ಗುರುವಾರ, ಜನವರಿ 22, 2015

ವಿಫಲವಾದ “ರಂಗಭಾರತಿ”; ಕನ್ನಡದ ನೆಲದಲ್ಲಿ ಹಿಂದಿ ಭಾಷಾರತಿ.

ಕಂಬಾರರ ಸ್ವಾರ್ಥತನ, ದೊಡ್ಡವರ ಸಣ್ಣತನ, ಕಾಲು ಕೋಟಿ ಪತನ… ಇದೇ 'ರಂಗಭಾರತಿ' ಕಥನ. 




60 ವರ್ಷ ಪೂರೈಸಿದ ಕೇಂದ್ರ ಸಾಹಿತ್ಯ ಅಕಾಡೆಮಿಗೆ ವಜ್ರಮಹೋತ್ಸವದ ಸಂಭ್ರಮಾಚರಣೆ. ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲೇ ಮೊದಲಬಾರಿಗೆ ತನ್ನದಲ್ಲದ ಕ್ಷೇತ್ರವಾದ ನಾಟಕದ ಕುರಿತು ನಾಟಕೋತ್ಸವವನ್ನು ಹಮ್ಮಿಕೊಂಡಿದೆರಂಗಭಾರತಿ ಹೆಸರಲ್ಲಿ ಬೆಂಗಳೂರಿನ ಗುರುನಾನಕ ಭವನದಲ್ಲಿ ಜನವರಿ 16 ರಿಂದ 6 ದಿನಗಳ ರಾಷ್ಟ್ರೀಯ ನಾಟಕೋತ್ಸವ ಹಾಗೂ ವಿಚಾರ ಸಂಕಿರಣ ಆಯೋಜನೆಗೊಳಿಸಲಾಗಿತ್ತು. ಸಾಹಿತ್ಯ ಅಕಾಡೆಮಿಗೂ ನಾಟಕಗಳಿಗೂ ಎತ್ತನಿಂದೆತ್ತ ಸಂಬಂಧ? ನಾಟಕಗಳನ್ನು ಆಯೋಜಿಸಲು ಅದಕ್ಕೆ ಸಂಬಂಧ ಪಟ್ಟ ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಇದೆ, ರಾಷ್ಟ್ರೀಯ ನಾಟಕ ಶಾಲೆ ಇದೆ, ಇನ್ನೂ ಅನೇಕ ರಂಗಭೂಮಿಗೆ ಸಂಬಂಧಿಸಿದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಇಲಾಖೆ ಅಕಾಡೆಮಿಗಳಿವೆ. ಇಂತಹುದರಲ್ಲಿ ಸಾಹಿತ್ಯದ ಉಳಿವು ಹಾಗೂ ಬೆಳವಣಿಗೆಗಾಗಿ ಮಾತ್ರ ಶ್ರಮಿಸಬೇಕಾದ ಸಾಹಿತ್ಯ ಅಕಾಡೆಮಿ ಯಾಕೆ ರಂಗೋತ್ಸವವನ್ನು ಆಯೋಜಿಸಿದೆ ಎನ್ನುವುದು ರಂಗಭೂಮಿಯವರ ಪ್ರಶ್ನೆಯಾಗಿತ್ತು. ಯಾಕೆ ಮಾಡಬಾರದು, ನಾಟಕ ಸಾಹಿತ್ಯವೂ ಸಹ ಸಾಹಿತ್ಯದ ಭಾಗವೇ ಆಗಿದೆ. ಆದ್ದರಿಂದ ಕುರಿತು ನಾಟಕೋತ್ಸವ ಹಾಗೂ ವಿಚಾರಸಂಕಿರಣವನ್ನು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದರಲ್ಲಿ ತಪ್ಪೇನಿದೆ.. ಎಂಬುದು ಡಾ.ಚಂದ್ರಶೇಖರ ಕಂಬಾರ್ ಹಾಗೂ ಡಾ.ಹೆಚ್.ಎಸ್.ಶಿವಪ್ರಕಾಶರ ಉತ್ತರವಾಗಿತ್ತು.

ರಂಗಭಾರತಿ ಎನ್ನುವ ಥಿಯೇಟರ್ ಪ್ರಾಜೆಕ್ಟ್ ಶಿವಪ್ರಕಾಶ್ ಹಾಗೂ ಕಂಬಾರರ ಕನಸಿನ ಕೂಸಾಗಿತ್ತು. ಯಾಕೆಂದರೆ ಕಂಬಾರರು ಹಾಲಿ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರೆ ಶಿವಪ್ರಕಾಶ್ರವರು ಸಲಹಾ ಮಂಡಳಿಯಲ್ಲಿದ್ದಾರೆ. ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಕೇಂದ್ರ ಸರಕಾರ ಸಾಕುಬೇಕಾದಷ್ಟು ಹಣವನ್ನು ಕೊಟ್ಟಿದೆ. ಅದರಲ್ಲೂ 60 ವರ್ಷ ತುಂಬಿದ ನೆನಪಿನ ಆಚರಣೆಗಾಗಿ ವಿಶೇಷ ಅನುದಾನವನ್ನೂ ಸರಕಾರ ಮಂಜೂರು ಮಾಡಿದೆ. ಹಣವನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದೇ ಅಕಾಡೆಮಿಯ ಪದಾಧಿಕಾರಿಗಳಿಗೆ ತಿಳಿಯದಾಗಿದೆ. ಇಂತಹ ಸಂದರ್ಭದಲ್ಲಿ ಕವಿ ಶಿವಪ್ರಕಾಶ್ರವರು ನಾಟಕೋತ್ಸವ ಮಾಡಿದರೆ ಸುಲಭವಾಗಿ ಹೆಚ್ಚು ಹಣ ಕರಗಿಸಬಹುದು ಎಂದು ಸಲಹೆ ಕೊಟ್ಟಿದ್ದಾರೆ. ಇದಕ್ಕೆ ಡಾ.ಕಂಬಾರರು ಒತ್ತಾಸೆಯಾಗಿ ನಿಂತಿದ್ದಾರೆ. ಇಬ್ಬರು ನಾಟಕಕಾರರು ಹೇಳಿದ ಮೇಲೆ ಅಕಾಡೆಮಿಯಲ್ಲಿ ವಿರೋಧಿಸುವ ದ್ವನಿಗಳು ಎಲ್ಲಿವೆ. ಕಂಬಾರರ ಉಸ್ತುವಾರಿಯಲ್ಲಿ ರಂಗಭಾರತಿ ಪ್ರಾಜೆಕ್ಟ್ ಸಿದ್ಧವಾಗಿದೆ. ಒಟ್ಟು ಪ್ರಾಜೆಕ್ಟಿನ ಅಂದಾಜು ಬಜೆಟ್ ಅರ್ಧ ಕೋಟಿ ಎಂಬುದು ನಿರ್ಧರಿಸಲಾಯಿತು. ಕಂಬಾರರ ಆಸೆಯಂತೆ ಬೆಂಗಳೂರಿನಲ್ಲಿಯೇ ರಂಗಭಾರತಿ ನಡೆಸುವುದೆಂದು ಪೈನಲೈಜ್ ಮಾಡಲಾಯಿತು.

ಡಾ.ಚಂದ್ರಶೇಖರ್ ಕಂಬಾರ
ನಾಟಕೋತ್ಸವ ಮಾಡುವುದಕ್ಕೆ ಸಾಹಿತ್ಯ ಅಕಾಡೆಮಿಯೇನೋ ಸಮ್ಮತಿಸಿತು, ಸರಕಾರ ಕೊಟ್ಟ ಹಣವೂ ಬೇಕಾದಷ್ಟಿತ್ತು. ಆದರೆ ನಾಟಕೋತ್ಸವವನ್ನು ಸಂಘಟಿಸುವವರಾರು. ನಾಟಕಕಾರರಾದ ಶಿವಪ್ರಕಾಶರವರಿಗಾಗಿಲೀ ಇಲ್ಲವೇ ಕಂಬಾರರಿಗಾಗಲೀ ಕರ್ನಾಟಕದಲ್ಲಿ ಯಾವುದೇ ರಂಗತಂಡ, ಸಂಘಟನೆ ಎನ್ನುವುದಿಲ್ಲ. ಉತ್ಸವ ಮೂರ್ತಿಗಳಾದ ಇಬ್ಬರಿಗೂ ರಂಗಭೂಮಿಯಲ್ಲಿ ಬಹುತೇಕ ಕಲಾವಿದ ರಂಗಕರ್ಮಿಗಳ ಜೊತೆಗೆ ಒಡನಾಟವಿಲ್ಲ. ರಂಗಕರ್ಮಿಗಳ ಜೊತೆಗೆ ಸೌಹಾರ್ಧ ಸಂಬಂಧವೂ ಇಲ್ಲ. ಮತ್ತದೇ ನಟೋರಿಯಸ್ ರಂಗದಲ್ಲಾಳಿಗಳ ಕೈಗೆ ನಾಟಕೋತ್ಸವದ ಹೊಣೆಗಾರಿಕೆ ಕೊಟ್ಟು ಹೆಸರು ಕೆಡಿಸಿಕೊಳ್ಳುವುದು ಕಂಬಾರರಿಗೆ ಇಷ್ಟವಿರಲಿಲ್ಲ. ಇಂತಹ ಸಂದರ್ಭದಲ್ಲಿಯೇ ಕಂಬಾರರ ಚಿತ್ತ ಹೊರಳಿದ್ದು ಮಲ್ಲಿಕಾರ್ಜುನ ಮಹಾಮನೆ ಎನ್ನುವ ಅರೆಕಾಲಿಕ ರಂಗಸಂಘಟಕನ ಮೇಲೆ. ರಂಗಬಂಢಾರ ಎನ್ನುವ ನಾಟಕೋತ್ಸವವನ್ನು ಮಾಡಿ ಕಂಬಾರರನ್ನು ಕರೆಸಿ ವೇದಿಕೆಯಲ್ಲಿ ಮೆರೆಸಿದ ಮಹಾಮನೆಗೆ  ನಾಟಕೋತ್ಸವದ ಜವಾಬ್ದಾರಿಯನ್ನು ವಹಿಸಿ ಕೋಆರ್ಡಿನೇಟರ್ ಆಗಿ ನಿಯಮಿಸಲಾಯಿತು. ಮಹಾಮನೆಯ ಹಿಂದಿನ ಇತಿಹಾಸದ ಬಗ್ಗೆ ಕೆಲವರು ಕಂಬಾರರನ್ನು ಎಚ್ಚರಿಸಿದರು. ಆಗ ಎಚ್ಚೆತ್ತುಕೊಂಡ ಕಂಬಾರರು ನಾಟಕೋತ್ಸವದ ಮೇಲುಸ್ತುವಾರಿಯ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು  ತಮ್ಮ ಪುತ್ರ ರಾಜು ಕಂಬಾರರಿಗೆ ವಹಿಸಿದರು. ಜೊತೆಗೆ ಗುಬ್ಬಿ ಪ್ರಕಾಶ್ ಸಹ ಜೊತೆಗೂಡಿದರು.

ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡಿ ಅನುಭವವಿದ್ದ ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾಂತ್ಯ ಕಾರ್ಯದರ್ಶಿಯಾದ ಮಹಾಲಿಂಗೇಶ್ವರರಿಗೆ ನಾಟಕೋತ್ಸವದ ಆಯೋಜನೆಯ ಬಗ್ಗೆ ಏನೂ ಗೊತ್ತಿರಲಿಲ್ಲ. ಲೈಟ್ಸ್,ಸೌಂಡ್,ಸೆಟ್ಗಳನ್ನು ಎಲ್ಲಿಂದ ಹೊಂದಿಸಿಕೊಳ್ಳಬೇಕು ಎನ್ನುವುದರ ಅರಿವೂ ಇರಲಿಲ್ಲ. ಇರಬೇಕಾಗಿಯೂ ಇಲ್ಲ. ಆದರೆ ಮೇಲಿನಿಂದ ಸುಗ್ರೀವಾಜ್ಞೆಯಾಗಿದ್ದರಿಂದ ಸಾಹಿತ್ಯ ಅಕಾಡೆಮಿಯ ಬೆಂಗಳೂರು ವಿಭಾಗದವರಿಗೆ ನಾಟಕೋತ್ಸವ ಮಾಡುವುದು ಅನಿವಾರ್ಯವಾಯಿತು. ಮೊಟ್ಟ ಮೊದಲನೆಯದಾಗಿ ನಾಟಕೋತ್ಸವವನ್ನು ಎಲ್ಲಿ ಮಾಡಬೇಕೆಂಬುದೇ ಸಮಸ್ಯೆಯಾಯಿತು. ರವೀಂದ್ರ ಕಲಾಕ್ಷೇತ್ರ ರಿಪೇರಿಗೊಳಗಾಗಿ ಬಾಗಿಲೆಳೆದುಕೊಂಡಿದೆ. ಸಂಸ ಬಯಲು ರಂಗಮಂದಿರ ಈಗಾಗಲೇ ಬೇರೆಯವರಿಗೆ ಬುಕ್ ಆಗಿದೆ. ರಂಗಶಂಕರ ಇಂತಹ ಸರಕಾರಿ ಪ್ರಾಜೆಕ್ಟಗಳಿಗೆ ದೊರಕುವುದಿಲ್ಲ. ಕಲಾಗ್ರಾಮ ದೂರದಲ್ಲಿದೆ. ರಂಗೋತ್ಸವಕ್ಕೆ ರಂಗಮಂದಿರಗಳೇ ಇಲ್ಲವಾದಾಗ ಕೊನೆಗೆ ಉಳಿದದ್ದು ವಸಂತನಗರದ ಗುರುನಾನಕ ಭವನ. ಇತ್ತೀಚೆಗೆ ಎನ್ಎಸ್ಡಿ ನಾಟಕೋತ್ಸವ ಇಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಕೊನೆಗೆ ಗುರುನಾನಕ ಭವನವನ್ನೇ ರಂಗೋತ್ಸವಕ್ಕೆ ಆಯ್ಕೆಮಾಡಿಕೊಳ್ಳುವುದು ಅನಿವಾರ್ಯವಾಯಿತು. ಹಾಗೂ ಹೀಗೂ ಜನವರಿ 16ರಂದು ರಂಗಭಾರತಿ ಆರಂಭವಾಯಿತು.

ಮಲ್ಲಿಕಾರ್ಜುನ ಮಹಾಮನೆ
ಬೇಕಾದಷ್ಟು ಹಣ ಇದ್ದರೆ, ಜೊತೆಗೊಂದಿಷ್ಟು ಅನುಭವವಿದ್ದರೆ ಯಾರು ಬೇಕಾದರೂ ನಾಟಕೋತ್ಸವವನ್ನು ಮಾಡಬಹುದಾಗಿದೆ. ಆದರೆ.. ರಂಗಮಂದಿರದತ್ತ ಪ್ರೇಕ್ಷಕರನ್ನು ಕರೆತರುವುದು ಹೇಗೆ. ಗುರುನಾನಕ ಭವನ ಅತ್ಯಂತ ಜನನಿಬಿಡವಾದ ಕನ್ನಿಂಗ್ಹ್ಯಾಮ್ ರಸ್ತೆಯ ಬದಿಯಲ್ಲಿದೆ. ಅಲ್ಲಿಗೆ ಹೋಗಬೇಕೆಂದರೆ ಟ್ರಾಫಿಕ್ ಎನ್ನುವ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಲೇ ಹೋಗಬೇಕು. ಇಲ್ಲಿಗೆ ನಾಟಕ ನೊಡಲೆಂದೇ ಬರುವವರು ವಿರಳ. ’ಪತ್ರಿಕೆಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಜಾಹೀರಾತು ಕೊಡಲಾಗಿದೆ. ಸಾವಿರಾರು ಈಮೇಲ್ಗಳನ್ನು ಮಾಡಲಾಗಿದೆ. ಎಲ್ಲಿದ್ದರೂ ಜನ ಬಂದು ನಾಟಕ ನೋಡುತ್ತಾರೆ’  ಎನ್ನುವುದು ಕಂಬಾರರ ಹಾಗೂ ಅಕಾಡೆಮಿಯವರ ಧೋರಣೆಯಾಗಿತ್ತು. ಆದರೆ ಮೊದಲನೆಯ ದಿನವೇ ನಾಟಕಮಂದಿರ ಅರ್ಧವೂ ತುಂಬದಾದಾಗ ಎಲ್ಲರಿಗೂ ಆತಂಕ ಶುರುವಾಯಿತು. ಎರಡನೇ ದಿನ ಕಾಲು ಭಾಗವೂ ರಂಗಮಂದಿರ ತುಂಬಿರಲಿಲ್ಲ. ನಾಟಕಗಳನ್ನು ಪುಕ್ಕಟೆ ತೋರಿಸುತ್ತೇವೆ ಎಂದರೂ ರಂಗಾಸಕ್ತರು ನಾಟಕೋತ್ಸದಿಂದ ಮುಖ ತಿರುಗಿಸಿದರೆ, ಬೆಂಗಳೂರಿನ ರಂಗಕರ್ಮಿಗಳಂತೂ ನಮಗೂ ನಾಟಕೋತ್ಸವಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ನಿರ್ಲಕ್ಷಿಸಿ ದೂರವೇ ಉಳಿದರು. ಮಹಾಮನೆ ಏನೇನೋ ಸಾಹಸ ಮಾಡಿ, ಹಲವಾರು ಜನರಿಗೆ ಪೋನ್ ಮಾಡಿದರೂ ಮಹಾಮನೆ ಬಗ್ಗೆ ಗೊತ್ತಿದ್ದ ಜನ ನಾಟಕಕ್ಕೆ ಬರಲೇ ಇಲ್ಲ. ನಾಟಕೋತ್ಸವದಾದ್ಯಂತ ಪ್ರೇಕ್ಷಕರ ಕೊರತೆ ಕಾಡಿತು. ಕನ್ನಡ ರಂಗಭೂಮಿಯಲ್ಲಿ ತೊಡಗಿಕೊಂಡವರು ಕೈಬೆರೆಳೆಣಿಕೆಯಷ್ಟಿದ್ದರೆ, ಇನ್ನೊಂದಿಷ್ಟು ಜನ ಸಾಹಿತ್ಯ ಲೋಕದವರಿದ್ದರು. ಪ್ರೇಕ್ಷಕರ ಅಭಾವದಿಂದಾಗಿ ನಾಟಕೋತ್ಸವ ಸಪ್ಪೆ ಎನಿಸಿತು. ಬೇರೆಲ್ಲಾ ಕಾರಣಗಳಿಂದಾಗಿ ಇಡೀ ರಂಗೋತ್ಸವ ಪ್ಲಾಪ್ ಶೋ ಎನ್ನಿಸಿತು. ನೆಲದಲ್ಲಿ ಬೇರು ಬಿಡದೇ ಆಕಾಶದಲ್ಲಿ ಟೊಂಗೆ ಚಾಚಲು ಹೋದ ಆಧುನಿಕ ತುಘಲಕ್ ಡಾ.ಕಂಬಾರರ ಕನಸು ನುಚ್ಚುನೂರಾಯಿತು.

