ಬುಧವಾರ, ನವೆಂಬರ್ 6, 2013

ಕುವೆಂಪುರವರ ‘ಬಲಿದಾನ’ದಲ್ಲಿ ಸಾರ್ವಕಾಲಿಕ ದರ್ಶನ



ನಾಟಕ ವಿಮರ್ಶೆ :



        
 
                             ಬಲಿಪರಂಪರೆವೇಳ್ಕುಮೀ ಸ್ವಾತಂತ್ರ್ಯ ಸಾಧನೆಗೆ,
                             ಪಡೆಯೆ ಬಲಿದಾನಂ; ಪಡೆದುದ ಪಿಡಿಯೇ ಬಲಿದಾನಂ;
                             ಪಿಡಿದುದಂ ನಡೆಯೆ ಬಲಿದಾನಂ!  ಬಲಿದಾನಕುಂಟೆ ಕೊನೆ ?
                             ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ !

          ಮೇಲಿನ ಸಾಲುಗಳು ಇಡೀ ಬಲಿದಾನ ನಾಟಕದ ಅಂತಃಸತ್ವವಾಗಿದೆ. ಸ್ವಾತಂತ್ರ್ಯದ ಅಗತ್ಯತೆ ಮತ್ತು ಬಲಿದಾನದ ಅನಿವಾರ್ಯತೆಗಳನ್ನು ಕುವೆಂಪುರವರು ಬಲಿದಾನ ನಾಟಕದಲ್ಲಿ ನಿರೂಪಿಸಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಾಗೂ ಸಮಕಾಲೀನತೆ ಕಳೆದುಕೊಂಡ ಹಳೆಯ ವಸ್ತು-ವಿಷಯವನ್ನು ಹೊಂದಿರುವ ನಾಟಕವಿದೆಂದು ಜಾಗತೀಕರಣ ಕಾಲದ ನೋಡುಗರಿಗೆ ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಅದರ ಆಳಕ್ಕಿಳಿದು ಆಲೋಚಿಸಿದರೆ ಇದು ಕೇವಲ ನಾಟಕವಲ್ಲ ಅಪೂರ್ವವಾದ ದಾರ್ಶನಿಕ ರೂಪಕ ಎಂಬುದು ಅರಿವಾಗುತ್ತದೆ. ಕುವೆಂಪುರವರ ಪ್ರತಿಮಾತ್ಮಕ ದರ್ಶನ ಪ್ರಜ್ಞೆಯ ವಿರಾಟ ರೂಪ ರೂಪಕದಲ್ಲಿ ಹಾಸುಹೊಕ್ಕಾಗಿದೆ.
          ಭಾಷೆ ಮತ್ತು ನಿರೂಪಣೆಯಲ್ಲಿ ಕ್ಲಿಷ್ಟಕರವೆನಿಸುವ ಬಲಿದಾನ ನಾಟಕವನ್ನು ಚಂದ್ರಶೇಖರ್ ಪ್ರತಿಷ್ಠಾನವು ನಿರ್ಮಿಸಿದ್ದು ಮಹಾಂತೇಶ ದೇಗಾಂವಿ ನಿರ್ದೇಶಿಸಿದ್ದಾರೆ. ೨೦೧೩, ಆಗಸ್ಟ್ ೩೦ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಚಂದ್ರಶೇಖರ್ ಪ್ರತಿಷ್ಠಾನವು ಆಯೋಜಿಸಿದ್ದ ಕುವೆಂಪು ಸಂಸ್ಕೃತಿ ಚೇತನ ಕಾರ್ಯಕ್ರಮದಲ್ಲಿ ಬಲಿದಾನ ನಾಟಕವು ಪ್ರದರ್ಶನಗೊಂಡಿತು.
