ಶುಕ್ರವಾರ, ಜೂನ್ 6, 2014

ಕ್ಷೀಣಗೊಂಡಿರುವ ಜನಪದರಾಟ: ಕಾಯಕಲ್ಪಕ್ಕೆ ಕಾಯುತ್ತಿದೆ ಬಯಲಾಟ



'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ

ಕಳೆದ ಶತಮಾನದ ಮಧ್ಯಭಾಗದವರೆಗೂ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಶ್ರಮಸಂಸ್ಕೃತಿಕ ಪ್ರತೀಕವಾಗಿ ಹುಟ್ಟಿ ಬೆಳೆದು ವಿಜ್ರಂಭಿಸಿದ್ದು ಬಯಲಾಟ. ಕಂಪನಿ ನಾಟಕಗಳು ಕರ್ನಾಟಕದ ರಂಗಭೂಮಿಯನ್ನು ಆಪೋಷನ ತೆಗೆದುಕೊಳ್ಳುವ ಮೊದಲು ಇಡೀ ಕರ್ನಾಟಕವನ್ನು ಗ್ರಾಮೀಣ ಜನರ ಮನರಂಜನೆಯ ಮಾಧ್ಯಮವಾಗಿ ಆಳಿದ್ದು ಬಯಲಾಟ ಕಲಾಪ್ರಕಾರಗಳು. ಸಿದ್ದರಂಗಮಂದಿರಗಳಿಲ್ಲದೇ ಬಯಲಿನಲ್ಲೇ ತಾತ್ಕಾಲಿಕ ವೇದಿಕೆಗಳನ್ನು ನಿರ್ಮಿಸಿ ಆಟಗಳನ್ನು ಪ್ರದರ್ಶಿಸುತ್ತಿದ್ದುದರಿಂದ ಜಾನಪದ ಕಲೆಗಳಿಗೆ ಬಯಲಾಟ ಎಂದು ಹೆಸರು ಜನಜನಿತ. ಹೀಗೆ ಬಯಲಲ್ಲಿ ಆಡುವ ಆಟಗಳು ಒಂದೆರಡಲ್ಲ. ಅನೇಕ ಪ್ರಕಾರಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು ಮೂಡಲಪಾಯ ಮತ್ತು ಪಡುವಲುಪಾಯ. ಎರಡೂ ಪ್ರಮುಖ ಜಾನಪದ ಪ್ರದರ್ಶಕ ಕಲಾಪ್ರಕಾರಗಳು ಕರ್ನಾಟಕವನ್ನು ಪ್ರಾದೇಶಿಕವಾಗಿ ಹಂಚಿಕೊಂಡಿವೆ. ಆಯಾ ಭಾಗದ ಕೃಷಿ ಮತ್ತು ಕ್ರಿಯಾಮೂಲದ ಅಗತ್ಯಕ್ಕೆ ತಕ್ಕಂತೆ ಭಿನ್ನವಾಗಿ ಬೆಳವಣಿಗೆ ಹೊಂದಿವೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಶಿವಮೊಗ್ಗ ಚಿಕ್ಕಮಂಗಳೂರು ಜಿಲ್ಲೆಗಳ ಕೆಲ ಭಾಗದಲ್ಲಿ ಪಡುವಲುಪಾಯ ಬಯಲಾಟ ಪ್ರಸಿದ್ಧಿಯನ್ನು ಪಡೆಯಿತು. ಇದಕ್ಕೆ ಯಕ್ಷಗಾನ ಬಯಲಾಟ ಎಂದು ಹೆಸರಾಯಿತು. ಅದೇ ರೀತಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕ, ಬಾಂಬೆ ಕರ್ನಾಟಕ ಭಾಗಗಳಲ್ಲಿ ಮೂಡಲಪಾಯ ಬಯಲಾಟಗಳು ತುಂಬಾ ಜನಪ್ರೀಯವಾಗಿದ್ದವು. ಮೂಡಲಪಾಯ ಬಯಲಾಟದಲ್ಲಿ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ರಾಧಾನಾಟ, ಅಟ್ಟದಾಟ, ಘಟ್ಟದಕೋರೆ.. ಮುಂತಾದ ಪ್ರಕಾರಗಳು ಚಾಲ್ತಿಯಲ್ಲಿದ್ದವು. ಈಗಲೂ ಅಲ್ಲಲ್ಲಿ ಪಳುವಳಿಕೆಗಳಂತೆ ಇವೆ.

