ಗುರುವಾರ, ಜನವರಿ 31, 2019

“ಗಾಂಧಿ ಪಾರ್ಕ”ಲ್ಲಿ ಬಂಧಿಯಾದ ಮಹಾತ್ಮನ ತತ್ವಾದರ್ಶಗಳು :






ಜನವರಿ 30 ಮಹಾತ್ಮಾ ಗಾಂಧಿಯವರನ್ನು ಕೊಂದ ದಿನ. ಈ ದಿನ ಅನೇಕರು ಅನೇಕ ರೀತಿಯಲ್ಲಿ ಗಾಂಧಿ ಸ್ಮರಣೆಯನ್ನು ಮಾಡುತ್ತಾರೆ. ಆದರೆ.. ವಿಜಯನಗರ ಬಿಂಬದವರು ಮಕ್ಕಳಿಂದ ಗಾಂಧಿ ಪಾರ್ಕ ನಾಟಕವನ್ನು ಪ್ರದರ್ಶಿಸುವ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತವನ್ನು ಹೇಗೆಲ್ಲಾ ಕೊಲೆ ಮಾಡಲಾಗಿದೆ ಎನ್ನುವುದನ್ನು ರಂಗಪ್ರಯೋಗದ ಮೂಲಕ ತೋರಿಸುವ ಸ್ತುತ್ಯಾರ್ಹ ಕೆಲಸವನ್ನು ಮಾಡಿದೆ. ಗಾಂಧೀಜಿಯವರು ಮನುಕುಲಕೆ ಕೊಟ್ಟ ಸತ್ಯ, ನ್ಯಾಯ ಹಾಗೂ ಅಹಿಂಸೆಯೆಂಬ ಮಾನವೀಯ ಮೌಲ್ಯಗಳು ಅದು ಹೇಗೆ ವಿಕೃತಗೊಂಡು ಅನ್ಯಾಯ ಹಿಂಸೆಗಳು ವಿಜ್ರಂಭಿಸುತ್ತಿವೆ ಎಂಬುದನ್ನು ವಿಡಂಬನಾತ್ಮಕವಾಗಿ ತೋರಿಸುವ ಒಂದು ಪ್ರಯತ್ನವೇ ಗಾಂಧಿ ಪಾರ್ಕ ನಾಟಕ.

ಡಾ.ಕಶ್ಯಪ್‌ರವರು ರಚಿಸಿ ನಿರ್ದೇಶಿಸಿದ ಈ ನಾಟಕವನ್ನು ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದ ಮಕ್ಕಳು ಜನವರಿ 30ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿ ನೋಡುಗರನ್ನು ವಿಸ್ಮಯಗೊಳಿಸಿದರು. ಗಾಂಧೀಜಿಯವರ ಮೂರು ಕೋತಿಗಳ ಸಾಂಕೇತಿಕ ತತ್ವಾದರ್ಶಗಳ ಉಪಮೇಯವನ್ನೇ ನಾಟಕದ ಕೇಂದ್ರವಾಗಿಟ್ಟುಕೊಂಡು ವರ್ತಮಾನದ ವ್ಯಾಪಾರೀಕರಣದ ದುರಂತಗಳನ್ನು ಮಕ್ಕಳು ನಾಟಕವಾಗಿಸಿ ತೋರಿಸಿ ಬೆರಗನ್ನು ಸೃಷ್ಟಿಸಿದರು.


ಮಕ್ಕಳ ನಾಟಕ ಅಂದರೆ ಅಲ್ಲಿ ಪ್ಯಾಂಟಸಿ ಇರಬೇಕು, ಪ್ರಾಣಿ ಗಿಡಮರ ಹೂ ಹಕ್ಕಿಗಳು ಮನುಷ್ಯರಂತೆ ಮಾತಾಡಬೇಕು, ಮಕ್ಕಳ ಅಮೂರ್ತ ಕಲ್ಪನೆಗಳು ರಂಗದಂಗಳದಲ್ಲಿ ಸಾಕಾರಗೊಳ್ಳಬೇಕು ಎನ್ನುವುದಕ್ಕೆ ಹೇಳಿ ಮಾಡಿಸಿದ ನಾಟಕ ಇದು. ನಿರ್ದೇಶಕ ಕಶ್ಯಪ್‌ರವರು ರಂಗದ ಮೇಲೆ ಒಂದು ಪ್ಯಾಂಟಸಿ ಲೋಕವನ್ನೇ ಸೃಷ್ಟಿಸಿದ್ದು, ನಾಟಕ ಮಾಡುವ ಮಕ್ಕಳು ಹಾಗೂ ನೋಡುವ ಪೋಷಕರನ್ನು ಊಹಾ ಲೋಕಕ್ಕೆ ಕರೆದುಕೊಂಡು  ಹೋಗಿದ್ದಾರೆ. ಕೆಲವೊಮ್ಮೆ ದೊಡ್ಡವರಿಗೆ ಬಾಲಿಷ ಎನ್ನಿಸಬಹುದಾದ ಸಂಗತಿಗಳು ಮಕ್ಕಳ ದೃಷ್ಟಿಕೋನದಲ್ಲಿ ರಮ್ಯತೆಯನ್ನು ಪಡೆದುಕೊಳ್ಳುತ್ತವೆ. ಆ ರಮ್ಯತೆಯನ್ನು ಹೇಳುತ್ತಲೇ ಒಂದಿಷ್ಟು ತತ್ವಾದರ್ಶಗಳನ್ನು ಹೇಳುವಲ್ಲಿ ಈ ನಾಟಕ ಯಶಸ್ವಿಯಾಗಿದೆ.

ಆ ಗಾಂಧಿ ಪಾರ್ಕ ತುಂಬಾ ಮಕ್ಕಳ ಕಲರವ. ಅದಕ್ಕೊಬ್ಬ ಕಾವಲುಗಾರ. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಅಣ್ಣನೊಬ್ಬ ತನ್ನ ತಂಗಿಯೊಂದಿಗೆ ರಾತ್ರಿ ಪಾರ್ಕಲ್ಲಿ ಬಂದು ಅಡಗಿಕೊಳ್ಳುತ್ತಾನೆ. ಪೊಲೀಸ್ ಅಧಿಕಾರಿಯೊಬ್ಬನ ಹೆಂಡತಿಯ ಚಪ್ಪಲಿಗಳನ್ನು ಕದ್ದ ಆತ ಅವುಗಳನ್ನು ಮಾರಿ ಹಸಿವೆಯನ್ನು ನೀಗಿಸಿಕೊಳ್ಳಲು ಬಯಸುತ್ತಾನೆ. ಅಧಿಕಾರಿ ಚಪ್ಪಲಿ ಹುಡುಕಲು ಪೊಲೀಸ್ ಪೇದೆಯನ್ನು ಪಾರ್ಕಲ್ಲಿ ಬಿಡುತ್ತಾನೆ. ಪಾರ್ಕಿನಲ್ಲಿ ಕಣ್ಣು, ಕಿವಿ, ಹಾಗೂ ಬಾಯಿಯನ್ನು ಮುಚ್ಚಿಕೊಂಡು ಕುಳಿತ ಮೂರು ಕೋತಿಗಳ ಕಲ್ಲಿನ ಪ್ರತಿಮೆಗಳು ಜೀವತಳೆಯುತ್ತವೆ. ಚಪ್ಪಲಿ ಕದಿಯೋದು ತಪ್ಪು ಅದನ್ನು ವಾಪಸ್ ಕೊಡು, ಒಳ್ಳೇತನ ಯಾವಾಗಲೂ ಕಾಪಾಡುತ್ತದೆ ಎಂದು ಹಳ್ಳಿ ಹುಡುಗನಿಗೆ ಹೇಳಿದಾಗ ಆತ ಪೊಲೀಸನಿಗೆ ಅವುಗಳನ್ನು ಒಪ್ಪಿಸುತ್ತಾನೆ. ಆದರೆ ಆ ಪೇದೆ ಹಾಗೂ ಕಾವಲುಗಾರ ಚಪ್ಪಲಿ ಕಳ್ಳತನದಲ್ಲಿ ಠಾಣೆಗೆ ಎಳೆದೊಯ್ಯಲು ಮುಂದಾಗುತ್ತಾರೆ. ಆಗ ಅಣ್ಣ ತಂಗಿಯರ ಆಗ್ರಹದಿಂದಾಗಿ ಸಾಕ್ಷಿ ಹೇಳಲು ಕಲ್ಲು ಕೋತಿಗಳು ಜೀವತಳೆಯುತ್ತವೆ. ಅದನ್ನು ನೋಡಿದ ಆ ಕಾವಲುಗಾರ ಹಾಗೂ ಪೇದೆ ಇಬ್ಬರೂ ಸೇರಿ ಕೋತಿಗಳನ್ನು ಸರಪಳಿಯಿಂದ ಬಂಧಿಸಿ ಬೀಗ ಹಾಕುತ್ತಾರೆ. ಕಲ್ಲು ಕೋತಿಗಳು ಜೀವಂತಗೊಂಡು ಜನರ ಮನರಂಜಿಸುವಂತೆ ಮಾಡುವುದನ್ನು ಪ್ರದರ್ಶಿಸಿ ಹಣ ಮಾಡಲು ಆ ಇಬ್ಬರೂ ಸಂಚು ರೂಪಿಸುತ್ತಾರೆ. ಕೋತಿಗಳು ಜೀವಂತವಾಗದೇ ಇದ್ದಾಗ ಜನರ ಆಕ್ರೋಶಕ್ಕೆ ಹೆದರಿ ಅವರು ಓಡಿ ಹೋಗುತ್ತಾರೆ. ಆದರೆ ಕೋತಿಗಳ ಸರಪಳಿ ಹಾಗೆಯೇ ಉಳಿಯುತ್ತದೆ. ದೊಡ್ಡವರಾದ ಮೇಲೆ ಈ ಕೋತಿಗಳನ್ನು ಸರಪಳಿಯ ಬಂಧನದಿಂದ ಬಿಡುಗಡೆ ಮಾಡಿರಿ ಎಂದು ಶಿಕ್ಷಕಿಯೊಬ್ಬಳು ಅಣ್ಣ ತಂಗಿಗಳಿಗೆ ಹೇಳುವ ಮೂಲಕ ನಾಟಕ ಮುಗಿಯುತ್ತದೆ.


ತನ್ನ ಕಾಯಕ ಮರೆತು ಸ್ವಾರ್ಥತನಕ್ಕೆ ಇಳಿದ ಚೌಕೀದಾರನು ಪೊಲೀಸ್ ವ್ಯವಸ್ಥೆಯೊಂದಿಗೆ ಸೇರಿ ಗಾಂಧೀ ತತ್ವಾದರ್ಶಗಳನ್ನು ಸಾರುವ ಮಂಗಗಳನ್ನು ತಮ್ಮಿಷ್ಟದಂತೆ ಆಡಿಸಿ ಜನರನ್ನು ಮರುಳುಗೊಳಿಸಿ ಲಾಭಗಳಿಸುವ ಸಂಚನ್ನು ರೂಪಿಸುವಂತಹ ಚಿತ್ರಣವೇ ಈ ನಾಟಕದ ತಿರುಳು. ಪ್ರಸ್ತುತ ನಮ್ಮ ದೇಶವನ್ನು ಆಳುವ ಚೌಕೀದಾರರೂ ಮಾಡುತ್ತಿರುವುದೂ ಸಹ ಇದನ್ನೇ ಎನ್ನುವುದರ ರೂಪಕವಾಗಿ ಈ ನಾಟಕ ಮೂಡಿಬಂದಂತಿದೆ. ಬೇಲಿಯೇ ಎದ್ದು  ಹೊಲ ಮೇಯುವ ಕಾಯಕವನ್ನು ನಮ್ಮ ದೇಶವನ್ನಾಳುವವರು ಮಾಡುತ್ತಲೇ ಇದ್ದಾರೆ. ಗಾಂಧೀಜಿಯ ತತ್ವಾದರ್ಶಗಳನ್ನು ಬರೀ ಮಾತುಗಳಲ್ಲಿ ಪ್ರದರ್ಶಿಸಿ ಜನರನ್ನು ಯಾಮಾರಿಸುತ್ತಾ ದೇಶ ಲೂಟಿ ಮಾಡುವ ಹುನ್ನಾರವನ್ನು ಮಾಡುತ್ತಿದ್ದಾರೆ. ಏನನ್ನೋ ತೋರಿಸುತ್ತೇನೆಂದು ಭರವಸೆ ಕೊಟ್ಟು ಏನನ್ನೂ ತೋರಿಸದೇ ಹೋದಾಗ, ಅಲ್ಲಿ ನೆರೆದ ಪ್ರೇಕ್ಷಕರು ಚೌಕೀದಾರರ ವಿರುದ್ಧ ತಿರುಗಿ ಬಿದ್ದಾಗ ಆ ಸಂಚುಕೋರರು ಲೂಟಿ ಮಾಡಿದ ಹಣದ ಸಮೇತ ಓಡಿಹೋಗುತ್ತಾರೆ. ಕಾಕತಾಳೀಯವೆಂಬಂತೆ ಇದೇ ರೀತಿಯ ಘಟನೆಗಳೇ ಈಗ ನಮ್ಮ ದೇಶದಲ್ಲಿ ನಡೆಯುತ್ತಿವೆ. ಜನರನ್ನು ಯಾಮಾರಿಸಲು ಗಾಂಧೀ ತತ್ವಾದರ್ಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಜನರನ್ನು ಮೋಸಗೊಳಿಸುವ ಶಡ್ಯಂತ್ರವೇ ನಡೆಯುತ್ತಿದೆ. ಜನರು ಎಚ್ಚೆತ್ತುಗೊಂಡು ಆಳುವವರ ಕುತಂತ್ರಗಳನ್ನು ಅರ್ಥಮಾಡಿಕೊಂಡು ಜನದ್ರೋಹಿಗಳನ್ನು ಜನಾಂದೋಲನಗಳ ಮೂಲಕ ಓಡಿಸಬೇಕಾಗಿದೆ. ಈ ನಾಟಕವನ್ನು ಬಲು ಸೂಕ್ಷ್ಮವಾಗಿ ಅವಲೋಕಿಸಿದರೆ ದೇಶದಲ್ಲಿ ನಡೆಯುತ್ತಿರುವ ಆಳುವ ಚೌಕೀದಾರನ ಚಹರೆಗಳು ಗೋಚರವಾಗುವುದಂತೂ ಸುಳ್ಳಲ್ಲ.

ಜನರು ಒಗ್ಗಟ್ಟಾದರೆ ಈ ಲಾಭಕೋರ ಖದೀಮರನ್ನು ಓಡಿಸಬಹುದಾದರೂ ಗಾಂಧೀಜಿ ತತ್ವಗಳಿಗೆ ಹಾಕಿದ ಬಂಧನ ಬೀಗಗಳನ್ನು ತೆರವುಗೊಳಿಸುವವರು ಯಾರು? ಅದು ಈಗ ಸದ್ಯಕ್ಕೆ ಸಾಧ್ಯವಾಗದೇ ಇರುವುದರಿಂದ ಆ ಹೊಣೆಗಾರಿಕೆಯನ್ನೂ ಸಹ  ಮುಂದಿನ ಪ್ರಜೆಗಳಾದ ಇಂದಿನ ಮಕ್ಕಳ ಮೇಲೆಯೇ ಈ ನಾಟಕ ಹೊರೆಸುತ್ತದೆ. ದೊಡ್ಡವರಾದ ಮೇಲೆ ಗಾಂಧೀಜಿ ತತ್ವಗಳಿಗೆ ಹಾಕಿದ ಸರಪಳಿಗಳನ್ನು ತೆಗೆಯಬಹುದು ಎಂದು ಶಿಕ್ಷಕಿ ಮಕ್ಕಳಿಗೆ ಹೇಳುವ ಮೂಲಕ ನಾಟಕ ಕೊನೆಯಾಗುತ್ತದೆ. ಆಳುವವರ ಬಂಧನದಲ್ಲಿರುವ ಸತ್ಯ ನ್ಯಾಯ ಅಹಿಂಸೆಗಳನ್ನು ವಿಮೋಚನೆಗೊಳಿಸಬೇಕು ಎನ್ನುವ ಆಶಯವನ್ನು ಈ ನಾಟಕವಾಡುವ ಮಕ್ಕಳಿಗೆ ಹಾಗೂ ಅವರ ಮೂಲಕ ನಾಟಕ ನೋಡಲು ಬಂದ ಆ ಮಕ್ಕಳ ಪೋಷಕರಿಗೆ ಮನದಟ್ಟುಮಾಡುವ ಪ್ರಯತ್ನವನ್ನು ಈ ಪ್ಯಾಂಟಸಿ ನಾಟಕ ಮಾಡುತ್ತದೆ. ಮನರಂಜನೆಯ ಮೂಲಕ ಪ್ರಸ್ತುತ ಆಳುವ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ತೋರಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ.


ಒಳ್ಳೆಯದನ್ನು ಮಾಡಿದರೆ ಒಳಿತಾಗುತ್ತದೆ.. ಎಂಬ ಆದರ್ಶವನ್ನು ಹೇಳುವ ಒಂದೆಳೆ ಕಥೆಯ ಕ್ಯಾನ್ವಾಸಿಗೆ ಅನೇಕಾನೇಕ ಬಣ್ಣಗಳನ್ನು ತುಂಬಲಾಗಿದೆ. ಗಾಂಧಿ ಪಾರ್ಕಿನೊಳಗಿನ ರಾತ್ರಿ ಲೋಕವನ್ನು ಅನನ್ಯವಾಗಿ ಕಟ್ಟಿಕೊಡಲಾಗಿದೆ. ಸೈಕ್ ಬಳಸಿಕೊಂಡು ಹುಣ್ಣಿಮೆಯ ಬೆಳಕಿನ ಹೊನಲನ್ನು ಹರಿಸಲಾಗಿದೆ. ಮಾತಾಡುವ ಪ್ರಾಣಿ, ಕೀಟ, ಪುಷ್ಪ ಸರೀಸೃಪಗಳನ್ನು  ಸೃಷ್ಟಿಸಲಾಗಿದೆ. ಇದೆಲ್ಲವನ್ನೂ ನೋಡುವುದೇ ಒಂದು ಚೆಂದ. ಇದರ ಜೊತೆಗೆ ಪುಟ್ಟ ಮಕ್ಕಳ ಆಡಾಟಗಳನ್ನು ನೋಡುವುದೇ ಅಂದ. ಅಸಲಿ ಪಾರ್ಕನ್ನೇ ಹೋಲುವ ರಂಗಸಜ್ಜಿಕೆಯಿಂದಾಗಿ ದೃಶ್ಯವೈಭವಗಳಿಗೆ ಹೆಚ್ಚಿನ ಮೆರಗು ಬಂದು ಇನ್ನೂ ನಾಟಕ ಆಕರ್ಷನೀಯವೆನಿಸಿತು. ಅಭಿನಯದಲ್ಲಿ ಈ ಬಾಲನಟನಟಿಯರಿಗೆ ಇರುವ ಶಿಸ್ತು ಹಾಗೂ ಸಂಯಮ ಅನುಕರಣೀಯ. ಮಕ್ಕಳ ಅಭಿನಯಕ್ಕೆ ಪೂರಕವಾಗಿ ಬೆಳಕು ಹಾಗೂ ಹಿನ್ನೆಲೆ ಸಂಗೀತ ಕೊಟ್ಟ ಸಹಕಾರದಿಂದಾಗಿ ಇಡೀ ಗಾಂಧಿ ಪಾರ್ಕ ಮನಮೋಹಕವಾಗಿತ್ತು ಎನ್ನುವುದಂತೂ ಸುಳ್ಳಲ್ಲ.

ಹಿಂದುತ್ವವಾದಿಗಳು ಮಹಾತ್ಮಾ ಗಾಂಧೀಜಿಯನ್ನು ಕೊಂದ ಕರಾಳ ದಿನದಂದು ಗಾಂಧೀಜಿಯ ತತ್ವಾದರ್ಶಗಳಿಗೆ ಬೇಲಿ ಹಾಕಿ ಬೀಗ ಜಡಿದ ವ್ಯವಸ್ಥೆಯನ್ನು ರಂಗದಂಗಳದಲ್ಲಿ ಬೆತ್ತಲೆಗೊಳಿಸುವಂತಹ ಈ ಮಕ್ಕಳ ನಾಟಕವನ್ನು ಪ್ರದರ್ಶಿಸಿದ್ದು, ಆ ಮಹಾನ್ ಚೇತನಕ್ಕೆ ಸಲ್ಲಿಸುವ ನಿಜವಾದ ರಂಗಶ್ರದ್ದಾಂಜಲಿಯಾಗಿದೆ. ಇದಕ್ಕಾಗಿ ಶ್ರಮಿಸಿದ ವಿಜಯನಗರ ಬಿಂಬ ನಿಜಕ್ಕೂ ಅಭಿನಂದನಾರ್ಹವಾಗಿದೆ.

-ಶಶಿಕಾಂತ ಯಡಹಳ್ಳಿ  





 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