          ಬಲಿದಾನ ನಾಟಕದಲ್ಲಿ ಪ್ರಮುಖವಾಗಿ ಇರುವುದು ಎರಡೇ ಪಾತ್ರಗಳು. ಒಂದು ಭಾರತಮಾತೆ ಇನ್ನೊಂದು ಭರತಸುತ. ಅದಕ್ಕೆ ಪೂರಕವಾಗಿ ಎರಡು ಆತ್ಮ ಪಾತ್ರಗಳು ಹಾಗೂ ಒಂದು ಛಾಯಾದ್ವನಿ ಪಾತ್ರಗಳು ಸೃಷ್ಟಿಗೊಂಡಿವೆ. ಶಿಥಿಲಗೊಂಡ ಕಾಳಿಕಾಮಂದಿರದಲ್ಲಿ ಬಂಧಿಸಲ್ಪಟ್ಟ ಭಾರತಮಾತೆಯ ದುಸ್ಥಿತಿಗೆ ಆಕ್ರೋಶಗೊಂಡ ಭಾರತಸುತ ಆಕೆಯ ದಾಸ್ಯಸಂಕೋಲೆಯ ಕೀಲಿಕೈಯನ್ನು ತರಲು ಹೊರಡುತ್ತಾನೆ. ದೇಶಭಕ್ತರ ಬಲಿದಾನದಿಂದಾಗಿ ಪರಕೀಯರ ಜೊತೆ ಹೋರಾಡಿ ಸ್ವಾತಂತ್ರ್ಯ ಪಡೆದು ಬಂದು ಭಾರತಾಂಬೆಯ ಸಂಕೋಲೆಗಳನ್ನು ಕಳಚುತ್ತಾನೆ. ಮತ್ತೆ ಮತೀಯ ಗಲಭೆಗಳಿಂದಾಗಿ ಅಸಂಖ್ಯಾತ ಜನರ ಬಲಿಯಾಗಿದ್ದರಿಂದ ಭಾರತಮಾತೆ ತಳಮಳಿಸುತ್ತಾಳೆ. ಗಾಂಧೀಜಿಯ ಪ್ರಯತ್ನಕ್ಕೆ ಮೆಚ್ಚುವ ಭಾರತಮಾತೆ ಗಾಂಧಿ ಬಲಿದಾನದಿಂದ ತಲ್ಲಣಗೊಳ್ಳುತ್ತಾಳೆ. ಮತೀಯ ಸೌಹಾರ್ದತೆ ಇಲ್ಲದಿದ್ದರೆ ಸ್ವಾತಂತ್ರ್ಯ ಅರ್ಥಹೀನ ಎನ್ನುತ್ತಾಳೆ. ಭವಿಷ್ಯದ ಭಾರತವನ್ನು ಕಂಡು ಭಾರತಾಂಬೆ ದುಃಖಿತಳಾಗುತ್ತಾಳೆ. ಭಾರತೀಸುತನಿಗೆ ಮುಂದಾಗುವುದನ್ನೂ ಪ್ರತಿಮಾವಿಧಾನದಿಂದ ತೋರಿಸುತ್ತಾಳೆ.  ನೀಂ ಕಂಡ ದರ್ಶನದೊಳ್ ಅಖಿಳಾರ್ಥ ಮಂ ತಿಳಿದು ಕಾಣ್! ಸ್ವಾತಂತ್ರ್ಯ ಜೀವನಂ ಬಲಿಪರಂಪರೆಯೆಂಬುದಂ, ಬಲಿದಾನ ತತ್ತ್ವಮಂ, ಭಾವಿಸಿ ಮನಗಾಣ್! ಎಂಬ ಭಾರತಮಾತೆಯ ಸಾರ್ವಕಾಲಿಕ ಪ್ರಜ್ಞೆಯ ಮಾತುಗಳಿಂದ ನಾಟಕ ಕೊನೆಯಾಗುವ ಜೊತೆಗೆ ಸ್ವಾತಂತ್ರ್ಯ ಬೇಕು ಅಂದರೆ ಬಲಿದಾನಕ್ಕೆ ಸಿದ್ದರಾಗಲೇಬೇಕು ಎಂಬ ಸಾರ್ವತ್ರಿಕ ಸಂದೇಶವನ್ನು ಕೊಡುತ್ತದೆ.

          ಪ್ರಸ್ತುತಗೊಂಡ ಬಲಿದಾನವು ಒಂದು ಏಕಾಂಕ ನಾಟಕವೆಂದು ಅನ್ನಿಸಿದರೂ ಮೂರು ದೃಶ್ಯಗಳನ್ನು ಹೊಂದಿದೆ. ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ಮೂರು ದೃಶ್ಯಗಳು ಅನುಕ್ರಮವಾಗಿ ದರ್ಶಿಸುತ್ತವೆ. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯನಂತರದ ಭಾರತದ ಸನ್ನಿವೇಶಗಳನ್ನು ಸಾಂಕೇತಿಸುವ ಮೂರು ದೃಶ್ಯಗಳನ್ನು ಪ್ರತಿಮಾವಿಧಾನದಲ್ಲಿ ಕುವೆಂಪುರವರು ನಾಟಕವಾಗಿಸಿದ್ದಾರೆ. ಇಡೀ ನಾಟಕದಾದ್ಯಂತ ಪ್ರತಿಮೆಗಳೇ ರೂಪಕಗಳಾಗಿ ನೋಡುಗರನ್ನು ದಿಗ್ಬ್ರಮೆಗೊಳಿಸುತ್ತವೆ. ಪ್ರತಿಯೊಂದು ಸನ್ನಿವೇಶ ಹಾಗೂ ಸಂಭಾಷನೆಗಳನ್ನು ಅರ್ಥೈಸಿಕೊಳ್ಳುತ್ತಾ ಹೋದರೆ ರೂಪಕದ ಅನನ್ಯತೆ ಅರಿವಾಗುತ್ತದೆ.
