ಗುರುವಾರ, ಸೆಪ್ಟೆಂಬರ್ 29, 2016

ದಲ್ಲಾಳಿಗಳ ಸಂತೆಯಲ್ಲಿ ನಿಷ್ಟುರವಾದಿಯ ಆತ್ಮನಿವೇದನೆ :



ಪ್ರತಿ ಸಲ ಸಾಂಸ್ಕೃತಿಕ ಕ್ಷೇತ್ರದೊಳಿಗಿನ ಸ್ವಾರ್ಥಹಿತಾಸಕ್ತಿಗಳ ಕುರಿತು, ರಂಗಭೂಮಿಯಲ್ಲಿ ಬೇರುಬಿಟ್ಟಿರುವ ದಲ್ಲಾಳಿ ದುರುಳರ ಕುರಿತು ವಿಶ್ಲೇಷನಾತ್ಮಕ ಲೇಖನ ಬರೆದಾಗಲೂ ಆಯಾ ಲೇಖನದಲ್ಲಿ ಪ್ರಸ್ತಾಪಗೊಂಡವರಿಂದ ಹಾಗೂ ಅವರ ಹಿಂಬಾಲಕರಿಂದ ಬರುವ ಆರೋಪ ಪ್ರತ್ಯಾರೋಪಗಳು ಬಹಳ ವಿಶಿಷ್ಟವಾದವುಗಳು. ಈತನಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ, ಬೇರೆಯವರಿಗೆ ಸಿಕ್ಕ ಅವಕಾಶಗಳು ಇವನಿಗೆ ಸಿಗಲಿಲ್ಲ ಎನ್ನುವ ಅಸೂಯೇಯೆ ಅಕ್ಷರ ರೂಪದಲ್ಲಿ ಹೊರಗೆ ಬರುತ್ತವೆ. ಸರಕಾರಿ ಸವಲತ್ತುಗಳು ಸಿಗಲಿಲ್ಲ ಎನ್ನುವ ಆಕ್ರೋಶಕ್ಕೆ ಲೇಖನ ಬರೆಯುತ್ತಾನೆ. ಇವನೇನೂ ಸಾಚಾನಾ... ಸರಕಾರಿ ಹಣವನ್ನು ತಿಂದೇ ಇಲ್ಲವಾ?... ಹರಿಶ್ಚಂದ್ರನ ತುಂಡು ಈತ ಸತ್ಯವನ್ನೇ ಹೇಳುವ ಗುತ್ತಿಗೆದಾರ.. ನಮಗ್ಗೊತ್ತಿಲ್ಲವಾ ಈತನ ಅಸಲೀತನ.. ಬೇರೆಯವರಿಗೆ ಬುದ್ದಿ ಹೇಳುವ ಈತ ಮಾಡೋದಾದರೂ ಏನು?, ಹಣ ಮಾಡುವ ತಾಕತ್ತಿಲ್ಲದ್ದರಿಂದ ಹೀಗೆಲ್ಲಾ ಕಿರಿಚಾಡುತ್ತಾನೆ... ಅಧಿಕಾರ ಪದವಿ ಪ್ರಶಸ್ತಿ ಪಡೆಯಲಿಕ್ಕೂ ತಾಕತ್ತು ಬೇಕೆ ಹೊರತು ಬರೀ ಇವನಂತಾ ನಿಯತ್ತು ಕೆಲಸಕ್ಕೆ ಬಾರದು.., ತಾನೂ ಸರಕಾರಿ ಅನುದಾನಗಳನ್ನು ಪಡೆಯಲಿ ಬೇಡಾ ಅಂದವರಾರು? ತಾನು ತಿನ್ನುವುದಿಲ್ಲ, ತಿನ್ನುವವರನ್ನೂ ಬಿಡುವುದಿಲ್ಲ ಅಂದರೆ ಹೇಗೆ... ಹೀಗೆ ಹಲವಾರು ಸಂದರ್ಭದಲ್ಲಿ ನನ್ನ ಬೆನ್ನ ಹಿಂದೆ ನನ್ನ ಬಗ್ಗೆ ಆಡಿಕೊಂಡವರ ಮಾತುಗಳು ಬೇಕಾದಷ್ಟಿವೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಮುಂದೇನೇ ಕೆಲವರು ತಮ್ಮ ಅಸಮಾಧಾನವನ್ನೂ ತೋಡಿಕೊಂಡು ಹಗುರಾಗಿದ್ದಾರೆ.

ಇದು ನನ್ನೊಬ್ಬನ ಸಮಸ್ಯೆಯಲ್ಲ.  ಇದ್ದುದದನ್ನು ಇದ್ದಂಗೆ ಹೇಳುವ, ನೇರವಾಗಿ ಬರೆಯುವ ಎಲ್ಲಾ ಬರಹಗಾರರ ಮೇಲಿರುವ ಆರೋಪವೂ ಇಂತಹವುದೇ ಆಗಿವೆ. ಯಾರಾದರೂ ಸತ್ಯ ಹೇಳುತ್ತಾರೆಂದರೆ ಅವರು ಅವಕಾಶವಂಚಿತರಾಗಿದ್ದಾರೆ, ಯಾರಾದರೂ ನಿಯತ್ತಾಗಿದ್ದಾರೆಂದರೆ ಅವರಿಗೆ ಸವಲತ್ತು ಪಡೆಯುವ ಯೋಗ್ಯತೆ ಇಲ್ಲ. ಯಾರಾದರೂ ಅಕ್ರಮಗಳನ್ನು ಕುರಿತು ಬರೆಯುತ್ತಾರೆಂದರೆ ಅಕ್ರಮ ಎಸಗಿ ಲಾಭ ಮಾಡಿಕೊಳ್ಳುವ ತಾಕತ್ತಿಲ್ಲ. ಯಾರಾದರೂ ವ್ಯವಸ್ಥೆಯನ್ನು ಟೀಕಿಸುತ್ತಾರೆಂದರೆ ವ್ಯವಸ್ಥೆ ಜೊತೆ ರಾಜಿ ಆಗಿ ಲಾಭ ಪಡೆಯುವ ಅದೃಷ್ಟವಿಲ್ಲ ಎಂದೆಲ್ಲಾ ಆರೋಪಿಸುವ ಅವಕಾಶವಾದಿ ಫಲಾನುಭವಿಗಳ ಪಡೆಯೇ ಇಂದು ಬೇರೆ ಕ್ಷೇತ್ರಗಳಂತೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಬೇರುಬಿಟ್ಟಿವೆ. ಆರೋಪ ಮಾಡಿದವರನ್ನೇ ಆರೋಪಿಯನ್ನಾಗಿಸುವುದು, ಕಳ್ಳತನವನ್ನು ಕಂಡುಹಿಡಿದವರನ್ನೇ ಬಲುಗಳ್ಳ ಎಂದು ದೂರುವುದು, ಮಾಡುತ್ತಿರುವುದು ತಪ್ಪೆಂದು ತೋರಿದವರನ್ನು ತಪ್ಪಿತಸ್ತರನ್ನಾಗಿ ಸಾಬೀತು ಮಾಡಲು ಹೆಣಗಾಡುವುದೆಲ್ಲಾ ಮಾಮೂಲಿಯಾಗಿಬಿಟ್ಟಿದೆ. ಆತ್ಮಸಾಕ್ಷಿಯನ್ನು ಮಾರಿಕೊಂಡ ಬಹುತೇಕರು ಹೀಗೆ ಬುದ್ದಿಹೇಳಿದವರ ಜೊತೆಗೆ ಗುದ್ದಾಡಲು ಪ್ರಯತ್ನಿಸುತ್ತಾರೆ. ಅದೂ ಆಗದಿದ್ದಲ್ಲಿ ಬದ್ದತೆ ಇರುವವರನ್ನೂ ಸಹ ಕಳ್ಳರು ಲಾಭಕೋರರು ಇಲ್ಲವೇ ಅಯೋಗ್ಯರು ಎಂದು ಸುಳ್ಳು ಸುದ್ದಿ ಹಬ್ಬಿಸಲು ಪ್ರಯತ್ನಿಸಿ ತಮ್ಮ ಸಾಚಾತನವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾರೆ. ಕಳೆದ ದಶಕದಿಂದ ಈ ಸಮಸ್ಯೆಯನ್ನು ತೀವ್ರವಾಗಿ ನಾನು ಅನುಭವಿಸುತ್ತಿದ್ದೇನೆ. ಪ್ರತಿ ಸಲ ನನ್ನ ವಿರುದ್ದ ಹುಸಿ ಆರೋಪಗಳು ಕೇಳಿ ಬಂದಾಗಲೆಲ್ಲಾ ಸಾಕ್ಷಿ ಸಮೇತ ಸಾಬೀತುಮಾಡಲು ಸವಾಲು ಹಾಕಿದ್ದೇನೆ. ಆದರೆ ನನ್ನ ಸವಾಲನ್ನು ನೇರಾ ನೇರಾ ಎದುರಿಸದೇ ಬೆನ್ನ ಹಿಂದೆ ಸುಳ್ಳು ವದಂತಿಗಳನ್ನು ಹರಡುವುದನ್ನೇ ಕಾಯಕ ಮಾಡಿಕೊಳ್ಳುವವರಿಗೇನು ಮಾಡುವುದು. ಅವರು ಹೇಳಿದ್ದನ್ನು ನಂಬುವವರಿಗೆ ಅದು ಹೇಗೆ ಸತ್ಯವನ್ನು ಮನದಟ್ಟುಮಾಡುವುದು?  


