ಶನಿವಾರ, ಏಪ್ರಿಲ್ 30, 2016

ಚರಿತ್ರಪುಸ್ತಕತಿಲೆಕ್ಕು ಒರೇಡು ; ಒಂದು ಸಾರ್ಥಕ ರಂಗಪ್ರಯೋಗ



ರಂಗಭೂಮಿ ಚರಿತ್ರೆಯಲ್ಲಿ ಹೀಗೂ ನಾಟಕ ಮಾಡಬಹುದು ಎಂಬ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟ ಮಲಯಾಳಿ ನಾಟಕ ಚರಿತ್ರಪುಸ್ತಕತಿಲೆಕ್ಕು ಒರೇಡು. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಗುರುನಾನಕ ಭವನದಲ್ಲಿ ಆಯೋಜಿಸಿದ 10 ದಿನಗಳ ದಕ್ಷಿಣ ಭಾರತ ರಂಗೋತ್ಸವದಲ್ಲಿ ಎಪ್ರಿಲ್ 29ರಂದು ಪ್ರದರ್ಶನಗೊಂಡು ನೋಡುಗರಲ್ಲಿ ವಿಸ್ಮಯ ಮೂಡಿಸಿತು. ಟಿ.ವಿ.ಕೋಚುಬಾವರವರ ಉಪನ್ಯಾಸಂ ಕಥೆಂiiನ್ನು ಜೇಮ್ಸ್ ಎಲಿಯಾರವರು ರಂಗರೂಪಗೊಳಿಸಿದ್ದು ಜೋಸ್ ಕೋಶಿಯವರು ತಮ್ಮ ದಿ ಇನ್ವಿಸಿಬಲ್ ಲೈಟಿಂಗ್ ಸಲ್ಯೂಶನ್ಸ್ (ತ್ರಿಶೂರ್) ತಂಡವು ಈ ಮಲಯಾಳಿ ಭಾಷೆಯ ನಾಟಕವನ್ನು ನಿರ್ದೇಶಿಸಿದ್ದಾರೆ.

ಕಳೆದ ಕಾಲು ಶತಮಾನದಿಂದ ಮಲಯಾಳಿ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಹೊಸ ಬಗೆಯ ರಂಗಸಾಧ್ಯತೆಗಳನ್ನು ಅವಿಷ್ಕರಿಸಿ, ವಿಭಿನ್ನ ರಂಗಪರಿಭಾಷೆಯನ್ನು ಅನ್ವೇಷಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರುವ ಕೇರಳ ರಾಜ್ಯದ ತ್ರಿಶೂರಿನ ದಿ ಇನ್ವಿಸಿಬಲ್ ಲೈಟಿಂಗ್ ಸಲ್ಯೂಶನ್ಸ್ ರಂಗತಂಡವು ಚರಿತ್ರಪುಸ್ತಕತಿಲೆಕ್ಕು ಒರೇಡು ನಾಟಕದ ಮೂಲಕ ಪರ್ಯಾಯ ರಂಗಪರಿಭಾವಗಳ ಅರ್ಥಪೂರ್ಣ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ. ಇಡೀ ನಾಟಕ ಪ್ರೇಕ್ಷಕರನ್ನು ಅರ್ಧ ಶತಮಾನದ ಹಿಂದಿನ ಕಾಲಕ್ಕೆ ಕರೆದುಕೊಂಡು ಹೋಗಿ ಭಾಷೆಯ ಅರಿವಿಲ್ಲದವರಿಗೂ ಸಹ ರಂಗಾನುಭವವನ್ನು ಕೊಡುವಲ್ಲಿ ಸಫಲವಾಗಿದೆ.