          ಶಿಥಿಲಗೊಂಡ ಕಾಳಿಗುಡಿ ಸ್ವಾತಂತ್ರ್ಯಪೂರ್ವದ ಭಾರತದ ದುಸ್ಥಿತಿಯನ್ನು ತೋರಿದರೆ, ಯಾರು ನೀನು? ಎಂದು ಭಾರತಾಂಬೆಯನ್ನೇ ಪ್ರಶ್ನಿಸುವ ಭರತಸುತ ಗುಲಾಮಗಿರಿಯಲ್ಲಿ ಸ್ವಾತಂತ್ರ್ಯಪ್ರಜ್ಞೆಯನ್ನೇ ಮರೆತ ಭಾರತೀಯರ ಆಗಿನ ಮನಸ್ಥಿತಿಯನ್ನು ಸಂಕೇತಿಸುತ್ತಾನೆ. ‘‘ನನ್ನ ಮನೆಯಲ್ಲಿ ನಾನೇ ತೊತ್ತಾಗಿ ಬಿದ್ದಿರುವೆ!... ನಾನು ಹಳೆಯ ಕಾಲದ ಮುದುಕಿ ಎಂದು ತನ್ನ ಅಸಹಾಯಕತೆಯನ್ನು ಭಾರತಮಾತೆ ತೋಡಿಕೊಳ್ಳುವ ಮೂಲಕ ತನ್ನ ದುರಾವಸ್ಥೆಯನ್ನು ಹೇಳುತ್ತಾಳೆ. ಮುದುಕಿಯಾದರೂ ತರಳೆಯಂತೆ ತೋರುವುದು ಒಳಗಿರುವ ಬೆಳಕಿಂದ’’ ಎನ್ನುವ ಭಾರತಾಂಬೆಯ ಮಾತು ದೇಶದ ಆಂತರಿಕ ಶಕ್ತಿಯನ್ನು ತೋರುತ್ತದೆ.
          ಕಾಳಿ, ಶಿವೆ, ಶಕ್ತಿ ಎನ್ನುವುದನು ಮರೆತರು. ವೀರ ರೌದ್ರಗಳನ್ನು ಬಿಟ್ಟರು, ತಾಯನ್ನೇ ತೊತ್ತಾಗಿ ಕಂಡರು, ತಮ್ಮತನವನು ಸೂರೆಗೊಟ್ಟರು, ಅದರಿಂದ ಪಾಳ್ ಬಿದ್ದುದೀ ದೇಗುಲಂ ಎಂದು ಭರತಮಾತೆ ಹೇಳುವ ಮಾರ್ಮಿಕ ಮಾತುಗಳು ಸ್ವಾತಂತ್ರ್ಯ ಪೂರ್ವದಲ್ಲಿ ಎಷ್ಟು ಪ್ರಸ್ತುತವಾಗಿತ್ತು ಈಗಲೂ ಅಷ್ಟೇ ಮಹತ್ವದ್ದಾಗಿದೆ. ಯಾರು ತಮ್ಮ ಹೆತ್ತವ್ವನನ್ನು ಹೀನಾಯವಾಗಿ ಕಾಣುತ್ತಾರೋ,  ಯಾರು ಕಾಳೀ ಶಿವೆ ಶಕ್ತಿ ರೂಪಿನಿಯಾದ ಮಹಿಳೆಯರನ್ನು ತುಚ್ಚವಾಗಿ ನೋಡುತ್ತಾರೋ ಅವರ ಮನೆ ಹಾಳಾಗಿಹೋಗುತ್ತದೆ ಎಂಬರ್ಥದ ಜೊತೆಗೆ ಯಾರು ಸ್ವಾಭಿಮಾನವನ್ನು ಬಿಟ್ಟು ತಾಯ್ನಾಡನ್ನು ಮರೆಯುತ್ತಾರೋ ಅಂತವರ ದೇಶ ಹಾಳು ಬಿದ್ದ ದೇವಸ್ಥಾನ ಎಂದು ಅದ್ಭುತವಾದ ಹೋಲಿಕೆಯನ್ನು  ನಾಟಕ ಕಟ್ಟಿಕೊಡುತ್ತದೆ. ದೇಶವನ್ನು ದೈವತ್ವಕ್ಕೇರುಸುವ ಮೂಲಕ ದೇಶವಾಸಿಗಳ ಸ್ವಾಭಿಮಾನವನ್ನು  ಪ್ರಶ್ನಿಸುವ ಜೊತೆಗೆ ದೇಶಪ್ರೇಮ ಇಲ್ಲದಿದ್ದರೆ ಆಗುವ ದುಷ್ಪರಿಣಾಮದ ಬಗ್ಗೆ ಕುವೆಂಪುರವರು ಬಲಿದಾನದಲ್ಲಿ ಎಚ್ಚರಿಸಿದ್ದಾರೆ. ಈಗಲೂ ತಮ್ಮತನವನ್ನು ಬಿಟ್ಟು ವಿದೇಶಿ ಸಂಸ್ಕೃತಿ-ಸ್ವೇಚ್ಚಾಚಾರಗಳಿಗೆ ಮೋಹಪರವಷರಾದ ಅದೆಷ್ಟೋ ಭಾರತೀಯರು ಜಾಗತೀಕರಣದ ಬಲೆಯೊಳಗೆ ಬಿದ್ದು ತಮ್ಮತನವನು ಸೂರೆಗೊಟ್ಟಿದ್ದಾರೆ.  ಭರತಮಾತೆಯನ್ನು ತೊತ್ತಾಗಿ ನೋಡುತ್ತಿದ್ದಾರೆ. ಅಂತವರಿಗೆ ಬಲಿದಾನ ನಾಟಕದ ಸಾಲುಗಳು ಅರ್ಥವಾದಲ್ಲಿ ತಮ್ಮ ತಪ್ಪಿನ ಅರಿವಾಗದೇ ಇರದು.
          ಭಾರತವನ್ನು ಪರಕೀಯರು ಆಕ್ರಮಿಸಿಕೊಂಡು ಸಂಕೋಲೆಗಳಿಂದ ಬಂಧಿಸಿದರು ಎಂಬುದು ಸಾರ್ವತ್ರಿಕ ನಂಬಿಕೆ. ಆದರೆ ನಾಟಕದಲ್ಲಿ ಭರತಮಾತೆ ಮೂಲಕ ಕುವೆಂಪುರವರು ನಾನರಿಯೆ ಯಾರು ಹಾಕಿದರೆಂದು, ಪರಕೀಯರೆಂದೊಮ್ಮೆ ಯೋಚಿಸುವೆ, ನನ್ನವರೇ ಎಂದೊಮ್ಮೆ ಗೋಳಿಡುವೆ ಎಂದು ಹೇಳಿಸುತ್ತಾರೆ. ಪರಕೀಯರಿಗಿಂತ ಸ್ವದೇಶಿಯರನ್ನೇ ಇಲ್ಲಿ ಕಟುವಾಗಿ ಟೀಕಿಸಲಾಗಿದೆ. ಬೇರೆಯವರ ಬಗ್ಗೆ ಬರೀ ಯೋಚಿಸುವ ಭರತಮಾತೆ ತನ್ನ ಸಂಕೋಲೆಗೆ ತನ್ನವರೇ ಕಾರಣರಾದರಲ್ಲಾ ಎಂದು ಗೋಳಾಡುತ್ತಾಳೆ. ಕತ್ತಿ ವಿದೇಶಿಯದಾದರದು ನೋವೆ, ನಮ್ಮವರೆ ಹದನಾದ ಕತ್ತಿಯ ಹದವಾಗಿ ತಿವಿದರದು ಹೂವೆ? ಎಂಬರ್ಥದಲ್ಲಿ ತಮ್ಮ ಕವಿತೆಯೊಂದರಲ್ಲಿ ಕುವೆಂಪುರವರು ತುಂಬಾ ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಅದೇ ರೀತಿ ನಾಟಕದಲ್ಲೂ ಹಲವಾರು ಕಡೆ ಭಾರತೀಯರ ಸ್ವಾಭಿಮಾನವನ್ನು ಕೆಣಕುವ ಮೂಲಕ ಸ್ವಾತಂತ್ರ್ಯ ಬೇಕಿದ್ದರೆ  ಬಲಿದಾನ ಕೊಟ್ಟು ಪಡೆಯುವ ಅನಿವಾರ್ಯತೆಯನ್ನು ನಾಟಕದಾದ್ಯಂತ ಹೇಳುತ್ತಾರೆ. 