ಮೂಡಲಪಾಯ ಬಯಲಾಟಕ್ಕೆ ಧಾರವಾಡ, ಬೆಳಗಾಂ, ಬಿಜಾಪುರ ಜಿಲ್ಲೆಗಳಲ್ಲಿ ದೊಡ್ಡಾಟವೆಂದೂ, ಬೀದರ ಗುಲಬರ್ಗಾ ಜಿಲ್ಲೆಗಳಲ್ಲಿ ಅಟ್ಟದಾಟವೆಂದೂ, ರಾಯಚೂರು ಬಳ್ಳಾರಿ ಭಾಗದಲ್ಲಿ ಹಿರೇಆಟವೆಂದೂ, ಮೈಸೂರು ಮಂಡ್ಯ ಶಿವಮೊಗ್ಗ ಪ್ರದೇಶಗಳಲ್ಲಿ ಮೂಡಲಪಾಯ ಯಕ್ಷಗಾನವೆಂದೂ ಕರೆಯಲಾಗುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮೂಡಲಪಾಯ ಬಯಲಾಟದ ಪ್ರಕಾರಗಳು ಪ್ರಚಲಿತದಲ್ಲಿದ್ದವು. ಪ್ರದೇಶದಿಂದ ಪ್ರದೇಶಕ್ಕೆ ಕೆಲವು ಬದಲಾವಣೆ, ಭಿನ್ನತೆ ಹಾಗೂ ಬೇರೆ ಹೆಸರುಗಳನ್ನು ಹೊಂದಿದ್ದರೂ  ಮೂಲದಲ್ಲಿ ಇವೆಲ್ಲಾ ಮೂಡಲಪಾಯ ಬಯಲಾಟಗಳೇ ಆಗಿವೆ.


'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ


ಜನಪದ ಪರಂಪರೆಯ ಪ್ರದರ್ಶಕ ಕಲೆಯಾದ ಬಯಲಾಟಗಳು ಕೇವಲ ಮನರಂಜನೆಯ ಸಾಧನಗಳಾಗಿರದೇ ಗ್ರಾಮೀಣ ಪ್ರದೇಶಗಳ ಶ್ರಮ ಸಂಸ್ಕೃತಿಯ ಪ್ರತೀಕವಾಗಿವೆ. ಶ್ರಮದಾಯಕವಾದ ಕೃಷಿ ಬದುಕನ್ನೇ ಒಂದು ಕಲಾಪ್ರಕಾರವಾಗಿ ಗ್ರಾಮೀಣ ಜನಪದರು ರೂಪಿಸಿದ್ದಾರೆ. ಬಹುತೇಕ ದುಡಿಯುವ ಜನರು ಕಟ್ಟಿ ಬೆಳೆಸಿದ ಬಯಲಾಟ ಕಲಾಮಧ್ಯಮವು ಎಲ್ಲಾ ಜಾತಿ ಧರ್ಮ ವರ್ಗದ ಜನರ ಸಹಭಾಗಿತ್ವದಲ್ಲಿ ನಿರ್ಮಿತಿಯಾಗಿದ್ದು ನಿಜವಾದ ಅರ್ಥದಲ್ಲಿ ಗ್ರಾಮಗ್ರಾಮಗಳಲ್ಲಿ ಸಾಮರಸ್ಯ ಹಾಗೂ ಸೌಹಾರ್ಧತೆಯ ದ್ಯೋತಕವಾಗಿವೆ. ಬದುಕಿಗಾಗಿ ಕೃಷಿ ಹಾಗೂ ಮನೋರಂಜನೆಗಾಗಿ ಬಯಲಾಟವನ್ನು ಶತಮಾನಗಳಿಂದ ರೂಢಿಸಿಕೊಂಡು ಬಂದ ಅನಕ್ಷರಸ್ತ ಜನಪದ ಕಲಾವಿದರು ಬಯಲಾಟ ಕಲಾಪ್ರಕಾರದ ಮೂಲಕ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ.

ಪಡುವಲುಪಾಯ ಯಕ್ಷಗಾನವು ಮೇಲ್ವರ್ಗಗಳ ಕೈಗೆ ಸಿಕ್ಕು, ಮೇಲ್ಜಾತಿಯವರ ಕೃಪಾಪೋಷಣೆ ಹೊಂದಿ, ಸರಕಾರಗಳ ಸಹಕಾರವನ್ನು ಪಡೆದು ಅದು ಹೇಗೋ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು. ಶಿವರಾಮ ಕಾರಂತರಂತಹ ಪ್ರತಿಭಾನ್ವಿತರು ಯಕ್ಷಗಾನಕ್ಕೆ ಕಾಯಕಲ್ಪವನ್ನು ಕೊಟ್ಟು ಬೆಳೆಸಿದರು. ಯಕ್ಷಗಾನ ಮಂಡಳಿಗಳು ಕರಾವಳಿ ಕರ್ನಾಟಕದುದ್ದಕ್ಕೂ ಈಗಲೂ ಜನಪ್ರೀಯವಾಗಿವೆ. ದಕ್ಷಿನೋತ್ತರ ಜಿಲ್ಲೆಗಳ ಅಕ್ಷರಸ್ತರು ಯಕ್ಷಗಾನದಲ್ಲಿ ಆಸಕ್ತಿಹೊಂದಿ  ಹಲವಾರು ಮಾರ್ಪಾಡುಗಳೊಂದಿಗೆ ಕಲೆಯನ್ನು ಸದೃಢವಾಗಿ ಬೆಳೆಸಿದರು. ಅಪಾರವಾದ ಯಕ್ಷಗಾನ ಪ್ರೇಮಿಗಳ ಪ್ರೇಕ್ಷಕವೃಂದ ಹಳ್ಳಿ ಮತ್ತು ಪಟ್ಟಣಗಳಲ್ಲಿ ಯಕ್ಷಗಾನ ಕಲಾ ಪ್ರಕಾರಕ್ಕೆ ಬೆಂಬಲವಾಗಿ ನಿಂತಿತು. ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳೂ ಯಕ್ಷಗಾನಕ್ಕೆ ಬೆಂಗಾವಲುಗಳಾದವು. ಕೇವಲ ಎರಡು ಜಿಲ್ಲೆಗಳಲ್ಲಿ ಅಸ್ತಿತ್ವ ಇರುವ ಯಕ್ಷಗಾನದ ಅಭಿವೃದ್ದಿಗೆ ಸರಕಾರ ಯಕ್ಷಗಾನ ಅಕಾಡೆಮಿಯನ್ನೇ ಸ್ಥಾಪಿಸಿತು. ಹೀಗಾಗಿ ಮೇಲ್ಚಾತಿ, ಧರ್ಮ, ಧರ್ಮಪೀಠ, ವಿದ್ಯಾವಂತರು, ಬುದ್ದಿಜೀವಿಗಳು ಹಾಗೂ ಸರಕಾರದ ಬೆಂಬಲದಿಂದಾಗಿ  ಪಡುವಲುಪಾಯ ಯಕ್ಷಗಾನ ಕಲಾ ಪ್ರಕಾರವು ತನ್ನ ಸಮೃದ್ದತೆಯನ್ನು ಕಾಯ್ದುಕೊಂಡಿದೆ.


