ ಕಾರಣವಾಯಿತು. ಯಾಕೆಂದರೆ ಹುಡುಗಿ ಮಾಸ್ತರರಿಗೆ ರಂಗಭೂಮಿಯ ಅನುಭವ ಸಾಲದು. ಸಮುದಾಯ ಸಂಘಟನೆಯಲ್ಲಿ ಹೆಸರಿಗೆ ಪದಾಧಿಕಾರಿಯಾದರೂ ಐದಾರು ನಾಟಕ ಹಾಗೂ ಮೂರ‍್ನಾಲ್ಕು ಬೀದಿನಾಟಕ ರಚನೆಯನ್ನು ಹೊರತು ಪಡಿಸಿ ರಂಗಭೂಮಿಗೆ ಹುಡುಗಿಯವರ ನೇರವಾದ ಕೊಡುಗೆ ಹೇಳಿಕೊಳ್ಳುವಂತಹುದೇನಿಲ್ಲ. ಎಂದೂ ಪ್ರ್ಯಾಕ್ಟಿಕಲ್ ಆಗಿ ನಾಟಕಗಳನ್ನು ಕಟ್ಟಿದವರಲ್ಲ. ಸಾಹಿತ್ಯದಲ್ಲಿ ಅದರಲ್ಲೂ ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡಿದ ಹುಡುಗಿಯವರು ರಂಗಾಯಣದ ನಿರ್ದೇಶಕರಾಗಲು ಬೇಕಾದ ಅರ್ಹತೆ ಬಗ್ಗೆ ಹಲವರಿಗೆ ಗುಮಾನಿ ಇತ್ತು. ಅದು ಈಗ ನಿಜವೆನಿಸತೊಡಗಿದೆ. ರಂಗಭೂಮಿಯ ಒಳಹೊರಗು ಗೊತ್ತಿಲ್ಲದ ಅನನುಭವಿ ಸಾಹಿತಿಗೆ ರಂಗಾಯಣದಂತಾ ಸಂಸ್ಥೆ ಕಟ್ಟುವ ಹೊಣೆಗಾರಿಕೆ ಕೊಟ್ಟರೆ ಏನಾಗಬಹುದೋ ಅದೇ ಆಗಿತ್ತು.

ರಂಗಾಯಣ ಶುರುವಾಗಿ ಇನ್ನೇನು ಕಾರ್ಯಾರಂಭವಾಗುವಾಗ ಹುಡುಗಿಯವರ ವಿರುದ್ಧ ಮೊದಲ ಪ್ರತಿರೋಧ ಶುರುವಾಗಿದ್ದೇ ಸ್ಥಳೀಯ ಕಲಾವಿದರು ಹಾಗೂ ರಂಗತಂಡಗಳಿಂದ. ಯಾಕೆಂದರೆ ಕಲಬುರಗಿ ರಂಗಾಯಣ ಪ್ರತಿನಿಧಿಸುವ ಆರು ಜಿಲ್ಲೆಗಳ ರಂಗತಂಡಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ 2015 ಡಿಸೆಂಬರ್ 22 ರಂದು ಬೆಂಗಳೂರಿನಿಂದ ಸಿ.ಲಕ್ಷ್ಮಣ್‌ರವರ ರಂಗಕಹಳೆ ತಂಡವನ್ನು ಆಹ್ವಾನಿಸಿ 7 ದಿನಗಳ ಕುವೆಂಪು ನಾಟಕೋತ್ಸವವನ್ನು ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ಕಲಬುರಗಿ ರಂಗಾಯಣಕ್ಕೆ ಮಂಜೂರಾದ ಹಣ ಬೆಂಗಳೂರಿನ ಸಂಘಟಕರ ಪಾಲಾಗಿದ್ದರಿಂದ ಅಸಮಾಧಾನಗೊಂಡ ವಿಶ್ವರಂಗ ತಂಡ, ಲೋಹಿಯಾ ಕಲಾತಂಡ, ಸಂಚಿಸಾರಂಗ, ದರ್ಪಣ, ರಂಗಮಾಧ್ಯಮ ಸೇರಿದಂತೆ ಹತ್ತು ಸ್ಥಳೀಯ ತಂಡಗಳ ಕಲಾವಿದರುಗಳು ನಾಟಕೋತ್ಸವದ ಉದ್ಘಾಟನೆಯಂದು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿದರು. ರಂಗಚಟುವಟಿಕೆಗಳ  ಕುರಿತ ಅನುಭವ ಹಾಗೂ ಆಳವಾದ ಅಧ್ಯಯನ ಇಲ್ಲದ ಹುಡುಗಿಯವರು ನಿರ್ದೇಶಕರಾಗಲು ಯೋಗ್ಯರಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದರು. ಈ  ಘಟನೆಯಿಂದಲಾದರೂ ಹುಡುಗಿಯವರು ಪಾಠ ಕಲಿತು ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬಹುದಾಗಿತ್ತು. ಆದರೆ.. ತಮ್ಮ ಮಾಸ್ತರಿಕೆಯ ಗತ್ತು ಗೈರತ್ತು ತೋರಲು ಹೋಗಿ ತಾವೂ ಮುಳುಗಿದರು.. ರಂಗಾಯಣದ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಮಾಡಿದರು.

ಅಭ್ಯಾಸ ನಿರತ ರಂಗಾಯಣದ ಕಲಾವಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಆವರಣದಲ್ಲಿ ಕೊಟ್ಟ ಪುಟ್ಟ ಸಭಾಂಗಣದಲ್ಲಿ ರಂಗಾಯಣ ಕಾರ್ಯಾರಂಭ ಮಾಡಿತು. ಕಲಬುರಗಿ ರಂಗಾಯಣದ ರೆಪರ್ಟರಿಗೆ ಒಟ್ಟು 12 ಜನ ಕಲಾವಿದರು ಹಾಗೂ ಮೂವರು ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಲಾಯಿತು. 12 ಜನ ಕಲಾವಿದರಲ್ಲಿ  ಐವರು ಮಹಿಳೆಯರು. ತಾಂತ್ರಿಕ ವರ್ಗದವರಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಹಾಗೂ ಕಲಾವಿದರಿಗೆ 12 ಸಾವಿರ ರೂಪಾಯಿಗಳ ಸಂಬಳವನ್ನು ಗೊತ್ತುಪಡಿಸಲಾಯಿತು. ರಂಗಾಯಣದ ನಿರ್ದೇಶಕರಿಗೆ ತಿಂಗಳಿಗೆ ಕಾಲು ಲಕ್ಷ ರೂಪಾಯಿ ಸಂದಾಯವಾಗುತ್ತಿದೆ. ಮೊದಲ ಅಸಮಾಧಾನ ಶುರುವಾಗಿದ್ದೇ ಈ ತಾರತಮ್ಯದ ವೇತನ ಶ್ರೇಣಿಯಿಂದಾಗಿ. ನೇಪತ್ಯದವರಿಗಿಂತಾ ನಾವು ಹೆಚ್ಚು ಪರಿಶ್ರಮ ಪಡುತ್ತೇವೆಯಾದರೂ ನಮಗ್ಯಾಕೆ ಕಡಿಮೆ ಸಂಬಳ ಎಂದು ಕಲಾವಿದರು ಬೇಸರಿಸಿಕೊಂಡರು. ಜೊತೆಗೆ ನಾಟಕದ ಗಂಧ ಗಾಳಿ ಗೊತ್ತಿಲ್ಲದೇ ಇರುವ ನಿರ್ದೇಶಕರಿಗೆ ಯಾಕೆ ನಮಗಿಂತ ಡಬಲ್ ಸಂಬಳ ಎನ್ನುವುದು ಕಲಾವಿದರ ಅಸಹನೆಗೆ ಕಾರಣವಾಯ್ತು. ಇದು ಸರಕಾರದ ನಿರ್ಣಯವಾಗಿದ್ದರಿಂದ ಯಾರೂ ಏನೂ ಮಾಡುವ ಹಾಗಿಲ್ಲವಾದ್ದರಿಂದ ಕಲಾವಿದರು ತಮ್ಮ ತಮ್ಮಲ್ಲೆ ಮಾತಾಡತೊಡಗಿದ್ದರು. ಕಲಾವಿದರೊಳಗೆ ಅಸಹನೆ ಇದ್ದರೆ ಅದನ್ನು ಅರಿತು ಕನ್ವೀಯನ್ಸ್ ಮಾಡಬೇಕಾದದ್ದು ನಿರ್ದೇಶಕರಾದವರ ಕರ್ತವ್ಯವಾಗಿತ್ತು. ಹಾಗೆ ಮಾಡದೇ ಕಲಾವಿದರನ್ನೇ ಒಡೆದು ಆಳುವ ಅಪಾಯಕಾರಿ ಕೆಲಸಕ್ಕೆ ಹುಡುಗಿಯವರು ಕೈಹಾಕಿದರು. ಜಾತಿಯನ್ನು ಇದಕ್ಕಾಗಿ ದಾಳವಾಗಿ ಬಳಸಿಕೊಂಡರು ಎನ್ನುವುದು ಅವರ ಮೇಲಿರುವ ಗುರುತರವಾದ ಆರೋಪ. ಕಲಾವಿದರ ನೇಮಕವಾಗಿ ಒಂಬತ್ತು ತಿಂಗಳು ತುಂಬಿದ ಸಂದರ್ಭಕ್ಕೆ ಸರಿಯಾಗಿ ರಂಗಾಯಣದಲ್ಲಿ ಜಾತಿ ವೈಷಮ್ಯ, ನಿಂದನೆ ಹಾಗೂ ದೌರ್ಜನ್ಯದ ಹೆರಿಗೆಯಾಗಿದ್ದೊಂದು ವಿಸ್ಮಯ.