  
        ಆದರೆ... ಕುವೆಂಪುರವರ ಬಲಿದಾನ ರೂಪಕದ ಒಳಾರ್ಥಗಳು ನಿರ್ದೇಶಕರ ಗ್ರಹಿಕೆಗೆ ಪೂರ್ಣವಾಗಿ ದಕ್ಕಿಲ್ಲ. ರೂಪಕದ ಬಾಹ್ಯವನ್ನು ಮಾತ್ರ ಗ್ರಹಿಸಿದ ಅವರು ಅದರ ಆಂತರಿಕ ಪ್ರತಿಮಾ ಪ್ರಜ್ಞೆಯನ್ನು ಅವಜ್ಞೆಗೊಳಿಸಿದ್ದಾರೆ ಎಂಬ ಸಂದೇಹ ಬಾರದಿರದು. ಕುವೆಂಪುರವರು ತಮ್ಮ ರಂಗಪಠ್ಯದಲ್ಲಿ ರೂಪಕ ದರ್ಶನವನ್ನು ಕಾಣಿಸುತ್ತಾರೆ. ಆದರೆ ನಾಟಕ ಪ್ರದರ್ಶನದಲ್ಲಿ ಘಟನೆಗಳ ಪ್ರಸ್ತುತಿ ಕಾಣುತ್ತದೆ. ಕುವೆಂಪುರವರೇ ಹೇಳಿದ ಹಾಗೆ ಅವರ ನಾಟಕಗಳನ್ನು ಮನೋರಂಗಭೂಮಿಯಲ್ಲಿಯೇ ಸೃಷ್ಟಿಸಿ ದೃಷ್ಟಿಸಬೇಕು. ರಂಗದಂಗಳದಲ್ಲಿ ಪ್ರದರ್ಶಿಸಿದಾಗ ಅವರ ರೂಪಕ ದರ್ಶನದ ಆಯಾಮಗಳು ಮಿತಗೊಳ್ಳುತ್ತವೆ ಎಂಬುದು ಬಲಿದಾನ ನಾಟಕ ನೋಡಿದರೆ ಅನುಭವವಾಗುತ್ತದೆ. ಇಡೀ ನಾಟಕದಲ್ಲಿ ಆಂಗಿಕಾಭಿನಯಕ್ಕೆ ಕೊಟ್ಟಷ್ಟೇ ಮಹತ್ವವನ್ನು ಅಂತಃಸತ್ವ  ನಿರೂಪಣೆಗೆ ಕೊಟ್ಟಿದ್ದರೆ ಕುವೆಂಪುರವರ ನಾಟಕಕ್ಕೆ ಇನ್ನೂ ಹೆಚ್ಚು ನ್ಯಾಯವದಗಿಸಬಹುದಾಗಿತ್ತು. ಮಾತು ಮತ್ತು ಅಭಿನಯವನ್ನು ಮೀರಿದ ಪ್ರತಿಮಾವಿಧಾನ ಪ್ರಾಧಾನ್ಯತೆ ನಾಟಕ ಪ್ರಯೋಗಕ್ಕೆ ಅಗತ್ಯವಾಗಿದೆ.
          ಪ್ರಸ್ತುತಗೊಂಡ ನಾಟಕದಲ್ಲಿ ಮೂರೂ ದೃಶ್ಯಗಳನ್ನು ಒಂದೇ ಅಂಕದಲ್ಲಿ ತೋರಿಸಿಲಾಗಿದೆ. ಆದರೆ ಮೂರು ದೃಶ್ಯಗಳ ಸನ್ನಿವೇಶ ಭಿನ್ನವಾಗಿವೆ. ಕಾಲಘಟ್ಟದಲ್ಲಿಯೂ ವ್ಯತ್ಯಾಸವಿದೆ. ವ್ಯತ್ಯಾಸವನ್ನು ಬೆಳಕಿನ ತೀವ್ರತೆಯಲ್ಲಿ ಬದಲಾವಣೆ ಮಾಡುವ ಮೂಲಕ, ಸೆಟ್ ಪರಿಕರಗಳಲ್ಲಿ ವ್ಯತ್ಯಾಸ ಮಾಡುವ ಮೂಲಕ ತೋರಿಸಬಹುದಾಗಿತ್ತು. ರಂಗಪಠ್ಯದಲ್ಲಿ ೨ನೇ ದೃಶ್ಯದಲ್ಲಿ ಬೆಳಕು ಹೆಚ್ಚಾದಾಗ ಗೂಬೆಯೊಂದು ಕೂಗಿ ಹಾರಿಹೋಗುವುದನ್ನು ಬ್ರಿಟೀಷರೆಂಬ ಗೂಬೆಗಳು ತೊಲಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ಸಂಕೇತಾರ್ಥದಲ್ಲಿ ಕುವೆಂಪುರವರು ಹೇಳುತ್ತಾರೆ. ಆದರೆ ಪ್ರಮುಖವಾದ ಪ್ರತಿಮಾರೂಪಕ ದೇಗಾಂವಿಯವರ ನಾಟಕದಲ್ಲಿ ಇಲ್ಲವೇ ಇಲ್ಲ. ಸನ್ನಿವೇಶಕ್ಕೆ ತಕ್ಕ ಹಾಗೆ ಬೆಳಕನ್ನು ಬಳಸಿ ಇನ್ನೂ ಹಲವಾರು ಪ್ರತಿಮೆಗಳನ್ನು ಸೃಷ್ಟಿಸಬಹುದಾಗಿತ್ತು. ಆದರೆ ನಾಟಕದಾದ್ಯಂತ ಒಂದೇ ತೆರನಾದ ಸ್ಥಿರವಾದ ಸೆಟ್ ಮತ್ತು ಹೆಚ್ಚೇನು ವ್ಯತ್ಯಾಸವಿಲ್ಲದ ಬೆಳಕಿನ ವಿನ್ಯಾಸದಿಂದಾಗಿ ದೃಶ್ಯಗಳಲ್ಲಿ ಹಾಗೂ ಸನ್ನಿವೇಶಗಳಲ್ಲಿ ಯಾವುದೇ ವ್ಯತ್ಯಾಸ ಕಾಣದೇ ನೋಡುಗರು ಸಂಭಾಷಣೆಗಳನ್ನೇ ಅವಲಂಬಿಸಬೇಕಾಗಿತ್ತು. ಸಂಭಾಷಣೆಗಳೆಲ್ಲಾ ಸರಳರಗಳೆಯ ನಡುಗನ್ನಡದಲ್ಲಿರುವುದರಿಂದ ಜನಸಾಮಾನ್ಯ ಪ್ರೇಕ್ಷಕನಿಗೆ ಸುಲಭಕ್ಕೆ ಅರ್ಥವಾಗುವುದು ಸಾಧ್ಯವೂ ಇಲ್ಲಾ. ಹೀಗೆ ಭಾಷೆಯ ಸಂವಹನ ಸಮಸ್ಯೆಯಾದಾಗ ನಾಟಕದ ಪೂರಕ ಅಂಶಗಳ ಮೂಲಕ ಮೂಡ್ ಸೃಷ್ಟಿಸಬಹುದಾಗಿದೆ.
          ಪ್ರತಿಮಾಪ್ರಧಾನ ರೂಪಕವನ್ನು ಆಂಗಿಕಾಭಿನಯ ಪ್ರಧಾನ ನಾಟಕವಾಗಿಸುವಲ್ಲಿ ನಿರ್ದೇಶಕರು ಶ್ರಮಿಸಿದ್ದಾರೆ. ನೀನಾಸಂನಲ್ಲಿ ಅಭಿನಯದಲ್ಲಿ ಪಳಗಿದ ಸಿತಾರಾ ಇಡೀ ನಾಟಕದಾದ್ಯಂತ ತಮ್ಮ ಆಂಗಿಕಾಭಿನಯ ಪ್ರೌಢಿಮೆ ಮತ್ತು ಸ್ಪಷ್ಟವಾದ ವಾಚಿಕಾಭಿನಯದಿಂದಾಗಿ ಭಾರತಾಂಬೆಯಾಗಿ ಗಮನ ಸೆಳೆಯುತ್ತಾರೆ. ಭರತಸುತನಾಗಿ ಸಾಜಿದ್ ನಟನೆ ಪಾತ್ರೋಚಿತವಾಗಿತ್ತು.  ನೀನಾಸಂನಿಂದ ಬಂದ ಮಹತ್ವಾಂಕಾಂಕ್ಷೆಯ ಯುವಕ ಮಹಾಂತೇಶ ದೇಗಾಂವಿ ನೀನಾಸಂ ಮಾದರಿಯ ನೆರಳಲ್ಲೇ ಇಡೀ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ನಾಟಕದ ನಿರೂಪಣೆಯಲ್ಲಿ ಭಿನ್ನತೆ ಮೆರೆದಿದ್ದರೆ, ಪ್ರಸ್ತುತಿಯಲ್ಲಿ ಸ್ವಂತಿಕೆಯನ್ನು ರೂಢಿಸಿಕೊಂಡಿದ್ದರೆ, ನಾಟಕದ ಒಳತೋಟಿಗಳನ್ನು ಗ್ರಹಿಸಿ ನಾಟಕ ಕಟ್ಟಿಕೊಟ್ಟಿದ್ದರೆ  ದೇಗಾಂವಿಯವರ ಬಲಿದಾನ ನಾಟಕ ರಂಗಭೂಮಿಯಲ್ಲಿ ಮಹತ್ತರವಾಗಬಹುದಾಗಿತ್ತು. 