ಆದರೆ ಭಾಗ್ಯ ಮೂಡಲಪಾಯ ಬಯಲಾಟಕ್ಕಿರಲಿಲ್ಲ. ಮೊದಲು ಒಂದೊಂದು ಊರುಗಳಲ್ಲೂ ಎರಡು ಮೂರು ಹವ್ಯಾಸಿ ಬಯಲಾಟ ತಂಡಗಳು ಹುಟ್ಟಿ ಪೈಪೋಟಿಯ ಮೇಲೆ ನಾಟಕಗಳನ್ನು ಕಟ್ಟಲಾಗುತ್ತಿತ್ತು. ಊರ ಜಾತ್ರೆ, ಹಬ್ಬ ಹರಿದಿನಗಳಂದು ಊರವರಿಂದಲೇ ಬಯಲಾಟಗಳು ನಿರ್ಮಾಣಗೊಂಡು ಸಂಭ್ರಮದಿಂದ ಪ್ರದರ್ಶನಗೊಳ್ಳುತ್ತಿದ್ದವು. ಬಯಲಾಟಗಳು ಗ್ರಾಮಗಳ ಆಚರಣೆಗಳ ಭಾಗವಾಗಿಯೇ ಬೆಳೆದಿದ್ದವು. ಗ್ರಾಮೀಣ ಪ್ರದೇಶಗಳ ಅಶಿಕ್ಷಿತ ಶ್ರಮಿಕ ವರ್ಗಗಳ ಭಾಗವಾಗಿಯೇ ಉಳಿದ ಬಯಲಾಟಗಳು ಕಂಪನಿ ನಾಟಕಗಳ ಹಾವಳಿಯಿಂದ ಒಂದಿಷ್ಟು ಹಿನ್ನಡೆಯನ್ನು ಅನುಭವಿಸಿತು. ತದನಂತರ ನೆರೆ ಬರಗಳಿಂದ ಕಂಗೆಟ್ಟ ಹಳ್ಳಿಗಳಲ್ಲಿ ಆರ್ಥಿಕ ಸಮಸ್ಯೆಗಳುಂಟಾಗಿ ಯುವಕರು ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಿದ್ದರಿಂದ ಬಯಲಾಟಕ್ಕೆ ಯುವ ಪ್ರತಿಭೆಗಳ ಕೊರತೆಯುಂಟಾಯಿತು. ಬುದ್ದಿಜೀವಿಗಳು ಬಯಲಾಟಗಳನ್ನು ಡಾಕ್ಟರೇಟ್ ಮಾಡಲು ಆಕರವಾಗಿ ಬಳಸಿಕೊಂಡರೇ ಹೊರತು ಬಯಲಾಟದ ಬದಲಾವಣೆಗೆ, ಅಭಿವೃದ್ದಿಗೆ ಶಿವರಾಮ ಕಾರಂತರಂತೆ ಶ್ರಮವಹಿಸಲಿಲ್ಲ. ನಗರೀಕರಣ, ಜಾಗತೀಕರಣಗಳು ಹಾಗೂ ಸರಕಾರಗಳ ವಿವೇಚನಾ ರಹಿತ ಯೋಜನೆಗಳು ಹಳ್ಳಿಗಳನ್ನು ಅತಂತ್ರಗೊಳಿಸಿದವು. ಆಧುನಿಕ ದೃಶ್ಯ ಮಾಧ್ಯಮಗಳು ದೇಸಿ ಕಲೆಗಳನ್ನು ಆಪೋಷಣ ತೆಗೆದುಕೊಳ್ಳತೊಡಗಿತು. ಟಿವಿ ಮತ್ತು ಸಿನೆಮಾ ಮಾಧ್ಯಮಗಳೂ ಸಹ ಗ್ರಾಮೀಣ ಪ್ರೇಕ್ಷಕವರ್ಗವನ್ನು ಆಕ್ರಮಿಸಿಕೊಂಡಿತು. ಈಕಡೆ ಬಯಲಾಟ ಮಾಡುವವರೂ ಇಲ್ಲಾ, ಮಾಡಿದರೆ ನೋಡುವವರೂ ಇಲ್ಲ ಎನ್ನುವ ಹಂತಕ್ಕೆ ನಮ್ಮ ಜಾನಪದ ಕಲೆ ನಿತ್ರಾಣಗೊಂಡಿತು. ಎಲ್ಲಾ ಕಾರಣಗಳಿಂದಾಗಿ ಬಯಲಾಟ ಕಲಾ ಪರಂಪರೆ ನಿಧಾನವಾಗಿ ನೇಪತ್ಯಕ್ಕೆ ಸರಿಯತೊಡಗಿತು. ಈಗಲೂ ಅಲ್ಲಲ್ಲಿ ಅಳಿದುಳಿದ ಬಯಲುಸೀಮೆಯ ಕೆಲವು ಭಾಗಗಳಲ್ಲಿ ಅಪರೂಪಕ್ಕೆಂಬಂತೆ ಇರುವ ಬಯಲಾಟದ ಕಥೆಗಾರರು, ಹಾಡುಗಾರರು ಹಾಗೂ ಸಂಗೀತಗಾರರ ಕೊನೆಯ ತಲೆಮಾರು ಮುಗಿದುಹೋದರೆ ಮುಂದಿನ ತಲೆಮಾರಿಗೆ ಬಯಲಾಟವನ್ನು ತೆಗೆದುಕೊಂಡು ಹೋಗುವ ಸಾಧ್ಯತೆಗಳು ತುಂಬಾ ಕ್ಷೀಣವಾಗಿವೆ.