ಕೇವಲ 15 ದಿನಗಳ ಹಿಂದೆ ಇದೇ ಗುರುನಾನಕ ಭವನದಲ್ಲಿ ಎನ್ಎಸ್ಡಿ ಆಯೋಜಿಸಿದ ನಾಟಕೋತ್ಸವವನ್ನು ಉದ್ಘಾಟಿಸುತ್ತಾ ಇದೆ ಡಾ.ಕಂಬಾರರು ಸಿ.ಬಸವಲಿಂಗಯ್ಯನವರಿಗೆ ಎನ್.ಎಸ್.ಡಿ ಬೆಂಗಳೂರು ಸ್ಥಳೀಯ ರಂಗತಂಡ ಹಾಗೂ ಸಂಸ್ಥೆಗಳೊಂದಿಗೆ ಸಾಮರಸ್ಯ ಹೊಂದಿ ಅವರನ್ನು ತೊಡಗಿಸಿಕೊಂಡು ಎನ್ಎಸ್ಡಿ ನಡೆಸಬೇಕು ಎಂದು ಕಿವಿಮಾತು ಹೇಳಿದ್ದರು. ಆದರೆ ಅವರು ಹೇಳುವುದೊಂದು ಮಾಡುವುದಿನ್ನೊಂದು. ಈಗ ತಾವೇ ಸಾರಥ್ಯ ವಹಿಸಿಕೊಂಡ ರಂಗಭಾರತಿ ನಾಟಕೋತ್ಸವಕ್ಕೆ ಬೆಂಗಳೂರಿನ ರಂಗತಂಡ ಹಾಗೂ ರಂಗಸಂಸ್ಥೆಗಳೊಂದಿಗೆ ಯಾಕೆ ಕಂಬಾರರು ಸಾಮರಸ್ಯ ಸಾಧಿಸಲಿಲ್ಲ?, ಯಾಕೆ ಇಡೀ ಬೆಂಗಳೂರಿನ ರಂಗಕರ್ಮಿಗಳು ನಾಟಕಕ್ಕೆ ಅಘೋಷಿತ ನಿಷೇಧ ಹೇರಿದರು?. ಯಾಕೆಂದರೆ.... ನಾಟಕೋತ್ಸವ ಆಯೋಜಿಸುವ ಮುಂಚೆ ಯಾವುದೇ ರಂಗಸಂಘಟನೆಗಳ ಜೊತೆ ಇಲ್ಲವೇ ರಂಗಕರ್ಮಿಗಳ ಜೊತೆಗೆ ಕಂಬಾರರು ಸಮಾಲೋಚನಾ ಸಭೆ ನಡೆಸಲಿಲ್ಲ, ಔಪಚಾರಿಕವಾಗಿಯಾದರೂ ಕರೆದು ಸಲಹೆ ಸೂಚನೆಗಳನ್ನು ಕೇಳಲಿಲ್ಲ. ಹೀಗಾಗಿ ಬಹುತೇಕ ರಂಗಕರ್ಮಿಗಳು ಗುರುನಾನಕ ಭವನದಿಂದ ದೂರವೇ ಉಳಿದರು. ಜೊತೆಗೆ ಈಗಾಗಲೇ ಎಸ್ಟಾಬ್ಲಿಷ್ ಆಗಿರುವ ರಂಗಗುತ್ತಿಗೆದಾರರಿಗೆ ಇಡೀ ರಂಗೋತ್ಸವವನ್ನು ತಮಗೆ ಔಟ್ಸೋರ್ಸಿಂಗ್ ಮಾಡಲಿಲ್ಲವಲ್ಲ ಎನ್ನುವ ಅಸಹನೆಯಿಂದ  ಸಾಂಸ್ಕೃತಿಕ ದಲ್ಲಾಳಿಗಳು ನಾಟಕೋತ್ಸವದ ಹತ್ತಿರ ಸುಳಿಯಲಿಲ್ಲ. ಲೋಕಲ್ ರಂಗಕರ್ಮಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದ್ದರಿಂದಾಗಿ ಇಡೀ ನಾಟಕೋತ್ಸವ ತೋಪಾಯಿತು. ಯಾರಿಗಾಗಿ ನಾಟಕವನ್ನು ಮಾಡಲಾಯಿತೋ ಅಂತಹ ಬಹುತೇಕ ರಂಗಾಸಕ್ತರ ಅನುಪಸ್ಥಿತಿಯಲ್ಲಿ ನಾಟಕಗಳನ್ನು ಪ್ರದರ್ಶಿಸಲಾಯಿತು.


ಡಾ.ಹೆಚ್.ಎಸ್.ಶಿವಪ್ರಕಾಶ
ರಂಗಕರ್ಮಿಗಳು ದೂರಾದರೇನಂತೆ ರಂಗಾಸಕ್ತರಾದರೂ ನಾಟಕ ನೋಡಲು ಬರಬೇಕಾಗಿತ್ತು. ಉತ್ತಮ ನಾಟಕಗಳನ್ನು ತೋರಿಸಿದರೆ ಎಲ್ಲಿದ್ದರೂ ರಂಗಾಸಕ್ತರು ಹುಡುಕಿಕೊಂಡು ಬಂದು ನಾಟಕ ನೋಡುತ್ತಾರೆ ಎನ್ನುವುದಕ್ಕೆ ಎರಡು ವಾರಗಳ ಹಿಂದೆ ಇದೇ ಗುರುನಾನಕ ಭವನದಲ್ಲಿ ಆಯೋಜನೆಗೊಂಡ ಎನ್ಎಸ್ಡಿ ನಾಟಕೋತ್ಸವ ಸಾಕ್ಷಿಯಾಗಿತ್ತು. ಹತ್ತು ದಿನಗಳ ಕಾಲ ನಡೆದ ರಂಗೋತ್ಸವದಾದ್ಯಂತ ರಂಗಮಂದಿರ ತುಂಬಿ ತುಳುಕಿತ್ತು. ಮಾಯಾಬಜಾರ್ ನಾಟಕದ ದಿನವಂತೂ ಜನ ಸಂಜೆ 5 ಗಂಟೆಗೆ ಬಂದು ಸರದಿಯಲ್ಲಿ ನಿಂತಿದ್ದರು. ಹಲವರಿಗೆ ಕೂಡಲು ಖುರ್ಚಿ ಸಿಗದೆ ಜಾಗ ಸಿಕ್ಕಲ್ಲೆಲ್ಲಾ ಕುಂತು ನಿಂತು ನಾಟಕ ನೋಡಿದರು. ಆದರೆ ಕೇವಲ ಎರಡೇ ವಾರಗಳ ಅಂತರದಲ್ಲಿ ನಡೆದರಂಗಭಾರತಿನಾಟಕೋತ್ಸವ ಯಾಕೆ ಬಣಗುಟ್ಟಿತು. ಇದಕ್ಕೆ ಆಯೋಜಕರ ನಿರ್ಲಕ್ಷ ಒಂದಾದರೆ, ಇನ್ನೊಂದು ನಾಟಕಗಳ ಆಯ್ಕೆಯಲ್ಲಿ ಆದ ಅಲಕ್ಷತೆ ಕಾರಣವಾಗಿದೆ. ಯಾವುಯಾವುದೋ ಮುಲಾಜಿಗೆ ಒಳಗಾಗಿ ಕೆಟ್ಟ ನಾಟಕಗಳನ್ನು ಆಯ್ಕೆ ಮಾಡಿ ತಂದು ದಯವಿಟ್ಟು ಬಂದು ನೋಡಿ ಎಂದರೆ ನೋಡುವವರಾದರೂ ಯಾರು?

