ಶುಕ್ರವಾರ, ಫೆಬ್ರವರಿ 24, 2017

ನಾಟಕ ಅಕಾಡೆಮಿ ಅಧ್ಯಕ್ಷತೆ ಯಾರ ಪಾಲಿಗೆ?



ರಂಗಭೂಮಿ ಆಯಾಮ ವಿಸ್ತರಿಸುವವರು ಬೇಕಿದೆ !



ಎಲ್ಲಾ ಸರಕಾರಿ ಕೃಪಾಪೋಷಿತ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳ ಮೂರು ವರ್ಷದ ಅಧಿಕಾರಾವಧಿ ಫೆಬ್ರುವರಿ 27ಕ್ಕೆ ಮುಕ್ತಾಯವಾಯಿತು. ಇನ್ನು ಒಂದೂಕಾಲು ವರ್ಷ ಮಾತ್ರ ಕಾಂಗ್ರೆಸ್ ಸರಕಾರದ ಅವಧಿ ಇರುವುದರಿಂದ ಅಕಾಡೆಮಿಗಳ ಅಧ್ಯಕ್ಷರ ಆಡಳಿತದ ಅವಧಿಯನ್ನು ಇನ್ನೂ ಒಂದು ವರ್ಷಗಳ ಕಾಲ ಮುಂದುವರೆಸಲಾಗುವುದು ಎಂಬ ಆಶಾಭಾವನೆ ಅಧ್ಯಕ್ಷರಾಧಿಯಾಗಿ ಸದಸ್ಯರುಗಳಿಗೆಲ್ಲಾ ಇತ್ತು. ಆದರೆ.. ಅದಕ್ಕೆ ಸಚಿವೆ ಉಮಾಶ್ರೀಯವರು ತಣ್ಣೀರೆರಚಿದ್ದಾರೆ. ಅವಧಿ ಮುಗಿದ ತಕ್ಷಣವೇ ಜಾಗ ಖಾಲಿ ಮಾಡಲು ಅಧಿಕೃತವಾಗಿಯೇ ತಿಳಿಸಿದ್ದಾರೆ. ಮತ್ತು ಸಂಸ್ಕೃತಿ ಇಲಾಖೆಯಿಂದ ಎಲ್ಲಾ ಅಧ್ಯಕ್ಷರಿಗೂ ಫೆ.27ರಂದು ಬೀಳ್ಕೊಡುಗೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ತಮ್ಮ ಅಧಿಕಾರಾವಧಿ ಮುಂದುವರೆಯದೇ ಇಲ್ಲಿಗೆ ಮುಗಿಯುತ್ತದೆ ಎನ್ನುವುದು ಅರಿತ ಕೆಲವು ಅಕಾಡೆಮಿ ಅಧ್ಯಕ್ಷರುಗಳು ಹೋಗುವ ಮುನ್ನ ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಡಿ ಮುಗಿಸಿವೆ. ಕರ್ನಾಟಕ ನಾಟಕ ಅಕಾಡೆಮಿಯು 2 ಕೋಟಿಗಳ ವಿಶೇಷ ಅನುದಾನವನ್ನು ಪಡೆದು ಧಾರವಾಡದಲ್ಲಿ ಹವ್ಯಾಸಿ ರಂಗಭೂಮಿ ಸಮಾವೇಶ ಮಾಡಿದರೆ, ಸಾಹಿತ್ಯ ಅಕಾಡೆಮಿಯು ಬೆಂಗಳೂರಿನಲ್ಲಿ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭ ಮಾಡಿತು. ಜಾನಪದ ಅಕಾಡೆಮಿಯು ಮರಳಿ ಜನಪದಕ್ಕೆ ಹೆಸರಿನಲ್ಲಿ ವಿವಿಧ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಿತು.

ಅಂತೂ ಇಂತೂ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಾಧನೆ ಯೋಜನೆಗಳು ಏನೇ ಇರಲಿ ಮೂರು ವರ್ಷವಂತೂ ಮುಗಿಯಿತು. ಅದರ ಜೊತೆಗೆ ಮುಂದಿನ ಅಧ್ಯಕ್ಷರಾಗಲು ಪೈಪೋಟಿ ಶುರುವಾಯಿತು. ಬೇರೆ ಅಕಾಡೆಮಿಗಳ ಮಾತು ಆಮೇಲಿರಲಿ.. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲು ಕೆಲವರು ಆರು ತಿಂಗಳಿಂದ ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಪ್ರಮುಖರಾದವರು ಎಲ್.ಕೃಷ್ಣಪ್ಪ ಹಾಗೂ ಗುಡಿಹಳ್ಳಿ ನಾಗರಾಜ್. ಕಳೆದ ಸಲವೂ ಸಹ ಕೃಷ್ಣಪ್ಪನವರು ಅಧ್ಯಕ್ಷರಾಗಲು ತುಂಬಾನೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಗುಡಿಹಳ್ಳಿಯವರೂ ಸಹ ಎಷ್ಟೇ ತೆರೆಮರೆಯಲ್ಲಿ ಪ್ರಯತ್ನಿಸಿದರೂ ಅಧ್ಯಕ್ಷರಿರಲಿ ಸದಸ್ಯರ ಪಟ್ಟಿಯಲ್ಲೂ ಆಯ್ಕೆಯಾಗಲಿಲ್ಲ. ಕೊನೆಗೆ ಅತ್ತೂ ಕರೆದೂ ಶೇಖ ಮಾಸ್ತರರ ಬೆನ್ನುಬಿದ್ದು ಕೋಆಪ್ಟ್ ಸದಸ್ಯರಾಗಿ ನಿಟ್ಟುಸಿರು ಬಿಟ್ಟು ಮೂರು ವರ್ಷಗಳ ಕಾಲ ಶೇಖ ಮಾಸ್ತರ್ ಹೆಸರಲ್ಲಿ ದರ್ಬಾರ್ ಮಾಡಿ ಹೆಸರು ಇತ್ಯಾದಿ ಕೆಡಿಸಿಕೊಂಡರು. ಆದರೂ.. ಈ ಸಲ ಹೇಗಾದರೂ ಮಾಡಿ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲೇಬೇಕೆಂದು ಹಠಕ್ಕೆ ಬಿದ್ದು ಎಲ್ಲಾ ರೀತಿಯಲ್ಲಿ ಪ್ರಯತ್ನಗಳನ್ನು ಮುಂಗಡವಾಗಿಯೇ ಆರಂಭಿಸಿದ್ದಾರೆ. ತಮ್ಮ ಗಾಡ್‌ಪಾದರ್ ಆಗಿರುವ ರಾಜಾಶ್ರಿತ ಡಂಬಾಯ ಸಾಹಿತಿ ಬರಗೂರರ ಕೈಕಾಲು ಮತ್ತೊಂದು ಹಿಡಿದು ಹೇಗಾದರೂ ಮಾಡಿ ನಾಟಕ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಲೇಬೇಕೆಂದು ಹಠ ಹಿಡಿದು ಗಟ್ಟಿಯಾಗಿ ಕೂತುಬಿಟ್ಟಿದ್ದಾರೆ.

ಕಳೆದ ಸಲ ಗುಡಿಹಳ್ಳಿಯವರಿಗೆ ಅಧ್ಯಕ್ಷರಾಗಲು ಸಾಧ್ಯವಿಲ್ಲವೆಂದು ತಿಳಿದಾಗ ಎಲ್.ಕೃಷ್ಣಪ್ಪರವರನ್ನು ಅಧ್ಯಕ್ಷರನ್ನಾಗಿಸಿ ತಾವು ಕೋಆಪ್ಟ್ ಸದಸ್ಯರಾಗಿ ಅಕಾಡೆಮಿಯನ್ನು ಆಳಬೇಕು ಎಂದು ಪ್ಲಾನ್ ಹಾಕಿದ್ದರು. ಕೃಷ್ಣಪ್ಪರವರ ಪರವಾಗಿ ಲಾಬಿ ನಡೆಸಿ ವಿಫಲವಾದಾಗ ಪಾಳಯ ಬದಲಾಯಿಸಿ ಶೇಖ ಮಾಸ್ತರರ ಹಿಂದೆ ಬಿದ್ದು ಸಹಸದಸ್ಯರಾದರು. ಈ ಸಲ ಮತ್ತೆ ಸದಸ್ಯರಾಗಲು ಆಗುವುದಿಲ್ಲವೆಂದು ಗೊತ್ತಾಗಿದ್ದರಿಂದ ಹೇಗಾದರೂ ಅಧ್ಯಕ್ಷರಾಗಲೇಬೇಕೆಂದು ಬಯಸಿದರು. ಇದರಿಂದಾಗಿ ಎಲ್.ಕೃಷ್ಣಪ್ಪನವರಿಗೆ ಅಸಮಾಧಾನವಾಯಿತು. ತಮಗೆ ಬೆಂಬಲಿಸಿ ಮುಂದಿನ ಸಲವಾದರೂ ಅಕಾಡೆಮಿ ಅಧ್ಯಕ್ಷರನ್ನಾಗಿಸಬಹುದು ಎಂದು ನಂಬಿದ ಕೃಷ್ಣಪ್ಪನವರು ತಮ್ಮ ಈ ಮಾಸ ನಾಟಕ ಪತ್ರಿಕೆಯ ಸಂಪಾದಕತ್ವವನ್ನು ಗುಡಿಹಳ್ಳಿಯವರಿಗೆ ವಹಿಸಿಕೊಟ್ಟಿದ್ದರು. ಆದರೆ ಯಾವಾಗ ಗುಡಿಹಳ್ಳಿ ಅಕಾಡೆಮಿ ಅಧ್ಯಕ್ಷರಾಗಲು ಪ್ರಯತ್ನ ಶುರುಮಾಡಿದ್ದಾರೆಂದು ಕೃಷ್ಣಪ್ಪನವರಿಗೆ ಗೊತ್ತಾಯಿತೋ ಆಗ ಸಿಟ್ಟಿಗೆದ್ದು ಪತ್ರಿಕೆಯಿಂದಾ ಗುಡಿಹಳ್ಳಿಯವರನ್ನು ಹೊರಹಾಕಿದರು. ರಂಗಪತ್ರಿಕೆ ಕೃಷ್ಣಪ್ಪ ಹಾಗೂ ಗುಡಿಹಳ್ಳಿ ಇಬ್ಬರಿಗೂ ಐಡೆಂಟಿಟಿ ಆಗಿತ್ತು. ಅಧ್ಯಕ್ಷಗಿರಿಯತ್ತ ಸಾಗುವ ಕಿರುಮಾರ್ಗವೂ ಆಗಿತ್ತು. ಯಾವಾಗ ಈ ಮಾಸ ಪತ್ರಿಕೆ ಕೈಬಿಟ್ಟಿತೋ ಆಗ ಐಡೆಂಟಿಟಿ ಇಲ್ಲದೇ ನರಳಿದ ಗುಡಿಹಳ್ಳಿ ರಂಗನೇಪತ್ಯ ಎನ್ನುವ ರಂಗಪತ್ರಿಕೆ ನೋಂದಣೊ ಮಾಡಿಬಿಟ್ಟರು.

ಗುಡಿಹಳ್ಳಿಯ ನಂಬಿಕೆದ್ರೋಹದಿಂದ ಕನಲಿದ ಕೃಷ್ಣಪ್ಪನವರು ಅಧ್ಯಕ್ಷಗಿರಿಗೇರಲು ಪರ್ಯಾಯ ಮಾರ್ಗಗಳನ್ನು ಹುಡುಕತೊಡಗಿದರು. ಡಾ.ಕೆ.ಮರುಳಸಿದ್ದಪ್ಪನವರ ಮೂಲಕ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಜೊತೆಗೆ ಶಾಸಕ ನರೇಂದ್ರಬಾಬುರವರ ಮೂಲಕ ಜಾತಿಯ ಟ್ರಂಪ್ ಕಾರ್ಡ ಬಳಸಿ ಅಹಿಂದ್ ಕೋಟಾದಲ್ಲಿ ಸಿದ್ದರಾಮಯ್ಯನವರ ಮೇಲೆ ಒತ್ತಡ ತಂದು ನಾಟಕ ಅಕಾಡೆಮಿಗೆ ಅಧ್ಯಕ್ಷರಾಗುವ ಪ್ರಯತ್ನ ಶುರುಮಾಡಿದರು. ಆದರೆ ಗುಡಿಹಳ್ಳಿಯವರಿಗೆ ಬರಗೂರರ ಕೃಪಾಕಟಾಕ್ಷವೊಂದೇ ಉಳಿದ ಮಾರ್ಗವಾಗಿತ್ತು. ಕಳೆದ ಸಲ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಕೃಷ್ಣಪ್ಪನವರ ಅಹವಾಲನ್ನು ಕೇಳಲೂ ಹೋಗದೇ ವಾಪಸ್ ಕಳುಹಿಸಿದ್ದರು.  ಅಕಾಡೆಮಿಯ ಸದಸ್ಯತ್ವಕ್ಕೆ ಬರುಗೂರರು ಗುಡಿಹಳ್ಳಿಯವರ ಹೆಸರನ್ನು ರೆಕಮೆಂಡ್ ಮಾಡಿದ್ದರೂ ಉಮಾಶ್ರೀಯವರು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಿದ್ದರು. ಈ ಸಲವೂ ಸಹ ಈ ಇಬ್ಬರಲ್ಲಿ ಯಾರ ಹೆಸರನ್ನೂ ಉಮಾಶ್ರೀಯವರು ಬೆಂಬಲಿಸುವ ಸಾಧ್ಯತೆ ಇಲ್ಲವೇ ಇಲ್ಲಾ. ಇದು ಗೊತ್ತಿದ್ದರಿಂದಲೇ ಈ ಇಬ್ಬರೂ ತಮ್ಮ ಗಾಡ್‌ಪಾದರ್‌ಗಳ ಮೂಲಕ ನೇರವಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಾಯ ತಂದು ಅಕಾಡೆಮಿಯ ಗದ್ದುಗೆ ಹಿಡಿಯಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.