ಈಗಿನ ಹೊಸ ತಲೆಮಾರಿನವರಿಗೆ ಗೊತ್ತೇ ಇಲ್ಲದ, ಪ್ರಸ್ತುತ ಐವತ್ತಕ್ಕೂ ಹೆಚ್ಚು ವಯಸ್ಸಾಗಿರುವ ತಲೆಮಾರಿನವರು ಮರೆಯಲು ಸಾಧ್ಯವೇ ಇಲ್ಲದ ಅಲೆಮಾರಿ ಪ್ರದರ್ಶಕರ ಸಾಹಸ ಕಲೆ ಸೈಕಲ್ ಸರ್ಕಸ್. ಅದನ್ನು ಮಲಯಾಳಂನಲ್ಲಿ ಸೈಕಲ್ ಯಜ್ಞಂ ಎಂದು ಕರೆಯುತ್ತಾರೆ. ಆಗ ಇನ್ನೂ ಟಿವಿ, ಸಿನೆಮಾಗಳಂತಹ ಮನರಂಜನೆಯ ಮಾಧ್ಯಮಗಳು ಸರ್ವವ್ಯಾಪಿಯಾಗಿರಲಿಲ್ಲ. ಸೈಕಲ್ ಕೌಶಲ್ಯಗಳ ಮೂಲಕ ವೈವಿದ್ಯಪೂರ್ಣವಾಗಿ ಗ್ರಾಮೀಣ ಜನರನ್ನು ಮನರಂಜಿಸುವ ಸೈಕಲ್ ಸಾಹಸ ಕಲೆ ಆಗ ತುಂಬಾ ಜನಪ್ರೀಯವಾಗಿತ್ತು. ಒಬ್ಬ ಕಲಾವಿದ ನೆಲಕ್ಕೆ ಕಾಲೂರದೇ ನಿಗದಿತ ವೃತ್ತದಲ್ಲಿ ಬ್ರೇಕಿಲ್ಲದ ಸೈಕಲ್ಲನ್ನು ವಾರಗಳ ಕಾಲ ನಿರಂತರವಾಗಿ ಓಡಿಸುತ್ತಾ, ಅನೇಕಾನೇಕ ಸರ್ಕಸ್‌ಗಳನ್ನು ಮಾಡುತ್ತಿದ್ದ. ಜೊತೆಗಾರರು ವಿವಿಧ ಸಾಹಸ, ನೃತ್ಯ, ಮ್ಯಾಜಿಕ್, ಹಾಸ್ಯಗಳನ್ನು ಮಾಡುತ್ತಾ ಜನರನ್ನು ರಂಜಿಸಿ ಊರಿನವರು ಇಷ್ಟ ಪಟ್ಟು ಕೊಟ್ಟಷ್ಟು ಕಾಣಿಕೆಯಲ್ಲಿ ಬದುಕು ಸಾಗಿಸುತ್ತಿದ್ದರು. ಮನರಂಜನೆಯ ಮಾಧ್ಯಮಗಳು ಬದಲಾದ ಹಾಗೆ ಈ ಸೈಕಲ್ ಯಜ್ಞ ಕಲೆಯೂ ಸಹ ಕಾಲಗರ್ಭಕ್ಕೆ ಸೇರಿ ಹೋಯಿತು. ಈ ಕಲೆಯನ್ನೇ ನಂಬಿ ಬದುಕುತ್ತಿದ್ದ ಅದೆಷ್ಟೋ ಕಲಾವಿದರ ಬದುಕು ಅತಂತ್ರವಾಯಿತು. ಈ ಎಲ್ಲಾ ಘಟನೆಗಳನ್ನು ಚರಿತ್ರಪುಸ್ತಕತಿಲೆಕ್ಕು ಒರೇಡು ನಾಟಕದಲ್ಲಿ ಬಲು ಮಾರ್ಮಿಕವಾಗಿ ತೋರಿಸಲಾಗಿದೆ.