ತಮಾಷ್ ನ ಹುವಾ ನಾಟಕದ ಪೊಟೋ
ಮೊದಲ ದಿನ ಪ್ರದರ್ಶನಗೊಂಡ ನಾಟಕ ಹಿಂದಿಯತಮಾಸ ನಾ ಹುವಾನಾಟಕವನ್ನು ಯಾವ ಆಯಾಮದಲ್ಲೂ ನಾಟಕ ಎನ್ನಲು ಸಾಧ್ಯವೇ ಇಲ್ಲ. ರಂಗವೇದಿಕೆಯ ಮೇಲೆ ಯಾಂತ್ರಿಕರಣದ ಬಗ್ಗೆ ಚರ್ಚೆ ಮಾಡಿ ಇದೇ ನಾಟಕ ಎಂದು ತೋರಿಸಲಾಯಿತು. ಇದರ ಪರಿಣಾಮವಾಗಿ ಎರಡನೇ ದಿನದ ನಾಟಕಕ್ಕೆ ಪ್ರೇಕ್ಷಕರು ಇನ್ನೂ ಕಡಿಮೆಯಾದರು. ಎರಡನೇ ದಿನ ಪ್ರದರ್ಶನಗೊಂಡ ರಾಜಸ್ತಾನಿ ನಾಟಕ  ಎಪ್ಪತ್ತರ ದಶಕದ ಹಳೆಯ ಕಾನ್ಸೆಪ್ಟನ್ನು ಹೊಂದಿದ್ದು ಯಮಲೋಕದ ಅವಾಸ್ತವಿಕ ಕಥೆ ಹೊಂದಿತ್ತು. ಜನರಿಗೆ ಬೇಸರವನ್ನು ತರಿಸಿತು. ಮೂರನೆ ದಿನ ಕನ್ನಡದ ಮಾರನಾಯಕ ನಾಟಕವನ್ನು ಜೈಲಿನ ಖೈದಿಗಳು ಆಡಿದ್ದರಿಂದ ಹಾಗೂ ಭಾನುವಾರವಾಗಿದ್ದರಿಂದ ರಂಗಮಂದಿರ ಅರ್ಧದಷ್ಟಾದರೂ ತುಂಬಿತ್ತು. ನಾಲ್ಕನೇ ದಿನ ವಾಮನ ಕೇಂದ್ರೆರವರ ಮೋಹೆ ಪಿಯಾ  ಎನ್ನುವ ಅತ್ಯುತ್ತಮ ನಾಟಕ ಪ್ರದರ್ಶನಗೊಂಡಿತಾದರೂ ರಂಗಮಂದಿರ ಬಣಗುಟ್ಟುತ್ತಿತ್ತು. ಕಾಲುಭಾಗ ಮಾತ್ರ ತುಂಬಿತ್ತು ಮುಕ್ಕಾಲು ಭಾಗ ಖಾಲಿ ಖಾಲಿಯಾಗಿತ್ತುಕೊನೆಯ ಎರಡು ದಿನಗಳ ಹಿಂದಿ ಭಾಷೆಯ ಕರಿಮಾಯಿ ಹಾಗೂ ಆಸ್ಸಾಮಿ ಭಾಷೆಯ ಜಂಗ್ತರ್ ಪಂಗ್ತರ್ ನಾಟಕಗಳಿಗೆ ಹೆಚ್ಚಾಗಿ ಖಾಲಿ ಖುರ್ಚಿಗಳೇ ಸಾಕ್ಷಿಯಾಗಿದ್ದವರು.

ಮಾರನಾಯಕ ನಾಟಕದ ಸ್ಟಿಲ್
ನಾಟಕದ ಆಯ್ಕೆಯಲ್ಲಿ ವಿಫಲವಾಗಿದ್ದಕ್ಕೆ ಕಂಬಾರರು ಹಾಗೂ ಶಿವಪ್ರಕಾಶರ ವ್ಯಯಕ್ತಿಕ ಸ್ವಾರ್ಥ ಮತ್ತು ಎನ್ಎಸ್ಡಿ ಮೇಲಿನ ಮೋಹವೇ ಕಾರಣ. ಪ್ರದರ್ಶನಗೊಂಡ ಆರು ನಾಟಕಗಳಲ್ಲಿ ಒಂದು ಶಿವಪ್ರಕಾಶರವರು ಬರೆದ ಮಾರನಾಯಕ ಹಾಗೂ ಕಂಬಾರರ ಕಾದಂಬರಿ ಆಧಾರಿತ ಕರಿಮಾಯಿ ನಾಟಕಗಳಿವೆ. ಇನ್ನೆರಡು ಎನ್ಎಸ್ಡಿ ಹಾಲಿ ನಿರ್ದೇಶಕರಾದ ವಾಮನ ಕೇಂದ್ರೆ ನಿರ್ದೇಶನದ ನಾಟಕವೊಂದಾದರೆ ಇನ್ನೊಂದು ಎನ್ಎಸ್ಡಿ ಭಾನು ಭಾರತಿ ನಿರ್ದೇಶನದ ನಾಟಕ. ಮತ್ತೊಂದುಜಮ್ ಲೀಲಾನಾಟಕದ ನಿರ್ದೇಶಕ ಅರ್ಜುನ್ ಚರಣ್ ಕಂಬಾರರ ಆತ್ಮೀಯರಾದರೆ, ’ಜಂಗ್ತರ್ ಪಂಗ್ತರ್ಎನ್ನುವ ಆಸ್ಸಾಂಮಿ ನಾಟಕವನ್ನು ಆಯ್ಕೆ ಮಾಡಿದ್ದು ಶಿವಪ್ರಕಾಶ್ರವರು. ಹೀಗಾಗಿ ತಾವೇ ರೂಪಿಸಿದ, ಸಾಹಿತ್ಯ ಅಕಾಡೆಮಿ ಪ್ರಾಯೋಜಿಸಿದ ನಾಟಕೋತ್ಸವದಲ್ಲಿ ತಾವು ರಚಿಸಿದ ನಾಟಕ ಇರುವಂತೆ ನೋಡಿಕೊಳ್ಳುವ ಜೊತೆಗೆ ತಮಗೆ ಬೇಕಾದವರ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸ್ವಾರ್ಥಪರ, ಸ್ವಜನಪಕ್ಷಪಾತವಾಗಿದೆ. ನಾಟಕದ ಕ್ವಾಲಿಟಿ ನೋಡಿ ಆಯ್ಕೆ ಮಾಡುವ ಬದಲಾಗಿ ಮುಲಾಜಿಗೆ ಬಿದ್ದು ಸಾಧಾರಣ ನಾಟಕಗಳನ್ನು (ಮೋಹೆ ಪಿಯೆ ನಾಟಕ ಇದಕ್ಕೆ ಅಪವಾದ) ಆಯ್ಕೆ ಮಾಡಿ ಅದಕ್ಕಾಗಿ ಲಕ್ಷಾಂತರ ಹಣ ಕೊಟ್ಟು ಕರೆತಂದು ಪ್ರದರ್ಶಿಸಿದ್ದಕ್ಕೆ ಇಡೀ ನಾಟಕೋತ್ಸವ ವಿಫಲವಾಯಿತು. ಜನರ ತೆರಿಗೆ ಹಣ ಪೋಲಾಯಿತು.
     

ಯಾರಿಗೋಸ್ಕರ ನಾಟಕೋತ್ಸವ ಮಾಡಲಾಗಿತ್ತೋ ಅವರೇ ಬರದೇ ನಾಟಕೋತ್ಸವ ವಿಫಲವಾಯಿತು. ಕಾಲು ಕೋಟಿ ಜನತೆಯ ಹಣ ನೀರಲ್ಲಿ ಹುಣಸೇ ಹಣ್ಣು ತೊಳೆದಂತಾಯಿತು. ರಂಗೋತ್ಸವದಲ್ಲಿ  ಆಯೋಜಿಸಿದ ಎರಡು ದಿನಗಳ ಕಾಲದ ವಿಚಾರಸಂಕಿರಣದ್ದು ಇನ್ನೊಂದು ವ್ಯಥೆ. ಜನವರಿ 19 ಹಾಗೂ 20 ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಸಮಕಾಲೀನ ಭಾರತೀಯ ನಾಟಕ ಕುರಿತು ವಿಚಾರ ಸಂಕಿರಣವನ್ನು ರಂಗಭಾರತಿ ಭಾಗವಾಗಿ ಏರ್ಪಡಿಸಲಾಗಿತ್ತು. ಎರಡು ದಿನಗಳ ಒಟ್ಟು ಆರು ಗೋಷ್ಠಿಗಳಿಗೆ ಅಮ್ಮಮ್ಮಾ ಅಂದ್ರೆ ಎಷ್ಟು ಹಣ ಖರ್ಚುಮಾಡಬಹುದು? ನೀವೆಷ್ಟೇ ಊಹಿಸಿದರೂ ನಿಮ್ಮ ಲೆಕ್ಕ ತಪ್ಪಾಗುತ್ತದೆ. ಯಾಕೆಂದರೆ ಎರಡು ದಿನದ ಮಾತುಕತೆಗೆ ಖರ್ಚಾದ ಒಟ್ಟು ಮೊತ್ತ ಹದಿನೈದು ಲಕ್ಷ ರೂಪಾಯಿಗಳು. ತೌಡು ಕುಟ್ಟುವ ಕೆಲಸಕ್ಕೆ ಖರ್ಚು ಮಾಡಿದ ಹಣದಲ್ಲಿ ಇನ್ನೂ ಐದಾರು ನಾಟಕೋತ್ಸವಗಳನ್ನು ಕನ್ನಡದಲ್ಲಿ ಏರ್ಪಡಿಸಬಹುದಾಗಿತ್ತು. ದತ್ತಿ ನಿಧಿಯನ್ನಾಗಿರಿಸಿದ್ದರೆ ತಿಂಗಳಿಗೆ ಒಂದು ನಾಟಕವನ್ನು ನಿರ್ಮಿಸಬಹುದಾಗಿತ್ತು. ಇಷ್ಟಕ್ಕೂ ವಿಚಾರಸಂಕಿರಣದಲ್ಲಿ ನಡೆದಿದ್ದಾದರೂ ಏನು? ಅದರಿಂದ ಕನ್ನಡ ರಂಗಭೂಮಿಯವರಿಗೆ ಆದ ಪ್ರಯೋಜನವಾದರೂ ಏನು? ಎಂದು ಪ್ರಶ್ನೆ ಕೇಳದಿರುವುದೇ ಒಳಿತು.

ಯಾಕೆಂದರೆ ಎಲ್ಲಾ ಗೋಷ್ಠಿಗಳು ನಡೆದದ್ದು ಇಂಗ್ಲೀಷ್ ಇಲ್ಲವೇ ಹಿಂದಿ ಭಾಷೆಯಲ್ಲಿ. ಅವುಗಳನ್ನೂ ಸಹ ಅರ್ಥೈಸಿಕೊಳ್ಳುವುದು ಅದೆಷ್ಟು ಕ್ಲಿಷ್ಟಕರವಾಗಿತ್ತೆಂದರೆ ವಿಚಾರಗೋಷ್ಟಿಯಲ್ಲಿ ಪ್ರಬಂಧ ಮಂಡನೆ ಮಾಡಿದವರ ಇಂಗ್ಲಿಷ್ ಉಚ್ಚಾರಣೆ ಅವರವರ ಭಾಷಾ ಛಾಯೆಯಲ್ಲಿತ್ತು. ಕಷ್ಟ ಪಟ್ಟು ಒಂದಿಷ್ಟಾದರೂ ತಿಳಿದುಕೊಳ್ಳೋಣ ಎಂದರೆ ಕಳಪೆ ಗುಣಮಟ್ಟದ ಸೌಂಡ್ ಸಿಸ್ಟಂ ಅದಕ್ಕೂ ಅಡತಡೆಯನ್ನೊಡ್ಡಿತು. ಹದಿನೈದು ಲಕ್ಷ ಬೆಲೆಬಾಳುವ ಮಾತುಗಳನ್ನು ಕೇಳಿಸಿಕೊಂಡು ತಿಳಿದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಸಧ್ಯ ಉಮಾಶ್ರೀಯವರಾದರೂ ಕನ್ನಡದಲ್ಲಿ ಮಾತಾಡಿದರಲ್ಲ ಎಂದು ಸಂತಸ ಪಡಬೇಕೆಂದರೆ ಅವರು ಕೊಟ್ಟ ವಿಷಯ ಬಿಟ್ಟು ತಮ್ಮ ಬಾಲ್ಯದ ವ್ಯಥೆಗಳನ್ನು ಸುದೀರ್ಘವಾಗಿ ಮಂಡಿಸಿದಾಗ ಸಮಯಾಭಾವದಿಂದ ನಿಲ್ಲಿಸಲು ಸೂಚಿಸಲಾಯಿತು. ಇದರಿಂದ ಅಪ್ಸೆಟ್ ಆದ ಉಮಾಶ್ರೀ ಕಥಾಕಾಕ್ಷೇಪ ನಿಲ್ಲಿಸಿ ಮುಂದಿನ ಮೂರು ನಿಮಿಷದಲ್ಲಿ ವೇದಿಕೆಯಿಂದಲೇ ನಿರ್ಗಮಿಸಿದರು. ಇಷ್ಟಕ್ಕೂ ಹದಿನೈದು ಲಕ್ಷ ಬಾಬತ್ತಿನ ಗೋಷ್ಠಿಗಳು ನಡೆದದ್ದು ಗುರುನಾನಕ ಭವನದ ಹಿಂದಿರುವ ಪಾಳುಬಿದ್ದಿದ್ದ ಗೊಡೌನಿನಂತಹ ಶೆಡ್ನಲ್ಲಿ. ಸರಿಯಾದ ಗಾಳಿ ಬೆಳಕು ಬಾರದ, ಕನಿಷ್ಟ ಪ್ಯಾನ್ ಸಹ ಇಲ್ಲದ ಸ್ಥಳದಲ್ಲಿ ವಿಚಾರ ಮಂಡಿಸುವುದು ಹಾಗೂ ಕೇಳುವುದು ವಿವಿಐಪಿ ಪ್ರಬಂಧ ಮಂಡಕರಿಗೆ ಹಾಗೂ ವೀಕ್ಷಕರಿಗೆ ಮುಜುಗರದ ಸಂಗತಿಯಾಯಿತು. ಅನಗತ್ಯ ಒನ್ ವೇ ಮಾದರಿಯ ವಿಚಾರ ಸಂಕಿರಣದ ಬದಲಾಗಿ ಎಲ್ಲಾ ವಿಚಾರ ಸಂಕಿರಣದ ಪ್ರಬಂಧ ಮಂಡನೆಯ ಲೇಖನಗಳನ್ನು ಬರೆಸಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಭಾಷಾಂತರಿಸಿ ಪುಸ್ತಕವಾಗಿ ಮುದ್ರಿಸಿ ಜನರಿಗೆ ತಲುಪಿಸಿದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ಹಾಗೂ ಬೇಕಾದಷ್ಟು ಹಣವೂ ಉಳಿಯುತ್ತಿತ್ತು. ಆದರೆ ಹಣ ಖರ್ಚು ಮಾಡುವ ಉದ್ದೇಶದಿಂದಲೇ ಪ್ರಾಜೆಕ್ಟ್ ಮಾಡಿದ್ದರಿಂದ ಉಳಿತಾಯದ ಮಾತು ವ್ಯರ್ಥವೆನಿಸುತ್ತದೆ.

 ’ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಿಂದ ಪ್ರಬಂಧಕಾರರನ್ನು ವಿಮಾನದಲ್ಲಿ ಕರೆತಂದು ತ್ರೀ ಸ್ಟಾರ್ ಹೋಟೇಲ್ಗಳಲ್ಲಿ ಅದ್ದೂರಿ ಆತಿಥ್ಯ ನೀಡಿ ಅರ್ಥವಾಗದ ಭಾಷೆಯಲ್ಲಿ ಕ್ಲಿಷ್ಟಕರವಾಗಿ ಪ್ರಬಂಧ ಮಂಡನೆ ಮಾಡುವ ಅಗತ್ಯವಾದರೂ ಏನಿತ್ತುಎನ್ನುವುದು ಕನ್ನಡ ರಂಗಾಸಕ್ತರ ಪ್ರಶ್ನೆಯಾಗಿದೆ. ಇನ್ನೊಂದು ಗಮನಿಸಬೇಕಾದ ಅಂಶ ಏನೆಂದರೆ ಪ್ರಬಂಧಕಾರರಲ್ಲಿ ಬಹುತೇಕರು ದೆಹಲಿಯ ರಾಷ್ಟ್ರೀಯ ಶಾಲೆಯಿಂದ ಬಂದವರೇ ಆಗಿದ್ದರು. ಅಕಾಡೆಮಿಕ್ ವಲಯದವರಿಗೆ ಸಿಂಹಪಾಲು ಕೊಟ್ಟು ಕನ್ನಡದ ಪ್ರತಿಭಾವಂತ ರಂಗಕರ್ಮಿಗಳನ್ನು ನಿರ್ಲಕ್ಷಿಸಿದ್ದು ನಿಜಕ್ಕೂ ಅಕ್ಷಮ್ಯ. ಹೆಗ್ಗೋಡಿನ ಕೆ.ವಿ.ಅಕ್ಷರ ರವರನ್ನು ಹೊರತು ಪಡಿಸಿದರೆ ಕನ್ನಡಿಗರಿಗೆ ವಿಚಾರ ಸಂಕಿರಣದಲ್ಲಿ ಪ್ರಾತಿನಿದ್ಯತೆ ಇರಲೇ ಇಲ್ಲ. ಅಕ್ಷರರವರೂ ಸಹ ಎನ್ಎಸ್ಡಿ ಎನ್ನುವ ಮಾನದಂಡದಲ್ಲಿ ಆಯ್ಕೆಯಾದವರು. ಹೀಗಾಗಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ವೀಕ್ಷಕರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಕನ್ನಡ ರಂಗಭೂಮಿಯವರಿದ್ದರು. ಬಾಕಿಯವರೆಲ್ಲಾ ಕನ್ನಡೇತರ ಸಾಹಿತ್ಯವಲಯದವರಾಗಿದ್ದರು. ಹೀಗಾಗಿ ವಿಚಾರ ಸಂಕರಣ ಕನ್ನಡ ರಂಗಭೂಮಿಯವರನ್ನು ದೂರವಿಟ್ಟು ಕನ್ನಡ ನೆಲದಲ್ಲಿ ನಡೆದದ್ದೊಂದು ವಿಪರ್ಯಾಸವಾಗಿದೆ. ಹೆಸರಾಂತ ನಟ ನಾಸಿರುದ್ದೀನ ಷಾ ವಿಚಾರಸಂಕಿರಣಕ್ಕೆ ಬರುತ್ತಾರೆಂದು ಆಹ್ವಾನ ಪತ್ರಿಕೆಯಲ್ಲಿ ಅಚ್ಚುಹಾಕಿಸಲಾಗಿತ್ತಾದರೂ ಅವರು ಬರಲೆ ಇಲ್ಲ. ಆಹ್ವಾನ ಪತ್ರಿಕೆಯಲ್ಲಿ ಅಚ್ಚಾಗಿದ್ದ ಇನ್ನೂ ಕೆಲವರು ನಾಪತ್ತೆಯಾಗಿದ್ದರು.


ರದ್ದಾದ ಸಂವಾದ ಗೋಷ್ಠಿ : ಕನ್ನಡಿಗರಿಗೆ ಪ್ರಾತಿನಿದ್ಯತೆ ಇರದಿದ್ದರಿಂದ ಹಾಗೂ ಕನ್ನಡ ರಂಗಭೂಮಿಗೆ ನಾಟಕೋತ್ಸವ ಸ್ಪಂದಿಸದೇ ಇದ್ದದ್ದರಿಂದ ಕನ್ನಡ ರಂಗಕರ್ಮಿಗಳು ವಿಚಾರ ಸಂಕಿರಣವನ್ನು ಸಾರಾಸಾಗಟಾಗಿ ತಿರಸ್ಕರಿಸಿದರು. ಇದರಿಂದಾಗಿ ಒಂದು ಗೋಷ್ಠಿಯನ್ನೇ ರದ್ದು ಮಾಡಲಾಯಿತು. ಭಾರತೀಯ ನಾಟಕ; ನಿನ್ನೆ ಇಂದು ಹಾಗೂ ನಾಳೆ ಎನ್ನುವ ಸಂವಾದ ಗೋಷ್ಠಿಯನ್ನು ವಿಚಾರ ಸಂಕಿರಣದ ಭಾಗವಾಗಿ ಏರ್ಪಡಿಸಲಾಗಿತ್ತು. ಅದಕ್ಕೆ ವಿಶೇಷ ಆಹ್ವಾನಿತರನ್ನಾಗಿ ಕೆ.ಮರುಳಸಿದ್ದಪ್ಪ, ಸಿ.ಎನ್.ರಾಮಚಂದ್ರನ್, ಜಿ.ಕೆ.ಗೋವಿಂದರಾವ್, ಎಚ್.ಎಸ್.ವೆಂಕಟೇಶಮೂರ್ತಿ, ಕಪ್ಪಣ್ಣ, ಆರುಂಧತಿನಾಗ್, ನಾಗರಾಜಮೂರ್ತಿ, ಪ್ರಕಾಶ್ ಬೆಳವಾಡಿ, ಕೆ.ವೈ.ನಾರಾಯಣಸ್ವಾಮಿ... ಮುಂತಾದವರನ್ನು ಆಹ್ವಾನಿಸಲಾಗಿತ್ತು. ಆದರೆ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯಲ್ಲಿರುವ ನಾ.ದಾಮೋದರ ಶೆಟ್ಟಿ ಹಾಗೂ ಸಿ.ನಾಗಣ್ಣ ಇಬ್ಬರನ್ನು ಹೊರತು ಪಡಿಸಿ ಎಲ್ಲಾ ಹನ್ನೆರಡು ಜನ ಆಹ್ವಾನಿತರು ಸಾಮೂಹಿಕವಾಗಿ ಗೋಷ್ಠಿಯನ್ನು ಬಹಿಷ್ಕರಿಸುವ ಮೂಲಕ ಕಂಬಾರ ಹಾಗು ಶಿವಪ್ರಕಾಶರಿಗೆ ಪರೋಕ್ಷವಾಗಿ ತಮ್ಮ ಪ್ರತಿಭಟನೆಯನ್ನು ತೋರಿಸಿದರು. ಕಂಬಾರರಂತೂ ಕೂತಲ್ಲೇ ತರಗುಟ್ಟಿಹೋದರು. ಮೊದಲೇ ರಂಗೋತ್ಸವ ಪ್ರೇಕ್ಷಕರ ಕೊರತೆಯಿಂದ ನರಳುತ್ತಿತ್ತು, ಅಸಮರ್ಥರ ಕೈಯಲ್ಲಿ ರಂಗೋತ್ಸವದ ಸಂಘಟನೆ ದುರ್ಬಲಗೊಂಡಿತ್ತು. ಇದರ ಮೇಲೆ ಕನ್ನಡ ರಂಗಭೂಮಿಯ ಐಕಾನ್ಗಳು ರಂಗಭಾರತಿಯನ್ನು ಅನಧೀಕೃತವಾಗಿ ಬಹಿಷ್ಕರಿಸಿದ್ದರು. ಇದೆಲ್ಲದರಿಂದಾಗಿ ಕಂಬಾರರು ಕಂಗಾಲಾದರೆ ಶಿವಪ್ರಕಾಶರವರು ಮಹಾಚೈತ್ರದ ಬಿಜ್ಜಳನಂತೆ ತಲ್ಲಣಗೊಂಡರು.


ದೊಡ್ಡವರ ಸಣ್ಣತನ : ಇದೆಲ್ಲದರ ನಡುವೆ ಕೊನೆಯ ದಿನ ಬಿ.ಜಯಶ್ರೀ ತಮ್ಮ ಹೆಸರಿನ ವಿಷಯದಲ್ಲಿ ತಗಾದೆ ತೆಗೆದು ವೇದಿಕೆಯ ಮೇಲೆ ವಿವಾದ ಸೃಷ್ಟಿಸಿದರು. ಆಗಿದ್ದಿಷ್ಟೇ, ರಂಗಭಾರತಿ ನಾಟಕೋತ್ಸವದಲ್ಲಿ ಕರಿಮಾಯಿ ನಾಟಕ ಪ್ರದರ್ಶನವಾಯಿತು. ನವದೆಹಲಿಯಅಭಿಜ್ಞಾನ್ ನಾಟ್ಯ ಸಂಸ್ಥೆಯು ಲೋಕೇಂದ್ರ ತ್ರಿವೇದಿಯವರ ನಿರ್ದೇಶನದಲ್ಲಿ ನಾಟಕವನ್ನು ಪ್ರಯೋಗಿಸಿತು. ಆದರೆ ಬ್ರೋಷರಲ್ಲಿ ಹಾಗೂ ಬ್ಯಾನರನಲ್ಲಿ ನಾಟಕದ ರಚನೆ ಚಂದ್ರಶೇಖರ ಕಂಬಾರ ಎಂದಿದ್ದು ನನ್ನ ಹೆಸರು ಯಾಕೆ ಹಾಕಿಲ್ಲ ಎನ್ನುವುದು ಬಿ.ಜಯಶ್ರೀರವರ ತಕರಾರಾಗಿತ್ತು. ಅವರ ತಕರಾರಿಗೂ ಅವರಲ್ಲಿ ಸಮರ್ಥನೆ ಇತ್ತು. ಅದೇನೆಂದರೆ ಕಂಬಾರರ ಕರಿಮಾಯಿ ಕಾದಂಬರಿಯನ್ನು ನಾನು ತುಂಬಾನೇ ಶ್ರಮಪಟ್ಟು ರಂಗರೂಪ ಮಾಡಿ ನಾಟಕವಾಗಿ ನಿರ್ದೇಶಿಸಿದ್ದೇನೆ. ಆದರೆ ದೆಹಲಿ ತಂಡದವರು ರೂಪಾಂತರ ಮಾಡಿದ ನನ್ನ ಹೆಸರನ್ನೇ ಹಾಕಿಲ್ಲ, ಇದರಿಂದ ನನ್ನ ಮನಸ್ಸಿಗೆ ತುಂಬಾನೇ ನೋವಾಗಿದೆ ಎಂದು ಜಯಶ್ರೀರವರು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ತಮ್ಮ ಗೋಳನ್ನು ತೋಡಿಕೊಂಡರು. ಅಕಸ್ಮಾತ್ ಹಿಂದಿ ಕರಿಮಾಯಿ ನಾಟಕವು ಜಯಶ್ರಿರವರು ಮಾಡಿದ ರಂಗರೂಪದ ಪ್ರತಿರೂಪವಾದರೆ ಜಯಶ್ರೀರವರು ನೋವುಂಡು ಆರೋಪ ಮಾಡಿದ್ದಕ್ಕೆ ಸಮರ್ಥನೆ ಇರುತ್ತಿತ್ತು. ಆದರೆ ಜಯಶ್ರೀರವರ ಕರಿಮಾಯಿಗೂ ಲೋಕೆಂದ್ರ ತ್ರಿವೇದಿರವರ ಕರಿಮಾಯಿಗೂ ಯಾವುದೇ ಸಾಮ್ಯತೆ ಇಲ್ಲ. ಎರಡೂ ಭಿನ್ನ ನೆಲೆಯಲ್ಲಿ ನಾಟಕವಾಗಿ ಪ್ರದರ್ಶನಗೊಂಡಿವೆ. ಒಂದು ಕಾದಂಬರಿಯನ್ನು ಕಾದಂಬರಿಕಾರರ ಅನುಮತಿ ಪಡೆದು ಎಷ್ಟು ಜನ ಬೇಕಾದರೂ ತಮಗೆ ಬೇಕಾದಂತೆ ರಂಗರೂಪ ಮಾಡಿ ನಾಟಕವಾಡಿಸಬಹುದಾಗಿದೆ. ಮೊಟ್ಟ ಮೊದಲು ರೂಪಾಂತರ ಮಾಡಿದವರಿಗೆ ಅದರ ಪೇಟಂಟ್ ದೊರೆಯುವುದಿಲ್ಲ. ಆದರೆ ತಮ್ಮದಲ್ಲದ ರಂಗರೂಪಕ್ಕೆ ತಮ್ಮ ಹೆಸರಿನ ಕ್ರೆಡಿಟ್ ಬೇಕು ಎಂದು ಒತ್ತಾಯಿಸುವುದು ಅದೆಷ್ಟು ಸರಿ?


ಹಿಂದಿ ಭಾಷೆಯ ಕರಿಮಾಯಿ ನಾಟಕದ ಪೊಟೋ
ಇದೇ ಮಾನದಂಡವನ್ನೇನಾದರೂ ಕಂಬಾರರ ನಾಟಕಗಳಿಗೆ ಹೋಲಿಸಿದಲ್ಲಿ ಕಂಬಾರರು ರಚಿಸಿದ್ದಾರೆ ಎನ್ನಲಾದ, ಇದೇ ಬಿ.ಜಯಶ್ರೀಯವರು ನಿರ್ದೇಶಿಸಿದ ಲಕ್ಷಾಧಿಪತಿ ರಾಜನ ಕಥೆ ನಾಟಕದ ಕ್ರೆಡಿಟ್ ಸಲ್ಲಬೇಕಾದದ್ದು ಮೂದೇನೂರು ಸಂಗಣ್ಣರವರಿಗೆ. ಸಮಾರೋಪದ ದಿನದಂದು ಕಂಬಾರರೇ ಹೇಳಿದಂತೆ ಸಂಗ್ಯಾ ಬಾಳ್ಯಾ ನಾಟಕ ಮೂಲವಾಗಿ ಪತ್ತಾರ ಮಾಸ್ತರರದೇ ಆದರೂ ಅದರಲ್ಲಿ ಬಾಳ್ಯಾ ಮಾಡುವ ಮೋಸಕ್ಕೆ ಆತನ ಬಡತನ ಕಾರಣ ಎಂಬಂತೆ ನಾನು ಚಿತ್ರಿಸಿ ನಾಟಕ ರಚಿಸಿದ್ದೇನೆ. ಹಾಗೂ ಹಲವಾರು ಸಂಭಾಷಣೆಗಳನ್ನು ನಾನು ಬದಲಾಯಿಸಿ ಬರೆದಿದ್ದೇನೆ, ಆದ್ದರಿಂದ ಅದು ನನ್ನದೇ ನಾಟಕ ಎಂದು ಸಮರ್ಥಿಸಿಕೊಂಡರು. ಅವರ ಮಾತಿನ ಅರ್ಥವೇನೆಂದರೆ ಮೂಲ ಶ್ರಮ ಯಾರದೇ ಆಗಿರಲಿ ಅದರಲ್ಲಿ ಒಂದಿಷ್ಟು ಬದಲಾವಣೆ ಮಾಡಿದರೆ ಅದು ಬದಲಾವಣೆ ಮಾಡಿದವನದೇ ಆಗುತ್ತದೆ ಎಂದು. ಇದನ್ನೇ ಜಯಶ್ರೀಯವರ ಆರೋಪಕ್ಕೆ ಹೋಲಿಸಿದರೆ ಕಂಬಾರರ ಕರಿಮಾಯಿ ಕಾದಂಬರಿಯನ್ನು ತ್ರಿವೇದಿಯವರು ತಮ್ಮದೇ ರೀತಿಯಲ್ಲಿ ಬದಲಾಯಿಸಿ, ದೃಶ್ಯಗಳನ್ನು ಸಂಯೋಜಿಸಿ, ಸಂಭಾಷಣೆಯನ್ನು ಬರೆದು ನಾಟಕವಾಗಿ ಪ್ರದರ್ಶಿಸಿರುವಾಗಿ ಅದು ಜಯಶ್ರೀಯವರದು ಹೇಗಾಗುತ್ತದೆ. ತಮ್ಮದಲ್ಲದ ಶ್ರಮಕ್ಕೆ ಯಾಕೆ ಜಯಶ್ರೀಯಂತಹ ಹಿರಿಯ ರಂಗಕರ್ಮಿ ತಗಾದೆ ಎತ್ತುತ್ತಾರೆ. ಜಯಶ್ರೀರವರ ಗೋಳಾಟ, ಕಂಬಾರರ ವಿತಂಡವಾದವನ್ನು ಗಮನಿಸಿದರೆ ದೊಡ್ಡವರ ಸಣ್ಣತನ ಬಹಿರಂಗವಾಗಿ ಬಯಲಾದಂತಾಗಿದೆ. ಜಯಶ್ರೀರವರ ಹಕ್ಕುದಾರಿಕೆ ಪ್ರಶ್ನೆ ಎಲ್ಲಿ ತನ್ನ ಬುಡಕ್ಕೆ ಬರುತ್ತದೋ ಎಂಬುದನ್ನು ಗಮನಿಸಿದ ಕಂಬಾರರು ಅದೇ ವೇದಿಕೆಯಲ್ಲಿ ಇನ್ನು ಮುಂದೆ ಸಾಹಿತ್ಯ ಅಕಾಡೆಮಿಯ ನಾಟಕೋತ್ಸವಗಳಲ್ಲಿ ಅಡಾಪ್ಟ್ ನಾಟಕಗಳನ್ನೇ ಆಡಿಸುವುದಿಲ್ಲ, ನೇರ ನಾಟಕಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು  ಎಂದು ಏಕಪಕ್ಷೀಯವಾಗಿ ಪರಮಾನು ಹೊರಡಿಸಿದರು. ಸಾಹಿತ್ಯ ಅಕಾಡೆಮಿಯೇನು ಇವರ ಜಹಗೀರಾ? ಎಂತಹ ನಾಟಕಗಳನ್ನು ಮಾಡಿಸಬೇಕು ಎನ್ನುವುದು ಕಂಬಾರರ ಅನತಿಯಂತೆಯೇ ನಡೆಯಬೇಕಾ? ಇವರು ಮಾಡಿದ ಕೃತಿಚೌರ್ಯಗಳನ್ನು ಮುಚ್ಚಿಕೊಳ್ಳಲು ಅಡಾಪ್ಟೇಶನ್ ನಾಟಕಗಳು ಬ್ಯಾನ್ ಆಗಬೇಕಾ? ಎಂಬ ಪ್ರಶ್ನೆಗಳು ಸಮಾರೋಪ ಸಮಾರಂಭದಲ್ಲಿ ಅಳಿದುಳಿದ ಪ್ರೇಕ್ಷಕರಲ್ಲಿ ಮೂಡಿದ್ದಂತೂ ಸುಳ್ಳಲ್ಲ.
ರಂಗಭಾರತಿ'ಯ ಸಮಾರೋಪ ಸಮಾರಂಭದಲ್ಲಿ ಕಂಬಾರರು ಹಾಗೂ ಬಿ.ಜಯಶ್ರಿರವರು
ನಮ್ಮ ಜ್ಞಾನಪೀಠಿ ಕಂಬಾರರು ಜನವರಿ 20 ರಂದು ರಂಗಭಾರತಿ ರಂಗೋತ್ಸವದ ಕುರಿತು ವಿಜಯವಾಣಿಗೆ ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ  ಪ್ರತಿಯೊಂದಕ್ಕೂ ಸರಕಾರದ ಅನುದಾನವನ್ನು ಬಯಸುವ ಮನಸ್ಥಿತಿ ಉಂಟಾಗಿದೆ. ಯಾವ ಕಲೆ ಸರಕಾರವನ್ನು ಆಶ್ರಯಿಸುತ್ತದೋ ಕಲೆ ಸಾಯುತ್ತದೆ... ನಾಟಕಗಳಲ್ಲಿ ಬದ್ದತೆ, ವೃತ್ತಿಪರತೆಗಳಿಲ್ಲ, ನಾಟಕಕಾರರು ಮುಖ್ಯವಾಗಿ ಸೆಳೆಯಬೇಕಾದದ್ದು ಪ್ರೇಕ್ಷಕರನ್ನು. ಪ್ರೇಕ್ಷಕರೇ ಇಲ್ಲದಿದ್ದರೆ ಯಾವ ಸರಕಾರ ಏನು ಕೊಟ್ಟರೇನು? ಅನುದಾನದಿಂದ ರಂಗಭೂಮಿ ಉಳಿಯುತ್ತದೆ ಎನ್ನುವುದು ಮೂರ್ಖತನ. ಎನ್ನುವ ಸಾರ್ವಕಾಲಿಕ ಸತ್ಯವನ್ನು ಬಿಚ್ಚಿಟ್ಟಿದ್ದರು. ಕಂಬಾರರ ಹೇಳಿಕೆಯಲ್ಲಿ ಸಂಪೂರ್ಣ ಸತ್ಯಾಂಶ ಇದೆ. ಆದರೆ ಅವರು ತಮ್ಮ ಹೇಳಿಕೆಗೆ ಬದ್ದರಾಗಿ ನಡೆದುಕೊಂಡರಾ? ಇಲ್ಲ. ಅದಕ್ಕೆ ತದ್ವಿರುದ್ದವಾದ ಕೆಲಸವನ್ನು ಬದ್ದತೆಯಿಂದ ಮಾಡಿ ನಗೆಪಾಟಲಿಗೊಳಗಾದರು. ಅನುದಾನ ಬಯಸಬಾರದು ಎಂದ ಕಂಬಾರರು ತಾವೇ ರೂಪಿಸಿದರಂಗಭಾರತಿ
ಪ್ರಾಜೆಕ್ಟ್ ಸಾಕಾರಕ್ಕೆ. ಒಂದಲ್ಲಾ ಎರಡಲ್ಲಾ ಇಪ್ಪತ್ತೈದು ಲಕ್ಷ ರೂಪಾಯ ಹಣವನ್ನು ಸರಕಾರಿ ಬೊಕ್ಕಸದಿಂದ ಪಡೆದರು. ಮೊತ್ತ ಸಾಲದು ಇನ್ನೂ ಬೇಕಾಗುತ್ತದೆ ಎಂದು ರಂಗೋತ್ಸವದ ಸಂಚಾಲಕರುಗಳು ಗೊಣಗುತ್ತಿದ್ದಾರೆ. ಸರಕಾರವನ್ನು ಆಶ್ರಯಿಸಿದ ಕಲೆ ಸಾಯುತ್ತದೆ ಎನ್ನುವುದು ಕಂಬಾರರಿಗೆ ಗೊತ್ತಿದ್ದರೆ ಯಾಕೆ ಸರಕಾರಿ ಅನುದಾನವನ್ನು ಪಡೆದು ರಂಗೋತ್ಸವ ಮಾಡುತ್ತಿದ್ದರು. ಅವರ ಸ್ಪಷ್ಟ ಉದ್ದೇಶ ರಂಗಕಲೆಯನ್ನು ಕೊಲ್ಲುವುದಾಗಿದೆಯಾ? ನಾಟಕಗಳಲ್ಲಿ ಬದ್ಧತೆ ಹಾಗೂ ವೃತ್ತಿಪರತೆಗಳಿಲ್ಲ ಎಂದು ಆರೋಪಿಸುವ ಕಂಬಾರರು ರಂಗೋತ್ಸವದಲ್ಲಿ ಆಯ್ಕೆ ಮಾಡಿಕೊಂಡ ನಾಟಕಗಳ ಪೈಕಿ ನಾಲ್ಕು ನಾಟಕಗಳಲ್ಲಿ ಬದ್ದತೆ ವೃತ್ತಿಪರತೆ ಇರಲೇ ಇಲ್ಲವಲ್ಲಾ, ಆದರೂ ಬದ್ದತೆ ಬಗ್ಗೆ ಮಾತಾಡುವುದಾದರೂ ಯಾಕೆ?. ಮುಖ್ಯವಾಗಿ ಸೆಳೆಯಬೇಕಾದದ್ದು ಪ್ರೇಕ್ಷಕರನ್ನು ಎನ್ನುವ ಕಂಬಾರರು ತಮ್ಮ ನಾಟಕೋತ್ಸವದಲ್ಲಿ ಅದೆಷ್ಟು ಪ್ರೇಕ್ಷಕರನ್ನು ತಮ್ಮ ಪ್ರಭಾವ ಬಳಸಿ ಸೆಳೆದರು. ಯಾಕೆ ರಂಗಮಂದಿರ ಆರೂ ದಿನ ಅರ್ಧದಷ್ಟು ಸಹ ತುಂಬಲಿಲ್ಲ. ಪ್ರೇಕ್ಷಕರೆ ಇಲ್ಲದಿದ್ದರೆ ಸರಕಾರ ಎಷ್ಟು ಕೊಟ್ಟರೇನು? ಎನ್ನುವ ಕಂಬಾರರ ನಾಟಕೋತ್ಸವಕ್ಕೆ ರಂಗಸಕ್ತ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರಲೇ ಇಲ್ಲವಲ್ಲ. ಅಂದರೆ ಸರಕಾರ ಎಷ್ಟೇ ಕೊಟ್ಟರೂ ಕಂಬಾರರ ನಾಟಕೋತ್ಸವ ಪ್ರೇಕ್ಷಕರಿಲ್ಲದೇ ವಿಫಲವಾದಂತಾಯಿತಲ್ಲವೇ? ನಮ್ಮ ಹೆಮ್ಮೆಯ ಜ್ಞಾನಪೀಠ ಯಾವಾಗ ದ್ವಂದ್ವಗಳಿಂದ ಹೊರಬರುತ್ತದೋ ಏನೋ? ಹೇಳುವುದೊಂದು ಮಾಡುವುದಿನ್ನೊಂದು. ಹೇಳುವುದು ಆಚಾರ ತಿನ್ನುವುದು ಬದನೇಕಾಯಿ. ಕಂಬಾರರ ರೀತಿಯ ದ್ವಂದ್ವಗಳಿಂದಾಗಿ ಸಾಹಿತ್ಯ ಕ್ಷೇತ್ರವಾಗಿಲಿ ಇಲ್ಲವೇ ನಾಟಕಕ್ಷೇತ್ರವಾಗಲಿ ಬೆಳೆಯುವುದಿಲ್ಲ. ಅವಕಾಶವಾದಿ ಬರಗೂರರಿಂದಕನ್ನಡ ನಾಡಿನ ಬ್ರೆಕ್ಟ್ಎಂದು ಹೊಗಳಿಸಿಕೊಂಡ ಕಂಬಾರರು ಬ್ರೆಕ್ಟ್ ಹೆಸರಿಗೆ ಕಳಂಕ ತರುವ ಕೆಲಸಗಳನ್ನೇ ಯಾಕೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ರಾಷ್ಟ್ರೀಯ ರಂಗೋತ್ಸವದ ಕೆಟ್ಟ ಮಾದರಿಯನ್ನಂತೂ ನಾಟಕೋತ್ಸವದ ಮೂಲಕ ತೋರಿಸಿಕೊಟ್ಟಿದ್ದಾರೆ.

ಇಡೀ ನಾಟಕೋತ್ಸವದಲ್ಲಿ ಹಿಂದಿ ಭಾಷೆಯ ಪಾರುಪತ್ಯ ಮೆರೆಯಿತು. ವಿಚಾರ ಸಂಕಿರಣದಲ್ಲಿ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳೇ ಸಂಪೂರ್ಣವಾಗಿ ವೈಭವೀಕರಣಗೊಂಡವು. ಕನ್ನಡ ರಂಗಭೂಮಿಯವರನ್ನು ನಿರ್ಲಕ್ಷಿಸಿ ಎನ್ಎಸ್ಡಿಯವರನ್ನು, ಕನ್ನಡೇತರ ಹಿಂದಿ ಸಾಹಿತಿಗಳನ್ನು ಮೆಚ್ಚಿಸಲು ನಾಟಕೋತ್ಸವವನ್ನು ಬಳಸಿಕೊಳ್ಳಲಾಗಿದೆಇದಕ್ಕೆ ಸಾಕ್ಷಿಯಾಗಿ ಆರು ನಾಟಕಗಳಲ್ಲಿ ನಾಲ್ಕು ಹಿಂದಿ ಭಾಷೆಯ ನಾಟಕಗಳು ಸಿಂಹಪಾಲು ಪಡೆದಿವೆ. ’ರಾಷ್ಟ್ರೀಯ ಭಾಷೆ ಎಂದರೆ ಹಿಂದಿ, ರಾಷ್ಟ್ರೀಯ ರಂಗಭೂಮಿ ಎಂದರೆ ಹಿಂದಿರಂಗಭೂಮಿಎಂದೇ ಕಂಬಾರರು ಹಾಗೂ ಹೆಚ್.ಎಸ್.ಶಿವಪ್ರಕಾಶ್ರವರು ತಿಳಿದಂತಿದೆ. ರಂಗಭಾರತಿಗೆ ರಾಷ್ಟ್ರೀಯ ನಾಟಕೋತ್ಸವ ಎನ್ನುವ ಬದಲಾಗಿ ಹಿಂದಿ ಭಾಷಾ ನಾಟಕೋತ್ಸವ ಎನ್ನುವುದು ಸೂಕ್ತವೆನಿಸುತ್ತದೆ. ಹೋಗಲಿ ಇಬ್ಬರು ಕನ್ನಡಿಗ ದಿಗ್ಗಜರು  ರೂಪಿಸಿದ   ನಾಟಕೋತ್ಸವದಿಂದ ಕನ್ನಡಿಗರಿಗಾದ ಲಾಭವಂತೂ ಶೂನ್ಯ. ಕನ್ನಡ ರಂಗಭೂಮಿಗೆ, ಕನ್ನಡ ಸಾಹಿತಿಗಳಿಗೆ, ಕನ್ನಡ ರಂಗಾಸಕ್ತರಿಗೆ ಯಾವುದೇ ರೀತಿಯ ಕೊಡುಗೆಯನ್ನು ಕೊಡದೇ ರಂಗಭಾರತಿ ಉತ್ಸವವು ಉತ್ತರ ಭಾಷಾ ಭಾರತಿ ಮಹೋತ್ಸವವಾಗಿ ಅಂತ್ಯ ಕಂಡಿತು. ಕನ್ನಡಿಗರಿಗೆ ಅಪಾರ ನಿರಾಶೆಯನ್ನುಂಟುಮಾಡಿತು. ಎಲ್ಲಾ ಆಯಾಮಗಳಲ್ಲೂ ವಿಫಲವಾಯಿತು.   

                                      -ಶಶಿಕಾಂತ ಯಡಹಳ್ಳಿ     
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