ಮಂಗಳವಾರ, ಸೆಪ್ಟೆಂಬರ್ 27, 2016

ನುಡಿದಂತೆ ನಡೆಯದ ಸಚಿವೆ ಉಮಾಶ್ರೀ ಮತ್ತು ದಲ್ಲಾಳಿ ರಾಜಕಾರಣ:



"ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟ ಹಾಕಲು ಪ್ರಯತ್ನಿಸಲಾಗಿದೆ. ಕಲಾವಿದರ ಸಂಭಾವನೆ ಹೆಚ್ಚಿಸಿ ಆರ್ಟಿಜಿಎಸ್ ಮೂಲಕ ಮಾಶಾಸನ ಪಾವತಿಸಲಾಗುತ್ತಿದೆ. ಕಡತಗಳು ಡಿಜಟಲೀಕರಣವಾಗಿದ್ದು ಅಕ್ರಮ ತಪ್ಪಿಸಲು -ಆಡಳಿತ ಜಾರಿಮಾಡಲಾಗಿದೆ. ಯಾರೂ ಶೋಷಣೆ ಮಾಡುವ ದಲ್ಲಾಳಿಗಳ ಜೊತೆ ಯಾವ ಕಾರಣಕ್ಕೂ ಕೈಜೋಡಿಸಬಾರದು" ಎನ್ನುವ ಹಳೆಯ ಮಾತುಗಳನ್ನೇ ಸಚಿವೆ ಉಮಾಶ್ರೀಯವರು 2016, ಸೆ.27 ರಂದು ಕೋಲಾರದಲ್ಲಿ ನಡೆದ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ರಿಪೀಟಿಸಿದ್ದಾರೆಕಳೆದ ಒಂದು ವರ್ಷದಿಂದ ಗಟ್ಟಿ ಮಾಡಿದ ನಾಟಕದ ಡೈಲಾಗಿನಂತೆ ಮೇಲಿನ ವಾಖ್ಯಗಳನ್ನು ಹೋದಲ್ಲಿ ಬಂದಲ್ಲಿ ಹೇಳುತ್ತಾ ಚಪ್ಪಾಳೆ ಗಿಟ್ಟಿಸುತ್ತಿರುವ ಉಮಾಶ್ರೀಯವರ ನುಡಿ ಮೆಚ್ಚಬಹುದಾದರೂ ನಡೆ ಮಾತ್ರ ತದ್ವಿರುದ್ದವಾಗಿದ್ದೊಂದು ವಿಪರ್ಯಾಸ.

ಯಾಕೆಂದರೆ 'ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟಹಾಕಲು ಪ್ರಯತ್ನಿಸಲಾಗುತ್ತಿದೆ' ಎಂದು ಹೇಳುವ ಸಚಿವೆಯವರು ಸಾಂಸ್ಕೃತಿಕ ದಲ್ಲಾಳಿಗಳಿಗೆ ಸರಕಾರದ ಪ್ರಾಜೆಕ್ಟಗಳ ಉಸ್ತುವಾರಿಯನ್ನು ಯಾಕೆ ವಹಿಸಿ ಕೊಟ್ಟಿದ್ದಾರೆ? ಸರಕಾರ ಆಚರಿಸುವ ಯಾವುದೇ ಮಹಾನುಭಾವರ ಜಯಂತಿಗಳಿರಲಿ, ಉತ್ಸವಗಳಿರಲಿ ಅದರ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವುದು ಇದೇ ಸಾಂಸ್ಕೃತಿಕ ಗುತ್ತಿಗೆದಾರರಲ್ಲವೆ? ಕಳೆದ ಮೂರು ವರ್ಷದಿಂದ ಕುಂಟುತ್ತ ಎಡವುತ್ತ ಸಾಗುತ್ತಿರುವ ರವೀಂದ್ರ ಕಲಾಕ್ಷೇತ್ರ- 50 ಎನ್ನುವ ಸರಕಾರದ 5 ಕೋಟಿ ರೂಪಾಯಿಗಳ ಪ್ರಾಜೆಕ್ಟಿಗೆ ಉಮಾಶ್ರೀಯವರ ಆದೇಶದಂತೆ ರಚಿತವಾದ ಕಮಿಟಿಯಲ್ಲಿ ಇರುವ ಅಧ್ಯಕ್ಷರಾದಿಯಾಗಿ ಸದಸ್ಯರುಗಳಲ್ಲಿ ಮುಕ್ಕಾಲು ಭಾಗ ಸಾಂಸ್ಕೃತಿಕ ಗುತ್ತಿಗೆದಾರರೇ ಇದ್ದಾರಲ್ಲಾ ಇದು ಉಮಾಶ್ರೀಯವರಿಗೆ ಗೊತ್ತಿಲ್ಲವೆ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎನ್ನುವ ಹುಲುಸಾದ ಹುಲ್ಲುಗಾವಲಿನಲ್ಲಿ ಕಾವಲುಗಾರರ ಸಹಯೋಗದಲ್ಲಿ ಮೇಯುತ್ತಿರುವ ಹಣದಾಹಿ ಹೋರಿ ಹಾಗೂ ಮುದಿ ಎತ್ತುಗಳಿಗಂತೂ ಕೊರತೆ ಇಲ್ಲ. ಇಲಾಖೆಯಲ್ಲಿರುವ ಅಧಿಕಾರಶಾಹಿಗಳಿಗೂ ಹಾಗೂ ಗುತ್ತಿಗೆದಾರರಿಗೂ ಅವಿನಾಭಾವ ಸಂಬಂಧವಿರುವುದು ರಹಸ್ಯವಾದುದೇನಲ್ಲ. ಇಲಾಖೆಯ ಯಾವುದೇ ಯೋಜನೆಗಳಿರಲಿ ಅವುಗಳ ಕಾಂಟ್ರ್ಯಾಕ್ಟಗಳು ಸಿಕ್ಕುವುದು ಮತ್ತಿದೇ ಸ್ಥಾಪಿತ ದಲ್ಲಾಳಿಗಳಿಗೆ. ಹಣ ಮಾಡುವುದನ್ನೇ ದಂದೆ ಮಾಡಿಕೊಂಡ ಪ್ರಭಾವಶಾಲಿ ದಲ್ಲಾಳಿಗಳು ಕಲಾವಿದರನ್ನು ಶೋಷಿಸುವುದರಲ್ಲಿ ಸಂದೇಹವೇ ಇಲ್ಲ. ದಲ್ಲಾಳಿಗಳ ಕೈಗೆ ಪ್ರಾಜೆಕ್ಟಗಳನ್ನು ಕೊಟ್ಟು "ಕಲಾವಿದರೆ  ಶೋಷಣೆ ಮಾಡುವ ದಲ್ಲಾಳಿಗಳ ಜೊತೆ ಕೈಜೋಡಿಸಬೇಡಿ" ಎಂದು ಉಮಾಶ್ರೀಯವರು ವೇದಿಕೆಯ ಮೇಲೆ ಅಬ್ಬರಿಸುವುದರಲ್ಲಿ ಅದ್ಯಾವ ನೈತಿಕತೆ ಇದೆ.

ಇಲಾಖೆಯ ಅಧಿಕಾರಿಗಳ ಜೊತೆಗೆ ಸಂಘರ್ಷಕ್ಕೆ ಇಳಿದ ಇಲ್ಲವೇ ಉಮಾಶ್ರೀಯವರಿಗೆ ಘೇರಾವ್ ಹಾಕಿದ ಕೆಲವರ ವಿರುದ್ದ ನಾಮಕಾವಸ್ತೆ ಕ್ರಮ ತೆಗೆದುಕೊಂಡಂತೆ ಮಾಡಿ "ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗಿದೆ" ಎನ್ನುವುದು ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆಯಾಗಿದೆ. ಇಲ್ಲವೇ ಇಲಾಖೆಯ ಅಧಿಕಾರಿಗಳು ಸಚಿವೆಯ ದಿಕ್ಕು ತಪ್ಪಿಸುತ್ತಿದ್ದಾರೆಸತ್ಯ ಏನೆಂದರೆ ಯಾರ ಮೇಲೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆಯೊ ಅಂತವರೆಲ್ಲಾ ತುಂಡು ಗುತ್ತಿಗೆದಾರರು. ಆದರೆ ಅಂದಿನಿಂದ ಇಂದಿನವರೆಗೂ ಸರಕಾರ ಬದಲಾದಂತೆ ತಮ್ಮ ನಿಯತ್ತನ್ನೂ ಬದಲಾಯಿಸುವ ಮುಖ್ಯ ಗುತ್ತಿಗೆದಾರರೆ ಇಲಾಖೆಯ ಪ್ರಾಜೆಕ್ಟಗಳನ್ನು, ಪ್ರಾಯೋಜಿತ ಅನುದಾನಗಳನ್ನು ಹಾಗೂ ಸರ್ವ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಮಾನ್ಯ ಉಮಾಶ್ರೀಯವರೇ ಇಂತವರಿಗೆ ಯೋಜನೆಗಳ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿದ್ದಾರೆ. ಇಲಾಖೆಗೆ ಸಂಬಂಧಿತ ಯಾವುದೇ ಪ್ರಾಜೆಕ್ಟಿನ ಕಮಿಟಿಯನ್ನು ಸರಕಾರ ಮಾಡಿದರೂ ಸಮಿತಿಯ ಒಳಹೊರಗೆ ಮತ್ತದೆ ದಲ್ಲಾಳಿಗಳೆ ತುಂಬಿಕೊಂಡಿರುತ್ತಾರೆ. ಇದೆಲ್ಲಾ  ಉಮಾಶ್ರೀಯವರಿಗೆ ಗೊತ್ತಿಲ್ಲಾ ಎನ್ನುವಂತಿಲ್ಲ. ಸ್ಥಾಪಿತ ಗುತ್ತಿಗೆದಾರರನ್ನು ಬಿಟ್ಟರೆ ಅಧಿಕಾರಗಳಿಗೆ ಹಾಗೂ ಸಚಿವೆಗೆ ಬೇರೆ ದಾರಿಯಿಲ್ಲ. ಅಂತಹುದೊಂದು ದಲ್ಲಾಳಿಗಳ ಲಾಭಿ ಸದಾ ಕ್ರಿಯಾಶೀಲವಾಗಿರುತ್ತದೆ. ಅವಕಾಶ ಸಿಗದೇ ಹೋದರೆ ನೇರವಾಗಿ ಬೇರೆ ರಾಜಕಾರಣಿಗಳಿಂದ ಇಲ್ಲವೇ ಮುಖ್ಯಮಂತ್ರಿಗಳಿಂದಲೇ ಸಚಿವೆಯ ಮೇಲೆ ಒತ್ತಡ ತರವಷ್ಟು ಕೆಲವು ಸಾಂಸ್ಕೃತಿಕ ದಲ್ಲಾಳಿಗಳು ಪ್ರಭಾವಶಾಲಿಯಾಗಿವೆ. ಇಲಾಖೆಯಲ್ಲಿ ದಲ್ಲಾಳಿಗಳನ್ನು ಮಟ್ಟ ಹಾಕಲು ಪ್ರಾಮಾಣಿಕವಾಗಿ ಕ್ರಮ ತೆಗೆದುಕೊಳ್ಳುವುದೇ ಆಗಿದ್ದರೆ  ಈಗಾಗಲೇ ಚಾಲ್ತಿಯಲ್ಲಿರುವ, ಎಲ್ಲಾ ಪ್ರಾಜೆಕ್ಟಗಳಲ್ಲಿ ಅದು ಹೇಗೋ ತೂರಿಕೊಳ್ಳುವ ದಲ್ಲಾಳಿಗಳನ್ನು ಹೊರದಬ್ಬಬೇಕಿದೆ. ಮೊದಲು ಎಲ್ಲಾ ಸರಕಾರಿ ಯೋಜನೆಗಳು, ಸಬ್ ಕಮಿಟಿಗಳು ಹಾಗೂ ಅನುದಾನಗಳಿಂದ ಮುಂದಿನ ಎರಡು ವರ್ಷಗಳ ಕಾಲ ಅಧೀಕೃತವಾಗಿ ಇಲ್ಲವೇ ಅನಧೀಕೃತವಾಗಿ ಸ್ಥಾಪಿತ ಗುತ್ತಿಗೆದಾರರನ್ನು ಭಹಿಷ್ಕರಿಸಲು ಸಚಿವೆ ಮೊದಲು ಸೀರಿಯಸ್ಸಾಗಿ ಕ್ರಮ ಕೈಗೊಳ್ಳಲಿ. ಹಗಲು ಧರೋಡೆಕೋರರಿಗೆ ಲೂಟಿ ಮಾಡಲು ಅವಕಾಶಕೊಟ್ಟು ಜನರೇ ಕಳ್ಳರ ಜೊತೆ ಕೈಜೋಡಿಸಬೇಡಿ ಎಂದು ಹೇಳಿಕೆ ಕೊಟ್ಟರೇನು ಬಂತು ಪ್ರಯೋಜನ.

"ಸ್ವತಃ ಕಲಾವಿದೆಯಾದ ನನಗೆ ಕಲಾವಿದರ ಕಷ್ಟ ಚೆನ್ನಾಗಿ ಗೊತ್ತಿದೆ. ಕಲಾವಿದರ ಸಂಭಾವನೆ ಹೆಚ್ಚಿಸಲು ಶಕ್ತಿ ಮೀರಿ ಪ್ರಯತ್ನಿಸುವೆ" ಎಂದು ಇದೇ ಸಮಾರಂಭದಲ್ಲಿ ಸಚಿವೆ ಹೇಳಿದ್ದಾರೆ. ಅವರ ಪ್ರಯತ್ನ ಫಲದಾಯಕವಾಗಲಿ ಎಂದೇ ಆಶಿಸೋಣ. ಆದರೆ ಕಲಾವಿದರ ಕಷ್ಟದ ಅರಿವಿದ್ದ ಮಾಜಿ ಕಲಾವಿದೆ ರವೀಂದ್ರ ಕಲಾಕ್ಷೇತ್ರ- 50 'ನೆನಪಿನೋಕಳಿಎನ್ನುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗಾಗಿ 2016, ಜುಲೈ 6ರಂದು ನಾಡಿನ ಮೂಲೆಮೂಲೆಗಳಿಂದ 500ಕ್ಕೂ ಹೆಚ್ಚು ಕಲಾವಿದರನ್ನು ಬೆಂಗಳೂರಿನ ಕಲಾಕ್ಷೇತ್ರಕ್ಕೆ ಕರೆಸಿಕೊಂಡು ಇದ್ದಕ್ಕಿದ್ದಂತೆ ಇಡೀ ಕಾರ್ಯಕ್ರಮ ರದ್ದು ಮಾಡಿ ಕಲಾವಿದರನ್ನು ಅವಮಾನಿಸಿ ಕಳುಹಿಸಿದರಲ್ಲಾ ಆವಾಗ ಎಲ್ಲಿ ಹೋಗಿತ್ತು ತಾನೂ ಒಬ್ಬಳು ಕಲಾವಿದೆ ಆಗಿದ್ದೆ ಎನ್ನುವ ಪ್ಲಾಶಬ್ಯಾಕ್ ನೆನಪು. ಕಲಾವಿದರ ಕಷ್ಟ ಗೊತ್ತಿದ್ದವರು ಕಲಾವಿದರನ್ನು ಹೋಲಸೇಲಾಗಿ ಹೀಗೆ ಕರೆಸಿ ಅವಮಾನಿಸಲು ಸಾಧ್ಯವೇ? ನಿಜವಾದ ಕಲಾವಿದರಿಗೆ ಬೇಕಾದದ್ದು ಸರಕಾರ ಕೊಡುವ ಮಾಶಾಸನವಲ್ಲ.... ಆತ್ಮಗೌರವ. ಕಲಾವಿದರ ಸ್ವಾಭಿಮಾನದ ಮೇಲೆ ಗಾಯ ಮಾಡಿ ಮಾಸಾಶನ ಹೆಚ್ಚಿಸುವ ಮಾತಾಡಿ ಮಲಾಮು ಹಚ್ಚುವ ಸಚಿವೆಯ ಅಧಿಕಾರದ ಹುಚ್ಚಿಗೆ ಹೇಗೆ ಮದ್ದರೆಯುವುದು.

.ಹೋಗಲಿ... ಕಾರ್ಯಕ್ರಮ ರದ್ದು ಮಾಡಿದ ನಂತರ ಮತ್ತೆ ಸಿಎಂ ಕರೆಸಿ 2016, ಆಗಸ್ಟ್ 24 ರಂದು ಕಲಾಕ್ಷೇತ್ರ-50 'ನೆನಪಿನೋಕಳಿ' ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಾಯಿತಲ್ಲ ಆಗ ಹಿಂದೆ ಅವಕಾಶ ವಂಚಿತರನ್ನಾಗಿಸಿದ ಐನೂರು ಗ್ರಾಮೀಣ ಕಲಾವಿದರನ್ನು ಯಾಕೆ ಕರೆಸಿ ಕಲಾ ಪ್ರದರ್ಶನಕ್ಕೆ ಅವಕಾಶ ಕೊಡಲಿಲ್ಲ. ಅದೂ ಹೋಗಲಿ  ಅದೆಷ್ಟು ಜನ ಕಲಾವಿದರನ್ನು ವೇದಿಕೆ ಕಾರ್ಯಕ್ರಮದ ಉಸ್ತುವಾರಿಗೆ ಸೇರಿಸಿಕೊಂಡರು. ಒಬ್ಬರನ್ನೂ ಇಲ್ಲ. ಸನ್ಮಾನದ ಶಾಲು ಹಾರ ತಂದುಕೊಡುವ ಕಾಯಕವನ್ನೂ ಸಹ ರಂಗಸಂಘಟಕರು ಹಾಗೂ ದಲ್ಲಾಳಿಗಳೇ ಮಾಡಿ ಮಂತ್ರಿ ಮಾನ್ಯರ ಕೃಪಾಕಟಾಕ್ಷಕ್ಕೆ ಪೈಪೋಟಿಗಿಳಿದರಲ್ಲಾ ಅದರಲ್ಲಿ ಯಾವ ಕಲಾವಿದರ ಹಿತಾಸಕ್ತಿ ಇದೆ. ಇಲಾಖೆಯ ಮುಖ್ಯಸ್ತೆಯಾದ ಸಚಿವೆಯ ನಡೆ ಹಾಗೂ ನುಡಿಯಲ್ಲಿ ವೈರುದ್ಯಗಳಿದ್ದಾಗ ಅಧಿಕಾರಿಗಳಿಂದ ಅದೆಂತಾ ಪ್ರಾಮಾಣಿಕತೆ ನಿರೀಕ್ಷಿಸಲು ಸಾಧ್ಯ. ಕಲಾವಿದರನ್ನು ಶೊಷಿಸಿ ಹಣಸಂಪಾದನೆ ಮಾಡುವುದನ್ನೇ ಕಾಯಕ ಮಾಡಿಕೊಂಡ ದಲ್ಕಾಳಿಗಳಿಗೂ ಹಾಗೂ ಕಲಾನಿಷ್ಟೆಗೂ ಹೊಂದಾಣಿಕೆಯಾಗದ ದೂರದ ಮಾತು. ಸಚಿವೆ ಉಮಾಶ್ರೀಯವರಿಗೆ ನಿಜವಾಗಿಯೂ ಕಲಾವಿದರ ಮೇಲೆ ಕಾಳಜಿ ಕಳಕಳಿ ಇದ್ದರೆ ಮೊದಲು ಸ್ಥಾಪಿತ ದಲ್ಲಾಳಿಗಳನ್ನು ಸರಕಾರದ ಎಲ್ಲಾ ಪ್ರಾಜೆಕ್ಟಗಳು, ಕಮಿಟಿಗಳು ಹಾಗೂ ಅನುದಾನಗಳಿಂದ ದೂರವಿಡಲಿ. ಸರಕಾರ ಕಲಾವಿದರ ಅಕೌಂಟಿಗೆ ಹಾಕಿದ ಹಣ ಅವರ ಬಳಕೆಗೆ ತಲುಪಿತಾ ಇಲ್ಲವೇ ಮತ್ತೆ ಒಂದಿಷ್ಟು ಪರ್ಸಂಟೇಜ್ ಹಣ ಕಲಾವಿದರ ಮೂಲಕ ದಲ್ಲಾಳಿಗಳಿಗೆ ಮರು ಸಂದಾಯವಾಯಿತಾ ಎನ್ನುವುದನ್ನು ಪರಿಶೀಲಿಸಲು ಪ್ರಾಮಾಣಿಕರಾದ ವಿಚಕ್ಷಣಾ ಸಮಿತಿ ರಚಿಸಲಿ. ಸರಕಾರದ ಎಲ್ಲಾ ಯೋಜನೆಗಳಲ್ಲಿ ಕಲಾವಿದರಾಗಿ ತೊಡಗಿಸಿಕೊಂಡವರಿಗೆ ಮಾತ್ರ ಆದ್ಯತೆ ಇರಲಿ


."ಜಾನಪದ ಇಂದು ಕೇವಲ ಕುಣಿತ ಹಾಡುಗಾರಿಕೆಗೆ ಸಂಬಂಧಿಸಿದ ಮೆಗಾ ಈವೆಂಟ್ ಆಗಿ ಬದಲಾಗಿದೆ. ಜನಪದ ಕಲಾವಿದರನ್ನು ಸಂಕ್ರಾಂತಿಯ ಎತ್ತುಗಳಂತೆ ಸಿಂಗರಿಸಲಾಗುತ್ತಿದೆ. ಅವರ ಬದುಕು ಕಿಚ್ಚಿನಂತೆ ಕಳೆದು ಹೋಗುತ್ತಿದೆ. ಬಗ್ಗೆ ಸರಕಾರ ಗಮನ ಹರಿಸಬೇಕು. ಜಾನಪದ ಕಲಾವಿದರನ್ನು ತನಗೆ ಬೇಕಾದಂತೆ ನಡೆಸಿಕೊಳ್ಳಬಾರದು..." ಎಂದು ಜಾನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿ ಮಾತಾಡಿದ ಕೋಟಗಾನಹಳ್ಳಿ ರಾಮಯ್ಯನವರು ಬಲು ಮಾರ್ಮಿಕವಾಗಿ ಹೇಳಿ ಸಚಿವೆಗೆ ಪರೋಕ್ಷ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಇನ್ನೂ ಕಲಾವಿದೆ ಎನ್ನುವ ಸ್ವಾಭಿಮಾನ ಮನದಲ್ಲಿದ್ದರೆ ರಾಮಯ್ಯನವರ ಮನದಾಳದ ಮಾತುಗಳಲ್ಲಿರುವ ಒಳಾರ್ಥಗಳನ್ನು ಉಮಾಶ್ರೀಯವರು ಅರಿತು ಚಿಂತನ ಮಂಥನ ಮಾಡಿಕೊಳ್ಳಬೇಕಿದೆ.

ಮೊದಲು ರಂಗೋಪಜೀವಿಗಳನ್ನು ಹಂತ ಹಂತವಾಗಿ ದೂರವಿಡುವ ಪ್ರಯತ್ನವನ್ನು ಇಲಾಖೆಯ ವತಿಯಿಂದ ಮಾಡಲಿ. ಇಲಾಖೆಯ ಯಾವುದೇ ಕಾರ್ಯಕ್ರಮಗಳಿದ್ದರೂ ವೇದಿಕೆಯ ಉಸ್ತುವಾರಿ ಕಲಾವಿದರದ್ದೇ ಆಗಿರಲಿ. ಆಗ ಎಲ್ಲರೂ ಒಪ್ಪಬಹುದು ಕಲಾವಿದೆಯಾಗಿದ್ದ ಉಮಾಶ್ರೀಯವರು ನಿಜವಾಗಿಯೂ ಕಲಾವಿದರ ಮೇಲೆ ಅದಮ್ಯ ಕಾಳಜಿ ಕಳಕಳಿ ಹೊಂದಿದ್ದಾರೆಂದು. ಕಲಾವಿದರಿಗಾಗಿ ಇದೆಲ್ಲವನ್ನೂ ಮಾಡದೇ ಬರೀ ಮಾತುಗಳನ್ನು ಉದುರಿಸಿದರೆ ಅದು ರಾಜಕೀಯದವರ ಬೂಟಾಟಿಕೆ ಎನಿಸುತ್ತದೆ. ಈಗಾಗಲೇ ಅರ್ಧದಷ್ಟು ಜನ ಉಮಾಶ್ರೀಯವರ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಇನ್ನುಳಿದವರೂ ಸಹ ನಿರಾಸೆಹೊಂದುವ ಮುನ್ನ ಸಚಿವೆ ಎಚ್ಚರಗೊಂಡು ದಲ್ಲಾಳಿಗಳನ್ನು ಮಟ್ಟಹಾಕಿ, ಅಧಿಕಾರಿಗಳಿಗೆ ಮೂಗುದಾರ ಹಾಕಿ ಇಲಾಖೆಯ ಯೋಜನೆಗಳಲ್ಲಿ ಸಕ್ರೀಯ ಕಲಾವಿದರಿಗೆ ಹೆಚ್ಚು ಪಾಲುದಾರಿಕೆಯನ್ನು ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬಹುದಾಗಿದೆ. 

ಉಳಿದ ಇನ್ನೆರಡು ವರ್ಷಗಳ ಅಧಿಕಾರಾವಧಿಯಲ್ಲಿಯಾದರೂ ಮಾಜಿ ಕಲಾವಿದೆ, ಹಾಲಿ ಸಚಿವೆ ಕಲಾವಿದರ ಉಳಿವಿಗೆ ಹಾಗೂ ಕಲೆಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಸಾಂಸ್ಕೃತಿಕ ಲೋಕದಲ್ಲಿ ನಿತ್ಯಸ್ಮರಣೀಯರಾಗುತ್ತಾರೆ. ಇಲ್ಲವಾದರೆ ಅಧಿಕಾರಾವಧಿ ಮುಗಿದ ಬಳಿಕ ಎಲ್ಲರ ಅವಹೇಳನಕ್ಕೆ ಪಾತ್ರವಾಗಿ ಕಲಾವಿದರುಗಳ ಕಣ್ಣಲ್ಲಿ ನಿರ್ಲಕ್ಷಿತರಾಗುತ್ತಾರೆ. ಈಗ ತಮ್ಮ ಲಾಭಕ್ಕೋಸ್ಕರ ಸಚಿವೆಗೆ ಬಕೆಟ್ ಹಿಡಿಯುತ್ತಿರುವ ದಲ್ಲಾಳಿಗಳು ಆಗ ಮುಂದಿನ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವರ ಓಲೈಕೆಗೆ ಪ್ರಯತ್ನಿಸುತ್ತಿರುತ್ತಾರೆಉಮಾಶ್ರೀಯವರು ಅಧಿಕಾರದ ಭ್ರಮೆಯನ್ನು ಬಿಟ್ಟು, ವಂಧಿಮಾಗದಿ ಪಡೆಯನ್ನು ದೂರವಿಟ್ಟು ರಿಯಾಲಿಟಿಯನ್ನು ಅರ್ಥಮಾಡಿಕೊಂಡು ಕಲಾವಿದರ ಪರವಾಗಿ ಹಾಗೂ ಕಲೆಯ ಹಿತಾಸಕ್ತಿಗಾಗಿ ದುಡಿಯಲಿ, ಕಲೆಯಿಂದಾಗಿ ದೊರೆತ ಅಧಿಕಾರವನ್ನು ಸದ್ಬಳಿಕೆ ಮಾಡಿಕೊಳ್ಳಲಿ, ಹಾಗೂ ಸಾಂಸ್ಕೃತಿಕ ಲೋಕದಲ್ಲಿ ನಿತ್ಯಸ್ಮರಣೀಯರಾಗಲಿ ಎನ್ನುವುದೇ ಕಲಾವಿದರ ಹೆಬ್ಬಯಕೆಯಾಗಿದೆ. ಎಲ್ಲಾ ರಂಗಕಲಾವಿದರ ಮನದಾಳದ ನಿರೀಕ್ಷೆಯೂ ಆಗಿದೆ. 

                                                                           - ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