ಕಲಾಪ್ರಕಾರವೊಂದು ಸೃಜಿಸುವ ವಿನೋದಾವಳಿಗಳ ಮೂಲಕ ಕಲೆಯನ್ನೇ ನಂಬಿ ಬದುಕಿದವರ ದುರಂತವನ್ನು ಕಟ್ಟಿಕೊಡುವ ಈ ನಾಟಕವು ನೋಡುಗರನ್ನು ರಂಜಿಸುತ್ತಲೇ ಕಲಾವಿದರ ಅವಸಾನದ ಚಿತ್ರಣಕ್ಕೆ ಪ್ರೇಕ್ಷಕರು ಮರುಗುವಂತೆ ಮಾಡಿದೆ. ನಾಟಕದ ವಸ್ತುವಿಗಿಂತಲೂ ಅದನ್ನು ನಿರೂಪಿಸಿ ತೋರಿಸಿದ ರೀತಿ ನಿಜಕ್ಕೂ ಅದ್ಬುತವೆನಿಸುವಂತಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳಂತೂ ದೃಶ್ಯದಿಂದ ದೃಶ್ಯಕ್ಕೆ ಕುತೂಹಲವನ್ನು ಹೆಚ್ಚಿಸುವಂತೆ ಮೂಡಿಬಂದಿದೆ. ಇಡೀ ರಂಗತಂಡದ ಪೂರ್ವಸಿದ್ಧತೆ ಹಾಗೂ ಕಲಾವಿದರುಗಳ ರಂಗಬದ್ಧತೆ ನಾಟಕದಾದ್ಯಂತ ಪ್ರತಿಫಲಿಸಿದೆ. ನಾಟಕರಂಗ ತನ್ನ ರೂಢಿಗತ ಚೌಕಟ್ಟನ್ನು ಬಿಟ್ಟು ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಬೇಕಾದ ಸಂಕ್ರಮಣದ ಕಾಲಘಟ್ಟದಲ್ಲಿ ಈ ಮಲಯಾಳಿ ನಾಟಕ ಮಾದರಿಯಂತಿದೆ.


ಕೇವಲ ಸೈಕಲ್ ಕಲೆಯ ಕೌಶಲವನ್ನಷ್ಟೇ ತೋರಿಸಿದ್ದರೆ ಈ ನಾಟಕವೊಂದು ಸರ್ಕಸ್ ಆಗಬಹುದಾದ ಅಪಾಯವಿತ್ತು. ಇಲ್ಲವೇ ಬೀದಿ ಬದಿಯ ದೊಂಬರಾಟವಾಗುವ ಸಾಧ್ಯತೆ ಇತ್ತು. ಆದರೆ... ನಾಟಕದ ಚೌಕಟ್ಟಿನಲ್ಲಿ ಬೀದಿಕಲೆಯೊಂದನ್ನು ಕಲಾತ್ಮಕವಾಗಿ ಹೇಳುವ ರೀತಿ ಅನನ್ಯವಾಗಿ ಮೂಡಿಬಂದಿದೆ. ಇತಿಹಾಸದಲ್ಲಿ ನಶಿಸಿ ಹೋದ ಕಲೆಯೊಂದನ್ನು ಚರಿತ್ರೆಯ ಪುಟಗಳಿಂದ ಹೆಕ್ಕಿ ತೆಗೆದು ನಾಟಕ ರೂಪದಲ್ಲಿ ನಿರೂಪಿಸಿದ ನಿರ್ದೇಶಕನ ಪರಿಶ್ರಮ ನಿಜಕ್ಕೂ ಅಭಿನಂದನಾರ್ಹ.