ಗ್ರಾಮೀಣ ಜನರ ಬದುಕೇ ಅತಂತ್ರವಾಗಿರುವಾಗ, ಅವರ ಬದುಕಿನ ಮೂಲವಾದ ಕೃಷಿಯೇ ಇಂದು ನಶಿಸುತ್ತಿರುವಾಗ, ತಿನ್ನುವ ಅನ್ನ ಬೆಳೆಯುವ ಹೊಲಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವಾಗ, ಕೃಷಿ ಚಟುವಟಿಕೆಗಳನ್ನು ಯಂತ್ರಗಳೇ ನಿಭಾಯಿಸುತ್ತಿರುವಾಗ ಕೃಷಿಮೂಲ-ಶ್ರಮಮೂಲ ಜನಪದ ಕಲಾ ಪ್ರಕಾರವಾದ ಬಯಲಾಟಗಳು ಬದುಕಿ ಬಾಳುವ ಸಾಧ್ಯತೆಗಳಾದರೂ ಎಲ್ಲಿವೆ? ಶ್ರಮಮೂಲದ ಜಾನಪದ ಕಲೆಯನ್ನು ನಿರ್ಲಕ್ಷಿಸಿ ವಿದೇಶಿ ಮೂಲದ ವಿಲಾಸಿ ಸಂಸ್ಕೃತಿಯನ್ನು ಜನರ ಮನಸ್ಸಿನಲ್ಲಿ ಬಿತ್ತುವ ಅನಾಹುತಕಾರಿ ಕೆಲಸಗಳು ಮಾಧ್ಯಮಗಳ ಮೂಲಕ ಸಮರೋಪಾದಿಯಲ್ಲಿ ನಡೆಯುತ್ತಿವೆ. ನೆಲಮೂಲದ ದೇಸಿ ಸಂಸ್ಕೃತಿಯನ್ನು ಕಡೆಗಣಿಸಿ ಶಿಷ್ಟ ಕಲೆಗಳನ್ನೇ ನಾಡಿನ ನಿಜವಾದ ಕಲೆ ಎಂದು ಬಿಂಬಿಸುವ ಹುನ್ನಾರವನ್ನು ಆಳುವ ವರ್ಗಗಳು ವ್ಯವಸ್ಥಿತವಾಗಿ ಮಾಡುತ್ತಿವೆ.  ಜಾಗತೀಕರಣದ ಜಾಗತಿಕ ವಿಕ್ಷಿಪ್ತ ಸಂಸ್ಕೃತಿಯನ್ನು ಆಧುನಿಕ ಸಾಮೂಹಿಕ ಸಂವಹನ ಮಾಧ್ಯಮಗಳ ಮೂಲಕ ನಿರಂತರವಾಗಿ ಬಿತ್ತರಿಸುವ ಬಂಡವಾಳಶಾಹಿಗಳು ನಡೆಸುವ ವಾಹಿನಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳ ಹಿಡಿತದಲ್ಲಿರುವ ಕೆಲವು ಪತ್ರಿಕೆಗಳು ದೇಸಿ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿವೆ. ನಶಿಸುತ್ತಿರುವ ಜನಕಲೆಯನ್ನು ಪೋಷಿಸಿ ಬೆಳೆಸಬೇಕಾದ ಸರಕಾರಗಳು ಮಲತಾಯಿ ದೋರಣೆ ತಳೆದು ಮೂಡಲಪಾಯ ಬಯಲಾಟದ ಕಲಾ ಪ್ರಕಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಕಾಯಕಲ್ಪಕ್ಕೆ ಯೋಜನೆಗಳನ್ನು ರೂಪಿಸುತ್ತಿಲ್ಲ.