  
      ಇಡೀ ನಾಟಕಕ್ಕೆ ಮೆರಗನ್ನು ಕೊಟ್ಟಿದ್ದು ಸಂಗೀತದ ಮೇಳ. ನಟರಿಗಿಂತ ಮೇಳದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದು ನಾಟಕದ ಪ್ರತಿ ಚಲನೆಗೂ ಪ್ರತಿಕ್ರಿಯಿಸಿದ ರೀತಿ ಅನನ್ಯ. ಕೆಲವೊಮ್ಮೆ ನಟನೆಗೂ ಹಿನ್ನಲೆ ಸಂಗೀತದ ಎಪೆಕ್ಟಗೂ ಸಿಂಕ್ ಆಗದೇ ಹೋದದ್ದನ್ನು ನಿರ್ಲಕ್ಷಿಸಿದರೆ ನಾಟಕಕ್ಕೆ ಅಗತ್ಯವಾದ ಮೂಡನ್ನು ಹುಟ್ಟಿಸುವಲ್ಲಿ ಹಾಡು ಮತ್ತು  ಸಂಗೀತ ಯಶಸ್ವಿಯಾಗಿದೆ. ‘‘ರಘುಪತಿ ರಾಘವ ರಾಜಾರಾಂ ಮತ್ತು ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ...’’ ಹಾಡುಗಳು ಕೇಳುಗರಲ್ಲಿ ವಿದ್ಯುತ್ ಸಂಚಾರ ಮಾಡಿತು. ಜನಗಣಮಣ ಹಾಡು ಪೂರ್ತಿ ಹಾಡುವ ಅಗತ್ಯ ಇರಲಿಲ್ಲ.   
          ಒಟ್ಟಾರೆಯಾಗಿ ಕ್ಲಿಷ್ಟಕರ ಭಾಷೆಯ, ಕಾವ್ಯಮಯ ಸಂಭಾಷಣೆಯ, ಸಿದ್ದಕಥಾನಕವಿಲ್ಲದಂತಹ ಪ್ರತಿಮಾಪ್ರಧಾನ ನಾಟಕವೊಂದನ್ನು ಪ್ರಸ್ತುತಗೊಳಿಸಿದ ಪ್ರಯತ್ನವೇ ಅಭಿನಂದನಾರ್ಹ. ಕುವೆಂಪುರವರ ಸ್ಮಶಾನಕುರುಕ್ಷೇತ್ರ, ಬೆರಳ್ಗೆ ಕೊರಳ್, ಬಿರುಗಾಳಿ, ಜಲಗಾರ ನಾಟಕಗಳಿಗೆ ಹೋಲಿಸಿದರೆ ಬಲಿದಾನ ನಾಟಕದ ಪ್ರಯೋಗಗಳಾಗಿದ್ದು ತುಂಬಾ ಕಡಿಮೆ. ಅಂತಹ ಅಪರೂಪದ ಹಾಗೂ ಸಮಕಾಲೀನತೆಯನ್ನು ಸಾರ್ವಕಾಲಿಕಗೊಳಿಸಿದಂತಹ ಬಲಿದಾನ ನಾಟಕವನ್ನು ನಿರ್ದೇಶಿಸಿದ ಯುವ ನಿರ್ದೇಶಕನ ಸಾಹಸ ಮೆಚ್ಚುವಂತಹುದು.