ಈ ನಾಟಕ ರಂಗತಂತ್ರಗಳಿಂದ ಶ್ರೀಮಂತವಾಗಿದೆಯಾದರೂ ಕೇವಲ ನಿರ್ದೇಶಕನ ನಾಟಕವಾಗಿಲ್ಲ, ನಟರೊಳಗಿನ ಅಭಿನಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆಯಾದರೂ ಇದು ಕೇವಲ ಕಲಾವಿದರ ನಾಟಕವಲ್ಲ. ನಿರ್ದೇಶಕನ ತಂತ್ರಗಾರಿಕೆ ಹಾಗೂ ಕಲಾವಿದರ ಸಾಮರ್ಥ್ಯ ಇವೆರಡೂ ಹದವಾಗಿ ಸಮ್ಮಿಶ್ರಣಗೊಂಡು ನಿಜವಾದ ನಾಟಕವಾಗಿ ಪ್ರದರ್ಶನಗೊಂಡಿದೆ. ಈ ನಾಟಕದಲ್ಲಿ ನಾಯಕ ನಾಯಕಿ ಖಳನಾಯಕ ಎನ್ನುವ ಪರ್ಟಿಕ್ಯೂಲರ್ ಪಾತ್ರಗಳೇ ಇಲ್ಲ. ಯಾವ ಪಾತ್ರವೂ ಮುಖ್ಯವಲ್ಲ, ಇನ್ಯಾವ ಪಾತ್ರವೂ ಅಮುಖ್ಯವಲ್ಲ. ಎಲ್ಲಾ ನಟರಿಗೂ ತಮ್ಮ ಪ್ರತಿಭೆ ಸಾಬೀತುಪಡಿಸುವ ಅವಕಾಶ ಸಿಕ್ಕಿದೆ, ಹೀಗಾಗಿ ನಾಟಕವು ನೋಡುಗರ ಅನುಭವಕ್ಕೆ ದಕ್ಕಿದೆ. ನಿರ್ದೇಶಕ ಹಾಗೂ ಕಲಾವಿದರ ಸಕ್ರೀಯವಾದ ಕ್ರಿಯಾಶೀಲ ಕೊಡುಗೆಯಿಂದಾಗಿ ಈ ಮಲಯಾಳಿ ನಾಟಕ ಯಶಸ್ವಿಯಾಗಿದೆ.

ನಾಟಕದಲ್ಲಿ ಮನರಂಜನೆಯ ಅಂಶಗಳು ಹೇರಳವಾಗಿವೆ. ಮಾತಲ್ಲಿರುವ ಪಂಚ್‌ಗಳು, ಅದನ್ನು ಹೇಳುವ ನಟರ ಟೈಮಿಂಗ್ ಹಾಗೂ ಕಲಾವಿದರ ದೇಹಭಾಷೆ ಅಚ್ಚರಿ ಹುಟ್ಟಿಸುವಷ್ಟು ಸೊಗಸಾಗಿ ಮೂಡಿಬಂದಿವೆ. ಸಾಮಾನ್ಯರಂತೆ ಕಾಣುವ ನಟರ ಅಸಾಮಾನ್ಯ ನಟನಾ ಕೌಶಲ್ಯ ನೋಡುಗರ ಮನಸೂರೆಗೊಂಡಿದ್ದಂತೂ ಸುಳ್ಳಲ್ಲ. ಯಾವ ದೃಶ್ಯವೂ ಮೆಲೋಡ್ರಾಮಾ ಎನ್ನಿಸದೇ, ಯಾರ ಅಭಿನಯವೂ ಕೃತಕವೆಂದು ತೋರದೇ ಚರಿತ್ರೆಯ ಪುಟದ ಘಟನೆಗಳು ನೈಜ ನಟನೆಯ ಮೂಲಕ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುವುದನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಧನ್ಯರಾದರು. ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಊಹೆಯನ್ನು ಮೀರಿ ಸನ್ನಿವೇಶಗಳು ಸೃಷ್ಟಿಗೊಂಡು ವಿಸ್ಮಯವನ್ನು ಹುಟ್ಟಿಸುವುದನ್ನು ನೋಡುವುದೇ ಚೆಂದ. ಭರತಮುನಿಯ ನಾಟ್ಯಶಾಸ್ತ್ರದ ಅಭಿನಯ ಪ್ರಕಾರಗಳಾದ ಆಂಗಿಕ, ವಾಚಿಕ, ಆಹಾರ್ಯ ಹಾಗೂ ಸಾತ್ವಿಕ ಈ ಎಲ್ಲಾ ವಿಭಾಗಗಳನ್ನೂ ಕಲಾವಿದರು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಹೃದ್ಯಗೊಳಿಸಿದ್ದಾರೆ. ಈ ಮೂಲಕ ಮಲಯಾಳಿ ರಂಗಭೂಮಿಯನ್ನು ಸಮೃದ್ದಗೊಳಿಸಿದ್ದಾರೆ.

ಕಲಾವಿದರ ನಟನೆಗೆ ಪೂರಕವಾಗಿ ಬೆಳಕು ಹಾಗೂ ಸಂಗೀತಗಳು ಸ್ಪಂದಿಸಿ ದೃಶ್ಯಕ್ಕೆ ಅಗತ್ಯವಾದ ಮೂಡ್ ಸೃಷ್ಟಿಸುವಲ್ಲಿ  ಬಹುದೊಡ್ಡ ಕೊಡುಗೆ ನೀಡಿದವು. ಸ್ವತಃ ರಂಗಬೆಳಕಿನ ವಿನ್ಯಾಸಕರಾಗಿ ಹೆಸರು ಮಾಡಿದ ಜೋಸ್ ಕೋಶಿರವರು ಈ ನಾಟಕದಲ್ಲಿ ಮಾಡಿದ ಬೆಳಕಿನ ಬಣ್ಣಗಳ ಸಂಯೋಜನೆ ಲೈಟ್ ಡಿಸೈನರ್‌ಗಳಿಗೆ ಮಾದರಿಯಾಗುವಂತಿದೆ. ಮಂದ ಬೆಳಕಿನಲ್ಲೂ ದೃಶ್ಯಗಳು ಮೂಡುವ ಪರಿಯನ್ನು ನೋಡಿಯೇ ಸವಿಯಬೇಕು.

ಐವತ್ತರ ದಶಕದ ಕಾಸ್ಟೂಮ್ಸ್ ಹಾಗೂ ಪರಿಕರಗಳನ್ನು ಅತ್ಯಂತ ಜಾಣ್ಮೆಯಿಂದ ಬಳಸಲಾಗಿದೆ. ಕಲಾವಿದರು ಬಳಸುವ ಕಲರ್ ದಿರುಸುಗಳು  ಬಣ್ಣದ ಬೆಳಕಿನ ಜೊತೆಗೆ ಮಿಳಿತವಾಗಿ ರಂಗದಮೇಲೆ ಬಣ್ಣಬಣ್ಣದ ಲೋಕವನ್ನು ಸೃಷ್ಟಿಸಿದಂತಿದೆ. ದ್ವನಿ ಬೆಳಕಿನ ಸೌಲಭ್ಯವಿರುವ ರಂಗಮಂದಿರವನ್ನು ಬಿಟ್ಟು ಬಟಾಬಯಲಲ್ಲಿ ಸೆಟ್ ಹಾಕಿ ಹೊರಾಂಗಣದಲ್ಲಿ ನಾಟಕ ಮಾಡಿ ತೋರಿಸಿದ್ದು ಈ ರಂಗತಂಡದ ರಂಗನಿಷ್ಟೆಗೆ ಸಾಕ್ಷಿಯಾಗಿದೆ. ಯಾಕೆಂದರೆ.. ಈ ಸೈಕಲ್ ಯಜ್ಞ ಕಲಾ ಪ್ರದರ್ಶನ ನಡೆಯುತ್ತಿದ್ದುದೇ ಜನಸೇರುವ ಬಯಲಲ್ಲಿ. ಒಳಾಂಗಣದಲ್ಲಿ ಮಾಡಿದರೆ ಆ ಬಯಲಿನ ಎಫೆಕ್ಟ್ ಬರಲು ಸಾಧ್ಯವಿಲ್ಲ ಎಂದು ಮನಗಂಡ ನಿರ್ದೇಶಕರು ಬಯಲಲ್ಲೇ ನಾಟಕದ ನೆಪದಲ್ಲಿ ಇತಿಹಾಸದ ಸನ್ನಿವೇಶವನ್ನು ಮರುಸೃಷ್ಟಿಸಿ ನಿಜವಾದ ಅರ್ಥದಲ್ಲಿ ಅಲೆಮಾರಿ ಕಲಾವಿದರ ಚರಿತ್ರೆಯ ಪುಟವನ್ನು ತೆರೆದಿಟ್ಟರು. ಪ್ರೇಕ್ಷಕರೂ ಸಹ ತಾವು ನಾಟಕ ನೋಡುತ್ತಿದ್ದೇವೆಂಬುದು ಮರೆತು ಸೈಕಲ್ ಯಜ್ಞದ ಸನ್ನಿವೇಶದ ಭಾಗವಾದರು.   