ಬಹುಷಃ ನಾನು ಇಲ್ಲಿವರೆಗೂ ನನ್ನ ಸ್ವಂತದ ವಿಚಾರ ಕುರಿತು ಲೇಖನ ಬರೆದು ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳಲು ಹೋಗಿಲ್ಲ. ಅಂತಹ ಶ್ರೇಷ್ಟತೆಯ ವ್ಯಸನವೂ ನನಗಿಲ್ಲ. ಆದರೆ.. ಇತ್ತೀಚೆಗೆ ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಗಾಳಿ ಸುದ್ದಿಯನ್ನು ಹರಡುತ್ತಿರುವುದರಿಂದ ಹಾಗೂ ನನ್ನನ್ನೂ ಅವಕಾಶವಾದಿ ಎಂದು ಸಾಬೀತುಪಡಿಸಲು ಹರಸಾಹಸ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಈ ಲೇಖನದ ಮೂಲಕ ಆತ್ಮನಿವೇದನೆ ಮಾಡಿಕೊಳ್ಳಬೇಕಾಯಿತು. ಕನ್ನಡ ರಂಗಭೂಮಿಗೆ ಸ್ವಹಿತಾಸಕ್ತಿಯಿಂದ ಬಂದು ಮೂರು ದಶಕಗಳೇ ಆಯಿತು. ನಟನಾಗಿ ಆರಂಭಗೊಂಡ ನನ್ನ ರಂಗಾಸಕ್ತಿ ಆಮೇಲೆ ರಂಗನಿರ್ದೇಶನ, ನಾಟಕ ರಚನೆ, ರಂಗಸಂಘಟನೆ, ರಂಗಪತ್ರಿಕೆ, ರಂಗಶಿಕ್ಷಣ ಹಾಗೂ ಬರವಣಿಗೆಯತ್ತ ವಿಸ್ತಾರಗೊಳ್ಳುತ್ತಾ ಹೋಯಿತು. ಎ.ಎಸ್.ಮೂರ್ತಿ, ಆರ್.ನಾಗೇಶ್, ಸಿಜಿಕೆ, ಎಂ.ಎಸ್.ಸತ್ಯೂ ಮುಂತಾದ ರಂಗದಿಗ್ಗಜರ ಗರಡಿಯಲ್ಲಿ ಪಳಗಿದ ನಾನು ರಂಗಭೂಮಿಯತ್ತ ಅಪಾರವಾದ ಒಲವು ಹಾಗೂ ಆಸಕ್ತಿ ಬೆಳೆಸಿಕೊಂಡಿದ್ದಂತೂ ಸತ್ಯ. ಮೂಲಭೂತವಾಗಿ ಎಡಪಂಥೀಯ ಸಂಘಟನೆಯ ಕಾರ್ಯಕರ್ತನಾಗಿ, ಸಂಘಟನಾ ಕಾರ್ಯದರ್ಶಿಯಾಗಿ ದಶಕಗಳ ಕಾಲ ತೊಡಗಿಸಿಕೊಂಡ ನಾನು ಒಂದೂವರೆ ದಶಕಗಳ ಕಾಲ ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಕರ್ನಾಟಕ ರಾಜ್ಯ ಖಜಾಂಚಿಯಾಗಿ ಹಾಗೂ ಬೆಂಗಳೂರು ಇಪ್ಟಾದ ಸಂಘಟನಾ ಸಂಚಾಲಕನಾಗಿ ಸಾಮಾಜಿಕ ಬದ್ದತೆಯಿಂದಾ ಕೆಲಸ ಮಾಡಿದ್ದೇನೆ. ಮಾಡುತ್ತಿದ್ದೇನೆ. ಬಹುಷಃ  ಎಡಪಂಥೀಯ ಪ್ರಗತಿಪರ ಚಿಂತನೆಗಳು ನನ್ನ ಮೇಲೆ ಪ್ರಭಾವಬೀರದೇ ಹೋಗಿದ್ದರೆ ನಾನೂ ಸಹ ಭ್ರಷ್ಟ ವ್ಯವಸ್ಥೆಯ ಜೊತೆಗೆ ಶಾಮೀಲಾಗಿ ಅವಕಾಶವಾದಿಯಾಗುತ್ತಿದ್ದೆನೇನೋ? ಇನ್ನೊಂದಿಷ್ಟು ಸರಕಾರಿ ಸವಲತ್ತುಗಳನ್ನು ಅನುದಾನಗಳನ್ನು ಪಡೆದು, ಲಾಭಿ ಮಾಡಿ ಒಂದಿಷ್ಟು ಪ್ರಶಸ್ತಿಗಳನ್ನು  ಪಡೆದು ಮೆರೆಯಬಹುದಾಗಿತ್ತು. ಸಂಘಟನಾ ಶಕ್ತಿ, ಬರವಣಿಗೆಯ ಯುಕ್ತಿ ಹಾಗೂ ಪತ್ರಕರ್ತನೆನ್ನುವ ಬ್ರಾಂಡ್‌ಗಳನ್ನು ಬಳಸಿದ್ದರೆ, ಸರಕಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದರೆ, ಜಾತಿ ರಾಜಕಾರಣ ಮಾಡಿದ್ದರೆ, ರಾಜಕೀಯ ನಾಯಕರುಗಳಿಗೆ ಬಕೆಟ್ ಹಿಡಿದಿದ್ದರೆ, ದಲ್ಲಾಳಿಗಳ ಜೊತೆಗೆ ರಾಜಿಯಾಗಿದ್ದರೆ... ಇನ್ನೂ ಏನೇನೋ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಅವಕಾಶಗಳಿಗಂತೂ ಬರವಿರಲಿಲ್ಲ. ಆದರೆ ಅದಕ್ಕೆ ಅದ್ಯಾಕೋ ಮನಸ್ಸು ಎಂದೂ ಒಪ್ಪಲೇ ಇಲ್ಲ. ಕೇವಲ ನನ್ನನ್ನು ನಾನು ಹೊಗಳಿಕೊಳ್ಳಲು ಇಲ್ಲವೇ ಬೇರೆಯವರ ಮುಂದೆ ನನ್ನ ಸಾಚಾತನವನ್ನು ಸಾಬೀತು ಮಾಡಲು ಈ ಮಾತನ್ನು ನಾನು ಹೇಳುತ್ತಿಲ್ಲ. ಆತ್ಮನಿವೇದನೆ ಮಾಡಿಕೊಳ್ಳುವಾಗ ಅವಾಸ್ತವಗಳಿಗೆ ಅವಕಾಶವಿಲ್ಲ.