'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ

ಇದಕ್ಕೆ ಉದಾಹರಣೆ ಇಲ್ಲಿದೆ. ಶಿಷ್ಟ ಕಲೆಯಾಗಿ ರೂಪಾಂತರಗೊಂಡ ಯಕ್ಷಗಾನ ಜಾನಪದ ಕಲೆಯ ಅಭಿವೃದ್ದಿಗಾಗಿ ಸರಕಾರವು ಪ್ರತ್ಯೇಕ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿತು. ತಪ್ಪೇನಿಲ್ಲ. ಅದೂ ಕೂಡಾ ಮೂಲದಲ್ಲಿ ಜಾನಪದ ಬಯಲಾಟ ಕಲಾ ಪ್ರಕಾರವಾಗಿರುವುದರಿಂದ ಕಲೆಯೂ ಉಳಿದು ಬೆಳೆಯಬೇಕಿದೆ. ಆದರೆ ಕೇವಲ ಎರಡು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಕುಟುಕು ಜೀವ ಹಿಡಿದುಕೊಂಡು ಆಗಲೋ ಈಗಲೋ ಸಾಯುವ ಸ್ಥಿತಿಯಲ್ಲಿರುವ ಮೂಡಲಪಾಯ ಬಯಲಾಟ ಕಲಾ ಪ್ರಕಾರಗಳ ಬಗ್ಗೆ ಸರಕಾರ ದಿವ್ಯ ನಿರ್ಲಕ್ಷ ತೋರಿಸಿತು. ಹಲವು ಮೂಲಗಳಿಂದ ಬಂದ ಪ್ರತಿರೋಧ ಹಾಗೂ ಟೀಕೆಗಳಿಂದಾಗಿ ಎಚ್ಚೆತ್ತ ರಾಜ್ಯ ಸರಕಾರವು ಇತ್ತೀಚೆಗೆ ಯಕ್ಷಗಾನ ಅಕಾಡೆಮಿಗೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಎಂದು ಹೆಸರನ್ನು ಮಾತ್ರ ಬದಲಾಯಿಸಿತು. ಆದರೆ ಬದಲಾವಣೆಯಿಂದ ಮೂಡಲಪಾಯ ಬಯಲಾಟದ ಅಭಿವೃದ್ದಿಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗಲೇ ಇಲ್ಲಾ. ಈಗಲೂ ಅಕಾಡೆಮಿಗೆ ಸರಕಾರ ಕೊಡುವ ಅನುದಾನದ ಬಹುತೇಕ ಭಾಗವನ್ನು ಯಕ್ಷಗಾನಕ್ಕೆ ಬಳಸಲಾಗುತ್ತಿದೆ. ಕಲಾವಿದರಿಗೆ ಪ್ರಶಸ್ತಿ, ಮಾಶಾಸನ ಕೊಡುವಾಗಲೂ ಸಹ ಮೂಡಲಪಾಯ ಬಯಲಾಟದ ಕಲಾವಿದರನ್ನು ನಿರ್ಲಕ್ಷಿಸಲಾಗುತ್ತಿದೆ. ಅಕಾಡೆಮಿಗಳಿಂದ ಹೆಚ್ಚಿಗೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಯಾಕೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಬಯಲಾಟದ ಕಲಾವಿದರು ಕೇಳುತ್ತಿದ್ದಾರೆ.