ಇಷ್ಟೆಲ್ಲಾ ಚೆಂದದ ನಾಟಕವನ್ನು ಕಟ್ಟಿಕೊಟ್ಟ ನಿರ್ದೇಶಕರು ಅದ್ಯಾಕೋ ಕೊನೆಕೊನೆಗೆ ಅನಗತ್ಯವಾಗಿ ಎಳೆದು ಒಂದಿಷ್ಟು ಬೋರ್ ಹೊಡೆಸಿದ್ದಾರೆ. ಮೊಟ್ಟೆ, ಕೋಳಿ ವ್ಯಾಪಾರದ ದೃಶ್ಯ ತೆಗೆದಿದ್ದರೂ ನಾಟಕಕ್ಕೇನೂ ಹಾನಿಯಾಗುತ್ತಿರಲಿಲ್ಲ. ಜೋಕರ್ ವೇಷದಾರಿಗಳ ಮಾತುಗಳು ಅತಿಯಾಗಿ ಏಕತಾನತೆಯನ್ನುಂಟು ಮಾಡಿದವು. ನಾಟಕದ ವೇಗಕ್ಕೆ ಅಡ್ಡಿಯಾಗುವಂತಹ ಆರಂಭದ ಅನಗತ್ಯ ದೃಶ್ಯಗಳನ್ನು ಎಡಿಟ್ ಮಾಡಿದ್ದರೆ ಚರಿತ್ರಪುಸ್ತಕ... ನಾಟಕವು ರಂಗಚರಿತ್ರೆಯಲ್ಲಿ ಹೊಸ ದಾಖಲೆಯನ್ನು ಬರೆಯಬಹುದಾಗಿದೆ. ಕನ್ನಡ ರಂಗಭೂಮಿಯ ಯುವ ನಿರ್ದೇಶಕರುಗಳು, ನೇಪತ್ಯ ಕಲಾವಿದರುಗಳು ಹಾಗೂ ನಟರುಗಳು ತಮ್ಮ ಕಲಿಕೆಯ ಭಾಗವಾಗಿ ಈ ನಾಟಕವನ್ನು ಒಂದು ಸಲ ನೋಡುವುದುತ್ತಮ. ಪ್ರಸ್ತುತ ತಲೆಮಾರಿನ ರಂಗಕರ್ಮಿಗಳು ಈ ನಾಟಕದ ರಂಗಸಾಧ್ಯತೆಗಳಿಂದ ಸ್ಪೂರ್ತಿ ಪಡೆದು ಕನ್ನಡ ರಂಗಭೂಮಿಯಲ್ಲೂ ಹೊಸಪರಿಕಲ್ಪನೆಗಳನ್ನು ಸೃಜಿಸಲು ಪ್ರೇರಣೆಯನ್ನು ಪಡೆಯಬಹುದಾಗಿದೆ.


