ಬುಧವಾರ, ಆಗಸ್ಟ್ 16, 2017

ವಿಕಲಾಂಗ ಸಾಂಸ್ಕೃತಿಕ ನೀತಿ! : ಆಳುವವರಿಗ್ಯಾಕಿಂತಾ ಭೀತಿ?



ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗುವಂತಹ ಸಾಂಸ್ಕೃತಿಕ ನೀತಿಯೊಂದು ಈ ನಮ್ಮ ಕರುನಾಡಿಗೆ ಇರಬೇಕೆಂಬುದು ದಶಕಗಳ ನಿರೀಕ್ಷೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಂತಹುದೊಂದು ನೀತಿಯ ಜಾರಿಗೆ ಚಾಲನೆ ದೊರಕಿತು. ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಕರ್ನಾಟಕಕ್ಕೊಂದು ಸಾಂಸ್ಕೃತಿಕ ನೀತಿಯ ಕರಡನ್ನು ಸಿದ್ದಪಡಿಸಲು ಆದೇಶಿಸಲಾಯಿತು. ಆ ಸಮಿತಿ ಎರಡು ವರ್ಷಗಳ ಕಾಲ ಸರಣಿ ಸಭೆಗಳನ್ನು ಮಾಡಿ, ನಾಡಿನಾದ್ಯಂತಾ ಸುತ್ತಿ, ತಮಗೆ ಸರಿಕಂಡವರ ಅಭಿಪ್ರಾಯಗಳನ್ನು ಪಡೆದು, ಒಂದಿಷ್ಟು ಅಧ್ಯಯನವನ್ನೂ ಮಾಡಿ ಅಂತೂ ಇಂತೂ ಸಾಂಸ್ಕೃತಿಕ ನೀತಿಯ ಕರಡನ್ನು ಸಿದ್ದಪಡಿಸಿ ಅದರಲ್ಲಿ 44 ಶಿಪಾರಸ್ಸುಗಳನ್ನು ಸರಕಾರಕ್ಕೆ ಸಲ್ಲಿಸಿತ್ತು.  

ಈ ಕರಡಿನಲ್ಲಿ ರಾಜಕೀಯ ಹಿತಾಸಕ್ತಿಗೆ ಮಾರಕವಾದ ಅಂಶಗಳು ರಾಜಕಾರಣಿಗಳಿಗೆ ಅಸಹನೆ ತಂದವು. ಆಳುವ ವರ್ಗಗಳಲ್ಲಿ ಅಪಸ್ವರಗಳು ಕೇಳಿ ಬಂದವು. ಹೀಗಾಗಿ ಸಾಂಸ್ಕೃತಿಕ ನೀತಿಯ ಕರಡನ್ನು ಪರಿಷ್ಕರಿಸಲು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಮತ್ತೊಂದು ಸಚಿವ ಸಂಪುಟ ಉಪಸಮಿತಿಯನ್ನು ನಿಯಮಿಸಲಾಯಿತು. ಈ ಸಮಿತಿ ಮತ್ತೆ ಎಲ್ಲವನ್ನೂ ಪರಿಶೀಲಿಸಿ, ರಾಜಕೀಯ ಹಿತಾಸಕ್ತಿಗೆ ಪೂರಕವಲ್ಲದ ಪ್ರಮುಖ ಅಂಶಗಳನ್ನು ತೆಗೆದು ಹಾಕಿ ನಿಸ್ಸಾರವಾದ ಕರಡನ್ನು ಸಂಪುಟದ ಅನುಮೋದನೆಗೆ ಸಲ್ಲಿಸಿತು. 2017, ಆಗಸ್ಟ್ 7ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ (ಶಿಷ್ಟಾಚಾರ ರಹಿತ) ಸಾಂಸ್ಕೃತಿಕ ಕರುಡು ನೀತಿಯನ್ನು ಸರಕಾರ ಅಂಗೀಕರಿಸಿದೆ ಎಂದು ಘೋಷಿಸಲಾಯಿತು. ಇದರಿಂದ ಆಳುವ ವರ್ಗಗಳಿಗೆ ಸಂತಸವಾದರೆ ಸಾಂಸ್ಕೃತಿಕ ವಲಯದಲ್ಲಿ ಅಸಮಾಧಾನ ಹೆಚ್ಚಾಯಿತು. ಯಾವ ಉದ್ದೇಶಗಳ ಈಡೇರಿಕೆಗೆ ಈ ಕರಡು ನಿರ್ಮಾಣವಾಗಿತ್ತೋ ಆ ಮೂಲಭೂತ ಉದ್ದೇಶಗಳಿಗೆ ತಿಲಾಂಜಲಿಯನ್ನಿಡಲಾಗಿತ್ತು.  

ಸಾಂಸ್ಕೃತಿಕ ವಲಯವನ್ನು ಅಕಾಡೆಮಿಕ್ ಆಗಿ ನಿಯಂತ್ರಿಸುವುದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅದರ ಆಶ್ರಯದಲ್ಲಿರುವ ಎಲ್ಲಾ ಸರಕಾರಿ ಅಕಾಡೆಮಿಗಳು ಹಾಗೂ ಪ್ರಾಧಿಕಾರಗೂ ಮತ್ತು ಪ್ರತಿಷ್ಠಾನಗಳು. ಇವುಗಳನ್ನು ಸ್ವಾಯತ್ತ ಸಂಸ್ಥೆಗಳು ಎಂದು ಹೇಳಲಾಗುತ್ತಾದರೂ ಇವುಗಳ ನಿಯಂತ್ರಣ ಮಾತ್ರ ಆಳುವವರ ಕೈಯಲ್ಲಿ ಇರುವಂತೆ ಮೊದಲಿನಿಂದಲೂ ನೋಡಿಕೊಳ್ಳಲಾಗುತ್ತಿದೆ. ಈಗ ಮಂತ್ರಿಮಾನ್ಯರ ಕಪಿಮುಷ್ಠಿಯಿಂದ ಅಕಾಡೆಮಿಗಳನ್ನು ಸಂಪೂರ್ಣವಾಗಿ ವಿಮೋಚನೆಗೊಳಿಸಿದರೆ ಅವರೇಕೆ ಸುಮ್ಮನಿರುತ್ತಾರೆ?. ನಾಡಿನ ಎಲ್ಲಾ ಆಗು ಹೋಗುಗಳೂ ತಮ್ಮ ನಿಯಂತ್ರಣದಲ್ಲೇ ಇರಬೇಕೆಂದು ಬಯಸುವ ಅಧಿಕಾರಸ್ತರು ಅದು ಹೇಗೆ ತಾನೇ ತಮ್ಮ ಅಧಿಕಾರದ ಹಿಡಿತವನ್ನು ಸುಲಭದಲ್ಲಿ ಸಡಿಲಿಸುತ್ತಾರೆ?.
ಮೊದಲನೆಯದಾಗಿ ಸಂಸ್ಕೃತಿ ಇಲಾಖೆ ಹಾಗೂ ಅದರ ಅಂಗಸಂಸ್ಥೆಗಳಾದ ಅಕಾಡೆಮಿಗಳು ಹಾಗೂ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಜನಪ್ರತಿನಿಧಿಗಳನ್ನು ಖಡ್ಡಾಯವಾಗಿ ಆಹ್ವಾನಿಸಲೇಬೇಕು ಎನ್ನುವುದು ಹಿಂದಿನಿಂದ ಬಂದ ಸಾಂಪ್ರದಾಯಿಕ ಶಿಷ್ಟಾಚಾರ. ಇದಕ್ಕೆ ಇಂಗ್ಲೀಷಿನಲ್ಲಿ ಪ್ರೋಟೋಕಾಲ್ ಎನ್ನುತ್ತಾರೆ. ಅಂದರೆ ಈ ಮಹನೀಯರು ಕಾರ್ಯಕ್ರಮಗಳಿಗೆ ಬರಲಿ ಬಿಡಲಿ, ಅವರು ಕಾರ್ಯಕ್ರಮದ ದಿನ ಊರಲ್ಲಿ ಇರಲಿ ಬಿಡಲಿ, ಅವರ ಹೆಸರುಗಳನ್ನು ಮಾತ್ರ ಆಮಂತ್ರಣ ಪತ್ರಿಕೆಯಲ್ಲಿ ಖಡ್ಡಾಂiiವಾಗಿ ಮುದ್ರಿಸಬೇಕು ಎನ್ನುವ ವಿಕ್ಷಿಪ್ತ ಪ್ರೊಟೋಕಾಲ್ ಜಾರಿಯಲ್ಲಿದೆ. ಸಾಂಸ್ಕೃತಿಕ ನೀತಿಯಲ್ಲಿ ಈ ಆಭಾಸಕಾರಿಯಾದ ಪ್ರೋಟೋಕಾಲ್ ನೀತಿಯನ್ನು ತೆಗೆದುಹಾಕಿ ಯಾರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಹಾಗೂ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕು ಎನ್ನುವುದನ್ನು ಆಯಾ ಇಲಾಖೆಗಳ ಮುಖ್ಯಸ್ತರ ವಿವೇಚನೆಗೆ ಬಿಡಲಾಗಿತ್ತು. ಆದರೆ.. ಐಡೆಂಟಿಟಿ ಕ್ರೈಸಿಸ್ ರೋಗದಿಂದ ತೀವ್ರವಾಗಿ ನರಳುವ ಜನಪ್ರತಿನಿಧಿಗಳು ಇದಕ್ಕೆ ಒಪ್ಪುತ್ತಾರೆಯೇ?

ಸರಕಾರ ಕೊಡುವ ಅನುದಾನದಲ್ಲಿ ನಡೆಯುವ ಇಲಾಖೆ ಹಾಗೂ ಅಕಾಡೆಮಿಗಳ ಕಾರ್ಯಕ್ರಮಗಳಿಗೆ ಖಡ್ಡಾಯವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಹಾಗೂ ಅವರ ಹೆಸರುಗಳನ್ನು ಆಮಂತ್ರಣ ಪತ್ರಿಕೆಗಳಲ್ಲಿ ಮುದ್ರಿಸಲೇಬೇಕು ಮತ್ತು ಎಲ್ಲಾ ಸರಕಾರಿ ಅನುದಾನಿತ ಸಂಸ್ಥೆಗಳು ಈ ಶಿಷ್ಟಾಚಾರವನ್ನು ಖಡ್ಡಾಯವಾಗಿ ಪಾಲಿಸಲೇಬೇಕು ಎಂಬುದು ಮಂತ್ರಿ ಮಾನ್ಯರ ಬಯಕೆಯಾಗಿದೆ. ಹಾಗೂ ಇದೇ ಇಲ್ಲಿವರೆಗೂ ನಡೆದುಕೊಂಡು ಬಂದಿದೆ. ಇನ್ನು ಮುಂದೆ ಕೂಡಾ ಪ್ರೊಟೋಕಾಲ್ ಅನ್ನುವುದು ನಡೆಯುತ್ತಲೇ ಜಾರಿಯಲ್ಲಿರುತ್ತದೆ. ಯಾರಾದರೂ ತಪ್ಪಿದರೆ ಅವರನ್ನು ಕರೆದು ಛೀಮಾರಿ ಹಾಕಲಾಗುತ್ತದೆ. ಹಕ್ಕುಚ್ಯುತಿ ಅಸ್ತ್ರವನ್ನೂ ಬಳಸಬಹುದಾದ ಅವಕಾಶವೂ ಆಳುವವರ ಬತ್ತಳಿಕೆಯಲ್ಲಿರುತ್ತದೆ. 

ಆದರೆ.. ಬೆಲ್ಲದಂಗಡಿಯಲ್ಲಿ ಕಾಗೆಗಳಿಗೇನು ಕೆಲಸ ಎನ್ನುವ ಹಾಗೆ.. ಕಲೆ ಸಾಹಿತ್ಯ ಕ್ಷೇತ್ರಗಳ ಕಾರ್ಯಕ್ರಮಗಳಿಗೂ ರಾಜಕೀಯ ಕ್ಷೇತ್ರಗಳಿಗೂ ಎತ್ತನಿಂದೆತ್ತ ಸಂಬಂಧ? ಅಷ್ಟಕ್ಕೂ ಪ್ರೋಟೋಕಾಲ್ ಪ್ರಕಾರ ಈ ಜನಪ್ರತಿನಿಧಿಗಳನ್ನು ಕರೆದು ಕೂಡಿಸಿದರೂ ಅವರು ಅಲ್ಲಿ ಬಂದು ಕಲೆ ಸಾಹಿತ್ಯದ ಬಗ್ಗೆ ಮಾತಾಡುವ ಬದಲು ತಮ್ಮ ಸಾಧನೆ ವೇದನೆಗಳ ಕುರಿತೇ ಮಾತಾಡಿ ಇಡೀ ಸಮಾರಂಭವನ್ನು ತಮ್ಮ  ರಾಜಕೀಯ ಹಿತಾಸಕ್ತಿಗಾಗಿಯೇ ಬಳಸಿಕೊಳ್ಳುವುದು ಬಹುತೇಕ ಸಲ ಸಾಬೀತಾಗಿದೆ. ಯಾವುದೇ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲೇ ನಡೆದರೂ ಆಯಾ ಕ್ಷೇತ್ರವ್ಯಾಪ್ತಿಯ ಸಚಿವರು, ಶಾಸಕರು, ವಿರೋಧ ಪಕ್ಷದ ನಾಯಕರುಗಳು, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳನ್ನೂ ಖಡ್ಡಾಯವಾಗಿ ಆಹ್ವಾನಿಸಬೇಕು, ಅವರು ಬರದಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರುಗಳನ್ನು ಮುದ್ರಿಸಬೇಕು ಎನ್ನುವ ಶಿಷ್ಟಾಚಾರದ ನಿಯಮ ನಿಜಕ್ಕೂ ಅಸಹನೀಯ.

ಹೋಗಲಿ ಈ ಆಳುವವರ ಅದಮ್ಯ ಬಯಕೆಯಂತೆ ಸರಕಾರಿ ಅನುದಾನಿತ ಸಂಸ್ಥೆಗಳು ಶಿಷ್ಟಾಚಾರವನ್ನು ಪಾಲಿಸಲು ಬದ್ದವಾಗಲಿ. ಆದರೆ ಒಪ್ಪಿಕೊಂಡ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಖಡ್ಡಾಯವಾಗಿ ಒಪ್ಪಿತ ಸಮಯಕ್ಕೆ ಸರಿಯಾಗಿ ಬರುವ ಶಿಷ್ಟಾಚಾರವನ್ನು ಪಾಲಿಸುತ್ತಾರಾ? ಅದೂ ಇಲ್ಲಾ. ಎಷ್ಟೋ ಜನಪ್ರತಿನಿಧಿಗಳು ಬರುವುದೇ ಇಲ್ಲಾ. ಕೆಲವರು ಬಂದರೂ ಸಮಯಕ್ಕೆ ಸರಿಯಾಗಿ ಬಂದ ದಾಖಲೆಗಳೇ ಇಲ್ಲಾ. ಜನಪ್ರತಿನಿಧಿಗಳು ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದವರು ಕಾಯುತ್ತಲೇ ಇರಬೇಕು. ಬಂದ ಪ್ರೇಕ್ಷಕರು ಬೇಸರದಿಂದ ನಿಟ್ಟುಸಿರು ಬಿಡುತ್ತಲೇ ಇರಬೇಕು. ಈ ಜನಪ್ರತಿನಿಧಿಗಳು ಬಿಡುವಿದ್ದರೆ ತಮಗನುಕೂಲಕರವಾದ ಸಮಯಕ್ಕೆ ಬಂದು ರಾಜಕೀಯ ಭಾಷಣ ಮಾಡಿ ಹೋಗಬೇಕು. ಇದೆಲ್ಲಾ ಬೇಕೆ? ಕೊಟ್ಟ ಮಾತಿಗೆ ತಕ್ಕಂತೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭಕ್ಕೆ ಘನತೆಯನ್ನು ತಂದುಕೊಡಲು ಬಹುತೇಕ ಜನಪ್ರತಿನಿಧಿಗಳಿಗೆ ಸಾಧ್ಯವೇ ಇಲ್ಲವೆಂದ ಮೇಲೆ ಈ ಖಡ್ಡಾಯ ಶಿಷ್ಟಾಚಾರವಾದರೂ ಯಾಕೆ?

ಇದೂ ಸಹ ಓಟ್ ರಾಜಕಾರಣದ ತಂತ್ರಗಾರಿಕೆಯೇ ಆಗಿದೆ. ಸಾಂಸ್ಕತಿಕ ಕಾರ್ಯಕ್ರಮಗಳನ್ನೂ ಸಹ ತಮ್ಮ ರಾಜಕಾರಣದ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವ ಹುನ್ನಾರದ ಭಾಗವೇ ಆಗಿದೆ. ಅದರ ಜೊತೆಗೆ ವೈಚಾರಿಕವಾಗಿ ಜಾಗೃತಗೊಂಡಿರುವ ಈ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಲಯದವರು ಎಲ್ಲಿ ತಮ್ಮ ಹಿತಾಸಕ್ತಿಗೆ ವಿರುದ್ದವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೋ, ಎಲ್ಲಿ ಜನರನ್ನು ತಮ್ಮ ವಿರುದ್ಧ ಎತ್ತಿಕಟ್ಟುತ್ತಾರೋ, ಎಲ್ಲಿ ತಮ್ಮ ನ್ಯೂನ್ಯತೆಗಳನ್ನು ಜನರ ಮುಂದೆ ತೆರೆದಿಡುತ್ತಾರೋ.. ಎನ್ನುವ ಭಯವೂ ಆಳುವವರಲ್ಲಿ ಆಳವಾಗಿದೆ. ಸರಕಾರ ಅನುದಾನ ಕೊಡುತ್ತದೆಯಾದ್ದರಿಂದ ಜನಪ್ರತಿನಿಧಿಗಳು ಖಡ್ಡಾಯವಾಗಿ ಆಹ್ವಾನಿತರಾಗಲೇಬೇಕು ಎನ್ನುವುದು ಆಳುವವರ ಆದೇಶವಾಗಿದೆ. ಆದರೆ.. ಸರಕಾರ ಕೊಡುವ ಅನುದಾನವನ್ನು ಈ ಯಾವ ಜನಪ್ರತಿನಿಧಿಗಳೂ ಸಹ ತಮ್ಮ ಜೇಬಿನಿಂದ ಕೊಡುವುದಿಲ್ಲಾ. ಆ ಎಲ್ಲಾ ಅನುದಾನದ ಹಣವನ್ನೂ ಸಹ ಜನಸಾಮಾನ್ಯರು ತೆರಿಗೆ ರೂಪದಲ್ಲಿ ಕೊಟ್ಟಿರುತ್ತಾರೆ. ಜನತೆಯ ಹಣವನ್ನು ಜನರ ಕಲೆ ಭಾಷೆ ಸಂಸ್ಕೃತಿ ಉಳಿಸಲು ಸರಕಾರ ಕೊಟ್ಟಿರುತ್ತದೆ. ಇದರ ನಡುವೆ ಈ ಜನಪ್ರತಿನಿಧಿಗಳು ಎನ್ನುವವರ ಸಾಂಸ್ಕೃತಿಕ ಯಜಮಾನಿಕೆ ಯಾಕೆ? ಜನರ ಹಣವನ್ನೂ ಜನತೆಯ ಹಿತಾಸಕ್ತಿಗಾಗಿ ಖರ್ಚುಮಾಡುವ ಮ್ಯಾನೇಜರ್ ಆಗಿ ಮಾತ್ರ ಈ ಜನಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡಿರುತ್ತಾರೆ. ಆದರೆ ಈ ಮ್ಯಾನೇಜರುಗಳೇ ಯಜಮಾನರುಗಳು ಎಂದುಕೊಂಡು ಎಲ್ಲಾ ಕಡೆಗೂ ಮೂಗು ತೂರಿಸುವ ಕೆಲಸ ಮಾಡಿದರೆ ಅದು ನಿಜಕ್ಕೂ ಖಂಡನೀಯ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅಪಚಾರವೆಸಗಿದಂತೆ.

ಹೇಗಾದರೂ ಮಾಡಿ ಜನಪ್ರತಿನಿಧಿಗಳ ಸಾಂಸ್ಕೃತಿಕ ಯಜಮಾನಿಕೆಯನ್ನು ಕಡಿಮೆಗೊಳಿಸಿ ಇಲಾಖೆ ಹಾಗೂ ಅಕಾಡೆಮಿಗಳನ್ನು ಇನ್ನಷ್ಟು ಸ್ವಾಯತ್ತಗೊಳಿಸಬೇಕೆಂಬ ಆಶಯದಿಂದ ಬರಗೂರರ ನೇತೃತ್ವದ ಸಮಿತಿಯು ಸಾಂಸ್ಕೃತಿಕ ನೀತಿಯಲ್ಲಿ ಪ್ರೋಟೋಕಾಲ್ ಪದ್ದತಿಯನ್ನು ತೆಗೆದು ಹಾಕಲಾಗಿತ್ತು. ಆದರೆ ಈ ಆಳುವ ವರ್ಗದವರು ಈ ಅಂಶವನ್ನು ಶತಾಯ ಗತಾಯ ವಿರೋಧಿಸಿ, ಮುಖ್ಯಮಂತ್ರಿಗಳ ಮೇಲೆ ಅಸಾಧ್ಯ ಒತ್ತಡ ತಂದು, ಸಾಂಸ್ಕೃತಿಕ ನೀತಿಯ ಕರಡನ್ನೇ ತಮ್ಮ ಹಿತಾಸಕ್ತಿಗೆ ಪೂರಕವಾಗಿ ಪರಿಷ್ಕರಿಸುವಂತೆ ಆಗ್ರಹಿಸಿ ಅನಗತ್ಯವಾಗಿದ್ದ ಶಿಷ್ಟಾಚಾರದ ಪದ್ದತಿಯನ್ನು ಮತ್ತೆ ಮುಂದುವರಿಸುವಂತೆ ನೋಡಿಕೊಂಡರು. ಸಶಕ್ತವಾಗಿದ್ದ ಸಾಂಸ್ಕೃತಿಕ ನೀತಿಯನ್ನು ವಿಕಲಾಂಗಗೊಳಿಸಿದರು.

ಇಷ್ಟೇ ಅಲ್ಲಾ.. ಈ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರುಗಳ ಆಯ್ಕೆಯನ್ನು ರಾಜಕೀಯದವರ ಬದಲಾಗಿ ತಜ್ಞ  ಶೋಧನಾ ಸಮಿತಿಯೇ ನಿರ್ಣಯಿಸಬೇಕು ಎನ್ನವ ಶಿಪಾರಸ್ಸನ್ನೂ ಕೂಡಾ ಸಾಂಸ್ಕೃತಿಕ ನೀತಿಯಲ್ಲಿ ಮಾಡಲಾಗಿದೆ. ಇದೂ ಸಹ ಆಳುವ ಪ್ರಭುಗಳಿಗೆ ನುಂಗಲಾರದ ತುತ್ತಾಗಿ ಅಪತ್ಯವಾಗಿದೆ. ಶೋಧನಾ ಸಮಿತಿಗೆ ಒಬ್ಬ ಅಧ್ಯಕ್ಷರು ಹಾಗೂ ಕನಿಷ್ಠ ಮೂವರು, ಗರಿಷ್ಠ ಐವರು ಪರಿಣತ ಸದಸ್ಯರಿರಬೇಕು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಶೋಧನಾ ಸಮಿತಿ ಸದಸ್ಯರಾಗಿರಬೇಕು. ಸಾಮಾಜಿಕ, ಪ್ರಾದೇಶಿಕ ಹಾಗೂ ಮಹಿಳಾ ನ್ಯಾಯವನ್ನು ಪಾಲಿಸಿ ಸಮಿತಿಯನ್ನು ಸರಕಾರ ರಚಿಸಬೇಕು. ಸಮಿತಿಯು ಪ್ರತಿಯೊಂದು ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರನ್ನು ಸೂಚಿಸಬೇಕು. ಆ ಪಟ್ಟಿಯಲ್ಲಿರುವ ಒಬ್ಬರನ್ನು ಸರಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂಬುದು ಸಾಂಸ್ಕೃತಿಕ ನೀತಿಯ ಕರಡು ಪ್ರತಿಯಲ್ಲಿ ಶಿಪಾರಸ್ಸು ಮಾಡಲಾಗಿದೆ. ಮತ್ತು ಇದು ಸೂಕ್ತವಾದ ಕ್ರಮವೂ ಆಗಿದೆ.

ಯಾವುದೇ ಒಂದು ಕ್ಷೇತ್ರದ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಬೇಕಾದವರು ಆಯಾ ಕ್ಷೇತ್ರದಲ್ಲಿ ಅನುಭವ ಇರುವವರು ಎನ್ನುವುದು ನಿರ್ವಿವಾದ. ಆದರೆ ಭಾಷೆ ಕಲೆ ಸಾಹಿತ್ಯದ ಕುರಿತು ಆಳವಾದ ಅರಿವಿಲ್ಲದ, ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಕೆಲಸಗಳ ಬಗ್ಗೆ ತಿಳುವಳಿಕೆ ಇಲ್ಲದವರು ಅದು ಹೇಗೆ ತಾನೇ ಸಮರ್ಥರನ್ನು ಆಯ್ಕೆ ಮಾಡಲು ಸಾಧ್ಯ? ಪ್ರತಿ ಸಲ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ವಾರಸುದಾರರನ್ನು ಆಯ್ಕೆ ಮಾಡುವಾಗ ಈ ರಾಜಕೀಯದ ಒತ್ತಡ ವಿಪರೀತವಾಗಿರುತ್ತದೆ. ಸಂಸ್ಕೃತಿ ಸಚಿವಾಲಯವು ರಾಜಕೀಯ ಒತ್ತಡಕ್ಕೆ ಮಣಿದು ಅರ್ಹರಲ್ಲದವರನ್ನೂ ಆಯ್ಕೆ ಮಾಡಿದ ಸಂದರ್ಭಗಳು ಬೇಕಾದಷ್ಟಿವೆ. ಪಕ್ಷ ರಾಜಕಾರಣದ ಬೆಂಬಲಿಗರನ್ನು ಅಕಾಡೆಮಿಗೆ ನೇಮಿಸುತ್ತಾ ಬರಲಾಗಿದೆ. ಆಳುವ ಪಕ್ಷ ಬದಲಾದಂತೆಲ್ಲಾ ಆಯಾ ಪಕ್ಷಗಳ ಸಮರ್ಥಕರನ್ನು ಅಕಾಡೆಮಿಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಹೀಗಾಗಿ ಕಲೆ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಕೊಂಡವರೂ ಸಹ ಫಲಾನುಭವಿಯಾಗಲು ಯಾವುದಾದರೊಂದು ರಾಜಕೀಯ ಪಕ್ಷದ ಹಿಂಬಾಲಕರಾಗಬೇಕಾದ ಅನಿವಾರ್ಯತೆಯೊಂದು ಸೃಷ್ಟಿಸಲಾಗಿದೆ. ರಾಜಕೀಯ ಲಾಭಿ ಎನ್ನುವುದು ಅನರ್ಹರ ಆಯ್ಕೆಗೆ ದಾರಿಯಾಗುತ್ತದೆ. ಹೀಗಾಗಿ.. ಅಕಾಡೆಮಿಗಳು ಉದ್ದೇಶಿತ ಕೆಲಸ ಮಾಡದೇ ಅಪ್ರಸ್ತುತವಾಗುತ್ತಿವೆ. ಕಲಾವಿದರು,

ಆಯಾ ಕ್ಷೇತ್ರದ ತಜ್ಞರ ಸಮಿತಿಯೊಂದನ್ನು ಸರಕಾರವೇ ನೇಮಿಸಿ ಅರ್ಹರಾದ ಅಧ್ಯಕ್ಷರು ಹಾಗೂ ಸದಸ್ಯರನ್ನು ಸರಕಾರಕ್ಕೆ ಶಿಪಾರಸ್ಸು ಮಾಡುವುದು ಉತ್ತಮ. ಬೇಕಾದರೆ ತಜ್ಞರ ತಂಡ ಎರಡು ಮೂರು ಪಟ್ಟು ಹೆಚ್ಚಿಗೆ ಹೆಸರನ್ನು ಸೂಚನೆ ಮಾಡಿ ಸರಕಾರಕ್ಕೆ ಶಿಪಾರಸ್ಸು ಮಾಡಲಿ. ಹಾಗೆ ಶಿಪಾರಸ್ಸು ಮಾಡಿದ ಹೆಸರಲ್ಲಿ ಸೂಕ್ತವೆನ್ನಿಸಿದವರನ್ನು ಸರಕಾರದ ಸಚಿವಾಲಯ ಆಯ್ಕೆ ಮಾಡಲಿ. ಇದೇ ಮಾನದಂಡವನ್ನು ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಆಯ್ಕೆಯಲ್ಲಿ ಅನುಸರಿಸಲಾಗುತ್ತಿದೆ. ಅದೇ ರೀತಿ ಅಕಾಡೆಮಿಗಳ ಆಯ್ಕೆಯಲ್ಲೂ ಆಗಬೇಕು ಎನ್ನುವುದು ಸಾಂಸ್ಕೃತಿಕ ನೀತಿಯ ಆಶಯ. ಆದರೆ ಇದನ್ನೆಲ್ಲಾ ಆಳುವವರಿಗೆ ಮನದಟ್ಟು ಮಾಡುವುದಾದರೂ ಹೇಗೆ?. ಒಬ್ಬರು ಸಂಸ್ಕೃತಿ ಸಚಿವೆ ಉಮಾಶ್ರೀಯವರೋ ಇಲ್ಲವೇ ಒಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯನವರೋ ಸಾಂಸ್ಕೃತಿಕ ನೀತಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಬಯಸಿದರೆ ಅದು ಸಚಿವ ಸಂಪುಟದಲ್ಲಿ ಅನುಮೋದನೆಯೇ ಆಗದಂತೆ ನೋಡಿಕೊಳ್ಳುವ ವಿಕ್ಷಿಪ್ತ ಶಕ್ತಿಗಳು ಸಕ್ರೀಯವಾಗಿವೆ. ಅವು ಎಲ್ಲಾ ನಮೂನಿಯ ರಾಜಕೀಯ ಪಕ್ಷದಲ್ಲೂ ಹಾಸುಹೊಕ್ಕಾಗಿವೆ. ರಾಜಕೀಯದವರು ರಾಜಕೀಯ ಮಾಡಿಕೊಂಡಿರಲಿ, ಆದರೆ ಸಾಂಸ್ಕೃತಿಕ ನೀತಿ ನಿರ್ಣಯಗಳಲ್ಲಿ ಮೂಗು ತೂರಿಸದಿರಲಿ ಎನ್ನುವುದು ಎಲ್ಲಾ ಪ್ರಜ್ಞಾವಂತಹ ಬಯಕೆಯಾಗಿದೆ. ಆದರೆ ಈ ಆಳುವವರಿಗೆ ಅರ್ಥವಾಗುವಂತೆ ಹೇಳುವವರಾದರೂ ಯಾರು? ಬೆಕ್ಕಿಗೆ ಗಂಟೆ ಕಟ್ಟುವ ಬಗೆಯಾದರೂ ಏನು? ಹಾಗಾದರೆ ಈ ಸಂಸ್ಕೃತಿ ಇಲಾಖೆ, ಅಕಾಡೆಮಿ ಮತ್ತು ಪ್ರಾಧಿಕಾರಗಳು ಇರುವುದಾದರೂ ಯಾತಕ್ಕೆ? ಅವೆಲ್ಲವೂ ಕೂಡಾ ಆಳುವವರ ಹಿತಾಸಕ್ತಿಯನ್ನು ಕಾಪಾಡಲು ಬಳಕೆಯಾದರೆ, ಪಕ್ಷಗಳ ಎಜೆಂಟರುಗಳೇ ಅಕಾಡೆಮಿಗಳಲ್ಲಿ ತುಂಬಿಕೊಂಡರೆ ಈ ನಾಡಿನ ಜನರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾದರೂ ಹೇಗೆ? ಕಲಾವಿದರುಗಳು, ಸಾಹಿತಿಗಳು ಜೊತೆಗೆ ಮಾಧ್ಯಮದವರು ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷತೆ ಹಾಗೂ ಸದಸ್ಯಗಿರಿಗಾಗಿ  ಆಳುವವರ್ಗದವರ ಮರ್ಜಿ ಕಾಯುತ್ತಾ ಇರಬೇಕು, ಶಿಪಾರಸ್ಸುಗಳಿಗಾಗಿ ಯಡತಾಕುತ್ತಿರಬೇಕು, ರಾಜಕೀಯದವರ ಮನೆಯ ಬಾಗಿಲು ಕಾಯುತ್ತಿರಬೇಕು.. ಎನ್ನುವುದು ಜನಪ್ರತಿನಿಧಿಗಳ ತಂತ್ರಗಾರಿಕೆಯಾಗಿದೆ. ಪ್ರಜ್ಞಾವಂತ ಕಲಾವಿದರು ಹಾಗೂ ಸಾಹಿತಿಗಳಿಗಿಂತಾ ನಾವು ಮೇಲಿರುವವರು. ಅವರೆಲ್ಲಾ ನಮ್ಮ ಮುಂದೆ ಬಂದು ಪದವಿ ಪುರಸ್ಕಾರಕ್ಕಾಗಿ ಕೈಚಾಚಿ ಕೇಳುತ್ತಿರಬೇಕು, ಬಾಯಿಬಿಚ್ಚಿ ಬೇಡುತ್ತಿರಬೇಕು ಎನ್ನುವ ಅಹಮಿಕೆ ಕೂಡಾ ಈ ರಾಜಕಾರಣಿಗಳಿಗಿರುವುದು ಸುಳ್ಳಲ್ಲಾ.

ಹೋಗಲಿ ಸರಕಾರವೇ ಆಯ್ಕೆ ಮಾಡಿದ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರಿಗಾದರೂ ಪೂರ್ಣಾವಧಿ ಕೆಲಸ ಮಾಡಲು ಅವಕಾಶವಾದರೂ ಇದೆಯಾ ಅಂದರೆ ಅದೂ ಇಲ್ಲಾ. ಈ ಅವಧಿಯೂ ಸಹ ಮತ್ತೆ ರಾಜಕೀಯ ಹಿತಾಸಕ್ತಿಯನ್ನೇ ಅವಲಂಬಿಸಿದೆ. ನೇಮಕಗೊಂಡ ಅಧ್ಯಕ್ಷರ ಹಾಗೂ ಸದಸ್ಯರ ಅವಧಿ ಮೂರು ವರ್ಷಗಳು ಇಲ್ಲವೇ ಮುಂದಿನ ಆದೇಶದವರೆಗೆ ಎಂಬುದೇ ಮತ್ತೆ ಮುಂದುವರೆದಿದೆ. ಇದರಿಂದಾಗಿ ಆಳುವ ರಾಜಕೀಯ ಪಕ್ಷಗಳು ಬದಲಾದಾಗ ಸರಕಾರದ ಹಿತಾಸಕ್ತಿಯಂತೆ ಹಾಲಿ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಅವಧಿಪೂರ್ವವಾಗಿ ಮನೆಗೆ ಕಳಿಸಿ ತಮ್ಮ ಸರಕಾರಕ್ಕೆ ಬದ್ದವಾಗಿರುವವರನ್ನು ನೇಮಕ ಮಾಡಬಹುದಾಗಿದೆ. ಇದು ನಿಜಕ್ಕೂ ಅಪಾಯಕಾರಿಯಾದ ನಿಲುವು. ಯಾವುದೇ ಸರಕಾರದಿಂದ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ನೇಮಕಗೊಂಡ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಮೂರು ವರ್ಷಗಳ ಅವಧಿ ಪೂರೈಸಲು ಪೂರ್ಣ ಅವಕಾಶ ಇರಬೇಕು. ಅವರುಗಳು ಕಾಲಮಿತಿಯಲ್ಲಿ ಏನೇನೋ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ. ಅವುಗಳೆಲ್ಲಾ ಸಂಪೂರ್ಣಗೊಳಿಸಲು ಪೂರ್ಣಾವಧಿ ಬೇಕೆ ಬೇಕಾಗುತ್ತದೆ. ಸರಕಾರ ಬದಲಾಯಿತು ಎನ್ನುವ ಕಾರಣಕ್ಕೆ ಇದ್ದಕ್ಕಿದ್ದಂತೆ ನೇಮಕಗೊಂಡವರನ್ನು ಬದಲಾಯಿಸಿದರೆ ಹಮ್ಮಿಕೊಂಡ ಯೋಜನೆಗಳು ಹಾಳಾಗುತ್ತವೆ. ಅದಕ್ಕೆ ಖರ್ಚು ಮಾಡಿದ ಜನತೆಯ ತೆರಿಗೆಯ ಹಣ ವ್ಯರ್ಥವಾಗುತ್ತದೆ. ಹೀಗಾಗಿ.. ಯಾವುದೇ ಸರಕಾರ ಬಂದರೂ ನೇಮಕಗೊಂಡವರು ಕನಿಷ್ಟ ಮೂರು ವರ್ಷಗಳ ಕಾಲ ಮುಕ್ತವಾಗಿ  ಕೆಲಸ ಮಾಡುವಂತಹ ನಿಯಮ ಸಾಂಸ್ಕೃತಿಕ ನೀತಿಯ ಅನುಮೋದಿತ ಕರಡಿನಲ್ಲಿ ಇರಬೇಕಾಗಿತ್ತು. ಆದರೆ.. ಇದಕ್ಕೂ ಸಹ ಆಳುವ ವರ್ಗಗಳು ಅಡೆತಡೆ ಒಡ್ಡಿದರು. ಹೀಗಾಗಿ ಯಾವಾಗ ಸರಕಾರ ಬದಲಾಗುತ್ತೋ, ಯಾವಾಗ ತಮ್ಮನ್ನು ಬದಲಾಯಿಸಲಾಗುತ್ತದೋ ಎನ್ನುವ ಆತಂಕದಲ್ಲೇ ಅಧ್ಯಕ್ಷರು ಹಾಗೂ ಸದಸ್ಯರುಗಳ ಕೆಲಸ ನಿರ್ವಹಿಸಬೇಕಾಗಿದೆ. ಇದು ನಿಜಕ್ಕೂ ಸಾಂಸ್ಕೃತಿಕ ಯಜಮಾನಿಕೆಯ ಅತಿರೇಕವಾಗಿದೆ.
 
ವಿವಿಧ ಕಲಾ ಪ್ರಕಾರಗಳಲ್ಲಿನ ಕಲಾವಿದರು ಮತ್ತು ಸಾಹಿತಿಗಳ ಮಕ್ಕಳಿಗೆ ಜಾತಿ, ಧರ್ಮದ ಪರಿಗಣನೆ ಮೀರಿ ಆರ್ಥಿಕತೆಯನ್ನು ಮಾನದಂಡವಾಗಿಟ್ಟುಕೊಂಡು ಶೈಕ್ಷಣಿಕ ಮೀಸಲಾತಿ ನೀಡಬೇಕು. ಜಾನಪದ, ವೃತ್ತಿ-ಹವ್ಯಾಸಿ ರಂಗಭೂಮಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ಚಲನಚಿತ್ರದ ಕಲಾವಿದರು ಮತ್ತು ಸಾಹಿತ್ಯ ಕ್ಷೇತ್ರದ ಲೇಖಕರ ಮಕ್ಕಳಿಗೆ ಸಾಮಾನ್ಯ, ವೃತ್ತಿ ಹಾಗೂ ಉನ್ನತ ಶಿಕ್ಷಣದಲ್ಲಿ ಒಳಮೀಸಲಾಗಿ ನೀಡಬೇಕು ಎಂಬ ಶಿಪಾರಸ್ಸನ್ನೂ ಸಹ ಸಾಂಸ್ಕೃತಿಕ ನೀತಿಯಲ್ಲಿ ಮಾಡಲಾಗಿತ್ತು. ಈ ಅಂಶಕ್ಕೆ ಸಚಿವ ಸಂಪುಟದ ಉಪಸಮಿತಿ ಒಪ್ಪಿಗೆ ಸೂಚಿಸಿತ್ತು. ಆದರೆ... ಸಚಿವ ಸಂಪುಟ ಇದನ್ನು ನಿರಾಕರಿಸಿತು. ಮೊದಲನೆಯದಾಗಿ ಈ ರಾಜಕಾರಣಿಗಳಿಗೆ ತಮ್ಮತನ ಮೆರೆಯಲು ಕಲೆ ಸಾಹಿತ್ಯದ ವೇದಿಕೆಗಳು ಬೇಕು. ಓಟಿಗಾಗಿ ಜನರನ್ನು ತಲುಪಲು ಸಾಹಿತ್ಯ ಸಮಾವೇಶಗಳು ಬೇಕು. ಆದರೆ.. ಕಲೆ ಸಾಹಿತ್ಯಕ್ಕಾಗಿ ಬದುಕನ್ನೇ ಸವೆಸಿದ ಸಾಧಕರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕೊಡವುದು ಮಾತ್ರ ಬೇಕಾಗಿಲ್ಲಾ. ಯಾಕೆಂದರೆ.. ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಅಲ್ಪರಲ್ಲೇ ಅಲ್ಪಸಂಖ್ಯಾತರಾಗಿರುವ ಈ ಕಲಾವಿದರು ಹಾಗೂ ಸಾಹಿತಿಗಳನ್ನು ಓಟ್ ಬ್ಯಾಂಕ್‌ಗಳೆಂದು ಈ ರಾಜಕೀಯ ವರ್ಗ ಪರಿಗಣಿಸುವುದಿಲ್ಲಾ. ಎಲ್ಲಿ ಅಧಿಕಾರಕ್ಕೆ ಮೆಟ್ಟಲಾಗುವ ಓಟ್‌ಗಳು ಬರುವುದಿಲ್ಲವೋ ಅಲ್ಲಿ ಈ ಆಳುವ ವರ್ಗಗಳಿಗೆ ಆಸಕ್ತಿ ಇರುವುದಿಲ್ಲಾ. ಹೀಗಾಗಿ ಕಲೆ ಹಾಗೂ ಸಾಹಿತ್ಯ ಕ್ಷೇತ್ರದವರ ಮಕ್ಕಳಿಗೆ ಮೀಸಲಾಗಿ ಕೊಡಲು ಇವರು ಒಪ್ಪುವ ಸಾಧ್ಯತೆಗಳೇ ಇಲ್ಲಾ. ಕಲೆ ಹಾಗೂ ಸಾಹಿತ್ಯಕ್ಕಾಗಿ ಬದುಕನ್ನೇ ಧಾರೆಯೆರೆದವರ ಮಕ್ಕಳುಗಳು ಮೀಸಲಾತಿಯಿಂದ ಅವಕಾಶ ವಂಚಿತರನ್ನಾಗಿಸಿತು. ಈ ಶಿಪಾರಸ್ಸೂ ಸಹ ಬಿದ್ದು ಹೋಯಿತು. ಕಲೆ ಹಾಗೂ ಸಾಹಿತ್ಯ ಕ್ಷೇತ್ರವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕೆನ್ನುವವರು ಇನ್ನೊಮ್ಮೆ ಯೋಚಿಸುವಂತಾಯಿತು.

ಬಿ.ವಿ.ಕಾರಂತರ ಕನಸಿನ ರಂಗಾಯಣಗಳ ಉಸ್ತುವಾರಿಗಾಗಿ ಕರ್ನಾಟಕ ರಂಗಾಯಣ ಪ್ರಾಧಿಕಾರವೊಂದನ್ನು ರಚಿಸಬೇಕು ಎನ್ನುವ ಶಿಪಾರಸ್ಸನ್ನೂ ಸಹ ಈ ಸಾಂಸ್ಕೃತಿಕ ನೀತಿಯಲ್ಲಿ ಮಾಡಲಾಗಿತ್ತು. ಆದರೆ.. ಇದೂ ಸಹ ಸಚಿವ ಸಂಪುಟದ ಸಭೆಯಲ್ಲಿ ನಿರಾಕರಣೆಗೊಂಡಿತು. ಹೀಗೊಂದು ಪ್ರಾಧಿಕಾರ ರಚಿಸಿದ್ದರೆ ಈಗಿರುವ ನಾಲ್ಕೂ ಪ್ರಾದೇಶಿಕ ರಂಗಾಯಣಗಳು ಹಾಗೂ ಇನ್ನೂ ಅಸ್ಥಿತ್ವಕ್ಕೆ ಬರಬೇಕಾದ ಎರಡು ರಂಗಾಯಣಗಳು ಒಂದೇ ಪ್ರಾಧಿಕಾರದ ಅಡಿಯಲ್ಲಿ ಬರುತ್ತಿದ್ದವು. ಈಗ ರಂಗಸಮಾಜ ಮಾಡುತ್ತಿರುವ ಕೆಲಸವನ್ನೂ ಈ ಪ್ರಾಧಿಕಾರವೇ ಮಾಡಬಹುದಾಗಿತ್ತು. ಎಲ್ಲಾ ರಂಗಾಯಣಗಳ ಆಡಳಿತವನ್ನು ನೋಡಿಕೊಳ್ಳುವುದು, ಅಲ್ಲಿಯ ಬಿಕ್ಕಟ್ಟುಗಳನ್ನು ಕಾಲಕಾಲಕ್ಕೆ ಬಗೆಹರಿಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈಗ ತುಂಬಾ ಕಷ್ಟಕರವಾಗಿದೆ. ಗುಲಬರ್ಗಾ ಹಾಗೂ ಶಿವಮೊಗ್ಗ ರಂಗಾಯಣಗಳು ಸೃಷ್ಟಿಸಿದ್ದ ಬಿಕ್ಕಟ್ಟನ್ನು ಪರಿಹರಿಸಿ ಮತ್ತೆ ಹೊಸ ನಿರ್ದೇಶಕರುಗಳನ್ನು ನಿಯಮಿಸಲು ಸಂಸ್ಕೃತಿ ಸಚಿವಾಲಯ ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಎರಡು ವರ್ಷಗಳಿಂದ ಈ ಎರಡೂ ರಂಗಾಯಣಗಳಲ್ಲಿ ಏನೂ ಮಹತ್ತರ ಕೆಲಸಗಳಾಗದೇ ಅನುದಾನದ ಹಣ ಮಾತ್ರ ವ್ಯರ್ಥವಾಗಿ ಖರ್ಚಾಗುತ್ತಲೇ ಇದೆ. ಇದನ್ನೆಲ್ಲಾ ತಪ್ಪಿಸಲು ಪ್ರಾಧಿಕಾರವೊಂದನ್ನು ರಚಿಸಿದರೆ ರಂಗಾಯಣಗಳು ಸುರಳಿತವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಸಾಧ್ಯವಾಗಬಹುದಾಗಿದೆ. ಆದರೆ.. ಆಳುವವರಿಗೆ ಇದು ಬೇಕಿಲ್ಲಾ. ಎಲ್ಲಾ ನೇಮಕಗಳೂ ತಮ್ಮ ನಿರ್ಣಯದಂತೆ ನಡೆಯಬೇಕು ಹಾಗೂ ತಮ್ಮ ಅಧಿಕಾರಿಗಳ ಮೂಲಕವೇ ಆಗಬೇಕು ಎನ್ನುವುದು ಜನಪ್ರತಿನಿಧಿಗಳೆನ್ನುವವರ ಹಿಡನ್ ಅಜೆಂಡಾವೇ ಆಗಿದೆ. ಅವರು ತಮ್ಮ ಹಿಡಿತವನ್ನು ಸಡಲಿಸಿ ಅಕಾಡೆಮಿ, ಪ್ರಾಧಿಕಾರಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಕೊಡಲು ಸಿದ್ದರಿಲ್ಲಾ. ಈ ರಾಜಕೀಯದ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರಬರದೇ ಯಾವ ಅಕಾಡೆಮಿ ಪ್ರಾಧಿಕಾರಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವೂ ಇಲ್ಲಾ. ತಾವೇ ನೇಮಕ ಮಾಡಿದ ಸಾಂಸ್ಕೃತಿಕ ಸಮಿತಿಯ ಪ್ರಮುಖ ಶಿಪರಸ್ಸುಗಳನ್ನು ಒಪ್ಪಿಕೊಳ್ಳಲೂ ಆಳವವರು ಸಿದ್ದರಿಲ್ಲ. ಹೀಗಾಗಿ ಯಾವ ಉದ್ದೇಶಕ್ಕಾಗಿ ಸಾಂಸ್ಕೃತಿಕ ನೀತಿ ಯನ್ನು ಜಾರಿಗೆ ತರಲು ಸರಕಾರ ಹೊರಟಿತ್ತೋ ಆ ಆಶಯವೇ ಸಂಪೂರ್ಣವಾಗಿ ಈಡೇರಲಿಲ್ಲ. 

ಸಾಂಸ್ಕೃತಿಕ ನೀತಿಯಲ್ಲಿ ರಾಜಕೀಯ ಹಿತಾಸಕ್ತಿಗೆ ತೊಡಕಾಗುವಂತಹ ಶಿಪಾರಸ್ಸುಗಳನ್ನು ತೆಗೆದು ಹಾಕುವ ಕೆಲಸವನ್ನು ಸಚಿವ ಸಂಪುಟ ಮಾಡಿ ತಮ್ಮ ಅಧಿಕಾರಕ್ಕೆ ಚ್ಯುತಿ ಬಾರದಂತೆ ಆಳುವವರು ನೋಡಿಕೊಂಡಿದ್ದಾರೆ. ನಾಡು ನುಡಿ ಕಲೆ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗಿಂತಲೂ ಆಳುವವರಿಗೆ ತಮ್ಮ ಓಟು, ಅಧಿಕಾರ, ಪ್ರತಿಷ್ಠೆಗಳೇ ಬಹುಮುಖ್ಯ ಆಧ್ಯತೆಗಳಾಗಿವೆ. ಆಳುವವರ ಈ ಸಾಂಸ್ಕೃತಿಕ ವಿರೋಧಿ ನೀತಿಯನ್ನು ಪ್ರಶ್ನಿಸುವ, ಪ್ರತಿರೋಧಿಸುವ ದ್ವನಿಗಳು ತಣ್ಣಗಾಗಿವೆ. ಮೊದಲನೆಯದಾಗಿ ತಮ್ಮದೇ ಸಮಿತಿಯ ಸಾಂಸ್ಕೃತಿಕ ನೀತಿಯ ಮುಖ್ಯ ಶಿಪಾರಸ್ಸುಗಳನ್ನು ಕೈಬಿಟ್ಟಿದ್ದಕ್ಕೆ ಬರಗೂರು ರಾಮಚಂದ್ರಪ್ಪನವರು ದ್ವನಿ ಎತ್ತಬೇಕಿತ್ತು, ಆಳುವವರ ಅಧಿಕಾರ ದಾಹವನ್ನು ವಿರೋಧಿಸಬೇಕಿತ್ತು. ಆದರೆ ಅವರು ಹಾಗೆ ಮಾಡಲೇ ಇಲ್ಲಾ. ಸರಕಾರದ ಫಲಾನುಭವಿಗಳಾಗಿ ಅದರ ಋಣದಲ್ಲಿರುವ ಬರಗೂರರಿಗೆ ವಿರೋಧಿಸುವ ತಾಕತ್ತೂ ಇಲ್ಲವಾಗಿದೆ. ಹೋಗಲಿ ಇಡೀ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದವರಾದರೂ ಆಳುವವರ ಈ ಜನವಿರೋಧಿ ನೀತಿಯನ್ನು ವಿರೋಧಿಸಿ ಸಾಂಸ್ಕೃತಿಕ ನೀತಿಯ ಯಥಾವತ್ ಜಾರಿಗೆ ಒತ್ತಾಯಿಸಬೇಕಿತ್ತು. ಅದೂ ಆಗಲಿಲ್ಲ. ಹಾಗೇ ಒಗ್ಗಟ್ಟಾಗಿ ಪ್ರತಿಭಟಿಸಿ ಸರಕಾರದ ಮೇಲೆ ಒತ್ತಡವನ್ನು ಹೇರಿದ್ದರೆ ಸಾಂಸ್ಕೃತಿಕ ನೀತಿಯ ಪರವಾಗಿರುವ ಸಚಿವೆ ಉಮಾಶ್ರೀ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಬೆಂಬಲವೂ ಸಿಗುತ್ತಿತ್ತು. ಆದರೆ.. ಸಾಂಸ್ಕೃತಿಕ ಕ್ಷೇತ್ರದ ಹಿತಾಸಕ್ತಿಗೆ ಅನ್ಯಾಯವಾಗಿದ್ದರ ಬಗ್ಗೆ ಅರಿವಿದ್ದೂ ಆ ಕ್ಷೇತ್ರದ ದಿಗ್ಗಜರು ಜಾಣ ಮೌನಕ್ಕೆ ಶರಣಾಗಿದ್ದನ್ನು ಗಮನಿಸಿದರೆ ಅವರ ಬದ್ದತೆಯ ಮೇಲೆ ಗುಮಾನಿ ಬಾರದೇ ಇರದು.

ಎಲ್ಲಿವರೆಗೂ ಸಾಹಿತಿಗಳು, ಕಲಾವಿದರುಗಳು ಸದಾ ಜಾಗೃತವಾಗಿರುವುದಿಲ್ಲವೋ, ಎಲ್ಲಿವರೆಗೂ ಅನ್ಯಾಯದ ವಿರುದ್ಧ ಜನರನ್ನು ಎಚ್ಚರಿಸುವುದಿಲ್ಲವೋ ಅಲ್ಲಿವರೆಗೂ ಈ ನಾಡು ಸಕಾರಾತ್ಮಕವಾಗಿ ಬದಲಾಗುವುದಿಲ್ಲಾ. ಈ ನಾಡಿನ ಭಾಷೆ ಸಂಸ್ಕೃತಿಯ ಉಳಿವಿಗೆ ನಮ್ಮನ್ನು ಆಳುವವರಿಂದಲೇ ಅಪಾಯ ಒದಗಿದಾಗಲೂ ಪ್ರಜ್ಞಾವಂತರು ಮೌನವಾಗುತ್ತಾರೋ ಆಗ ನಾಡಿನ ಸಂಸ್ಕೃತಿ ಅನ್ಯರ ಸಾಂಸ್ಕೃತಿಕ ದಾಳಿಗೆ ಒಳಗಾಗಿ ತುಳಿತಕ್ಕೊಳಗಾಗುವುದರಲ್ಲಿ ಸಂದೇಹವಿಲ್ಲ. ಭಾಷೆ ಹಾಗೂ ಸಂಸ್ಕೃತಿಯ ಉಳಿವು ಜನಪ್ರತಿನಿಧಿಗಳಿಗೆ ಬೇಕಿಲ್ಲದಿರಬಹುದು ಆದರೆ ಈ ನಾಡ ಜನರಿಗೆ ಬೇಕಾಗಿದೆ. ಆ ಜನರನ್ನು ಎಚ್ಚರಿಸುವ ಹೊಣೆಗಾರಿಕೆ ಎಚ್ಚೆತ್ತ ಕಲಾವಿದರು ಹಾಗೂ ಸಾಹಿತಿಗಳ ಮೇಲಿದೆ. ಇದಕ್ಕಾಗಿ ಸಾಂಸ್ಕೃತಿಕ ನಾಯಕತ್ವವೊಂದು ಈಗ ಬೇಕಾಗಿದೆ. ಅದನ್ನು ನಿಭಾಯಿಸುವ ದೀಮಂತ ವ್ಯಕ್ತಿ ಹಾಗೂ ಸಾಂಸ್ಕೃತಿಕ ಶಕ್ತಿಗಾಗಿ ಸಾಂಸ್ಕೃತಿಕ ಲೋಕ ಕಾಯುತ್ತಿದೆ.   

-ಶಶಿಕಾಂತ ಯಡಹಳ್ಳಿ       
  
 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