ಹಾಗೆ ನೋಡಿದರೆ ಎಲ್.ಕೃಷ್ಣಪ್ಪನವರು ರಂಗಭೂಮಿಯ ನೇಪತ್ಯಕ್ಕೆ ಕೊಟ್ಟ ಕೊಡುಗೆ ಬೇಕಾದಷ್ಟಿದೆ. ವೃತ್ತಿಯಲ್ಲಿ ಸಿವಿಲ್ ಕಾಂಟ್ರ್ಯಾಂಕ್ಟರ್ ಆದರೂ ಪ್ರವೃತ್ತಿಯಲ್ಲಿ ರಂಗಭೂಮಿ ಕೆಲಸವನ್ನು ಆಗಿನ ಕಾಲಕ್ಕೆ ಮಾಡುತ್ತಲೇ ಬಂದಿದ್ದರು. ಕಳೆದ ಹದಿನೆಂಟು ವರ್ಷಗಳಿಂದ ತಮಗನುಕೂಲವಾದಾಗಲೆಲ್ಲಾ ಈ ಮಾಸ ನಾಟಕ ರಂಗಪತ್ರಿಕೆಯನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ಸ್ವತಃ ಬರೆಯಲು ಬರದಿದ್ದರೂ ಅವರಿವರಿಗೆ ಸಂಪಾದಕತ್ವದ ಹೊಣೆಯನ್ನು ಹೊರೆಸಿ  ಅದು ಹೇಗೋ ಪತ್ರಿಕೆಯ ಅಸ್ತಿತ್ವವನ್ನು ಕಾಪಾಡಿಕೊಂಡು ಬರಲು ಹರಸಾಹಸ ಪಟ್ಟಿದ್ದಾರೆ. ಗುಡಿಹಳ್ಳಿಯವರ ಸಹವಾಸ ಮಾಡುವವರೆಗೂ ಕೃಷ್ಣಪ್ಪ ಭ್ರಷ್ಟರಾಗಿರಲಿಲ್ಲ. ತಮ್ಮ ಸ್ವಂತ ದುಡ್ಡನ್ನು ಹಾಕಿ ನಾಟಕಗಳನ್ನು ಮಾಡುತ್ತಿದ್ದರು. ಆದರೆ.. ಯಾವಾಗ ಕೇಂದ್ರ ಸರಕಾರದ ಮಿನಿಸ್ಟ್ರೀ ಆಪ್ ಕಲ್ಚರ್ ಇಲಾಖೆಯ ಅನುದಾನದ ಫಲಾನುಭವಿಗಳ ಗ್ಯಾಂಗಿಗೆ ಗುಡಿಹಳ್ಳಿ ಮೂಲಕ ಕೃಷ್ಣಪ್ಪನವರು ಸೇರಿಕೊಂಡರೋ ಆಗ ಇಷ್ಟು ವರ್ಷಗಳ ಕಾಲ ಇದ್ದ ಶುದ್ದಹಸ್ತರು  ಎನ್ನುವ ಹೆಸರನ್ನು ಕೆಡಿಸಿಕೊಂಡು ಬಿಟ್ಟರು. ಗೋಪಾಲಕೃಷ್ಣ ನಾಯರಿ, ತುಮಕೂರು ಶಿವಕುಮಾರ್, ನಾಟಕಮನೆ ಮಹಾಲಿಂಗು ಮುಂತಾದವರ ಜೊತೆ ಸೇರಿ ಲಕ್ಷಾಂತರ ರೂಪಾಯಿ ಕೇಂದ್ರ ಸರಕಾರದ ಅನುದಾನವನ್ನು ತಮ್ಮ ನಾಟಕಕ್ಕೆ ಪ್ರದರ್ಶನದ ನೆಪದಲ್ಲಿ ಪಡೆದರು. ಯಾವುದೋ ಶಾಲೆಯ ಮಕ್ಕಳಿಗೆ ಪಂಜರಶಾಲೆ ನಾಟಕವನ್ನು ಮಾಡಿಸಿ ಒಂದೇ ಒಂದು ಪ್ರಯೋಗವನ್ನು ಎಡಿಎ ರಂಗಮಂದಿರದಲ್ಲಿ ಮಾಡಿ ಐದಾರು ಪ್ರದರ್ಶನಗಳಾಗಿವೆ ಎಂದು ಸುಳ್ಳು ಲೆಕ್ಕ ಕೊಟ್ಟು ಐದು ಲಕ್ಷ ರೂಪಾಯಿ ಹಣವನ್ನು ಕೃಷ್ಣಪ್ಪ ಪಡೆದುಕೊಂಡರು ಎನ್ನುವ ಆರೋಪ ಹೊತ್ತುಕೊಂಡರು. ತದನಂತರ ಸೆಂಟ್ರಲ್ ಕಾಲೇಜಿನ ಯುವಕರನ್ನು ಬಳಸಿಕೊಂಡು ಹುತ್ತವ ಬಡಿದರೆ ಎನ್ನುವ ನಾಟಕವನ್ನು ನಿರ್ದೇಶಿಸಿ ಒಂದೇ ಒಂದು ಪ್ರಯೋಗ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಅನುದಾನ ಕಮಿಟಿಯ ಬಲುಗಳ್ಳರ ಸಹಕಾರದಿಂದ ಪಡೆದರು ಎನ್ನುವ ಇನ್ನೊಂದು ಗುರುತರ ಆಪಾದನೆ ಅವರ ಮೇಲಿದೆ. ಇದಕ್ಕೆಲ್ಲಾ ಗುಡಿಹಳ್ಳಿಯವರ ದಿವ್ಯ ಮಾರ್ಗದರ್ಶನವೂ ಕಾರಣವಾಗಿತ್ತು. ಹಣಕ್ಕೇನೂ ಕೊರತೆ ಇಲ್ಲದ ಕೃಷ್ಣಪ್ಪನವರು ಸಹವಾಸದೋಷದಿಂದಾಗಿ ಹೆಸರನ್ನು ಹಾಳುಮಾಡಿಕೊಂಡು ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಬಹುದಾದ ಅವಕಾಶದಿಂದ ವಂಚಿತರಾದರು. ಈಗ ಅವರೆಷ್ಟೇ ಸಮರ್ಥನೆಗಳನ್ನು ಕೊಟ್ಟರೂ ನಂಬುವ ಸ್ಥಿತಿಯಲಿ ರಂಗಕರ್ಮಿಗಳಿಲ್ಲಾ. ಕೃಷ್ಣಪ್ಪನವರು ಅಧ್ಯಕ್ಷರಾಗುವ ಸಾಧ್ಯತೆಗಳೂ ಪ್ರಖರವಾಗಿಲ್ಲ.  ಆದರೂ ಅವರು ಪ್ರಯತ್ನವನ್ನು ಕೈಬಿಟ್ಟಿಲ್ಲಾ.

ಇನ್ನು ಗುಡಿಹಳ್ಳಿ ನಾಗರಾಜ ಎನ್ನುವ ಅವಕಾಶವಾದಿಯ ಬಗ್ಗೆ ಹೇಳಲೇಬೇಕಿಲ್ಲಾ. ಎಲ್ಲಾ ಪದವಿ, ಪ್ರಶಸ್ತಿ ಹಾಗೂ ಅನುಕೂಲತೆಗಳು ತಮಗೆ ಮತ್ತು ತಮ್ಮ ಬೇನಾಮಿ ಕುಟುಂಬದವರಿಗೆ ಬೇಕು ಎನ್ನುವ ಹಪಾಹಪಿ ಅವರದು. ಕಳೆದ ವರ್ಷ ಬರಗೂರರ ಅಧ್ಯಕ್ಷತೆಯಲ್ಲಿ ನಡೆದ 5 ಲಕ್ಷ ರೂಪಾಯಿಗಳ ವಾಲ್ಮೀಕಿ ಪ್ರಶಸ್ತಿಯನ್ನು ತಮ್ಮ ಎರಡನೇ ಪತ್ನಿ ನಾಗರತ್ನರವರಿಗೆ ಕೊಡಿಸಿದ ಕೀರ್ತಿ ಸಲ್ಲಬೇಕಾದದ್ದು ಗುಡಿಹಳ್ಳಿಯವರಿಗೆ. ಬರಗೂರರಿಗೆ ಜಾತಿ ಪ್ರೀತಿಯೋ ಇಲ್ಲಾ ಗುಡಿಹಳ್ಳಿಯ ಬರಗೂರು ನಿಷ್ಟೆಯ ಮೇಲಿನ ಅಭಿಮಾನವೋ ಗೊತ್ತಿಲ್ಲಾ.. ಅರ್ಹರಾದ ಬೇರೆಯವರನ್ನು ಬಿಟ್ಟು ನಾಗರತ್ನರವರಿಗೆ ಪ್ರಶಸ್ತಿ ಕೊಟ್ಟರು.. ಆಗ ಗುಡಿಹಳ್ಳಿ ಗೆಲುವಿನ ನಗೆ ನಕ್ಕರು. ಈ ಹಿಂದೆ ನಾಟಕ ಅಕಾಡೆಮಿಯ ಪ್ರಶಸ್ತಿ ಹಾಗೂ ಸದಸ್ಯತ್ವವನ್ನು ನಾಗರತ್ನರವರಿಗೆ ಕೊಡಮಾಡಿಸಿದ ಕೀರ್ತಿಯೂ ಗುಡಿಹಳ್ಳಿಯವರದ್ದಾಗಿದೆ. ಆರ್.ನಾಗೇಶರವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅಕಾಡೆಮಿಯ ಸದಸ್ಯರಾಗಿದ್ದ ಮಲ್ಲಿಕಾರ್ಜುನ ಕಡಕೋಳರ ಮೇಲೆ ಇನ್ನಿಲ್ಲದಷ್ಟು ಒತ್ತಡ ತಂದು ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದ ಭಾಗ್ಯವೂ ಗುಡಿಹಳ್ಳಿಯವರದ್ದಾಗಿದೆ. ಅಷ್ಟೇ ಯಾಕೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಇರಲಿ ರಾಜ್ಯೋತ್ಸವ ಪ್ರಶಸ್ತಿ ಇರಲಿ ಎಲ್ಲವೂ ತಮಗೇ ಬೇಕು ಎನ್ನುವ ಹಪಾಹಪಿ ಗುಡಿಹಳ್ಳಿಯವರದ್ದಾಗಿದೆ.


ಮೊದಲು ಪ್ರಜಾವಾಣಿ ಬಳಗದಲ್ಲಿದ್ದಾಗ ಪ್ರಜಾವಾಣಿ ಹೆಸರು ಹೇಳಿಕೊಂಡು ಪದವಿ ಪ್ರಶಸ್ತಿ ಪುರಸ್ಕಾರ, ಬಿಡಿಎ ಸೈಟುಗಳನ್ನು ಪಡೆಯುತ್ತಿದ್ದರು. ಈಗ ಪ್ರಜಾವಾಣಿ ಬಳಗದಿಂದ ನಿವೃತ್ತರಾದ ಮೇಲೆಯೂ ಸಹ ಯಾವುದಾದರೊಂದು ಅಧಿಕಾರ ಹಿಡಿದು  ತಮ್ಮ ಸ್ವಾರ್ಥ ಸಾಧನೆ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಪ್ರಶಸ್ತಿಗಳಿಗಾಗಿ ಬಲೆ ಬೀಸಿ ಕಾಯುತ್ತಲೇ ಇದ್ದಾರೆ. ಈಗ ನಾಟಕ ಅಕಾಡೆಮಿಯ ಸದಸ್ಯತ್ವದ ಅವಧಿ ಮುಗಿದಿದ್ದರಿಂದ ನಾಳೆಯಿಂದಾ ನಿರುದ್ಯೋಗಿಯಾಗಿ ಅಪ್ರಸ್ತುತರಾಗುವ ಭಯ ಅವರನ್ನು ಕಾಡುತ್ತಿದೆ. ಆದ್ದರಿಂದ ನಾಟಕ ಅಕಾಡೆಮಿಯ ಅಧ್ಯಕ್ಷರಾಗುವ ಪ್ರಯತ್ನ ಜಾರಿಯಲ್ಲಿದೆ. ಬರಗೂರರ ಮನೆಗೆ ಚಪ್ಪಲಿ ಸವೆಸುತ್ತಿದ್ದಾರೆ. ಆದರೆ.. ಗುಡಿಹಳ್ಳಿಯವರು ಕಳೆದ ಮೂರು ವರ್ಷದಿಂದ ಅಕಾಡೆಮಿಯ ಸಹಸದಸ್ಯರಾಗಿದ್ದರೂ ಬೇನಾಮಿ ಅಧ್ಯಕ್ಷರಾಗಿ ನಾಟಕ ಅಕಾಡೆಮಿಯನ್ನು ಆಳಲು ಪ್ರಯತ್ನಿಸಿದ್ದು ಬಾಕಿ ಸದಸ್ಯರಲ್ಲಿ ಹಾಗೂ ಅಕಾಡೆಮಿಯ ನೌಕರ ಬಳಗದವರಲ್ಲೂ ಭಾರೀ ಅಸಮಾಧಾನವನ್ನು ಹುಟ್ಟುಹಾಕಿದೆ. ಅಕಾಡೆಮಿಯ ಅಧ್ಯಕ್ಷರಾಗಿದ್ದ ಶೇಖ್ ಮಾಸ್ತರರಿಗಂತೂ ಗುಡಿಹಳ್ಳಿ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪವಾಗಿದ್ದಂತೂ ಸತ್ಯ. ಕೊನೆಕೊನೆಗೆ ಸಿಕ್ಕಸಿಕ್ಕವರ ಮುಂದೆ ಮಾಸ್ತರರು ಗುಡಿಹಳ್ಳಿಯವರನ್ನು ಕೋಆಪ್ಟ್ ಮಾಡಿಕೊಂಡು ತಪ್ಪು ಮಾಡಿದೆ ಎಂದು ಅವಲತ್ತುಕೊಂಡರು. ಆದರೆ.. ಮಾಸ್ತರರು ತಮ್ಮ ಸ್ವಯಂಕೃತ ಅಪರಾಧಕ್ಕೆ ಮೂರು ವರ್ಷಗಳ ಕಾಲ ಪರಿತಪಿಸಿದರು. ಒಂದಿಷ್ಟು ಕೆಲಸಗಳನ್ನು ಮಾಡಿದರೂ ಅದರ ಕ್ರೆಡಿಟ್ ಶೇಖ ಮಾಸ್ತರರಿಗೆ ದೊರೆಯದಂತೆ ಮಾಡುವಲ್ಲಿ ಗುಡಿಹಳ್ಳಿ ಯಶಸ್ವಿಯಾದರು. ಹೀಗಾಗಿ ಗುಡಿಹಳ್ಳಿಯವರ ನಡೆ ನುಡಿಯ ಬಗ್ಗೆ ತುಂಬಾ ಜನರಿಗೆ ಅಸಮಾಧಾನವಿದೆ. ಆದರೂ ಬರಗೂರರ ಮೇಲೆ ಅದಮ್ಯ ವಿಶ್ವಾಸವಿಟ್ಟು ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಲು ಗುಡಿಹಳ್ಳಿಯವರು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ ಆದರೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗಾಗಲೀ ಸಚಿವೆ ಉಮಾಶ್ರೀಯವರಿಗಾಗಲೀ ಗುಡಿಹಳ್ಳಿಯವರ ಮೇಲೆ ವಿಶ್ವಾಸ ಇಲ್ಲದ್ದರಿಂದ ಅಧ್ಯಕ್ಷರಾಗುವ ಸಾಧ್ಯತೆಗಳು ಕಡಿಮೆಯೇ.

ಇನ್ನು ಕೆಲವರು ಹುಲಿವಾನ್ ಗಂಗಾಧರಯ್ಯನವರ ಹೆಸರನ್ನು ತೇಲಿ ಬಿಟ್ಟಿದ್ದಾರೆ. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಹುಲಿವಾನ್ ಹೆಸರು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ.. ಗಂಗಾಧರಯ್ಯನವರು ರಂಗಭೂಮಿಯಲ್ಲಿ ಸಕ್ರೀಯವಾಗಿಲ್ಲದೇ ಹಲವಾರು ದಶಕಗಳೇ ಕಳೆದಿವೆ. ಅವರು ಟಿವಿ ಸೀರಿಯಲ್‌ಗಳಿಗೆ ತಮ್ಮ ನಟನಾ ಪ್ರತಿಭೆಯನ್ನು ಸೀಮಿತಗೊಳಿಸಿದ್ದಾರೆ. ಗಂಗಾಧರಯ್ಯನವರನ್ನು ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿ ರಂಗಭೂಮಿಯವರೇ ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ. ಉಮಾಶ್ರೀಯವರು ಒಪ್ಪಿಕೊಳ್ಳುವ ಮಾತು ದೂರದ್ದು. ಇನ್ನು ಮೈಸೂರಿನ ರಂಗಕರ್ಮಿ ರಾಜಶೇಖರ್ ಕದಂಬರವರೂ ಅಕಾಡೆಮಿಯ ಅಧ್ಯಕ್ಷರಾಗಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಮಾನ್ಯ ಮಾಜಿ ಮಂತ್ರಿ ಮಹದೇವ ಪ್ರಸಾದ್ ಹಾಗೂ ಹಾಲಿ ಮಂತ್ರಿ ಹೆಚ್. ಆಂಜನೇಯರವರ ಮೂಲಕ ರೆಕಮೆಂಡೇಶನ್ ತಂದಿದ್ದಾರೆ. ಆದರೆ.. ಕದಂಬವರಿಗೆ ರಾಜಕೀಯ ಪ್ರಜ್ಞೆ ಕಡಿಮೆ ಇದೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ. ಯಾಕೆಂದರೆ ಮಹದೇವ್ ಪ್ರಸಾದ್ ಅಧಿಕಾರ ಕಳೆದುಕೊಂಡ ಸೇಡಿಗೆ ಕಾಂಗ್ರೆಸ್ಸನ್ನೇ ಬಿಟ್ಟು ಹೋಗಿ ಬಿಜೆಪಿ ಸೇರಿದ್ದಾರೆ. ಹಾಗೂ ಆಂಜನೇಯರವರಿಗೂ ಹಾಗೂ ಸಚಿವೆ ಉಮಾಶ್ರೀಯವರಿಗೂ ಎಣ್ಣೆ ಸೀಗೆ ಸಂಬಂಧವಿದೆ. ಹೀಗಾಗಿ ಕದಂಬರವರು ಅಧ್ಯಕ್ಷರಾಗುವ ಆಸೆಯನ್ನು ಆಂಜನೇಯನವರ ಮೇಲಿನ ಅಸಮಾಧಾನದ ಕಾರಣಕ್ಕೆ ಉಮಾಶ್ರೀಯವರು ತಿರಸ್ಕರಿಸಿದರೆ.. ಮಹದೇವ್ ಪ್ರಸಾದ್ ಮೇಲಿನ ಕೋಪಕ್ಕೆ ಸಿಎಂ ಸಿದ್ದರಾಮಯ್ಯನವರು ಕದಂಬರವರನ್ನು ನಿರಾಕರಿಸುತ್ತಾರೆ. ರೆಕಮೆಂಡೇಶನ್ ತರಲೇಬೇಕೆಂದಿದ್ದರೆ ಸ್ವಲ್ಪ ರಾಜಕೀಯದ ದಿಕ್ಕು ದೆಸೆಗಳನ್ನು ಅರ್ಥಮಾಡಿಕೊಂಡಿದ್ದರೆ ಕದಂಬರವರಿಗೆ ಅವಕಾಶವಾಗಬಹುದಾಗಿತ್ತು. ಆದರೆ ತಪ್ಪು ವ್ಯಕ್ತಿಗಳಿಂದ ರೆಕಮೆಂಡೇಶನ್ ತಂದಿದ್ದರಿಂದ ಇದ್ದ ಅವಕಾಶವೂ ದೂರವಾಯಿತು. ಆದರೂ ಕದಂಬರವರ ಬಯೋಡಾಟಾ ಸಂಸ್ಕೃತಿ ಇಲಾಖೆಯ ಕಾರ್ಯಾಲಯಕ್ಕೆ ತಲುಪಿದೆ. ಕದಂಬರವರ ಪ್ರಯತ್ನವೂ ಮುಂದುವರೆದಿದೆ.