ಸಾಕಷ್ಟು ರಂಜಿಸುವ ಈ ನಾಟಕವು ತನ್ನ ಕೊಟ್ಟಕೊನೆಯ ದೃಶ್ಯದಲ್ಲಿ ಹುಟ್ಟಿಸುವ ವಿಷಾದದ ಅಲೆ ಪ್ರೇಕ್ಷಕರ ಮನಸ್ಸನ್ನು ಕಾಡದೇ ಇರದು.  ಆಧುನಿಕ ಮನರಂಜನಾ ಮಾಧ್ಯಮದ ದಾಳಿಯನ್ನು ಎದುರಿಸಲು ಈ  ಅಲೆಮಾರಿ  ಕಲಾವಿದರು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ತಮ್ಮ ಕಲೆಯಿಂದ ವಿಮುಖರಾದ ಜನರನ್ನು ಸೆಳೆದುಕೊಳ್ಳಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಬದುಕಿಗಾಗಿ ಕಲೆಯನ್ನು ಉಳಿಸಿಕೊಳ್ಳಲು ತಮ್ಮ ಸಾಮರ್ಥ್ಯವನ್ನು ಮೀರಿ ಭೂಮಿಯೊಳಗೆ ಎರಡು ಗಂಟೆಯ ಬದಲಾಗಿ ಆರುಗಂಟೆ ಭೂಗತವಾಗುವ ಸಾಹಸಕ್ಕೆ ಇಳಿದ ಕಲಾವಿದನೊಬ್ಬ ಅಸುನೀಗುತ್ತಾನೆ.  ಆತನ ಸಾವಿನೊಂದಿಗೆ ಅಲೆಮಾರಿ ಕಲೆಯೊಂದು ಕಾಲವಶವಾಗುತ್ತದೆ. ತಮ್ಮ ಬದುಕಿನ ಸಂಕೇತವಾದ ಸೈಕಲ್ಲಿಗೆ ಬೆಂಕಿ ಹಚ್ಚಿ, ಸತ್ತವನ ಶವ ಹೊತ್ತು ಸಾಗುವ  ಕಲಾವಿದರ ಮೂಕವೇದನೆ ನೋಡುಗರ ಕಣ್ಣಲ್ಲಿ ನೀರಾಗುತ್ತದೆ. ವಿಷಾದ ಎಲ್ಲರೆದೆಯಲ್ಲಿ ಮಡುಗಟ್ಟುತ್ತದೆ. ವಿನೋದದ ಮೂಲಕ ವಿಷಾದವನ್ನು ಹೇಳುವ ತನ್ನ ಆಶಯದಲ್ಲಿ ಈ ವಿಶಿಷ್ಟ ರಂಗಪ್ರಯೋಗ ಯಶಸ್ವಿಯಾಗುತ್ತದೆ. ಚರಿತ್ರೆ ಪುಸ್ತಕದಲ್ಲಿ ಮರೆತು ಮರೆಯಾಗಿ ಹೋದ ಅಲೆಮಾರಿ  ಕಲೆಯೊಂದನ್ನು ನಾಟಕದ ಮೂಲಕ ಅನಾವರಣಗೊಳಿಸಿದ ನಿರ್ದೇಶಕರು ನಿಜಕ್ಕೂ ಅಭಿನಂದನಾರ್ಹರು. ಇಂತಹ ವಿಭಿನ್ನ ನಾಟಕವನ್ನು ಬೆಂಗಳೂರಿಗೆ ಆಹ್ವಾನಿಸಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಎನ್‌ಎಸ್‌ಡಿ ಬೆಂಗಳೂರು ಕೇಂದ್ರಕ್ಕೆ ಧನ್ಯವಾದ ಹೇಳಲೇಬೇಕಿದೆ.     

                                                                  - ಶಶಿಕಾಂತ ಯಡಹಳ್ಳಿ       

     





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