ಲಕ್ಷ್ಮೀ ಕರೋಜಿ
ಕಲಾವಿದರಲ್ಲಿ ಬಹುತೇಕರು ದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಬಂದವರಾಗಿದ್ದರು. ಲಕ್ಷ್ಮೀ ಕರೋಜಿ ಎನ್ನುವ ಕಲಾವಿದೆಗೆ ಹುಡುಗಿಯವರು ಅತೀ ಹೆಚ್ಚು ಸದರ ಕೊಟ್ಟಿದ್ದರು. ಇದಕ್ಕೆ ಪ್ರಮುಖ ಕಾರಣವೇನೆಂದರೆ ಆಕೆ ಹುಡುಗಿಯವರ ಲಿಂಗಾಯತ ಕೋಮಿಗೆ ಸೇರಿದವಳಾಗಿದ್ದಳು. ಇನ್ನೊಂದು ಕಾರಣವೇನೆಂದರೆ ಹುಡುಗಿ ಸಾಹೇಬರ ಸಾಹಿತ್ಯಾನುವಾದದ ಕೆಲಸಕ್ಕೆ ಲಕ್ಷ್ಮೀ ನೆರವಾಗುತ್ತಿದ್ದರು.  ಇವರಿಬ್ಬರ ನಡುವೆ ವ್ಯಯಕ್ತಿಕ ಸಂಬಂಧಗಳೂ ಇದೆಯೆಂಬ ಆರೋಪವೂ ಇದೆ. ಹೀಗಾಗಿ ನಾಟಕದ ಕೆಲಸಕ್ಕಿಂತ ಹುಡುಗಿರವರ ಚೇಂಬರಿನಲ್ಲೇ ಹೆಚ್ಚು ಹೊತ್ತು ಕಳೆಯುತ್ತಾ ನಿರ್ದೇಶಕರು ಎನ್ನುವ ಗೌರವವನ್ನೂ ಕೊಡದೇ ಏಕವಚನದಲ್ಲಿ ಕರೆಯುತ್ತಿರುವ ಕಲಾವಿದೆ ಲಕ್ಷ್ಮೀ ಕುರಿತು ಇತರೇ ಕಲಾವಿದರಲ್ಲಿ ಒಂದು ರೀತಿಯ ಅಸಮಾಧಾನ ಬೆಳೆಯಿತು. ಹುಡುಗಿಯವರು ತಮ್ಮ ಚೇಂಬರಿನಲ್ಲಿ ಈ ಲಕ್ಷ್ಮೀಎಂಬಾಕೆಯ ಜೊತೆಗೆ ಗಂಟೆ ಗಂಟಲೇ ಏಕಾಂತದಲ್ಲಿ ಇದ್ದುದನ್ನು ದಿನವೂ ನೋಡಿದ ಬಾಕಿ ಕಲಾವಿದರಿಗೆ ಮುಜುಗರವಾಗತೊಡಗಿತು. ಎಲ್ಲಾ ಕಲಾವಿದರ ಮಾತುಕತೆಯ ವಿವರಗಳು ಲಕ್ಷ್ಮೀಯವರ ಮೂಲಕ ಹುಡುಗಿ ಸಾಹೇಬರ ಕಿವಿ ತುಂಬತೊಡಗಿತು. ಹುಡುಗಿಯವರಿಗೆ ಈ ಮಹಿಳೆ ಅದ್ಯಾವಪರಿ ಮೋಡಿ ಮಾಡಿದ್ದಳೆಂದರೆ ಆಕೆ ಹಾಕಿದ ಗೆರೆಯನ್ನು ನಿರ್ದೇಶಕರು ದಾಟದಂತಾದರು. ಹೀಗಾಗಿ ಕೆಳ ಜಾತಿಯ ಕಲಾವಿದರ ಬಗ್ಗೆ ಹುಡುಗಿಯವರು ಅಸಹನೀಯ ಅಸಮಾಧಾನ ತೋರಿಸತೊಡಗಿ ಜಾತಿ ನಿಂದನೆ ಮಾಡತೊಡಗಿದರೆಂದು ಬಹುತೇಕ ಕಲಾವಿದರು ದೂರತೊಡಗಿದರು. ಲಕ್ಷ್ಮೀಯವರು ಅವಕಾಶ ಸಿಕ್ಕಾಗಲೆಲ್ಲಾ ಕೆಳಜಾತಿಯವರೆಂದು ನಿಂದಿಸಿ ಮಾನಸಿಕವಾಗಿ ದಲಿತ ಕಲಾವಿದರಿಗೆ  ಅವಮಾನ ಮಾಡಿದ್ದಾರೆ ಹಾಗೂ ಈ ಕುರಿತು ನಿರ್ದೇಶಕರಿಗೆ ಕಂಪ್ಲೇಂಟ್ ಮಾಡಿದಾಗ ಹುಡುಗಿಯವರು  ಇದ್ದದ್ದು ಇದ್ದಂತೆ ಹೇಳಿದರೆ ತಪ್ಪೇನು ಎಂದು ಲಕ್ಷ್ಮೀಯನ್ನು ಸಮರ್ಥಿಸಿಕೊಂಡು ಜಾತಿ ನಿಂದನೆಯನ್ನು ಮಾಡಿದರು ಎಂದು ಒಂಬತ್ತು ಜನ ಕಲಾವಿದರು ಆರೋಪ ಮಾಡುತ್ತಿದ್ದಾರೆ. ಇದರ ಮಧ್ಯೆ ಈ ಜಾತಿ ರಾಜಕೀಯದಿಂದ ಬೇಸತ್ತು ಇಬ್ಬರು ಕಲಾವಿದರು ಹಾಗೂ ಒಬ್ಬ ತಂತ್ರಜ್ಞ ರಾಜೀನಾಮೆ ಕೊಟ್ಟು ರಂಗಾಯಣ ಬಿಟ್ಟು ಹೊರಬಿದ್ದರು. 

ಶಾಮರಾಜ್ ದೇಸಾಯ
ಅವತ್ತು 2016 ಜನವರಿ 28 ರಂದು ರಾಷ್ಟ್ರೀಯ ರಂಗೋತ್ಸವದ ಪೂರ್ವಭಾವಿ ತಯಾರಿಗಾಗಿ ಕಲವಿದರೆಲ್ಲಾ ಸಭೆ ಸೇರಿದ್ದರು.  ಹುಡುಗಿಯವರ ಸಂಪೂರ್ಣ ಬೆಂಬಲವನ್ನು ಬಳಸಿಕೊಂಡು ಯಾವಾಗ ಬೇಕೆಂದಾಗ ನಾಟಕದ ತಾಲಿಂಗೆ ಬರುತ್ತಿದ್ದ ಲಕ್ಷ್ಮೀಯನ್ನು ಉಳಿದ ಕಲಾವಿದರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವತ್ತೇ ರಾತ್ರಿ ಲಕ್ಷ್ಮೀ ಗಂಡ ಶಾಮರಾಜ್ ದೇಸಾಯಿ ಪೋನ್ ಮಾಡಿ ಕಲಾವಿದರಿಗೆ ತುಂಬಾ ಕೆಟ್ಟದಾಗಿ ಅಶ್ಲೀಲವಾಗಿ ದಮಕಿ ಹಾಕಿ ಜಾತಿನಿಂದನೆ ಮಾಡಿದ್ದಾನೆ. ಆತನ ಹೊಲಸು ಮಾತುಗಳನ್ನೆಲ್ಲಾ ಕಲಾವಿದರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಹೊರಗಿನ ಶಕ್ತಿಯೊಂದು ತಮ್ಮ ಕಲಾವಿದರಿಗೆ ಧಮಕಿ ಹಾಕಿದ್ದನ್ನು ಖಂಡಿಸಿ ಕಲಾವಿದರಿಗೆ ನೈತಿಕ ಸ್ತೈರ್ಯ ಹೇಳಬೇಕಾಗಿದ್ದ ಹುಡುಗಿ ಸಾಹೇಬರು ಲಕ್ಷ್ಮೀ ಪರವಾಗಿಯೇ ಮಾತಾಡಿದ್ದಾರೆ.  ಈ ಜಾತಿ ಸಂಘರ್ಷದ ಮುಸುಕಿನ ಗುದ್ದಾಟ ಒಳಗಿಂದೊಳಗೆ ಶುರುವಾಗಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳತೊಡಗಿದೆ. ಅದು ಸ್ಪೋಟಗೊಳ್ಳಲು ಕಾರಣವಾಗಿದ್ದು ಒಂದು ಸೆಲ್ಪಿ. ಅವತ್ತು ಕಲಾವಿದ ಮಹೇಶ್ ತನ್ನ ಮೊಬೈಲ್‌ನಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿರುವಾಗ ಲಕ್ಷ್ಮೀ ಸಹ ಓಡಿ ಬಂದು ನಿಂತಿದ್ದಾಳೆ. ಆ ಫೊಟೋವನ್ನು ಮಹೇಶ್ ವಾಟ್ಸಾಪ್ ಮೂಲಕ ಗೆಳೆಯರಿಗೆ ಕಳುಹಿಸಿದ್ದಾನೆ. ಇದು ಲಕ್ಷ್ಮೀ ಗಂಡನಿಗೆ ಗೊತ್ತಾಗಿ ಕೆರಳಿದ ಆತ  ಫೆಬ್ರವರಿ 9 ರಂದು ಹೊರಗಿನಿಂದ ಹತ್ತು ಜನ ಲೋಕಲ್ ರೌಡಿಗಳನ್ನು ಕರೆತಂದು ಕಲಾವಿದರನ್ನೆಲ್ಲಾ ನಿಂದಿಸಿ ಮಹೇಶ್ ಮೇಲೆ ದೈಹಿಕ ಹಲ್ಲೆ ಮಾಡಿ ಕಲಾವಿದರಿಗೆ ಜೀವಬೆದರಿಕೆ ಹಾಕಿದಾಗ ಕಲಾವಿದರೆಲ್ಲಾ ತಲ್ಲಣಿಸಿ ಹೋದರು. ಆ ನಂತರವೂ ಕಲಾವಿದರ ಮೇಲೆ ಹಲ್ಲೆ ಮಾಡಲು ರೌಡಿ ಗ್ಯಾಂಗ್ ಸಮಯಸಾಧಿಸುತ್ತಲೇ ಇದೆ. ಇದರಿಂದಾಗಿ ಕಲಾವಿದರಿಗೆ ಜೀವಭಯ ಶುರುವಾಗಿದೆ.  ಈಗಲಾದರೂ ಎಚ್ಚೆತ್ತು ಹುಡುಗಿಯವರು ಹೊರಗಿನಿಂದ ಬಂದು ತನ್ನ ಕಲಾವಿದರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಪೊಲೀಸ್ ದೂರು ನೀಡಬೇಕಿತ್ತು. ಹಾಗೆ ಮಾಡದೇ ರಾಷ್ಟ್ರೀಯ ನಾಟಕೋತ್ಸವ ಮುಗಿದ ಮೇಲೆ ವಿಚಾರಣೆ ಮಾಡುವೆ ಅಲ್ಲಿವರೆಗೂ ಹೊರಗಿನವರಿಗೆ ಈ ವಿಷಯ ತಿಳಿಸಬೇಡಿ ಎಂದು ಆದೇಶಿಸಿ ಸಮಸ್ಯೆಯನ್ನು ಮುಂದೂಡತೊಡಗಿದರು.

ನಂತರ ವಿಚಾರಣೆ ಮಾಡುವ ನೆಪದಲ್ಲಿ ಲಕ್ಷ್ಮೀಯವರನ್ನು ತಮ್ಮ ಚೇಂಬರಿನಲ್ಲಿ ಕೂಡಿಸಿ, ಮಹೇಶಕುಮಾರ್ ಎನ್ನುವ ಕಲಾವಿದನನ್ನು ಕರೆಸಿ ರಾಜೀನಾಮೆ ಬರೆದು ಕೊಡದೇ ಹೋದರೆ ನಿನ್ನ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ಬುಕ್ ಮಾಡಲಾಗುವುದು ಎಂದು ಒತ್ತಡ ಹೇರಿದರಂತೆ. ಒಬ್ಬೊಬ್ಬರನ್ನಾಗಿ ರಂಗಾಯಣದಿಂದ ರಾಜೀನಾಮೆ ಬರೆಸಿಕೊಂಡು ಹೊರಗೆ ಹಾಕುವ ತಂತ್ರಗಾರಿಕೆ ನಡೆಯುತ್ತಿದೆ ಎಂದು ಅರಿವಾದ ತಕ್ಷಣ ಒಂಬತ್ತೂ ಜನ ಕಲಾವಿದರೆಲ್ಲಾ ಫೆಬ್ರವರಿ 24 ರಂದು ಪೊಲೀಸ್ ಠಾಣೆಗೆ ಹೋಗಿ ನಡೆದಿದ್ದನ್ನೆಲ್ಲಾ ವಿವರಿಸಿ ಹುಡುಗಿಯವರು ಹಾಗೂ ಲಕ್ಷ್ಮೀ ದಂಪತಿಗಳ ಮೇಲೆ  ದೂರು ದಾಖಲಿಸಿದ್ದಾರೆ. ಆದರೂ ಹುಡುಗಿಯವರ ಹಿಂದಿನ ಪ್ರಭಾವಿಗಳ ಬಗ್ಗೆ ಗೊತ್ತಿದ್ದ ಪೊಲೀಸರು ಮೇಲಾಧಿಕಾರಿಗಳ ಮಾತಿನಂತೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದಾಗ ಕಲಾವಿದರೆಲ್ಲಾ ಸ್ಟೇಶನ್ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ನಂತರ ಫೆ.25 ರಂದು ಎಪ್‌ಐಆರ್ ದಾಖಲಾಯಿತು. ಅದೂ ಅಂತಿಂತಾ ದೂರಲ್ಲಾ. ಅಟ್ರಾಸಿಟಿ ಕೇಸ್.. ಅಂದರೆ ಜಾತಿ ನಿಂದನೆಯ ದೂರು.  ಆಗಲೇ ತಾವೇ ತೋಡಿಕೊಂಡ ಗುಂಡಿಯಲ್ಲಿ ಹುಡುಗಿಯವರು ಬಿದ್ದು ಒದ್ದಾಡಿದ್ದು. ಪೊಲೀಸರು ಠಾಣೆಗೆ ಕರೆಸಿ ರಾತ್ರಿಯಲ್ಲಾ ಕೂಡಿಸಿ ವಿಚಾರಣೆ ಶುರು ಮಾಡಿದರು. ಬೇರೆ ಯಾರ ಮೇಲಾದರೂ ಈ ಕೇಸ್ ಹಾಕಿದ್ದರೆ ಈಗಾಗಲೇ ಈ ನಾನ್ ಬೇಲೆಬಲ್ ಕೇಸಲ್ಲಿ ಕಂಬಿ ಎಣಿಸುತ್ತಿದ್ದರು. ಆದರೆ ಹುಡುಗಿಯವರು ತಮ್ಮೆಲ್ಲಾ ಕಾಂಟ್ಯಾಕ್ಟ್ ಬಳಸಿ ಹಲವಾರು ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ ಅವರಿವರಿಂದ ಎಸ್ಪಿ ಮೇಲೆ ಒತ್ತಡವನ್ನು ತಂದು ಠಾಣೆಯಿಂದ ಹೊರಗೆ ಬಂದಿದ್ದಾರೆ. ಜಾತಿ ದೌರ್ಜನ್ಯದ ಕಾಯಿದೆಯಲ್ಲಿರುವ ಸಣ್ಣ ಲೂಪ್‌ಹೋಲನ್ನು ಬಳಸಿಕೊಂಡು ಪೊಲೀಸ್ ಉನ್ನತಾಧಿಕಾರಿಗಳು ಹುಡುಗಿಯವರನ್ನು ಮುಕ್ತವಾಗಿ ಹೋಗಲು ಬಿಟ್ಟಿದ್ದಾರೆ.  ಇದೆಲ್ಲದರಿಂದಾಗಿ ಹುಡುಗಿಯವರ ಮರ್ಯಾದೆ ಹೋಗಲಿ, ರಂಗಾಯಣದ ಮಾನ ಮರ್ಯಾದೆ ಬೀದಿಗೆ ಬಂದು ಬಿದ್ದಿತು. ರಂಗಾಯಣದ ಇತಿಹಾಸದಲ್ಲಿ ಹುಡುಗಿ ಪ್ರಕರಣ ಕಪ್ಪು ಚುಕ್ಕೆಯಾಗಿ ಹೋಯಿತು.

ಕಲಾವಿದರುಗಳ ಉಪವಾಸ ಸತ್ಯಾಗ್ರಹ
ಇದು ಗೊತ್ತಾದ ತಕ್ಷಣ ತಲ್ಲಣಿಸಿ ಹೋಗಿದ್ದು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು. ಇಲಾಖೆಯ ಆಗ್ರಹದ ಮೇರೆಗೆ ನಾಲ್ಕು ಜನರ ವಿಚಾರಣಾ ಕಮಿಟಿ ಮಾಡಿಕೊಂಡು ಫೆಬ್ರವರಿ 26 ರಂದು ಎದ್ದು ಬಿದ್ದು ಕಲಬುರುಗಿ ರಂಗಾಯಣಕ್ಕೆ ಓಡಿ ಬಂದ ರಂಗ ಸಮಾಜದ ಸದಸ್ಯರಾದ ಶಶಿಧರ್ ಅಡಪ, ಡಿ.ಎಸ್.ಚೌಗಲೆ, ಸುಜಾತಾ ಜಂಗಮಶೆಟ್ಟಿ  ಹಾಗೂ ಸಂಸ್ಕೃತಿ ಇಲಾಖೆಯ ಅಶೋಕ ಚಲುವಾದಿಯವರು ವಿಚಾರಣೆ ಶುರು ಮಾಡಿದರು. ಪ್ರತಿಯೊಬ್ಬ ಕಲಾವಿದರನ್ನೂ ಪ್ರತ್ಯೇಕವಾಗಿ ಕರೆದು ಕೂಡಿಸಿ ವಿಚಾರಣೆ ಮಾಡಲಾಯಿತು. ಆದರೆ ಹುಡುಗಿಯವರು ವಿಚಾರಣೆಗೆ ಬರಲೇ ಇಲ್ಲ.. ಕಮಿಟಿಯವರಿಗೂ ಸಿಗಲಿಲ್ಲ. ಹುಡುಗಿಯವರನ್ನು ರಂಗಾಯಣಕ್ಕೆ ಬರುವುದನ್ನೇ ಜಿಲ್ಲಾಧಿಕಾರಿಗಳು ನಿರ್ಬಂಧಿಸಿದರು. ನೊಂದ ಕಲಾವಿದರುಗಳು ನ್ಯಾಯಕ್ಕಾಗಿ ಆಗ್ರಹಿಸಿ ಮಾರ್ಚ 8 ರಂದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡಿ ತಮ್ಮ ಪ್ರತಿಭಟನೆಯನ್ನು ತೋರಿದರು. ಇದರಿಂದ ಏನೂ ಆಗದಿದ್ದಾಗ ಮಾರ್ಚ್ 11 ರಿಂದ ಅನಿರ್ದಿಷ್ಟ ಕಾಲಾವಧಿಯ ಸತ್ಯಾಗ್ರಹವನ್ನು ಘೋಷಿಸಿ ಡಿಸಿ ಕಛೇರಿಯ ಮುಂದೆ ಕಲಾವಿದರು ಸತ್ಯಾಗ್ರಹ ಕುಳಿತುಕೊಂಡರು. ಈ ಸತ್ಯಾಗ್ರಹ 14 ದಿನಗಳ ಕಾಲ ನಡೆಯಿತು. ಈ ಕಲಾವಿದರಿಗೆ ಬೆಂಬಲವಾಗಿ ಹುಡುಗಿ ಹಠಾವೋ, ರಂಗಾಯಣ ಬಚಾವೋ ಎನ್ನುವ ಘೋಷಣೆಯೊಂದಿಗೆ ಕಲಬುರಗಿಯಲ್ಲಿ ಪ್ರತಿಭಟನೆಗಳ ಸರಣಿಯೇ ನಡೆದು ಹೋಯಿತು.  ಈ ವಿಷಯ ಗೊತ್ತಾಗಿ ಸಚಿವೆ ಉಮಾಶ್ರೀಯವರು ರಂಗಾಯಣದ ಅಂಗಳಕೆ ಬೇಟಿ ಕೊಟ್ಟು ರಂಗಸಮಾಜದ ಕಮಿಟಿಯ ವರದಿಯನ್ನು ಆದಷ್ಟು ಬೇಗ ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸತ್ಯಾಗ್ರಹ ನಿರತರಿಗೆ ಭರವಸೆ ಕೊಟ್ಟರು. ಸಚಿವೆಯ ಮಾತನ್ನು ನಂಬಿದ ಕಲಾವಿದರುಗಳು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಸಾಂಕೇತಿಕವಾಗಿ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು ರಂಗಾಯಣದೊಳಗೆ ಹೋಗಿ ಕೆಲಸಕ್ಕೆ ಸೇರಿದ್ದಾರಾದರೂ ಅಲ್ಲಿ ಮಾಡಲು ಕೆಲಸ ಏನಿಲ್ಲ. ಕೆಲಸ ಹೇಳುವವರೂ ಯಾರಿಲ್ಲ.


ಮಾರ್ಚ 25 ರಂದು ಉಮಾಶ್ರೀಯವರ ಅಧ್ಯಕ್ಷತೆಯಲ್ಲಿ  ಸಂಸ್ಕೃತಿ ಇಲಾಖೆಯಲ್ಲಿ ಕಲಬುರಗಿ ರಂಗಾಯಣದ ಕುರಿತು ವಿಚಾರಣೆಗಾಗಿಯೇ ಸಭೆ ಕರೆಯಲಾಯಿತು. ರಂಗಾಯಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ರಂಗಸಮಾಜದ ಎಲ್ಲಾ ಸದಸ್ಯರುಗಳು ಸೇರಿ ಚರ್ಚಿಸಿದರು. ರಂಗಸಮಾಜದ ಕಮಿಟಿಯು ತನ್ನ ವಿಚಾರಣಾ ವರದಿಯನ್ನು ಮಂಡಿಸಿ ಹುಡುಗಿಯವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತು. ಅದಕ್ಕೆ ಉಮಾಶ್ರೀಯವರು ಕಲಬುರಗಿ ಜಿಲ್ಲಾಧಿಕಾರಿಗಳ ಹಾಗೂ ರಂಗಾಯಣದ ಆಡಳಿತಾಧಿಕಾರಿಗಳ ವರದಿ ಬಂದ ನಂತರ ತೀರ್ಮಾಣ ತೆಗೆದುಕೊಳ್ಳುವುದಾಗಿ ಹೇಳಿದರು. ಇದರಿಂದ ಕೆರಳಿದ ರಂಗಸಮಾಜದ ಹಿರಿಯ ಸದಸ್ಯರಾದ ಜಿ.ಕೆ.ಗೋವಿಂದರಾವ್‌ರವರು ಈ ಕೂಡಲೇ ತೀರ್ಮಾಣ ತೆಗದು ಕೊಳ್ಳದಿದ್ದರೆ ನಾನು ರಂಗಸಮಾಜಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ ತಕ್ಷಣ ರಾಜೀನಾಮೆ ಪತ್ರ ಬರೆದು ಕೊಟ್ಟರು. ಅವರ ಮಾತಿಗೆ ಮಂಡ್ಯ ರಮೇಶರವರು ಜೊತೆಗೂಡಿದರು. ಎಲ್ಲರ ಒತ್ತಾಯಕ್ಕೆ ಮಣಿದ ಉಮಾಶ್ರೀಯವರು ಒಂದು ವಾರದೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆಂದು ಹೇಳಿ ರಂಗಸಮಾಜದ ಸದಸ್ಯರುಗಳನ್ನು ಸಮಾಧಾನಗೊಳಿಸಿ ಸಭೆ ಬರಕಾಸ್ತುಗೊಳಿಸಿದರು. ಈ ಹುಡುಗಿ ಮಾಸ್ತರನ್ನು ಉದ್ದೇಶಪೂರ್ವಕವಾಗಿ ಸಭೆಯಿಂದ ಹೊರಗಿಡಲಾಯಿತು. ಸಭೆ ಮುಗಿದು ಒಂದು ವಾರವಲ್ಲ ಆರು ವಾರಗಳೇ ಕಳೆದು ಹೋದರೂ ಇನ್ನೂ ಮಾನ್ಯ ಸಚಿವೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೇ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ.  ಅಲ್ಲಿ ನಡೆದದ್ದೇನು ಎಂದು ವಿಚಾರಣಾ ಕಮಿಟಿ ಹಾಗೂ ಮಹಿಳಾ ಆಯೋಗ ತನ್ನ ವರದಿಯಲ್ಲಿ ವಿವರಿಸಿದ್ದರೂ ಹುಡುಗಿಯವರನ್ನು ಇನ್ನೂ ತೆರವುಗೊಳಿಸಲು ಸ್ವತಃ ಉಮಾಶ್ರೀರವರಿಗೂ ಸಾಧ್ಯವಾಗಿಲ್ಲ.

ಆಗಲೂ ಸುಮ್ಮನಿರದ ಹುಡುಗಿ ಮಾಸ್ತರರು "ವಿಚಾರಣಾ ಕಮಿಟಿಯ ಎಲ್ಲರ ವರದಿಯನ್ನೂ ನಾನು ಒಪ್ಪಿಕೊಳ್ಳುತ್ತೇನೆ, ಆದರೆ ಡಿ.ಎಸ್.ಚೌಗಲೆಯವರ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ಮಹಾಸಭೆಯ ಆರಂಭಕ್ಕೆ ಮುನ್ನ ಹೇಳಿದರು. ಅರೆ.. ಅದ್ಯಾಕೆ ಚೌಗಲೆಯವರ ಮೇಲೆ ಹುಡುಗಿ ಹರಿಹಾಯ್ದರು?. ಅದಕ್ಕೆ ಕಾರಣವೂ ಇದೆ. ಕಲಬುರ್ಗಿ ರಂಗಾಯಣಕ್ಕೆ ವಿಚಾರಣಾ ಕಮಿಟಿಯ ಸದಸ್ಯರಾಗಿ ಹೋದ ಚೌಗಲೆಯವರು ಹೋದ ಕೆಲಸ ಮುಗಿಸಿಕೊಂಡು ಬೇರೆ ಸದಸ್ಯರ ಹಾಗೆ ವಾಪಸ್ ಬಂದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ.. ವಿಚಾರಣೆಯ ನಂತರ ... ಹುಡುಗಿಯವರು ತಮ್ಮ ವಿರೋಧಿಯೆಂದು ತಿಳಿದುಕೊಂಡಿರುವ ಶಂಕರಯ್ಯ ಗಂಟಿಯವರ ಆಹ್ವಾನದ ಮೇರೆಗೆ ಗಂಟಿಯವರ ಜೊತೆ ರಾತ್ರಿ ಮೇಜುವಾಣಿಗೆ ಚೌಗಲೆ ಹೋದರೋ ಆಗ ಹುಡುಗಿಯವರು ಸಿಟ್ಟಿಗೆದ್ದರು. ಗಂಟಿಯವರ ಜೊತೆ ಸೇರಿ ನನ್ನ ವಿರುದ್ದ ಶಡ್ಯಂತ್ರ ಮಾಡುತ್ತಿದ್ದಾರೆಂದು ಊಹಿಸಿಕೊಂಡ ಹುಡುಗಿಯವರು ಅದೇ ಅಸಮಾಧಾನವನ್ನು ಸಭೆಯಲ್ಲಿ ಹೊರಹಾಕಿದರು. ಚೌಗಲೆಯವರು ಯಾರ ಜೊತೆ ಬೇಕಾದರೂ ಹೋಗುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ.. ಈ ಸಂದರ್ಭದಲ್ಲಿ ಹೋಗಬಾರದಿತ್ತು. ಯಾಕೆಂದರೆ ಅವರು ಸರಕಾರದ  ಪರವಾಗಿ ಹೋಗಿದ್ದು  ಹುಡುಗಿಯವರ ಮೇಲೆ ಇರುವ ಆರೋಪಗಳ ವಿಚಾರಣೆಗೆ. ವಿಚಾರಣೆಯ ನಂತರ ಹುಡುಗಿಯವರ ವಿರೋಧಿಗಳ ಜೊತೆಗೆ ಸೇರಿಕೊಂಡು ಊಟ ಮತ್ತೊಂದು ಮಾಡಿದ್ದು ಸಮರ್ಥನೀಯವಲ್ಲ. ಇದರಿಂದಾಗಿ ಚೌಗಲೆಯವರ ಮೇಲೆ ಹುಡುಗಿಯವರಿಗೆ ಗುಮಾನಿ ಬಂದಿದ್ದರಲ್ಲಿ ತಪ್ಪೇನಿಲ್ಲ. ಚೌಗಲೆ ಸಾಹೇಬರು ಸಮಯ ಸಂದರ್ಭಗಳನ್ನು ಅರಿತುಕೊಂಡು ನಡೆದಿದ್ದರೆ ಈ ಸಮಸ್ಯೆಯೇ ಉದ್ಬವಿಸುತ್ತಿರಲಿಲ್ಲ.  

ಹುಡುಗಿ ಮೇಷ್ಟ್ರು
ರಂಗಸಮಾಜದ ಕಮಿಟಿಯವರು ನಡೆಸಿದ ವಿಚಾರಣೆಯಲ್ಲಿ ಕಲಾವಿದರುಗಳು ಹುಡುಗಿಯವರ ಜ್ಯಾತ್ಯಾತೀತತೆಯ ಮುಖವಾಡವನ್ನು ಬಿಚ್ಚಿಟ್ಟು  ಅವರ ಜಾತೀಯತೆಯ ದರ್ಶನ ಮಾಡಿಸಿದರು. ಕಲಾವಿದೆಯರು ಹುಡುಗಿಯವರ ಇನ್ನೊಂದು ಮುಖವನ್ನು ಅತ್ಯಂತ ನೋವಿನಿಂದ ತೆರೆದಿಟ್ಟರು. ಅದು ಮಹಿಳೆಯರೊಂದಿಗೆ ಹುಡುಗಿಯವರ ತೆವಲಿನಾಟ. ಅಂದರೆ.. ಅವಕಾಶ ಸಿಕ್ಕಾಗಲೆಲ್ಲಾ ಹುಡುಗಿಯವರು ಕಲಾವಿದೆಯರ ಮೈಕೈ ಮುಟ್ಟುವುದನ್ನು ಮಾಡುತ್ತಿದ್ದರಂತೆ. ಇದರಿಂದ ಮುಜುಗರಕ್ಕೊಳಗಾದರೂ ಕಲಾವಿದೆಯರು ತಡೆದುಕೊಂಡಿದ್ದರು. ವಿಚಾರಣಾ ಕಮಿಟಿಯ ಮುಂದೆ ತಮ್ಮ ಗೋಳನ್ನು ಹೇಳಿಕೊಂಡು ನಾಲ್ಕೂ ಕಲಾವಿದೆಯರೂ ಕಣ್ಣೀರಾದರು. ನಿರ್ದೇಶಕರಿಂದ ಲೈಂಗಿಕ ಕಿರುಕುಳಕ್ಕೆ  ಗುರಿಯಾಗಿದ್ದು ತಮ್ಮ ಕುಟುಂಬಸ್ತರಿಗೆ ಗೊತ್ತಾದರೆ ಮಾರ್ಯಾದೆ ಹೋಗುತ್ತದೆಂದು ಅವಲತ್ತುಕೊಂಡರು. ಎಲ್ಲಿ ರಂಗಾಯಣದಿಂದ ಹೊರಹಾಕುತ್ತಾರೋ ಎಂಬ ಭಯದಿಂದ ಇಲ್ಲಿವರೆಗೂ ಬಾಯಿ ಬಿಟ್ಟಿಲ್ಲವೆಂದು ತಳಮಳ ತೋಡಿಕೊಂಡರು. ಇದೂ ಸಹ ವಿಚಾರಣಾ ಕಮಿಟಿಯ ವರದಿಯಲ್ಲಿ ದಾಖಲಾಗಿದೆ. ಒಬ್ಬ ಮಹಿಳೆಯಾಗಿ, ಕಲಾವಿದೆಯಾಗಿ ಹಾಗೂ ಮಹಿಳೆ ಮತ್ತು ಮಕ್ಕಳ ಇಲಾಖೆಯ ಸಚಿವೆಯೂ ಆದ ಉಮಾಶ್ರೀಯವರು ರಂಗಾಯಣದ ಮಹಿಳಾ ಕಲಾವಿದರ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ತಿಳಿದೂ ಸುಮ್ಮನಾದರು.. ಯಾಕೆಂದು ಗೊತ್ತಿಲ್ಲ. ಆದರೆ ಮಹಿಳಾ ಆಯೋಗ ಸುಮ್ಮನಿರಲಿಲ್ಲ. ರಾಜ್ಯ ಮಹಿಳಾ ಆಯೋಗದವರು ಸ್ವಯಂಪ್ರೇರಿತರಾಗಿ ರಂಗಾಯಣಕ್ಕೆ ಬಂದು ವಿಚಾರಣೆ ಮಾಡಿ ತಮ್ಮ ವರದಿಯನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಿದರು. ಸಮಸ್ಯೆ ಬಗೆಹರಿಸದಿದ್ದರೆ ಕೇಂದ್ರ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿಯೂ ತಿಳಿಸಿದ್ದಾರಂತೆ.

ಅನೇಕ ಸಂಘ ಸಂಸ್ಥೆಗಳು ಧರಣಿ, ಮೆರವಣಿಗೆ ಮಾಡಿ ಹುಡುಗಿ ಹಠಾವೋ ಎಂದು ಒತ್ತಾಯಿಸಿದ್ದಾರೆ. ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಕಲಾವಿದರನ್ನು ಬೆಂಬಲಿಸಿ ಡಿಸಿ ಕಛೇರಿಯ ಎದುರು ಧರಣಿ ಮಾಡಿದ್ದಾರೆ. ಕೆಲವು ಮಠಾಧೀಶರುಗಳು ಸಹ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಪೊಲೀಸ್ ಠಾಣೆಯಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಎಲ್ಲಾ ಕಡೆಯಿಂದಲೂ ಹುಡುಗಿಯವರನ್ನು ತೆಗೆದುಹಾಕಿ ರಂಗಾಯಣವನ್ನು ಉಳಿಸಲು ಬೇಕಾದಷ್ಟು ಒತ್ತಡಗಳು ಬರುತ್ತಿವೆ. ಎಲ್ಲಾ ಪತ್ರಿಕೆಗಳಲ್ಲೂ ಸಹ ವರದಿ ಲೇಖನಗಳು ಬಂದಿವೆ. ರಂಗಸಮಾಜದ ವಿಚಾರಣಾ ವರದಿ, ಮಹಿಳಾ ಆಯೋಗದ ತನಿಖಾ ವರದಿ ಹಾಗೂ ಕಲಬುರಗಿಯ ಎಸ್ಪಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು ಕೊಟ್ಟ ವರದಿಗಳೆಲ್ಲಾ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ಸಚಿವೆ ಉಮಾಶ್ರೀಯವರಿಗೆ ತಲುಪಿವೆ. ಎಲ್ಲಾ ವರದಿಗಳಲ್ಲೂ ಹುಡುಗಿಯವರ ವೈಪಲ್ಯಗಳೇ ನಮೂದಾಗಿದೆ. ರಂಗಸಮಾಜದ ಬಹುತೇಕ ಸದಸ್ಯರಂತೂ ಹುಡುಗಿಯವರ ವಜಾಕ್ಕೆ ಆಗ್ರಹಿಸಿಯೂ ಆಗಿದೆ. 
 
ಆದರೂ... ಹುಡುಗಿಯವರನ್ನು ಕಾಪಾಡುತ್ತಿರುವ ಶಕ್ತಿಯಾದರೂ ಯಾವುದು? ಎಂದು ಹುಡುಕಿದರೆ ಅದು ಹೋಗಿ ನಿಲ್ಲುವುದು ಖರ್ಗೆ ಹಾಗೂ ಧರ್ಮಸಿಂಗ್‌ರವರ ಅಖಾಡದಲ್ಲಿ. ಕಳೆದ ಸಲ ಎಂಪಿ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪರವಾಗಿ ಕೆಲಸ ಮಾಡಿದ ಹುಡುಗಿಯವರು ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ ಸಾಧನೆಗಳ ಕುರಿತು ಕೈಪಿಡಿ ಪುಸ್ತಕವನ್ನು ತಯಾರಿಸಿ ಕೊಟ್ಟರು. ಈ ಸಾಧನಾ ಪಟ್ಟಿಯ ಬುಕ್‌ಲೆಟ್ ಬಿಡುಗಡೆಯ ಸಮಾರಂಭದಲ್ಲಿ ಮುಂಚೂಣಿಯಲ್ಲಿದ್ದದ್ದೂ ಸಹ ಹುಡುಗಿಯವರೇ. ಇದರಿಂದಾಗಿ ಹುಡುಗಿಯವರಿಗೆ ಬೆಂಬಲವಾಗಿ ಖರ್ಗೆ ನಿಂತಿದ್ದಾರೆ. ಜೊತೆಗೆ ಧರ್ಮಸಿಂಗ್‌ರವರು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಉಮಾಶ್ರೀಯವರ ಮೇಲೆ ಒತ್ತಡ ತಂದು ಹುಡುಗಿರವರನ್ನು ರಂಗಾಯಣದ ನಿರ್ದೇಶಕರನ್ನಾಗಿಸಿದ್ದಾರೆಂಬುದೂ ಸಹ ಓಪನ್ ಸಿಕ್ರೆಟ್. ಈಗ ಸ್ವಯಂಕೃತ ಅಪರಾಧದಿಂದಾಗಿ ಸಂಕಷ್ಟದಲ್ಲಿರುವ ಹುಡುಗಿಯವರ ಬೆನ್ನ ಹಿಂದೆ ನಿಂತು ಕಾಪಾಡುತ್ತಿರುವುದು ಕಲಬುರುಗಿ ಪ್ರಾಂತ್ಯದ ರಾಜಕೀಯ ಶಕ್ತಿ ಕೇಂದ್ರಗಳಾದ ಖರ್ಗೆ ಮತ್ತು ಧರಂಸಿಂಗ್‌ರವರು. ಹುಡುಗಿಯವರ ಹುಡುಗಾಟದ ಕುರಿತು ಸಂಪೂರ್ಣ ಅರಿವಿದ್ದೂ ಉಮಾಶ್ರೀಯವರು ಅಸಹಾಯಕರಾಗಿದ್ದಾರೆ. ಕೇಂದ್ರ ಸರಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಖರ್ಗೆಯವರನ್ನು ಎದುರು ಹಾಕಿಕೊಳ್ಳುವ ತಾಕತ್ತು ಸಿಎಂ ಸಿದ್ದರಾಮಯ್ಯನವರಿಗಾಗಲೀ ಇಲ್ಲವೆ ಸಚಿವ ಉಮಾಶ್ರೀಯವರಿಗಾಗಲೀ ಈ ಸದ್ಯಕ್ಕಂತೂ ಇಲ್ಲವಾಗಿದೆ. ರಾಜಕೀಯ ಕಾರಣಕ್ಕಾಗಿ ಜಿಲ್ಲಾಡಳಿತವೇ ಹುಡುಗಿಯವರನ್ನು ರಕ್ಷಿಸುತ್ತಿದೆ. ಹಾಗೆಯೆ ಕಲಬುರ್ಗಿಯ ಲಿಂಗಾಯತ ಲಾಬಿಯೂ ಸಹ ಜಾತಿಕಾರಣದಿಂದಾಗಿ ಹುಡುಗಿಯವರ ಹಿಂದೆ ಪರೋಕ್ಷವಾಗಿ ನಿಂತಿದೆ.


ಈ ಶಕ್ತ ರಾಜಕಾರಣ ಹಾಗೂ ಜಾತಿ ರಾಜಕೀಯದ ನಡುವೆ ಅತಂತ್ರವಾಗಿರೋದು ಮಾತ್ರ ರಂಗಾಯಣ ಹಾಗೂ ಅಲ್ಲಿಯ ಕಲಾವಿದರುಗಳು. ಈ ಜಾತಿ ರಗಳೆ ಆಗುವವರೆಗೂ ಅದು ಹೇಗೋ ಕುಂಟುತ್ತಾ ತೆವಳುತ್ತಾ ರಂಗಚಟುವಟಿಕೆಗಳು ರಂಗಾಯಣದಲ್ಲಿ ನಡೆಯುತ್ತಿದ್ದವು. ರಂಜಾನ್ ಉಳ್ಳಾಗಡ್ಡಿಯವರ ನಿರ್ದೇಶನದಲ್ಲಿ ಅತ್ಯಂತ ಬಾಲಿಶವಾದ ನಾಟಕವೊಂದನ್ನು ಮಾಡಿಸಲಾಗಿತ್ತು. ತದನಂತರ ಮಹಾದೇವ್ ಹಡಪದರವರ ನಿರ್ದೇಶನದಲ್ಲಿ ನಾಟಕದ ತಯಾರಿ ನಡೆದು ಅಂತಿಮ ಹಂತಕ್ಕೆ ಬಂದಿತ್ತು ಆದರೆ ರಂಗ ನಿರ್ದೇಶಕರು ಕೇಳಿದ ರಂಗಪರಿಕರಗಳನ್ನು ಒದಗಿಸಲು ಹುಡುಗಿಯರವರು ನಿರಾಕರಿಸಿದ ಮೇಲೆ ಹಡಪದರವರು ನಿರ್ದೇಶನದ ಉಸಾಬರಿಯೇ ಬೇಡವೆಂದು ನೋವಿನಿಂದ ಮರಳಿದರು. ಅಷ್ಟರಲ್ಲಿ ಈ ಎಲ್ಲಾ ಅನಿರೀಕ್ಷಿತ ಘಟನೆಗಳು ನಡೆದವು. ಕಲಾವಿದರು ಬೀದಿಯಲ್ಲಿ ಕೂತು ನ್ಯಾಯಕ್ಕಾಗಿ ಪ್ರತಿಭಟಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಈಗ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ರಂಗಾಯಣದೊಳಗೆ ಕಲಾವಿದರೆಲ್ಲಾ ಹೋಗಿ ಕೂತಿದ್ದು ಬರುತ್ತಿದ್ದಾರೆ. ಅಲ್ಲಿ ಮಾಡಲು ಅವರಿಗೇನೂ ಕೆಲಸವಿಲ್ಲ. ಮಾಡಿಸಬೇಕಾದವರೆ ವಿವಾದಗಳಿಗೆ ಸಿಕ್ಕು ವಿಲಿವಿಲಿಗುಟ್ಟುತ್ತಿದ್ದಾರೆ. ಪರ್ಯಾಯವಾಗಿ ಆಡಳಿತಾಧಿಕಾರಿಗಳ ಮೂಲಕವಾದರೂ ನಾಟಕ ಕಟ್ಟುವ ಕೆಲಸ ಮಾಡಬೇಕಾದ ಸಂಸ್ಕೃತಿ ಇಲಾಖೆ ಕಾದು ನೋಡುವ ತೀರ್ಮಾಣ ತೆಗೆದುಕೊಂಡಿದೆ. ಒಂದು ವಾರದಲ್ಲಿ ತೀರ್ಮಾಣ ತೆಗೆದುಕೊಳ್ಳದಿದ್ದರೆ ರಾಜೀನಾಮೆ ಕೊಡುತ್ತೇವೆಂದು ಜಿ.ಕೆ.ಗೋವಿಂದರಾವ್ ರವರ ಮುಂದಾಳತ್ವದಲ್ಲಿ ಸಭೆಯಲ್ಲಿ ಒತ್ತಾಯಿಸಿದ್ದ ರಂಗಸಮಾಜದ ಸರ್ವ ಸದಸ್ಯರುಗಳೂ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಈ ಕಲಾವಿದರುಗಳ ಗೋಳು ಕೇಳುವವರಾದರೂ ಯಾರು? ಕಳೆದ ತಿಂಗಳು ಕಲಾವಿದರಿಗೆ ಕೊಡಬೇಕಾಗಿದ್ದ ಸಂಬಳದಲ್ಲೂ ಅರ್ಧದಷ್ಟನ್ನು ಸರಕಾರ ತಡೆಹಿಡಿದಿದೆ. ರಂಗಾಯಣದಂತೆಯೇ ಅಲ್ಲಿಯ ಕಲಾವಿದರ ಬದುಕೂ ಅತಂತ್ರವಾಗಿದೆ.
 
ಒಂದೆರಡು ತಿಂಗಳು ಪೊಲೀಸ್ ಅಧಿಕಾರಿಗಳ ಒತ್ತಡಕ್ಕೆ ಮಣಿದು ಮನೆಯೊಳಗೆ ಇದ್ದ ಹುಡುಗಿ ಮಾಸ್ತರರು ಇತ್ತೀಚೆಗೆ ಪತ್ರಿಕಾ ಗೋಷ್ಟಿ ಕರೆದು ಅವಲತ್ತುಕೊಂಡಿದ್ದಾರೆ. ರಂಗಕರ್ಮಿ ಶಂಕರಯ್ಯ ಗಂಟಿ, ನೀನಾಸಂ ಪದವೀಧರ ವಿಶ್ವನಾಥ, ಸುನಿಲ್ ಮಾನ್ಪಡೆ.. ಮುಂತಾದವರು ಸೇರಿಕೊಂಡು ಕಲಾವಿದರ ಮನಸ್ಸನ್ನು ಕೆಡಿಸಿ ನನ್ನ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ.. ಎಂದು ಕಣ್ಣೀರಿಟ್ಟಿದ್ದಾರೆ. ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ. ರಂಗಾಯಣದೊಳಗಿನ ಸಮಸ್ಯೆಗಳನ್ನು ಮೊಳೆತಾಗಲೇ ನಿವಾರಿಸಿ, ಜಾತಿ ಸಂಘರ್ಷ ನಿಲ್ಲಿಸಿ ಸೌಹಾರ್ಧಯುತ ವಾತಾವರಣವೊಂದನ್ನು ಅನಾವರಣಗೊಳಿಸಿದ್ದರೆ ಇಷ್ಟೊಂದು ಅತಿರೀಕಕ್ಕೆ ಹೋಗಲು ಸಾಧ್ಯವಿತ್ತಾ? ಉಗುಳಿಗೆ ಹೋಗುವುದನ್ನು ಕೆರೆಕೆರೆದು ಹುಣ್ಣು ಮಾಡಿಕೊಂಡರೆ ಆಗುವುದು ಹೀಗೇನೇ... ಹೊರಗಿನವರು ಹೇಳಿದಂತೆ ಕೇಳಲು ಅಲ್ಲಿಯ ಕಲಾವಿದರೇನು ಪುಟ್ಟ ಮಕ್ಕಳೇ. ಕೇಳಿದರೆಂದೇ ತಿಳಿದುಕೊಳ್ಳೋಣ.. ಅವರ ಮೇಲೆ ಹಲ್ಲೆ ಆದಾಗ ಹುಡುಗಿ ಮಾಸ್ತರರ ಸಾಕ್ಷೀ ಪ್ರಜ್ಞೆ ಯಾಕೆ ರಜೆಯ ಮೇಲೆ ಹೋಗಿತ್ತು. ಒಬ್ಬಿಬ್ಬರಲ್ಲ ಬಹುತೇಕ ಎಲ್ಲಾ ಕಲಾವಿದರೂ ನಿರ್ದೇಶಕರ ಜಾತಿ ತಾರತಮ್ಯದ ವಿರುದ್ಧ ಸಿಡಿದೇಳಬೇಕಾದರೆ ಇದರಲ್ಲಿ ಹೊರಗಿನವರ ಶಡ್ಯಂತ್ರವಿದೆಯೆಂದು  ಹೇಗೆ ನಂಬುವುದು. ಇದೆಲ್ಲಾ ಗೊತ್ತಾಗಿಯೇ ಸಮುದಾಯದಂತಹ ಹೋರಾಟಪರ ಸಾಂಸ್ಕೃತಿಕ ಸಂಘಟನೆಯು ತನ್ನ ಅಧ್ಯಕ್ಷರ ಸಮರ್ಥನೆಗಿಳಿಯದೇ ದಿವ್ಯ ಮೌನಕ್ಕೆ ಶರಣಾಗಿದೆ. ಏಕಾಂಗಿಯಾಗಿ ಹುಡುಗಿ ಮಾಸ್ತರರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ವಿರೋಧಿಗಳು ಕಾರಣವೆಂದು ಹೇಳಿ ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕೊನೆಗೂ ಹುಡುಗಿ ಮಾಸ್ತರರ ಹುಡುಗಾಟದಿಂದಾಗಿ ರಂಗಾಯಣದ ಗೌರವ ಮಣ್ಣು ಪಾಲಾಗಿದೆ.

ಇಷ್ಟೆಲ್ಲಾ ರಂಪಾ ರಾದ್ದಾಂತ ಆದ ಮೇಲೆಯೂ ಸಮುದಾಯದಂತಹ ಎಡಪಂಥೀಯ ಸಾಂಸ್ಕೃತಿಕ ಸಂಘಟನೆಗೆ ಕಳೆದ ಮೂರು ಅವಧಿಯಿಂದ ಅಧ್ಯಕ್ಷರಾಗಿರುವ ಪ್ರೊ.ಆರ್.ಕೆ.ಹುಡುಗಿಯವರು ರಂಗಾಯಣಕ್ಕೆ ರಾಜೀನಾಮೆ ಕೊಟ್ಟು ವಿಚಾರಣೆಗೆ ಸಹಕರಿಸಿದ್ದರೆ ಅವರ ಗೌರವ ಅಬಾಧಿತವಾಗಿರುತ್ತಿತ್ತು. ತಪ್ಪು ಮಾಡದೇ ಇದ್ದಲ್ಲಿ ಕನಿಷ್ಟ ರಂಗಸಮಾಜದ ಕಮಿಟಿಯ ವಿಚಾರಣೆಗಾದರೂ ಉತ್ತರಿಸಬೇಕಿತ್ತು. ತಮ್ಮದೇ ಕಲಾವಿದರ ಮೇಲೆ ಜಾತಿನಿಂದನೆ ಹಾಗೂ ಹಲ್ಲೆಯಾದಾಗ ನೊಂದವರ ಪರ ನಿಲ್ಲಬೇಕಾಗಿತ್ತು ಎಂದು ಹೇಳಿಕೆಯನ್ನಾದರೂ ಕೊಡಬಹುದಾಗಿತ್ತು. ತಮ್ಮಿಂದಾದ ನ್ಯೂನ್ಯತೆಗಳನ್ನು ಸಮರ್ಥಿಸಿಕೊಳ್ಳದೇ ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ಭರವಸೆಯನ್ನಾದರೂ ನೀಡಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೇ ಯಾವಾಗ ಹಠಮಾರಿ  ಧೋರಣೆಗೆ ಹುಡುಗಿಯವರು ಅಂಟಿಕೊಂಡರೋ ಆಗ ಅವರ ಮೇಲಿನ ಗುಮಾನಿ ಇನ್ನೂ ಹೆಚ್ಚಾಗತೊಡಗಿತು. ಇಷ್ಟು ದಿನಗಳ ಕಾಲ ಸಾಹಿತ್ಯ ಕ್ಷೇತ್ರ ಹಾಗೂ ಸಮುದಾಯ ಸಂಘಟನೆಗಳಲ್ಲಿ ಉಳಿಸಿ ಬೆಳೆಸಿಕೊಂಡು ಬಂದಿದ್ದ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗಿಬಿಟ್ಟಿತು. ಈಗಲೂ ಕಾಲ ಮಿಂಚಿಲ್ಲ... ಅವರಿವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು. ರಂಗಾಯಣಕ್ಕೆ ರಾಜೀನಾಮೆ ಕೊಟ್ಟು ತನಿಖೆಯನ್ನು ದಿಟ್ಟವಾಗಿ ಎದುರಿಸಿದರೆ ಅಳಿದುಳಿದ ಗೌರವವಾದರೂ ಉಳಿಯುತ್ತದೆ. ಹೀಗೆಯೇ ಹಠಕ್ಕೆ ಬಿದ್ದರೆ ಇಂದಿಲ್ಲಾ ನಾಳೆ ಸರಕಾರದಿಂದ ವಜಾಗೊಂಡು ತೊಂದರೆಯನ್ನೂ ಅನುಭವಿಸಬೇಕಾಗುತ್ತದೆ. ಇದನ್ನು ಹುಡುಗಿಯಂತಹ ಹಿರಿಯರಿಗೆ ಹೇಳುವವರು ಯಾರು? ಹೇಳಿದರೂ ಕೇಳುವ ಮನಸ್ಥಿತಿಯಲ್ಲಿ ಹುಡುಗಿಯವರು ಇಲ್ಲವೆನ್ನುವುದೇ ಪ್ರಸ್ತುತ ಪ್ರಾಬ್ಲೆಂ. ಹುಡುಗಿಯವರನ್ನು ಈ ದುಸ್ತಿತಿಗೆ ತಂದಿದ್ದು ಅವರ ಉಡಾಫೆ ಮಾತುಗಳು ಹಾಗೂ ನಿರ್ಲಕ್ಷ ಧೋರಣೆಗಳು. ಇವೆರಡನ್ನೂ ನಿಯಂತ್ರಣದಲ್ಲಿಟ್ಟಿದ್ದರೆ ಕಲಬುರಗಿ ರಂಗಾಯಣ ಇನ್ನೂ ಆರಂಭದಲ್ಲೇ ಹೀಗೆ ಆಡಿಕೊಳ್ಳುವವರ ಬಾಯಿಗೆ ಎಲೆಯಡಿಕೆ ಆಗುತ್ತಿರಲಿಲ್ಲ.

ಇಷ್ಟೆಲ್ಲಾ ಆದರೂ ರಂಗಕರ್ಮಿಗಳು ಯಾಕೆ ಬಾಯಿ ಬಿಡುತ್ತಿಲ್ಲ. ತಮಗಾದ ಅನ್ಯಾಯದ ವಿರುದ್ದ ಕಲಾವಿದರುಗಳೇ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ, ಅನೇಕಾನೇಕ ಸಂಘ ಸಂಸ್ಥೆಗಳು ಕಲಾವಿದರ ಹೋರಾಟಕ್ಕೆ ಬೆಂಬಲಿಸಿ ಮೆರವಣಿಗೆ ಧರಣಿಗಳನ್ನು ಮಾಡುತ್ತಿದ್ದರೂ ಬೆಂಗಳೂರು ಕೇಂದ್ರದ ರಂಗಕಲಾವಿದರುಗಳು ಹಾಗೂ ರಂಗಭೂಮಿಯ ಹಿರಿಯರು ಯಾಕೆ ವಿರೋಧಿಸುವ ಇಲ್ಲವೇ ಸಮರ್ಥಿಸುವ ಹೇಳಿಕೆ ಕೊಡುತ್ತಿಲ್ಲ. ಯಾಕೆಂದರೆ ಕೆಲವು ರಂಗಕರ್ಮಿಗಳಿಗೆ ಸರಕಾರದ ವಿರುದ್ಧ, ಸಂಸ್ಕೃತಿ ಇಲಾಖೆಯ ವಿರುದ್ಧ ಮಾತಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರು ಯಾವುಯಾವುದೋ ರೀತಿಯಲ್ಲಿ ಫಲಾನುಭವಿಗಳಾಗಿದ್ದಾರೆ ಇಲ್ಲವೇ ಪ್ರಶಸ್ತಿ ಪದವಿಯ ನಿರೀಕ್ಷೆಗಳಲ್ಲಿದ್ದಾರೆ. ಯಾರೋ ಹತ್ತು ಜನ ಕಲಾವಿದರಿಗಾಗಿ ಯಾಕೆ ಸರಕಾರದ ಕೆಂಗೆಣ್ಣಿಗೆ ಗುರಿಯಾಗಬೇಕು ಎನ್ನುವು ಧೋರಣೆಗೆ ಅಂಟಿಕೊಂಡಿದ್ದಾರೆ. ಇನ್ನು ಕೆಲವು ರಂಗಬದ್ದತೆ ಉಳ್ಳವರೂ ಇದ್ದಾರೆ.. ಅವರೂ ಸುಮ್ಮನಿದ್ದಾರೆ. ಸರಕಾರ ಇದೇ ನೆಪವನ್ನು ಹೇಳಿ ಅದೆಲ್ಲಿ ರಂಗಾಯಣವನ್ನೇ ಮುಚ್ಚಿ ಬಿಡುತ್ತದೋ ಎನ್ನುವ ಚಿಂತೆ ಅವರದು.

ಯಾಕೆಂದರೆ ಕಲಬುರಗಿ ರಂಗಾಯಣಕ್ಕೆ ವಾರ್ಷಿಕ ಒಂದು ಕೋಟಿ ರೂಪಾಯಿ ಅನುದಾನವನ್ನು ಹೊರತು ಪಡಿಸಿ ತನ್ನದೇ ಎನ್ನುವ ಯಾವ ಸ್ವಂತ ಅಸ್ತಿತ್ವವೂ ಈ ಸಧ್ಯಕ್ಕೆ ಇಲ್ಲ. ಅದು ನಡೆಯುತ್ತಿರುವ ಕಟ್ಟಡ ಸಂಸ್ಕೃತಿ ಇಲಾಖೆಯದ್ದು. ತಾಲಿಂ ನಡೆಸುವ ಜಾಗ ಅರ್ಧ ಕಟ್ಟಿ ಬಿಟ್ಟ ಸರಕಾರಿ ರಂಗಮಂದಿರದ್ದು. ಯಾವುದೇ ಸ್ವಂತ ಕಟ್ಟಡವಿಲ್ಲದೇ, ಇನ್ನೂ ಗಟ್ಟಿಯಾಗಿ ಬೇರೂರದೇ ಅತಂತ್ರವಾಗೇ ಇರುವ ರಂಗಾಯಣವನ್ನು ಮುಚ್ಚಿ ಬಿಡುವುದು ಸರಕಾರಕ್ಕೆ ಬಹಳ ಸುಲಭವಾದ ಸಂಗತಿ. ಅದೆಷ್ಟೋ ದಿನ ಅದೆಷ್ಟೋ ಜನ ಕಲಬುರಗಿಯ ರಂಗಾಸಕ್ತರು ಸರಕಾರದ ಮೇಲೆ ಒತ್ತಡ ಹೇರಿ ಮಂಜೂರು ಮಾಡಿಸಿಕೊಂಡ ರಂಗಾಯಣವು ಹೀಗೆ ವಿವಾದಕ್ಕೊಳಗಾಗಿ ವಿನಾಶಗೊಳ್ಳುವುದು ಬೇಕಾಗಿಲ್ಲ. ಆದರೆ.. ರಂಗನಿಷ್ಠೆ ಇರುವ ರಂಗಕರ್ಮಿಗಳು ಸರಕಾರವನ್ನು ನೇರವಾಗಿ ವಿರೋಧಿಸಲಾಗದಿದ್ದರೆ ಸಮಸ್ಯೆಯನ್ನಾದರೂ ಶೀಘ್ರವಾಗಿ ಪರಿಹರಿಸಲು ಒತ್ತಾಯಿಸಬಹುದಾಗಿತ್ತು. ಹುಡುಗಿಯವರ ಮೇಲೆ ಜಾತಿ ನಿಂದನೆ ಹಾಗೂ ಲೈಂಗಿಕ ಕಿರುಕುಳದಂತಹ ಗುರುತರ ಆರೋಪ ಬಂದಾಗ ಅವರನ್ನು ಅಮಾನತುಗೊಳಿಸಿ ತಾತ್ಕಾಲಿಕವಾಗಿ ಆಡಳಿತಾಧಿಕಾರಿಗಳ ಮೂಲಕವಾದರೂ ರಂಗಭೂಮಿ ಚಟುವಟಿಕೆ ನಡೆಯಲು ಅನುವು ಮಾಡಿಕೊಡಲು ಸಂಸ್ಕೃತಿ ಇಲಾಖೆಯನ್ನು ಒತ್ತಾಯಿಸಬಹುದಾಗಿತ್ತು. ಆದರೆ.. ರಂಗಕರ್ಮಿಗಳದ್ದು  ದಿವ್ಯ ಮೌನವಾದರೆ .. ಕಲಬುರಗಿ ರಂಗಾಯಣದಲ್ಲೀಗ ಸ್ಮಶಾನ ಮೌನ. ಸಮಸ್ಯೆಯನ್ನು ವಿಳಂಬಗೊಳಿಸಿದಷ್ಟೂ ಅದು ಉಲ್ಬಣಗೊಳ್ಳುತ್ತದೆ. ಅದನ್ನು ಸಚಿವೆ ಉಮಾಶ್ರೀಯವರು ಆದಷ್ಟು ಬೇಗ ಬಗೆಹರಿಸಿ ಇನ್ನೊಬ್ಬ ಬದ್ಧತೆಯಿರುವ ರಂಗಕರ್ಮಿಗೆ ಕಲಬುರಗಿ ರಂಗಾಯಣವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಡುವಂತಹ ಸಕಾರಾತ್ಮಕ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ. 

ಆದರೆ.... ಈಗಾಗಲೇ ಸಂಸ್ಕೃತಿ ಇಲಾಖೆ ಬೇರೆಯದೇ ಆದ ತಂತ್ರಗಾರಿಕೆಯನ್ನು ಹೊಸೆಯುತ್ತಿದೆಯಂತೆ. ಕಲಬುರಗಿ ರಂಗಾಯಣವನ್ನು ರದ್ದು ಮಾಡಬೇಕು ಇಲ್ಲವೇ ರಾಯಚೂರಿಗೆ ವರ್ಗಾಯಿಸಬೇಕು ಎನ್ನುವ ಮಾತುಕತೆಗಳು ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಅದಕ್ಕಾಗಿಯೇ ಯಾವುದೇ ರಂಗಚಟುವಟಕೆಗಳು ನಡೆಯುವುದನ್ನು ನಿರ್ಬಂಧಿಸಲಾಗಿದೆ. ಕಲಬುರಗಿ ರಂಗಾಯಣದಲ್ಲಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈಗ ಸರಕಾರದ ಮುಂದೆ ಎರಡು ಆಯ್ಕೆಗಳಿವೆ. ಒಂದು ವಿವಾದದ ಕೇಂದ್ರಬಿಂದುವಾದ ಆರ್.ಕೆ.ಹುಡುಗಿಯವರನ್ನು ವಜಾಗೊಳಿಸಬೇಕು ಇಲ್ಲವೇ ಈಗಿರುವ ಕಲಾವಿದರನ್ನು ಮನೆಗೆ ಕಳಿಸಿ ಹೊಸ ಕಲಾವಿದರನ್ನು ನೇಮಕ ಮಾಡಿಕೊಳ್ಳಬೇಕು. ಆದರೆ ಇದರಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅಸಮಾಧಾನ ಬುಗಿಲೆದ್ದು ಹೋರಾಟ ಅರಂಭವಾಗುತ್ತದೆ. ಸಮಸ್ಯೆ ಇನ್ನೂ ತೀವ್ರವಾಗುತ್ತದೆ. ಯಾಕೆಂದರೆ ಹುಡುಗಿಯವರಿಗೆ ಪ್ರಮುಖ ರಾಜಕೀಯ ಶಕ್ತಿಗಳ ಬೆಂಬಲವಿದ್ದರೆ.. ಕಲಾವಿದರಿಗೆ ಲೋಕಲ್ ಸಂಘ ಸಂಸ್ಥೆಗಳ ಬೆಂಬಲವಿದೆ. ಈ ಅಪಾಯವನ್ನು ಮನಗಂಡ ಸಂಸ್ಕೃತಿ ಇಲಾಖೆ ಕಲಬುರ್ಗಿ ರಂಗಾಯಣವನ್ನೇ ರದ್ದು ಮಾಡಲು ಯೋಚಿಸುತ್ತಿದೆ. ಹಾಗೆ ಮಾಡಿದರೂ ವಿರೋಧ ತಪ್ಪಿದ್ದಲ್ಲ. ಹೀಗಾಗಿ ಹೈದರಾಬಾದ್ ಕರ್ನಾಟಕದ ಇನ್ನೊಂದು ಪ್ರಮುಖ ಜಿಲ್ಲೆಯಾಗಿರುವ ರಾಯಚೂರಿಗೆ ರಂಗಾಯಣವನ್ನು ಸ್ಥಳಾಂತರ ಮಾಡವ ಸಾಧ್ಯತೆಗಳನ್ನು ಆಡಳಿತಾಂಗ ಪರಿಶೀಲಿಸುತ್ತಿದೆ. ರಾಯಚೂರಿನಲ್ಲಿ ಹೊಸದಾಗಿ ರಂಗಾಯಣದ ಘಟಕ ಆರಂಭಿಸಿ ಅದಕ್ಕೆ ಹೊಸ ನಿರ್ದೇಶಕರು ಹಾಗೂ ಕಲಾವಿದರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ಇಲಾಖೆಯ ಅಧಿಕಾರಿಗಳಲ್ಲಿ ಶುರುವಾಗಿದ್ದು ಇದನ್ನು ಸಚಿವೆ ಉಮಾಶ್ರೀಯವರಿಗೂ ಮುಟ್ಟಿಸಲಾಗಿದೆ. ಆದರೆ ಉಮಾಶ್ರೀಯವರು ಕಾಯ್ದು ನೋಡುವ ತಂತ್ರಕ್ಕೆ ಬದ್ಧರಾಗಿದ್ದಾರೆ.  ಸರಕಾರ ಹಾಲಿ ಕಲಬುರಗಿ ರಂಗಾಯಣವನ್ನು ಮುಚ್ಚಲಿ ಇಲ್ಲವೇ ಸ್ಥಳಾಂತರಿಸಲಿ ಇವೆರಡೂ ಉತ್ತಮ ನಿರ್ದಾರಗಳಲ್ಲ. ಯಾಕೆಂದರೆ ನೆಗಡಿಯಾಗಿದೆಯೆಂದು ಯಾರೂ ಮೂಗನ್ನು ಕೊಯ್ದುಕೊಳ್ಳುವುದಿಲ್ಲ.. ಇಲ್ಲವೇ ಬಾಯಲ್ಲಿ ಉಸಿರಾಡಿ ಬದುಕುತ್ತೇವೆನ್ನುವುದಿಲ್ಲ. ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡಿ ಆರೋಗ್ಯವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದೇ ಸರಿಯಾದ ಮಾರ್ಗವಾಗಿದೆ. ಈಗ ಉಲ್ಬಣಗೊಂಡ ಸಮಸ್ಯೆಗೆ ಈ ರೀತಿಯ ಪರಿಹಾರ ಕಂಡುಕೊಳ್ಳಬಹುದಾಗಿದೆ. ಒಂದು.. ರಂಗಸಮಾಜದ ಮುಂದಾಳತ್ವದಲ್ಲಿ ಕಲಾವಿದರು ಹಾಗೂ ನಿರ್ದೇಶಕ ಹುಡುಗಿಯವರನ್ನು ಮುಖಾ ಮುಖಿ ಕೂಡಿಸಿ, ಆದ ತಪ್ಪುಗಳನ್ನು ತಿಳಿಯಪಡಿಸಿ ಪರಸ್ಪರ ರಾಜಿಮಾಡಿಸಿ ರಂಗಾಯಣದ ಕಾರ್ಯಚಟುವಟಿಕೆಗಳು ಮುಂದುವರೆಯುವಂತೆ ಮಾಡುವುದು. ಆದರೆ... ಇದು ಸಧ್ಯದ ಪರಿಸ್ಥಿತಿಯಲ್ಲಿ ಕಷ್ಟಕರ. ಎರಡನೇಯದ್ದು.. ರಾಜೀನಾಮೆ ಕೊಡದೆ ಹಠಕ್ಕೆ ಬಿದ್ದ ಹುಡುಗಿಯವರನ್ನು ವಜಾಗೊಳಿಸಿ ಅವರ ಹಿಂದಿರುವ ಶಕ್ತಿಗಳಿಗೆ ಸಮಸ್ಯೆಯ ತೀವ್ರತೆಯನ್ನು ತಿಳಿಸಬೇಕು. ಮೂರನೆಯದಾಗಿ ಕಲಾವಿದರು ಹೀಗೆ ಗುಂಪುಗಾರಿಕೆಯನ್ನು ಮುಂದುವರೆಸಿದರೆ, ರಂಗಚಟುವಟಿಕೆ ಬಿಟ್ಟು ಇತರೆ ಕೆಲಸಗಳಿಗೆ ಕೈಹಾಕಿದರೆ ಮನೆಗೆ ಕಳುಹಿಸುವುದಾಗಿ ಎಚ್ಚರಿಕೆ ಕೊಡಬೇಕು. ನಾಲ್ಕನೆಯದಾಗಿ ರಂಗಭೂಮಿಯಲ್ಲಿ ಪುಲ್‌ಟೈಮ್ ಆಗಿ ತೊಡಗಿಸಕೊಂಡು ರಂಗಬದ್ಧತೆ ಇದ್ದು ರಂಗಸಂಘಟನೆಯಲ್ಲಿ ಪಳಗಿದ ರಂಗಕರ್ಮಿಯನ್ನು ನಿರ್ದೇಶಕರಾಗಿ ನಿಯಮಿಸಬೇಕು. ಏನಾದರಾಗಲಿ ರಂಗಾಯಣ ಮುಚ್ಚುವ ಇಲ್ಲವೇ ಸ್ಥಳಾಂತರಿಸುವ ಯೋಚನೆ ಬಿಟ್ಟು, ವಿಳಂಬ ರಾಜಕೀಯವನ್ನು ಬದಿಗಿಟ್ಟು ಶೀಘ್ರದಲ್ಲಿ ಯಾವುದಾದರೊಂದು ನಿರ್ಣಯವನ್ನು ತೆಗೆದುಕೊಂಡು ಕಲಬುರಗಿ ರಂಗಾಯಣವನ್ನು ರಂಗಚಟುವಟಿಕೆಗಳ ಕೇಂದ್ರವಾಗಿ ಮಾಡುವತ್ತ ಇಲಾಖೆಯ ಅಧಿಕಾರಿಗಳು, ರಂಗಸಮಾಜದ ಸದಸ್ಯರುಗಳು, ಹಾಗೂ ಸರಕಾರಿ ಸಚಿವರುಗಳು ಕಾರ್ಯಪ್ರವೃತ್ತರಾಗಬೇಕಿದೆ. ಒಟ್ಟಾರೆಯಾಗಿ ಬಿ.ವಿ.ಕಾರಂತರ ಆಶಯದಂತೆ ರಂಗಾಯಣವು ವೃತ್ತಿಪರ ರೆಪರ್ಟರಿಯಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಬೇಕಿದೆ. ಕಾರಂತರು ಕಂಡ ಸದೃಡ, ಸಮೃದ್ದ ರಂಗಾಯಣದ ಕನಸು ನನಸಾಗಲೇಬೇಕಿದೆ.

                  -  ಶಶಿಕಾಂತ ಯಡಹಳ್ಳಿ


ರಂಗಭೂಮಿಯು ಜಾತಿ ಕೋಮುಗಳನ್ನು ಮೀರಿ ಬೆಳೆದಿದೆ. ಆದರೆ ಕಲಬುರಗಿ ರಂಗಾಯಣದಲ್ಲಿ ಈ ಜಾತಿಯತೆಯ ಸಮಸ್ಯೆ ಉಲ್ಬಣಗೊಂಡಿದ್ದು ತೀರಾ ನೋವು ತರುವಂತಹ ಸಂಗತಿಯಾಗಿದೆ. ನಮ್ಮ ಗುರುಗಳಾದ ಬಿ.ವಿ.ಕಾರಂತರ ಆಶಯಕ್ಕೆ ವಿರೋಧಿಯಾದ ಕೆಲಸಗಳನ್ನು ಎಲ್ಲರೂ ವಿರೋಧಿಸಲೇಬೇಕಿದೆ. ಹೀಗಾಗಿ ರಂಗಸಾಮಾಜದ ವರದಿಯನ್ನು ಸರಕಾರ ಜಾರಿಗೆ ತರಲು ಹಿಂಜರಿದಾಗ ರಂಗಸಮಾಜದ ನಾವೆಲ್ಲಾ ರಾಜೀನಾಮೆ ಕೊಡಬೇಕಾಗುತ್ತದೆಂದು ಹೇಳಬೇಕಾಯಿತು. ಒಟ್ಟಾರೆಯಾಗಿ ರಂಗಾಯಣವನ್ನು ಉಳಿಸಿ ಬೆಳೆಸುವ ಕೆಲಸ ಈಗ ಆಗಬೇಕಿದೆ.    
- ಮಂಡ್ಯ ರಮೇಶ್.   ರಂಗಸಮಾಜದ ಸದಸ್ಯರು



ಕಲಬುರ್ಗಿ ರಂಗಾಯಣದಲ್ಲಾದ ಪ್ರಸ್ತುತ ಅನಿರೀಕ್ಷಿತ ಘಟನೆಗಳು ತುಂಬಾ ಆತಂಕಕಾರಿಯಾಗಿವೆ. ವಿಷಯ ಗೊತ್ತದ ಕೂಡಲೇ ರಂಗಾಯಣಕ್ಕೆ ಹೋಗಿ ಪ್ರತಿಯೊಬ್ಬ ಕಲಾವಿದರನ್ನೂ ಬೇಟಿಯಾಗಿ ಸಾಂತ್ವನ ಹೇಳಿದ್ದೇನೆ. ಆದರೂ ಅದ್ಯಾಕೋ ನನ್ನನ್ನು ಕಲಾವಿದರ ವಿರೋಧಿ ಎನ್ನುವ ಹಾಗೆ ಕೆಲವರು ಪೋಕಸ್ ಮಾಡುತ್ತಿದ್ದಾರೆ. ಆದರೆ.. ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆಯೂ  ರಂಗಾಯಣವು ರಂಗಭೂಮಿಯ ಚಟುವಟಿಕೆಗಳ ಕೇಂದ್ರವಾಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ. 
-ಸುಜಾತಾ ಜಂಗಮಶೆಟ್ಟಿ. ರಂಗಸಮಾಜದ ಸದಸ್ಯರು    

ಸ್ಥಳೀಯ ಕಲಾವಿದೆಯೊಬ್ಬಳು ತನ್ನ ಸಹಕಲಾವಿದರ ಮೇಲೆ ದೌರ್ಜನ್ಯ ಎಸಗಿದ್ದಾರೆ. ದಲಿತ ಕಲಾವಿದರಿಗೆ ಜಾತಿ ನಿಂದನೆ ಮಾಡಿ ನಿಮ್ಮೊಂದಿಗೆ ನಟಿಸುವುದಿಲ್ಲವೆಂದು ದಮಕಿ ಹಾಕಿದ್ದಾರೆ. ದೌರ್ಜನ್ಯ ನಡೆಸಿದ ಕಲಾವಿದೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬದಲಿಗೆ ಸ್ವತಃ ರಂಗಾಯಣದ ನಿರ್ದೇಶಕರೇ ಅವಳ ಪರವಾಗಿ ವಾದಿಸುತ್ತಿದ್ದಾರೆ. ಗೂಂಡಾಗಳನ್ನು ಕರೆಸಿ ಕಲಾವಿದರುಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ. ನಿರ್ದೇಶಕರ ಜೊತೆಗೆ ಲಕ್ಷ್ಮೀ ಕರೋಜಿಯನ್ನೂ ರಂಗಾಯಣದಿಂದ ವಜಾ ಮಾಡಬೇಕು. ಕಲಾವಿದರಿಗೆ ಪೊಲೀಸ್ ರಕ್ಷಣೆ  ಕೊಡಬೇಕು.
-      - ಸುನೀಲ್ ಮಾನ್ಪಡೆ.  ಸಾಮಾಜಿಕ ಹೋರಾಟಗಾರ.

ರಂಗಭೂಮಿಗೆ ಸಂಬಂಧಿಸಿದಂತೆ ರಂಗಾಯಣದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಹೊರಗಿನಿಂದ ತಂಡಗಳನ್ನು ಕರೆಸಿ ನಾಟಕಗಳನ್ನು ಆಯೋಜಿಸುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಏನು ಮಾಡಬೇಕು ಎನ್ನುವ ಕನಿಷ್ಟ ಪರಿಜ್ಞಾನವೂ ರಂಗಾಯಣದ ನಿರ್ದೇಶಕರಿಗಿಲ್ಲ. ಅರೇಳು ತಿಂಗಳಾದರೂ ಕಲಾವಿದರುಗಳಿಗೆ ಯಾವುದೇ ತರಬೇತಿ ನೀಡಲಾಗಿಲ್ಲ. ಹುಡುಗಿಯವರು ತಮ್ಮ ಸ್ವಪ್ರತಿಷ್ಟೆಗೆ ರಂಗಾಯಣವನ್ನು ಬಲಿಕೊಡುತ್ತಿದ್ದಾರೆ.  
-       -ರವಿಕುಮಾರ  ಬಿಸರಳ್ಳಿ   ರಂಗಾಯಣದ  ಕಲಾವಿದ   
  
    ಕಲಬುರಗಿ ರಂಗಾಯಣದ ಬೆಳವಣಿಗೆಗಳ ಕುರಿತು ಈಗಾಗಲೇ ಸತ್ಯಶೋಧನಾ ಸಮಿತಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆ ವರದಿಯಲ್ಲಿ ಏನಿದೆ ಎಂಬುದನ್ನು ನೋಡಿ ಕ್ರಮ ಕೈಗೊಳ್ಳಬೇಕಾದ ಸರಕಾರ ಸುಮ್ಮನೆ ಕುಳಿತಿದೆ. ಒಬ್ಬ ವ್ಯಕ್ತಿ ಅರ್ಥವಾಗಬೇಕಾದರೆ ಆತನಿಗೆ ಹಣ ಮತ್ತು ಅಧಿಕಾರ ಕೊಟ್ಟು ನೋಡು ಎನ್ನುವ ಮಾತಿದೆ. ಕೇವಲ ಭಾಷಣ ಕೇಳುವುದರಿಂದ ಆ ವ್ಯಕ್ತಿಯನ್ನು ತೂಗಿ ನೋಡಲು ಸಾಧ್ಯವಿಲ್ಲ..
-      -ಡಿ.ಜಿ.ಸಾಗರ್   ಡಿಎಸ್‌ಎಸ್ ರಾಜ್ಯ ಸಂಚಾಲಕ

   ಕಲಬುರುಗಿ ರಂಗಾಯಣ ಕನ್ನಡ ರಂಗಭೂಮಿಗೆ ಒಂದು ಕಪ್ಪು ಚುಕ್ಕೆ ಇದ್ದಂತೆ. ವಿವಿಧ ಸಮಿತಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಿದರೆ ಅದರ ಪರಿಣಾಮ ಕಲಾವಿದರು ಹಾಗೂ ರಂಗಚಟುವಟಿಕೆಗಳ ಮೇಲೆ ಬೀರಲಿದೆ.
-      - ಡಾ.ಸ್ವಾಮಿರಾವ್ ಕುಲಕರ್ಣಿ  ಹಿರಿಯ ಸಾಹಿತಿಗಳು
    
     ರಂಗಾಯಣದ ಮೂಲಕ ಯಾವುದೇ ಸಾಂಸ್ಕೃತಿಕ ಚಟುವಟಿಕೆ ಬೇಡ ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದರಿಂದ ಈಗ ಯಾವುದೇ ಚಟುವಟಿಕೆ ಮಾಡುತ್ತಿಲ್ಲ. ಮಕ್ಕಳ ಬೇಸಿಗೆ ತರಬೇತಿ ಶಿಬಿರಕ್ಕಾಗಿ ಕ್ರಿಯಾಯೋಜನೆ ರೂಪಿಸಿ ಕಳುಹಿಸಲಾಗಿತ್ತು. ಮಾಡುವುದು ಬೇಡ ಎಂದು ಸೂಚನೆ ಬಂದಿದ್ದರಿಂದ ಕೈಬಿಡಲಾಗಿದೆ. ಹೀಗಾಗಿ ಕಲಾವಿದರು ಸುಮ್ಮನೆ ಸಹಿ ಹಾಕಿ ಕೂಡುತ್ತಿದ್ದಾರೆ. ಹಾಜರಾತಿ ಇದ್ದದವರಿಗೆ ಸಂಬಳ ಪಾವತಿಸಲಾಗುತ್ತಿದೆ. ಗೈರು ಹಾಜರಾದ ಕಲಾವಿದರ ಸಂಬಳ ತಡೆ ಹಿಡಿಯಲಾಗಿದೆ.
-     -ಜಗದೀಶ್ವರಿ ಶಿವಕೇರಿ   ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕಲಬುರಗಿ.

  ಕೆಲವು ಕುತ್ಸಿತಮತಿಗಳ ಕುಮ್ಮಕ್ಕಿನಿಂದ ಮತ್ತು ಕಲಾವಿದರ ತಪ್ಪು ಕಲ್ಪನೆಯಿಂದ ರಂಗಾಯಣದಲ್ಲಿ ಅಹಿತಕರ ಸಂಗತಿಗಲಾಗಿವೆ. ರಂಗಾಯಣದ ಕ್ರಿಯೆ ಮುಂದುವರೆಸಲು ಸರಕಾರ ಮಧ್ಯ ಪ್ರವೇಶಿಸಬೇಕು.
-   -ಪ್ರೊ. ಆರ್.ಕೆ.ಹುಡುಗಿ  ಕಲಬುರಗಿ ರಂಗಾಯಣದ ನಿರ್ದೇಶಕರು

   ಕಲಾವಿದರನ್ನು ಗೌರವಿಸಬೇಕು. ರಂಗಾಯಣದಲ್ಲಿ ರಂಗ ಚಟುವಟಿಕೆಗಳೇ ಇಲ್ಲ ಎಂದರೆ ಖೇದ ಉಂಟಾಗುತ್ತದೆ. ಜಾತಿ ನಿಂದನೆ ಮಾಡಿರುವ ಪ್ರೊ.ಹುಡುಗಿ ಅವರನ್ನು ನಿರ್ದೇಶಕರ ಸ್ಥಾನದಿಂದ ತೆಗೆಯುವವರೆಗೂ ಸತ್ಯಾಗ್ರಹ ಮಾಡಲಿದ್ದೇವೆ.
-   - ವಿಜಯಲಕ್ಷ್ಮೀ ಮತ್ತು ಲಕ್ಷ್ಮಣ್.. ರಂಗಾಯಣ ಕಲಾವಿದರು.

    ಕಲಬುರಗಿ ಹಿಂದುಳಿದಿದೆ ಎಂಬ ಮಾತಿಗೆ ರಂಗಾಯಣದ ಕಲಹಗಳು ಇಂಬು ನೀಡುತ್ತಿವೆ. ಬೇರೆ ಮೂರೂ ರಂಗಾಯಣಗಳಲ್ಲಿ ಬೇಸಿಗೆ ಶಿಬಿರ, ನಾಟಕಗಳನ್ನು ಮಾಡಿಸುತ್ತಿದ್ದಾರೆ. ಆದರೆ ಕಲಬುರುಗಿ ರಂಗಾಯಣದಲ್ಲಿ ಕಲಾವಿದರ ಶ್ರಮ, ಸಂಬಳ, ಆಡಳಿತಾತ್ಮಕ ಕೆಲಸಗಳೆಲ್ಲ ನಿಷ್ಕ್ರೀಯವಾಗಿವೆ. ಯಾರದೋ ತಪ್ಪಿನಿಂದ ರಂಗಾಯಣ ಹಾಳಾಗುತ್ತಿರುವುದು ಸರಿಯಲ್ಲ. ಸರಕಾರ ವಿಳಂಬ ಮಾಡದೇ ಇದಕ್ಕೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕಿದೆ.
-    - ಶಂಕರಯ್ಯ ಘಂಟಿ  ರಂಗಕರ್ಮಿಗಳು.













ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