ಕಳೆದ ಸಲದಂತೆ ಈ ಸಲವೂ ನಾಟಕ ಅಕಾಡೆಮಿಯ ಅಧ್ಯಕ್ಷರಾಗುವ ಪೈಪೋಟಿಯಲ್ಲಿ ಮುಂಚೂಣಿ ಹೆಸರಿರುವುದು ರಂಗಸಂಪದದ ಜೆ.ಲೊಕೇಶರವರದು. ಕಳೆದ ಬಾರಿ ಇನ್ನೇನು ಜೆ.ಲೋಕೇಶರವರ ಹೆಸರು ಪೈನಲ್ ಆಯ್ತು ಅನ್ನೋದರಲ್ಲಿಯೇ ಲಿಸ್ಟಿನಲ್ಲಿಯೇ ಇಲ್ಲದ ಶೇಖ ಮಾಸ್ತರರು ಆಗ ಮಂತ್ರಿಯಾಗಿದ್ದ ಖಮುರುಲ್ಲಾರವರನ್ನು ಹಿಡಿದು ಮುಖ್ಯಮಂತ್ರಿಯ ಮೇಲೆ ರಾಜಕೀಯ ಒತ್ತಡ ತಂದು ಯಾರೂ ಊಹಿಸಿರದ ರೀತಿಯಲ್ಲಿ ಅಲ್ಪಸಂಖ್ಯಾತ ಕೋಟಾದಲ್ಲಿ ಅಕಾಡೆಮಿಯ ಅಧ್ಯಕ್ಷರಾಗಿ ಬಿಟ್ಟಿದ್ದರು. ಜೆ.ಲೋಕೇಶ್ ಪರವಾಗಿ ಒಲವನ್ನು ಹೊಂದಿದ್ದ ಸಚಿವೆ ಉಮಾಶ್ರೀಯವರೂ ಸಹ ಅಸಹಾಯಕರಾಗಿ ಹೋದರು. ಆಗ ತಾನೆ ಹೊಸದಾಗಿ ಸಚಿವೆ ಆಗಿದ್ದ ಉಮಾಶ್ರೀಯವರಿಗೆ ಸಹದ್ಯೋಗಿ ಮಂತ್ರಿಯನ್ನು ಎದುರುಹಾಕಿಕೊಳ್ಳುವ ದಿಟ್ಟತನ ಇರಲಿಲ್ಲಾ. ಆದರೆ ಈಗ ಬೇಕಾದಷ್ಟು ಅನುಭವಗಳನ್ನು ಗಿಟ್ಟಿಸಿಕೊಂಡು ರಾಜಕೀಯದ ಒಳಹೊರಗನ್ನು ಅರಿತಿರುವ ಉಮಾಶ್ರೀಯವರು ಈ  ಸಲ ತಮ್ಮ ವಿವೇಚನೆಯನ್ನು ಬಳಸಿ ಅಕಾಡೆಮಿಯ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆಂಬುದು ರಂಗಕರ್ಮಿಗಳೆಲ್ಲರ ನಂಬಿಕೆಯಾಗಿದೆ. ಹಾಗೂ ಬಹುತೇಕ ರಂಗಕರ್ಮಿಗಳ ಬೆಂಬಲವೂ ಜೆ.ಲೊಕೇಶರವರಿಗಿದೆ. ಈಗಿನ ತಲೆಮಾರಿನವರಿಗೆ ಲೊಕೇಶರವರ ಬಗ್ಗೆ ಅಷ್ಟೊಂದು ಅರಿವಿಲ್ಲದಿರಬಹುದು. ಅದರೆ ಎಪ್ಪತ್ತರ ನಂತರದ ದಶಕದಲ್ಲಿ ಆಧುನಿಕ ಹವ್ಯಾಸಿ ರಂಗಭೂಮಿಗೆ ಹೊಸ ಶಕ್ತಿಯನ್ನು ಕೊಟ್ಟ ರಂಗಸಂಪದ ರಂಗತಂಡದ ಸಂಘಟಕರಾಗಿ ಲೊಕೇಶ್ ರಂಗಭೂಮಿಗೆ ಶ್ರಮಿಸಿದ್ದನ್ನು ಅವರ ಸಮಕಾಲೀನ ರಂಗಕರ್ಮಿಗಳು ಮರೆಯಲು ಸಾಧ್ಯವೇ ಇಲ್ಲಾ. ಉಮಾಶ್ರೀಯವರಿಗೂ ಮೊಟ್ಟ ಮೊದಲು ನಾಟಕದಲ್ಲಿ ನಟಿಸಲು ಅವಕಾಶ ಕೊಡಲು ಕಾರಣೀಕರ್ತರಾದವರು ಜೆ.ಲೊಕೇಶ್‌ರವರೇ.

ನಾಟಕ ಅಕಾಡೆಮಿ ಕಳೆದ ಒಂದು ದಶಕದಿಂದ ಅಕಾಡೆಮಿಕ್ ಕೆಲಸಗಳಿಗೆ ಮಾತ್ರ ಸೀಮಿತವಾಗಿದೆ. ಸರಕಾರಿ ಅನುದಾನವನ್ನು ಖರ್ಚು ಮಾಡುವ ಸಂಸ್ಥೆಯಾಗಿದೆ. ಅಕಾಡೆಮಿಯ ಅಧ್ಯಕ್ಷರಾಗಿದ್ದವರಿಗೆ ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸುವತ್ತ ದೂರದೃಷ್ಟಿಯ ಕೊರತೆಯಿಂದಾಗಿ ಅಕಾಡೆಮಿ ಎನ್ನುವುದು ಚರ್ವಿತ ಚರ್ವಣ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಇದ್ದಾಗ ಮಾತ್ರ ಅಕಾಡೆಮಿ ಎನ್ನುವುದು ಇದೆ ಎಂದು ರಂಗಕರ್ಮಿಗಳಿಗೆ ಗೊತ್ತಾಗುತ್ತದೆ. ಬಾಕಿ ಸಮಯದಲ್ಲಿ ಅದು ಏನು ಮಾಡುತ್ತದೆ ಎನ್ನುವುದರ ಅರಿವೂ ಬಹುತೇಕರಿಗೆ ಇರುವುದಿಲ್ಲ. ರಂಗಭೂಮಿಯ ಆಯಾಮವನ್ನು ವಿಸ್ತರಿಸುವಂತಹ ಹಾಗೂ ನಾಟಕ ಅಕಾಡೆಮಿಯನ್ನು ಕನ್ನಡ ರಂಗಭೂಮಿಯ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ರೂಪಿಸುವಂತಹ ತಾಕತ್ತಿರುವ ಅಧ್ಯಕ್ಷರಿಗಾಗಿ ಅಕಾಡೆಮಿ ಕಾಯುತ್ತಿದೆ. ಆ ಎಲ್ಲಾ ಲಕ್ಷಣಗಳೂ ಜೆ.ಲೋಕೇಶರವರಲ್ಲಿ ಕಾಣಬಹುದಾಗಿದೆ. ಯಾಕೆಂದರೆ ಲೊಕೇಶ್‌ರವರು ಮೂಲಭೂತವಾಗಿ ಸಮರ್ಥ ಸಂಘಟಕರು ಎನ್ನುವುದು ಸಾಬೀತಾಗಿದೆ. ಪ್ರಗತಿಪರ ಆಲೋಚನೆಗಳನ್ನು ಮೈಗೂಡಿಸಿಕೊಂಡು ಸದಾ ಹೊಸತನಕ್ಕಾಗಿ ತುಡಿಯುವ ಮತ್ತು ಸಮಾನತೆ ಸಹೋದರತ್ವದತ್ತ ಮಿಡಿಯುವ ಮನಸ್ಸುಳ್ಳವರು ಎಂಬುದು ಅವರ ಸಾಮಾಜಿಕ ಜಾಲತಾಣಗಳ ಸಂದೇಶಗಳೇ ಸಾರುತ್ತವೆ. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್ ಬ್ಯಾಂಕಿನಲ್ಲಿ ಲೋಕೇಶ್ ರವರು ಕೇವಲ ಒಬ್ಬ ಅಧಿಕಾರಿಯಾಗಿರದೇ ಯೂನಿಯನ್ ಲೀಡರ್ ಆಗಿ ಬ್ಯಾಂಕ್ ನೌಕರರ ಹಕ್ಕುಗಳಿಗಾಗಿ ದಶಕಗಳ ಕಾಲ ಹೋರಾಡಿದ ಅನುಭವ ಉಳ್ಳವರು. ಈ ದೇಶದ ಕಾನೂನು ಕಟ್ಟಳೆಗಳನ್ನು ಚೆನ್ನಾಗಿ ಅರಿತವರು. ಹಾಗೂ ಅನಿಸಿದ್ದನ್ನು ನೇರವಾಗಿ ಹೇಳುವ ಛಾತಿಯುಳ್ಳವರು. ಅವರ ಹಿತಶತೃಗಳು ಏನೇ ಆರೋಪ ಮಾಡಿದರೂ ಲೊಕೇಶರವರ ಸಂಘಟನಾ ಸಾಮರ್ಥ್ಯದ ಬಗ್ಗೆ ಅಪಸ್ವರ ಎತ್ತಲಾಗದು.

ರಂಗಭೂಮಿ ಕೇವಲ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರಬಾರದು  ಅದೊಂದು ಚಳುವಳಿಯಾಗಬೇಕು ಎನ್ನುವ ಆಶಯ ಇರುವ ಲೊಕೇಶ್ 1972ರಲ್ಲಿ ಆರಂಭಗೊಂಡ ರಂಗಭೂಮಿಯ ಪ್ರಭಾವಿ ರಂಗತಂಡ ರಂಗಸಂಪದದ ಸ್ಥಾಪಕರಲೊಬ್ಬರು. ವಿಶ್ವ ಕನ್ನಡ ಸಮ್ಮೇಳನದಲ್ಲಿ ರಂಗಮೇಳದ ಸಂಚಾಲಕರಾಗಿ ಸಮ್ಮೇಳನವನ್ನು ಯಶಸ್ವಿಯಾಗಿಸಿದರು. ರಂಗಭೂಮಿ ಕ್ರಿಯಾ ಸಮಿತಿಯ ಸ್ಥಾಪಕರಲ್ಲೊಬ್ಬರಾಗಿ ಅನೇಕ ವರ್ಷಗಳ ಕಾಲ ಅದರ ಸಂಚಾಲಕರಾಗಿ ರಂಗಭೂಮಿಯ ಹಿತಾಸಕ್ತಿಗಾಗಿ ತಮ್ಮನ್ನು ತೊಡಗಿಸಿಕೊಂಡವರು. ರಂಗಸಂಪದದ ಮೂಲಕ ಗ್ರಾಮೀಣ ಭಾಗದಲ್ಲಿ ನಾಟಕೋತ್ಸವ, ವಿಚಾರ ಸಂಕಿರಣ, ನಾಟಕ ಶಿಬಿರಗಳನ್ನು ಆಯೋಜಿಸಿ ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟವರು. ರಂಗಪುರಸ್ಕಾರ ಯೋಜನೆಯನ್ನು ರೂಪಿಸಿ ಅನೇಕ ಲೇಖಕರಿಂದ ನಾಟಕಗಳನ್ನು ಬರೆಯಿಸಿದರು. (ಈ ಯೋಜನೆಯಿಂದಲೇ ನಾನು ನಾಟಕಕಾರನಾಗಲು ಸಾಧ್ಯವಾಯಿತು ಎಂದು ನಾಟಕಕಾರ ಹೂಲಿ ಶೇಖರ್ ರವರು ಈಗಲೂ ಹೆಮ್ಮೆಯಿಂದ ಹೇಳುತ್ತಾರೆ.) ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ವಿಚಾರ ಸಂಕಿರಣ, ವಿಚಾರಗೋಷ್ಟಿ, ತರಬೇತಿ ಶಿಬಿರಗಳನ್ನು ಸಂಘಟಿಸಿದ ಲೊಕೇಶರವರು ಬೆಂಗಳೂರಿನಲ್ಲಿ ಸಾರ್ಕ ಸಮಾವೇಶ ನಡೆದಾಗ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಹತ್ತು ರಂಗಮಂದಿರಗಳಲ್ಲಿ ಏಕಕಾಲಕ್ಕೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ಸಂಘಟಕರಾಗಿ ದುಡಿದವರು. ರಂಗಭೂಮಿಯ ಮೂರು ದಶಕಗಳ ಸಾಧನೆಯನ್ನು ಮೊದಲ ಬಾರಿಗೆ ದೂರದರ್ಶನಕ್ಕಾಗಿ ರಂಗವಿಹಂಗಮ ಹೆಸರಲ್ಲಿ ಟೆಲಿ ಸಾಕ್ಷಚಿತ್ರವನ್ನು ನಿರ್ಮಿಸಿ ಸಂಘಟಿಸಿ ದಾಖಲಿಸಲು ನೆರವಾದ ಕೀರ್ತಿ ಲೊಕೇಶರವರದ್ದಾಗಿದೆ. ನಟರಾಗಿ, ಬೆಳಕು ವಿನ್ಯಾಸಕಾರರಾಗಿ, ರಂಗಸಜ್ಜಿಕೆ ವಿನ್ಯಾಸಕಾರರಾಗಿ, ರಂಗ ಸಂಘಟಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಬದ್ದತೆಯಿಂದ ಶ್ರಮಿಸಿದವರು.

ಎರಡು ಅವಧಿಗೆ ನಾಟಕ ಅಕಾಡೆಮಿಯ ಸದಸ್ಯರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ ಲೊಕೇಶರವರಿಗೆ ನಾಟಕ ಅಕಾಡೆಮಿಯ ಒಳಹೊರಗಿನ ಪರಿಚಯವಿದೆ. ಅವರು ಸದಸ್ಯರಾಗಿದ್ದಾಗಲೇ ಸಂಸ ಬಯಲು ರಂಗಮಂದಿರ, ತಾಲಿಂ ಕೊಠಡಿಗಳು ನಿರ್ಮಾಣಗೊಂಡಿದ್ದು. ಕೇವಲ ನಗರ ಕೇಂದ್ರಿತವಾಗಿದ್ದ ನಾಟಕ ಚಟುವಟಿಕೆಗಳನ್ನು ನಾಡಿನ ಮೂಲೆ ಮೂಲೆಗಳಿಗೆ ಹಬ್ಬಿಸಲು ಕರ್ನಾಟಕದಾದ್ಯಂತ ನಾಟಕೋತ್ಸವಗಳನ್ನು ಏರ್ಪಡಿಸಿ ಅನೇಕ ಗ್ರಾಮಾಂತರ ಕೇಂದ್ರಗಳಲ್ಲಿಯೂ ಆಧುನಿಕ ಕನ್ನಡ ನಾಟಕಗಳ ಬೀಜಗಳನ್ನು ಬಿತ್ತಿದವರಲ್ಲಿ ಲೊಕೇಶ್ ಕೂಡಾ ಪ್ರಮುಖರು. ಹೊರನಾಡುಗಳಾದ ಮುಂಬೈ, ದೆಹಲಿ, ಕಲ್ಕತ್ತ, ಮದ್ರಾಸ್ ಮುಂತಾದ ಕೇಂದ್ರಗಳಲ್ಲಿ ಸಹ ಕನ್ನಡ ನಾಟಕಗಳ ಉತ್ಸವ, ರಂಗವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಅಖಿಲ ಭಾರತದ ಗಮನವನ್ನು ಕನ್ನಡ ರಂಗಭೂಮಿಂiiತ್ತ ಸೆಳೆಯಲು ಪ್ರಯತ್ನಿಸಿದರು. ರಂಗಶಿಬಿರಗಳ ಮೂಲಕ ಅನೇಕ ನಟರುಗಳನ್ನು, ನಾಟಕ ರಚನಾ ಸ್ಪರ್ಧೆಗಳ ಮೂಲಕ ಹಲವಾರು ನಾಟಕಕಾರರನ್ನು, ನಾಟಕೋತ್ಸವಗಳ ಮೂಲಕ ಕೆಲವಾರು ನಿರ್ದೇಶಕರುಗಳನ್ನು ಸೃಷ್ಟಿಸಿ ರಂಗಭೂಮಿಯ ಬೆಳವಣಿಗೆಗೆ ಕಾರಣಕರ್ತುವಾದ ಲೊಕೇಶರವರ ಸಾಧನೆ ನಿಜಕ್ಕೂ ಅಭಿನಂದನಾರ್ಹ. 

ಈಗಾಗಲೇ ಲೊಕೇಶರವರ ರಂಗಸಂಘಟನೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಎರಡು ಅವಧಿಗೆ ದೊರೆತಿದೆ. 1992ನೇ ಸಾಲಿನ ಅಕಾಡೆಮಿ ಪ್ರಶಸ್ತಿ, 1996ರಲ್ಲಿ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ, 1986 ರಲ್ಲಿ ಯುವರಂಗ ಪ್ರಶಸ್ತಿ ಹಾಗೂ ಸಂಘಟನಾ ಚತುರ ಪುರಸ್ಕಾರ, 2014 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲೊಕೇಶರವರಿಗೆ ದೊರೆತಿವೆ. ಲೊಕೇಶರವರು ಈಗ ಬ್ಯಾಂಕ್ ವೃತ್ತಿಯಿಂದಲೂ ನಿವೃತ್ತರಾಗಿದ್ದಾರೆ. ಹೀಗಾಗಿ ದಿನದಿಪ್ಪತ್ನಾಲ್ಕು ಗಂಟೆಗಳ ಕಾಲ ಅಕಾಡೆಮಿಯ ಮೂಲಕ ರಂಗಭೂಮಿಯಲ್ಲಿ ಬದ್ದತೆಯಿಂದ ತೊಡಗಬಹುದಾಗಿದೆ. ತಮ್ಮ ಎಲ್ಲಾ ಕೌಟುಂಬಿಕ ಜವಾಬ್ದಾರಿಗಳಿಂದಲೂ ಮುಕ್ತರಾಗಿದ್ದಾರೆ. ಹೀಗಾಗಿ ಪೂರ್ಣಾವಧಿಯಾಗಿ ರಂಗಕಾಯಕ ಮಾಡಿಬಹುದಾಗಿದೆ. ಜೊತೆಗೆ ಆರ್ಥಿಕವಾಗಿ ಬೇಕಾದಷ್ಟು ಸ್ಥಿತಿವಂತರೂ ಆಗಿದ್ದರಿಂದ ಸರಕಾರಿ ಹಣಕ್ಕಾಗಿ ಪರಿತಪಿಸುವ ಅಗತ್ಯವೂ ಇಲ್ಲವಾಗಿದೆ. ಇನ್ನೂ ಆರೋಗ್ಯವೂ ಚೆನ್ನಾಗಿರುವುದರಿಂದ ಮತ್ತು ಮಾನಸಿಕವಾಗಿಯೂ ಸದೃಢವಾಗಿರುವುದರಿಂದ ಹಾಗೂ ರಂಗಭೂಮಿಗೆ ಇನ್ನೂ ಏನನ್ನಾದರೂ ಮಾಡಬೇಕು ಎನ್ನುವ ತುಡಿತ ಪುಟಿಯುತ್ತಿರುವುದರಿಂದ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲು ಲೊಕೇಶ್ ಸೂಕ್ತವಾದ ಆಯ್ಕೆಯಾಗಿದ್ದಾರೆ.

ಈಗ ಕರ್ನಾಟಕ ನಾಟಕ ಅಕಾಡೆಮಿಗೆ ರಂಗಭೂಮಿಯ ಸಮಗ್ರ ಬೆಳವಣಿಗೆಯತ್ತ ದೂರದೃಷ್ಟಿ ಇರುವ ನಾಯಕತ್ವದ ಅಗತ್ಯವಿದೆ. ಬಹುತೇಕ ಮುಂಚೂಣಿ ರಂಗಕರ್ಮಿಗಳ ಒಲವೂ ಸಹ ಲೊಕೇಶರವರತ್ತಲೇ ಇದೆ. ಲೊಕೇಶರವರ ಸಂಘಟನಾ ಸಾಮರ್ಥ್ಯದ ಕುರಿತ ಸ್ಪಷ್ಟ ಅರಿವು ಸಚಿವೆ ಉಮಾಶ್ರೀಯವರಿಗೂ ಇದೆ. ಈಗಾಗಲೇ ಬೆಂಗಳೂರಿನ ರಂಗಕರ್ಮಿಗಳು ಮನವಿಪತ್ರವನ್ನು ಸಿದ್ದಪಡಿಸಿ ಸಹಿಸಂಗ್ರಹಿಸಿ ಆಯೋಗದೊಂದಿಗೆ ಹೋಗಿ ಉಮಾಶ್ರೀಯವರಲ್ಲಿ ಲೊಕೇಶರವರನ್ನು ನಾಟಕ ಅಕಾಡೆಮಿಗೆ ಅಧ್ಯಕ್ಷರನ್ನಾಗಿಸಬೇಕೆಂದು ಆಗ್ರಹಿಸಿದ್ದಾರೆ. ಬಹುತೇಕ ರಂಗಕರ್ಮಿಗಳಿಗೆ ಲೊಕೇಶ್ ಅಕಾಡೆಮಿಗೆ ಅಧ್ಯಕ್ಷರಾಗಲು ಸಮರ್ಥರು ಎನ್ನುವ ಆಶಾಭಾವನೆ ಇದೆ. ಕಳೆದ ಸಲ ರಾಜಕೀಯ ಕಾರಣಕ್ಕಾಗಿ ಅವಕಾಶವಂಚಿತರಾದ ಲೊಕೇಶ್ರವರಿಗೆ ಈ ಸಲ ಅಕಾಡೆಮಿಯ ಅಧ್ಯಕ್ಷತೆ ಸಿಕ್ಕುವುದು ಸಮಂಜಸವಾದಂತಹುದು. ಈ ನಿಟ್ಟಿನಲ್ಲಿ ಉಮಾಶ್ರೀಯವರು ಸಕಾರಾತ್ಮಕ ಮನೋಭಾವನೆ ತೋರುತ್ತಾರೆ ಹಾಗೂ ನಿಂತ ನೀರಾದ ನಾಟಕ ಅಕಾಡೆಮಿಯಲ್ಲಿ ಸಂಚಲನ ಹುಟ್ಟಿಸುವಂತಹ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ ಎನ್ನುವ ಭರವಸೆ ಬಹುತೇಕ ರಂಗಕರ್ಮಿಗಳದ್ದಾಗಿದೆ.

ಕೇವಲ ಲೊಕೇಶರವರನ್ನು ನಾಟಕ ಅಕಾಡೆಮಿಗೆ ಅಧ್ಯಕ್ಷರನ್ನಾಗಿಸಿದರೆ ಮಾತ್ರ ಸಾಲದು. ಅವರ ಜೊತೆಗೆ ಕೆಲಸ ಮಾಡುವ ಸದಸ್ಯರುಗಳೂ ಸಹ ಕ್ರಿಯಾಶೀಲವಾಗಿದ್ದರೆ ಮಾತ್ರ ನಾಟಕ ಅಕಾಡೆಮಿ ತೀವ್ರವಾಗಿ ಸಕಾರಾತ್ಮಕವಾಗಿ ರಂಗಭೂಮಿಗೆ ಸ್ಪಂದಿಸಲು ಸಾಧ್ಯ. ಸಾಧ್ಯವಾದಷ್ಟು ಅರೆಕಾಲಿಕ ರಂಗಕರ್ಮಿ ಕಲಾವಿದರನ್ನು ನಾಟಕ ಅಕಾಡೆಮಿಯ ಸದಸ್ಯರನ್ನಾಗಿ ಆಯ್ಕೆ ಮಾಡುವ ಬದಲಾಗಿ ರಂಗಬದ್ದತೆಯಿಂದ ಪೂರ್ಣಾವಧಿಯಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಯುವಕರನ್ನು ಸದಸ್ಯರನ್ನಾಗಿಸಿ ನಿಯಮಿಸಿದಲ್ಲಿ ಅಕಾಡೆಮಿ ಅಧ್ಯಕ್ಷರ ಕೈಬಲಪಡಿಸಿದಂತಾಗುತ್ತದೆ. ಇಲ್ಲವಾದರೆ ಪ್ರತಿಸಲ ಅನುದಾನ ಹಂಚಿಕೆ ಹಾಗೂ ಪ್ರಶಸ್ತಿಯ ಆಯ್ಕೆ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರುಗಳ ನಡುವೆ ದೊಡ್ಡ ಜಗಳಗಳೇ ನಡೆದಿವೆ. ಸ್ವಜನಪಕ್ಷಪಾತಗಳು ಮೇರೆ ಮೀರಿವೆ. ಸರಕಾರಿ ಸೌಲಭ್ಯವನ್ನು ತಮಗೆ ಹಾಗೂ ತಮ್ಮ ಕುಟುಂಬವರ್ಗದವರಿಗೆ ಪಡೆದ ಉದಾಹರಣೆಗಳೂ ಬೇಕಾದಷ್ಟಿವೆ. ಕೆಲವರಂತೂ ಪ್ರಶಸ್ತಿಗಳನ್ನು ಹಣತೆಗೆದುಕೊಂಡು ಮಾರಿಕೊಂಡವರೂ ಇದ್ದಾರೆ. ಇಂತವಕ್ಕೆಲ್ಲಾ ಕಡಿವಾಣ ಹಾಕಲು ಸಮರ್ಥ ತಂಡವೊಂದನ್ನು ಆಯ್ಕೆ ಮಾಡುವ ಅಗತ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಚಿವೆ ಉಮಾಶ್ರೀಯವರ ಮೇಲಿದೆ. ಇಲ್ಲವಾದರೆ ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆಳೆಯಿತು ಎನ್ನುವಂತಾಗಿ ಅಕಾಡೆಮಿ ರಂಗಕರ್ಮಿಗಳ ಕಣ್ಣಲ್ಲಿ ಹಾಸ್ಯಾಸ್ಪದವಾಗಬಾರದು. ಹಾಗೂ ಸದಸ್ಯರುಗಳನ್ನು ನಿಭಾಯಿಸುವುದೇ ಅಧ್ಯಕ್ಷರಾದವರ ಕಾಯಕವೂ ಆಗಬಾರದು.

ಆದ್ದರಿಂದ ಅಧ್ಯಕ್ಷರ ಜೊತೆಗೆ ಸದಸ್ಯರುಗಳ ಪಟ್ಟಿಯನ್ನೂ ಇಲಾಖೆ ಪ್ರಕಟಿಸುವ ಬದಲು.. ಮೊದಲು ಅಧ್ಯಕ್ಷರನ್ನು ಆಯ್ಕೆ ಮಾಡಿ ತದನಂತರ ಅವರ ಜೊತೆಗೆ ಯಾರು ಸದಸ್ಯರಾದರೆ ಸೂಕ್ತ ಎನ್ನುವುದನ್ನು ಚರ್ಚಿಸಿ ಅಕಾಡೆಮಿ ಅಧ್ಯಕ್ಷರ ವಿವೇಚನೆಯಿಂತೆ ಅಕಾಡೆಮಿಯ ಸದಸ್ಯರುಗಳನ್ನು ಆಯ್ಕೆ ಮಾಡುವುದು ಉತ್ತಮ. ಯಾಕೆಂದರೆ ಮುಂದಿನ ಮೂರು ವರ್ಷಗಳ ಕಾಲ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರುಗಳು ಕೂಡಿ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿಪರೀತ ಭಿನ್ನ ಆಲೋಚನೆಯ ಸದಸ್ಯರುಗಳಿದ್ದರೆ, ಸ್ವಾರ್ಥ ಸಾಧನೆಯನ್ನೇ ಉದ್ದೇಶವಾಗಿಸಿಕೊಂಡವರಿದ್ದರೆ, ಇಲ್ಲವೇ ಎಲ್ಲದಕ್ಕೂ ಅಡ್ಡಗಾಲು ಹಾಕುವ ಪ್ರವೃತ್ತಿಯವರಿದ್ದರೆ ಅಕಾಡೆಮಿಯ ಅಧ್ಯಕ್ಷರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೇಗೆ ಮುಖ್ಯಮಂತ್ರಿಗಳು ತಮ್ಮ ಆಡಳಿತಕ್ಕೆ ಸೂಕ್ತ ಎನ್ನಿಸಿದವರನ್ನು ಮಂತ್ರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೋ ಹಾಗೆಯೇ ಅಕಾಡೆಮಿ ಅಧ್ಯಕ್ಷರಾದವರೂ ಸಹ ಸದಸ್ಯರನ್ನು ಆಯ್ಕೆ ಮಾಡಿಕೊಂಡರೆ ಆಡಳಿತ ಎನ್ನುವುದು ಸುಸೂತ್ರವಾಗಬಹುದಾಗಿದೆ. ಅಧ್ಯಕ್ಷರ ಜೊತೆಗೆ ಅಧ್ಯಕ್ಷರಾಗುವವರ ಅನಿಸಿಕೆಯನ್ನೇ ಕೇಳದೇ ಸದಸ್ಯರುಗಳನ್ನು ಆಯ್ಕೆ ಮಾಡುವ ಸಂಪ್ರದಾಯವನ್ನು ಪಕ್ಕಕ್ಕಿಟ್ಟು ಅಧ್ಯಕ್ಷರ ಜೊತೆಗೆ ಚರ್ಚಿಸಿ ಒಂದು ಕ್ರಿಯಾಶೀಲ ಟೀಂ ಅನ್ನು ಆಯ್ಕೆ ಮಾಡಿದರೆ ಅಕಾಡೆಮಿಯ ಅಧ್ಯಕ್ಷರಾದವರಿಗೆ ಸಕ್ರೀಯವಾಗಿ ಕೆಲಸ ಮಾಡಲು ಹಾಗೂ ಮಾಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರು ಹಾಗೂ ಸಚಿವೆ ಉಮಾಶ್ರೀಯವರು ಆಲೋಚಿಸಿ ಈ ಸಲವಾದರೂ ಒಂದು ಕ್ರಿಯಾಶೀಲ ತಂಡವನ್ನು ನಾಟಕ ಅಕಾಡೆಮಿಗೆ ಆಯ್ಕೆ ಮಾಡುತ್ತಾರೆ ಎಂದು ಇಡೀ ಕನ್ನಡ ರಂಗಭೂಮಿ ಕಾತರಿಸಿ ಕಾಯುತ್ತಿದೆ.   
                  -ಶಶಿಕಾಂತ ಯಡಹಳ್ಳಿ  
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