ನನ್ನ ಆತ್ಮೀಯ ಗುರುಗಳಾದ ಆರ್.ನಾಗೇಶ್‌ರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅವರನ್ನು ಅಭಿನಂದಿಸಲೆಂದು ಮೊದಲ ದಿನ ಅಕಾಡೆಮಿಯ ಚೇಂಬರಿನಲ್ಲಿ ಅವರನ್ನು ಬೇಟಿಯಾಗಿದ್ದನ್ನು ಬಿಟ್ಟರೆ ಆ ನಂತರ ಅವರ ಮೂರು ವರ್ಷಗಳ ಕಾಲಾವಧಿಯಲ್ಲಿ ಮತ್ತೆ ಅಕಾಡೆಮಿಯ ಮೆಟ್ಟಿಲು ಹತ್ತಲಿಲ್ಲ. ಈಗ ಪ್ರಸ್ತುತ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ.ಬಂಜಗೆರೆ ಜಯಪ್ರಕಾಶ್ ರವರ ಜೊತೆ ದಶಕಗಳ ಕಾಲ ಒಡನಾಡಿಯಾಗಿದ್ದವ ನಾನು. ಅನೇಕ ಜನಪರ ಹೋರಾಟಗಳಲ್ಲಿ ಅವರ ಜೊತೆಯಾಗಿದ್ದವನು. ಆದರೆ ಅವರು ಪ್ರಾಧಿಕಾರದ ಅಧ್ಯಕ್ಷರಾದಾಗಿನಿಂದ ಇಲ್ಲಿವರೆಗೂ ಅವರನ್ನು ಹೋಗಿ ನೋಡಲಿಲ್ಲ, ಯಾವುದೇ ಸಹಾಯ ಸಹಕಾರ ಕೇಳಲಿಲ್ಲ, ಇಂತವರಿಗೆ ಇಂತದ್ದು ಮಾಡಿ ಎಂದು ಎಂದೂ ರೆಕಮೆಂಡ್ ಮಾಡಲಿಲ್ಲ. ಯಾರೇ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರಲಿ ಅವರನ್ನು ಒಂದೇ ಒಂದು ಸಲ ಮಾತ್ರ ಬೇಟಿ ಮಾಡಿ ಅಭಿನಂದಿಸಿ ಸಾಧ್ಯವಾದರೆ ಒಂದು ಸಂದರ್ಶನ ಪಡೆದಿದ್ದೇನೆಯೇ ಹೊರತು ಎಂದೂ ಯಾರಿಂದಲೂ ಯಾವ ಉಪಕಾರವನ್ನಾಗಲೀ, ಸಹಕಾರವನ್ನಾಗಲೀ  ಬಯಸಲಿಲ್ಲ. ನಂಬಿಕೆ ಇಲ್ಲದವರು ಇನ್ನೂ ನಮ್ಮೊಂದಿಗಿರುವ ಮಾಜಿ ಅಧ್ಯಕ್ಷರಾದ ಮರುಳಸಿದ್ದಪ್ಪನವರು, ಕಪ್ಪಣ್ಣನವರು, ಬಿ.ವಿ.ರಾಜಾರಾಮ್‌ರವರು ಹಾಗೂ ಹಾಲಿ ಅಧ್ಯಕ್ಷ ಶೇಖ ಮಾಸ್ತರರನ್ನು ಕೇಳಿ ಕನ್ಪರಂ ಮಾಡಿಕೊಳ್ಳಬಹುದಾಗಿದೆ. ಈ ಎಲ್ಲಾ ಅಧ್ಯಕ್ಷರುಗಳು ರಂಗಭೂಮಿಗೆ ಒಳಿತನ್ನು ಮಾಡಿದಾಗ ಶ್ಲಾಘಿಸಿ ಬರೆದಿದ್ದೇನೆ, ತಪ್ಪು ನಿರ್ಣಯಗಳನ್ನು ತೆಗೆದುಕೊಂಡಾಗ ಟೀಕಿಸಿಯೂ ಬರೆದಿದ್ದೇನೆ. ಆದರೆ ಎಂದೂ ಯಾರನ್ನೂ ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಿಲ್ಲ. ಇದಕ್ಕೆ ಈ ಎಲ್ಲರೂ ಸಾಕ್ಷಿಯಾಗಿದ್ದಾರೆ.

ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿರಲಿ, ಇಲ್ಲವೇ ನಿರ್ದೇಶಕರಾದಿಯಾಗಿ ಯಾವುದೇ ಅಧಿಕಾರಿಗಳನ್ನು ಎಂದೂ ಅವರ ಕಛೇರಿಗಳಿಗೆ ಹೋಗಿ ಬೇಟಿಯಾಗಿದ್ದೇ ಇಲ್ಲ. ಒಂದೆರಡು ಸಲ ಹೋಗಿದ್ದರೂ ಅದು ಪ್ರತಿಭಟನೆ ಸಲ್ಲಿಸಲು ರಂಗಸಂಗಾತಿಗಳ ಜೊತೆಗೆ ಹೋಗಿದ್ದೆ. ಎಂದೂ ಯಾವುದೇ ಅಧಿಕಾರಿಗಳಿಂದ ಯಾವುದೇ ರೀತಿ ಸಹಾಯ ಪಡೆದಿಲ್ಲ, ಬೇರೆಯವರಿಗೆ ಸಹಾಯ ಮಾಡಿ ಎಂದೂ ರೆಕಮೆಂಡ್ ಮಾಡಿಲ್ಲ. ಕಳೆದ ಹದಿನಾರು ವರ್ಷಗಳಿಂದ ಸೃಷ್ಟಿ ಅಕಾಡೆಮಿ ಎನ್ನುವ ಸಾಂಸ್ಕೃತಿಕ ಸಂಸ್ಥೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಾನು ಈ ಸಂಸ್ಥೆಯ ಮೂಲಕ ಹಲವಾರು ಬೀದಿ ನಾಟಕಗಳನ್ನು, ವೇದಿಕೆ ನಾಟಕಗಳನ್ನು, ರಂಗಸಂಬಂಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ. ಜೊತೆಗೆ ಮೂರು ಸಾವಿರಕ್ಕೂ ಹೆಚ್ಚು ಯುವಜನರಿಗೆ ಅಭಿನಯದ ಕುರಿತು ತರಬೇತಿಯನ್ನು ಕೊಡುತ್ತಲೇ ಬಂದಿರುವೆ. ಆದರೆ ಇವತ್ತಿನವರೆಗೂ ಎಂದೂ ಯಾವುದೇ ಸರಕಾರಿ ಇಲಾಖೆಯಿಂದಲೂ ಒಂದೇ ಒಂದು ರೂಪಾಯಿ ಅನುದಾನವನ್ನು ಪಡೆದಿಲ್ಲ ಹಾಗೂ ಅನುದಾನ ಕೊಡಿ ಎಂದು ಅರ್ಜಿಯನ್ನೂ ಸಲ್ಲಿಸಿಲ್ಲ. ಪಡೆಯಲೇ ಬಾರದೆಂಬ ಹಠವಂತೂ ಇಲ್ಲ. ಆದರೆ ಈ ಸಧ್ಯಕ್ಕೆ ಅದರ ಅಗತ್ಯವಿಲ್ಲ. ಯಾರು ಬೇಕಾದರೂ ನಾಟಕ ಅಕಾಡೆಮಿಗೆ ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಆರ್‌ಟಿಐ ಅರ್ಜಿ ಹಾಕಿ ನಾನಾಗಲೀ ನನ್ನ ಸಂಸ್ಥೆಯಾಗಲೀ ಏನಾದರೂ ಸಹಾಯ ಪಡೆದಿದ್ದೇನಾ ಎಂದು ಕನ್ಪರಂ ಮಾಡಿಕೊಳ್ಳಬಹುದಾಗಿದೆ.


ಗಾಜಿನ ಮನೆಯಲ್ಲಿರುವವರು ಮತ್ತೊಬ್ಬರ ಮನೆಗೆ ಕಲ್ಲು ಹೊಡೆಯಬಾರದು ಎನ್ನುವ ಅರಿವು ನನಗಿದೆ. ನಾನೇ ಅವಕಾಶವಾದಿಯಾಗಿದ್ದರೆ ಬೇರೆಯವರನ್ನು ಟೀಕಿಸುವ ಅರ್ಹತೆ ನನಗಿರುವುದಿಲ್ಲ ಎನ್ನುವ ತಿಳಿವೂ ನನಗಿದೆ. ನಾನು ಯಾವತ್ತೂ ಬಯಲಲ್ಲಿಯೇ ನಿಂತವನು ಹಾಗೂ ನಿಲ್ಲ ಬಯಸುವವನು. ಸಮಾಜದ ಸಮಸ್ಯೆಗಳನ್ನಾಗಲೀ ಇಲ್ಲವೇ ರಂಗಭೂಮಿಯಲ್ಲಾಗುವ ನ್ಯೂನ್ಯತೆಗಳನ್ನಾಗಲೀ ಏಕಾಂಗಿಯಾಗಿ ಸರಿಪಡಿಸುತ್ತೇನೆ ಎನ್ನುವ ದುರಹಂಕಾರ ನನ್ನದಲ್ಲ. ನನ್ನ ಇತಿ ಮಿತಿಗಳ ಅರಿವು ನನಗಿದೆ.  ಆದರೆ ಕಣ್ಣಮುಂದೆ ಆಗುತ್ತಿರುವ ಅನ್ಯಾಯಗಳನ್ನು ನೋಡಿಕೊಂಡೂ ಸುಮ್ಮನಿರುವುದು ನನ್ನಿಂದ ಆಗದ ಮಾತು.  ಮೊದಲಿನಿಂದಲೂ ಹೋರಾಟದ ಮನೋಭವವನ್ನು ಬೆಳೆಸಿಕೊಂಡು ಬಂದ ನನಗೆ ಅದ್ಯಾಕೋ ಯಾವುದೇ ರೀತಿಯ ಶೋಷಣೆಗಳಾದರೂ ಸಹಿಸಿಕೊಳ್ಳಲು ಸಾಧ್ಯವಾಗದೇ ಯಾವುದೇ ರೂಪದಲ್ಲಿ ಸಿಡಿದೇಳುತ್ತೇನೆ. ನನ್ನ ನಾಟಕಗಳ ಮೂಲಕ, ಕವಿತೆಗಳ ಮೂಲಕ, ಲೇಖನಗಳ ಮೂಲಕ, ಸಮೂಹ ಮಾಧ್ಯಮಗಳ ಮೂಲಕ, ಜಾಲತಾಣಗಳ ಮೂಲಕ, ಪತ್ರಿಕೆಗಳ ಮೂಲಕ, ಇಲ್ಲವೇ ಹೋರಾಟಗಳ ಮೂಲಕ  ಭ್ರಷ್ಟತೆ ಮತ್ತು ಅವಕಾಶವಾದಿತನಗಳ ವಿರುದ್ಧ ನನ್ನ ಪ್ರತಿಭಟನೆಯನ್ನು ನಿರಂತರವಾಗಿ ಚಲನಶೀಲವಾಗಿಸಿಕೊಂಡು ಬಂದಿದ್ದೇನೆ.

ನನ್ನ ಪ್ರತಿಭಟನಾತ್ಮಕ ಮನೋಭಾವ ಹಲವರಿಗೆ ಇಷ್ಟವಾದರೆ ಕೆಲವರಿಗೆ ಅಸಹನೀಯವಾಗಿದೆ. ವಿಚಾರಗಳನ್ನು ವಿಚಾರಗಳ ಮೂಲಕ, ವಿಡಂಬನೆಗಳನ್ನು ಸಂವಾದದ ಮೂಲಕ ಎದುರಿಸುವ ಬದಲು ಇಲ್ಲಸಲ್ಲದ ಆರೋಪಗಳ ಮೂಲಕ ನನ್ನ ಬದ್ದತೆಯನ್ನು ಡೈಲ್ಯೂಟ್ ಮಾಡುವ ಹಾಗೂ ನನ್ನನ್ನೂ ಅಪರಾಧಿಯನ್ನಾಗಿಸುವ ಹುನ್ನಾರಗಳು ನೇಪತ್ಯದಲ್ಲಿ ನಡೆಯುತ್ತಿವೆ. ಇದೆಲ್ಲಾ ನಿನಗೆ ಯಾಕೆ ಬೇಕು, ನಿನಗೇನಾಗಬೇಕು ಅದನ್ನು ಹೇಳು ಎಂದು ಬುದ್ದಿ ಹೇಳಿ ನನ್ನನ್ನು ನೈತಿಕವಾಗಿ ಕುಸಿಯುವಂತೆ ಮಾಡಲು ಕೆಲವು ಸಾಂಸ್ಕೃತಿಕ ದಲ್ಲಾಳಿಗಳು ಪ್ರಯತ್ನಿಸಿದರಾದರೂ ಸಫಲರಾಗಲಿಲ್ಲ. ಸತ್ಯ ಹೇಳುತ್ತೇನೆ ವ್ಯವಹಾರಿಕ ದೃಷ್ಟಿಯಿಂದ ನೋಡಿದರೆ ನನ್ನ ಬರವಣಿಗೆಗಳಿಂದ ನನಗೆ ಆರ್ಥಿಕವಾಗಿ ಎಂತಹ ಲಾಭವೂ ಇಲ್ಲ.  ಪ್ರಜಾವಾಣಿ, ಅಗ್ನಿ ಮುಂತಾದ ಕೆಲವು ಪತ್ರಿಕೆಗಳು ಬರೆದ ಲೇಖನಕ್ಕಾಗಿ ಕೊಡಮಾಡುವ ಮುನ್ನೂರು ನಾನೂರು ರೂಪಾಯಿಗಳಿಂದ ನನಗೆಂತದೂ ಪ್ರಯೋಜನವಿಲ್ಲ. ಯಾರದೋ ಮೇಲಿನ ಸೇಡಿಗಾಗಲಿ, ಟೈಂ ಪಾಸ್ ಮಾಡಲಾಗಲಿ, ವ್ಯಯಕ್ತಿಕ ಲಾಭಕ್ಕಾಗಲೀ, ಇಲ್ಲವೇ ಬರೆಯಲೇಬೇಕೆಂಬ ತೆವಲಿಗಾಗಲೀ ನಾನೆಂದೂ ಬರೆದವನಲ್ಲ.

 
ಇಪ್ಟಾ ಕಲಾವಿದರೊಂದಿ
ಅದ್ಯಾಕೋ ಚಿಕ್ಕವಯಸ್ಸಿನಿಂದಲೂ ರಂಗಭೂಮಿಯ ಬಗ್ಗೆ ಅದೆಂತದೂ ವಿಚಿತ್ರ ಸೆಳೆತ. ನಾಟಕಗಳತ್ತ ಸದಾ ಅಂತರಂಗದ ಎಳೆತ. ರಂಗಭೂಮಿ ಎನ್ನುವುದು ಸಮಾಜದ  ಕನ್ನಡಿಯಾಗಬೇಕು. ನ್ಯೂನ್ಯತೆಗಳನ್ನು ತೆರೆದು ತೋರುವ ಕನ್ನಡಿಯಲ್ಲಿ ಲೋಪದೋಷಗಳು ಇರಬಾರದು ಎಂದುಕೊಂಡವನು ನಾನು. ರಂಗಕನ್ನಡಿಯಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕಪ್ಪುಕಲೆಗಳನ್ನು ಮಾಡಿದರೆ ಅದನ್ನು ಸರಿಪಡಿಸುವ ಮಾರ್ಗೋಪಾಯಗಳತ್ತ ಬರವಣಿಗೆಯಿಂದ ಎಚ್ಚರಿಸುವ ಕೆಲಸವನ್ನು ಮಾಡುತ್ತ ಬಂದಿದ್ದೇನೆ. ಮನುಷ್ಯರಾದ ನಮ್ಮ ತಲೆಯ ಮೇಲೆ ಸಮಾಜದ, ಶ್ರಮಿಕರ ಋಣ ಬೆಟ್ಟದಷ್ಟಿದೆ. ಅದನ್ನು ತೀರಿಸಲು ಈ  ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ. ಸಾಧ್ಯವಾದಷ್ಟು ನಮಗೆ ಗೊತ್ತಿರುವ ಕಾಯಕದ ಮೂಲಕ ಒಂದಿಷ್ಟಾದರೂ ಋಣಕ್ಕೆ ಪ್ರತಿಯಾಗಿ ಕಂದಾಯವನ್ನಾದರೂ ಸಂದಾಯ ಮಾಡಬೇಕಿದೆ. ಅದಕ್ಕಾಗಿ ನಾನು ಆಯ್ದುಕೊಂಡ ಮಾರ್ಗ ಬರವಣಿಗೆ. ಬರವಣಿಗೆಯ ವಿಭಿನ್ನ  ಪ್ರಕಾರಗಳ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಾ ಬಂದಿದ್ದೇನೆ.

ರಂಗೋಪಜೀವಿಗಳಿಂದ ರಂಗಭೂಮಿಗೆ ಅಪಾಯವಿದೆ. ರಂಗಭೂಮಿಯಲ್ಲಿ  ಕೆಲವು ಗೆದ್ದಲುಗಳು ಒಳಗಿಂದೊಳಗೆ ರಂಗಸೌಧಕ್ಕೆ ರಂದ್ರ ಕೊರೆಯುತ್ತಿವೆ. ಅವುಗಳ ಕುರಿತು ಸಂಬಂಧಪಟ್ಟವರನ್ನು ಎಚ್ಚರಿಸದೇ ಇದ್ದರೆ ಇಡೀ ರಂಗಭೂಮಿ ದಲ್ಲಾಳಿಗಳ ಏಕಸಾಮ್ಯಕ್ಕೊಳಗಾಗಿ ಕಲೆ ಎನ್ನುವುದು ಮಾರಾಟದ ಸರಕಾಗುತ್ತದೆ. ಕಲೆ ವ್ಯಾಪಾರವಾಗದೇ ಕಲೆಯಾಗಿಯೇ ಉಳಿಯಬೇಕು, ಕಲೆ ಜನರಿಗಾಗಿ ಬಳಕೆಯಾಗಬೇಕು, ಸಮಾಜದಲ್ಲಿ ಜಾಗೃತಿ ಮೂಡಿಸುವ ಸಾಧನವಾಗಬೇಕು ಎಂದು ನಂಬಿ ಅದಕ್ಕೆ ಪೂರಕವಾಗಿ ರಂಗಬರಹಗಳನ್ನು ಬರೆಯುತ್ತಾ ಬಂದಿರುವೆ. ನನ್ನ ಬರಹದಿಂದ ರಂಗದಲ್ಲಾಳಿಗಳು ಬದಲಾಗಿ ಬಿಡುತ್ತಾರೆ, ಭ್ರಷ್ಟ ಅಧಿಕಾರಿಗಳು ಒಳ್ಳೆಯವರಾಗುತ್ತಾರೆ, ಅವಕಾಶವಾದಿಗಳು ಸರಿಹೋಗುತ್ತಾರೆ ಎನ್ನುವ ಭ್ರಮೆಯಂತೂ ಖಂಡಿತಾ ಇಲ್ಲ. ಅವರು ಬದಲಾಗುವುದೂ ಇಲ್ಲ. ಆದರೆ ಈ ಭ್ರಷ್ಟರ ಬಗ್ಗೆ, ದಲ್ಲಾಳಿಗಳ ದಗಲ್ಬಾಜಿತನದ ಬಗ್ಗೆ ಜನರಲ್ಲಿ ಅರಿವು ಮೂಡಲಿ ಎನ್ನುವುದು ನನ್ನ ಬರಹಗಳ ಹಿಂದಿನ ಆಶಯವಾಗಿದೆ. ಕಲೆ ಹಾಗೂ ಕಲಾವಿದರಿಗಾಗಿ ಇಲಾಖೆಯ ಮೂಲಕ ಸರಕಾರ ಕೊಡಮಾಡಿದ ಜನರ ಹಣ ಕೆಲವು ಸ್ವಾರ್ಥಿ ಜನರ ಪಾಲಾಗದೇ ಸಿಗಬೇಕಾದವರಿಗೆ, ಶ್ರಮಜೀವಿಗಳಿಗೆ ಸಿಗಲಿ ಎನ್ನುವುದು ನನ್ನ ಉದ್ದೇಶವಾಗಿದೆ.

ಹಾಗಂತಾ ಸರಕಾರಿ ಇಲಾಖೆ ಹಾಗೂ ಅಕಾಡೆಮಿಗಳಿಂದ ಧನಸಹಾಯ ಸಹಕಾರ ಅನುದಾನವನ್ನು  ತೆಗೆದುಕೊಳ್ಳುವುದನ್ನು ನಾನು ವಿರೋಧಿಸುತ್ತಿಲ್ಲ. ಹಾಗೆಯೇ ಹಣ ಪಡೆದವರೆಲ್ಲರೂ ದಲ್ಲಾಳಿಗಳು ಎಂದು ನಿಂದಿಸುತ್ತಿಲ್ಲ.  ನಿಜವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬದ್ದತೆಯಿಂದ ಕೆಲಸ ಮಾಡುವವರು ಸರಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲಿ. ರಂಗಭೂಮಿಯಲ್ಲಿ ಕೆಲಸ ಮಾಡುವ ಎಲ್ಲರೂ ಸರಕಾರಿ ಅನುದಾನವನ್ನು ತಮ್ಮ ಹಕ್ಕು ಎನ್ನುವಂತೆ ಕೇಳಿ ಪಡೆಯಲಿ. ಆದರೆ.. ಪಡೆದ ಹಣವನ್ನು ಪಡೆದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲಿ. ನಾನು ವ್ಯಯಕ್ತಿಕವಾಗಿ  ಇಲ್ಲಿವರೆಗೂ ಯಾವುದೇ ಅನುದಾನವನ್ನು ಪಡೆಯದಿದ್ದರೂ ಎಲ್ಲರಿಗೂ ಒತ್ತಾಯದಿಂದ ಸರಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಹೇಳುತ್ತೇನೆ. ಕೆಲವರಿಗೆ ಅನುದಾನಕ್ಕೆ ಅರ್ಜಿ ಹಾಕಿ ಎಂದು ಒತ್ತಾಯಿಸಿದ್ದೇನೆ. ಗೊತ್ತಿಲ್ಲದ ಹೊಸಬರಿಗೆ ಅನುದಾನದ ದಾರಿ ದಿಕ್ಕುಗಳನ್ನೂ ತೋರಿಸಿದ್ದೇನೆ. ರಂಗಭೂಮಿಯಲ್ಲಿ ಕೆಲಸ ಮಾಡುವವರು ಆ ಅನುದಾನವನ್ನು ಹಾಗೂ ಸರಕಾರದ ಪ್ರಾಯೋಜನೆಯನ್ನು ಬಳಸಿಕೊಳ್ಳದೇ ಹೋದರೆ ಆ ಎಲ್ಲಾ ಸವಲತ್ತುಗಳು ರಂಗದಲ್ಲಾಳಿಗಳ ಪಾಲಾಗುತ್ತವೆ. ಕಲಾವಿದರಿಗೆ ಚಿಲ್ಲರೆ ಕಾಸು ಕೊಟ್ಟು ಲಕ್ಷಾಂತರ ರೂಪಾಯಿಗಳನ್ನು ಕೆಲವೇ ಕೆಲವು ಗುತ್ತಿಗೆದಾರರು ದುರ್ಬಳಕೆ ಮಾಡಿಕೊಳ್ಳುತ್ತಾರೆ. 
 
ಸೃಷ್ಟಿ ಕಲಾವಿದರೊಂದಿಗೆ.
ಆದ್ದರಿಂದ ರಂಗಭೂಮಿಯಲ್ಲಿ ನಿಷ್ಟೆಯಿಂದ ತೊಡಗಿಕೊಂಡ ಎಲ್ಲಾ ರಂಗಕಲಾವಿದರು, ರಂಗಸಂಘಟಕರು ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಕಲಾವಿದರುಗಳು ಹಾಗೂ ತಂತ್ರಜ್ಞರು ಸರಕಾರದ ಎಲ್ಲಾ ಸವಲತ್ತುಗಳನ್ನೂ ಪಡೆದು ಕಲೆಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಲಿ. ಬಂದ ಹಣವನ್ನು ತಂಡದ ನಾಯಕರೊಬ್ಬರೇ ಬಳಸಿಕೊಳ್ಳದೇ ತಂಡದಲ್ಲಿ ಶ್ರಮಿಸಿದ ಎಲ್ಲಾ ಕಲಾವಿದರಿಗೂ ಹಂಚಿಕೆ ಮಾಡಲಿ. ಕೇವಲ ರಂಗಸಂಘಟಕ, ಇಲ್ಲವೇ ತಂಡದ ನಾಯಕ ಮಾತ್ರ ಫಲಾನುಭವಿಯಾಗದೇ ಪ್ರತಿಯೊಬ್ಬ ಕಲಾವಿದರೂ ಸಹ ತಮ್ಮ ಪ್ರತಿಭೆಗೆ, ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿ. ಹೀಗಾದಾಗ ಮಾತ್ರ ಕಲೆಯೂ ಉಳಿಯುತ್ತದೆ, ಕಲಾವಿದರೂ ಬದುಕುತ್ತಾರೆ. ಎಲ್ಲಿವರೆಗೂ ಕಲಾವಿದರು ಹಾಗೂ ಸರಕಾರಿ ಸವಲತ್ತುಗಳ ನಡುವೆ ದಲ್ಲಾಳಿವರ್ಗ ಇರುತ್ತದೆಯೋ ಅಲ್ಲಿವರೆಗೂ ಕಲೆಯೂ ಉದ್ದಾರವಾಗೋದಿಲ್ಲ,  ಕಲಾವಿದರಿಗಂತೂ ಯಾವುದೇ ಲಾಭವಿಲ್ಲ.

ಕಲಾವಿದರಿಗೆ ಸಿಗುವ ಮಾಶಾಸನ, ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರ ಸಂಭಾವಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇರವಾಗಿ ಕಲಾವಿದರ ಅಕೌಂಟಿಗೆ ಸಂದಾಯವಾಗುವಂತೆ ಮಾಡಿದೆ. ಇದಕ್ಕಾಗಿ  ಇಲಾಖೆಯ ಸಚಿವೆ ಉಮಾಶ್ರೀಯವರಿಗೂ ಹಾಗೂ ನಿರ್ದೇಶಕ ದಯಾನಂದರವರಿಗೂ ಧನ್ಯವಾದಗಳನ್ನು ಹೇಳಲೇಬೇಕಿದೆ. ಆದರೆ.. ಸರಕಾರ ಚಾಪೆಯ ಕೆಳಗೆ ತೂರಿದರೆ ದಲ್ಲಾಳಿಗಳಿಗೆ ರಂಗೋಲಿ ಕೆಳಗೆ ತೂರುವ ವಿದ್ಯೆ ಚೆನ್ನಾಗಿ ಗೊತ್ತಿದೆ. ಯಾವುದೇ ಸರಕಾರಿ ಪ್ರಾಜೆಕ್ಟಿನ ಗುತ್ತಿಗೆ ಪಡೆದ ದಲ್ಲಾಳಿಯೊಬ್ಬ ಕಲಾವಿದರೊಂದಿಗೆ ಮೊದಲೇ ಡೀಲಿಗಿಳಿದಿರುತ್ತಾನೆ. ಇಂತಹ ಕಾರ್ಯಕ್ರಮ ಮಾಡಿಕೊಟ್ಟರೆ ಇಷ್ಟು ಹಣ ಕೊಡುತ್ತೇನೆ, ಸರಕಾರದಿಂದ ಬಂದ ಹಣದಲ್ಲಿ ಇಷ್ಟನ್ನು ನೀನು ಮರಳಿ ಕೊಡಬೇಕು, ಯಾಕೆಂದರೆ ಈ ಗುತ್ತಿಗೆ ಪಡೆಯಲು ನಾನು ಅಧಿಕಾರಿಗಳಿಗೆಲ್ಲಾ ಪರ್ಸಂಟೇಜ್ ಕೊಡಬೇಕಾಗುತ್ತದೆ, ಅದನ್ನು ಕೈಯಿಂದ ಕೊಡಲು ಸಾಧ್ಯವಿಲ್ಲ. ಕಲಾವಿದರಿಂದಲೇ ಪಡೆಯಬೇಕಾಗುತ್ತದೆ ಎನ್ನವು ಸಬೂಬೂ ಹೇಳಿ ಕಲಾವಿದರಿಗೆ ನೇರವಾಗಿ ಸಂದಾಯವಾದ ಸರಕಾರಿ  ಹಣದಲ್ಲೂ ಪಾಲು ಪಡೆಯುವ ದಲ್ಲಾಳಿಗಳಿದ್ದಾರೆ. ತಂಡದ ನಾಯಕನೊಂದಿಗೆ ಪರ್ಸಂಟೇಜ್ ಡೀಲಿಗಿಳಿದ ದಲ್ಲಾಳಿ ಮುಖಂಡರೂ ಇದ್ದಾರೆ. ಹೀಗಾಗಿ ಸರಕಾರ ಅದೇನೇ ಡಿಜಟಲೀಕರಣ ಮಾಡಲಿ, ನೇರವಾಗಿ ಹಣ ಪಾವತಿ  ಮಾಡಲಿ ಅದರಲ್ಲಿ  ಸಿಂಹಪಾಲು ದಲ್ಲಾಳಿಗಳಿಗೆ ಹಾಗೂ ಒಂದಿಷ್ಟು ಅಧಿಕಾರಿಗಳಿಗೆ ಹೋಗುತ್ತದೆ. ಇಂತಹುದನ್ನು ಪ್ರಶ್ನಿಸುವ ಕೆಲಸವನ್ನು ನಾನು ಹಲವಾರು ಲೇಖನಗಳಲ್ಲಿ ಮಾಡಿದ್ದೇನೆ. ಸಮಸ್ತ ಚಿಕ್ಕ ದೊಡ್ಡ ಸಾಂಸ್ಕೃತಿಕ ಗುತ್ತಿಗೆದಾರರ ಪಾಲಿಗೆ ಖಳನಾಯಕನಾಗಿದ್ದೇನೆ. ಇವನೂ ತಿನ್ನೊಲ್ಲ ತಿನ್ನುವವರಿಗೂ ಬಿಡೋದಿಲ್ಲ ಎನ್ನವ ಆರೋಪಕ್ಕೆ ಗುರಿಯಾಗಿದ್ದೇನೆ. ಹಲವಾರು ಅಪಾಯಗಳನ್ನು ಉಪಾಯದಿಂದ ಎದುರಿಸಿದ್ದೇನೆ.


ಬರೆಯುವುದನ್ನೇ ನಿಲ್ಲಿಸಿ ಸುಮ್ಮನೆ ನಾಟಕಗಳನ್ನು ಮಾಡಿಸುತ್ತಾ, ಯುವಕರಿಗೆ ತರಬೇತಿಕೊಡುತ್ತಾ ಇದ್ದುಬಿಡೋಣ, ಯಾಕೆ ಸುಮ್ಮನೇ ಇಲ್ಲದ ಆರೋಪಗಳನ್ನು ಮೈಮೇಲೆಳೆದುಕೊಳ್ಳುವುದು, ಅನಗತ್ಯ ರಿಸ್ಕಗಳನ್ನು ಆಹ್ವಾನಿಸುವುದು ಎಂದು ಅದೆಷ್ಟೋ ಸಲ ನಿರ್ಧರಿಸಿದ್ದೂ ಇದೆ. ಆದರೆ... ನನ್ನನ್ನು ಹಾಗೂ ನನ್ನ ಬರಹಗಳನ್ನು ವಿರೋಧಿಸುವವರಿಗಿಂತಾ ಬೆಂಬಲಿಸುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ  ಹೆಚ್ಚಿನ ಸಂಖ್ಯೆಯಲ್ಲಿರುವ ಕಲಾವಿದರುಗಳೇ ನಿಜವಾಗಿ ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿರುವುದು. ಅವರ ಆಶಯಗಳಿಗೆ ದ್ವನಿಯಾಗಿಯಾದರೂ ಬರೆಯುವುದು ಅನಿವಾರ್ಯವಾಗಿದೆ. ಕೆಲವರ ವಿರೋಧಕ್ಕಿಂತಲೂ ಹಲವರ ಆಶೋತ್ತರಗಳಿಗೆ ಪ್ರತಿದ್ವನಿಯಾಗುವುದು ನನಗೆ ಮುಖ್ಯವೆನಿಸುತ್ತದೆ. ಹಲವರಿಗೆ ರಂಗಭೂಮಿಯಲ್ಲಾಗುವ ಶೋಷಣೆಯ ಬಗ್ಗೆ ಗೊತ್ತಿದೆ. ಇನ್ನು ಕೆಲವರು ದಲ್ಲಾಳಿಗಳಿಂದ ದಬ್ಬಾಳಿಕೆಯನ್ನೂ ಅನುಭವಿಸಿದ್ದಾರೆ.. ಆದರೆ ಅವರಿಗೆ ತಮ್ಮ ಅಸಹನೆಯನ್ನು ಹೇಗೆ ವ್ಯಕ್ತಪಡಿಸಬೇಕು ಎನ್ನುವುದು ಗೊತ್ತಿಲ್ಲ. ಪ್ರತಿಭಟನೆ ವ್ಯಕ್ತಪಡಿಸಿದರೆ ಎಲ್ಲಿ ಈ ಪ್ರಭಾವಶಾಲಿ ದಲ್ಲಾಳಿಗಳು ತಮಗೆ ತೊಂದರೆ ಕೊಡುತ್ತಾರೋ , ಸಿಗಬೇಕಾದ ಸವಲತ್ತುಗಳಿಗೆ ಅಡೆತಡೆ ಮಾಡುತ್ತಾರೋ  ಎನ್ನುವ ಆತಂಕಗಳೂ ಸಹ ಕೆವಾರು ಕಲಾವಿದರ ಕೈ ಕಟ್ಟಿಹಾಕಿರುತ್ತವೆ. ಕಲಾವಿದರ ಮೇಲಾಗುವ ಶೋಷಣೆ, ರಂಗಭೂಮಿಯಲ್ಲಾಗುವ ಅನ್ಯಾಯಗಳನ್ನು ಬರೆದು ಮಾಧ್ಯಮಗಳ ಮೂಲಕ ಎಚ್ಚರಿಸುವ ಕೆಲಸವನ್ನು ಯಾರಾದರೂ ಮಾಡಲೇಬೇಕಿದೆ. ಅಕ್ಷರ ಮಾಧ್ಯಮದಲ್ಲಿ ದಾಖಲಿಸಬೇಕಿದೆ. ದಲ್ಲಾಳಿಗಳು ಸಾಗುವ ಲೂಟಿ ಮಾರ್ಗವನ್ನು ಬಂದ್ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಟ ರಸ್ತೆ ಉಬ್ಬುಗಳನ್ನಾದರೂ ಹಾಕಿ ಅವರ ವೇಗಕ್ಕೆ ಅಡೆತಡೆ ಹಾಕುವ ಕೆಲಸ ಆಗಬೇಕಿದೆ. ಅಂತಹ ಕೆಲಸವನ್ನು ನಾನು ರಂಗಬದ್ದತೆಯ ಭಾಗವಾಗಿ ಮಾಡುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದೇನೆ. ಅನ್ಯಾಯವನ್ನು ಎದುರಿಸುವಾಗ ಎದುರಾಗುವ ಎಲ್ಲಾ ರೀತಿಯ ಪ್ರತಿರೋಧವನ್ನು ಎದುರಿಸಲು ಸಿದ್ದನಾಗಿಯೇ ನಿಂತಿದ್ದೇನೆ.
        
ನನ್ನ ಬಗ್ಗೆ ನಾನೇ ಬರೆದುಕೊಳ್ಳುವುದು ಬಹಳಾ ಮುಜಗರದ ಸಂಗತಿ. ಆದರೇನು ಮಾಡಲಿ ವಿರೋಧಿಗಳು ಇಲ್ಲಸಲ್ಲದ ಸುಳ್ಳು ವದಂತಿಗಳನ್ನು ಹರಿಬಿಟ್ಟಾಗಲೂ ಸತ್ಯ ಹೇಳದಿದ್ದರೆ ಸುಳ್ಳುಗಳೇ ಅಧಿಕೃತವಾಗುವ ಅಪಾಯಗಳಿವೆ. ಯಾರು ಅದೆಷ್ಟೇ ಕಿವಿಕಚ್ಚಿದರೂ ನನ್ನನ್ನು ಬಲ್ಲವರು ವದಂತಿಗಳನ್ನು ನಂಬಲಾರರು. ಆದರೆ ನನ್ನ ಬದುಕು ಹಾಗೂ ಬದ್ದತೆ ಬಗ್ಗೆ ಗೊತ್ತಿಲ್ಲದವರು ತಪ್ಪು ಮಾಹಿತಿಗಳನ್ನೇ ನಿಜವೆಂದು ನಂಬುವ ಸಾಧ್ಯತೆಗಳಿವೆಯಾದ್ದರಿಂದಲೇ ಈ ಆತ್ಮನಿವೇದನೆ ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಯಿತು. ಯಾರಿಗೇ ಆಗಲಿ ನನ್ನ ಕುರಿತಾಗಲೀ ಇಲ್ಲವೇ ನನ್ನ ಬರಹದ ಬಗ್ಗೆಯಾಗಲೀ ಸಂದೇಹಗಳಿದ್ದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. (98440 25119). ರಂಗಭೂಮಿ ಒಳಿತಿಗಾಗಿ, ಕಲೆಗಾಗಿ ದುಡಿಯುವ ತುಡಿಯುವ ಜೀವಗಳ ಜೊತೆಗೆ ನಾನು ಸದಾ ಒಡನಾಡಿಯಾಗಿ ನಿಲ್ಲುತ್ತೇನೆ. ರಂಗಭೂಮಿಯನ್ನು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧಿಸ ಬಯಸುವ ರಂಗದ್ರೋಹಿಗಳ ವಿರುದ್ಧವಾಗಿ ಶತಾಯಗತಾಯ ನನ್ನ ಮಿತಿಯೊಳಗೆ ಪ್ರತಿಭಟಿಸುತ್ತೇನೆಂದು ನಾನು ಆರಾಧಿಸುವ ರಂಗಭೂಮಿಯ ಮೇಲೆ ಪ್ರಮಾಣ ಮಾಡುತ್ತೇನೆ. ಸಾರ್ವಜನಿಕ ಜೀವನದಲ್ಲಿರುವವರು, ಬೇರೆಯವರ ಲೋಪದೋಷಗಳ ಬಗ್ಗೆ ಟೀಕೆ ಟಿಪ್ಪಣಿ ವಿಡಂಬನೆಗಳನ್ನು ಬರೆಯುವವರು ಪಾರದರ್ಶಕವಾಗಿರಬೇಕೆಂಬುದು ನನ್ನ ಇಚ್ಚೆ. ಅದನ್ನೇ ಇಲ್ಲಿವರೆಗೂ ರೂಢಿಸಿಕೊಂಡು ಬಂದಿದ್ದೇನೆ. ಅವಕಾಶವಾದಿ ಆಗುವಂತಹ ಅವಕಾಶಗಳನ್ನೆಲ್ಲಾ ನಿರಾಕರಿಸಿದ್ದೇನೆ. ರಂಗನಿಷ್ಟೆ ಹಾಗೂ ಸಾಮಾಜಿಕ ಬದ್ದತೆಯನ್ನು ಬದುಕಾಗಿಸಿಕೊಂಡಿದ್ದೇನೆ. ರಂಗಭೂಮಿಯ ಏಳಿಗೆಗಾಗಿ ನನ್ನ ಕೊಡುಗೆಯನ್ನು ಕೊಡಲು ಸೂಕ್ತ ಅವಕಾಶಗಳಿದ್ದರೆ ಅವುಗಳನ್ನೂ ಸಹ ಬಳಸಿಕೊಂಡು ರಂಗಬದ್ಧತೆಯಿಂದ ನಿಭಾಯಿಸಲು ಪ್ರಯತ್ನಿಸುತ್ತೇನೆಂದು ಮಾತುಕೊಡುತ್ತೇನೆ. ಈ ಆತ್ಮನಿವೇದನೆ ಅತಿ ಎನಿಸಿದರೆ, ಮಿತಿಮೀರಿದ್ದರೆ ಕ್ಷಮೆಯಿರಲಿ. ರಂಗಬದ್ದತೆ ಇರುವವರ ಹಾರೈಕೆಗಳು ಸದಾ ನನ್ನ ಜೊತೆಗಿರಲಿ.

                                                                                 -ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