ನಿರ್ದೇಶಕ ಮಹಾಂತೇಶ ದೇಗಾವಿ
          ಕುವೆಂಪುರವರ ದರ್ಶನ ಪ್ರಜ್ಞೆ ಅಪೂರ್ವವಾದದ್ದು. ಹಿಂದಿನದು ಅಂದಿನದರ ಜೊತೆಗೆ ಮುಂದಿನದನ್ನೂ ಕಾಣುವ ಕಾಣ್ಕೆ ಅವರದ್ದಾಗಿತ್ತು. ಜೊತೆಗೆ ಬಲಿದಾನ ನಾಟಕದ ಮೂಲಕ ಸಾರ್ವಕಾಲಿಕ ಸಾರ್ವತ್ರಿಕ ದರ್ಶನವನ್ನುಂಟು ಮಾಡಿದ್ದು ಅವರ ಅಸಾಧ್ಯ ಪ್ರತಿಭೆಗೆ ಸಾಕ್ಷಿ. ನೀ ಕಂಡ ದರ್ಶನದೊಳ್ ಅಖಿಳಾರ್ಥ ಮಂ ತಿಳಿದು ಕಾಣ್!, ಸ್ವಾತಂತ್ರ್ಯ ಜೀವನಂ ಬಲಿಪರಂಪರೆಯೆಂಬುದಂ, ಬಲಿದಾನ ತತ್ತ್ವಮಂ, ಭಾವಿಸಿ ಮನಂಗಾಣ್! ಎಂದು ಕೊಟ್ಟ ಕೊನೆಗೆ ಭರತಮಾತೆ ಭರತಸುತನಿಗೆ ಪ್ರತಿಮಾವಿಧಾನದಲ್ಲಿ ಸತ್ಯ ದರ್ಶನವನ್ನು ಮಾಡಿಸುತ್ತಾಳೆ.  ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲೇ ಬೇಕಾದ ಸಿದ್ದಾಂತ ಸಾಲುಗಳಲ್ಲಿದೆ. ಸ್ವಾತಂತ್ರ್ಯ ಅಂದರೆ ಬರೀ ದೇಶಕ್ಕೆ ಬರುವಂತುಹುದು ಮಾತ್ರವಲ್ಲ ವ್ಯಯಕ್ತಿಕ ವ್ಯಕ್ತಿ ಸ್ವಾತಂತ್ರ್ಯವೂ ಸ್ವಾಭಿಮಾನಿ ಬದುಕಿಗೆ ಅತ್ಯಗತ್ಯ. ಅಂತಹ ಸ್ವಾತಂತ್ರ್ಯ ಬೇಕು ಎನ್ನುವುದಾದರೆ ಅಂತವರು ತಮ್ಮ ಜೀವನದಲ್ಲಿ ನಾನು ನನ್ನದು ನನ್ನಿಂದಲೇ ಎನ್ನುವಂತಹ ಅಹಂ ಅನ್ನು ಬಲಿಕೊಡಲೇಬೇಕು.  ಸತತ ಬಲಿದಾನದಿಂದ ಸ್ವತಂತ್ರ ಜೀವನ, ಬಲಿಪರಂಪರೆಯಿಂದಲೇ ಬದುಕು ಪಾವನ ಎನ್ನುವುದೇ ಬಲಿದಾನ ಎಂಬ ದಾರ್ಶನಿಕ ರೂಪಕದ ಮೂಲ ಆಶಯವಾಗಿದೆ.
          ಸ್ವಾತಂತ್ರ್ಯ ಪಡೆಯುವುದಕ್ಕೆ ಮಾತ್ರ ಬಲಿದಾನ ಕೊಟ್ಟರೆ ಸಾಲದು, ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಿಕ್ಕೂ ಬಲಿದಾನ ಅನಿವಾರ್ಯ, ಬಲಿಪರಂಪರೆಯಿಂದಲೇ ಸ್ವಾತಂತ್ರ ಬದುಕು ಸಾಧ್ಯ ಎನ್ನುವ ಸಾರ್ವಕಾಲಿಕ ಸಂದೇಶವನ್ನು ಕೊಡುವ ಬಲಿದಾನ ನಾಟಕದ ಕೆಳಗಿನ ಸಾಲುಗಳು ಇಡೀ ನಾಟಕದ ಬಹು ಮುಖ್ಯ ಆಶಯವಾಗಿವೆ.
                                                “ಬಲಿದಾನಕುಂಟೆ ಕೊನೆ?
                              ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ!

                                                      -ಶಶಿಕಾಂತ ಯಡಹಳ್ಳಿ

 


2 ಕಾಮೆಂಟ್‌ಗಳು:

  1. ನಮ್ಮ ಬೆಂಗಳೂರು ಹೈಸ್ಕೂಲಿನಲ್ಲಿ ೧೯೬೦ ರಿ೦ದ ೬೩ ರ ವರೆಗೆ ಪ್ರಾಯಶ ಮೂರುನಾಲ್ಕು ಬಾರಿಯಾದರೂ ಖ್ಯಾತ ನಾಟಕ ನಿರ್ದೇಶಕರಾದ ಶ್ರೀ ಸುಬ್ಬಣ್ಣ ಅವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನವಾಗಿದ್ದು ಉಂಟು. ಇಂದಿಗೂ ಈ ನಾಟಕದ ಮಾತುಗಳು ನನಗೆ ನೆನಪಿದೆ.

    ಪ್ರತ್ಯುತ್ತರಅಳಿಸಿ
  2. ಬಹಳ ಸುಂದರವಾದ ಚಿಕ್ಕ ಚೊಕ್ಕವಾದ ಸುಂದರವಾದ ನಾಟಕ.

    ಪ್ರತ್ಯುತ್ತರಅಳಿಸಿ