ಸಲ ಯಕ್ಷಗಾನ ಬಯಲಾಟ ಅಕಾಡೆಮಿಗೆ ಸರಕಾರ ಬೆಳಗಲ್ ವೀರಣ್ಣ ರವರನ್ನು ಅಧ್ಯಕ್ಷರನ್ನಾಗಿ ನಿಯಮಿಸಿದೆ. ಆದರೆ ಅಕಾಡೆಮಿಯ ಸದಸ್ಯರಲ್ಲಿ ಬಹುಪಾಲು ಯಕ್ಷಗಾನ ಕಲೆಗೆ ಸಂಬಂಧಿಸಿದವರೇ ಆಗಿದ್ದು ಅಲ್ಲೂ ಬಯಲಾಟದ ಕಲಾವಿದರ ಪ್ರಾತಿನಿದ್ಯತೆ ಕನಿಷ್ಟವೆನಿಸುವಷ್ಟಿದೆ. ಕರ್ನಾಟಕದ ಕಲಾಪ್ರಕಾರಗಳಾದ ಯಕ್ಷಗಾನವೂ ಬೆಳೆಯಬೇಕು ಹಾಗೂ ಬಯಲಾಟವೂ ಪುನರುಜ್ಜೀವನಗೊಳ್ಳಬೇಕು. ನೆಲಮೂಲದ ದೇಸಿ ಕಲೆಗಳು ಯಾವುದೇ ಇದ್ದರೂ ಅವುಗಳಿಗೆ ಸರಕಾರ ಹಾಗೂ ಸರಕಾರದ ಅಕಾಡೆಮಿಗಳು ಬೆಂಬಲಿಸಲೇಬೇಕು. ಇಲ್ಲವಾದರೆ ಶತಮಾನಗಳಿಂದ ಬೆಳೆದು ಬಂದ ಶ್ರಮಿಕ ಪರಂಪರೆಯ ಮೂಡಲಪಾಯ ಬಯಲಾಟವು ಮುಂದಿನ ತಲೆಮಾರಿಗೆ ಇಲ್ಲವಾಗುತ್ತದೆ. ಒಂದು ಕಲೆ ಅಥವಾ ಸಂಸ್ಕೃತಿ ನಾಶವಾದರೆ ಪ್ರದೇಶದ ಜನಾಂಗವೇ ವಿಕಲಾಂಗವಾದಂತೆನಿಸುತ್ತದೆ. ಕ್ರಿಯಾ ಮೂಲ ಕಲೆ-ಸಂಸ್ಕೃತಿ ಇಲ್ಲದ ಗ್ರಾಮೀಣ ಜನತೆ ಅನಿವಾರ್ಯವಾಗಿ ತಮ್ಮ ಕ್ರಿಯಾಶೀಲತೆ ಕಳೆದುಕೊಂಡು  ಹಿಂಸೆ ಮತ್ತು ಸೆಕ್ಸನ್ನು ವೈಭವಿಸುತ್ತಿರುವ ಆಧುನಿಕ ಜಾಗತಿಕ ವಿಕ್ಷಿಪ್ತ ಸಂಸ್ಕೃತಿಯತ್ತ ಒಲಿಯುತ್ತಾರೆ. ಆಗ ಇಡೀ ಸಮಾಜ ಸ್ವಾಯತ್ತತೆ, ಸ್ವಾಭಿಮಾನ ಕಳೆದುಕೊಂಡು ಜಾಗತೀಕರಣದ ಷಡ್ಯಂತ್ರಕ್ಕೆ ಬಲಿಯಾಗಿ ಮತ್ತೆ ಮಾನಸಿಕವಾಗಿ ಗುಲಾಮಗಿರಿಗೆ ಒಳಗಾಗುವ ಸಂಭವನೀಯತೆ ಹೆಚ್ಚಾಗಿದೆ.

ಒಂದು ಕಾಲಕ್ಕೆ ಜನಪ್ರೀಯವಾಗಿದ್ದ ಬಯಲಾಟಗಳು ಇಂದು ಯಾಕೆ ನಶಿಸುತ್ತಿವೆ? ಬಯಲಾಟದ ಕಲಾವಿದರ ನಿಜವಾದ ಸಮಸ್ಯೆಗಳೇನು? ಬಯಲಾಟ ಕಲೆಯಲ್ಲಿರುವ ನ್ಯೂನ್ಯತೆಗಳೇನು? ಬದಲಾದ ಕಾಲಕ್ಕೆ ತಕ್ಕಂತೆ ಬಯಲಾಟಗಳ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಾ? ಪುರಾಣ ಪರಿಕಲ್ಪನೆಗಳ ಪ್ರಸಂಗಗಳನ್ನೇ ಆಧರಿಸಿದ ಬಯಲಾಟಗಳಿಗೆ ಚಾರಿತ್ರಿಕ, ಸಾಮಾಜಿಕ ವಿಷಯಗಳನ್ನು ಅಳವಡಿಸಲು ಸಾಧ್ಯವಾ? ಹಾಡು ಸಂಗೀತ ನೃತ್ಯಗಳೇ ವಿಜ್ರಂಭಿಸುವ ದೊಡ್ಡಾಟದಂತಹ ಕಲೆಗಳಲ್ಲಿ ಆಧುನಿಕ ಅಭಿನಯ ತಂತ್ರಗಳನ್ನು     ಅಳವಡಿಸಿ ಹೊಸ ರೀತಿಯ ಕಾಯಕಲ್ಪ ಕೊಡಲು ಆಗುತ್ತದಾ? ಸರಳವಾದ ಅರ್ಥಗ್ರಹಿಕೆಗೆ ಅಡೆತಡೆ ಒಡ್ಡಬಹುದಾಗಿರುವ ಬಯಲಾಟದೊಳಗಿನ ಕ್ಲಿಷ್ಟತೆಯನ್ನು ಕಡಿಮೆಗೊಳಿಸಿ ಇನ್ನಷ್ಟು ಸುಲಭಗೊಳಿಸಲು ಸಾಧ್ಯವಾ?  ಹೀಗೆ... ಕೆಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯುವ ಕೆಲಸಗಳನ್ನು ಸರಕಾರಗಳು, ಅಕಾಡೆಮಿಗಳು, ಜಾನಪದ ವಿಶ್ವವಿದ್ಯಾಲಯಗಳು, ವಿದ್ಯಾವಂತ ಕಲಾವಿದರುಗಳು, ಡಾಕ್ಟರೇಟ್ ಮಾಡಿದ ಬುದ್ದಿಜೀವಿಗಳು ಆಲೋಚಿಸಬೇಕಿದೆ. ಕಾಲಕ್ಕೆ ತಕ್ಕಂತೆ ರೂಪಾಂತರ ಹೊಂದದಿದ್ದರೆ ಯಾವ ಕಲೆಯೂ ಬದುಕಲಾರದು. ಹೀಗಾಗಿ ಬಯಲಾಟಗಳೂ ಸಹ  ಬದಲಾಗಬೇಕಿದೆ ನಿಟ್ಟಿನಲ್ಲಿ ಕಾರ್ಯಯೋಜನೆಗಳು ಪ್ರಾಮಾಣಿಕವಾಗಿ ನಡೆಯಬೇಕಿದೆ. ಆದರೆ ಇದನ್ನು ಮಾಡುವವರು ಯಾರು?

ಎಂ.ಎಸ್.ಮಾಳವಾಡ

ನಿಟ್ಟಿನಲ್ಲಿ ಒಂದು ಸಣ್ಣ ಆಶಾಕಿರಣ ಮೂಡಿದೆ. ಅದು ಗ್ರಾಮರಂಗ ತಂಡದ ಕಾರ್ಯಾಗಾರ. ಗ್ರಾಮರಂಗ ಎನ್ನುವ ಗ್ರಾಮೀಣ ಹವ್ಯಾಸಿ ರಂಗತಂಡವು ದಿ. 2014 ಮೇ 26 ರಿಂದ ಜೂನ್ 6 ರವರೆಗೆ ಹಾವೇರಿಯಲ್ಲಿ ದೊಡ್ಡಾಟ ಕುರಿತ ಹತ್ತು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ದೊಡ್ಡಾಟ ಎನ್ನುವ ಬಯಲಾಟದ ರಂಗಪರಂಪರೆಯನ್ನು ಪುನರುಜ್ಜೀವನ ಗೊಳಿಸುವ ನಿಟ್ಟಿನಲ್ಲಿ ಕೆಲವಾರು ಗ್ರಾಮೀಣ ಯುವಕ-ಯುವತಿಯರನ್ನು ಒಟ್ಟು ಸೇರಿಸಿ ಅವರಿಗೆ ರಂಗಭೂಮಿ ಕುರಿತ ಅರಿವನ್ನು ಕೊಡುವ ಹಾಗೂ ದೊಡ್ಡಾಟದ ಕುರಿತು ಪ್ರಾತಕ್ಷಿತೆಯನ್ನು ತೋರಿಸುವ ಮತ್ತು ಪರಿಣಿತರಿಂದ ದೊಡ್ಡಾಟವನ್ನು ಕಲಿಸುವ ಸ್ತುತ್ಯಾರ್ಹ ಕೆಲಸವನ್ನು ಗ್ರಾಮರಂಗದ ಎಂ.ಎಸ್.ಮಾಳವಾಡರವರ ನೇತೃತ್ವದಲ್ಲಿ ಆಯೋಜಿಸುತ್ತು. ಒಂದು ಸರಕಾರಿ ಇಲಾಖೆ ಅಥವಾ ಅಕಾಡೆಮಿ ಮಾಡಬಹುದಾದ ಕೆಲಸವನ್ನು ಇಂಗಳಿಗಿಯಂತಹ ಗ್ರಾಮದ ರಂಗತಂಡವೊಂದು ಮಾಡಿತು. ಅದೂ ಯಾವುದೇ ಸರಕಾರಿ ಇಲಾಖೆ ಅಕಾಡೆಮಿಗಳ ಆರ್ಥಿಕ ನೆರವಿಲ್ಲದೆ. ರಾಜಾಶ್ರಿತ ಸಿಗದೆ ಜನಾಶ್ರಿತವಾಗಿ ರೂಪಗೊಂಡ ರೈತ ಮಕ್ಕಳ ಕಲೆ ಮೂಡಲಪಾಯ ದೊಡ್ಡಾಟಕ್ಕೆ ಕಾಯಕಲ್ಪ ಎನ್ನುವ ಕಾರ್ಯಾಗಾರ ಯಶಸ್ವಿಯಾಯಿತು.

 ದೊಡ್ಡಾಟದ ಕಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಇನ್ನಷ್ಟು ಸರಳಗೊಳಿಸಿ, ಅಭಿನಯಕ್ಕೆ ಹಾಗೂ ಸಂಭಾಷನೆಗೆ ಪ್ರಾಧಾನ್ಯತೆಯನ್ನು ಕೊಟ್ಟು ವೀರ ರಾಣಿ ಕಿತ್ತೂರು ಚೆನ್ನಮ್ಮ ಎನ್ನುವ ದೊಡ್ಡಾಟವನ್ನು ಕಾರ್ಯಾಗಾರದಲ್ಲಿ ಸಿದ್ದಗೊಳಿಸಲಾಗಿದೆ. ದೊಡ್ಡಾಟದ ವಿಶೇಷತೆ ಏನೆಂದರೆ ಪೌರಾಣಿಕ ವಸ್ತುವನ್ನೇ ಆಧರಿಸಿದ ದೊಡ್ಡಾಟ ಬಯಲಾಟ ಪರಂಪರೆಯನ್ನು ಮುರಿದು ಮೊದಲ ಬಾರಿಗೆ ಚಾರಿತ್ರಿಕ ವಿಷಯವೊಂದನ್ನು ಆಧರಿಸಿ ದೊಡ್ಡಾಟವನ್ನು ಆಡಿಸುತ್ತಿರುವುದು. ಹಾಗೂ ದೊಡ್ಡಾಟದಲ್ಲಿ ಎಂದೂ ಹೆಣ್ಣುಮಕ್ಕಳು ಭಾಗವಹಿಸುವುದಿಲ್ಲ. ಸ್ತ್ರೀ ಪಾತ್ರಗಳನ್ನೂ ಸಹ ಪುರುಷರೇ ಮಾಡುತ್ತಾ ಬಂದಿದ್ದಾರೆ. ಆದರೆ ಮೊದಲ ಬಾರಿಗೆ ಸ್ತ್ರೀ ಪಾತ್ರಗಳಿಗೆ ಮಹಿಳೆಯರೇ ಅಭಿನಯಿಸುತ್ತಿದ್ದಾರೆ. ಜೊತೆಗೆ ದೊಡ್ಡಾಟದೊಳಗಿನ ಕ್ಲಿಷ್ಟತೆಗಳನ್ನು ಸರಳಗೊಳಿಸಿ ನೋಡಿದವರಿಗೆ ಸುಲಭವಾಗಿ ಕಥಾನಕತೆ ಅರ್ಥವಾಗುವಂತೆ ... ಕಿತ್ತೂರು ಚೆನ್ನಮ್ಮ ದೊಡ್ಡಾಟವನ್ನು ವಿಭಿನ್ನವಾಗಿ ಕಟ್ಟಲಾಗಿದೆ. ಐತಿಹಾಸಿಕ ವಿಷಯವಾಧರಿಸಿದ ದೊಡ್ಡಾಟವನ್ನು ಗ್ರಾಮರಂಗ ಅಧ್ಯಕ್ಷರಾದ ಹಿರಿಯ ಗ್ರಾಮೀಣ ರಂಗಕರ್ಮಿ ಎಂ.ಎಸ್.ಮಾಳವಾಡರವರು ರಚಿಸಿ ನಿರ್ದೇಶಿಸಿದ್ದಾರೆ. ಕಾರ್ಯಾಗಾರದ ನಿರ್ದೇಶಕರಾಗಿ ವಿರೇಶ ಬಡಿಗೇರ್, ಸುನಂದಾ ನಿಂಬನಗೌಡರ್, ಬಸವರಾಜ ಸಿಗ್ಗಾಂವಿ. ಮತ್ತು ರಾಜಶೇಖರ ಮಳವಾಡರವರು ಅಹೋರಾತ್ರಿ ಶ್ರಮಿಸಿದ್ದಾರೆ. ದೊಡ್ಡಾಟ ಕಾರ್ಯಾಗಾರದ ಕೊನೆಯ ದಿನವಾದ ಮೇ 6 ರಂದು ಶಿಬಿರಾರ್ಥಿಗಳಿಂದ .. ಕಿತ್ತೂರು ಚೆನ್ನಮ್ಮ ಬಯಲಾಟವು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳುವ ಅಗತ್ಯತೆ ಇದೆ.

ಬಯಲಾಟದ ಕಾಯಕಲ್ಪ ಕುರಿತ ಒಂದು ಪುಟ್ಟ ಪ್ರಯತ್ನ ಗ್ರಾಮರಂಗ ದಿಂದ ಆರಂಭಗೊಂಡಿದೆ. ಇದು ಒಬ್ಬ ವ್ಯಕ್ತಿ ಅಥವಾ ಒಂದು ತಂಡದಿಂದ ಮಾಡುವ ಕೆಲಸವಲ್ಲ. ಹಲವಾರು ಕ್ರಿಯಾಶೀಲ ಮನಸುಗಳು ಕೈಜೋಡಿಸಬೇಕು. ಹಲವಾರು ಆಯಾಮಗಳಲ್ಲಿ   ಪ್ರಾಮಾಣಿಕ ಕೆಲಸಗಳಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ನಾಟಕ ಅಕಾಡೆಮಿ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿಗಳು ಇಂತಹ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವ್ಯಾಪಕವಾಗಿ ರೂಪಿಸಬೇಕು. ಅದೂ ಆಗದಿದ್ದರೆ ಕೆಲಸ ಮಾಡುವಂತಹ ಉತ್ಸಾಹಿ ರಂಗತಂಡಗಳಿಗೆ ಆರ್ಥಿಕ ನೈತಿಕ ಸಹಕಾರವನ್ನಾದರೂ ಕೊಡಬೇಕು.  ಜಾನಪದ ಕಲಾ ಪ್ರಕಾರಗಳಲ್ಲಿ ಡಾಕ್ಟರೇಟ್ ಮಾಡಿದಂತಹ ಸ್ಕಾಲರ್ಗಳು ತಮ್ಮ ಪ್ರತಿಭೆಯನ್ನು ಬಯಲಾಟದ ಕಾಯಕಲ್ಪಕ್ಕೆ ಧಾರೆಯೆರೆಯಬೇಕು. ಒಟ್ಟಾರೆಯಾಗಿ ನೆಲಮೂಲ ದೇಸಿ ಸಂಸ್ಕೃತಿಯಾದ ಬಯಲಾಟ ಪರಂಪರೆ ಸಕಾರಾತ್ಮಕವಾಗಿ ಬದಲಾಗಬೇಕು, ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳಬೇಕು ಹಾಗೂ ಮುಂದುವರೆಯಬೇಕು.   

                                                -ಶಶಿಕಾಂತ ಯಡಹಳ್ಳಿ    




1 ಕಾಮೆಂಟ್‌: